ವಿಷ ಮಿಶ್ರಿತ -ನೇಂದ್ರ ಬಾಳೆ ಹಣ್ಣು

ಊಟದ ಹೊತ್ತಾಗಿತ್ತು. ಕೆ ಎಸ್ ಆರ್ ಟಿ ಸಿ ಬಸ್ ನವರ ಊಟದ ಹೋಟೆಲಿನಲ್ಲಿ ಉಣ್ಣಲು ಮನಸ್ಸು ಕೇಳಲಿಲ್ಲ. ಬಾಳೆ ಹಣ್ಣು ತಿನ್ನೋಣ ಎಂದು ಗುಂಡ್ಯದಲ್ಲಿ ಒಂದು ಅಂಗಡಿಯಲ್ಲಿ ಬಾಳೆ ಹಣ್ಣು ಕೇಳಿದರೆ ಅಂಗಡಿಯವನು ಹೇಳುತ್ತಾನೆ, ಈಗ ನೇಂದ್ರ ಬಿಟ್ಟರೆ ಬೇರೆ ಬಾಳೆ ಹಣ್ಣೇ ಇಲ್ಲ. ಒಂದೆಡೆ ಮಂಗಗಳ ಕಾಟ. ಇನ್ನೊಂದೆಡೆ ಬೆಲೆ ಇಲ್ಲ. ಎಲ್ಲರೂ ಹೆಚ್ಚು ಬೆಲೆ  ದೊರೆಯುತ್ತದೆ ಎಂದು ನೇಂದ್ರವನ್ನೇ ಬೆಳೆಯುತ್ತಾರೆ. ಇದರಿಂದಾಗಿ ಸ್ಥಳೀಯ ಬಾಳೆ ಕಾಯಿಯೇ ಕಡಿಮೆಯಾಗಿದೆ.  ಫೋರೇಟ್ ಹಾಕಿದರೆ ಮಂಗಸಹ ಬರುವುದಿಲ್ಲವಂತೆ.

ಜನರ ಅಭಿರುಚಿ:

  • ಜನ ಆರೋಗ್ಯ ಅರೋಗ್ಯ ಎಂದು ಬಹಳ ಕಾಳಜಿ ವಹಿಸುತ್ತಾರೆ.
  • ತಾವು ಬಳಸುವ ಆಹಾರ ವಸ್ತುಗಳಲ್ಲಿ ಎಷ್ಟು ವಿಷ ರಾಸಾಯನಿಕಗಳ ಉಳಿಕೆ ಇದ್ದರೂ ಚಿಂತೆ ಮಾಡುವುದಿಲ್ಲ.

ನೇಂದ್ರ – ಪಚ್ಚಬಾಳೆ-  ಬಣ್ಣ ಲೇಪಿತ ಕೆಂಪು ಬಾಳೆ,  ಹಾಗೆಯೇ ಕೆಲವು ಹೆಚ್ಚು ಬೆಲೆಯ ಬಾಳೆ ಹಣುಗಳನ್ನು ಆರೋಗ್ಯಕ್ಕೆ ಉತ್ತಮ ಎಂದು  ಹೆಣಿಗೆ ಹೆಣಿಗೆ ಖರೀದಿಸುವ ನಮ್ಮ ಜನಕ್ಕೆ ಆರೋಗ್ಯ ಬೇಕೇ? ದೊಡ್ದಸ್ಥಿಕೆ ಬೇಕೇ ಗೊತ್ತಾಗುವುದಿಲ್ಲ.

ಆರೋಗ್ಯಕ್ಕೆ ಒಳ್ಳೆಯದಾದರೂ ಈ ಬಾಳೆ ಹಣ್ಣು ಬೇಡ
  • ಹಳ್ಳಿಯ ಅಂಗಡಿಗಳಲ್ಲಿ ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಸ್ಥಳೀಯ ಬಾಳೆ ಹಣ್ಣು ಸಿಗುತ್ತದೆ.
  • ಆದರೆ ಈ ಹಣ್ಣುಗಳಿಗೆ ಬೆಲೆ ಇಲ್ಲ.
  • ಬಹುಷಃ ಇನ್ನು ಕೆಲವೇ ಸಮಯದಲ್ಲಿ ಸ್ಥಳೀಯ ಬಾಳೆ ಹಣ್ಣು ಕಾಣಲಿಕ್ಕಿಲ್ಲದಾದರೂ ಅಚ್ಚರಿ ಇಲ್ಲ.
  • ಸ್ಥಳೀಯ ಗಾಳಿ, ಮೈಸೂರು( ಸುಗಂಧಿ) ಬಾಳೆ ಗೊನೆಗೆ ಬೇಡಿಕೆ ಇಲ್ಲ.
  • ಬೆಲೆಯೂ ಇಲ್ಲ. ಆದಕ್ಕಾಗಿ ರೈತರು ಇದನ್ನು ಬೆಳೆಸುವುದನ್ನೇ ಬಿಟ್ಟಿದ್ದಾರೆ.

