ಕರಿಮೆಣಸಿನ ಫಸಲಿಗೆ ವಾತಾವರಣದ ಅನುಕೂಲ ಅಗತ್ಯ.

by | Jun 29, 2020 | Pepper (ಕರಿಮೆಣಸು), Spice Crop (ಸಾಂಬಾರ ಬೆಳೆ) | 2 comments

ಮುಂಗಾರು ಮಳೆ ಪ್ರಾರಂಭದಲ್ಲಿ ಕರಿ ಮೆಣಸು ಹೂವು ಕರೆ ಬಿಡುವ ಸಮಯ. ಮೊದಲ ಮಳೆ ಸಿಂಚನವಾದ ಕೂಡಲೇ ಬಳ್ಳಿ ಚಿಗುರಲು ಪ್ರಾರಂಭವಾಗುತ್ತದೆ. ಕೆಲವು ಸ್ವಲ್ಪತಡವಾಗುತ್ತದೆ. ಮತ್ತೆ ಕೆಲವು ಮೇ ತಿಂಗಳ ಕೊನೆಗೇ ಹೂವು ಕರೆ  ಬಿಡಲು ಪ್ರಾರಂಭವಾಗುತ್ತದೆ. ಇದು ಬಳ್ಳಿಯ ಆರೋಗ್ಯ ಮತ್ತು  ತಳಿಯ ಮೇಲೆ  ಅವಲಂಭಿತವಾಗಿದೆ.

ತಂಪು ವಾತಾವರಣ ಬೇಕು:

  • ಕರಿಮೆಣಸಿನಲ್ಲಿ ಹೂವು ಕರೆ ಬಿಡುವಾಗ ತಂಪು ವಾತಾವರಣ  ಇರಬೇಕು. ಹಾಗಿದ್ದಾಗ ಅದು ಫಲಿತಗೊಂಡು  ಕಾಳುಗಳಾಗುತ್ತದೆ.
  • ಒಂದು ವೇಳೆ ಬಿಸಿ ವಾತಾವರಣ ಇದ್ದರೆ ಕರೆಗಳು ಅರ್ಧಂಬರ್ಧ ಫಲಿತಗೊಳ್ಳುವುದು, ಉದುರಿ ಹೋಗುವುದು, ಕಾಳು ಪೊಳ್ಳಾಗುವುದು ಆಗುತ್ತದೆ.
  • ಆದ ಕಾರಣ ಬೇಗೆ  ಕರೆ ಬಿಡುವುದು ಉತ್ತಮವಲ್ಲ.
  • ಕೆಲವು ಸ್ಥಳೀಯ  ತಳಿಗಳು ಬೇಗ ಹೂವು ಬಿಡುವುದು ಅದರ ಗುಣ ಧರ್ಮ ಆದ ಕಾರಣ ಅದರಲ್ಲಿ ಅಧಿಕ ಪ್ರಮಾಣದಲ್ಲಿ ಕರೆಗಳಿರುತ್ತವೆ. ಆದರೆ ಕಾಳುಗಳು ವಿರಳವಾಗಿರುತ್ತವೆ.

ಕರಿಮೆಣಸಿನ ತಳಿ ಆಯ್ಕೆ  ಮಾಡುವಾಗ ತಡವಾಗಿ ಕರೆ ಬಿಡುವ ತಳಿಗಲಾದ ಪಣಿಯೂರು, ಕರಿಮುಂಡದ ಆಯ್ಕೆ ತಳಿಗಳನ್ನು  ಬೆಳೆಸುವುದು  ಉತ್ತಮ.  ಒಂದು ವೇಳೆ ಮಳೆ ತಡವಾದರೂ ಅವು ಹೂ ಬಿಟ್ಟದ್ದು ಉಳಿಯುತ್ತದೆ. ಬೇಗ ಹೂ ಬಿಡುವ ತಳಿಗಳು ಒಂದು ಮಳೆ ಸಿಂಚನ ಅದ ತರುವಾಅಯ ಚಿಗುರಿ ಹೂ ಬಿಡುತ್ತದೆ. ಆದರೆ ಕಾಳುಗಳು ವಿರಳವಾಗಿರುತ್ತವೆ.

