ಕರಿಮೆಣಸಿನ ಕಾಳಿನ ತೂಕ ಹೆಚ್ಚಿಸುವುದು ಹೇಗೆ.

ಇನ್ನೇನು ಕರಿಮೆಣಸಿನ ಕಾಳುಗಳು ಬೆಳೆಯುತ್ತಿವೆ. ಕೊಯಿಲು ತಡ ಮಾಡಿದಷ್ಟು ತೂಕ ಹೆಚ್ಚಾಗುತ್ತದೆ.
ಒಂದು ಕಿಲೋ ಕರಿಮೆಣಸು ಆಗಲು ಎಷ್ಟು ಒಣ ಕಾಳುಗಳು ಬೇಕು. ಕೆಲವರು 2 ಸೇರು ಬೇಕು ಎನ್ನುತ್ತಾರೆ. ಮತ್ತೆ ಕೆಲವರು  1.75 ಸೇರು ಬೇಕು ಎನ್ನುತ್ತಾರೆ. ಮತ್ತೆ ಕೆಲವರು 1.5ಕಿಲೋ ಸಾಕು ಎನ್ನುತ್ತಾರೆ. ವಾಸ್ತವವಾಗಿ ಚೆನ್ನಾಗಿ ಬೆಳೆದ ಲೀಟರಿನ ಪಾತ್ರೆ (Liter waight)ತುಂಬ ಹಾಕಿದರೆ 750-800 ಗ್ರಾಂ  ಒಣ ತೂಕ ಬರುತ್ತದೆ. ಇದು ಹೇಗೆ ಇಲ್ಲಿದೆ ಮಾಹಿತಿ.

ripped pepper

  • ಮೆಣಸಿನ ಬಳ್ಳಿಗೆ ಆಹಾರ ನೀರು ದೊರೆತರೆ ಅದರ ಬೆಳೆವಣಿಗೆ ಮುಂದುವರಿಯುತ್ತಾ ಇರುತ್ತದೆ.
  • ಬೆಳೆಯುವುದನ್ನು 1 ತಿಂಗಳ ಕಾಲದ ತನಕವೂ ಮುಂದೂಡಬಹುದು.
  • ಬಹಳಷ್ಟು ಜನ ಜನವರಿ ಬಂದರೆ ಸಾಕು.
  • ಬಳ್ಳಿಯಲ್ಲಿ ಒಂದೆರಡು ಕರೆ ಹಣ್ಣಾದ ತಕ್ಷಣ  ಕೊಯಿಲು ಮಾಡುತ್ತಾರೆ.
  • ಇಂತವರಿಕೆ ತೂಕ ಬರುವುದಿಲ್ಲ.
  • ಇದರಲ್ಲಿ ಬಹುತೇಕ  ತಿರುಳು ಬಲಿಯದ ಕಾಳುಗಳೇ ಇರುವ ಕಾರಣ ಒಂದು ಕಿಲೋ ತೂಗಲು 2 ಸೇರು. ತನಕವೂ ಬೇಕಾಗಬಹುದು.

Fully ripped spikes

ಯಾವಾಗ ಮೆಣಸು ಕೊಯ್ಲು ಮಾಡಬೇಕು:

