ನಾವು ಸಂಪಾದನೆಗಾಗಿ ಸಾಕುವ ಆಡು – ಕುರಿ ಕೋಳಿ ಇತ್ಯಾದಿಗಳು ಬೇಗ ಬೆಳವಣಿಗೆ ಹೊಂದಿ, ತೂಕ ಬಂದರೆ ಅವುಗಳ ಪಾಲನೆ ಲಾಭದಾಯಕ. ಬಹಳಷ್ಟು ರೈತರು ಇವುಗಳನ್ನು ಸಾಕುತ್ತಾರೆ. ಆದರೆ ಎಷ್ಟೇ ಪ್ರಯತ್ನಪಟ್ಟರೂ ತೂಕ ಬರುವುದಿಲ್ಲ. ಇದಕ್ಕೆ ಕಾರಣ ಅವುಗಳ ದೇಹ ಪೋಷಣೆಗೆ ಆಗತ್ಯವಿರುವ ಆಹಾರ ಪೂರೈಕೆ ಆಗದೇ ಇರುವುದು. ದೇಹ ದಾಢ್ಯತನ ಬರಲು ಕೆಲವು ಪೌಷ್ಟಿಕಾಂಶ ಭರಿತ ತಿಂಡಿ ತಿನಿಸು ಕೊಡಬೇಕು.
- ಆಡು, ಕುರಿ ಸಾಕುವುದು ಬ್ಯಾಂಕಿನಲ್ಲಿ ದುಡ್ಡು ಇಟ್ಟಂತೆ. ಇದನ್ನು ಯಾವಾಗ ಬೇಕಾದರೂ ನಗದೀಕರಣ ಮಾಡಿಕೊಳ್ಳಬಹುದು.
- ನಗದೀಕರಣ ಮಾಡುವ ಸಮಯದಲ್ಲಿ ಅವು ಬಡ್ದಿ ಸೇರುವಷ್ಟು ದಷ್ಟ ಫುಷ್ಟವಾಗಿರಬೇಕು.
- ಈ ವೃತ್ತಿಯಲ್ಲಿ ಹೂಡಿದ ಬಂಡವಾಳ ಒಂದೇ ವರ್ಷದಲ್ಲಿ ದ್ವಿಗುಣ. ಆ ಕಾರಣಕ್ಕೆ ಆಡು ಸಾಕಣಿಕೆ ಒಂದು ಕೃಷಿ ಪೂರಕ ವೃತ್ತಿಯಾಗಿ ಬೆಳೆಯುತ್ತಿದೆ.
- ಬರೇ ಆಡನ್ನು ಎಲ್ಲೆಂದರಲ್ಲಿ ಮೇಯಲು ಬಿಟ್ಟಾಕ್ಷಣ ಅದು ತನ್ನ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲಾರದು.
- ಕೂಡಿ ಹಾಕಿ, ಅದಕ್ಕೆ ಪೌಷ್ಟಿಕ ಮೇವು ಮತ್ತು ಆಹಾರ ನೀಡಿದಾಗ ಮಾತ್ರ ಅದು ತೂಕ ಬರುತ್ತದೆ. ಬೇಗ ಮರಿ ಹಾಕುತ್ತದೆ.
ಪೌಷ್ಟಿಕ ಮೇವು ಯಾವುದು:
- ಹಾಲು ಕೊಡುತ್ತಿರುವ ಆಡಿಗೆ ದಿನಕ್ಕೆ 5-15 ಕಿಲೋ ಗ್ರಾಂ ಹಸುರು ಮೇವು ಬೇಕು
- ಬರೇ ಹಸುರು ಮೇವು ಅಲ್ಲದೆ, 1-2 ಕಿಲೋ ಗ್ರಾಂ ಒಣ ಮೇವು ಅಗತ್ಯವಾಗಿ ಕೊಡಬೇಕು.
- ದಿನಕ್ಕೊಮ್ಮೆ ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ತನಕ ಮೇಯಲು ಬಿಡುವಾಗ ಅದನ್ನು ಸಾದ್ಯವಾದಷ್ಟು ಬೆಳೆ ತೆಗೆದು ಬಿಟ್ಟ ಹೊಲಗಳಿಗೆ ಮೇಯಲು ಬಿಡಬೇಕು.
- ಅಲ್ಲಿ ಬೆಳೆ ಉಳಿಕೆಗಳನ್ನು ತಿಂದರೆ ಅದರಲ್ಲಿರುವ ಸಾರಾಂಶಗಳು ಆಡನ್ನು ಪುಷ್ಟಿಯಾಗಿ ಬೆಳೆಸುತ್ತವೆ.
