ಬೆಳೆಗಳ ಪೋಷಣೆಗೆ ಪ್ರಮುಖ ಆಹಾರವಾಗಿ ಸಾರಜನಕ , ರಂಜಕ ಮತ್ತು ಪೊಟ್ಯಾಷ್ ಎಂಬ ಮೂರು ಪೋಷಕಗಳು ಬೇಕು. ಇದನ್ನು ರಾಸಾಯನಿಕ ಮೂಲದಲ್ಲೂ, ನೈಸರ್ಗಿಕ ಮೂಲದಲ್ಲೂ ಪಡೆಯಬಹುದು. ಸಾರಜನಕ ಯಾವುದೇ ಮೂಲದ್ದು ಇರಲಿ, ಅದನ್ನು ಸಸ್ಯಕ್ಕೆ ಬೇಕಾದಷ್ಟು ಬಳಕೆ ಮಾಡಿದರೆ ಅದು ಟಾನಿಕ್. ಇಲ್ಲವಾದರೆ ಇದು ಹಾನಿಕರ.
- ಸಸ್ಯ ಬೆಳವಣಿಗೆಗೆ ಸುಮಾರು 64 ಪೋಷಕಾಂಶಗಳು ಬೇಕಾಗುತ್ತವೆ.
- ಅದರಲ್ಲಿ ಬಹುಸಂಖ್ಯೆಯ ಪೋಷಕಗಳು ಮಣ್ಣಿನಲ್ಲಿ, ಗಾಳಿಯಲ್ಲಿ, ನೀರಿನಲ್ಲಿ ಇರುತ್ತವೆ.
- ಆಯ್ದ ಸುಮಾರು 16 ಪೋಷಕಾಂಶಗಳು ಅಗತ್ಯವಾಗಿ ಬೇಕಾಗುತ್ತವೆ.
- ಅದರಲ್ಲಿ ಅಗ್ರ ಫಂಕ್ತಿಯದ್ದು ಸಾರಜನಕ.
- ನಮಗೆಲ್ಲಾ ಗೊತ್ತಿರುವ NPK ಯಲ್ಲಿ ಮೊದಲಿನ N ( Nitrogen) ಇದೇ ಸಾರಜನಕ.
ಸಾರಜನಕ ಯಾಕೆ ಬೇಕು?
- ಸಾರಜನಕ ಎಂಬ ಸಸ್ಯ ಅಹಾರವು ಸಸ್ಯಗಳ ಗಾತ್ರ ಹೆಚ್ಚಿಸುವಂತವುಗಳು.
- ಸಾರಜನಕ ಬೇಕಾದಷ್ಟು ದೊರೆತಾಗ ಸಸ್ಯಗಳು ದಷ್ಟ ಪುಷ್ಟವಾಗಿ ಬೆಳೆಯುತ್ತವೆ.
- ಎಲೆಗಳು ಹೆಚ್ಚುತ್ತವೆ. ಕಾಳುಗಳು – ಕಾಯಿಗಳು ದೊಡ್ಡದಾಗುತ್ತವೆ.
- ಎಲೆಗಳು ಸಸ್ಯದ ಉಸಿರಾಟ ದ ಅಂಗ.
- ಈ ಎಲೆಗಳು ಸಮರ್ಪಕವಾಗಿ ಉಸಿರಾಟ ನಡೆಸಬೇಕಾದರೆ ಅದಕ್ಕೆ ಆಹಾರವಾಗಿ ಬೆಂಬಲವಾಗಿ ಸಾರಜನಕ ಅಂಶ ಬೇಕಾಗುತ್ತದೆ.
- ಸಸ್ಯಗಳ ಕೋಶಿಕಾ ಕೇಂದ್ರ, ನ್ಯೂಕ್ಲಿಯೋಪ್ರೊಟೀನು ಮತ್ತು ಅನೇಕ ಬಗೆಯ ಕಿಣ್ವಗಳು ಮತ್ತು ಪ್ರಚೋದಕಗಳು ಹಾಗೂ ವಿಟಮಿನ್ ಗಳು ಕಾರ್ಯ ನಿರ್ವಹಿಸಬೇಕಾದರೆ ಸಾರಜನಕ ಅಂಶ ಬೇಕೇ ಬೇಕು.
