ಇವರಿಗೆ ಉತ್ತರಿಸುವಷ್ಟಾದರೂ ಕೃಷಿಕ ಬುದ್ದಿವಂತನಾಗಬೇಕು.

ನೀವು ಒಂದು ವಾಟ್ಸ್ ಆಪ್ ಗ್ರೂಪ್ ನೋಡಿ. ಫೇಸ್ ಬುಕ್  ಖಾತೆ ತೆರೆಯಿರಿ. ಅಲ್ಲಿಗೆ ಪ್ರಾರಂಭ. ಬೆಳೆ ಬೆಳೆಸುವಾಗ ಯಾವುದಾದರೂ ಒಂದು ಸಂದೇಹವನ್ನು ನಿಮ್ಮ ಮಿತ್ರರುಗಳಲ್ಲಿ  ಹಂಚಿಕೊಂಡರೆ ಸಾಕು ತಕ್ಷಣ ನಿಮ್ಮ ಕಮೆಂಟ್ ಬಾಕ್ಸ್ ಗೆ  call me xxxxxx8x90 ಹೀಗೆ ನೂರಾರು ನಂಬ್ರಗಳ ಜನ ಸಂದೇಶ ಕಳುಹಿಸುತ್ತಾರೆ. ಸಂಪರ್ಕಿಸಿದರೆ ನಿಮ್ಮನ್ನು ಕುಳಿತುಕೊಳ್ಳಲು ಬಿಡದೆ ಸಂಪರ್ಕ ಸಾಧಿಸುತ್ತಾರೆ.

 

 

  • ಇಷ್ಟಲ್ಲದೆ ಕೆಲವರು ನೇರವಾಗಿ ತಮ್ಮ ಉತ್ಪನ್ನಗಳ ಬಣ್ಣ ಬಣ್ಣದ ಬ್ರೋಶರ್ ಗಳನ್ನು ಅಟಾಚ್ ಮಾಡುತ್ತಾರೆ.
  • ಕೆಲವರು ಇದಕ್ಕಾಗಿಯೇ  ಕೆಲವು ತಿದ್ದಿ ತಿಡಿದ ವೀಡಿಯೋ ಗಳನ್ನೂ ತಯಾರು ಮಾಡಿ ಪ್ರಕಟಿಸುತ್ತಾರೆ.

ಇದು ಮೋಸದ ದಂಧೆ:

  • ನಮ್ಮದೇ ಕಮೆಂಟ್ ಬಾಕ್ಸ್ ಒಳಗೆ  ಒಬ್ಬರು ಹೀಗೆ ಒಂದು ಸಲಹೆ  ಹೇಳಿದ್ದರು.

100 ಮಿಲಿ ಮಜ್ಜಿಗೆ, 5 ಲೀ. ನೀರು ಅದಕ್ಕೆ 200 ಗ್ರಾಂ ಬೆಲ್ಲ,100 ಗ್ರಾಂ ಅನ್ನ,  ಸೇರಿಸಿ ಅದನ್ನು ಚೆನ್ನಾಗಿ ಕಲಕಿ  ಅದಕ್ಕೆ 50 ಗ್ರಾಂ ಈಸ್ಟ್ ಹಾಕಿ ಮತ್ತೆ ಕಲಕಿ ನೆರಳಿನಲ್ಲಿ ಮುಚ್ಚಿ ಇಡಿ. 7 ದಿನಗಳ ಕಾಲ ಕಲಕುತ್ತಾ ಇದ್ದು, 8 ನೇ ದಿನಕ್ಕೆ ಇದು ಒಂದು ಪೆಸ್ಟಿಸೈಡ್, ಇನ್ಸೆ ಕ್ಟಿಸೈಡ್ , ಫಂಗಿಸೈಡ್ ಮತ್ತು ಆಂಟಿ ಬಯೋಟಿಕ್ ಆಗುತ್ತದೆ ಎಂದಿದ್ದಾರೆ.