  • ಮೆಣಸನ್ನು ಮಳೆ ಬಂದು ಹೂ ಕರೆ ಬಿಟ್ಟು 8-9 ತಿಂಗಳ ತನಕ ಬೆಳೆಯಲು ಬಿಟ್ಟು ಕೊಯಿಲು ಮಾಡಬೇಕು.
  • ಮಳೆ ತಡವಾದರೆ ಕರೆ ಬಿಡುವುದು ತಡವಾಗಿ  ಬೆಳವಣಿಗೆ ಮುಂದೆ ಹೋಗುತ್ತದೆ.
  • ಈಗಾಗಲೇ ಮಳೆ ಮುಗಿದಿದೆ. ಮೆಣಸು ಬೆಳೆಯಲು ಇನ್ನೂ ಕನಿಷ್ಟ 1-2 ತಿಂಗಳ ಕಾಲಾವಧಿ ಬೇಕು.
  • ಈಗಿನಿಂದಲೇ  ಮೆಣಸಿನ ಬಳ್ಳಿಗೆ  ಕೆಲವು ಉಪಚಾರಗಳನ್ನು ಮಾಡುವುದರಿಂದ ಕಾಳಿನ ತೂಕ ಹೆಚ್ಚುತ್ತದೆ.
  • ಬೆಳವಣಿಗೆ ಮುಂದೂಡಲ್ಪಡುತ್ತದೆ. ಕಾಳು ಬೆಳೆದಷ್ಟು ತೂಕ ಹೆಚ್ಚಾಗುತ್ತದೆ.
  • ಇಂತಹ ಕಾಳು ಮೆಣಸನ್ನ್ನು 10 ವರ್ಷಗಳ ಕಾಲವೂ ದಾಸ್ತಾನು ಇಡಬಹುದು.

 ಈಗ ಬಳ್ಳಿಯಲ್ಲಿ ಕೆಲವು ಕರೆಗಳು ಹಣ್ಣಾಗಿರವ್ಬಹುದು. ಅದು ಮೊದಲ ಮಳೆಗೆ ಕರೆ ಬಿಟ್ಟದ್ದು. ಅದನ್ನು ಮಾತ್ರ ಕೊಯಿಲು ಮಾಡಿ. ಉಳಿದವು ಬೆಳೆಯಲು ಇನ್ನೂ ಒಂದರಿಂದ ಎರಡು ತಿಂಗಳು ಸಮಯಾವಕಾಶ ಇದೆ.

Harvest the spike like this

ಏನು ಉಪಚಾರ ಮಾಡಬೇಕು:

  • ಮೆಣಸು ಬೆಳವಣಿಗೆಯ ಸಮಯದಲ್ಲಿ ಎರಡು ಬಾರಿ ಬಳ್ಳಿಗೆ ಪೋಷಕಾಂಶವನ್ನು ಸಿಂಪರಣೆ ಮಾಡುವುದರಿಂದ ಕಾಳು ದಪ್ಪವಾಗುತ್ತದೆ.
  • ಬೆಳವಣಿಗೆ ಮುಂದೂಡಲ್ಪಡುತ್ತದೆ.

ಕಾಳು ಬೆಳೆಯುವ ಸಮಯದಲ್ಲಿ ಮೊದಲ ಸಿಂಪರಣೆಯಾಗಿ ಮೊನೋ ಪೊಟ್ಯಾಶಿಯಂ ಫೋಸ್ಫೇಟ್ (0:52:34) 1 ಕಿಲೋ 200 ಲೀ. ನೀರು) ಹಾಗೂ 100 ಗ್ರಾಂ ಸೂಕ್ಷ್ಮ ಪೋಷಕಾಂಶವನ್ನು ಎಲೆಗಳು ಕಾಳಿನ ಗೊಂಚಲು ಮತ್ತು ಬುಡ ಭಾಗಕ್ಕೂ ಬೀಳುವಂತೆ ಸಿಂಪರಣೆ ಮಾಡಬೇಕು.

