ರೈತರಿಗೆ ಕೇಂದ್ರ ಸರಕಾರ ಕೊಡುತ್ತಿದೆ 4500-00 ರೂ. ಬಡ್ಡಿ ರಿಯಾಯಿತಿ.

ರೈತರಿಗೆ ಕೇಂದ್ರ ಸರಕಾರ ಕೊಡುತ್ತಿದೆ 4500-00 ರೂ. ಬಡ್ಡಿ ರಿಯಾಯಿತಿ.

ಭಾತರ ಸರಕಾರ ಕೃಷಿಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ರೈತರು ಮಾಡಿದ 3ಲಕ್ಷ ವರೆಗಿನ ಸಾಲಕ್ಕೆ 4500-00 ರೂ. ಬಡ್ಡಿ ರಿಯಾತಿಯನ್ನು ಘೋಷಿಸಿದೆ. ಇದು ಈ ವರ್ಷಕ್ಕೆ ಮಾತ್ರವಲ್ಲ. ಮುಂದಿನ ವರ್ಷಕ್ಕೂ ಇದೆ. ಬ್ಯಾಂಕುಗಳ ಮೂಲಕ ಬೆಳೆ ಸಾಲ ( ಅಲ್ಪಾವಧಿ) ಪಡೆದಿರುವ ಎಲ್ಲಾ ರೈತರೂ ಈ ಕೊಡುಗೆಯ ಫಲಾನುಭವಿಗಳು. ಇದು ಬರೇ ಬೆಳೆ ಸಾಲ ಮಾತ್ರವಲ್ಲ, ಪಶು ಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ಮತ್ತು ಕೋಳಿ ಸಾಕಣೆ ಎಲ್ಲದಕ್ಕೂ ಅನ್ವಯವಾಗುತ್ತದೆ.

ರೈತರು ಬೆಳೆ ಬೆಳೆಯುವ ಸಮಯದಲ್ಲಿ  ಬೇಕಾಗುವ ಹಣಕಾಸಿನ ಅಗತ್ಯಗಳಿಗಾಗಿ ಸರಕಾರ ರಾಷ್ಟ್ರೀಕೃತ ಬ್ಯಾಂಕು, ಸಹಕಾರಿ ಬ್ಯಾಂಕು ಹಾಗೂ ಇನ್ನಿತರ ಕೃಷಿ ಸಾಲನೀಡುವ ಬ್ಯಾಂಕುಗಳ ಮೂಲಕ  ಸಾಲರೂಪದಲ್ಲಿ ಗರಿಷ್ಟ 3,00,000 ತನಕ ಅಲ್ಪಾವಧಿ ಸಾಲವನ್ನು ನೀಡುತ್ತಾ ಬಂದಿದೆ. ಇದಕ್ಕೆ ಬಡ್ಡಿ ರಿಯಾತಿಯನ್ನೂ ಪ್ರಕಟಿಸಿದ್ದು, 7% ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುತ್ತಿದೆ. ಇದನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಮತ್ತೆ 3 % ಹೆಚ್ಚುವರಿ ಬಡ್ಡಿ ರಿಯಾಯಿತಿಯನ್ನೂ ನೀಡುತ್ತಾ ಬಂದಿದೆ. ರೈತರು 4%  ಬಡ್ಡಿಯಲ್ಲಿ ಸಾಲ ಪಡೆಯುವ ಸ್ಥಿತಿ ಈ ತನಕ ಇತ್ತು. ಈಗಿನ ಕೇಂದ್ರ ಸರಕಾರದ ನಿರ್ಧಾರದಂತೆ ಇನ್ನು ರೈತರು ಕೇವಲ 2.5 % ಬಡ್ಡಿಯಲ್ಲಿ ಸಾಲ ಪಡೆಯಬಹುದೇನೋ !.