- ಉದ್ಡು, ಸೇಂಗಾ, ಹುರುಳಿ, ಮುಂತಾದ ದ್ವಿದಳ ಬೆಳೆಗಳ ಹೊಲಕ್ಕೆ ಬಿಡಬೇಕು.
ಜಾಲೀ ಗಿಡಗಳು, ಹಲಸಿನ ಸೊಪ್ಪು, ಬೈನೆ ಮರದ ಸೊಪ್ಪು ಆಡಿಗೆ ಇಷ್ಟವಾದ ಮೇವು. ಇದನ್ನು ತಿನ್ನಲು ಬಿಡಬೇಕು. ಸೊಪ್ಪು ಆಡುಗಳ ದೇಹ ಪೋಷಣೆಗೆ ಉತ್ತಮ ಮೇವು. ಇದನ್ನು ತಂದು ಹಾಕಿದರೆ ಅಡುಗಳು ಬೇಗ ತೂಕ ಬರುತ್ತವೆ.
- ಹಿಪ್ಪು ನೇರಳೆ ವ್ಯವಸಾಯ ಮಾಡುವಲ್ಲಿ ದೊರೆಯುವ ಕಡ್ಡಿ ನಿರುಪಯುಕ್ತ
- ಈ ಮೇವಿನಲ್ಲಿಯೂ ಸಾರಾಂಶಗಳು ಉತ್ತಮವಾಗಿರುತ್ತವೆ.
- ಗ್ಲೆರಿಸೀಡಿಯಾ ಸೊಪ್ಪು, ಸುಬಾಬುಲ್ ಸೊಪ್ಪು, ಕ್ಯಾಲಿಯಾಂಡ್ರಾ ಸೊಪ್ಪು, ಜೋಳದ ಎಳೆ ಸಸ್ಯ( ಹೈಡ್ರೋಫೋನಿಕ್ಸ್) ಹಾಗೂ ಸಾರಜನಕ ಸ್ಥಿರೀಕರಿಸುವ ದ್ವಿದಳ ಸಸ್ಯಗಳನ್ನು ತಿನ್ನಿಸಿದರೆ ಆಡು ಸದ್ಧೃಢ.
ಬರೇ ಮೇವು ಮಾತ್ರ ಆಡಿನ ತೂಕ ಹೆಚ್ಚಳಕ್ಕೆ ಸಾಕಾಗುವುದಿಲ್ಲ. ಅದಕ್ಕೆ ದಾಣಿ ಮಿಶ್ರಣವನ್ನು ಕೊಟ್ಟರೆ ಮೇವಿನಿಂದ ದೊರೆತ ಸಾರಗಳ ಫಲ ದೇಹಕ್ಕೆ ಫಲಪ್ರದವಾಗಿ ದೊರೆಯುತ್ತದೆ.
- ದಾಣಿ ಮಿಶ್ರಣವಾಗಿ ದಿನಕ್ಕೆ ಒಂದು ಆಡಿಗೆ ಸುಮಾರು 1- 1.5 ಕಿಲೋ ಗ್ರಾಮ್ ಆಹಾರ ಕೊಡಬೇಕು.
- ದಾಣಿ ಮಿಶ್ರಣದಲ್ಲಿ ಜೋಳ, ಗೋವಿನ ಜೋಳ, ರಾಗಿ, ಸಜ್ಜೆ, ಮೊದಲಾದ ಏಕದಳ ಧಾನ್ಯಗಳನ್ನು ಸೇರಿಸಬೇಕು.
![ಪೌಷ್ಟಿಕ ಸೊಪ್ಪು ಕೊಡಿ](https://kannada.krushiabhivruddi.com/wp-content/uploads/2021/04/DSC06081-FILEminimizer-1.jpg)
ಹುರುಳಿ , ಅಲಸಂಡೆ, ಅವರೆ ಮುಸುಕಿ , ಹೆಸರು, ಶೇಂಗಾ , ಕಡಲೆ ಚವಳಿ, ತೊಗರಿ ಮುಂತಾದ ದ್ವಿದಳ ಧಾನ್ಯಗಳ ನುಚ್ಚನ್ನು ಸೇರಿಸಬೇಕು.
