ತೊಗರಿ ಬೆಳೆಯಲ್ಲಿ 20% ಅಧಿಕ ಇಳುವರಿಗೆ ಹೊಸ ತಂತ್ರಜ್ಞಾನ.

by | Aug 22, 2020 | Pulse Crop (ಧಾನ್ಯದ ಬೆಳೆ) | 0 comments

ತೊಗರಿಯ ತವರು ಭಾರತವಾಗಿದ್ದು ಜಗತ್ತಿನ ಶೇಕಡಾ 90 ರಷ್ಟು ತೊಗರಿಯನ್ನು ಇಲ್ಲಿ ಬೆಳೆಯಲಾಗುತ್ತಿದೆ. ತೊಗರಿ ಬೆಳೆಯು ಕಲಬುರಗಿ ಜಿಲ್ಲೆಯ ಒಟ್ಟು ಕ್ಷೇತ್ರದ ಅರ್ಧದಷ್ಟನ್ನು ಹೊಂದಿರುವುದರಿಂದ ಇದನ್ನು “ತೊಗರಿಯ ಕಣಜ” ಎಂದು ಕರೆಯಲಾಗುತ್ತದೆ. ಈ ಕಾರಣಕ್ಕಾಗಿಯೇ ಜಿಯೋ ಟ್ಯಾಗ್‍ನ್ನು ಕೂಡಾ ಪಡೆದುಕೊಂಡು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಹಿರಿಮೆಯನ್ನು ತಂದುಕೊಟ್ಟಿದೆ. ತೊಗರಿ ಬೆಳೆಯುವ ರೈತರು ವೈಜ್ಞಾನಿಕವಾಗಿ ಸಾಬೀತಾದ  ಕೆಲವು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ ಕಡಿಮೆ ಖರ್ಚಿನಲ್ಲಿ ಪೋಷಕಾಂಶಗಳ ನಿರ್ವಹಣೆಯ ಜೊತೆಗೆ 20%  ಅಧಿಕ ಇಳುವರಿಯನ್ನು ಪಡೆಯಬಹುದು.

Red gram crop

  • ಕರ್ನಾಟಕ ರಾಜ್ಯದಲ್ಲಿ ಬೆಳೆಯುವ ಬೇಳೆಕಾಳು ಬೆಳೆಗಳಲ್ಲಿ ತೊಗರಿಯು ಪ್ರಮುಖವಾಗಿರುತ್ತದೆ.
  • ಅಲ್ಲದೇ ಉತ್ತರ ಕರ್ನಾಟಕದ ಬಹು ಮುಖ್ಯವಾದ ದ್ವಿದಳ ಧಾನ್ಯದ ಬೆಳೆಯೂ ಹೌದು.
  • ಕಲಬುರಗಿ ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಮಾಹಿತಿಯಂತೆ ಪ್ರಧಾನ ಬೆಳೆಯಾದ ತೊಗರಿಯು ಪ್ರಸಕ್ತ ಸಾಲಿನ ಬಿತ್ತನೆ ಪ್ರದೇಶದಲ್ಲಿ ಭಾರೀ ಏರಿಕೆಯಾಗಿದ್ದು, ಸುಮಾರು 6 ಲಕ್ಷ ಹೆಕ್ಷೇರ್ ಗೆ ಏರಿದೆ.
  • ರೈತ ಬಾಂಧವರು, ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದರಿಂದ ಕಳೆದ ವರ್ಷಕ್ಕಿಂತ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.
  • ಈ ಬೆಳೆಯಲ್ಲಿ ಸರಳವಾಗಿ ಅಳವಡಿಸಿಕೊಳ್ಳಬಹುದಾದ ಕೆಲವು ಸೂಕ್ಷ್ಮಗಳನ್ನು ಅರಿತರೆ ಎಕ್ರೆವಾರು ಇಳುವರಿಯನ್ನು ಹೆಚ್ಚು ಪಡೆಯಬಹುದು.

