ಸಾವಯವ ಕಳೆ ನಿಯಂತ್ರಣ ವಿಧಾನ.

ಸಾವಯವ ವಿಧಾನದ ಕಳೆ ನಿಯಂತ್ರಣ

ರಾಸಾಯನಿಕ ವಿಧಾನದ ಕಳೆ ನಿಯಂತ್ರಣದ ಬದಲಿಗೆ ಸಾವಯವ ವಿಧಾನದಲ್ಲಿ ಕಳೆ ನಿಯಂತ್ರಿಸಲು ಸಾಧ್ಯವಿದೆ.  ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಕೆಲಸ ಸ್ವಲ್ಪ ದುಬಾರಿಯಾದರೂ ಈ ವಿಧಾನದ ಕಳೆ ನಿಯಂತ್ರಣ ಎಲ್ಲಾ ದೃಷ್ಟಿಯಿಂದಲೂ ಉತ್ತಮ. ಕೃಷಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಂತಹ ವಿಧಾನದ ಕಳೆ ನಿಯಂತ್ರಣ ನಮ್ಮ ಆದ್ಯತೆಯಾದರೆ ಒಳ್ಳೆಯದು.

ಕಳೆ ನಿಯಂತ್ರಣ ಕೃಷಿಕರಿಗೆ  ಒಂದು ದೊಡ್ದ  ಸವಾಲು. ಕಳೆಗಳು ಹೊಲ ನಿರ್ವಹಣೆಗೆ  ತುಂಬಾ ಅನನುಕೂಲ ಪರಿಸ್ಥಿತಿಯನ್ನು  ಉಂಟು ಮಾಡುತ್ತವೆ. ನಾವು ಬಳಕೆ ಮಾಡುವ ಬಹುತೇಕ  ಪೋಷಕಗಳನ್ನು ಕೆಳ ಸ್ಥರದ  ಸಸ್ಯಗಳಾದ  ಕಳೆಗಳು  ತ್ವರಿತವಾಗಿ ಬಳಕೆ ಮಾಡಿ, ಬೆಳೆಗೆ ಕೊರತೆಯನ್ನು  ಉಂಟು ಮಾಡುತ್ತವೆ.   ಇದರಿಂದಾಗಿ ತುಂಬಾ ನಷ್ಟ ಉಂಟಾಗುತ್ತದೆ. ಹೊಲದಲ್ಲಿ ಯಾವುದೇ ಬೇಸಾಯ ಕಾರ್ಯ ಮಾಡುವುದಕ್ಕೂ ಕಳೆಗಳು ಒಂದು ಅಡ್ಡಿ. ಅದಕ್ಕಾಗಿ ಕಳೆ ನಿಯಂತ್ರಣ ಮಾಡಲೇ ಬೇಕಾಗುತ್ತದೆ.

  • ಕಳೆ  ನಿಯಂತ್ರಣ  ಮಾಡುವರೇ  ಕೃಷಿ  ವಿಜ್ಞಾನ  ಪರಿಚಯಿಸಿದ  ವಿಧಾನ,  ಕಳೆ  ನಾಶಕಗಳು .
  • ಇವು ಕಳೆಗಳ ಅಂಗಾಂಶಗಳನ್ನು  ಸಾಯಿಸುವ ರಾಸಾಯನಿಕಗಳಾಗಿದ್ದು, ಇದನ್ನು  ಹೊಲದ ಕಳೆ ಸಸ್ಯಗಳ ಮೇಲೆ  ಸಿಂಪರಣೆ  ಮಾಡಿದಾಗ   ಅದು ಸಾಯುತ್ತವೆ.
  • ಪ್ರಾರಂಭದಲ್ಲಿ ಈ ವಿಧಾನ ರೈತರಿಗೆ  ತುಂಬಾ ಖುಷಿ ಕೊಟ್ಟಿತು.
  • ಇದನ್ನು  ವ್ಯಾಪಕವಾಗಿ ಬಳಕೆ ಮಾಡುವುದನ್ನು  ಪ್ರಾರಂಭಿಸಿದರು.
  • ಕ್ರಮೇಣ  ಕೆಲವು ಸಂಶಯಗಳು ಜನರ ತಲೆಗೆ  ಹೊಕ್ಕು ರಾಸಾಯನಿಕ ಕಳೆನಾಶಕಗಳ ಬಳಕೆ  ಬಗ್ಗೆ  ಅಂಜಿಕೆ ಪ್ರಾರಂಭವಾಯಿತು.