ಈಗ ಸ್ಥಳೀಯ ತಳಿಗಳಾದ ಜವಾರಿ, ಗಾಳಿ, ಬೂದಿ, ಮಿಟ್ಲಿ,  ಸಾವಿರ ಕದಳಿ, ಸುಗಂಧಿ ರಸಬಾಳೆ, ಅವುಂಡ( ಮೊಂತನ್)  ತಳಿಗಳು ಅವನತಿಯ ಹಂತದಲ್ಲಿವೆ. ಇವುಗಳಲ್ಲಿ ಹಲವಾರು ವೈವಿಧ್ಯಗಳಿದ್ದುದು ಕಾಣುವುದೇ ಅಪರೂಪವಾಗಿದೆ.

ಇದು ಸ್ಥಳೀಯ ಮಿಟ್ಲಿ ಬಾಳೆಯಲ್ಲಿ ಮಾತ್ರ ಮಾಡಲಿಕ್ಕಾಗುವ ಉತ್ಪನ್ನ.

ಏನಾದೀತು ಮುಂದೆ:

  • ಸ್ಥಳೀಯ ಬಾಳೆ ಹಣ್ಣುಗಳನ್ನು ತಿನ್ನುವವರು ಇಲ್ಲವೆಂದಾದರೆ  ಬೇಡಿಕೆ ಸಹಜವಾಗಿ ಕಡಿಮೆಯಾಗುತ್ತದೆ.
  • ಬೆಲೆ ಸಿಗುವುದಿಲ್ಲ. ರೈತರು ಬೆಳೆಸುವುದನ್ನೇ ಬಿಡುತ್ತಾರೆ.
  • ಇದು ಕ್ರಮೇಣ ಆ ತಳಿಗಳ ಅವನತಿಗೆ ಕಾರಣವಾಗುತ್ತದೆ.
  • ಈಗಾಗಲೇ ಈ ರೀತಿ ಹಲವು ಬಾಳೆ ತಳಿಗಳು ಕಣ್ಮರೆಯಾಗಿವೆ.
  • ನಾಟೀ ತಳಿಗಳಲ್ಲಿ ವಿಶೇಷ ಗುಣ ಇದೆ. ಅದು ಅವನತಿಯಾದರೆ ಮತ್ತೆ ಪುನರುಜ್ಜೀವವನ  ಕಷ್ಟ.

ನೇಂದ್ರ ಬಾಳೆ ಸುರಕ್ಷಿತವಲ್ಲ.

  • ನೇಂದ್ರ ಬಾಳೆ ಒಂದು ವಾಣಿಜ್ಯ ತಳಿ.   ಇದನ್ನು ಹಣ್ಣಿನ ಉದ್ದೇಶದ ಬಾಳೆ ಎಂದು ಪರಿಗಣಿಸಲಾಗಿಲ್ಲ. ಇದು  ಅಡುಗೆ ಉದ್ದೇಶದ ಬಾಳೆ.
  • ಇದರಲ್ಲಿ  ಹೆಚ್ಚು  ಹೆಣಿಗೆ  ಬರುವುದಿಲ್ಲ. ಬಂದ ಹೆಣಿಗೆಗಳಲ್ಲಿ  ಕಾಯಿಗಳು ಪುಷ್ಟಿಯಾಗಿದ್ದರೆ ಮಾತ್ರ ತೂಕ ಬರುತ್ತದೆ.
  • ತೂಕ ಬರಲು ಸಾಕಷ್ಟು ರಾಸಾಯನಿಕ ಗೊಬ್ಬರ- ಪ್ರಚೋದಕಗಳನ್ನು ಬಳಕೆ ಮಾಡಬೇಕಾಗುತ್ತದೆ.
  • ನೇಂದ್ರ ಮತ್ತು ಫೋರೇಟ್ – ಫ್ಯುರಡಾನ್  ಯವಾಗಲೂ ಜೊತೆಯಾಗಿರುತ್ತವೆ.
ನೇಂದ್ರಕ್ಕೆ ಈ ಕಾಂಡ ಕೊರಕ ಮಾಮೂಲು
  • ನೇಂದ್ರ ಬಾಳೆಗೆ ಹೆಚ್ಚಾಗಿ ಕಾಂಡ ಕೊರಕ ಹುಳುವಿನ ಸಮಸ್ಯೆ  ಇದೆ. ಇದರಿಂದ ಬೆಳೆ ಉಳಿಸಿಕೊಳ್ಳಲು  ರೈತರು ಬಾಳೆಯ ವಿವಿಧ ಹಂತಗಳಲ್ಲಿ ಪ್ಯುರಡಾನ್- ಫ್ಹೋರೇಟ್ ಹಾಕುತ್ತಾರೆ.
  • ಬಾಳೆಯ ಕಾಂಡಕೊರಕ ಹುಳುವು ಬಾಳೆ ಗೊನೆ ಹಾಕಿದ ನಂತರ ಯಾವುದೇ ಸಮಯದಲ್ಲಿ ಬಾಧಿಸುವ ಕೀಟ.
  • ಇದು ಬಂದರೆ ಬಾಳೆಯ ದಂಟು ಹಾನಿಯಾಗುತ್ತದೆ. ಇದರಿಂದ ಬಾಳೆ ಗೊನೆ ಬೆಳವಣಿಗೆ ಆಗುವುದಿಲ್ಲ. ಬೆಳವಣಿಗೆ  ನಿಂತು ಕಾಯಿ ಸಣಕಲಾಗುತ್ತದೆ.
  • ಬಾಳೆಯಲ್ಲಿ ಕಾಯಿ ಬೆಳೆಯುವ ತನಕವೂ ಫ್ಯುರಡಾನ್ ಕೀಟನಾಶಕವನ್ನು ಬಳಕೆ ಮಾಡಿದರೆ ಅದು ಕಾಯಿಯಲ್ಲಿ ಉಳಿಕೆಯಾಗುವ ಸಾಧ್ಯತೆ ಇರುತ್ತದೆ.
  • ಇದನ್ನು ತಿಂದವರ ಆರೋಗ್ಯಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚು.
  • ವಾಣಿಜ್ಯಿಕವಾಗಿ ನೇಂದ್ರ ಬೆಳೆಯುವಾಗ ವಿಷಕ್ಕೆ ಅಂಜಿ ಮಂಗಗಳೂ ಸಮೀಪ ಸುಳಿಯುವುದಿಲ್ಲ.