Do not harvest this type of pepper
ಇಂತಹ ಕಾಳುಗಳನ್ನು ಕೊಯ್ಯಬಾರದು.
  • ಮೊನೋ ಪೊಟ್ಯಾಶಿಯಂ ಫೋಸ್ಫೇಟ್ ನಲ್ಲಿ  ಅಧಿಕ ರಂಜಕ ಇರುವ ಕಾರಣ ಬೇರಿನ ಬೆಳವಣಿಗೆಗೆ ಸಹಾಯಕವಾಗುತ್ತದೆ.
  • ಪೊಟ್ಯಾಶಿಯಂ ಅಂಶವು ಕಾಳಿನ ಬೆಳವಣಿಗೆಗೆ ಸಹಾಯಕವಾಗುತ್ತದೆ.
  • ಸೂಕ್ಷ್ಮ ಪೊಷಕಾಂಶಗಳು ಕೆಲವು ಸುಪ್ತ ಆಹಾರ ಅಗತ್ಯಗಳನ್ನು ಪೂರೈಸುತ್ತದೆ.
  • ಮಳೆಗಾಲ ಕಳೆದ ತಕ್ಷಣ ಚಳಿ ಬಿದ್ದು ವಾತಾವರಣ ಶುಷ್ಕವಾದಂತೆ ಬೇರಿನ ಮೂಲಕ ಬಳ್ಳಿಗೆ ಆಹಾರ ಸರಬರಾಜು ಸಮರ್ಪಕವಾಗಿ ಆಗುವುದಿಲ್ಲ.
  • ಕೊರತೆಯಾಗಿ ಬಳ್ಳಿ ಬಾಡಲು ಪ್ರಾರಂಭವಾಗುತ್ತದೆ ಆಗ ಬಲಿಯದೆ ಕಾಯಿ ಹಣ್ಣಾಗುವುದೂ ಇದೆ.
  • ಆಗ ಇನ್ಸ್ಟಂಟ್ ಆಹಾರದ ತರಹ, ಈ ಸಿಂಪರಣೆ ಬಳ್ಳಿಯಲ್ಲಿರುವ ಕಾಳುಗಳಿಗೆ ಮತ್ತು ಎಲೆಗಳಿಗೆ ಶಕ್ತಿಯನ್ನು ಕೊಡುತ್ತದೆ.
  • ಜೊತೆಗೆ ಬೇರಿನ ಬೆಳವಣಿಗೆಗೂ ಇದು ಪ್ರಚೋದನೆ ನೀಡುತ್ತದೆ.
  • ಅಲ್ಪ ಸ್ವಲ್ಪ  ಬಳ್ಳಿ ಒಣಗುವ ಲಕ್ಷಣಗಳಿದ್ದರೂ ಅದರಿಂದ ಪಾರಾಗುತ್ತದೆ.
  • ಈ ಸಿಂಪರಣೆಗೆ ಸೂಕ್ಷ್ಮ ಪೊಷಕಾಂಶದ ಬದಲಿಗೆ ಸಮುದ್ರ ಪಾಚಿಯನ್ನು ಸೇರಿಸಬಹುದು.
  • ಇದರಲ್ಲಿ ನೈಸರ್ಗಿಕ ಮೂಲದ ಸೂಕ್ಷ್ಮ ಪೊಷಕಾಂಶಗಳು ಮತ್ತು ಬೆಳವಣಿಗೆ ಪ್ರಚೋದಕ ಇರುವ ಕಾರಣ  ಬೆಳವಣಿಗೆಗೆ ಅನುಕೂಲವಾಗುತ್ತದೆ.

ಎರಡನೇ ಸಿಂಪರಣೆ:

Foliar spraying ti pepper

ಜನವರಿ ಎರಡನೇ ವಾರದದ ನಂತರ ಬಳ್ಳಿಗೆ ಮತ್ತು ಕಾಳುಗಳಿಗೆ ಪೊಟ್ಯಾಶಿಯಂ ನೈಟ್ರೇಟ್ (13:0:45, 1 ರಿಂದ 1.5 ಕಿಲೋ  200 ಲೀ. ನೀರು) ಮತ್ತು ಸಮುದ್ರ ಪಾಚೀ ಗೊಬ್ಬರವನ್ನು (200ಲೀ. ನೀರಿಗೆ  300 ರಿಂದ 500 ಗ್ರಾಂ) ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.

