ತೆಂಗಿನ ಮರಕ್ಕೆ ಗೊಬ್ಬರವೇ ಬೇಕಾಗಿಲ್ಲ.

ಪ್ರಕೃತಿಯ ವೈಚಿತ್ರ್ಯ ನೋಡಿ. ಕಾಡಿನಲ್ಲಿರುವ ಒಂದು ಸಸಿ ಬೆಳೆಯಬೇಕಾದರೆ ಮತ್ತೊಂದು ದೊಡ್ದ ಮರದ ಆಸರೆ ಬೇಕು. ನಿರ್ದಿಷ್ಟ ಹಂತಕ್ಕೆ  ಬೆಳೆದ ಮೇಲೆ ಅದಕ್ಕೆ  ಯಾವ ಆಸರೆಯೂ ಬೇಡ. ಅದೇ ತನ್ನನ್ನು ದಷ್ಟ ಪುಷ್ಟವಾಗಿಸುತ್ತಾ ಬೆಳೆಸುತ್ತದೆ. ಅದೇ ತತ್ವ ನಾವು ಬೆಳೆಸುವ ಬೆಳೆಗಳಿಗೆ ಯಾಕೆ ಅನ್ವಯವಾಗಲಾರದು? ಆಗಿಯೇ ಆಗುತ್ತದೆ.

12 ತಿಂಗಳು 12 ಗೊನೆ. ಇದು ಬರೇ ತೆಂಗಿನ ತ್ಯಾಜ್ಯಗಳಿಂದ.
  • ಕೃಷಿಯಲ್ಲಿ ನಮ್ಮ ಬೇಡಿಕೆಗಳು ದೊಡ್ದದು.  ಸಸ್ಯದ ಅವಶ್ಯಕತೆಗೆ ಬೇಕಾದುದನ್ನು ನಾವು  ಕಬಳಿಸುತ್ತೇವೆ.  
  • ಉರುವಲಿಗೆ ಮತ್ತು ಇನ್ನಿತರ ಬಳಕೆಗೆ ನಾವು ತೆಂಗಿನ ಸರ್ವಾಂಗವನ್ನೂ  ಉಪಯೋಗಿಸುತ್ತೇವೆ.
  • ಅದಕ್ಕೆ  ಮಾತ್ರ ಉಪವಾಸ. ಸಸ್ಯಕ್ಕೆ ಬೇಕಾದುದು ಸಿಗದ ಕಾರಣ ಇಳುವರಿ ಖೊತಾ. 
  • ಮರ ಸಾಕಲು ನಾವು ಹೊರಗಡೆಯಿಂದ ಕೃತಕ ಗೊಬ್ಬರವನ್ನು ಬಳಸುತ್ತೇವೆ.

ತೆಂಗು ಸ್ವಾವಲಂಬಿ ಮರ:

  • ಒಂದು ತೆಂಗಿನ ಮರದ ಒಂದು ಹೆಡೆಯ ಒಣ ತೂಕ ಸುಮಾರು 4 ಕಿಲೋ.
  • ಒಂದು ತೆಂಗಿನ ಮರ ವರ್ಷಕ್ಕೆ ಸರಾಸರಿ 12 ಗರಿಗಳನ್ನು ಕೊಡುತ್ತದೆ.
  • ಇದರ ಒಟ್ಟು ತೂಕ ಸುಮಾರು 50 ಕಿಲೊ. 
  • ಒಂದು ಹೂ ಗೊಂಚಲಿನ ತೂಕ ಸುಮಾರು ½ ಕಿಲೊ.
  •  ವರ್ಷಕ್ಕೆ ಒಂದು ಮರ ಸರಾಸರಿ 10 ಹೂ ಗೊಂಚಲನ್ನು ಕೊಡುತ್ತದೆ.

  • ಇದರ ಒಟ್ಟು ತೂಕ ಸುಮಾರು 5 ಕಿಲೋ.
  • ಒಂದು ತೆಂಗಿನ ಕಾಯಿಯ ಸಿಪ್ಪೆ ಸುಮಾರು 500  ಗ್ರಾಂ.
  • ವರ್ಷಕ್ಕೆ ಮರವೊಂದು 75  ಕಾಯಿಯ ಇಳುವರಿ ಕೊಟ್ಟರೂ ಸಹ  35 ಕಿಲೋ ತೂಕ.
ನೀರಾವರಿ ತ್ಯಾಜ್ಯ ಒದ್ದೆಯಾಗುವಂತಿರಬೇಕು.