ಈ ವಿಧಾನದ ಕಳೆ ನಿಯಂತ್ರಣಲ್ಲಿ  ರೈತರಿಗೆ ಎಷ್ಟು  ಅನುಕೂಲವಾಯಿತೋ ಅಷ್ಟೇ ಅನನುಕೂಲವೂ ಆಗುತ್ತಿದೆ. ರಾಸಾಯನಿಕ ಕಳೆ ನಾಶಕದ ಬಳಕೆಯಿಂದ ಮಣ್ಣು ಹಾಳಾಗುತ್ತದೆ, ಅದರ ಉಳಿಕೆಗಳಿಂದ  ಬೇರೆ ಬೇರೆ ಆರೋಗ್ಯ ಸಮಸ್ಯೆಗಳು  ಉಂಟಾಗುತ್ತವೆ ಎಂಬ ಕಾರಣಕ್ಕೆ ಜನ ಕಳೆ ನಾಶಕಗಳ ಬಳಕೆ ಬಗ್ಗೆ ಅಂಜಿಕೊಳ್ಳುವಂತಾಗಿದೆ.  ಇದರಲ್ಲಿ ನಿಜಾಂಶ ಇದೆಯೋ ಇಲ್ಲವೋ?ಸಂಶಯದಲ್ಲಿ ಇದರ ಬಳಕೆ ಮಾಡುವುದು ಸೂಕ್ತವಲ್ಲ.

ಪ್ಲಾಸ್ಟಿಕ್ ಶೀಟ್ ಮಲ್ಚಿಂಗ್ ಮಾಡಿ ಕಳೆ ನಿಯಂತ್ರಣ .

 ಕಳೆ ನಾಶಕ ಆಗಬೇಕೆಂದಿಲ್ಲ:

  • ಕಳೆ ನಾಶಕ  ಒಂದೇ ಕಳೆ ನಿಯಂತ್ರಣಕ್ಕೆ  ಪರಿಹಾರ ಅಲ್ಲ.
  •  ನಮಗೆ ಮಾತ್ರ  ಕಳೆಗಳು ತೊಂದರೆ ಮಾಡಿದ್ದಲ್ಲ.
  • ಕೃಷಿ ಪ್ರಾರಂಭವಾದಾಗಿನಿಂದಲೂ ಕಳೆಗಳು ಬೆಳೆ ಬೆಳೆಸುವ ರೈತನಿಗೆ ತಲೆನೋವಾಗಿಯೇ ಇದ್ದವು,.
  • ಅದನ್ನು ಬೇರೆ ಬೇರೆ  ಸುರಕ್ಷಿತ ವಿಧಾನಗಳಿಂದ ಅವರು ನಿವಾರಣೆ ಮಾಡುತ್ತಾ ಬಂದಿದ್ದಾರೆ.
  • ನಮ್ಮ ಹಿರಿಯರು ಕಳೆ ನಿಯಂತ್ರಣಕ್ಕೆ  ಅನುಸರಿಸುತ್ತಿದ್ದ ಕ್ರಮಗಳಲ್ಲಿ ಮುಖ್ಯವಾದುದು,
  • ಕೈಯಿಂದ ಕಳೆ ತೆಗೆಯುವುದು ಮತ್ತು ಕಳೆಯ ಮೇಲೆ  ಬೇರೆ ಕಳೆಯನ್ನು  ಕಡಿದು ಹೊದಿಸುವುದು.
  • ಈ ವಿಧಾನದಲ್ಲಿ ಕಳೆಯಿಂದ ಬೆಳೆಗೆ ತೊಂದರೆ ಆಗದಂತೆ  ನೋಡಿಕೊಳ್ಳುತ್ತಿದ್ದರು.

ಇದೇ ತಳಹದಿಯಲ್ಲಿ  ನಾವೂ ಕಳೆ  ನಿಯಂತ್ರಣ ಕಾರ್ಯವನ್ನು ಮಾಡಬಹುದಾಗಿದ್ದು, ಇದರಿಂದ ಯಾವುದೇ ತೊಂದರೆ ಇರುವುದಿಲ್ಲ. ಮಣ್ಣಿನ ರಚನೆ ಉತ್ತಮವಾಗಲೂ ಇದು ಸಹಕಾರಿ.