- ಸಾರಜನಕ ಎಂಬುದು ಸಸ್ಯ ಬೆಳೆವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಸಸ್ಯದ ಶರೀರದ ಬೆಳವಣಿಗೆಯನ್ನು ನಿರ್ಧರಿಸುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.
- ಇದನ್ನು ಸಸ್ಯ ಜೀವ ದ್ರವ್ಯ ಎಂದು ಕರೆಯುತ್ತಾರೆ.
- ಬೆಳೆಗಳಿಗೆ ಸಾರಜನಕ ಗೊಬ್ಬರ ದೊರೆತಾಗ ಅವು ಉಳಿದ ಪೋಷಕಗಳಾದ ರಂಜಕ, ಪೊಟ್ಯಾಶ್ , ಕ್ಯಾಲ್ಸಿಯಂ ಪೋಷಕಗಳನ್ನು ಸರಿಯಾಗಿ ಸೇವಿಸುತ್ತದೆ.
- ಒಟ್ಟಿನಲ್ಲಿ ದಷ್ಟ ಪುಷ್ಟವಾದ ಮನುಷ್ಯ ಹೇಗೆ ಇರುತ್ತಾನೆಯೋ ಅದೇ ತರಹ ಸಸ್ಯ ಇರಬೇಕಾದರೆ ಅದಕ್ಕೆ ಸಾರಜನಕ ಪೋಷಕ ಅಗತ್ಯ.
ಒಂದು ಸಸ್ಯ ಪುಷ್ಟವಾಗಿರಬೇಕಿದ್ದರೆ ಅದಕ್ಕೆ ಸಾರಜನಕ ಬೇಕು. ಅದು ಇದ್ದರೆ ಜೊತೆಗೆ ಬೇರೆ ಪೋಷಕಗಳ ಬಳಕೆಯೂ ಉತ್ತಮವಾಗುತ್ತದೆ.
- ಮಾರುಕಟ್ಟೆಯಲ್ಲಿ ದೊರೆಯುವ ಗೊಬ್ಬರದಲ್ಲಿ ನಮೂದಾಗಿರುವ NPK ಯ ಕೆಳಗೆ ನಮೂದಾಗಿರುವುದು ಅದರಲ್ಲಿ ಇರುವ ಸಾರಜನಕದ ಪ್ರಮಾಣ.
ಸಾರಜನಕ ಹೆಚ್ಚಾದರೆ ಏನಾಗುತ್ತದೆ:
![ಸಾರಜನಕದ ಕೊರತೆಯ ಒಂದು ಲಕ್ಷಣ](https://kannada.krushiabhivruddi.com/wp-content/uploads/2020/06/DSC07336-FILEminimizer-e1629392300989.jpg)
- ಒಂದು ಗೊಬ್ಬರದ ರಾಶಿಯ ಸಮೀಪದಲ್ಲಿ ಅಥವಾ ರಾಶಿಯಲ್ಲೇ ಒಂದು ಗಿಡ ಇದ್ದರೆ ಅದು ಬಹಳ ಚೆನ್ನಾಗಿ ಬೆಳೆಯುತ್ತದೆ.
- ಆದರೆ ಬೆಳೆದದ್ದಕ್ಕೆ ಸರಿಯಾಗಿ ಫಸಲು ಇರುವುದಿಲ್ಲ. ಭತ್ತದ ಗದ್ದೆಯಲ್ಲಿ ಎಲ್ಲೆಲ್ಲಿ ಗೊಬ್ಬರದ ರಾಶಿ ಹಾಕಲಾಗಿದೆಯೋ ಅಲ್ಲಿ ಪೈರು ಚೆನ್ನಾಗಿ ಬೆಳೆಯುತ್ತದೆ.
