ಕೈಯಲ್ಲಿ ತುತ್ತು ಹಿಡಿದುಕೊಂಡ ನಂತರ ಅದನ್ನು ಬಾಯಿಗೆ ಇಡಲೇ ಬೇಕು. ಅದನ್ನು ಸಿಟ್ಟಿನಲ್ಲಿ ಹೊರ ಚೆಲ್ಲಿದರೆ ಯಾರಿಗೂ ಏನೂ ಪ್ರಯೋಜನ ಇಲ್ಲ. ನಮ್ಮ ರೈತರು ದಾಸ್ತಾನು ಇಡಬಹುದಾದ ಬೆಳೆಗಳ ಬೆಲೆ ಕುಸಿತವಾದಾಗ ತೆಗೆದುಕೊಳ್ಳೂವ ಅವಸರದ ತೀರ್ಮಾನ ಅವನಿಗೇ ನಷ್ಟದ ಬಾಬ್ತು ಆಗುತ್ತದೆ.
- ಮೆಕ್ಕೇ ಜೋಳದ ಬೆಲೆ ಕುಸಿತಕೆ ಕಾರಣ, ಕೋಳೀ ಉದ್ದಿಮೆಯ ನಷ್ಟ ಎನ್ನಲಾಗುತ್ತಿದೆ.
- ನಮ್ಮಲ್ಲಿ ಬೆಳೆಯುವ ಸುಮಾರು 60 % ಹೆಚ್ಚಿನ ಮೆಕ್ಕೇ ಜೋಳ ಕೋಳೀ ಆಹಾರ ತಯಾರಿಕೆಗೇ ಬಳಸಲ್ಪಡುತ್ತದೆ.
- ಉಳಿದದ್ದು ಪಶು ಆಹಾರ ತಯಾರಿಕೆಗೆ ಬಳಸಲ್ಪಡುತ್ತದೆ.
- ಕೋಳಿ ಉದ್ದಿಮೆ ನಷ್ಟದಲ್ಲಿರುವ ಕಾರಣ ಮೆಕೇ ಜೋಳಕ್ಕೆ ಬೇಡಿಕೆ ಕುಸಿದಿದ್ದರೆ ಅದು ತಾತ್ಕಾಲಿಕ.
ಬೆಳೆಗಾರರು ಏನು ಮಾಡಬೇಕು:
- ಟೊಮಾಟೋ ಬೆಲೆ ಕುಸಿತವಾದರೆ ರಸ್ತೆಗೇ ಬಿಸಾಡಬೇಕು ನಿಜ.
- ಯಾಕೆಂದರೆ ಅದನ್ನು ಸಂಸ್ಕರಿಸುವವರು ಕೊಡುವ ಬೆಲೆ ಕೊಯಿಲು ಮಾಡಿದ ಮಜೂರಿಗೂ ಸಾಕಾಗುವುದಿಲ್ಲ.
- ಮೆಕ್ಕೇ ಜೋಳ ಹಾಗಿಲ್ಲ. ಇದಕ್ಕೆ ಸರಿಯಾಗಿ ಒಣಗಿಸಿ ದಾಸ್ತಾನು ಇಟ್ಟರೆ 6 ತಿಂಗಳ ತನಕವೂ ದಾಸ್ತಾನು ಇಡಬಹುದು.
ಇದನ್ನು ಹೊಲಕ್ಕೆ ಬೆಂಕಿ ಹಾಕಿ ಸುಡುವುದು, ಟ್ರ್ಯಾಕ್ಟರ ಹೊಡೆದು ಮಣ್ಣಿಗೆ ಸೇರಿಸುವುದು ಸರಿಯಲ್ಲ. ಇದರಿಂದ ಬೆಳೆದ ಯಾವ ಖರ್ಚೂ ರೈತನಿಗೆ ಸಿಗುವುದಿಲ್ಲ.
![](https://kannada.krushiabhivruddi.com/wp-content/uploads/2020/03/IMG_20200125_124707-FILEminimizer.jpg)
- ಮೆಕೇ ಜೋಳಕ್ಕೆ ಬೇಡಿಕೆ ಇಲ್ಲದಿಲ್ಲ.
- ವಾಸ್ತವವಾಗಿ ಪಶು ಆಹಾರ ತಯಾರಿಕಾ ಕ್ಷೇತ್ರಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಬಳಕೆಮಾಡಬಹುದು.
- ಹಿಂದಿನಿಂದಲೂ ಪಶು ಆಹಾರ ಕ್ಷೇತ್ರಕ್ಕೆ ಮೆಕ್ಕೇ ಜೋಳದ ಕೊರತೆಯೇ ಇರುತ್ತಿತ್ತು.
- ಮೆಕ್ಕೇ ಜೋಳದ ಬದಲಿಗೆ ಬೇರೆ ವಸ್ತುಗಳನ್ನು ಮಿಶ್ರಣ ಮಾಡಿ ಪಶು ಆಹಾರವನ್ನು ಕಲಬೆರಕೆ ಮಾಡಲಾಗುತಿತ್ತು.