ಕೃಷಿಕರಿಗೆ ಬೆಳೆ ಸಾಲ ಅನುಕೂಲ:

  • ರೈತರು ಬೆಳೆ ಬೆಳೆಯುವ ಸಮಯದಲ್ಲಿ ಸಹಜವಾಗಿ ಹಣಕಾಸಿನ ಅಡಚಣೆ ಉಂಟಾಗುತ್ತದೆ.
  • ಇದರಿಂದ ಗೊಬ್ಬರ ಹಾಕಲು ಕಷ್ಟವಾಗುವುದು, ಕೆಲಸದವರ ಸಂಬಳಕ್ಕೆ  ಅಡಚಣೆ ಆಗುವುದು ಇರುತ್ತದೆ.
  • ಬೇಸಾಯಕ್ಕೆ ಖರ್ಚು ಮಾಡಿದರೆ ತಮ್ಮ ಮನೆವಾರ್ತೆಯ ಖರ್ಚಿಗೆ ಕಷ್ಟ ಎಂಬ ಸ್ಥಿತಿ ಉಂಟಾಗುತ್ತದೆ.
  • ಇದೇ ಕಾರಣಕ್ಕೆ ಕೆಲವರು  ಬೇಸಾಯ ಮಾಡದೆ ಇರುವುದೂ ಉಂಟು.
  • ಈ ಸಮಸ್ಯೆಯನ್ನು ನಿವಾರಿಸಲು ಸರಕಾರ ಬೆಳೆ ಸಾಲ ಎಂಬ ಯೋಜನೆಯನ್ನು ತಂದು ತುಂಬಾ ಉಪಕಾರ ಮಾಡಿದೆ.
  • ಬೆಳೆ ಸಾಲ ಸರಳವಾಗಿದ್ದು, ಒಮ್ಮೆ ಈ ಸಾಲಕ್ಕೆ ಅರ್ಹರಾದರೆ ನಂತರ ಪ್ರತೀವರ್ಷವೂ ಪಡೆಯುತ್ತಾ ಇರಬಹುದು.
  • ಸಾಲವನ್ನು ಮೊದಲಾಗಿ ಮಂಜೂರು ಮಾಡಿಕೊಂಡು ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಯಲ್ಲಿ  ಜಮಾ ಇಟ್ಟುಕೊಂಡು ಬೇಕಾದಾಗ ಬೇಕಾದಷ್ಟೇ ನಗದೀಕರಣ ಮಾಡಿಕೊಂಡು ಇರಬಹುದು.
  • ಎಷ್ಟು ಸಾಲದ ಮೊತ್ತವನ್ನು  ಖರ್ಚು ಮಾಡುತ್ತೇವೆಯೋ ಅಷ್ಟಕ್ಕೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ.
  • ಎಷ್ಟು ಸಮಯದ ತನಕ  ಸಾಲವನ್ನು ಬಳಕೆ ಮಾಡಿರುತ್ತೀರೋ ಅಷ್ಟೇ ಬಡ್ಡಿಯೂ.
  • ಹಾಗಾಗಿ  ಇದು ಮಿತವ್ಯಯದ ಸಾಲ ಯೋಜನೆ.
  • ಬಹಳಷ್ಟು ರೈತರು ಈ ಸಾಲವನ್ನು ಮಂಜೂರು ಮಾಡಿಸಿಕೊಂಡು ಎಲ್ಲವನ್ನೂ ಖರ್ಚು ಮಾಡುತ್ತಾರೆ.
  • ಆಗ ಅವರು ವಾರ್ಷಿಕ ಬಡ್ಡಿ ತೆರಬೇಕಾಗುತ್ತದೆ.
  • ಒಂದು 3 ಲಕ್ಷದಷ್ಟು ಸಾಲ ಪಡೆದುಕೊಂಡು ದರಲ್ಲಿ ಕೇವಲ 1 ಲಕ್ಷ ಮಾತ್ರ  ನಗದೀಕರಣ ಮಾಡಿಕೊಂಡಿದ್ದರೆ ರೈತರು ಕೇವಲ 1 ಲಕ್ಷಕ್ಕೆ ಬಡ್ಡಿಕಟ್ಟಬೇಕಾಗುತ್ತದೆ.
  • ನವೀಕರಣ ಸಮಯದಲ್ಲಿ ಕೇವಲ 1 ಲಕ್ಷ ಮತ್ತು ಅದಕ್ಕೆ ವಿಧಿಸಲಾಗುವ 2.5 % ಬಡ್ಡಿಯನ್ನು ಮಾತ್ರ ಕಟ್ಟಿದರೆ ಅದು ತುಂಬಾ ಸರಳವಾಗಿರುತ್ತದೆ.

