ಅಡಿಕೆ ಮರಗಳು ಆರೋಗ್ಯವಾಗಿರಬೇಕಾದರೆ ಬಸಿಗಾಲುವೆ ಅಗತ್ಯ.

ಅಡಿಕೆ ತೋಟದಲ್ಲಿ ಬಸಿಗಾಲುವೆ ಈ ರೀತಿ ಇರಬೇಕು

ಬಸಿಗಾಲುವೆ  ಇಲ್ಲದ ತೋಟದಲ್ಲಿ ಯಾವಾಗಲೂ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ. ಮಣ್ಣಿನಲ್ಲಿ ನೀರು ಇರಲಿ. ಆದರೆ ಆದು ಗಿಡಗಳ ನಿಂತು ಹಳಸಲು ಆಗಬಾರದು. ಅದನ್ನು ತಡೆಯಲು ಬಸಿಗಾಲುವೆಯೇ ಪರಿಹಾರ. ಬಸಿಗಾಲುವೆ ಮಾಡದ ತೋಟ ಅದು ತೋಟವೇ ಅಲ್ಲ. ನೀರು ಬಸಿಯುವುದಕ್ಕೆ ಮಾತ್ರವಲ್ಲದೆ ಬೇರುಗಳ ಶ್ವಾಸೋಚ್ವಾಸಕ್ಕೂ ಬಸಿ ಗಾಲುವೆ ಬೇಕು.

  • ನಿಮ್ಮ ತೋಟದಲ್ಲಿ ಅಡಿಕೆ ಮರಗಳು ಎಷ್ಟು ಪೋಷಕಾಂಶ ಕೊಟ್ಟರೂ ಸ್ಪಂದಿಸದೇ ವರ್ಷದಿಂದ ವರ್ಷ ಇಳುವರಿ ಕಡಿಮೆಯಾಗುವುದು ಉಂಟೇ?
  • ಸಸಿ/ ಮರಗಳ ಶಿರ ಭಾಗ ಸಪುರವಾಗುತ್ತಾ ಬರುತ್ತದೆಯೇ?
  • ಗಿಡ /ಮರಗಳ ಎಲೆಗಳು ಹಳದಿಯಾಗುತ್ತದೆಯೇ?
  • ಹಾಗಾದರೆ ಮರದ ಬುಡದಲ್ಲಿ ನೀರು ಅಗತ್ಯಕ್ಕಿಂತ ಹೆಚ್ಚು ಸಮಯ ನಿಲ್ಲುತ್ತದೆ.
  • ಸಸ್ಯಗಳ ಬುಡದಲ್ಲಿ ಮಣ್ಣಿನ ಕೆನೆ ಸಂಗ್ರಹವಾಗಿದ್ದರೆ ಅಲ್ಲಿ ನೀರು ನಿಂತಿದೆ. ನೀರು ಹಳಸಲು ಆಗಿದೆ ಎಂದರ್ಥ
  • ಇದು ಬೇರುಗಳನ್ನು ಉಸಿರು ಕಟ್ಟಿಸಿದಂತೆ ಮಾಡಿ ಮರದ ಆರೋಗ್ಯವನ್ನು ಹಾಳು ಮಾಡುತ್ತದೆ.
  • ನೀರು ಎಂದರೆ ಅದು ಅಧಿಕ ತೇವಾಂಶವೂ ಆಗಿರಬಹುದು.
  • ಮುಷ್ಟಿ ಮಣ್ಣನ್ನು ಕೈಯಲ್ಲಿ ಅದುಮಿ ಹಿಡಿದಾಗ ಸ್ವಲ್ಪ ನೀರು ತೊಟ್ಟಿಕ್ಕಿದರೂ ಅದು ಅಗತ್ಯಕ್ಕಿಂತ ಹೆಚ್ಚಿನ ತೇವಾಂಶ ಎಂದರ್ಥ.

