ಮೈಕ್ರೋ ನ್ಯೂಟ್ರಿಯೆಂಟ್ ಬಳಸಿದರೆ ಅಚ್ಚರಿಯ ಇಳುವರಿ.

ಅಡಿಕೆ ಗರಿಯಲ್ಲಿ ಸೂಕ್ಷ್ಮ ಪೋಷಕದ ಕೊರತೆ ಲಕ್ಷಣ

ಭಾರತ ದೇಶದ ಬಹುತೇಕ ಮಣ್ಣಿನಲ್ಲಿ ಸೂಕ್ಷ್ಮಪೋಷಕಾಂಶಗಳ ಕೊರತೆ ಇದೆ. ಒಟ್ಟು ಕೃಷಿ ಭೂಮಿಯಲ್ಲಿ 49% ಸತುವಿನ ಕೊರತೆಯನ್ನೂ , 12% ಕಬ್ಬಿಣದ ಕೊರತೆಯನ್ನೂ , 5% ಮ್ಯಾಂಗನೀಸ್, ಮತ್ತು 3% ದಷ್ಟು ತಾಮ್ರದ ಕೊರತೆಯನ್ನು 33% ಬೋರಾನ್ ಮತ್ತು 11%  ಮಾಲಿಬ್ಡಿನಂ ಕೊರತೆಯನ್ನು ಹೊಂದಿದೆ ಎಂಬುದಾಗಿ ಅಧ್ಯಯನ ಹೇಳುತ್ತದೆ. ನಿಮ್ಮ ಯಾವುದೇ ಬೆಳೆಗೆ 1 ಲೀ. ನೀರಿಗೆ 1  ಗ್ರಾಂ ಪ್ರಮಾಣದಲ್ಲಿ ಮೈಕ್ರೋ ನ್ಯೂಟ್ರಿಯೆಂಟ್ ಮಿಶ್ರಣ ಮಾಡಿ ಸಿಂಪರಣೆ ಮಾಡಿ.ಆಗ ತಿಳಿಯುತ್ತದೆ ಅದರ ಮಹಿಮೆ ಏನು ಎಂಬುದು.

  • ನಮ್ಮ ಹಿರಿಯರು ಈಗಿನ ರಾಸಾಯನಿಕ ಗೊಬ್ಬರ ಯಾವುದನ್ನೂ ಕಂಡವರಲ್ಲ. ಈಗ ಕೃಷಿ ನಡೆಯುವುದೇ ಅದರಿಂದ.
  • ಈಗ NPK  ಅಲ್ಲದೆ ಬೇರೆ 11 ಪೋಷಕಗಳು ಬೇಕಾಗುತ್ತವೆ.

ಸಸ್ಯಗಳು ನಮಗೆ ಗರಿಷ್ಟ ಇಳುವರಿಯನ್ನು ಕೊಡಬೇಕು. ಬೆಳೆಗಳ ಆರೋಗ್ಯವೂ ಸುಸ್ಥಿರವಾಗಿರಬೇಕು. ಈ ನಮ್ಮ ಆಶೋತ್ತರಗಳಿಗೆ ಸ್ಪಂದಿಸಿ ಇಳುವರಿ ಕೊಡುವಾಗ ಹೆಚ್ಚಿನ ಪ್ರಮಾಣದಲ್ಲಿ ಪೋಷಕಗಳು ಬೇಕಾಗುತ್ತವೆ.

