ಉತ್ತಮ ಮೆಣಸಿಗೆ 40 ರೂ. ಬೆಲೆ ಹೆಚ್ಚು.

by | Feb 20, 2020 | Pepper (ಕರಿಮೆಣಸು) | 1 comment

ನಾವು ಹೆಚ್ಚಾಗಿ ಕೊಯಿಲಿನ ಸಮಯದಲ್ಲಿ ಅವಸರ ಮಾಡುತ್ತೇವೆ. ಇನ್ನೇನು ಜನವರಿ ಬಂದಿದೆ. ಕರಿಮೆಣಸು ಬೆಳೆದು ಹಣ್ಣಾದರೆ ಹಕ್ಕಿಗಳು ತಿಂದು ನಷ್ಟವಾಗುತ್ತದೆ ಎಂದು ಬಲಿಯುವ ಮುನ್ನ ಕೊಯಿಲಿಗೆ ಪ್ರಾರಂಭಿಸುತ್ತೇವೆ. ಇದರಿಂದ ನಾವು 25 % ಕ್ಕೂ ಹೆಚ್ಚು ತೂಕ ನಷ್ಟ ಮಾಡಿಕೊಳ್ಳುತ್ತೇವೆ. ಈ ನಷ್ಟವನ್ನು ಕಡಿಮೆ ಮಾಡಿಕೊಂಡರೆ 1 ಕ್ವಿಂಟಾಲು ಇಳುವರಿ ಪಡೆಯುವ ಬದಲು ಇನ್ನೂ 25 ಕಿಲೋ ಹೆಚ್ಚು ಪಡೆಯಬಹುದು ಎಂಬುದು ಕೆಲವು ಉತ್ತಮ ಮೆಣಸು ಬೆಳೆಗಾರರ ಅಭಿಪ್ರಾಯ. ಉತ್ತಮ ಗಾರ್ಬಲ್ ಮಾಡಿದ ಮೆಣಸಿಗೆ  ಇತರ ಮೆಣಸಿಗಿಂತ 30-40 ರೂ. ಹೆಚ್ಚು ಇದೆ.  ಕೆಲವರು ಇದನ್ನು ಆನ್ಲೈನ್ನಲ್ಲಿ ಕಿಲೋ 400 ಕ್ಕೂ ಮಾರಿದ್ದು ಇದೆ.

ಪರಿಸ್ಥಿತಿ ಹೀಗೆ ಮಾಡಿದೆ:

  • ದೊಡ್ದ ದೊಡ್ಡ ಮೆಣಸು ಬೆಳೆಗಾರರು  ತೋಟವನ್ನು ಗುತ್ತಿಗೆ  ಕೊಡುತ್ತಾರೆ.
  • ಆಗ ಬಲಿತದ್ದು ಮಾತ್ರ ಕೊಯಿಲು ಮಾಡಿಸುವುದು  ಕಷ್ಟವಾಗುತ್ತದೆ.


Click to WhatsApp us and build your website now!

  • ಕೆಲಸಗಾರರ ಸಮಸ್ಯೆಯೂ ಸಹ ಇದಕ್ಕೆ ಅಡ್ಡಿಯಾಗಿದೆ.

ಯಾವಾಗ ಕೊಯಿಲು ಮಾಡಬೇಕು:

ಇಷ್ಟು ಹಣ್ಣು ಆಗುವಾಗ ಕೊಯ್ಯುವುದು ಉತ್ತಮ. ಕೊಯಿಲಿಗೆ ಒಂದು ವಾರ ಮುಂಚೆ ನೀರು ಕಡಿಮೆ ಮಾಡಿ.