ದ್ವಿದಳ ಸಸ್ಯಗಳನ್ನು ಬೆಳೆಸಿ ಕಳೆ ನಿಯಂತ್ರಣ
ದ್ವಿದಳ ಸಸ್ಯಗಳನ್ನು ಬೆಳೆಸಿ ಕಳೆ ನಿಯಂತ್ರಣ

 ಇದು ಉತ್ತಮ ವಿಧಾನ:

  • ನಮ್ಮ  ಹಿರಿಯರು  ಸಸಿ ನೆಟ್ಟು ಅದರ ಬುಡದಲಿ ಸೊಪ್ಪು , ತರಗೆಲೆ  ಮುಚ್ಚುತಿದ್ದರು. ಇದರಿಂದ ಕೆಲವು ಸಮಯದ ತನಕ ಅಲ್ಲಿ ಕಳೆಗಳು ಹುಟ್ಟುತ್ತಿರಲಿಲ್ಲ.
  • ಇದೇ  ತತ್ವದ ಮೇಲೆ  ಸಾವಯವ ವಿಧಾನದ ಕಳೆ ನಿಯಂತ್ರಣವನ್ನು ಪರಿಚಯಿಸಲಾಗಿದೆ.
  • ಹೊಲದ ಮೇಲೆ  ಉಳುಮೆಗೆ  ಮುನ್ನ  ಸಾವಯವ ತ್ಯಾಜ್ಯಗಳನ್ನು ಹಾಸಲು ಮಾಡುವುದರಿಂದ ಕಳೆಗಳ  ಹುಟ್ಟುವಿಕೆಗೆ ತೊಂದರೆಯಾಗುತ್ತದೆ. ಸಹಜವಾಗಿ ಕಳೆ ನಿಯಂತ್ರಣವಾಗುತ್ತದೆ.
  • ಹೊಲದಲ್ಲಿ ಬೆಳೆ  ಬೆಳೆಸುವ ಮುನ್ನ ಹಸುರೆಲೆ   ಗೊಬ್ಬರದ ಸಸ್ಯಗಳನ್ನು  ಬೆಳೆಸಿ, ಅದನ್ನು ನೆಲದ ಜೊತೆ  ವಿಲೀನ ಮಾಡಿದಾಗ ಕಳೆ ಸಸ್ಯಗಳು ಸತ್ತು  ಹೋಗುತ್ತವೆ.
  • ತೋಟಗಾರಿಕಾ ಬೆಳೆಗಳ ಹೊಲದಲ್ಲಿ ಕಳೆ ನಿಯಂತ್ರಣ  ಮಾಡಲು  ಹಸುರೆಲೆ ಗೊಬ್ಬರದ ಗಿಡಗಳನ್ನು  ನೆಲಕ್ಕೆ ಹಾಸಲು ಮಾಡುವುದು ತುಂಬಾ ಫಲಕಾರಿ.
  • ಇದು ರಾಸಾಯನಿಕ ವಿಧಾನಕ್ಕಿಂತಲೂ  ಪರಿಣಾಮಕಾರಿ ಎನ್ನಬಹುದು.
  • ಗ್ಲೆರಿಸೀಡಿಯಾ ಸೊಪ್ಪನ್ನು ಸುಮಾರು 2-3  ಇಂಚು ದಪ್ಪಕ್ಕೆ ನೆಲದ ಮೇಲೆ  ಹಾಸಿದಾಗ ಅದರ ಅಡಿ ಭಾಗದ ಎಲ್ಲಾ ಕಳೆ ಸಸ್ಯಗಳೂ ಸತ್ತು ಹೋಗುತ್ತವೆ.

 

  • ಅಷ್ಟೇ ಅಲ್ಲದೆ ಅದರಿಂದ ಬೆಳೆಗೆ ಹೆಚ್ಚುವರಿ  ಪೋಷಕಾಂಶಗಳೂ ದೊರೆಯುತ್ತವೆ.
  • ಬರೇ ಗ್ಲೆರಿಸೀಡಿಯಾ ಮಾತ್ರವಲ್ಲ. ಯಾವುದೇ ಸೊಪ್ಪನ್ನು  ನೆಲದ ಮೇಲೆ ಹಾಸಿದಾಗಲೂ ಅದರ ಅಡಿ ಭಾಗದ ಸಸ್ಯಗಳು ಸತ್ತು ಹೋಗುತ್ತದೆ.
  • ದ್ವಿದಳ  ಕಳೆ ಸಸ್ಯಗಳನ್ನು ಹೂವಾಗುವ ಮುನ್ನ  ಕಡಿದು, ಕಳೆ ಇರುವಲ್ಲಿ ಮೇಲು ಹಾಸಲು ಹಾಕಿದರೆ ಇಬ್ಬಗೆಯ ಲಾಭಬಾಗುತ್ತದೆ.
  • ಪ್ಲಾಸ್ಟಿಕ್ ಹಾಳೆಗಳನ್ನು ಮುಚ್ಚಿಗೆ ಮಾಡುವುದರಿಂದ ಕಳೆ ಸಸ್ಯಗಳು ಹುಟ್ಟುವುದಿಲ್ಲ. ಇದು ಮಣ್ಣು ಸವಕಳಿಯನ್ನೂ  ತಡೆಯುತ್ತವೆ. ನೀರಿನ ಉಳಿತಾಯಕ್ಕೂ ಸಹಕಾರಿ.
  • ತರಗೆಲೆ  ಇತ್ಯಾದಿ ಹಾಕಿದಾಗ ಕಳೆ ನಿಯಂತ್ರಣ ಆಗುತ್ತದೆಯಾದರೂ ಅದರಲ್ಲಿ  ಇರುವ ಬೀಜಗಳು ಮೊಳೆತು ಮತ್ತೆ ಕಳೆ ಹುಟ್ಟಿಕೊಳ್ಳುವ ಸಾಧ್ಯತೆ  ಇದೆ.