  • ಒಂದು ಹಸು ಹೆಚ್ಚು ಹಾಲು ಕೊಡುವಾಗ ಅದಕ್ಕೆ ಹೆಚ್ಚು ಪೌಷ್ಟಿಕ ಆಹಾರ ಬಳಕೆಯಾಗುತ್ತದೆ.
  • ಅದಕ್ಕನುಗುಣವಾಗಿ ಕೊಡದೆ ಇದ್ದರೆ ಹಸು ಸೊರಗಿ ಹೋಗುತ್ತದೆ.
  • ಅದೇ ರೀತಿಯಲ್ಲಿ ಸಸ್ಯಗಳೂ ಸಹ. ಈಗಿನ ನಮ್ಮ ಬೇಸಾಯ ಕ್ರಮ, ಬೇಸಾಯಕ್ಕೆ ಒಳಪಟ್ಟಿರುವ ಮಣ್ಣು ಇದಕ್ಕನುಗುಣವಾಗಿ ಮುಖ್ಯ ಪೊಷಕಗಳೂ ಅಲ್ಲದೆ ಲಘು ಪೋಷಕಗಳು ಅಗತ್ಯವಾಗಿ ಬೇಕಾಗುತ್ತದೆ.
ಅತೀ ಕಡಿಮೆಯಾದರೂ ಅತೀ ಹೆಚ್ಚಿನ ಫಲಿತಾಂಶ ಕೊಡುವ ಪೋಷಕ
ಅತೀ ಕಡಿಮೆಯಾದರೂ ಅತೀ ಹೆಚ್ಚಿನ ಫಲಿತಾಂಶ ಕೊಡುವ ಪೋಷಕ

ಲಘು ಪೋಷಕಗಳು ಅಥವಾ ಮೈಕ್ರೋ ನ್ಯೂಟ್ರಿಯೆಂಟ್ ಎಂಬುದು ಅತೀ ಕಡಿಮೆ ಪ್ರಮಾಣದಲ್ಲಿ ಬೇಕಾಗುವ ಪೋಷಕಗಳು. ಅದರೆ ಅವುಗಳ ಮಹತ್ವ ಮಾತ್ರ ಮುಖ್ಯ ಪೋಷಕಗಳಷ್ಟೇ ಮಹತ್ವವನ್ನು ಪಡೆದಿವೆ. ಗ್ರಾಂ ಲೆಕ್ಕದಲ್ಲಿ, ಒಂದೆರಡು ಮಿಲಿ ಲೆಕ್ಕದಲ್ಲಿ ಬೇಕಾಗುವ ಈ ಪೋಷಕಗಳು ಆಶ್ಚರ್ಯಕರ ಬೆಳೆವಣಿಗೆಯನ್ನು ಉಂಟು ಮಾಡುತ್ತದೆ.

ಯಾಕೆ ಮೈಕ್ರೋ ನ್ಯೂಟ್ರಿಎಂಟ್ ಬೇಕು:

  • ಸಸ್ಯದ ಬೆಳವಣಿಗೆಗೆ ಬೇಕಾಗುವಷ್ಟು ಪೋಷಕಗಳು ಮಣ್ಣಿನಲ್ಲಿ ಇರುತ್ತವೆ.
  • ಆದರೆ ನಾವು ಹೆಚ್ಚು ಹೆಚ್ಚು ಬೆಳೆ ಅಪೇಕ್ಷಿಸುವಾಗ, ಹೆಚ್ಚಿನ ಇಳುವರಿಯನ್ನು ಪಡೆಯುವಾಗ ಅದರ ಕೊರತೆ ಉಂಟಾಗುತ್ತದೆ.
  • ವಾತವರಣ, ಮಣ್ಣು, ನೀರು ಮತ್ತು ಬಳಕೆ ಮಾಡುವ ಪೋಷಕಗಳಿಂದ ಲಘು ಪೋಷಕಾಂಶಗಳು ಕಡಿಮೆಯಾಗಿ ಗಿಡ ಸೊರಗುತ್ತದೆ.
  • ಹಿಂದಿನ ಕಾಲದಲ್ಲಿ ಈ ಪೋಷಕಗಳ ಕೊರತೆ ಇರುತ್ತಿರಲಿಲ್ಲ ಎನ್ನಲಾಗುತ್ತಿದೆ.
  • ಅದರೆ ಆಗ ಅದರ ವಿಷಯವೇ ಇರಲಿಲ್ಲ. ಬೆಳೆ ಪೋಷಕಗಳು ಎಂದರೆ ಕೊಟ್ಟಿಗೆ ಗೊಬ್ಬರ, ಹಸುರೆಲೆ ಗೊಬ್ಬರ  ಅಷ್ಟರಲ್ಲೇ  ಮಿತಿಗಳು ಇತ್ತು.
  • ಜೊತೆಗೆ ಆಗ ಬೇಸಾಯಕ್ಕೆ ಒಳಪಡುತ್ತಿದ್ದ ಭೂಮಿ ತುಂಬಾ ಫಲವತ್ತತೆಯಿಂದ ಕೂಡಿತ್ತು.
  • ಈಗ  ಹಾಗಿಲ್ಲ ಫಲವತ್ತತೆ ರಹಿತವಾದ ಮಣ್ಣಿನಲ್ಲಿಯೂ ಕೃಷಿ ಮಾಡಲಾಗುತ್ತದೆ.
  • ನಮ್ಮ ಹಿರಿಯರು ಪಡೆಯುವ ಇಳುವರಿಗಿಂತ ದುಪ್ಪಟ್ಟು ಇಳುವರಿಯನ್ನೂ ಪಡೆಯುತ್ತಿದ್ದೇವೆ.
  • ಆದ ಕಾರಣ ಲಘು ಪೊಷಕಾಂಶಗಳು ಅಗತ್ಯವಾಯಿತು.
  • ಜೊತೆಗೆ ಮಣ್ಣಿಗೆ ಬಳಕೆ ಮಾಡುವ ಸಾರಜನಕ , ರಂಜಕ ಮತ್ತು ಪೊಟ್ಯಾಶ್ ರಸಗೊಬ್ಬರಗಳ ಬಳಕೆಯಿಂದಾಗಿಯೂ  ಈ  ಪೋಷಕದ ಕೊರತೆ ಉಂಟಾಗಿದೆ.
ಕರಿಮೆಣಸಿನಲ್ಲಿ ಸೂಕ್ಷ್ಮ ಪೋಷಕದ ಕೊರತೆ ಲಕ್ಷಣ
ಕರಿಮೆಣಸಿನಲ್ಲಿ ಸೂಕ್ಷ್ಮ ಪೋಷಕದ ಕೊರತೆ ಲಕ್ಷಣ

ಹಿಂದೆ ನಮ್ಮ ಹಿರಿಯರು ಬಳಕೆ ಮಾಡುತ್ತಿದ್ದ ಪೋಷಕ ಸೊಪ್ಪು ಸದೆ ಹಾಕಿದ ಹಸುಗಳ ಸಗಣಿ ಮಿಶ್ರಿತ ಗೊಬ್ಬರ. ವೈವಿಧ್ಯಮಯ ಹಸಿ ಸೊಪ್ಪುಗಳ ಮೂಲಕ ಮೈಕ್ರೋ ನ್ಯೂಟ್ರಿಯೆಂಟ್ ಗಳು ಸಸ್ಯಕ್ಕೆ ಲಭ್ಯವಾಗುತ್ತಿತ್ತು.

  • ಪ್ರತೀಯೊಂದು ಸೂಕ್ಷ್ಮ ಪೋಷಕಾಂಶಗಳ ಮೂಲ ಮಣ್ಣೇ ಆಗಿರುತ್ತದೆ.
  • ಮಣ್ಣಿನ ಖನಿಜಗಳಲ್ಲಿ. ಶಿಲೆಗಳಲ್ಲಿ  ಈ ಸೂಕ್ಷ್ಮ ಪೋಷಕಾಶಗಳು ಇರುತ್ತವೆ.
  • ಕೆಲವು ಜ್ವಾಲಾಮುಖಿಯಲ್ಲೂ ದೊರೆಯುತ್ತದೆ. ಮತ್ತೆ ಕೆಲವು  ಸೂರ್ಯನ ಬೆಳಕಿನಿಂದ ಮಣ್ಣಿಗೆ ಪೂರಣವಾಗುತ್ತದೆ.