ನಿಮಗೆ ಇದು ತಿಳಿದಿರಲಿ:

  • ಕರಿಮೆಣಸಿನ ಬಳ್ಳಿಯ ಬೇರುಗಳಿಗೆ 20 ನಿಮಿಷಕ್ಕಿಂತ ಹೆಚ್ಚು ನೀರು ನಿಂತರೆ ಅದರ ಬೇರುಗಳು ಕೊಳೆಯಲಾರಂಭಿಸುತ್ತದೆ.
  • ಬೇರುಗಳಿಗೆ ಹಾನಿಯಾಗಿ ರೋಗ ಬರುತ್ತದೆ.
  • ಪ್ರತೀಯೊಂದು ಸಸ್ಯದ ಬೇರುಗಳಲ್ಲೂ ಶ್ವಾಸೋಚ್ವಾಸದ ಅಂಗಗಳಿರುತ್ತದೆ.
  • ಅದರ ಸಮರ್ಪಕ ಕಾರ್ಯ ನಿರ್ವಹಣೆಗೆ ಸೂಕ್ತ ವಾತಾವರಣ ಇರುವುದು ಅತೀ ಅಗತ್ಯ.
  • ತಾಳೆ ಜಾತಿಯ ಮರಗಳ ಬೇರುಗಳು ನೆಲದ ಮೇಲು ಭಾಗದಲ್ಲಿ ಸಡಿಲ ಮಣ್ಣಿನಲ್ಲಿ ಹಬ್ಬುವಂತದ್ದು.
  • ಇದು ಅತೀ ಸೂಕ್ಷ್ಮ ಬೇರುಗಳಾಗಿದ್ದು, ನೀರು ನಿಲ್ಲುವಿಕೆ ಮುಂತಾದ ಸನ್ನಿವೇಷಗಳು ಉಂಟಾದಾಗ ಅದರ ಕೆಲಸಕ್ಕೆ ಅಡ್ಡಿಯಾಗುತ್ತದೆ.

ಈ ಸನ್ನಿವೇಶ ಬೇರೆ ಬೇರೆ ರೋಗಕ್ಕೂ ಕಾರಣವಾಗುತ್ತದೆ. ಇತ್ತೀಚೆಗೆ ಅಡಿಕೆ ತೋಟಗಳಲ್ಲಿ ಬಸಿಗಾಲುವೆಯನ್ನು ಸುಸ್ಥಿತಿಯಲ್ಲಿ ಇಳ್ಳುಕೊಳ್ಳಲು ಅಸಾಧ್ಯವಾಗುವ ಕಾರಣ ರೋಗಗಳು ಹೆಚ್ಚಾಗಿವೆ.

ಬಸಿಗಾಲುವೆ ಕುಸಿಯದಂತೆ ರಕ್ಷಣೆ ಇರಬೇಕು.
ಬಸಿಗಾಲುವೆ ಕುಸಿಯದಂತೆ ರಕ್ಷಣೆ ಇರಬೇಕು.

ಬೇರು ಹೇಗೆ ಹಾಳಾಗುತ್ತದೆ:

  • ಬೇರುಗಳ ಮೇಲ್ಮೈಯಲ್ಲಿ ಸಣ್ಣ ಸಣ್ಣ ರಂದ್ರಗಳಿದ್ದು, ಅದರ ಮುಖಾಂತರ ಉಸಿರಾಟ ಕ್ರಿಯೆ ನಡೆಯುತ್ತದೆ.
  • ಬೇರಿನ ಸುತ್ತ ನೀರು ನಿಂತಾದ ಮಣ್ಣಿನಲ್ಲಿರುವ ಲವಣಾಂಶಗಳು ನೀರಿನಲ್ಲಿ ಕರಗಿ ಒಂದು ರೀತಿಯ ಪೊರೆಯನ್ನು ಬೇರುಗಳ ಮೇಲ್ಮೈ ಯಲ್ಲಿ ಉಂಟು ಮಾಡುತ್ತದೆ.
  • ಇದು ಉಸಿರಾಟ ಕ್ರಿಯೆಗೆ ಅಡ್ಡಿಯುಂಟು ಮಾಡಿ ಜೊತೆಗೆ ಅದರ ಅಗತ್ಯ ನೀರಿನ ಹೀರುವಿಕೆಗೂ ಕೂಡಾ ಅಡ್ಡಿಯುಂಟಾಗುತ್ತದೆ.
  • ಬೇರು ಕೊಳೆತ ಪ್ರಾರಂಭವಾಗುತ್ತದೆ.ಮಿತಿ ಮೀರಿದಾಗ ಬುಡ ಕೊಳೆತು ಮರ ಸಾಯುತ್ತದೆ.
  • ಅಡಿಕೆ ಮರವು ಒಂದು ತಾಳೆ ಜಾತಿಯ ಸಸ್ಯವೇ ಆಗಿದ್ದು, ಇದರ ಬೇರಿನ ತುದಿಯಲ್ಲಿ ಒಂದು ಟೋಪಿ ತರಹದ ರಚನೆ ಇರುತ್ತದೆ.
  • ಇದರಲ್ಲಿರುವ ಜೀವ ಕೊಶಗಳು ವಿಭಜನೆಗೊಳ್ಳುವ ಕಾರಣವೇ ಹೊಸ ಕವಲು ಬೇರುಗಳು, ಮತ್ತು ಅದರ ಬೆಳೆವಣಿಗೆ ಉಂಟಾಗುವುದು.
  • ಈ ತುದಿ ಭಾಗ ನೀರು ನಿಂತಾಗ ಕೊಳೆಯುತ್ತದೆ. ಆದ ಉಳಿದೆಲ್ಲಾ ಬೇರುಗಳ ಬೆಳೆವಣಿಗೆ ಮೂಲದಲ್ಲೇ ಹತ್ತಿಕ್ಕಲ್ಪಡುತ್ತದೆ.
  • ಮಣ್ಣು ಮತ್ತು ಸ್ಥಳವನ್ನು ಹೊಂದಿಕೊಂಡು ಒಂದು ದಿನ ನೀರು ನಿಂತರೆ ಅಥವಾ ಅಗತ್ಯಕ್ಕಿಂತ ತೇವಾಂಶ ಹೆಚ್ಚಾದರೆ ಬೇರುಗಳಿಗೆ ಉಸಿರು ಕಟ್ಟಿದ ಸ್ಥಿತಿ ಉಂಟಾಗುತ್ತದೆ.
  • ಮಣ್ಣಿ ನ ರಸಸಾರ ವ್ಯತ್ಯಾಸವಾಗಿ ಆಮ್ಲೀಯವಾಗುತ್ತದೆ. ಕೊಳೆಯುವುದು, ರೋಗಗಳು ಪ್ರಾರಂಭವಾಗುತ್ತದೆ

 ಇದು ಸಾಮಾನ್ಯವಾಗಿ ಮಳೆಗಾಲದಲ್ಲಿ ಆಗುವುದು. ಇದೇ ಸಮಯದಲ್ಲಿ ಬೇರುಗಳ ಮೂಡುವಿಕೆ (initiation) ಮತ್ತು ಬೆಳವಣಿಗೆ ( Growth)ಹೆಚ್ಚು ಇರುವುದು. ಆದ ಕಾರಣ ಬೆಳವಣಿಗೆಯ  ಎಲ್ಲಾ ಪ್ರಕ್ರಿಯೆಗೆ ಆಡ್ಡಿ ಉಂಟಾಗುತ್ತದೆ.