- ಇದು ಕೋಳಿ ಉದ್ದಿಮೆಗಳಿಗೆ ಜೋಳದ ಪೂರೈಕೆ ಕಡಿಮೆಯಾದರೂ ಸಹ ಮೆಕ್ಕೇ ಜೋಳ ಬೆಳೆಯುವ ರೈತರಿಗೆ ತೊಂದರೆ ಆಗದು.
ಇಲಾಖೆಗಳು ಧೈರ್ಯ ಕೊಡಬೇಕಿತ್ತು:
- ಮೆಕ್ಕೇಜೋಳದ ಬೆಳೆಗಾರರ ಕಷ್ಟವನ್ನು ಸಂದರ್ಭೋಚಿತವಾಗಿ ಕೃಷಿ ಇಲಾಖೆ ಗಮನಿಸಿ, ತುರ್ತಾಗಿ ರೈತರ ನೆರವಿಗೆ ಬರಬೇಕು.
- ಮೆಕ್ಕೇ ಜೋಳವನ್ನು ಮಾರುಕಟ್ಟೆ ಬೆಲೆಯಲ್ಲಿ ಖರೀದಿ ಮಾಡಿ ಅದನ್ನು ಪಶು ಸಂಗೋಪನಾ ಇಲಾಖೆಯ ಮೂಲಕ ರೈತರಿಗೆ ದೊರೆಯುವಂತೆ ಮಾಡಬೇಕಿತ್ತು.
- ಅದನ್ನು ಇಲಾಖೆ ಮಾಡದೆ ರೈತರ ಕಷ್ಟವನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಿದೆ.
- ತಕ್ಷಣವೇ ಮೆಕ್ಕೇ ಜೋಳವನ್ನು ಪಶು ಪಾಲಕರಿಗೆ ಲಭ್ಯವಾಗುವಂತೆ ಮಾಡಿದರೆ ರೈತರ ಕಷ್ಟ ಪರಿಹಾರವಾದಂತೆ.
![](https://kannada.krushiabhivruddi.com/wp-content/uploads/2020/03/IMG_20200125_124722-FILEminimizer.jpg)
ರೈತರು ಅಂಜಬೇಕಾಗಿಲ್ಲ:
- ಮೆಕ್ಕೇ ಜೋಳದ ಬೇಡಿಕೆ ಕುಸಿತ, ಬೆಲೆ ಕುಸಿತ ಇವು ತಾತ್ಕಾಲಿಕ.
- ಪರಿಸ್ಥಿತಿ ಇದೇ ರೀತಿಯಲ್ಲಿ ಹೆಚ್ಚು ಸಮಯ ಮುಂದುವರಿಯುವುದಿಲ್ಲ.
- ಈಗಾಗಲೇ ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಲಸಿಕೆಯನ್ನು ಅಭಿವೃದ್ದಿ ಪಡಿಸಲಾಗುತ್ತಿದ್ದು, ಅದರ ಟ್ರಾಯಲ್ ನಡೆಯುತ್ತಿದೆ.
- ಇದು ಕೆಲವೇ ಸಮಯದಲ್ಲಿ ಯಶಸ್ವಿಯಾಗಿಯೇ ಆಗುತ್ತದೆ.
- ಆ ಸಮಯದ ತನಕ ರೈತರು ಬೆಳೆದ ಬೆಳೆಯನ್ನು ಹಾಳು ಮಾಡದೆ ಸರಿಯಾಗಿ ಒಣಗಿಸಿ ದಾಸ್ತಾನು ಇಡಬಹುದು.
ಹಸಿ ಹಸಿಯಾಗಿರುವ ಜೋಳದ ಕಾಳು ಹಾಳಾಗುವ ಕಾರಣ ಅದನ್ನು ಸಮರ್ಪಕವಾಗಿ ಒಣಗಿಸಿಯೇ ದಾಸ್ತಾನು ಇಡಬೇಕು.
- ಮುಂದಿನ ಸೀಸನ್ ನಲ್ಲಿ ಮೆಕ್ಕೇ ಜೋಳದ ಬೆಳೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆ ಇರುವ ಕಾರಣ ಸಮರ್ಪಕವಾಗಿ ಒಣಗಿಸಿ ದಾಸ್ತಾನು ಇಟ್ಟರೆ ಖಂಡಿತವಾಗಿಯೂ ಲಾಭ ಆಗಲಿದೆ.
ಕೃಷಿಕರು ಮುಂದಿನ ಹಂಗಾಮಿನಲ್ಲಿ ಮೆಕ್ಕೇ ಜೋಳ ಬೆಳೆಯುವ ಬದಲಿಗೆ ಅರಳು ಜೋಳದ ಕಡೆಗೆ ಬದಲಾವಣೆ ಮಾಡುವುದು ಸೂಕ್ತ. ಇದು ಆಹಾರ ಬೆಳೆಯಾಗಿದ್ದು, ಉತ್ತಮ ಬೇಡಿಕೆ ಇದೆ.