- ಆದರೆ ಫಸಲಿಲ್ಲ. ಕಾರಣ ಅಲ್ಲೆಲ್ಲಾ ಸಾರಜನಕ ಹೆಚ್ಚಾಗಿದೆ.
- ಸಾರಜನಕ ಎಂಬ ಪೋಷಕವು ಎಷ್ಟು ಪ್ರಮಾಣದಲ್ಲಿ ಸಸ್ಯಗಳು ಸ್ವೀಕರಿಸಲು ಸಾಮರ್ಥ್ಯ ಇದೆಯೋ ಅಷ್ಟು ಮಾತ್ರ ಕೊಡಬೇಕು.
- ಅತಿಯಾದರೆ ಅದು ವೈಪರೀತ್ಯದ ಬೆಳೆವಣಿಗೆಯನ್ನು ಉಂಟು ಮಾಡುತ್ತದೆ.
- ಹೆಚ್ಚು ಸಾರಜನಕ ಪೂರೈಕೆಯಾದಾಗ ಎಲೆ, ಕಾಂಡದ ಬೆಳವಣಿಗೆಯೇ ಮುಂದುವರಿದು, ಹೂವಾದರೂ ಕಾಯಿ ಕಚ್ಚಿಕೊಳ್ಳಲಾರದು.
ಕಾಯಿಗಳು ಉದುರುವುದು, ಬೆಳೆಗಳು ಬೇಗ ರೋಗ ರುಜಿನಗಳಿಗೆ ತುತ್ತಾಗುವುದು, ಎಲೆಗಳು ಶಕ್ತಿ ಕುಂದಿ ಮೃದುವಾಗುವುದು, ಬಿಸಿಲಿನ ಝಳವನ್ನು ಸಹಿಸಿಕೊಳ್ಳದೇ ಇರುವುದು, ಮರ/ ಸಸ್ಯಕ್ಕೆ ಶಕ್ತಿ ಇಲ್ಲದಾಗುವುದು ಸಾರಜನಕ ಹೆಚ್ಚಾದ ಲಕ್ಷಣ.
ಕೊರತೆಯ ಲಕ್ಷಣ:
- ಹೆಚ್ಚು ಆಮ್ಲೀಯವಾದ ಮಣ್ಣಿನಲ್ಲಿ ಸಾರಜನಕದ ಕೊರತೆ ಉಂಟಾಗಬಹುದು.
- ಅಂತಹ ಕಡೆ ಬೆಳೆದ ಸಸ್ಯಗಳು ಗಿಡ್ಡವಾಗುತ್ತವೆ. ಹರಿತ್ತು ಕಡಿಮೆಯಾಗುತ್ತದೆ.
- ಸಸ್ಯಗಳು ಹಳದಿಯಾಗಿ ಕಾಣುತ್ತವೆ. ಸಸ್ಯದ ಕೆಳಭಾಗದ ಎಲೆಗಳು ಮೊದಲಿಗೆ ಈ ಲಕ್ಷಣವನ್ನು ತೋರಿಸುತ್ತದೆ.
- ಕೆಳಭಾಗದ ಎಲೆಗಳು ಮೊದಲಿಗೆ ಹಳದಿಯಾದರೆ ಅಲ್ಲಿ ಸಾರಜನಕದ ಕೊರತೆ ಇದೆ ಎಂದು ತಿಳಿಯಬಹುದು.
- ಎಲೆಗಳ ದಂಟು ಹಸುರಾಗಿದ್ದು, ಅಲಗುಗಳು ಹಳದಿಯಾಗಿ ಅಥವಾ ತಿಳಿ ಹಸುರಾಗಿ ಇದ್ದರೆ ಅದು ಸಾರಜನಕ ಕೊರತೆಯ ಸೂಚಕ.
