ಸಸ್ಯಗಳು ಎಷ್ಟೇ ಆರೈಕೆ ಮಾಡಿದರೂ ಏಳಿಗೆ ಆಗದಿರಲು ಕಾರಣ.

by | Feb 17, 2020 | Pest Control (ಕೀಟ ನಿಯಂತ್ರಣ) | 0 comments

ಮನುಷ್ಯರಿಗೆ ಹೊಟ್ಟೆ ಹುಳ ಬಾಧಿಸಿದರೆ ಏನಾಗುತ್ತದೆಯೋ ಅದೇ ರೀತಿ ಇದು ಬೇರುಗಳಿಗೆ ಬಾಧಿಸಿ, ಸಸ್ಯ ಬೆಳವಣಿಗೆಯನ್ನು  ಹಿಂಡುತ್ತವೆ. ಬೆಳೆ ಬೆಳೆಸುವ ಸಂಧರ್ಭದಲ್ಲಿ ಒಮ್ಮೊಮ್ಮೆ ಒಂದೊಂದು ಹೊಸ ಸಮಸ್ಯೆಗಳು ಉಧ್ಭವವಾಗುತ್ತದೆ. ಅದರಲ್ಲಿ ಒಂದು ನಮಟೋಡು. ಕೆಲವೇ ಬೆಳೆಗಳಿಗೆ ತೊಂದರೆ ಮಾಡುತ್ತಿದ್ದ ಇದು, ಈಗ ಎಲ್ಲಾ ಬೆಳೆಗಳನ್ನು ಮುಟ್ಟಿದೆ.

Healthy root system

  • ಇದು ಸಸ್ಯದ ಬೇರುಗಳಲ್ಲಿ ಸೇರಿಕೊಂಡು ಭಾರೀ ತೊಂದರೆ ಮಾಡುತ್ತದೆ.
  • ಮೈನರ್ ಪೆಸ್ಟ್ ಇದ್ದುದು ಮೇಜರ್ ಪೆಸ್ಟ್ ಎಂಬ ಸ್ಥಾನ ಪಡೆಯಲಾರಂಭಿಸಿದೆ.

ಬಾಳೆ, ದಾಳಿಂದೆ, ದ್ರಾಕ್ಷಿ, ಪೇರಳೆ, ಹಿಪ್ಪು ನೇರಳೆ, ಬದನೆ, ಬೆಂಡೆ, ಸೌತೆ ಜಾತಿಯ ಸಸ್ಯಗಳು, ಅಡಿಕೆ ಅನನಾಸು, ಪಪಾಯ, ಕರಿಮೆಣಸು ಇವೆಲ್ಲಾ ಅತಿಯಾಗಿ ನಮಟೋಡು ತೊಂದರೆಗೆ ಒಳಗಾಗುವ ಬೆಳೆಗಳು.

Root knot nematode

ಬೇರು ಗಂಟು ನಮತೊಡು

ನಮಟೋಡುಗಳು ಎಂದರೇನು:

  • ಜಂತು ಹುಳ ಎಂಬುದನ್ನು ನಮಟೋಡು ಎಂದು ಕರೆಯುತ್ತಾರೆ.
  • ಅಲ್ಲದೆ ದುಂಡು ಹುಳು ಎಂಬುದಾಗಿಯೂ ಕರೆಯುವುದುಂಟು.
  • ಸಣ್ಣದಾಗಿ ಮೈಕ್ರೋಸ್ಕೋಪ್ ಮೂಲಕ ಮಾತ್ರ  ಕಾಣಬಹುದಾದ ನೆಲದ ಅಡಿಯಲ್ಲಿ ವಾಸಿಸುವ ಕೀಟ ಇದು.
  • ಯಾವುದಾದರೂ ಒಂದು ಸಸ್ಯದ  ಬೇರಿನಲ್ಲಿ  ಇದು ಆಶ್ರಯ ಪಡೆದಿರುತ್ತದೆ.
  • ಆಶ್ರಯ ಎನ್ನುವುದಕ್ಕಿಂತಲೂ ಆಕ್ರಮಣ ಎನ್ನಬಹುದು.
  • ಕೆಲವು ಅನುಕೂಲ ಸ್ಥಿತಿಯಲ್ಲಿ ಅವುಗಳ ಕಾರುಬಾರು ಹೆಚ್ಚುತ್ತದೆ.
  • ನಮಟೋಡು ಬಾಧಿತ ಸಸ್ಯದ ಬೇರುಗಳ ಮಧ್ಯಭಾಗ ( pith) ದಲ್ಲಿ  ಆಹಾರ ಮತ್ತು ನೀರನ್ನು ಸರಬರಾಜು ಮಾಡುವ ಅಂಗಾಂಶಗಳನ್ನು ಹಾನಿ ಮಾಡುತ್ತದೆ.

