ಮಾವಿನ ಹೂವು ಉದುರದಂತೆ ರಕ್ಷಿಸುವ ವಿಧಾನ.

ಹೂವು ಬಿಟ್ಟ ಮಾವಿನ ಮರ

ಈ ವರ್ಷ ಮಾವಿನ ಮರಗಳೆಲ್ಲಾ ಹೂವು  ಬಿಟ್ಟಿವೆ. ಎಲ್ಲಾ ಹೂವು ಕಾಯಿಕಚ್ಚಿ ಕಾಯಿಯಾದರೆ ಮಾವಿನ ಮಾರುಕಟ್ಟೆಯೇ ಸಾಕಾಗದು. ಆದರೆ ಬಹುತೇಕ ಮಾವಿನ ಹೂವು ಉಳಿಯುವುದಿಲ್ಲ.  ರಕ್ಷಿಸಲು ಕೆಲವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು.

ಮಾವಿನ ಮರದಲ್ಲಿ ಹೂ ಬಿಡುವ ಹಂತ ಬಹಳ ನಿರ್ಣಾಯಕ ಹಂತವಾಗಿದ್ದು, ದೊಡ್ಡ ದೊಡ್ಡ ಬೆಳೆಗಾರರರು  ಹೂ ಉಳಿದು ಕಾಯಿ ಹೆಚ್ಚಲು ಗರಿಷ್ಟ ಸಿಂಪರಣೆ ಮಾಡುತ್ತಾರೆ.ವಾಣಿಜ್ಯಿಕ ಮಾವು ಬೆಳೆಗೆ ಇದೆಲ್ಲಾ ಸರಿ. ಸಣ್ಣ ಸಣ್ಣ ಹಿತ್ತಲಿನ ಹಣ್ಣು ಹಂಪಲು ಮರವುಳ್ಳವರು ಹೂವು ಬಿಟ್ಟದ್ದನ್ನು ರಕ್ಷಿಸಿಕೊಳ್ಳುವ  ಉಪಾಯ ಇಲ್ಲಿದೆ.

 ಯಾವ ತೊಂದರೆ:

  • ಹೂವು ಬಿಡುವ ಸಮಯದಲ್ಲಿ ಅದರ ದಂಟನ್ನು ಚುಚ್ಚಿ ರಸ ಹೀರುವ ಜಿಗಿ ಹುಳ , T ಸೊಳ್ಳೆ, ಮ್ಯಾಂಗೊ ಹೊಪ್ಪರ್ಸ್ mango hoppers ಸಾಮಾನ್ಯವಾಗಿ ಬರುತ್ತದೆ.
  • ಇದು ಹೂ ಮೊಗ್ಗು ಬರುವಾಗಲೇ ಪ್ರವೇಶವಾಗುತ್ತದೆ. ಅಂಟು ಪದಾರ್ಥವನ್ನು ಸ್ರವಿಸಿ ಹೂ ಗೊಂಚಲಿನಲ್ಲಿ  ಕಪ್ಪು ಬೂಸ್ಟು ಬೆಳವಣಿಗೆಯಾಗುತ್ತದೆ.
  • ಇದರ ಪ್ಯೂಪೇ ಹಂತವು ಮಣ್ಣಿನಲ್ಲಿ ನಡೆಯುತ್ತವೆ.
  • ಇದು ಮೊಗ್ಗನ್ನು ಚುಚ್ಚುತ್ತದೆ. ಮಿಡಿ ಕಾಯಿಗಳನ್ನೂ ಚುಚ್ಚುತ್ತದೆ. ಇದರಿಂದ ಬಹಳಷ್ಟು ಹೂವು ಮತ್ತು ಮಿಡಿ ಕಾಯಿ ಉದುರಿ ಫಸಲು ನಷ್ಟವಾಗುತ್ತದೆ.
  • ಮಾವಿನ ಹೂವಿಗೆ ಮೆದುವಾದ ಹುಳ  Maggots  ಕೀಟ ಹಾನಿ ಮಾಡುತ್ತದೆ.
  • ಇದು ಹೂಮೊಗ್ಗನ್ನು ತಿನ್ನುತ್ತದೆ.
  • ಹೂ ಗೊಂಚಲಿನಲ್ಲಿ ಇರುವೆಗಳು ಹರಿದಾಡುತ್ತಿದ್ದರೆ ಅಲ್ಲಿ ಕೀಟಗಳ ಹಾವಳಿ ಇದೆ ಎಂದು ತಿಳಿಯಬಹುದು.
  • ಅದನ್ನು ತಿನ್ನಲು ಇರುವೆಗಳು ಸುತ್ತುತ್ತಿರುತ್ತವೆ.