 

ಕೃಷಿಕರು ಕಳೆ ಬಗ್ಗೆ ಹೆಚ್ಚು ತಲೆ  ಕೆಡಿಸಿಕೊಳ್ಳಬೇಕಾಗಿಲ್ಲ.ಅವುಗಳನ್ನು  ನಮ್ಮಿಂದ ಸಂಪೂರ್ಣ  ನಾಶ ಮಾಡಲು ಸಾಧ್ಯವಿಲ್ಲ. ಏನಿದ್ದರೂ ನಿಯಂತ್ರಣ ಮಾಡಬಹುದು ಅಷ್ಟೇ.

ಈಗ ಹೆಚ್ಚಿನ ಕಡೆ ಕಾಡು ಸೇವಂತಿಗೆಯಂತಹ  ಸಸ್ಯದ ಹಾವಳಿ ಹೆಚ್ಚಾಗುತ್ತಿದೆ.  ಇದರ ನಿಯಂತ್ರಣಕ್ಕೆ ಎಲ್ಲರೂ ಹರಸಾಹಸ ಪಡುತ್ತಿದ್ದಾರೆ. ಇದನ್ನು  ಹತ್ತಿಕ್ಕಲು ಒಮ್ಮೆ ಈ ಕಳೆಯನ್ನು ಕೆಲವು ಸಾಧನಗಳ ಮೂಲಕ ತೆಗೆದು ಅಲ್ಲಿಗೆ ಮೇವಿನ ಹುರುಳಿಯನ್ನು ಬಿತ್ತುವುದು ಸೂಕ್ತ. ಈ ಹುರುಳಿ ಸಸ್ಯವು ನೆಲಕ್ಕೆ ಹೊದಿಕೆಯಾಗಿ ಬೆಳೆದು  ಬೇರೆ ಕಳೆಯನ್ನು ಬೆಳೆಯಲು ಬಿಡುವುದಿಲ್ಲ. ಕೆಲವು ಸಮಯದ (3-4 ತಿಂಗಳಲ್ಲಿ) ಹುರುಳಿ ಗಿಡ ಒಣಗಿ ಸಾಯುತ್ತದೆ. ಅದನ್ನು ಹಸಿರು ಇರುವಾಗ ಕಿತ್ತು ಪಶುಗಳಿಗೆ ಮೇವಾಗಿ ಬಳಕೆ ಮಾಡಬಹುದು. ಉತ್ತಮ ಮೇವು ಆಗುತ್ತದೆ.

  • ಕಳೆ ನಿಯಂತ್ರಣ ಮಾತ್ರ ಮಾಡಬೇಕೇ ವಿನಹ ಅದರ ನಾಶ ಮಾಡಬಾರದು.
  • ಪ್ರತಿಯೊಂದು ಸಸ್ಯದಿಂದಲೂ   ಪ್ರಕೃತಿಗೆ ಅದರದ್ದೇ ಆದ ಕೊಡುಗೆ  ಇದೆ.

ಕಳೆ  ಬರಲು ಮುಖ್ಯ ಕಾರಣ ನೆಲಕ್ಕೆ ಸೂರ್ಯನ ನೇರ ಬೆಳಕು ಬೀಳುವುದು.  ಅದನ್ನು ತಡೆದರೆ ಕಳೆ ಕಡಿಮೆಯಾಗುತ್ತದೆ. ಹೊಲದಲ್ಲಿ ಬಹುಸ್ಥರದ ಬೆಳೆಗಳಿದ್ದಾಗ ಕಳೆ ಕಡಿಮೆ ಇರುತ್ತದೆ. 

Leave a Reply

Your email address will not be published. Required fields are marked *

error: Content is protected !!