![ಸಾರಜನಕದ ಕೊರತೆಯ ಸಸಿ ಲಕ್ಷಣ](https://kannada.krushiabhivruddi.com/wp-content/uploads/2020/06/FB_IMG_1577211434044-FILEminimizer.jpg)
ಭತ್ತ, ಗೋಧಿ, ರಾಗಿ, ಕಬ್ಬು ಮುಂತಾದ ಬೆಳೆಗಳು ಗಿಡ್ಡವಾಗಿದ್ದು, ತಿಳಿ ಹಸುರು ಬಣ್ಣದ ಎಲೆಗಳನ್ನು ಹೊಂದಿದ್ದರೆ ಅಲ್ಲಿ ಸಾರಜನಕ ಕಡಿಮೆಯಾಗಿದೆ.
- ಗಿಡದ ಬೆಳವಣಿಗೆ ಕುಂಠಿತ ಮತ್ತು ಹೂ ಬರುವಿಕೆ ಮತ್ತು ಹೂ ಗೊಂಚಲಿನ ಉದ್ದ ಕಡಿಮೆಯಾದರೆ ಸಾರಜನಕ ಕೊರತೆಯಾಗಿದೆ.
- ಸಾರಜನಕ ಕೊರತೆಯಾದರೆ ಸಸ್ಯ ಬೆಳವಣಿಗೆ, ಎಲೆ ಬೆಳವಣಿಗೆ ಮತ್ತು ಹೂ ಗೊಂಚಲು ಗಿಡ್ಡವಾಗುತ್ತದೆ.
- ಸರಳವಾಗಿ ಹೇಳಬೇಕಾದರೆ ಎಲೆಗಳು ತುಂಬಾ ಹಚ್ಚ ಹಸುರುರಾಗಿ ಇದ್ದರೆ ಸಾರಜನಕ ಚೆನ್ನಾಗಿ ದೊರೆತಿದೆ ಎಂದರ್ಥ.
ಸಾರಜನಕ ಹೆಚ್ಚಾದ ಪರಿಣಾಮ:
![ಸಾರಜನಕದ ಹೆಚ್ಚಾದಾಗ ಗರಿಗಳು ತುಂಡಾಗಿ ಬೀಳುತ್ತದೆ](https://kannada.krushiabhivruddi.com/wp-content/uploads/2020/06/FB_IMG_1591451651632-FILEminimizer.jpg)
- ಭತ್ತದ ಗದ್ದೆಯಲ್ಲಿ ಗೊಬ್ಬರ ಹಾಕಿದ ಸ್ಥಳದಲ್ಲಿ ಪೈರು ಸ್ವಲ್ಪ ಎತ್ತರವಾಗಿ ಬೆಳೆಯುತ್ತದೆ.
- ಅದು ಎದ್ದು ಕಾಣುತ್ತದೆ. ಅಲ್ಲಿ ಫಸಲು ಇರುವುದಿಲ್ಲ. ಇದು ಸಾರಜನಕ ಹೆಚ್ಚಾದ ಪರಿಣಾಮ.
- ಕೆಲವು ಅಡಿಕೆ ಮರಗಳ ಗರಿಗಳು ಬುಡದಿಂದ ಮುರಿದು ಬೀಳುತ್ತವೆ. ಇದು ಸಾರಜನಕ ಹೆಚ್ಚಾದ ಪರಿಣಾಮ.
- ದೊಡ್ಡ ದೊಡ್ದ ಎಲೆಗಳು, ಅವುಗಳಿಗೆ ಶಕ್ತಿ ಕಡಿಮೆ ಇದ್ದು, ಜೋತು ಬೀಳುವುದು, ಮುರಿದು ಬೀಳುವುದು, ಕಾಂಡದ ಅತಿಯಾದ ದಪ್ಪ, ಇವೆಲ್ಲಾ ಸಾರಜನಕ ಹೆಚ್ಚಾದ ಲಕ್ಷಣಗಳು.
- ತೆಂಗಿನ ಮರದ ಶಿರಭಾಗ ಲಕ್ಷಣವಾಗಿರುತ್ತದೆ. ಗರಿಗಳು ಉದ್ದ ಇರುತ್ತವೆ.