  •  ಮೆಣಸಿನ ಬಳ್ಳಿ ಹೆಚ್ಚು ಹೂ ಬಿಡೂವುದಕ್ಕೆ  ಕೊಯಿಲಿನ ನಂತರ  ನಂತರ ಮೂರು ವಾರ ತನಕ ನೀರಾವರಿ ಕಡಿಮೆ ಮಾಡಿದರೆ ಅನುಕೂಲವಾಗುತ್ತದೆ.
  • ಎಪ್ರೀಲ್ ತಿಂಗಳಲ್ಲಿ ನೆರಳು ತೆಗೆದರೆ ಹೆಚ್ಚು ಚಿಗುರು ಬಂದು ಕಾಯಿ ಹೆಚ್ಚಾಗುತ್ತದೆ.

ಉತ್ತಮ ಹೂ ಬರಲು ಏನು ಮಾಡಬೇಕು:

  • ಮಳೆಗಾಲದಲ್ಲಿ ಉತ್ತಮ ರೀತಿಯಲ್ಲಿ ಹೂವು ಕರೆಬಿಡುವುದಕ್ಕೆ ಬೇಸಿಗೆಯ ದಿನಗಳಲ್ಲಿ ಮಾಡುವ ಬಳ್ಳಿ ಆರೈಕೆ ಪ್ರಾಮುಖ್ಯವಾದು.
  • ಬಳ್ಳಿಯ ಆರೈಕೆ  ಎಂದರೆ ಮುಖ್ಯವಾಗಿ ಒದಗಿಸಿಕೊಡುವ ಪೊಷಕಾಂಶಗಳು.
  • ಬಳ್ಳಿಯಲ್ಲಿ ಸಂಗ್ರಹಿತ ಪೋಷಕಾಂಶಗಳಿದ್ದಾಗ ಅದು ಉತ್ತಮ ಚಿಗುರನ್ನು ಉತ್ತೇಜಿಸುತ್ತದೆ.
  • ಕಡಿಮೆ  ಇದ್ದಾಗ ಅದು ವ್ಯತಿರಿಕ್ತವಾಗುತ್ತದೆ.
  • ಕೊಯಿಲು ಮುಗಿದು 1 ತಿಂಗಳ ಒಳಗೆ ಒಮ್ಮೆ ಪತ್ರ ಸಿಂಚನದ ಮೂಲಕ  ಗೊಬ್ಬರವನ್ನು ಕೊಡಬೇಕು.
  • ಜೊತೆಗೆ  ತೇವಾಂಶ ಇರುವಾಗ ಬುಡಕ್ಕೂ ಕೊಡಬೇಕು.
  • ಮಳೆಗಾಲ ಪ್ರಾರಂಭವಾಗುವ ಮೇ ತಿಂಗಳಲ್ಲಿ  ಮತ್ತೊಮ್ಮೆ ಪೋಷಕಾಂಶ ಸಿಂಪರಣೆ  ಮಾಡಬೇಕು.

ಕರಿಮೆಣಸಿನ ಹೂವು

ಮೊದಲ ಬಾರಿ ಸಿಂಪರಣೆ ಮಾಡುವಾಗ 200 ಲೀ ನೀರಿಗೆ  3\4 ಅಥವಾ 1 ಕಿಲೋ 19:19:19  ಎರಡನೇ ಬಾರಿ ಸಿಂಪಡಿಸುವಾಗ 13:40:13  ಜೊತೆಗೆ ಪ್ರತೀ 200 ಲೀ. ದ್ರಾವಣಕ್ಕೆ 50-100 ಗ್ರಾಂ ನಷ್ಟು ಸತು, ಮ್ಯಾಂಗನೀಸ್ ಬೋರಾನ್ ಉಳ್ಳ ಸಿಂಪರಣಾ ದರ್ಜೆಯ ಸೂಕ್ಷ್ಮ ಪೊಷಕಾಂಶ, 50 ಗ್ರಾಂ ನಷ್ಟು ಕಿಲ್ಲೇಟೆಡ್ ಮೆಗ್ನೀಯಂ ಸೇರಿಸಿ ಸಿಂಪರಣೆ  ಮಾಡಬೇಕು.