ಸ್ಥಳೀಯ ಬಾಳೆ ಸುರಕ್ಷಿತ:

  • ಜನತೆ ತಮ್ಮ ಘನಸ್ಥಿಕೆಯನ್ನು ಮೆರೆಯಲು ಹೊಸ ಹಾಗೂ ಹೆಚ್ಚು ಬೆಲೆಯ ಹಣ್ಣುಗಳನ್ನು ತಿನ್ನುವ ಹವ್ಯಾಸ ಕಡಿಮೆ ಮಾಡಬೇಕು.
  • ಸ್ಥಳೀಯ ಬಾಳೆ ಬೆಳೆಯಲು ಹೆಚ್ಚು ಗೊಬ್ಬರ ಬಳಕೆ ಮಾಡುವುದಿಲ್ಲ. ಕೀಟ ನಾಶಕ ಬಳಕೆಯೆಂಬುದೇ ಇಲ್ಲ. ಅದುದರಿಂದ ಇದು ಸುರಕ್ಷಿತ.
  • ಸ್ಥಳೀಯ ಗಾಳಿ ತಳಿಗಳಿಗೆ ರೋಗ ನಿರೋಧಕ ಶಕ್ತಿ ಇರುವ ಕಾರಣ ಬೆಳೆಸುವುದು ಸುಲಭ.ಕೂಳೆ ಬೆಳೆಗೂ ಸೂಕ್ತ.
  • ಕೆಲವು ಸ್ಥಳೀಯ ತಳಿಗಳು ಮುಖ್ಯವಾಗಿ ಮಿಟ್ಲಿ( ಗಾಳಿ ಜಾತಿ)  ಒಣಗಿಸಿ ಸಂಸ್ಕರಿಸುವುದಕ್ಕೂ ಹೊಂದಿಕೆಯಾಗುತ್ತದೆ.

ಗ್ರಾಹಕರು ತಮ್ಮ ಅರೋಗ್ಯದ ದೃಷ್ಟಿಯಿಂದಲಾದರೂ ಸ್ಥಳೀಯ ಬಾಳೆಗಳನ್ನು ಬಳಕೆ ಮಾಡಿದರೆ ತಳಿಗಳಾದರೂ ಉಳಿದೀತು.

 

2 thoughts on “ವಿಷ ಮಿಶ್ರಿತ -ನೇಂದ್ರ ಬಾಳೆ ಹಣ್ಣು

  1. ಇದರಿಂದಾಗಿ ನಮಗೆ ಒಂದು ಒಳ್ಳೆ ಅನುಭವ ಸಿಕ್ಕಿದೆ ಇದೇ ತರ ನ್ಯೂಸ್ ಗಳಿಂದಾಗಿ ನಮ್ಮೆಲ್ಲರ ಮನವರಿಕೆಯಾಗುತ್ತದೆ ವಿಷಮುಕ್ತ ಬಾಳೆಹಣ್ಣಿನಿಂದ ನಮ್ಮ ಕರ್ನಾಟಕ ಮುಕ್ತ ಗೊಳ್ಳುತ್ತದೆ

Leave a Reply

Your email address will not be published. Required fields are marked *

error: Content is protected !!