ಇದು ಧೀರ್ಘ ಕಾಲದ ತನಕ ಗೊತ್ತೇ ಆಗುವುದಿಲ್ಲ. ಮೊದಲು ಕೆಲವೇ ಕೆಲವು ಬೇರುಗಳನ್ನು ಆಕ್ರಮಣ ಮಾಡುತ್ತಾ ಸಂಖ್ಯೆ ಹೆಚ್ಚಾದಂತೆ  ಹೆಚ್ಚಿನ ಬೇರುಗಳನ್ನು ಆಕ್ರಮಿಸುತ್ತದೆ. ಆಗ ಬೇರುಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿ ಸಸ್ಯ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಾ ಬದುಕಿರುತ್ತದೆ.

ವಿಧಗಳು:

nematode damage

  • ಬೆಳೆಗಳಲ್ಲಿ ಆರ್ಥಿಕ ನಷ್ಟ ಉಂಟು ಮಾಡುವ ಹಲವಾರು ನಮಟೋಡುಗಳಿದ್ದು, ಅದರಲ್ಲಿ ಈ ಕೆಳಗಿನವು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ.
  •  ಬೇರಿನಲ್ಲಿ ಗಂಟು ಗಂಟುಗಳಾಗುದು,(Root knot nematode  ಮತ್ತು  ಬೇರಿನಲ್ಲಿ ಗಾಯ ಉಂಟು ಮಾಡುವಂತದ್ದು root lesions nematode ) ಮತ್ತು  ಬೇರಿನ ಹೊರ ಕವಚವನ್ನು ಕೊರೆಯುವಂತದ್ದು. ( Burrowing nematode)
  • ಇವು ಬರೇ ಸಸ್ಯ ಮಾತ್ರವಲ್ಲ ಮನುಷ್ಯ, ಪ್ರಾಣಿಗಳಿಗೂ ನಮಟೋಡುಗಳು ಅಥವಾ ಜಂತು ಹುಳಗಳು ಬಾಧಿಸುತ್ತವೆ.
  • ICAR ನವರ ಅಧ್ಯಯನಗಳ ಪ್ರಕಾರ ನಮಟೋಡುಗಳ ತೊಂದರೆ ಇತ್ತೀಚಿಗಿನ ದಿನಗಳಲ್ಲಿ ಹೆಚ್ಚಳವಾಗಿದ್ದು, ಬಹುತೇಕ ಬೆಳೆಗಳಲ್ಲಿ ಗಣನೀಯ ಬೆಳೆ ನಷ್ಟ ಉಂಟಾಗುತ್ತಿದೆ.

ಹೇಗೆ ಮೇಜರ್ ಆದವು:

  •  ನಮಟೋಡು ಭೂಮಿಯ ಮೇಲೆ ಇದ್ದಂತಹ ಜೀವಿಗಳು. ಅವು ಹೊಸದೇನೂ ಅಲ್ಲ.
  • ಅವು ಬೇರೆ ಬೇರೆ ಸಸ್ಯ ವರ್ಗಗಳಲ್ಲಿ ಹಂಚಿಕೆಯಾಗಿ ಆಶ್ರಯ ಪಡೆದು ಬದುಕುತ್ತಿದ್ದವು.
  • ಇದನ್ನೇ ಭಕ್ಷಿಸುವ  ಕೆಲವು ಪರಾವಲಂಭಿ ಜೀವಿಗಳೂ ಇದ್ದವು.
  • ನಮ್ಮ ಪ್ರಕೃತಿಯಲ್ಲಿ ಸಸ್ಯ ವೈವಿಧ್ಯಗಳ ನಾಶವಾದ  ಕಾರಣದಿಂದ  ನಮಟೋಡುಗಳಿಗೆ ಆಶ್ರಯ ಸಸ್ಯಗಳು ಕಡಿಮೆಯಾದವು.
  • ಅವು ಬೇರೆ ಸಸ್ಯಗಳನ್ನು ಆರಸುವಂತಾಯಿತು.