ಮಾವಿನ ಕಾಯಿ ಕಚ್ಚಿದ್ದು

ಇದರ ನಿಯಂತ್ರಣಕ್ಕೆ  ಇಮಿಡಾಕ್ಲೋಫ್ರಿಡ್ ಅಥವಾ ಲಾಂಬ್ಡಾಸೈಹೋಥ್ರಿನ್ ಕೀಟನಾಶಕದ ಸಿಂಪರಣೆ  ಫಲಕಾರಿ. ಉಪಚಾರ ಮಾಡದಿದ್ದಲ್ಲಿ  ಅದು ಮಣ್ಣಿನಲ್ಲೇ ಉಳಿದು ಮುಂದೆ ಮತ್ತೆ ಹಾನಿ ಮಾಡುತ್ತವೆ. ಒಂದು ಎರಡು ಮರಗಳು ಇದ್ದಲ್ಲಿ ನೀರಿನಲ್ಲಿ ಕರಗುವ ಗಂಧಕವನ್ನು (3 ಗ್ರಾಂ 1 ಲೀ ನೀರಿಗೆ) ಸಿಂಪರಣೆ ಮಾಡಿದರೆ ಸಾಕಾಗುತ್ತದೆ.

  • ಮಾವು ಹೂವು ಬಿಡುವ ಸಮಯದಲ್ಲಿ ಹೆಚ್ಚು ಹಿಮ ಬೀಳುತ್ತಿದ್ದರೆ ಹೂವು ಉದುರುತ್ತದೆ.
  • ಹೆಚ್ಚು ಮೋಡ ಕವಿದ ವಾತಾವರಣ ಇದ್ದರೆ ಕೀಟಗಳು ಹೆಚ್ಚು ಕ್ರಿಯಾತ್ಮಕವಾಗಿರುತ್ತವೆ.
  • ಮೋಡಕ್ಕೆ ಹೂವು ಕರಟುವುದಲ್ಲ. ಇದು ಕೀಟದ ಹಾವಳಿಯಿಂದ ಆಗುವ ತೊಂದರೆ.
  • ಈ ಸಮಯದಲ್ಲಿ ಬುಡ ಭಾಗದಲ್ಲಿ ತರಗೆಲೆ ರಾಶಿ ಹಾಕಿ ಅದಕ್ಕೆ ಬೆಂಕಿ ಹಾಕಿ ಹೊಗೆ ಬರುವಂತೆ ಮಾಡಿದರೆ ಹೂ ಉದುರುವಿಕೆ ಕಡಿಮೆಯಾಗುತ್ತದೆ.

ಮಾವು ಮಿಶ್ರ ಪರಾಗಸ್ಪರ್ಷಕ್ಕೊಳಗಾಗಿ  ಕಾಯಿ ಕಟ್ಟುವುದರಿಂದ ಹೂ ಬಿಡುವ ಸಮಯದಲ್ಲಿ  ಮಾವಿನ ಮರವಿರುವಲ್ಲಿ ಜೇನು ಗೂಡು ಇಟ್ಟರೆ ಫಸಲಿಗೆ ಅನುಕೂಲವಾಗುತ್ತದೆ. ಆದಾಗ್ಯೂ  ಮಾವಿನಲ್ಲಿ ಶೇ.5-10 ರಷ್ಟು ಮಾತ್ರ ಕಾಯಿ ಕಚ್ಚುವುದು ಕ್ರಮ.

ಮಾವಿನ ಹೂವು ತಿನ್ನುವ  ಕೀಟ
ಮಾವಿನ ಹೂವು ತಿನ್ನುವ ಕೀಟ

 ಹೂವು ತಿನ್ನುವ  ಕೀಟ

ನಿರ್ವಹಣೆ:

  • ಮಳೆಗಾಲ ಕಳೆದ ತಕ್ಷಣ ಬೆಳೆದ ಮರದ ಬುಡ ಭಾಗ ತೇವಾಂಶ ಇರುವಾಗ ಶಿಫಾರಿತ 700 ಗ್ರಾಂ ಸಾರಜನಕ, 200 ಗ್ರಾಂ ರಂಜಕ, 1 ಕಿ. ಗ್ರಾಂ ಪೊಟ್ಯಾಶ್ ಗೊಬ್ಬರವನ್ನು ಕೊಡಬೇಕು. ಇದರಿಂದ ಮರಕ್ಕೆ ಶಕ್ತಿ ಬರುತ್ತದೆ.
  • ಹೂವು ಬಿಟ್ಟ ಕಾಯಿ ಕಚ್ಚುವ ಸಮಯದಲ್ಲಿ ಸಾಕಷ್ಟು ಹೂ ತುಂಡುಗಳು ಬುಡದಲ್ಲಿ ಉದುರಿರುತ್ತವೆ. ಇದನ್ನು ತೆಗೆದು ಸ್ವಚ್ಚ ಮಾಡಬೇಕು.
  • ಮರಗಳಿಗೆ ಕೀಟ ನಾಶಕ ಸಿಂಪಡಿಸುವಾಗ ಬುಡಕ್ಕೂ ಸಿಂಪರಣೆ ಮಾಡಬೇಕು.

ಇರುವೆ ಮತ್ತು ಕೀಟ

ಹುಳ
ಮೆದು ಮೈಯ ಹುಳ

ಬರೇ ಕೀಟ ಮಾತ್ರವಲ್ಲ:

  • ಹೂ ಬಿಡುವ ಸಮಯದಲ್ಲಿ ಹೂ ಗೊಂಚಲಿಗೆ ಒಂದು ಶಿಲೀಂದ್ರದ ಬಾಧೆ ಇದೆ.
  • ಈ ಶಿಲೀಂದ್ರವು ಹೂ ಮೊಗ್ಗನ್ನು ಹಾಳು ಮಾಡುತ್ತದೆ. ಇದರಿಂದಾಗಿ ಹೂ ಗೊಂಚಲು ಒಣಗುತ್ತದೆ.
  • ಉದುರುತ್ತದೆ. ಹೀಗೆ ಉದುರಿದಾಗ ಬುಡ ಭಾಗದಲ್ಲಿ ಕಪ್ಪು ಕಲೆಗಳು ಕಾಣಿಸುತ್ತವೆ.
  • ಇದನ್ನು ಪೌಡ್ರೀ ಮಿಲ್ಡಿವ್  powdery mildew ಎನ್ನುತ್ತಾರೆ.
  • ಇದು ಮಾವಿನಲ್ಲಿ ಮಾಮೂಲು ಶಿಲೀಂದ್ರ. ಗಾಳಿಯ ಮೂಲಕ ಪ್ರಸಾರವಾಗುತ್ತದೆ.
  • ಇದರ ನಿಯಂತ್ರಣಕ್ಕೆ ಹೆಕ್ಸಾಕೊನೆಜ಼ಾಲ್ HEXACONEZOLE ಅಂತರ್ವ್ಯಾಪೀ ಶಿಲೀಂದ್ರ ನಾಶಕ 2 ಮಿಲಿ 1 ಲೀ. ನೀರಿಗೆ  ಬೆರೆಸಿ ಸಿಂಪಡಿಸಬೇಕು.
  • ಕಡಿಮೆ ಮರಗಳು ಇರುವ ವಾಣಿಜ್ಯಿಕವಲ್ಲದ ಮಾವಿನ ಬೆಳೆಗೆ ವೆಟ್ಟೆಬಲ್ ಸಲ್ಫರ್ ಸಾಕಾಗುತ್ತದೆ.
  • ಇದು ವಿಷ ರಹಿತ ಕೀಟ ಹಾಗೂ ಶಿಲೀಂದ್ರ ನಾಶಕವಾಗಿರುತ್ತದೆ.
ಟಿ- ಸೊಳ್ಳೇ ಹಾನಿ
ಟಿ- ಸೊಳ್ಳೇ ಹಾನಿ

ಸಾವಯವ ಕೀಟ ನಿಯಂತ್ರಣ:

  • ಮಾವಿನ ಮರ ಹೂ ಬಿಡುವ ಸಮಯದಲ್ಲಿ ದೊಡ್ದ ದೊಡ್ಡ ಮಾವು ಬೆಳೆಗಾರರು ಸಮಗ್ರ ಕೀಟ ರೋಗ ನಿಯಂತ್ರಣ ವಿಧಾನದಂತೆ
    ದುಬಾರಿ ಕೀಟ ನಾಶಕಗಳನ್ನು, ರೋಗ ನಾಶಕಗಳನ್ನು ಬಳಕೆ ಮಾಡುತ್ತಾರೆ.
  • ಇದು ಸಣ್ಣ ಬೆಳೆಗಾರರಿಗೆ ಅಸಾಧ್ಯವಾದ ವಿಧಾನ. ಕೆಲವು ಮನೆ ಬಳಕೆಗೆ ಮಾವು ಬೆಳೆಯುವವರಿದ್ದಾರೆ.
  • ಅವರು ಯಾವ ಕೀಟ ನಾಶಕವನ್ನೂ ಬಳಕೆ ಮಾಡುವುದು ಕಷ್ಟ.
  • ಅಂತಲ್ಲಿ ಬಳಕೆ ಮಾಡಬಹುದಾದ ಕೀಟ ನಾಶಕ ಬೇವಿನ ಸೋಪು ಮತ್ತು ಹೊಂಗೆ ಸೋಪು ಎಂಬ ಸಸ್ಯ ಜನ್ಯ ಕೀಟನಾಶಕ.
  • ಇದನ್ನು ಭಾರತೀಯ ತೋಟಗಾರಿಕಾ ಸಂಸ್ಥೆ  ಹೇಸರಘಟ್ಟ ಬೆಂಗಳೂರು ಇವರು ತಯಾರಿಸಿಕೊಡುತ್ತಾರೆ.
  • ಇದನ್ನು ಈ ಸಂಸ್ಥೆಯ ಮಾವಿನ ತೋಟದಲ್ಲಿ ಪ್ರಯೋಗ ಮಾಡಿ ನೋಡಲಾಗಿದ್ದು, ಉತ್ತಮ ಫಲಿತಾಂಶ ಇದೆ.

ಅಗತ್ಯವಾಗಿ ಮಾಡಿ:

ಬುಡ ಸ್ವಚ್ಚ ಮಾಡುವ ಕ್ರಮ
ಬುಡ ಸ್ವಚ್ಚ ಮಾಡುವ ಕ್ರಮ
  • ಮಾವಿನ ಮರ ಒಂದು ಇರಲಿ, ಹಲವು ಇರಲಿ.
  • ಆದರೆ ಮಳೆಗಾಲ ಕಳೆದ ತಕ್ಷಣ ಬುಡ ಭಾಗದಲ್ಲಿ ಬಿದ್ದ ಎಲ್ಲಾ ಎಲೆಗಳನ್ನು ತೆಗೆದು, ಬುಡದಲ್ಲಿ ಕಳೆ ಇಲ್ಲದಂತೆ ಸ್ವಲ್ಪ ಮಣ್ಣನ್ನು ಕೆರೆದು ಸ್ವಚ್ಚಮಾಡಬೇಕು.
  • ಇದರಿಂದ ಮಣ್ಣು ಜನ್ಯ ಕೀಟ, ರೋಗಕಾರಕಗಳ ಉಪಟಳ ಕಡಿಮೆಯಾಗಿ ಮುಂದೆ ಫಸಲಿನ ಸಮಯಕ್ಕೂ ತುಂಬಾ ಅನುಕೂಲವಾಗುತ್ತದೆ.
  • ಇದನ್ನು ಎಲ್ಲರೂ ತಪ್ಪದೆ ಮಾಡಬೇಕು.

ಮಾವು ಹೂ ಮೊಗ್ಗು ಮೂಡುವ ಸಮಯದಲ್ಲಿ ಬುಡ ಭಾಗದಲ್ಲಿ ನಿತ್ಯ ಬೆಳಗಿನ ಹೊತ್ತು ಸುಮಾರು ½ ಗಂಟೆ ಕಾಲ ಅಲ್ಲಿ ಬಿದ್ದಿರುವ ತರಗೆಲೆಯನ್ನು  ಒಟ್ಟು ಹಾಕಿ ಮರ ದ ಗೆಲ್ಲುಗಳ ಮೇಲೆ ಹಬ್ಬುವಷ್ಟು ಹೊಗೆ ಹಾಕುವುದರಿಂದ ಕೀಟ ಸಮಸ್ಯೆ ತುಂಬಾ ಕಡಿಮೆಯಾಗುತ್ತದೆ.

ಮರಕ್ಕೆ ಪೂರ್ತಿ ಬಿಸಿಲು ಬೀಳಬೇಕು. ನೆಲದ ಉಳುಮೆ ಮಾಡಿದ್ದರೆ ಒಳ್ಳೆಯದು. ಇಷ್ಟು ಮಾಡಿದರೆ  ಕೀಟ ನಾಶಕ ಬಳಸದೆ ನಿರ್ವಹಣೆ ಮಾಡಬಹುದು.

 

2 thoughts on “ಮಾವಿನ ಹೂವು ಉದುರದಂತೆ ರಕ್ಷಿಸುವ ವಿಧಾನ.

Leave a Reply

Your email address will not be published. Required fields are marked *

error: Content is protected !!