  • ಇದನ್ನು ಓದಿದಾಗ ಸ್ವಲ್ಪ ಕೃಷಿ ಜ್ಞಾನ ಇದ್ದವನಿಗೆ  ಇದೆಷ್ಟು ಬೊಗಸ್ ಎಂದು ತಿಳುವಳಿಕೆಗೆ ಬಾರದಿರದು.
  • ಇಲ್ಲಿ ಅವರಿಗೆ ಇನ್ಸೆಕ್ಟಿಸೈಡ್, ಪೆಸ್ಟಿಸೈಡ್  ಎರಡೂ ಬೇರೆ ಬೇರೆ ಎಂದು ಗೊತ್ತಿಲ್ಲ.

ಎಲ್ಲಾ ಬೋಗಸ್ ತಂತ್ರಗಳು:

  • ಇದು ಒಂದು ಜಾದೂ ಆದರೆ ಮಾತ್ರ ಒಪ್ಪಿಕೊಳ್ಳಬಹುದು.
  •  ನಿಜವಾಗಿ ಇದರಲ್ಲಿ ಈ ಗುಣ ಇಲ್ಲ. ಮೊಸರು ಅಥವಾ ಮಜ್ಜಿಗೆಯಲ್ಲಿ ಲ್ಯಾಕ್ಟೋ ಬ್ಯಾಸಿಲಸ್ ಜೀವಾಣು ಇದ್ದರೆ, ಬೆಲ್ಲ ಮತ್ತು ಅನ್ನ ಅದಕ್ಕೆ ಆಹಾರ ರೂಪದ ವಸ್ತು.
  • ಇದಕ್ಕೆ ಬಳಸುವ ಈಸ್ಟ್ ಒಂದು ಜೀವಾಣು.
  • ಮೇಲಿನ ವಸ್ತುಗಳು ಈಸ್ಟ್ ನಲ್ಲಿರುವ ಜೀವಾಣು( ಶಿಲೀಂದ್ರ)ವನ್ನು ಬದುಕಿಸಿ ಅದನ್ನು ಸಿಂಪರಣೆ ಮಾಡಿದಾಗ ಅದು ಸಸ್ಯಗಳಿಗೆ ರೋಗ ನಿರೋಧಕ ಶಕ್ತಿ ಕೊಡಬಹುದೇ ವಿನಹ ಅದು  ಜೈವಿಕ ಕೀಟನಾಶಕ, ರೋಗ ನಾಶಕ ಅಲ್ಲ.

ಇಂತದ್ದನ್ನು ಪ್ರಚಾರ ಮಾಡುವ ಸಲುವಾಗಿಯೇ ನೂರಾರು ಜನ  ಸಾಮಾಜಿಕ ಮಾಧ್ಯಮಗಳ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ರೈತರೇ ಯಾಕೆ ಟಾರ್ಗೆಟ್:

  • ನಮ್ಮ ದೇಶದಲ್ಲಿ ಬಹುತೇಕ ರೈತರು ಕೃಷಿಯ ವೈಜ್ಞಾನಿಕ ಜ್ಞಾನವನ್ನು ಹೊಂದಿಲ್ಲ.
  • ಇದೇ ನಮ್ಮ ವೀಕ್ ನೆಸ್. ಇದನ್ನು ನಗದೀಕರಣ ಮಾಡಿಕೊಳ್ಳುವ ಉದ್ದೇಶವೇ ಇವರದ್ದು.
  • ಇದರಲ್ಲಿ ಬಹುತೇಕ ಸಾವಯವ ಮತ್ತು ಸಸ್ಯ ಜನ್ಯ ಉತ್ಪನ್ನಗಳು.
  • ನಮ್ಮ ದೇಶದಲ್ಲಿ ಸಾವಯವ ಮತ್ತು ಸಸ್ಯಜನ್ಯ ಉತ್ಪನ್ನಗಳನ್ನು  ತಯಾರು ಮಾಡಿ ಮಾರಾಟ ಮಾಡುವರೇ ಯಾವುದೇ ಕಾನೂನು ನಿರ್ಭಂದಗಳು ಇಲ್ಲದ ಕಾರಣ ಅದನ್ನು ಬಳಸಿಕೊಂಡು ಈ ವ್ಯವಹಾರ ನಡೆಯುತ್ತಿದೆ.