Nematode attchched root

  • ಅವುಗಳನ್ನೇ ಭಕ್ಷಿಸುವ ಶಿಲೀಂದ್ರ ಜೀವಿಗಳಿಗೂ ಅದೇ ಸಮಸ್ಯೆ ಉಂಟಾಗಿ ಅದರ ಸಂಖ್ಯೆಗಳೂ ಕಡಿಮೆಯಾದವು.
  • ಕಾಡು- ಗುಡ್ಡ ಮುಂತಾದ ಬೇರೆ ಬೇರೆ ಸಸ್ಯವರ್ಗಗಳ ಬೇರಿನಲ್ಲಿ ಆಶ್ರಯ ಪಡೆದಿದ್ದ ಇವು  ಅವುಗಳ ಕೊರತೆ ಅಥವಾ ಆಸ್ಥಳದಲ್ಲಿ ಬೆಳೆಗಳು ಬಂದ ಫಲವಾಗಿ ಅವು  ನಾವು ಬೆಳೆಸುವ ಬೆಳೆಗೆ ವರ್ಗಾವಣೆಗೊಂಡವು.
  • ಈಗ ಅದು ಇದು ಎಂದಿಲ್ಲ ಎಲ್ಲಾ ಬೆಳೆಗಳಿಗೆ ಹೆಚ್ಚು- ಕಡಿಮೆ ಪ್ರಮಾಣದಲ್ಲಿ ತೊಂದರೆ ಮಾಡುತ್ತಿದೆ.

ನಮಟೋಡು ಬಾಧೆಯ ಚಿನ್ಹೆ:

nematode infection

  • ನಮಟೋಡು ಬಾಧಿಸಿದಾಗ ಮೊದಲ ಹಂತದಲ್ಲಿ  ಕೊಡುವ ಪೊಷಕಗಳಿಗೆ  ಸಸ್ಯಗಳು ಸ್ಪಂದಿಸುವುದಿಲ್ಲ.
  •  ನೀರು ಗೊಬ್ಬರ ಸಾಗಾಣಿಕೆ ಆಗುವುದಿಲ್ಲ.
  • ಎಲೆಗಳು ಹಳದಿಯಾಗುವಿಕೆ, ಕಾಂಡ ಸಣಕಲಾಗುವಿಕೆ  ಕಂಡು ಬರುತ್ತದೆ.
  • ಸಸ್ಯ ಬೆಳೆವಣಿಗೆ ಕುಂಠಿತವಾಗುತ್ತದೆ. ಸಸ್ಯವನ್ನು ಕಿತ್ತು ತೆಗೆದರೆ ಬೇರುಗಳ ಸಂಖ್ಯೆ ಬಹಳ ಕಡಿಮೆ ಇರುತ್ತದೆ.
  • ಬೇರುಗಳು ಸಂಪೂರ್ಣ ಇಲ್ಲದಾದಾಗ ಸಸ್ಯಗಳು ಸಾಯುತ್ತವೆ.

     ಇವು ಸಸ್ಯದಿಂದ ಸಸ್ಯಕ್ಕೆ  ಪ್ರಸಾರವಾಗುತ್ತದೆ. ನೆಲದಲ್ಲಿ ಎಷ್ಟು ಸಮಯದ ತನಕವೂ ಜೀವಂತ ಇರುತ್ತದೆ. ಉದಾಹರಣೆಗೆ ನಮಟೋಡು ಬಾಧಿತ ಹೊಲದಲ್ಲಿ ಹೊಸ ಮಣ್ಣು ಹಾಕಿ ಸಸಿ ನೆಟ್ಟರೆ ಒಂದೆರಡು ವರ್ಷ ಉತ್ತಮವಾಗಿ ಬೆಳೆದು ಅಡಿ ಬಾಗದ ನಮಟೋಡುಗಳು ಮತ್ತೆ ಬೇರು ಹುಡುಕುತ್ತಾ ಬಂದು ಅದಕ್ಕೆ ತೊಂದರೆ ಮಾಡುತ್ತವೆ.