- ಇವುಗಳಲ್ಲಿ ಸಾರಜನಕ ವಸ್ತುಗಳು ಅಧಿಕವಾಗಿರುವ ಕಾರಣ ಬೆಳವಣಿಗೆ ಉತ್ತಮವಾಗಿರುತ್ತದೆ.
- ಹಾಲೂ ಹೆಚ್ಚು ಕೊಡುತ್ತದೆ. ಮಾಂಸ ಖಂಡಗಳು ಬೆಳೆಯುತ್ತವೆ.
ದಾಣಿ ಮಿಶ್ರಣದ ಖರ್ಚನ್ನು ಹಾಲಿನಿಂದ ಪಡೆಯುವಂತಿರಬೇಕು.
ಪೌಷ್ಟಿಕ ತಿಂಡಿ ಮಿಶ್ರಣದ ತಯಾರಿ:
![ಆಹಾರ ಹೀಗೆ ಕೊಡಿ](https://kannada.krushiabhivruddi.com/wp-content/uploads/2021/04/DSC05741-FILEminimizer-1.jpg)
- ಮೇಲೆ ಹೇಳಲಾದ ತಿಂಡಿ ಮಿಶ್ರಣವನ್ನು ತಯಾರಿಸುವಾಗ ಮೂಲವಸ್ತುಗಳನ್ನು ಇಂತಿಷ್ಟೇ ಪ್ರಮಾಣದಲ್ಲಿ ಸೇರಿಸಿರಬೇಕು.
- ಶೇ. 20 ಗೋಧಿ ಬೂಸಾ, ಶೇ. 52 ಗೋವಿನ ಜೋಳದ ಹುಡಿ ಮತ್ತು ಶೇ. 25 ನೆಲಕಡ್ಲೆ ಹಿಂಡಿ.
- 30% ಗೋವಿನ ಜೋಳದ ಹುಡಿ, 37% ಜೋಳದ ನುಚ್ಚು 10% ಶೇಂಗಾ ಹಿಂಡಿ ಮತ್ತು 20% ಬೇಳೆ ಕಾಳಿನ ಹೊಟ್ಟು.
- 22 % ಗೋಧಿ ಬೂಸಾ, 50% ಹುರುಳಿ ಮತ್ತು 25% ಶೇಂಗಾ ಹಿಂಡಿ.
- ಶೇ.15 ಶೇಂಗಾ ಹಿಂಡಿ, ಶೇ. 40 ಹುರುಳಿ ನುಚ್ಚು, 37 % ಗೋವಿನ ಜೋಳ ಮತ್ತು ಶೇ. 5 ದ್ವಿದಳ ಕಾಳಿನ ಸಿಪ್ಪೆ .
ಈ ನಾಲ್ಕು ಕ್ರಮದಲ್ಲಿ ತಯಾರಿಸಿದ ದಾಣಿ ಮಿಶ್ರಣ ಅಧಿಕ ಪೌಷ್ಟಿಕ ಆಹಾರವಾಗಿದ್ದು, ಹಾಲನ್ನೂ ಹೆಚ್ಚು ಕೊಡಬಲ್ಲುದು, ದೇಹದ ಬೆಳವಣಿಗೆಯೂ ಶೀಘ್ರವಾಗಿ ಆಗುವುದು. ಮರಿಯೂ ಬೇಗ ಹಾಕುವುದು.
ಬರೇ ಇಷ್ಟೇ ಅಲ್ಲದೆ ಈ ಎಲ್ಲಾ ಮಿಶ್ರಣಕ್ಕೆ ಶೇ.1 ರಷ್ಟು ಉಪ್ಪು ಮತ್ತು ಶೇ. 2 ರಷ್ಟು ಖನಿಜ ಪುಡಿ ಸೇರಿಸುವುದರಿಂದ ಇದು ಇನ್ನೂ ಪೌಷ್ಟಿಕವಾಗುತ್ತದೆ.ಆಡು, ಕುರಿ ಕೊಳಿಗಳು ತಿಂದಷ್ಟೂ ಆಹಾರವನ್ನು ಜೀರ್ಣಿಸಿಕೊಳ್ಳುತ್ತವೆ. ಇವು ತಿಂದಷ್ಟೂ ಮನಗೆ ಲಾಭ. ಮಿತವ್ಯಯದ ಪೌಷ್ಟಿಕ ಮೇವುಗಳು, ದಾಣಿಮಿಶ್ರಣವನ್ನು ಕೊಟ್ಟರೆ ಕೊಬ್ಬಿ ಬೆಳೆಯುತ್ತವೆ