ಮಿಡತೆಗಳು – ನಮ್ಮ ತಲೆಯೊಳಗೆ ಹೊಕ್ಕಿದ ಹುಳಗಳು!

ಉತ್ತರ ಭಾರತದ ಹರ್ಯಾಣ, ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ , ಮಧ್ಯಪ್ರದೇಶ ಮುಂತಾದ ಕಡೆ ಮಿಡತೆಗಳು ರೈತರ ಹೊಲಕ್ಕೆ ಧಾಳಿ ಮಾಡಿ ದ ವರದಿ ಇದೆ. ಈಗ ಅದು ಮಹಾರಾಷ್ಟ್ರದ  ನಾಗ್ಪುರ ಸುತ್ತಮುತ್ತ  ಇದೆಯಂತೆ. ಇನ್ನು ಇದು ಮಹಾರಾಷ್ಟ್ರದ ಗಡಿಯಾದ ಗುಲ್ಬರ್ಗಾಕ್ಕೆ ಬಂದರೆ ಏನು ಗತಿ ಎಂದು ರೈತರು ಆತಂಕದಲ್ಲಿದ್ದಾರೆ.

Picture curtesy: The  National.
  • ಅಂತದ್ದೇನೂ ಆಗುವುದಿಲ್ಲ. ಮೂಲದಲ್ಲಿ ಇದ್ದಷ್ಟು ಸಂಖ್ಯೆ ಮುಂದುವರಿದಂತೆ ಕಡಿಮೆಯಾಗಿದೆ.
  • ಇನ್ನು ಕರ್ನಾಟಕಕ್ಕೆ ಬಂದಾಗ ಅದರ ಸಂಖ್ಯೆ ತುಂಬಾ ಕಡಿಮೆಯಾಗಬಹುದು.

 ಈ ಮಿಡತೆಗೆಳು ನಾವು ಕರೆಯುವ ಗ್ರಾಸ್ ಹೋಪರ್ಸ್  ತರಹದ (Locust swarm) ಒಂದು ಸಣ್ಣ ಕೀಟ. ಇವುಗಳು ಸಾಮಾನ್ಯ ಭಕ್ಷಕಗಳು. ಇವು ಬಂದರೆ ಅಂತದ್ದೇನೂ ಆಗುವುದಿಲ್ಲ.  ಬಹುಷಃ ಇವು ದಕ್ಷಿಣ ಭಾರತಕ್ಕೆ ಕಾಲಿಟ್ಟರೆ  ಇಲ್ಲಿನ ಪರಿಸರ ಅದರ ಕಾರುಬಾರನ್ನು ನಿಯಂತ್ರಿಸಿದರೂ ಅಚ್ಚರಿ ಇಲ್ಲ.

ಇಂತದ್ದೇ ಕೀಟ. ಅಂತಹ ಆತಂಕಕಾರಿ ಅಲ್ಲವೇ ಅಲ್ಲ.

ಜೀವ ವೈವಿಧ್ಯಗಳು  ರಕ್ಷಿಸಬಲ್ಲವು:

  • ಈ ತನಕ ಮಿಡತೆಗಳು ಹಾರಾಡಿ ಕಾರುಬಾರು ನಡೆಸಿದ ಪ್ರದೇಶಗಳು ಉತ್ತರ ಭಾರತದ ಮೈದಾನ ಪ್ರದೇಶಗಳು.
  • ಇಲ್ಲಿ ಬೆಳೆ ಬಿಟ್ಟರೆ ಇರುವುದು ಅತ್ಯಲ್ಪ ಕುರುಚಲು ಹಸಿರಿಲ್ಲದ ಸಸ್ಯ ಸಂಕುಲಗಳು.
  • ನಮ್ಮಲ್ಲಿರುವಂತೆ ಕಾಡುಮೇಡುಗಳಿಲ್ಲ. ಈಗ ಈ ಮಿಡತೆಗಳು ನಾಗ್ಪುರಕ್ಕೆ ಬಂದಿವೆ ಎಂದಾದರೆ ಇಲ್ಲಿನ ಪಶ್ಚಿಮ ಘಟ್ಟದ  ಕಾಡು ಮತ್ತು ಅಲ್ಲಿನ ಸಸ್ಯಗಳು – ಜೀವ ವೈವಿಧ್ಯಗಳು ಇದರ  ಕಾರುಬಾರನ್ನು  ಸ್ವಲ್ಪ ಮಟ್ಟಿಗೆಯಾದರೂ ಕುಗ್ಗಿಸಬಹುದು.
  • ಮುಂದಕ್ಕೆ ಬಂದಂತೆ ಇದರ ತೊಂದರೆಯನ್ನು ಹತ್ತಿಕ್ಕಬಲ್ಲ ನೈಸರ್ಗಿಕ ವ್ಯವಸ್ಥೆಗಳು ಹೆಚ್ಚು ಕಂಡು ಬರುತ್ತದೆ.