ಮಣ್ಣಿನಲ್ಲಿ ಕಿರು ಪೋಷಕಗಳ ಕೊರತೆ ಹೇಗೆ ತಿಳಿಯುವುದು:

  • ಕಿರು ಪೋಷಕಗಳ ಕೊರತೆ ಮಣ್ಣಿನಲ್ಲಿ ಇದೆಯೇ ಎಂಬುದನ್ನು ಅಷ್ಟು ಸರಳವಾಗಿ ಪತ್ತೆ ಮಾಡುವುದು ಕಷ್ಟ.
  • ಮಣ್ಣು ಪರೀಕ್ಷೆಯಲ್ಲಿ ಕರಾರುವಕ್ಕಾಗಿ ತಿಳಿಯಬಹುದು. ಉಳಿದೆಲ್ಲಾ ಪೋಷಕಗಳನ್ನು ಯಥೇಚ್ಚವಾಗಿ ಕೊಟ್ಟಾಗಲೂ ಸಸ್ಯ ಬೆಳವಣಿಗೆಯಲ್ಲಿ ನ್ಯೂನತೆ, ಇಳುವರಿ ಕ್ಷೀಣವಾಗಿವುದು, ಎಲೆ ಬಿಳುಚಿಕೊಳ್ಳುವುದು ಆಗುತ್ತಿದ್ದರೆ ಸೂಕ್ಷ್ಮ ಪೋಷಕಾಂಶದ ಕೊರತೆ ಇದೆ ಎಂದು ಮನಗಾಣಬಹುದು.
  • ಸಾಮಾನ್ಯವಾಗಿ ಎಲೆಗಳು ಬಿಳುಚಿಕೊಳ್ಳುವುದು, ತಿಳಿ ಹಸುರು ಬಣ್ಣಕ್ಕೆ ತಿರುಗುವುದು, ಎಲೆ ಸಣ್ಣದಾಗುವುದು, ಎಲೆ ಅಲಗು, ಮತ್ತು ಮಧ್ಯಬಾಗದ ಬಣ್ಣ ವ್ಯತ್ಯಾಸಗಳು ಒಂದು ಚಿನ್ಹೆಯಾಗಿರುತ್ತವೆ.
  •   ಬೇರುಗಳ ಮೇಲೆ ಇವು ಅಂಥಹ ನೇರ ಪರಿಣಾಮ ಉಂಟು ಮಾಡುವುದಿಲ್ಲವಾದರೂ ಎಲೆಗಳ ಕಾರಣದಿಂದ ಬೇರು ಬೆಳೆವಣಿಗೆಗೆ ಅಡ್ಡಿಯಾಗುತ್ತದೆ.
  • ಹೂವು, ಕಾಯಿ ಕಚ್ಚುವಿಕೆಯಲ್ಲಿ ಮೈಕ್ರೋ ನ್ಯೂಟ್ರಿಯೆಂಟ್ ಪಾತ್ರ ಇದೆ.
  • ಧೀರ್ಘಾವಧಿ ತೋಟಗಾರಿಕಾ ಬೆಳೆಗಳಲ್ಲಿ ಸೂಕ್ಷ್ಮ ಪೊಷಕಗಳ ಕೊರತೆ ಮೊದಲು ಅತ್ಯಲ್ಪ ಪ್ರಮಾಣದಲ್ಲಿ ಕಂಡು ಕ್ರಮೇಣ ಹೆಚ್ಚಳವಾಗುತ್ತಾ ಹೋಗುತ್ತದೆ.
  • ಅಲ್ಪಾವಧಿ ಬೆಳೆಗಳಲ್ಲಿ ಸಾಮಾನ್ಯವಾಗಿ ಹೂ ಬಿಡುವ ಹಂತಕ್ಕಾಗುವಾಗ ಇದರ ಕೊರತೆ ಕಾಣಿಸುತ್ತದೆ. ನಂತರ ಬೆಳವಣಿಗೆ ಕ್ಷೀಣಿಸುತ್ತದೆ.
ದಾಳಿಂಬೆಯಲ್ಲಿ ಸೂಕ್ಷ್ಮ ಪೋಷಕದ ಕೊರತೆ ಲಕ್ಷಣ
ದಾಳಿಂಬೆಯಲ್ಲಿ ಸೂಕ್ಷ್ಮ ಪೋಷಕದ ಕೊರತೆ ಲಕ್ಷಣ

ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳಲ್ಲೂ ಏಕ ಪ್ರಕಾರದ ಮೈಕ್ರೋ ನ್ಯೂಟ್ರಿಯೆಂಟ್ ಗಳ ಕೊರತೆ ಕಾಣಿಸುವುದಿಲ್ಲ. ಕೆಲವು ಕಡೆ ಆ ಖನಿಜ ಮೂಲ ಇರುವಲ್ಲಿ ಅದರ ಕೊರತೆ ಇರುವುದಿಲ್ಲ. (ಬಳ್ಳಾರಿಯಲ್ಲಿ ಮ್ಯಾಂಗನೀಸ್ , ಕಬ್ಬಿಣ ಅಂಶದ ಕೊರತೆ ಕಂಡು ಬರುವುದಿಲ್ಲ.ಸುಣ್ಣದ ನಿಕ್ಷೇಪ ಇರುವಲ್ಲಿ ಕ್ಯಾಲ್ಸಿಯಂ ಕೊರತೆ ಇರುವುದಿಲ್ಲ.) 
ಈಗಿನ ಬೆಳೆ ಪದ್ದತಿ, ಮತ್ತು ಅಧಿಕ ಇಳುವರಿಯ ತಳಿಗಳು, ಹಾಗು ಹೆಚ್ಚಿನ ಪ್ರಮಾಣದಲ್ಲಿ ಪಡೆಯುತ್ತಿರುವ ಇಳುವರಿಗೆ ಮಣ್ಣಿನಲ್ಲಿ ಸೂಕ್ಷ್ಮ ಪೋಷಕಗಳು ಕಡಿಮೆಯಾಗುತ್ತಿವೆ. ಗರಿಷ್ಟ ಪ್ರಮಾಣದ ಸಸ್ಯ ಜನ್ಯ ಸಾವಯವ ಗೊಬ್ಬರ ಪೂರೈಕೆ ಮಾಡಿದಾಗ ಇದರ ಕೊರತೆ ಸಮತೋಲನಕ್ಕೆ ಬರುತ್ತದೆ. ರೈತರು ಮಣ್ಣು ಪರೀಕ್ಷೆ ಮಾಡಿಸಿ ಇದನ್ನು ಬಳಕೆ ಮಾಡಿದರೆ ಅನುಕೂಲ. ಬಳಕೆ ಮಾಡುತ್ತಾ ಬಂದಂತೆ ಪರೀಕ್ಷೆಯನ್ನು ರೈತರು ಕಣ್ಣಂದಾಜಿನಲ್ಲೇ ಮಾಡಲು ಸಾಧ್ಯವಾಗುತ್ತದೆ.
ಮುಂದಿನ ಲೇಖನದಲ್ಲಿ ಸೂಕ್ಷ್ಮ ಪೋಷಕಗಳ ಬಗ್ಗೆ ಹೆಚ್ಚಿನ ಮಾಹಿತಿ ಪ್ರಕಟಿಸುತ್ತೇವೆ.
End of the article:———————————-
Search words: Micro nutrient # micro nutrient disorder# why micro nutrient required to plants# Role of micronutrient in plant growth# plant health and micro nutrient# Sources of micro nutrients#

Leave a Reply

Your email address will not be published. Required fields are marked *

error: Content is protected !!