  • ಮೆಣಸು ಕಾಳುಗಳು ಬೆಳೆಯಲು 8  ತಿಂಗಳು ಕಾಲಾವಧಿ ಬೇಕು.
  • ಈ ಲೆಕ್ಕಾಚಾರದಲ್ಲಿ ಜುಲೈ ತಿಂಗಳಲ್ಲಿ ಹೂ ಕರೆ ಬಿಟ್ಟ ಕಾಳುಗಳು ಬೆಳೆಯುವ ಸಮಯ ಫೆಬ್ರವರಿ ತಿಂಗಳ ಕೊನೆ.
  • ಆದಾಗ್ಯೂ ಚಳಿ ಹೆಚ್ಚು ಇಲ್ಲದ ಕಾರಣ ಕರಾವಳಿಯಲ್ಲಿ  ಫೆಬ್ರವರಿ ಎರಡನೇ ವಾರ ಬಲಿಯಲು ಪ್ರಾರಂಭವಾಗಬಹುದು.
  • ಆ ಸಮಯದ ವರೆಗೆ ಕೊಯಿಲಿಗೆ ಮುಂದಾಗಬೇಡಿ.
  • ಎಡೆ ಎಡೆಯಲ್ಲಿ ಒಂದೆರಡು ಕರೆಗಳು ಹಣ್ಣಾಗಿದ್ದರೆ ಅದು ಮಳೆಗಾಲ ಮುಂಚಿನ ಮಳೆಗೆ  ಹೂ ಕರೆ ಬಿಟ್ಟು ಉಳಿದ ಕರೆಗಳೇ ಹೊರತು ಬೆಳೆ ಸೀಸನ್ ನ ಕರೆಗಳಲ್ಲ.

ಬಲಿಯದ ಕಾಳು

  • ಬಳ್ಳಿಯಲ್ಲಿ ತುದಿ ಭಾಗದಲ್ಲಿ ಅರ್ಧ 10-15% ಕರೆಗಳಲ್ಲಿ ಹಣ್ಣು ಕಾಳುಗಳನ್ನು ಕಂಡಾಗ ಕೊಯಿಲಿಗೆ ಪ್ರಾರಂಭಿಸಿರಿ.
  • ಹಕ್ಕಿಗಳಿಂದ ಬೆಳೆಗೆ ತೊಂದರೆಯಾಗುವ ಸಾಧ್ಯತೆ ಇದೆ. ಆದರೂ ಸಹ ಬಲಿತ ಕಾಳುಗಳನ್ನೇ ಕೊಯಿಲು ಮಾಡಿದರೆ ಆ ನಷ್ಟವೂ ಹೊಂದಿಕೆಯಾಗುತ್ತದೆ.
  • ಬಲಿತ ಕಾಳುಗಳ ಬಣ್ಣ ಎಳೆಯ ಕಾಳುಗಳಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಇದನ್ನು ಕೆಲಸಗಾರರಿಂದ ಗುರುತಿಸುವುದು ಕಷ್ಟವಾಗಬಹುದು.
  • ಆದರೂ ಬಲಿಯದ ಕಾಳುಗಳನ್ನು ಉಗುರಿನಲ್ಲಿ ಒತ್ತಿದಾಗ ಅದು ತುಂಡಾಗುತ್ತದೆ.
  • ಬಲಿತಿದ್ದರೆ ಸಿಪ್ಪೆ ಮಾತ್ರ ಗಾಯವಾಗುತ್ತದೆ.

ಬಲಿತ ಮೆಣಸು

ಹೇಗೆ  ಕೊಯಿಲು ಮಾಡಬೇಕು:

  • ಮೊದಲಾಗಿ ಕೊಯಿಲು ಮಾಡುವವರಿಗೆ  ಬಲಿತ ಕಾಳಿನ ಮತ್ತು ಬಲಿಯದ ಕಾಳಿನ ಗುರುತು ಮಾಡಿಕೊಡಬೇಕು. ಆ ಪ್ರಕಾರ ಕೊಯಿಲು ಮಾಡಲು ಹೇಳಬೇಕು
  • ಮೊದಲು ಬಿಸಿಲು ಬೀಳುವ ಜಾಗದ ಬಳ್ಳಿಗಳ ಕೊಯಿಲು ಮಾಡಬೇಕು. ನೆರಳಿನ ಜಾಗದ್ದನ್ನು  ಕೊನೆಗೆ ಇಡಬೇಕು.
  • ಬಳ್ಳಿಯನ್ನು ಎರಡು ವಿಭಾಗ ಮಾಡಿಕೊಳ್ಳಬೇಕು. ತುದಿಯ ಅರ್ಧ ಭಾಗ ಬಿಸಿಲು ಚೆನ್ನಾಗಿ ಬೀಳುವ ಕಾರಣ ಬೇಗ ಬಲಿಯುತ್ತದೆ.
  • ಅದನ್ನು ಮೊದಲು ಕೊಯಿಲು ಮಾಡಬೇಕು.