ಪರಿಹಾರ ಏನು:

  • ಅಡಿಕೆ / ತೆಂಗು ಮುಂತಾದ ಬೆಳೆಗಳ ಬೇರು ವಲಯ ಇರುವ ಸ್ಥಳದ ತನಕ ಅಗತ್ಯವಾಗ 60% ತೇವಾಂಶಕ್ಕಿಂತ ಹೆಚ್ಚಿನ ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು.
  • ಸಸಿಯನ್ನು ನೆಟ್ಟ ಆಳಕ್ಕನುಗುಣವಾಗಿ ಬೇರಿನಿಂದ ಕನಿಷ್ಟ ½ ಅಡಿಯಷ್ಟಾದರೂ ಹೆಚ್ಚಿನ ಆಳಕ್ಕೆ ನೀರು ಸರಾಗವಾಗಿ ಹರಿದು ಹೋಗುವ ಕಾಲುವೆ ಇರಬೇಕು.
  • ಕಾಲುವೆಗಳು ಪ್ರಾರಂಭದಿಂದ ಕೊನೆ ತನಕ ಕನಿಷ್ಟ ½ ಅಡಿಯಷ್ಟಾದರೂ ಓಟ ( ಇಳಿಜಾರು) ಇರಬೇಕು.
  • ಮಳೆಗಾಲ ಪೂರ್ತಿ ನೀರಿನ ಹರಿವು ಇರುವ ತನಕ ಅದರಲ್ಲಿ ಕಸ ಕಡ್ಡಿ ಸಿಕ್ಕಿಕೊಳ್ಳಬಾರದು. ಮಣ್ಣು ಕುಸಿತವಾಗಿ ಬೀಳಬಾರದು.
  • ಈ ಸಮಸ್ಯೆಗೆ ಅಂತರ್ಗತ ಬಸಿಗಾಲುವೆ ಹೆಚ್ಚು ಸಹಕಾರಿ.
  • ಮಣ್ಣಿನಲ್ಲಿ ಎಷ್ಟೇ ಒರತೆ ( ನೀರು ಜಿನುಗುವಿಕೆ) ಇದ್ದರೂ ಸಹ ಅದು ಸರಾಗವಾಗಿ ಹೊರ ಹರಿದು ಹೋಗುವಂತಿರಬೇಕು.
  • ಪ್ರತೀ ಎರಡು ಸಾಲಿಗೆ ಒಂದರಂತೆ ಪ್ರತೀ ಗಿಡದ ಬುಡದಲ್ಲಿ ನೀರು ಸ್ವಲ್ಪವೂ ನಿಲ್ಲದಂತೆ  ನೀರು ಹರಿಯಲು ಕಾಲುವೆಗಳು ಬೇಕು.

ನೀರು ನಿಲ್ಲದ ಸ್ಥಳ, ಖುಷ್ಕಿ ಎಂದು ಬಸಿಗಾಲುವೆ ಮಾಡದೆ ಇರಬಾರದು. ಇಲ್ಲಿ ಕಣ್ಣಿಗೆ ಕಾಣಿಸುವಂತೆ ನೀರು ಇಲ್ಲದಿದ್ದರೂ ಬೇರು ವಲಯದ ಮಣ್ಣು 60% ಕ್ಕಿಂತ ಹೆಚ್ಚಿನ ತೇವಾಂಶವನ್ನು ಹೊಂದಿರುತ್ತದೆ.

  • ಕವಲು ಬಸಿಗಾಲುವೆಗಳು ಮತ್ತು ಅವುಗಳೆಲ್ಲಾ ಒಟ್ಟಾಗಿ ಹರಿಯುವ ಮುಖ್ಯ ಬಸಿಗಾಲುವೆಗಳೂ, ಮಳೆ ನೀರು ಮತ್ತು ಒರತೆಯ ನೀರನ್ನು ಸ್ವಲ್ಪವೂ ತಂಗದೆ ಹೊರ ಹರಿಸುವಂತೆ ಇರಬೇಕು.