ಸಮತೋಲನ ಇದ್ದರೆ ಅಂಜಿಕೆ ಇಲ್ಲ:

  • ಪ್ರಕೃತಿ ಎಂಬುದು ತನ್ನದೇ ಆದ ಕೆಲವು ವ್ಯವಸ್ಥೆಗಳನ್ನು ಹೊಂದಿದೆ.
  • ಇದನ್ನು ಮಾನವ ಅರ್ಥ ಮಾಡಿಕೊಳ್ಳುವುದೇ ಅಸಾಧ್ಯ. ಒಂದು ಮಿಡತೆ ತನ್ನ ದೇಹ ತೂಕದಷ್ಟೇ ಹಸಿರು ಪದಾರ್ಥವನ್ನು ತಿನ್ನಬಲ್ಲುದು ಎನ್ನುತ್ತಾರೆ.
  • ಆದರೆ ನಮ್ಮ ಪ್ರಕೃತಿಯಲ್ಲಿ ಒಮ್ಮೆಗೇ ನೂರಾರು ಮಿಡತೆಗಳನ್ನು ತಿನ್ನಬಲ್ಲ ಪಕ್ಷಿಗಳು ಇವೆ.
  • ಇದಲ್ಲದೆ ಮಿಡತೆಗಳನ್ನು ಭಕ್ಷಿಸಬಲ್ಲ ಪರಭಕ್ಷಕ ಕೀಟಗಳೂ ಇವೆ.
  • ಈಗ   ನಮ್ಮಲ್ಲಿ ಇರುವ ಈ ಸ್ವಯಂ ನಿಯಂತ್ರಕಗಳು ಅಳಿವಿನ ಅಂಚಿಗೆ ಹೋಗಿವೆ ಅಷ್ಟೇ.

ಕೀಟನಾಶಕ ಪರಿಹಾರವಲ್ಲ:

  • ಕೃಷಿ ಇಲಾಖೆ ಮತ್ತು ಕೆಲವು ರೈತಪರ ಕಳಕಳಿಯ ಜನ ಈ ಮಿಡತೆಗಳನ್ನು ಕೀಟನಾಶಕ ಬಳಸಿ ನಾಶ ಮಾಡಬೇಕು ಎನ್ನುತ್ತಾರೆ.
  • ತಕ್ಷಣದ ಪರಿಹಾರಕ್ಕೆ ಈ ಕೀಟನಾಶಕದ ಸಿಂಪರಣೆ ಪರಿಹಾರವಾಗಬಹುದಾದರೂ ಇದರಿಂದ ಮುಂದೆಯೂ ಇಂಥಹ ಆತಂಕಗಳು ಎದುರಾಗುವ ಸಾಧ್ಯತೆ ಇದೆ.
  • ಮಿಡತೆ ಬಂದರೆ ಎಂದು ಕೀಟನಾಶಕ ದಾಸ್ತಾನು ಮಾಡುವುದು ಒಂದು ಮೂರ್ಖತನ ಅಷ್ಟೇ.
  • ಕೀಟನಾಶಕ ಸಿಂಪರಣೆಯಿಂದ ಸಾಕಷ್ಟು ಉಪಕಾರೀ ಕೀಟಗಳೂ ನಾಶವಾಗುತ್ತವೆ.

ಯಾಕೆ ಬಂತು ಇಲ್ಲಿದೆ ರಹಸ್ಯ:

  • ಯಾವುದೇ ಒಂದು ಜೀವಿ ಪ್ರಾಭಲ್ಯವಾಗಬೇಕಾದರೆ ಅದರ ವೈರಿ ಜೀವಿಯ ಸರ್ವನಾಶ ಆಗಿರಬೇಕು.
  • ಇದರ ಮೂಲ ಇರಾನ್ ಮತ್ತು  ಪಾಕಿಸ್ಥಾನ ಎಂಬ ಉಲ್ಲೇಖ ಇದೆ.
  • ಇದು ಮರುಭೂಮಿಯ ಕೀಟವಾಗಿದ್ದು, ಅಲ್ಲಿ ಇದರ ಯಾವುದೇ ಭಕ್ಷಕ ಜೀವಿಗಳು ಇಲ್ಲದ ಕಾರಣ ಅವು ಮಿಲಿಯಾಂತರ ಸಂಖ್ಯೆಯಲ್ಲಿ ಹೆಚ್ಚಿವೆ.
  • ಇದರ ಒಟ್ಟು ಜೀವಿತಾವಧಿ 3-4 ತಿಂಗಳು.
  • ಇವು ಒಂದೇ ಕಡೆ ನಿರ್ದಿಷ್ಟ ಜಾಗದಲ್ಲಿ ವಾಸ ಮಾಡದೆ ಇರುವುದರಿಂದ ಅದರ ವೈರಿಗಳು ಪ್ರವೇಶ ಆಗಲಿಲ್ಲ.
  • ಇವು ಹಸಿರು  ಹೆಚ್ಚು ಇರುವ ಸ್ಥಳಕ್ಕೆ ಬಂದರೆ ಅಲ್ಲಿ ಹೆಚ್ಚು ಸಮಯ ನಿಂತರೆ ಅದರ ವೈರಿಗಳು ಬಂದೇ ಬರುತ್ತವೆ.
  • ಬಹುಷಃ ಇದು ಆಹಾರದ ಹುಡುಕಾಟದಲ್ಲೇ  ಪ್ರದೇಶದಿಂದ ಪ್ರದೇಶಕ್ಕೆ  ವಲಸೆ ಹೊರಟಿರಬೇಕು.