  • ಎಲೆಗಳಿಗೆಲ್ಲಾ ಬೀಳುವಂತೆ  ಸಿಂಪರಣೆ  ಮಾಡಬೇಕು.
  • ಅಧಿಕ  ಒತ್ತಡದಲ್ಲಿ ಎಲೆಗಳು ಅಲ್ಲಾಡುವಂತೆ ಸಿಂಪಡಿಸುವುದರಿಂದ ಎಲೆಯ ಎರಡೂ ಭಾಗಕ್ಕೂ ಪೋಷಕಾಂಶ ದೊರೆಯುತ್ತದೆ.
  • ಎರಡನೇ ಸಿಂಪರಣೆಯನ್ನೂ ಇದೇರೀತಿ ಮಾಡಬೇಕು.
  • ಜೂನ್ ಕೊನೇ ವಾರ ಅಥಾವಾ ಜುಲೈ ಮೊದಲ ವಾರದಲ್ಲಿ ಮೂರನೇ ಪತ್ರ ಸಿಂಚನ ಸಿಂಪರಣೆ ಮಾಡಬೇಕು.
  • ಈ ಸಮಯದಲ್ಲಿ ಬಹುತೇಕ ಹೂ ಕರೆಗಳು ಮೂಡಿರಬೇಕು.
  • ಈ ಸಮಯದಲ್ಲಿ ಸಾರಜನಕ ಮತ್ತು ರಂಜಕ ಉಳ್ಳ ಗೊಬ್ಬರವನ್ನು ಸಿಂಪರಣೆ ಮಾಡುವುದು ಉತ್ತಮ.
  • ಇದಕ್ಕಾಗಿ 12:61:0 200 ಲೀ ನೀರಿಗೆ 3\4 ಕಿಲೋ  ಬೆರೆಸಿ ಸಿಂಪರಣೆ  ಮಾಡಿ. ಅಗತ್ಯವಿದ್ದರೆ ಮಾತ್ರ ಸೂಕ್ಷ್ಮ ಪೊಷಕಾಂಶಗಳನ್ನು  ಸೇರಿಸಿರಿ.
  • 200 ಲೀ. ನೀರಿಗೆ  50 ಗ್ರಾಂ ನಷ್ಟು ನೀರಿನಲ್ಲಿ ಕರಗುವ ಬೋರಾನ್ ಸೇರಿಸುವುದು ಉತ್ತಮ.  ಈ ಮೂರು ಸಿಂಪರಣೆಗಳಿಂದ ಕರೆಯ ಉದ್ದ ಜಾಸ್ತಿಯಾಗುತ್ತದೆ.
  • ಕರೆ ಹೆಚ್ಚು ಬರುತ್ತದೆ. ಕರೆಯಲ್ಲಿ ಫಲಿತ ಗೊಳ್ಳುವ ಹೂವುಗಳು ಹೆಚ್ಚುತ್ತದೆ.

ಕಾಯಿ ಕಟ್ಟುತ್ತಿರುವುದು

ಪೂರ್ತಿ ಕರೆಯಲ್ಲಿ ಕಾಳುಗಳಾಗುವುದು:

  • ಕರಿಮೆಣಸಿನಲ್ಲಿ 86-95 % ಸ್ವಕೀಯ ಪರಾಗ ಸ್ಪರ್ಷ ನಡೆಯುತ್ತದೆ.
  • ಕರೆಯ ತುತ್ತ ತುದಿಯಲ್ಲಿರುವ ಹೂವಿನ ಪರಾಗರೇಣು ಕೆಳಗಿನ ಪುಷ್ಪದ ಶಲಾಕಾಗ್ರದ ಮೇಲೆ ಬೀಳುತ್ತಾ, ಕೆಳಕೆಳಗೆ ಇಳಿಯುತ್ತಾ ಬರುತ್ತದೆ.
  • ಅ ಹೆಚ್ಚಾಗಿ ದ್ವಿಲಿಂಗೀಯ ಹೂವುಗಲೇ ಇರುತ್ತದೆ.
  • ಹೂವಿನ ಗಂಡು ಭಾಗ ಇಬ್ಬದಿಯಲ್ಲೂ, ಹೆಣ್ಣು ಭಾಗ ಮಧ್ಯದಲ್ಲೂ ಇರುತ್ತದೆ.
  • ಇದರ ಪರಾಗವು 5 ದಿನಗಳ ಕಾಲ ಜೀವಂತ ಇರುತ್ತದೆ. ಕೀಟ- ಗಾಳಿ ಮೂಲಕ ಪರಾಗ ಸ್ಪರ್ಷ ತುಂಬಾ ಕಡಿಮೆ.
  • ಆದ ಕಾರಣ ಹದವಾದ ಜುಂಪರು ಮಳೆ ಬಂದಾಗ ಕಾಯಿ ಕಚ್ಚುವಿಕೆ ಚೆನ್ನಾಗಿರುತ್ತದೆ.
  • ಮಳೆ ಬಾರದಿದ್ದರೂ ವಾತಾವರಣ ತಂಪಾಗಿದ್ದರೂ ಕಾಯಿ ಕಚ್ಚುತ್ತದೆ.
  • ಮೆಣಸಿನ ಪರಾಗ ಸ್ಪರ್ಷಕ್ಕೆ ಮಳೆ ನೀರಿನ ಅವಷ್ಯಕತೆ ಹೆಚ್ಚು  ಇರುವುದಿಲ್ಲ.

