ಭಾರೀ ಬೇಡಿಕೆಯ ಹೊಸತಳಿಯ ಅಡಿಕೆ – ಶತಮಂಗಳ.

ಶತಮಂಗಳ ಅಡಿಕೆ ಮರ

ಇತ್ತೀಚೆಗೆ ಬಿಡುಗಡೆಯಾದ ಅಧಿಕ ಇಳುವರಿ ಕೊಡಬಲ್ಲ ಭಾರೀ ಭರವಸೆಯ ತಳಿ ಶತಮಂಗಳ ದ ಬೀಜ , ಸಸಿಗೆ ಭಾರೀ ಬೇಡಿಕೆ. ಈ ತಳಿಯನ್ನು CPCRI ವಿಟ್ಲ ಕೇಂದ್ರವು ಬಿಡುಗಡೆ ಮಾಡಿದ್ದು, ಈಗಿರುವ ಎಲ್ಲಾ ತಳಿಗಳಿಗಿಂತ ಅಧಿಕ ಇಳುವರಿ ಕೊಡುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಬೆಳೆಯುವ ರೈತರು ಈ ತಳಿಗೆ ಮುಗಿ ಬೀಳುತ್ತಿದ್ದಾರೆ.

ಪ್ರಾದೇಶಿಕ ತಳಿಗಳು:

  • ಅಡಿಕೆಯಲ್ಲಿ  ಮುಖ್ಯವಾಗಿ ಕೆಂಪಡಿಕೆಗೆ ಹೊಂದುವ ತಳಿ ಮತ್ತು ಚಾಲಿಗೆ ಹೊಂದುವ ತಳಿ  ಎಂಬ  ಎರಡು ಪ್ರಕಾರಗಳು.
  • ಕೆಂಪಡಿಕೆಮಾಡುವ ಪ್ರದೇಶಗಳಲ್ಲಿ  ಸ್ಥಳೀಯ ತಳಿಗಳೇ  ಹೆಚ್ಚು.
  • ಶಿರಸಿಯಲ್ಲಿ  ಭಾಗದಲ್ಲಿ ಒಂದು ತಳಿ , ಸಾಗರದಲ್ಲಿ  ಇನ್ನೊಂದು.ಮುಂದೆ ಬಂದರೆ ತೀರ್ಥಹಳ್ಳಿಯಲ್ಲಿ ಇನ್ನೊಂದು , ಅರೆ ಮಲೆನಾಡಿನ ಆನವಟ್ಟಿ, ಹೊನ್ನಾಳಿ, ಕಡೂರು – ಬೀರೂರು ಹೊಸನಗರ, ಹೀಗೆ  ಆಯಾಯ ಪ್ರದೇಶಕ್ಕೆ ಹೊಂದಿಕೊಂಡ  ಸ್ಥಳೀಯ ತಳಿಗಳು.

ಆದರೆ  ಚಾಲಿಯಲ್ಲಿ ಹಾಗಿಲ್ಲ. ಸ್ಥಳೀಯ ತಳಿ ಎಂದರೆ ವಿಟ್ಲ ಲೋಕಲ್. ನಂತರ ಅದರಲ್ಲಿ ಬೇರೆ  ಬೇರೆ ರಾಜ್ಯಗಳಿಂದ ತಳಿ ಮೂಲವನ್ನು ತಂದು ಅಭಿವೃದ್ಧಿ ಮಾಡಿದ್ದೂ ಅಲ್ಲದೆ ಬೇರೆ ದೇಶಗಳಿಂದ ತಂದದ್ದೂ ಇದೆ.

ಶತಮಂಗಳ ಅಡಿಕೆ ಗೊಂಚಲು

ಚಾಲಿ ತಳಿಗಳು:

  • ಚಾಲಿ ಅಡಿಕೆ  ಮಾಡಲಾಗುವ ಪ್ರದೇಶದಲ್ಲಿ ಅಡಿಕೆ ಉತ್ಪಾದನೆ ಗಣನೀಯ ಹೆಚ್ಚಳಕ್ಕೆ  ಕಾರಣವಾದ ಮಂಗಳ ತಳಿಯ ಮೂಲ ಚೀನಾ ದೇಶ.
  • ಹಾಗೆಯೇ ಮೋಹಿತ್ ನಗರ  ಅಸ್ಸಾಂ ನದ್ದು.
  • ಸ್ವರ್ಣ ಮಂಗಳ ಅಥವಾ ಸೈಗಾನ್ ಎಂಬ ತಳಿಯನ್ನು ವಿಯೆಟ್ನಾಂ ದೇಶದಿಂದ ತರಲಾಗಿದೆ.
  • ಹೀಗೆ ಅಡಿಕೆಯ ಬಗ್ಗೆ ಸಂಶೋಧನೆ  ನಡೆಸುವ  ವಿಟ್ಲದ ಸಿ ಪಿ ಸಿ ಆರ್ ಐ  ತಳಿ ಹುಡುಕಾಟ ಮತ್ತು  ಇನ್ನಿತರ ಕೆಲಸಗಳ ಬಗ್ಗೆ  ಸದಾ ಕಾರ್ಯತತ್ಪರವಾಗಿದೆ.