ಸರಿಯಾಗಿ ಬೆಳೆದ ಕರಿಮೆಣಸು ಈ ರೀತಿ ಇರುತ್ತದೆ

  • ಎಲ್ಲಾ  ತುದಿ ಭಾಗದ ಕೊಯಿಲು ಮುಗಿದ ನಂತರ ಎರಡನೇ ಭಾಗದ್ದನ್ನು ಕೊಯಿಲು ಮಾಡಬೇಕು.
  • ಕೊಯಿಲು ಮಾಡುವ ಕರೆಯಲ್ಲಿ ಒಂದೆರಡಾದರೂ ಕಾಳುಗಳು ಹಣ್ಣಾಗಿದ್ದರೆ  ಒಳ್ಳೆಯದು.
  • ಕೊಯಿಲಿಗೆ ಒಂದು ವಾರಕ್ಕೆ ಮುಂಚೆ ನೀರು ನಿಲ್ಲಿಸಿದರೆ ಆ ಕಾಳಿನ ತಿರುಳು ಚೆನ್ನಾಗಿ ಕೂಡಿಕೊಂಡು ತೂಕ ಬರುತ್ತದೆ.

ಬಲಿಯದ ಮೆಣಸು ಒಣಗಿದಾಗ ಹೀಗಾಗುತ್ತದೆ

ಹೆಚ್ಚು ತೂಕ ಬರಲು ಕೊಯಿಲಿಗೆ 1 ತಿಂಗಳು ಮುಂಚೆ 1 ಕಿಲೋ ಪೊಟ್ಯಾಶಿಯಂ ನೈಟ್ರೇಟ್ , 200 ಲೀ. ನೀರು ಬೆರೆಸಿ ಎಲೆ ಕಾಳುಗಳಿಗೆ ಸಿಂಪರಣೆ  ಮಾಡಿ. ಕೊಯಿಲಿಗೆ 15 ದಿನ ಇರುವಾಗ 1 ಕಿಲೋ ಸಲ್ಫೇಟ್ ಆಫ್ ಪೊಟ್ಯಾಶ್ ಅನ್ನು  200 ಲೀ. ನೀರು ಬೆರೆಸಿ ಎಲೆ ಕಾಳುಗಳಿಗೆ ಸಿಂಪರಣೆ  ಮಾಡಿ.

  • ಸ್ವಲ್ಪ ಕೊಯಿಲು ಮಾಡಿ ಒಣಗಿಸಿದಾಗ ಅದು ಪೂರ್ತಿ ಬೆಳೆದಿದೆಯೇ ಇಲ್ಲವೇ ಎಂಬುದು ಗೊತ್ತಾಗುತ್ತದೆ.

ಗುಣಮಟ್ಟದ ಮೆಣಸಿಗೆ ಮಾರುಕಟ್ಟೆಯಲ್ಲಿ ಸ್ವಲ್ಪ ಹೆಚ್ಚಿನ ಬೆಲೆ ಇರುತ್ತದೆ. ಭಾರತದ ಮೆಣಸು ಗುಣಮಟ್ಟಕ್ಕೆ  ಹೆಸರುವಾಸಿ. ಇದು ಉಳಿಯಲು ಬಲಿತ ಕಾಳನ್ನೇ ಕೊಯಿಲು ಮಾಡಿ.

 
 

1 Comment

  1. Savin

    ದಯವಿಟ್ಟು ಆನ್ಲೈನ್ ನಲ್ಲಿ ಕರಿಮೆಣಸು ಮಾರಾಟ ಮಾಡುವುದು ತಿಳಿಸಿ

    Reply

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!