ತೊಗರಿಯಲ್ಲಿ ಕುಡಿ ಚಿವುಟುವುದು:

tip cutting in red gram

  • ಸಾಮಾನ್ಯವಾಗಿ ಅಲ್ಪಾವಧಿ ಮತ್ತು ಮಧ್ಯಮಾವಧಿ ತಳಿಗಳಲ್ಲಿ ಬೀಜ ಬಿತ್ತನೆ ಮಾಡಿದ 45-50 ದಿನಗಳ ನಂತರ ಚಿಗುರು ಚಿವುಟಬೇಕು.
  • ದೀರ್ಘಾವಧಿ ತಳಿಗಳಲ್ಲಿ 55-60 ದಿನಗಳಲ್ಲಿ ಮೇಲಿನಿಂದ ಬೆಳೆಯುವ ಕುಡಿಯನ್ನು 5-6 ಸೆಂ.ಮೀ. ಕುಡಿ  ಚಿವುಟಬೇಕು.
  • ಇದರಿಂದ ಗಿಡಗಳು ಅತಿ ಎತ್ತರ ಬೆಳೆಯುವುದನ್ನು ತಡೆದು ಹೆಚ್ಚಿನ ಸಂಖ್ಯೆಯಲ್ಲಿ ಕವಲೊಡೆಯಲು ಮತ್ತು ಎರಡನೆಯ ಹಾಗೂ ನಂತರದ ಕವಲುಗಳ ಸಂಖ್ಯೆಯೂ ಹೆಚ್ಚಾಗುತ್ತದೆ.
  • ಸಸ್ಯಗಳು ಪೋಷಕಾಂಶಗಳನ್ನು ಸದುಪಯೋಗಪಡಿಸಿಕೊಂಡುಕಾಳುಗಳ ಗಾತ್ರ ಮತ್ತು ಸಂಖ್ಯೆಯು ಹೆಚ್ಚಾಗಿ ಪ್ರತಿ ಗಿಡದ ಇಳುವರಿಯು ಹೆಚ್ಚಾಗುತ್ತದೆ.

ಮೊಗ್ಗು ಮತ್ತು ಹೂವು ರಕ್ಷಣೆ:

bird attaraction

  • ತೊಗರಿಯು ಬಿತ್ತನೆಯಾದ 45-50 ದಿನಗಳಲ್ಲಿ ಮೊಗ್ಗು ಮತ್ತು ಹೂವು ಉದುರುವುದು ಸ್ವಾಭಾವಿಕ.
  • ಕಾಯಿಕೊರಕ ಮತ್ತು ಬಲೆ ಕಟ್ಟುವ ಕೀಡೆಗಳು ಮೊಗ್ಗು ಹಾಗೂ ಹೂಗಳನ್ನು ಹಾನಿ ಮಾಡುತ್ತವೆ.
  • ಬೆಳೆಯು ಹೂವಾಡುವ ಹಂತದಲ್ಲಿದ್ದಾಗ ಸತತವಾಗಿ ಮೋಡ ಕವಿದ ವಾತಾವರಣ, 4-5 ದಿವಸ ಮಂಜು ಬಿದ್ದರೆ ಮತ್ತು ಸತತ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ ಬೇರುಗಳು ನಿಷ್ಕ್ರಿಯವಾಗುತ್ತವೆ.
  • ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿ ಕಡಿಮೆಯಾಗಿ ಗಿಡಗಳು ಬಲಹೀನವಾಗಿ ರೋಗಕ್ಕೆ ತುತ್ತಾಗಿ ಹೂವುಗಳು ಉದುರಿ ಇಳುವರಿ ಕಡಿಮೆಯಾಗುತ್ತದೆ.
  • ಪರಿಹಾರ : ತೊಗರಿಯನ್ನು ದಟ್ಟವಾಗಿ ಬಿತ್ತದೆ ಶಿಫಾರಸ್ಸು ಮಾಡಿದ ಅಂತರವನ್ನು ಅನುಸರಿ ಸಬೇಕು.
  • ಹೂವಾಡುವ ಮತ್ತು ಕಾಯಿ ಕಟ್ಟುವ ಹಂತದಲ್ಲಿದ್ದಾಗ ಮಣ್ಣಿನಲ್ಲಿ ತೇವಾಂಶ ಕಾಪಾಡಲು ಸರಿಯಾಗಿ ಎಡೆಕುಂಟೆ ಹೊಡೆದು ಪಲ್ಸ್ ಮ್ಯಾಜಿಕ್‍ನ್ನು ಬಳಸಬೇಕು.