ಮಳೆಗಾಲದ ನಿರ್ವಹಣೆ:

  • ಮಳೆಗಾಲ ಪ್ರಾರಾಂಭವಾಗುವಾಗ ಬುಡ ಭಾಗಕ್ಕೆ ಮೊದಲ ಕಂತಿನ ಗೊಬ್ಬರವನ್ನು ಕೊಡಬೇಕು.
  • ಇದೂ ಸಹ ಉತ್ತಮ ಫಸಲಿಗೆ ಸಹಕರಿಸುತ್ತದೆ.
  • ಹೂ ಬಿಡುವ ಸಮಯದಲ್ಲಿ ಪೊಟ್ಯಾಶೀಯಂ ಫೋಸ್ಪೋನೇಟ್ ದ್ರಾವಣವನ್ನು ಸಿಂಪರಣೆ ,ಮಾಡುವುದಾದರೆ  ಲೀ. 4 ಮಿಲಿ ಗಿಂತ ಹೆಚ್ಚು ಬಳಕೆ  ಮಾಡಬೇಡಿ.
  • ಬೋರ್ಡೋ ದ್ರಾವಣಕ್ಕೂ ಅಧಿಕ ಸುಣ್ಣ ಸೇರಿಸಬೇಡಿ. 1 ಕಿಲೋ ತುತ್ತೆಗೆ 3\4 ಕಿಲೋ ಸುಣ್ಣ ಅಥಾವ 1 ಕಿಲೋ ಸುಣ್ಣ ಗರಿಷ್ಟ  ಪ್ರಮಾಣದ್ದಾಗುತ್ತದೆ.
  • ಹೆಚ್ಚು ಸುಣ್ಣ ಸೇರಿಸಿದರೆ ಎಳೆ ಹೂ ಕರೆಗಳಿಗೆ ಘಾಸಿಯಾಗಬಹುದು.

ಮಳೆಗಾಲ ಪ್ರಾರಂಭದಲ್ಲಿ ಬಳ್ಳಿ ಚುಗುರುವಿಕೆ ಹೆಚ್ಚು. ಅದನ್ನು ಬಟ್ಟೆ ಹಗ್ಗ( ಪ್ಯಾಂಟು ಶರ್ಟು ಹೊಲಿಗೆಯವರಲ್ಲಿ ದೊರೆಯುವ ನಿರುಪಯುಕ್ತ ಬಟ್ಟೆ ಚೂರು ) ಮೂಲಕ ಕಟ್ಟಬೇಕು. ನೆಲದಲ್ಲಿ ಹಬ್ಬಿರುವ ಬಳ್ಳಿಗಳನ್ನು ಎತ್ತಿ ಕಟ್ಟಬೇಕು. ಮಣ್ಣು ಎಲೆಗಳ ಮೇಲೆ ತಾಗಿದರೆ ರೋಗ ಸಾಧ್ಯತೆ  ಹೆಚ್ಚು. ನೆಲದಿಂದ 2 ಎತ್ತರದ ತನಕ ಬಳ್ಳಿಯಲ್ಲಿ ಎಲೆಗಳು ಇರದಂತೆ ನೋಡಿಕೊಳ್ಳಿ.

.

2 Comments

  1. Harsha

    We have few doubts , plz give contact no. Of the person who gave these details of black pepper cultivation.

    Reply
    • krushiabhivruddi

      9663724066

      Reply

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!