ನಿಮಗೆ ಇದು ಗೊತ್ತಿದೆಯೋ ಇಲ್ಲವೋ-ಕೃಷಿ ಒಳಸುರಿ ಮಾರಾಟ ವ್ಯವಹಾರದಲ್ಲಿ ಮಾರಾಟ ಮಾಡುವವರ ಕಮಿಷನ್ 40-50 % ತನಕ ಇರುವುದು ಮಾಮೂಲು. ಈ ಕಮಿಷನ್ ವ್ಯವಹಾರಕ್ಕೇ  ನಿಮ್ಮ ಮೇಲೆ  ಅವರಿಗೆ ಅನುಕಂಪ

ರೈತರು ಬುದ್ದಿವಂತರಾಗಬೇಕು:

  • ನೀವು ಯಾವುದೇ ಇತರ ವೃತ್ತಿ ಮಾಡುವವರನ್ನು ಗಮನಿಸಿ. ಅವರು ತಮ್ಮ ವೃತ್ತಿಯನ್ನು ಸಿಕ್ಕ ಸಿಕ್ಕವರ ಸಲಹೆ ಕೇಳಿ ಮಾಡುವುದಿಲ್ಲ. ಆ
  • ವೃತ್ತಿ ಹೇಗೆ ಮಾಡಬೇಕು ಎಂಬ ಮಾನದಂಡ ಇರುತ್ತದೆಯೋ ಆ ಪ್ರಕಾರ ಮಾಡುತ್ತಾರೆ.
  • ಆದರೆ ಕೃಷಿಕರು ತಮ್ಮ  ವೃತ್ತಿಗೆ  ಇದನ್ನು ಹೊಂದಿಲ್ಲದಿರುವುದೇ ನಮ್ಮ ವೀಕ್ ನೆಸ್.
  • ಕೃಷಿ ವೃತ್ತಿಗೂ ಒಂದು ಪ್ಯಾಕೇಜ್ ಆಫ್ ಪ್ರಾಕ್ಟೀಸ್ ಇದೆ.
  • ಆ ಪ್ರಕಾರ ಹೋದರೆ ಸಿಕ್ಕ ಸಿಕ್ಕವರ ಸಲಹೆಯನ್ನು ಕೇಳಬೇಕಾಗಿಲ್ಲ.
  • ನಮ್ಮ ವೃತ್ತಿ ಕೃಷಿ. ಯಾವ ಬೆಳೆಯನ್ನು ಬೆಳೆಯಬೇಕೆಂದಿದ್ದೇವೆಯೋ ಆ ಬೆಳೆ ಬಗ್ಗೆ ಬಹುತೇಕ ಜ್ಞಾನವನ್ನು ಸಂಪಾದಿಸಿಕೊಂಡೇ ಅದಕ್ಕೆ  ಇಳಿಯಬೇಕು.
  • ಕೆಲವು ಹೊಸ ಅನುಭವಗಳು ಬೇಡವೆಂದಲ್ಲ. ಆದನ್ನು ನೋಡಬೇಕು.
  • ಅದರಲ್ಲಿರುವ ಪೂರ್ವಾಪರವನ್ನು ವಿಮರ್ಶೆ ಮಾಡಿ ಸೂಕ್ತ ಕಂಡರೆ ಮಾತ್ರ ಅನುಸರಿಸಬೇಕು.
  • ಆ ಮಟ್ಟಕ್ಕೆ ನಾವು ರೈತರು ಮುಂದುವರಿಯದಿದ್ದರೆ , ನಮ್ಮ ಬೆವರು ಸುರಿಸಿದ ಸಂಪಾದನೆಗೆ ಪಾಲುದರಾರಾಗಿ ಹಲವಾರು ಉತ್ಪನ್ನ ಮಾರಾಟ ಮಾಡುವವರು ಮುಂದೆ ನಿಲ್ಲುತ್ತಾರೆ.

ಕೃಷಿಕರು ತಮ್ಮ ವೃತ್ತಿಗೆ ಬೇಕಾದ ಸಲಹೆ ಸೂಚನೆ ಮತ್ತು ತಾಂತ್ರಿಕ ನೆರವಿಗೆ ಸಂಬಂಧಿಸಿದ ಸಂಶೋಧನಾ ಕೇಂದ್ರ,ಅಥವಾ ಅಭಿವೃದ್ದಿ ಇಲಾಖೆಗಳ ಸಲಹೆ ಪಡೆಯಲು ಹಿಂದೇಟು ಹಾಕಬಾರದು. ಅವರು ನಮಗೆ ಸಹಾಯ ಮಾಡಲಿಕ್ಕಾಗಿಯೇ ಸರಕಾರ  ಅವರನ್ನು ಸಂಬಳ ಕೊಟ್ಟು ನೇಮಿಸಿದೆ. ಇದು ನಮಗೆಲ್ಲಾ ಗೊತ್ತಿರಬೇಕು.