 ‘ಪಲ್ಸ್ ಮ್ಯಾಜಿಕ್’ ಬಳಕೆ :

pulse magic

  • ಪಲ್ಸ್ ಮ್ಯಾಜಿಕ್ ಒಂದು ಮುಖ್ಯ ಲಘು ಪೋಷಕಾಂಶಗಳ ಮಿಶ್ರಣವನ್ನು ಮತ್ತು ಸಸ್ಯವರ್ಧಕಗಳನ್ನು ಹೊಂದಿದೆ.
  • ಇದರಲ್ಲಿ ಶೇ. 10ರಷ್ಟು ಸಾರಜನಕ, ಶೇ. 40ರಷ್ಟು, ರಂಜಕ, ಶೇ. 3ರಷ್ಟು ಲಘು ಪೋಷಕಾಂಶಗಳು ಮತ್ತು 20 ಪಿಪಿಎಂನಷ್ಟು ಸಸ್ಯ ಪ್ರಚೋದಕಗಳು ಇರುತ್ತವೆ.
  •  ದ್ವಿದಳ ಧಾನ್ಯದ ಬೆಳೆಗಳು ದಷ್ಟ-ಪುಷ್ಟವಾಗಿ ಬೆಳೆದು ಹೂ ಮತ್ತು ಕಾಯಿಗಳ ಉದುರುವಿಕೆಯನ್ನು ತಡೆಗಟ್ಟಿ ಕಾಯಿ ಕಟ್ಟುವಿಕೆ ಹೆಚ್ಚಾಗಿ ಮತ್ತು ಪ್ರತಿ ಗಿಡದಲ್ಲಿ ಕಾಯಿಗಳ ಮಾಗುವಿಕೆ ಸಮನಾಗಿರುತ್ತದೆ.
  • ಪಲ್ಸ್ ಮ್ಯಾಜಿಕ್‍ನ್ನು ಶೇ. 50ರಷ್ಟು ಹೂ ಬಿಟ್ಟಾಗ ಮತ್ತು 15 ದಿನಗಳ ನಂತರ ಎಕರೆಗೆ 2 ಕಿ.ಗ್ರಾಂ.ನಂತೆ 200 ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪಡಿಸಬೇಕು.
  • ಇದರ ಸಿಂಪರಣೆಯಿಂದ ಪ್ರತಿ ಕಾಳುಗಳು ದಪ್ಪವಾಗಿ ಕಾಳಿನ ತೂಕದಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತದೆ.
  • ಇದರಿಂದ ಶೇ. 17-20ರಷ್ಟು ಹೆಚ್ಚಿನ ಇಳುವರಿಯನ್ನು ನಿರೀಕ್ಷಿಸಬಹುದು.
  • ಇದು ಕೃಷಿ ಸಂಶೋಧನಾ ಕೇಂದ್ರ, ಕಲಬುರಗಿಯಲ್ಲಿ ದೊರೆಯುತ್ತದೆ.

 ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ :

IPM in red gram

  • ತೊಗರಿ ಬೆಳೆಯಲ್ಲಿ ಅಧಿಕ ಇಳುವರಿಗಾಗಿ ಬೆಳೆಯ ಪ್ರಾರಂಭಿಕ ಹಂತದಿಂದ ಹೂವಾಡುವ ಹಾಗೂ ಕಾಳು ಕಟ್ಟುವ ಹಂತದಲ್ಲಿ ಬೆಳೆಗಳಿಗೆ ಬಾಧಿಸುವ ಕೀಟ ಹಾಗೂ ರೋಗಗಳ ಹತೋಟಿಗಾಗಿ ಸಮಗ್ರ ಪೀಡೆ ನಿರ್ವಹಣೆ ವಿಧಾನವನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಗಳ ಶಿಫಾರಸ್ಸಿನಂತೆ ಅನುಸರಿಸಬೇಕು.

‘ಸೇವ್ ಗ್ರೀನ್ ಬ್ಯಾಗ್’ನ ಉಪಯೋಗಗಳು :