  • ಇದು ಕಾಳಿನ ಬೆಳವಣಿಗೆಯನ್ನು ಮುಂದೂಡುತ್ತದೆ. ಕಾಳು ಬೆಳೆಯುತ್ತದೆ. ಪುಷ್ಟಿಯಾಗುತ್ತದೆ.
  • ಈ ಸಿಂಪರಣೆಗೆ ಹೆಚ್ಚು ಖರ್ಚು ಬರುವುದಿಲ್ಲ. ಜೊತೆಗೆ ಬಳ್ಳಿಯ ಆರೋಗ್ಯಕ್ಕೆ ತುಂಬಾ ಸಹಾಯಕವಾಗುತ್ತದೆ.
  • ಬಳ್ಳಿ ಸಾಯುವುದು ಕಡಿಮೆಯಾಗುತ್ತದೆ.
  • ಮುಂದಿನ ಬೆಳೆಯಲ್ಲಿ ಉತ್ತಮ ಇಳುವರಿಯೂ ಬರುತ್ತದೆ.
  • ಚಳಿಗಾಲದಲ್ಲಿ ಸಸ್ಯಗಳು ಬೇರಿನ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಆಹಾರವನ್ನು ಸರಬರಾಜು ಮಾಡುವುದಿಲ್ಲ.
  • ಆ ಕಾರಣ ಬಳ್ಳಿಯಲ್ಲಿ ಬೆಳೆಯುತ್ತಿರುವ  ಕಾಳು ಗೊಂಚಲು  ಮತ್ತು ಎಲೆಗಳಿಗೆ ಅಹಾರದ ಕೊರತೆ ಉಂಟಾಗಿ  ಮೊದಲು ಕಾಳು ಉದುರುತ್ತದೆ, ನಂತರ ಬಳ್ಳಿಯ ಎಲೆ ಉದುರುತ್ತದೆ.
  • ಭಾಗಶಃ ಬಳ್ಳಿ ಒಣಗುತ್ತದೆ. ಆಗ ಅದಕ್ಕೆ ಸಾಕಾಗುವಷ್ಟು  ಆಹಾರ ದೊರೆತು ಸ್ವಲ್ಪ ಬಳ್ಳಿ ಬದುಕುತ್ತದೆ.
  • ಕೆಲವೊಮ್ಮೆ ಬುಡ ತನಕ ಬಳ್ಳಿ ಒಣಗಿ ನಂತರ ಬುಡದಿಂದ ಬಳ್ಳಿ ಚಿಗುರಲು ಪ್ರಾರಂಭವಾಗುತ್ತದೆ.
  • ಇದು ರೋಗ ಅಲ್ಲ. ಪೊಷಕಾಂಶದ ಕೊರತೆ.
  • ಇದನ್ನು ಇನ್ಟಂಟ್ ಆಹಾರದಂತೆ ಎಲೆ ಮತ್ತು ಕಾಳುಗಳಿಗೆ ಸಿಂಪರಣೆ ಮೂಲಕ ಕೊಟ್ಟು ಸರಿಪಡಿಸಬಹುದು.

ಮೆಣಸು ಕೊಯಿಲು ಮಾಡುವಾಗ ಒಟ್ಟು ಬಳ್ಳಿಯಲ್ಲಿ 50% ಕರೆಗಳು ಹಣ್ಣಾಗಿರಬೇಕು. ಕಾಳುಗಳಲ್ಲಿ ಹೊಳಪು ಇರಬೇಕು. ಅಗತ್ಯವಾಗಿ ಉಗುರಿನಲ್ಲಿ ಕಾಳನ್ನು ಚುಚ್ಚಿದಾಗ ಅದು ತಿರುಳಿಗೆ ತಾಗಬಾರದು. ಅಂತಹ ಕಾಳುಗಳನ್ನು ಮಾತ್ರ ಕೊಯಿಲು ಮಾಡಬೇಕು.
ಎಳೆಯ ಕಾಳುಗಳನ್ನು ಕೊಯಿಲು ಮಾಡಿದರೆ ಅದನ್ನು ದಾಸ್ತಾನು ಇಡಲು ಆಗುವುದಿಲ್ಲ. ತೂಕ ಇರದ ಕಾರಣ ಲಾಭವೂ ಆಗುವುದಿಲ್ಲ. ಈ ವರ್ಷ ಕೆಲವು ಕಡೆ ಕರೆಗಳು ವಿರಳ ಎನ್ನುತ್ತಾರೆ. ಇಂತಲ್ಲಿ ಇಳುವರಿ ಪ್ರಮಾಣ ಹೆಚ್ಚಾಗಲು ಸಿಂಪರಣೆ ಸಹಾಯಕವಾಗುತ್ತದೆ.

error: Content is protected !!