- ಹಚ್ಚ ಹಸುರಾಗಿರುತ್ತವೆ. ಹೂ ಗೊಂಚಲಿನಲ್ಲಿ ಮಿಡಿಗಳು ಇದ್ದರೂ ಹೆಚ್ಚಿನವು ಬಿದ್ದು ಹೋಗಿ ಉಳಿಯುವುದು ನಾಲ್ಕಾರು ಮಾತ್ರ ಇದು ಸಾರಜನಕ ಹೆಚ್ಚಾದ ಪರಿಣಾಮ.
- ತರಕಾರಿ ಬೆಳೆಗಳಲ್ಲಿ ಫಸಲು ಚೆನ್ನಾಗಿರುತ್ತದೆ. ಆದರೆ ರುಚಿ ಇಲ್ಲದಿರುವುದು ಸಾರಜನಕ ಹೆಚ್ಚಾದ ಪರಿಣಾಮ.
- ತರಕಾರಿ ಅಥವಾ ಇನ್ಯಾವುದೇ ಫಸಲು ಬೇಗ ಕೆಡುವುದು ಸಾರಜನಕ ಹೆಚ್ಚಾದ ಪರಿಣಾಮ.
ಸಸ್ಯಗಳು ಹಚ್ಚ ಹಸುರಾಗಿ ಇರಬೇಕು. ಆಗ ಸಾರಜನಕ ಲಭ್ಯವಾಗಿದೆ ಎಂದರ್ಥ. ವೈಪರೀತ್ಯದ ಬೆಳವಣಿಗೆ, ಅತಿಯಾದ ದಪ್ಪ, ಎಲೆ , ದಂಟು ಫಲಗಳಲ್ಲಿ ಅಸಹಜತೆ ಕಂಡು ಬಂದರೆ ಸಾರಜಕ ಹೆಚ್ಚಾಗಿದೆ. ಹೆಚ್ಚಾದಾಗ ಉಳಿದ ಪೊಷಕಗಳನ್ನು ಕೊಟ್ಟು ಸಮತೋಲನ ಮಾಡಬೇಕು. ಮತ್ತೆ ಮತ್ತೆ ಕೊಡಬಾರದು.
![ಭತ್ತಕ್ಕೆ ಸಾರಜನಕ ಹೆಚ್ಚಾದ ಲಕ್ಷಣ](https://kannada.krushiabhivruddi.com/wp-content/uploads/2020/06/DSCN3899-FILEminimizer.jpg)
ಸರಿಯಾದ ಪ್ರಮಾಣದಲ್ಲಿ ಸಾರಜನಕವನ್ನು ಬಳಕೆ ಮಾಡಬೇಕು. ಸಾರಜನಕ ಎಂಬುದು ಅವಿಯಾಗುವ ಗುಣ ಪಡೆದ ಪೋಷಕಾಂಶ. ಅದು ರಾಸಾಯನಿಕ ಮೂಲದ್ದು ಇರಲಿ, ಸಾವಯವ ಮೂಲದ್ದು ಇರಲಿ, ವಾತಾವರಣದಲ್ಲಿ ಅದು ಅಮೋನಿಯಾ ರೂಪದಲ್ಲಿ ( ವಾಸನೆ) ಗಾಳಿಗೆ ಸೇರಿ ನಷ್ಟವಾಗುತ್ತದೆ.
ಒಂದು ಬೆಳೆಗೆ ಇಷ್ಟೇ ಪ್ರಮಾಣದಲ್ಲಿ ಸಾರಜನಕ ಕೊಡಬೇಕು ಎಂಬುದಾಗಿ ಶಿಫಾರಸು ಇರುತ್ತದೆ. ಇದರಿಂದ ಹೆಚ್ಚು ಕೊಡಬಾರದು. ಉಳಿದ ಪೋಷಕಗಳನ್ನು ಕೊಟ್ಟಾಗ ಮಾತ್ರ ಸಾರಜನಕದ ಫಲಿತಾಂಶ ಫಲಪ್ರದವಾಗಿರುತ್ತದೆ.