ಅಗತ್ಯಕ್ಕೆ ತಕ್ಕಂತೆ ಸಾಲವನ್ನು ನಗದೀಕರಣ ಮಾಡಿಕೊಂಡು, ಹಣ ಬಂದಾಗ ಅದಕ್ಕೆ ಮರು ಠೇವಣಿ ಮಾಡುತ್ತಾ ಇದ್ದರೆ, ನಾವು ಎಷ್ಟು ಸಮಯದ ತನಕ  ಸಾಲವನ್ನು ಬಳಕೊಂಡಿದ್ದೇವೆಯೋ ಅಷ್ಟಕ್ಕೆ ಮಾತ್ರ ಬಡ್ಡಿ ತೆರಬೇಕಾಗುತ್ತದೆ. ಸಾಲ ಪಡೆದ ರೈತರಿಗೆ ಕೊಡಮಾಡಲ್ಪಡುವ  ಕಿಸಾನ್ ಕ್ರೆಡಿಟ್ ಕಾರ್ಡ್ (KCC)ATM ಮೂಲಕ ಎಲ್ಲಿ ಬೇಕಾದರೂ ಯಾವುದೇ ಬ್ಯಾಂಕಿನ ATM ಕೇಂದ್ರಗಳಲ್ಲೂ ಹಣ ನಗದೀಕರಣ ಮಾಡಬಹುದು.

ಕೃಷಿ ಕೆಲಸದಲ್ಲಿ ನಿರತ ರೈತ

ಇದು ಭಾರತ ಸರಕಾರದ ನೇರ ಹಣ:

  • ಕೃಷಿಕರಿಗೆ ಕೊಡಮಾಡಲ್ಪಡುವ ಬೆಳೆ ಸಾಲ ಎಂಬುದು ಭಾರರತ ಸರಕಾರ ಸಾಲನೀಡುವ ಬ್ಯಾಂಕುಗಳಿಗೆ ನೇರ ಹಣವರ್ಗಾವಣೆ ಮಡುವಂತದ್ದು.
  • ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯದ ಮೂಲಕ ( Ministry of Agriculture and Farmers Welfare, Government of India)  ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕಿಗೆ ಹಣದ ವರ್ಗಾವಣೆಯಾಗಿ ಅಲ್ಲಿಂದ ಎಲ್ಲಾ ಸಾಲನೀಡುವ ಬ್ಯಾಂಕುಗಳಿಗೆ ಹಣ ವರ್ಗಾವಣೆಯಾಗುತ್ತದೆ.
  • ಇದರ ನೈಜ ಬಡ್ಡಿ 7 % ಇರುತ್ತದೆ. ಇದಕ್ಕೆ ರಿಯಾಯಿತಿ ಅಥವಾ ಬಡ್ಡಿ ಮನ್ನಾ ಮಾಡಿ ನಮಗೆ ಕಡಿಮೆ ಬಡ್ಡಿ ಆಗುತ್ತದೆ.
  • ಈಗ ಘೋಷಣೆ ಮಾಡಿರುವ ಬಡ್ಡಿ ರಿಯಾಯಿತಿಯಂತೆ ಒಟ್ಟು ದೇಶದ ರೈತರಿಗೆ ಕೇಂದ್ರ ಸರಕಾರ 34,856  ಕೋಟಿ ಹಣ ನೀಡುತ್ತದೆ.