Healthy root

ನಿಯಂತ್ರಣ:

  • ಇದನ್ನು ಇತರ ಕೀಟಗಳನ್ನು ನಾಶ ಮಾಡಿದಂತೆ  ನಾಶ ಮಾಡಲು ಕಷ್ಟ.
  • ಇದನ್ನು ಭಕ್ಷಿಸುವ ಪೆಸಿಲೋಮೈಸಿಸ್ ಶಿಲೀಂದ್ರ ಜೀವಿ ಇದ್ದು ಅದು ನಮಟೋಡುಗಳಿಗೆ ರೋಗ  ಉಂಟು ಮಾಡಿ ಸಾಯಿಸುತ್ತದೆ.
  • ಎಂಡೋ ಮೈಕೋರೈಜ಼ಾ  ಎಂಬ ಜೀವಿಯೂ ಸಹ ನಮಟೋಡುಗಳನ್ನು ಬೇರಿನ ಸನಿಹ ಸುಳಿಯದಂತೆ ರಕ್ಷಿಸುತ್ತವೆ.
  • ಕೆಲವು ಬಗೆಯ ಎಣ್ಣೆ ಹಿಂಡಿಗಳು ನಮಟೋಡು  ನಿಯಂತ್ರಣದಲ್ಲಿ  ಫಲಕಾರಿ.
  • ಅವುಗಳೆಂದರೆ ಹರಳು ಹಿಂಡಿ(castor ) ಹೊಂಗೆ (karanj)  ಮತ್ತು ಬೇವಿನ ಹಿಂಡಿಗಳು.
  • ಇವುಗಳನ್ನು ಮಿಶ್ರಣ ಮಾಡಿ ಹಾಕಿದಾಗ ಅವು ನಮಟೋಡುಗಳಿಗೆ ವಿಷಕಾರಿಯಾಗಿ ಪರಿಣಮಿಸುತ್ತವೆ.
  • ರಾಸಾಯನಿಕ ಹತೋಟಿ: ಸಾಮಾನ್ಯವಾಗಿ ಜನ ಇದನ್ನು ಫೋರೇಟ್ ಮತ್ತು ಪ್ಯುರಡಾನ್ ಮೂಲಕ ಹತೋಟಿ ಮಾಡಬಹುದು ಎನ್ನುತ್ತಾರೆ.
  • ಆದರೆ ಅದು ಅಷ್ಟು ಫಲಕಾರಿಯಲ್ಲ.
  • ಕೆಲವು ದಿನಗಳ ತನಕ  ದೂರಮಾಡುತ್ತದೆ. ನಂತರ ಬರುತ್ತದೆ.
  • ಕೊನೆಗೆ ಅದಕ್ಕೆ ನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತವೆ.

ಇತ್ತೀಚೆಗೆ ಬೇಯರ್ ಕಂಪೆನಿಯವರು ವೇಲಮ್ (VELUM Prime) ಎಂಬ ಉತ್ಪನ್ನವನ್ನು  ಬಿಡುಗಡೆ ಮಾಡಿದ್ದು. ಇದು ಧೀರ್ಘ ಕಾಲದ ತನಕ ಫಲಕಾರಿಯಂತೆ. ಇದಕ್ಕೆ ಲೀಟರಿಗೆ 8,000 ದಷ್ಟು ಬೆಲೆ ಇದೆ.

ರೈತರಿಗೆ ಮಿತವ್ಯಯದ ನಮಟೋಡು ನಿಯಂತ್ರಣ ವಿಧಾನ ಜೈವಿಕ ನಿಯಂತ್ರಣ ಮತ್ತು ಸಸ್ಯ ಜನ್ಯ ಹಿಂಡಿಗಳ ಮೂಲಕ ನಿಯಂತ್ರಣ. ಇದರಲ್ಲಿ ಆಗದ ಪಕ್ಷದಲ್ಲಿ ರಾಸಾಯನಿಕ ಬಳಕೆ ಮಾಡಬೇಕು.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!