ಕೀಟಗಳನ್ನು ಭಕ್ಷಿಸುವ ಪಕ್ಷಿ ಸಂಕುಲಗಳು ಇಂದು ಕೀಟನಾಶಕ ಸಿಂಪರಣೆ ಮಾಡಿದ ಪರಿಣಾಮದಿಂದ  ಅವನತಿಯಗುತ್ತಾ ಇದೆ. ಕೀಟ ನಿಯಂತ್ರಣಕ್ಕಾಗಿ ಹೊಲಗಳಿಗೆ ಕೀಟನಾಶಕ ಸಿಂಪಡಿಸುತ್ತೇವೆ. ಆ ಧವಸ ಧಾನ್ಯಗಳನ್ನು ತಿಂದ  ಪಕ್ಷಿಗಳು ತಮ್ಮಸಂತಾನಾಭಿವೃದ್ದಿಯಲ್ಲಿ  ತೊಂದರೆ ಅನುಭವಿಸುತ್ತಿವೆ. ಬಹುತೇಕ ಹಕ್ಕಿಗಳ  ಮೊಟ್ಟೆಯ ಕವಚ ತೆಳುವಾಗಿ ಅವು ಮರಿಯಾಗದೆ ಸತ್ತು ಹೋಗುತ್ತಿವೆ.  ಇದಕ್ಕೆ ಕಾರಣ ಕ್ಯಾಲ್ಸಿಯಂ ಮೆಟಬಲಿಸಂ  ನಲ್ಲಿ ಅಸಮತೋಲನ. ಈ ಕಾರಣದಿಂದ ಹಕ್ಕಿಗಳ ಸಂತತಿ ಕ್ಷೀಣಿಸುತ್ತಿದೆ.( ಉದಾಹರಣೆಗೆ ಗುಬ್ಬಿ)

  • ಹಕ್ಕಿಗಳು ಕ್ಷೀಣಿಸಿದರೆ ಇಂತಹ ಕೀಟಗಳು  ಹೆಚ್ಚು ಪ್ರಾಭಲ್ಯವನ್ನು  ಹೊಂದುತ್ತವೆ.
  • ಪರಿಸರ ಅಸಮತೋಲನ ಉಂಟಾಗಿ ಮೈನರ್ ಪೆಸ್ಟ್ ಗಳು ಮೇಜರ್ ಪೆಸ್ಟ್ ಗಳಾಗಿ ಹಾನಿ ಮಾಡುತ್ತವೆ.
  • ಅವು ಸಾವಿರದಿಂದ ಕೋಟಿಗೆ ಹೆಚ್ಚುತ್ತವೆ.

ದಯವಿಟ್ಟು ಇದು ಬೇಡ:

  • ಬಹಳ ಜನ ಕೀಟ ನಿಯಂತ್ರಣಕ್ಕೆ ಬೆಳಕಿನ ಟ್ರಾಪುಗಳನ್ನು ಹಾಕುವುದುಂಟು.
  • ಇದು ಕೀಟ ನಿಯಂತ್ರಣದ ಉತ್ತಮ ವಿಧಾನ ಅಲ್ಲ.
  • ಇದರಲ್ಲಿ ಬೀಳುವ ಕೀಟಗಳಲ್ಲಿ ಉಪಟಳ  ಕೊಡುವವುಗಳಿಗಿಂತ ಹೆಚ್ಚು  ಉಪಕಾರಿಗಳು ಇವೆ.
  • ಆದ ಕಾರಣ ಇಂತಹ ಕೆಲಸ ಮಾಡದಿರಿ.

ಕೃಷಿಯಲ್ಲಿ ಒಮ್ಮೆ ಸ್ವಲ್ಪ ಫಸಲು ನಷ್ಟವಾದರೂ ಶಾಶ್ವತ ನಷ್ಟಕ್ಕೆ ನಾವೇ  ಕಾರಣರಾಗಬಾರದು. ಪರಿಸರಕ್ಕೆ ವಿರುದ್ಧ ವಾಗಿ ಯಾರೂ ನಿಯಂತ್ರಣ  ಕೈಗೊಳ್ಳಬಾರದು. ಇದು ಗಜ ಗಾತ್ರದ ಕೀಟ ಅಲ್ಲ. ಒಂದು ಸಣ್ಣ ಮಿಡತೆ ಅಷ್ಟೇ. ಇರುವೆ ಕೊಲ್ಲಲು ಆನೆ ಅಟ್ಟಣೆ  ಬೇಡ.

 

Leave a Reply

Your email address will not be published. Required fields are marked *

error: Content is protected !!