ಫಲಿತಾಂಶ ಏನು:

  • ಸಸ್ಯದ ಬೇರುಗಳು ವಿಶಾಲವಾಗಿ ಹಬ್ಬಿ ಆರೋಗ್ಯ ಉತ್ತಮವಾಗಿರುತ್ತದೆ.
  • ಮಣ್ಣಿನಲ್ಲಿರುವ ಮತ್ತು ಕೊಡುವ ಎಲ್ಲಾ ಪೋಷಕಾಂಶಗಳೂ ಸಮರ್ಪಕವಾಗಿ ಸಸ್ಯಗಳಿಗೆ ಬಳಕೆಯಗುತ್ತದೆ.
  • ಸಸ್ಯಗಳಿಗೆ ರೋಗ ನಿರೋಧಕ ಶಕ್ತಿ ಬರುತ್ತದೆ.
  • ಪಶ್ಚಿಮ ದಿಕ್ಕಿನ ಬಿಸಿಲಿನ ಹೊಡೆತಕ್ಕೂ ಸಸ್ಯಗಳು ಬೇಗ ಹಾಳಾಗಲಾರವು.
  • ಬಸಿಗಾಲುವೆ ಇರುವ ಕಾಲುವೆಯ ಗೊಡೆಗಳಲ್ಲಿ ಬೇರುಗಳು ನಿಬಿಡವಾಗಿ ಹಬ್ಬಿರುತ್ತವೆ.
  • ಅವುಗಳು ಶ್ವಾಸೋಚ್ವಾಸ  ಕ್ರಿಯೆಯನ್ನು ನಿರಾತಂಕವಾಗಿ ಮಾಡುತ್ತವೆ. ಇದು ಇಳುವರಿ ಹೆಚ್ಚಳಕ್ಕೂ ಸಹಕಾರಿ.

ಇತ್ತೀಚೆಗೆ ಹೆಚ್ಚಿನ ಬೆಳೆಗಾರರು ಯಂತ್ರಗಳ ಮೂಲಕ ಕಾಲುವೆ ಮಾಡಿ ಅಡಿಕೆ ಗಿಡ ನೆಡುತ್ತಾರೆ. ಈ ಪದ್ದತಿಯಲ್ಲಿ ನೀರಿನ ಸರಿಯಾದ ಬಸಿಯುವಿಕೆಗೆ ತುಂಬಾ ಅಡ್ಡಿ ಉಂಟಾಗುತ್ತದೆ. ಸಸಿ ಏಳಿಗೆ ಆಗುವುದಿಲ್ಲ. ಇದಕ್ಕಿಂತ ಹೊಂಡ ಮಾಡಿ ನೆಡುವುದು ಉತ್ತಮ. ಹೆಚ್ಚುಆಳದ ಹೊಂಡ ಬೇಕಾಗಿಲ್ಲ. ಅಗಲ ಮಾತ್ರ 3 ಅಡಿಯಷ್ಟು ಸುತ್ತಳತೆ ಇದ್ದರೆ ಒಳ್ಳೆಯದು.

ಎಷ್ಟೋ ಬೆಳೆ ಸೂಕ್ಷ್ಮಗಳು ನಮಗೆ  ಗೊತ್ತಿದ್ದರೂ ಸಹ ನಾವು ಆದನ್ನು ನಿರ್ಲಕ್ಷ್ಯ ಮಾಡುತ್ತೇವೆ. ಇದರಲ್ಲಿ ಒಂದು ಬಸಿಗಾಲುವೆ.ಸಸಿ ನೆಡುವ ಬಜೆಟ್ ನಲ್ಲಿ ಬಸಿಗಾಲುವೆಯನ್ನೂ ಸೇರಿಸಿ ಒಟ್ಟೊಟ್ಟಿಗೆ ಅದನ್ನೂ ಮಾಡಿದರೆ ತೋಟದ ಭವಿಷ್ಯ ಉಜ್ವಲ.

Leave a Reply

Your email address will not be published. Required fields are marked *

error: Content is protected !!