ಇನ್ನುಳಿದಂತೆ ತೆಂಗಿನ ಮರದಲ್ಲಿ ಏನಿಲ್ಲವೆಂದರೂ ವರ್ಷಕ್ಕೆ 1 ಕಿಲೋ ಒಣ ತೂಕದಷ್ಟು ಇತರ ತ್ಯಾಜ್ಯಗಳೂ ಲಭ್ಯವಾಗುತ್ತದೆ.

ತೆಂಗಿನ  ಮರಕ್ಕೆ ಎಷ್ಟು ಬೇಕು:

  • ತೆಂಗಿನ ಮರದ ತ್ಯಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೋಷಕಗಳು ಇರುತ್ತವೆ. 
  • ಪೊಟ್ಯಾಶಿಯಂ, ರಂಜಕ , ಮತ್ತು ಸಾರಜನಕ ಅಂಶಗಳು ಇದರಲ್ಲಿ ಇರುತ್ತವೆ.  
  • ಒಂದು ತೆಂಗಿನ ಮರಕ್ಕೆ ವರ್ಷಕ್ಕೆ 50 ಕಿಲೋ ಸಾವಯವ ಗೊಬ್ಬರಗಳನ್ನು ಬಳಸಲು ಶಿಫಾರಸು ಮಾಡಲಾಗುತ್ತದೆ.
  • ನಾವು ರೈತರು ಈ ಸಾವಯವ ಗೊಬ್ಬರಕ್ಕಾಗಿ ಕೊಟ್ಟಿಗೆ ಗೊಬ್ಬರ, ಕೋಳಿ – ಕುರಿ ಗೊಬ್ಬರಗಳನ್ನು ಹಣ ಕೊಟ್ಟು ಖರೀದಿಸಿ ಬಳಸುತ್ತೇವೆ.
  • ಇದಕ್ಕಾಗಿ ನಾವು ಮಾಡುವ ಖರ್ಚು ಏನಿಲ್ಲವೆಂದರೂ 200 ರೂ. ಗಳು.
  •   ಈ ಖರ್ಚನ್ನು ಉಳಿಸಿದರೆ  ನಮಗೆ ಒಂದು ತೆಂಗಿನ ಮರದಿಂದ 200 ರೂ. ಲಾಭವಾದಂತೆ.

ರಾಸಾಯನಿಕ ಗೊಬ್ಬರಗಳು:

  • ತೆಂಗಿನ ಮರದಿಂದ ಅಧಿಕ ಇಳುವರಿ ಪಡೆಯಲು 1.200  ಗ್ರಾಂ ಯೂರಿಯಾ, 1.5 ಕಿಲೋ ರಾಕ್ ಫೋಸ್ಫೇಟ್ ಅಥವಾ 750 ಗ್ರಾಂ ಡಿಎಪಿ ಮತ್ತು  2 ಕಿಲೋ ಮ್ಯುರೇಟ್ ಆಫ್ ಪೊಟ್ಯಾಷ್ ಗೊಬ್ಬರ ಕೊಡಬೇಕು ಎಂಬುದು ಶಿಫಾರಸು.
  • ಇದರ ಒಟ್ಟು ಖರ್ಚು 10+15+40 =65  ರೂಪಾಯಿಗಳು.
  • ಈ ಖರ್ಚನ್ನು ತೆಂಗಿನ ಮರದ ಎಲ್ಲಾ ತ್ಯಾಜ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿದರೆ ½  ಪಾಲು ಉಳಿತಾಯ ಮಾಡಬಹುದು.
ತೆಂಗಿನ ಸಿಪ್ಪೆಯನ್ನು ಮಧ್ಯಂತರದಲ್ಲಿ ಕಾಲುವೆ ಮಾಡಿ ಹಾಕಿ.

ಹೇಗೆ ಬಳಸುವುದು:

  • ತೆಂಗಿನ ಮರದ ಗರಿಯನ್ನು ಸಾಧ್ಯವಾದಷ್ಟು ಸಣ್ಣ ತುಂಡುಗಳನ್ನಾಗಿ ಮಾಡಿ ಮರದ ಬುಡಭಾಗವೂ ಸೇರಿದಂತೆ  ಮರದ ಗರಿಗ ವೈಶಾಲ್ಯತೆಗೆ ಸಮನಾಗಿ ನೆಲಕ್ಕೆ ಹಾಸಬೇಕು.   
  • ಅದು ತ್ವರಿತವಾಗಿ ಕಳಿಯುವಂತಹ ನೀರಾವರಿ ವ್ಯವಸ್ಥೆ ಬೇಕು.
  • ಸಾರಜನಕ ಅಧಿಕ ಇರುವ ಗೆಲೆರಿಸಿಡಿಯಾ, ಚೊಗಚೆ, ಸ್ಲರಿ ನೀರು ಕೊಟ್ಟಾಗ ಇದು ಸಂಪದ್ಭರಿತ ಪೋಷಕವಾಗುತ್ತದೆ.
  • ಇವುಗಳನ್ನು ಬುಡದಲ್ಲಿ ಕುಳಿತುಕೊಳ್ಳುವಂತೆ ಬುಡದಿಂದ 2 ಮೀ. ದೂರದಲ್ಲಿ ಸಣ್ಣಗೆ ಮಣ್ಣನ್ನು ಅಗೆದು ಆ ಜಾಗದಲ್ಲಿ ಹಾಕಿ ಅದೇ ಮಣ್ಣನ್ನು ಮೇಲೆ ಹಾಕಬೇಕು.

ತೆಂಗಿನ ಸಿಪ್ಪೆ ಹೊರತಾಗಿ ಉಳಿದೆಲ್ಲಾ ತ್ಯಾಜ್ಯಗಳನ್ನೂ ಈ ಭಾಗಕ್ಕೆ ಹಾಕಬೇಕು. ತೆಂಗಿನ ಸಿಪ್ಪೆಯನ್ನು ಮರದ ಗರಿಗಳು ಹರಡಿರುವ ಭಾಗದ ಸಮಾನಾಂತರಕ್ಕೆ ಹಾಕಬೇಕು. ಇಷ್ಟು ಮಾಡಿದರೆ ತೆಂಗಿನಲ್ಲಿ ವರ್ಷಕ್ಕೆ ಸರಾಸರಿ 100 ಕಾಯಿಯ ಇಳುವರಿ ಪಡೆಯಬಹುದು.

ಬಹು ಪ್ರಯೋಜನ:

  • ತೆಂಗಿನ ಮರದ ತ್ಯಾಜ್ಯಗಳನ್ನು ಅದೇ ಮರದ ಬುಡಕ್ಕೆ ಹಾಕುವುದರಿಂದ ತೆಂಗಿಗೆ ಕೊಡುವ ನೀರಿನಲ್ಲಿ ½  ಪಾಲು ಉಳಿತಾಯ ಮಾಡಬಹುದು.
  • 5  ವರ್ಷಗಳ ತನಕ ಹೀಗೆ ಮಾಡಿದರೆ ಮತ್ತೆ ರಾಸಾಯನ್ಕ ಗೊಬ್ಬರಗಳನ್ನು ಇನ್ನೂ ಕಡಿಮೆ ಮಾಡಬಹುದು.

ಇದನ್ನು ನಿರಂತರವಾಗಿ ಮಾಡುತ್ತಾ ಇದ್ದರೆ ತೆಂಗಿನ ತೋಟದಲ್ಲಿ ಮಣ್ಣು ಸಡಿಲವಾಗಿ ರಾಸಾಯನಿಕ ಗೊಬ್ಬರಕ್ಕೆ  ಮರಗಳು ಉತ್ತಮವಾಗಿ ಸ್ಪಂದಿಸಿ, ಪ್ರತೀ ತಿಂಗಳೂ ಒಂದು ಹೂ ಗೊಂಚಲು, ಅದರಲ್ಲಿ ಸರಾಸರಿ 15 ಕಾಯಿಯ ಇಳುವರಿ ಪಡೆಯಬಹುದು.

ತೆಂಗು  ಇರಲಿ, ಕಂಗು ಇರಲಿ ಕಬ್ಬು, ಹತ್ತಿ, ಜೋಳ, ಭತ್ತ, ಇನ್ಯಾವುದೇ ಬೆಳೆ ಇದ್ದರೂ  ಅದರ ಫಸಲನ್ನು ಮಾತ್ರ ನಾವು ಬಳಸಿ ಉಳಿದುದನ್ನು ಅದಕ್ಕೆ ಕೊಟ್ಟರೆ ಅದನ್ನು ಸಾಕುವುದು ತುಂಬಾ ಸುಲಭ.

 

One thought on “ತೆಂಗಿನ ಮರಕ್ಕೆ ಗೊಬ್ಬರವೇ ಬೇಕಾಗಿಲ್ಲ.

Leave a Reply

Your email address will not be published. Required fields are marked *

error: Content is protected !!