ಕರ್ನಾಟಕದಲ್ಲಿ ಕೇಂದ್ರದ ಬಡ್ಡಿ ರಿಯಾಯಿತಿಗೆ ಹೆಚ್ಚುವರಿಯಾಗಿ 4% ಸೇರಿಸಿ ರೈತರಿಗೆ ಸಹಕಾರೀ ಬ್ಯಾಂಕುಗಳ ಮೂಲಕ ಬಡ್ಡಿ ರಹಿತ ಸಾಲವನ್ನು ನೀಡುತ್ತಿದೆ. ಇನ್ನು ರಾಜ್ಯಕ್ಕೆ ಆ ಹೊರೆ ಸ್ವಲ್ಪ ಕಡಿಮೆಯಾಗಲಿದೆ. ಬ್ಯಾಂಕುಗಳಿಗೆ ಹೆಚ್ಚಿನ ಮೊತ್ತದ ಸಾಲವಿತರಣೆ ಮಾಡುವರೇ ಕೇಂದ್ರ ಸರಕಾರ ಈ ವರ್ಷದಿಂದ ಅಧಿಕ ಮೊತ್ತವನ್ನು ಬಿಡುಗಡೆ ಮಾಡಿರುವ ಕಾರಣ ಇನ್ನು ಸಹಕಾರಿ ಬ್ಯಾಂಕುಗಳೂ ಸೇರಿದಂತೆ ಇತರೆಲ್ಲಾ ಬ್ಯಾಂಕುಗಳೂ ಸಾಲದ ಮಿತಿಯನ್ನು ಹೆಚ್ಚಿಸುವ ಸಾಧ್ಯತೆಯೂ ಇದೆ.

ಸರಕಾರದ ಈ ನಿರ್ಧಾರದಲ್ಲಿ ಇನ್ನೂ ಗೊಂದಲಳಿದ್ದು, ಬ್ಯಾಂಕುಗಳು ಯಾವ ದರದಲ್ಲಿ ಬಡ್ಡಿ ವಿಧಿಸಬೇಕು ಎಂಬ ಬಗ್ಗೆ ಸುತ್ತೋಲೆಯನ್ನು ಇನ್ನೂ ಪಡೆದಿಲ್ಲ. ಘೋಷಣೆಯಂತೆ 1.5 % ಬಡ್ಡಿ ರಿಯಾಯಿತಿಯನ್ನು ಘೋಷಿಸಿದೆ. ಜೊತೆಗೆ ರೈತರು ಹಿಂದಿನಂತೆ  ಕೇವಲ 4 % ಬಡ್ಡಿಯಲ್ಲಿ ಸಾಲ ಪಡೆಯಬಹುದು ಎನ್ನುತ್ತದೆ. ಯಾವುದಕ್ಕೂ ಕಾದು ನೊಡಬೇಕಿದೆ. ಇನ್ನೋಂದೆಡೆ ಬೆಂಬಲ ಬೆಲೆ ಮತ್ತು ಸಾಲ ಮನ್ನಾಕ್ಕಾಗಿ ರೈತರ ಹೋರಾಟದ ಸೂಚನೆಯೂ ಇದೆ, 2024 ರಲ್ಲಿ ಲೋಕಸಭಾ ಚುನಾವಣೆಯೂ ಇದೆ, ಹಾಗಾಗಿ ಸರಕಾರ  ಹಿಂದಿನಂತೆ ರೈತರ ಬೇಡಿಕೆಗಳಿಗೆ ಒಪ್ಪಿದರೂ ಅಚ್ಚರಿ ಇಲ್ಲ.

Leave a Reply

Your email address will not be published. Required fields are marked *

error: Content is protected !!