ರೈತರು ಹೀಗೆ ಕೇಳಿ:

  • ಬೆಳೆಯ ಇಳುವರಿ- ರೋಗ- ಕೀಟ  ಸಮಸ್ಯೆಗೆ ಪರಿಹಾರ ಕೊಡುವ ಈ ಮಾರಾಟಗಾರರಲ್ಲಿ ನೀವು ವ್ಯವಹರಿಸುವುದೇ ಆಗಿದ್ದರೆ , ಅವರ ಉತ್ಪನ್ನವನ್ನು ಬಳಸಿ ಫಲಿತಾಂಶ ನೋಡಿ  ಪಾವತಿಯನ್ನು ಮಾಡಿ.
  • ಯಾವುದೇ ಕಾರಣಕ್ಕೆ ಸುಂದರವಾಗಿ ಮಾತಾಡುತ್ತಾರೆ ಅಥವಾ ನಿಮ್ಮ ಸುಖ ದುಖಃಗಳನ್ನು ಚೆನ್ನಾಗಿ ಕೇಳುತ್ತಾರೆ ಎಂಬ ಕಾರಣಕ್ಕೆ ವ್ಯಾಪಾರ ಮಾಡಬೇಡಿ.
  • ನಿಮ್ಮ ಬೇಸಾಯದ ಖರ್ಚು ಎಷ್ಟು ಕಡಿಮೆ ಆಗುತ್ತದೆಯೋ ಅದರ ಮೇಲೆ ನಿಮ್ಮ ಕೃಷಿ ಲಾಭದಾಯಕವಾಗುತ್ತದೆ.

ಕೃಷಿ ಉತ್ಪನ್ನ ವ್ಯಾಪಾರಕ್ಕೆ ಬರಲಿ:

  • ಕೃಷಿಕರಿಗೆ ಬೆಳೆ ಒಳಸುರಿ ಪೂರೈಕೆಗೆ ಲಕ್ಷಾಂತರ ಜನ ಇದ್ದಾರೆ.
  • ಬೆಲೆ ಪೈಪೋಟಿ ಇದೆ.
  • ಆದರೆ ರೈತರು ಬೆಳೆದ ಉತ್ಪನ್ನವನ್ನು ಸ್ಪರ್ದಾತ್ಮಕ ಬೆಲೆಗೆ ಕೊಳ್ಳುವರೇ  ಈ ಜನ ಯಾಕೆ ಮುಂದೆ ಬರುತ್ತಿಲ್ಲ ಯೋಚಿಸಿ.
  • ಇಲ್ಲೇ ಇದೆ ರೈತರು ಎಂಬ ವರ್ಗ ಸಮಾಜದಲ್ಲಿ ಎಲ್ಲರಿಂದಲೂ ಮೋಸಕ್ಕೆ ಒಳಗಾಗಲು ಇರುವವರು ಎಂಬುದು.

ಯಾರೇ ನಿಮ್ಮ ಕಮೆಟ್ ಬಾಕ್ಸ್ ಗೆ ಕಾಲ್ ಮಿ. ಯೂಸ್ ದಿಸ್, 100% ರಿಸಲ್ಟ್  ಎಂದೆಲ್ಲಾ ಬರೆಯುತ್ತಾರೆಯೋ ಅವರಿಗೆ ಕೇಳಿ. ಒಂದು ಕ್ವಿಂಟಾಲು ಕರಿಮೆಣಸು ಅಥವಾ ಇನ್ಯಾವುದೇ ಉತ್ಪನ್ನವನ್ನು ಮಾರುಕಟ್ಟೆ ದರಕ್ಕಿಂತ ಎಷ್ಟು ಹೆಚ್ಚು ದರಕ್ಕೆ  ಕೊಳ್ಳುತ್ತೀ ಎಂದು.

Leave a Reply

Your email address will not be published. Required fields are marked *

error: Content is protected !!