ಹೊಸ ತಳಿ:

ಶತಮಂಗಳ ಅಡಿಕೆಯ ಒಳ ಭಾಗ

  •  ಈ ತಳಿ ಹುಡುಕಾಟದ ಪ್ರಯತ್ನದ ಫಲವೇ  ಇತ್ತೀಚೆಗೆ   ಬಿಡುಗ಼ಡೆಯಾಗಿರುವ ಶತಮಂಗಳ ಎಂಬ ತಳಿ.
  • ಇದನ್ನು ಸಿ ಪಿ ಸಿ ಆರ್ ಐ (CPCRI) ನಲ್ಲಿ ಹಲವು ವರ್ಷಗಳ ಕಾಲ ತಳಿ ವಿಜ್ಞಾನಿಯಾಗಿ  ಕೆಲಸ ಮಾಡಿದ ಶ್ರೀ ಕೆ ಎಸ್ ಆನಂದ್ ಅವರು ತಮ್ಮ ಹುಡುಕಾಟ ಕಾರ್ಯದಲ್ಲಿ ಆರಿಸಿದ್ದಾರೆ.

ಮಹಾರಾಷ್ಟ್ರ  ಮತ್ತು ಗುಜರಾತ್  ಗಡಿಯಲ್ಲಿ ಬೆಳೆಯುತ್ತಿದ್ದ ಈ ತಳಿಯನ್ನು  ಕೇಂದ್ರಕ್ಕೆ ತಂದು  ಇಲ್ಲಿ ಇದರ ಗುಣಗಳ  ಬಗ್ಗೆ  ಅಧ್ಯಯನ ಕೈಗೊಂಡು , ತೃಪ್ತಿ ಕರವಾಗಿ ಕಂಡ ನಂತರ ಇದನ್ನು 2016 ನೇ  ಇಸವಿಯಲ್ಲಿ  ಬಿಡುಗಡೆಗೊಳಿಸಿದ್ದಾರೆ. ಇದು  ಚಾಲಿ ಅಡಿಕೆಗೆ ಸೂಕ್ತವಾದ ಅಧಿಕ ಇಳುವರಿ ನೀಡಬಲ್ಲ ತಳಿ.

ಹೊಸ ತಳಿಯ ಅಗತ್ಯ:

  •  ಹಳೇ ತಳಿಗಳು  ಮಿಶ್ರ ಪರಾಗಸ್ಪರ್ಷದ ಕಾರಣದಿಂದ ತನ್ನ ಮೂಲ ಗುಣವನ್ನು ಪೀಳಿಗೆಯಿಂದ ಪೀಳಿಗೆಗೆ  ಕಳಕೊಳ್ಳುತ್ತಾ ಬರುತ್ತಿವೆ.
  • ಜೊತೆಗೆ ಕೆಲವು ಮಾರ್ಪಾಡುಗಳೂ ಬೇಕಾಗುತ್ತವೆ.
  • ಇದಕ್ಕಾಗಿಯೇ ಮಂಗಳ ನಂತರ ಮೋಹಿತ್ ನಗರ, ಸುಮಂಗಲ, ಹೀಗೆ ಬೇರೆ ಬೇರೆ ತಳಿಗಳನ್ನು  ಬಿಡುಗಡೆ ಮಾಡಲಾಗಿದೆ.

ಶತಮಂಗಳ ಬೆಳೆಸುವವರು ಗಮನಿಸಿ:

  • ಕಳೆದ ವರ್ಷ ಮತ್ತು ಈ ವರ್ಷ ಶತಮಂಗಳ ಅಡಿಕೆ ಸಸಿಗಳಿಗೆ ಭಾರೀ ಬೇಡಿಕೆ.
  • ದರವೂ ದುಪ್ಪಟ್ಟು.ಬೀಜ ಮೂಲವೇ ಕಡಿಮೆ ಇರುವ ಕಾರಣ ಇದು ಸಹಜ.
  • ಹೊಸ ತಳಿ ಸರಕಾರೀ ಸ್ವಾಮ್ಯದ ಸಂಶೊಧನಾ ಸಂಸ್ಥೆಯಿಂದ ಅಧಿಕೃತವಾಗಿ ಬಿಡುಗಡೆ ಆಗದೆ ವಿನಹ ಅದರ ಬೀಜ ಅಥವಾ ಸಸ್ಯವನ್ನು ಯಾರಿಗೂ ಕೊಡುವಂತಿಲ್ಲ.  
  • ಸಸಿ ಬೆಳೆಸಿ ಆ ತಳಿಯ ಕ್ಷಮತೆಯನ್ನು ಅಭ್ಯಾಸ ಮಾಡಬೇಕು.ಬೀಜಕ್ಕಾಗಿ ಆಯ್ಕೆ ಮಾಡುವಾಗ ತಾಯಿ ಮರಕ್ಕೆ ಕನಿಷ್ಟ 10-12 ವರ್ಷವಾದರೂ ಆಗಿರಬೇಕು.
  • ಅದೆಲ್ಲಾ ಮಾನದಂಡಗಳನ್ನು ಪೂರೈಸಿದ ನಂತರ ಅದನ್ನು ಹೊಸ ತಳಿಯಾಗಿ ಬಿಡುಗಡೆ ಮಾಡಲಾಗುತ್ತದೆ.
  • ಶತಮಂಗಳ ತಳಿಯನ್ನು 2016 ನೇ ಇಸವಿಯಲ್ಲಿ ಬಿಡುಗಡೆ ಮಾಡಲಾಗಿದೆ.
  • ಆ ನಂತರ ಅದರ ಬೀಜ ಅಥವಾ ಸಸಿಗಳು ಸಾರ್ವಜನಿಕರಿಗೆ ನಿಯಮಿತ ಪ್ರಮಾಣದಲ್ಲಿ ಸಂಶೋಧನಾ ಕೇಂದ್ರವೇ ಕೊಡುತ್ತಾ ಬರುತ್ತಿದೆ.
  • ಇದು ಆಗಿ 5  ವರ್ಷಗಳು ಆಗಿವೆ ಅಷ್ಟೇ. ಆದರೆ ಈಗ  ಶತಮಂಗಳದ ಸಸಿಗಳು ಖಾಸಗಿ ನರ್ಸರಿಗಳಲ್ಲಿ ಹೇರಳವಾಗಿ ಲಭ್ಯ.
  • ಇದರ ಕಾರಣ ತಿಳಿಯುತ್ತಿಲ್ಲ. ಒಂದೋ ಇವರು ಶತಮಂಗಳ ಹೆಸರಿನಲ್ಲಿ  ಬೇರೆ ತಳಿಯನ್ನು ಕೊಡುವುದು ಇರಬೇಕು.
  • ಇಲ್ಲವೇ ಸಂಶೋಧಾನ ಕೇಂದ್ರದಿಂದ ಮೊದಲೇ ಇವರು ಇದನ್ನು ಬೆಳೆಸಿರಬೇಕು.
  • ಇಲ್ಲಿಂದಲೇ ಬೀಜ ಒಯ್ದು ಸಸಿ ಬೆಳೆಸಿ ಅದರ ಮರ ಆಗಿದ್ದರೆ ಅದರ ಬೀಜೋತ್ಪಾದನೆಗೆ ಸಸಿಗೆ ಪಕ್ವತೆ ಬಂದಿಲ್ಲ ಎನ್ನಬಹುದು.
  • ಶತಮಂಗಳ ತಳಿ ಬೆಳೆಸುವವರು ಇದನ್ನು ಗಮನಿಸಿ.  

ಶತಮಂಗಲ ವಿಷೇಶ:

  • ಶತ ಮಂಗಳ ತಳಿಯ ವಿಷೇಷ ಎಂದರೆ  ಇದರ ಇಳುವರಿ ಈ ತನಕದ ಎಲ್ಲಾ ಅಡಿಕೆ  ತಳಿಗಿಂತ ಹೆಚ್ಚು.
  • ಇದರಲ್ಲಿ ವರ್ಷಕ್ಕೆ ಸರಾಸರಿ 6 ಗೊನೆ ಪಡೆಯಬಹುದು.
  • ಒಂದು ಗೊನೆಯಲ್ಲಿ ಸರಾಸರಿ 300 ಅಡಿಕೆ  ಇರುತ್ತದೆ.
  • ನಾಟಿ ಮಾಡಿ 3-4 ನೇ ವರ್ಷಕ್ಕೇ ಫಸಲಿಗಾರಂಭವಾಗುತ್ತದೆ.
  • ಇದು ಕರಾವಳಿ ಕರ್ನಾಟಕದ ಎಲ್ಲಾ ಅಡಿಕೆ ಬೆಳೆಯಲಾಗುವ ಪ್ರದೇಶಕ್ಕೆ  ಹೊಂದಿಕೆಯಾಗುತ್ತದೆ.

ಗಂಟುಗಳು ಸಾಧಾರಣ ಹತ್ತಿರ. ಮರದಲ್ಲಿ ಗರಿಗಳು ಜೋತು ಬೀಳುವುದಿಲ್ಲ. ಗಂಟುಗಳು ಹತ್ತಿರವಿರುವ ಕಾರಣ ಗಾಳಿಗೆ ಮುರಿಯುವುದು, ಬಿಸಿಲಿಗೆ  ಕಾಂಡ ಹಾಳಾಗುವ ಸಮಸ್ಯೆ  ಕಡಿಮೆ. ಗುಣಮಟ್ಟದ  ಚಾಲಿ ಪಡೆಯಬಹುದು. ಚಾಲಿಯ ಕಟ್ಟಿಂಗ್ ವಿಟ್ಲ ಅಡಿಕೆಯ ತರಹವೇ ಇರುತ್ತದೆ.

Leave a Reply

Your email address will not be published. Required fields are marked *

error: Content is protected !!