  • ರೈತರು ಸಾಮಾನ್ಯವಾಗಿ ತೊಗರಿ ರಾಶಿ ಮಾಡಿದ ನಂತರ ಕಾಳುಗಳನ್ನು ಸಂಗ್ರಹಿಸಲು ಗೋಣಿ ಚೀಲ ಅಥವಾ ಪ್ಲಾಸ್ಟಿಕ್ ಚೀಲವನ್ನು ಬಳಸುವುದು ವಾಡಿಕೆ.
  • ಆದರೆ ಇವುಗಳಿಂದ ಅನಾನುಕೂಲತೆಗಳೇ ಹೆಚ್ಚು.
  • ಆದ್ದರಿಂದ ಮಾರುಕಟ್ಟೆಯಲ್ಲಿ ಸಿಗುವ ವೈಜ್ಞಾನಿಕವಾಗಿ ತಯಾರಿಸಿದ ‘ಸೇವ್ ಗ್ರೀನ್ ಬ್ಯಾಗ್’ಗಳನ್ನು ಬಳಸುವುದರಿಂದ ಕಾಳುಗಳ ಮೂಲ ತೇವಾಂಶ ಪ್ರಮಾಣವನ್ನು ಗುಣಮಟ್ಟ ಮತ್ತು ಗಾತ್ರದಲ್ಲಿ ವ್ಯತ್ಯಾಸವಾಗದಂತೆ ಉತ್ತಮ ಗಾಳಿಯಾಡುವ ಪರಿಸರದಲ್ಲಿ ಸಂಗ್ರಹಿಸಬಹುದು
  • ಇದರಿಂದ ಕಾಳುಗಳನ್ನು ಅಧಿಕ ಸಮಯದವರೆಗೆ ಗುಣಮಟ್ಟ ಮತ್ತು ಗಾತ್ರದಲ್ಲಿ ಕಡಿಮೆಯಾಗದಂತೆ ಸಂಗ್ರಹಿಸಬಹುದು.
  • ಈ ಬ್ಯಾಗ್‍ಗಳು ತೆಳುವಾಗಿದ್ದು, ಸುಲಭವಾಗಿ ಮಡಚಿ ಕಡಿಮೆ ಸ್ಥಳದಲ್ಲಿ ಮುಂದಿನ ಬಾರಿಯ ಉಪಯೋಗಕ್ಕಾಗಿ ಶೇಖರಿಸಿಡಬಹುದು.

ವ್ಯಾಕ್ಯುಮ್ ಪ್ಯಾಕೇಜ್ ಮಾಡಿದರೆ  ಲಾಭ ಹೆಚ್ಚು:

Storage of pulses in vacuum pack

  • ಈ ಆಧುನಿಕ ತಾಂತ್ರಿಕತೆಯಿಂದ ಸಾಂಪ್ರದಾಯಿಕ ಶೇಖರಣಾ ಪದ್ಧತಿಗಿಂತ ಕಡಿಮೆ ಖರ್ಚಿನಲ್ಲಿ ಉತ್ಪನ್ನಗಳ ಜೀವಿತಾವಧಿ (ಸೆಲ್ಫ್ ಲೈಫ್) ಹೆಚ್ಚಿಸಬಹುದು.
  • ಈ ತಂತ್ರಜ್ಞಾನದ ಬಳಕೆಯಿಂದ ಕಡಿಮೆ ಪ್ರಮಾಣದ ಆಮ್ಲಜನಕ ಪೂರೈಕೆಯಾಗಿ ಕನಿಷ್ಟ ಉಸಿರಾಟ ಇರುವುದರಿಂದ ಶೇಖರಿಸಿದ ಉತ್ಪನ್ನಗಳ ಬಣ್ಣ, ಗುಣಮಟ್ಟ, ರುಚಿ, ವಾಸನೆ ಮತ್ತು ಬೀಜಗಳ ಮೊಳಕೆಯ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ
  • ಜೊತೆಗೆ ದೀರ್ಘಕಾಲದವರೆಗೆ ಶೇಖರಣೆ ಜೊತೆಗೆ ಸಾಗಾಣಿಕೆ ಹಾಗೂ ರಫ್ತು ಚಟುವಟಿಕೆಗಳನ್ನು ಸುಲಭವಾಗಿ ಮಾಡಬಹುದು.

ರೈತ ಬಾಂಧವರು ಈ ಮೇಲ್ಕಂಡ ಎಲ್ಲಾ ನೂತನ ಮತ್ತು ವೈಜ್ಞಾನಿಕವಾದ ತಂತ್ರಜ್ಞಾನಗಳನ್ನು ತೊಗರಿ ಬೆಳೆಯಲ್ಲಿ ಅಳವಡಿಸಿಕೊಂಡರೆ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿಯ ಜೊತೆಗೆ ಹೆಚ್ಚಿನ ಲಾಭವನ್ನು ಪಡೆಯಬಹುದು.
ಲೇಖಕರು :ಡಾ. ಶ್ರೀನಿವಾಸ ಬಿ.ವಿ., ಡಾ. ರಾಜು ಜಿ. ತೆಗ್ಗೆಳ್ಳಿ ಮತ್ತು ಡಾ. ಜಹೀರ್ ಅಹಮ್ಮದ್‍ವಿಜ್ಞಾನಿಗಳು, ಪೂಜಾ ಎಸ್ ಪಿ,  ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ-01
end of the article:——————————————————————————
search words:pigeon pea #   red gram # KVK Kulbargi#  pigeon pea cultivation # Vacuum packing of pigeon pea# Pulse crop # Pulse magic#

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!