ಸಿಂಪರಣೆಯಿಂದ ಎಲೆ ಚುಕ್ಕೆರೋಗ ವಾಸಿ ಅಸಾಧ್ಯ. ಯಾಕೆ?

ಎಲೆಚುಕ್ಕೆ ರೋಗ ಸಿಂಪರಣೆಯಿಂದ ವಾಸಿಯಾಗುವುದಿಲ್ಲ. ಯಾಕೆ ಗೊತ್ತೇ?

ಅಡಿಕೆಗೆ ಬಾದಿತವಾದ ಎಲೆ ಚುಕ್ಕೆರೋಗ ವಾಸಿ ಮಾಡುವುದಕ್ಕೆ ತಜ್ಞರು ಬಹಳಷ್ಟು ಸಲಹೆಗಳನ್ನು ನೀಡುತ್ತಿದ್ದಾರೆ.  ಅವರ ಸಲಹೆಯನ್ನು ಪಾಲಿಸಿದವರಲ್ಲಿ ಈ ರೋಗ ಒಮ್ಮೆ ಹತೋಟಿಯಾದಂತೆ ಕಂಡರೂ ಮತ್ತೆ ನಾನಿದ್ದೇನೆ ಎಂದು ಮರುಕಳಿಸುತ್ತಿದೆ. ದುಬಾರಿ ಬೆಲೆಯ ಶಿಲೀಂದ್ರ ನಾಶಕ- ದುಬಾರಿ ಕೂಲಿ ಸಂಭಾವನೆಯೊಂದಿಗೆ ಎಲೆಚುಕ್ಕೆ ರೋಗ ಓಡಿಸುವ ರೈತರ ಶ್ರಮ ಹೇಳತೀರದು. ಎಲೆ ಚುಕ್ಕೆ ರೋಗವನ್ನು ಅಲ್ಪ ಕಾಲದ ತನಕ ಹತೋಟಿ ಮಾಡಬಹುದೇ ಹೊರತು ಇಲ್ಲದಂತೆ ಮಾಡಲು  ಪ್ರಕೃತಿಯೇ ಸಹಕರಿಸಬೇಕು.

ಎಲೆ ಚುಕ್ಕೆರೋಗ ಅಡಿಕೆ ಬೆಳೆಗಾರರ ಪಾಲಿಗೆ ಇಷ್ಟು ದೊಡ್ಡ  ಸಮಸ್ಯೆಯಾಗಿ ಪರಿಣಮಿಸೀತು ಎಂದು ಯಾರೂ  ಊಹಿಸಿಯೂ ಇರಲಿಕ್ಕಿಲ್ಲ.  ಈ ರೋಗ ಇಲ್ಲದ ಅಡಿಕೆ ತೋಟವೇ ಇಲ್ಲ ಎಂದರೂ ತಪ್ಪಾಗಲಾರದು. ಕೆಲವು ಕಡೆ ಸ್ವಲ್ಪ ಕಡಿಮೆ ಇರಬಹುದು, ಆದರೂ ಸೋಂಕು ಇದ್ದೇ ಇದೆ. ಕೆಲವು ಕಡೆ ವಿಪರೀತವಾಗಿ ಕಾಣಿಸುತ್ತಿದೆ.  ಅದರಲ್ಲೂ  ಒಂದೇ ತೋಟದಲ್ಲಿ ಕೆಲವು ಮರಗಳು ಅತಿಯಾಗಿ  ಸೋಂಕಿಗೆ ಒಳಗಾಗಿರುವುದು ಮತ್ತೆ ಕೆಲವು ಅಲ್ಪ ಸ್ವಲ್ಪ ಸ್ವಲ್ಪ, ಕೆಲವು ಸೋಂಕು ತಗಲದೇ ಸುರಕ್ಷಿತವಾಗಿ ಇರುವುದನ್ನೂ ನಾವು ಗಮನಿಸಬಹುದು.  ಇದೆಲ್ಲಾ ಯಾಕೆ ಆಗುತ್ತದೆ ಎಂಬುದನ್ನು ಸ್ವಲ್ಪ ಯೋಚಿಸಬೇಕಾಗುತ್ತದೆ. ಸಸ್ಯಗಳಲ್ಲಿ ಅಂತರ್ಗತ ನಿರೋಧಕ ಶಕ್ತಿ ಎಂಬುದು ಇರುತ್ತದೆ. ಇದು ಎಲ್ಲಾ ಸಸ್ಯಗಳಲ್ಲೂ ಕಾಣಬಹುದು. ಒಂದೇ ತೋಟದಲ್ಲಿ ಗರಿಷ್ಟ ಪ್ರಮಾಣದಲ್ಲಿ ಕೊಳೆ ರೋಗ ಬಂದಾಗಲೂ ಕೆಲವು ಮರಗಳು ರೋಗದ ಸೋಂಕಿನಿಂದ ಮುಕ್ತವಾಗಿ ಇರುತ್ತವೆ. ಹೆಚ್ಚಿನ ಮರಗಳಿಗೆ ಹಳದಿ ಎಲೆ ರೋಗ  ಬಂದರೂ  ಕೆಲವು ಏನೂ ಆಗದ ಮರಗಳಿರುತ್ತವೆ. ನಮ್ಮ ತೋಟದಲ್ಲೇ  ರೋಗ ಇರುವವುಗಳೂ ರೋಗ ನಿರೋಧಕ ಶಕ್ತಿ ಹೊಂದಿದ ಸಸ್ಯಗಳೂ ಇರುತ್ತವೆ. ಇವುಗಳನ್ನು ನಾವು ನಿರಂತರ ಗಮನಿಸುತ್ತಾ ಇದ್ದರೆ ತಿಳಿಯುತ್ತದೆ. ಅಡಿಕೆ ತೋಟಕ್ಕೆ ಎಲೆ ಚುಕ್ಕೆರೋಗ ಈಗ ಬಂದದಲ್ಲ. ಬಹಳ ಹಿಂದಿನಿಂದಲೂ ಇದು ಇತ್ತು. ಈಗ ಮಾತ್ರ ಇದು ಉಲ್ಬಣವಾಗಿದೆ. ಇದಕ್ಕೆ ಕಾರಣ ಹವಾಮಾನ ಎಂಬುದಾಗಿ ಹೇಳಲಾಗುತ್ತದೆ. ಹವಾಮಾನ ಒಂದು ಕಾರಣವಾಗಿರಬಹುದು. ಆದರೆ ಈಗಿನ ಎರಡು ಮೂರು ವರ್ಷಗಳ ಹವಾಮಾನದ ತರಹವೇ ಈ ಹಿಂದೆಯೂ ಆಗಿತ್ತು. ಹಾಗಿರುವಾಗ ಹವಾಮಾನ ಒಂದೇ ಇದಕ್ಕೆ ಕಾರಣ ಎನ್ನಲಾಗುವುದಿಲ್ಲ. ಬಹುಷಃ ಇದು ಉಲ್ಬಣಾವಸ್ಥೆಗೆ ಬರಲು ಜೀವ ವೈವಿಧ್ಯಗಳ ಅಸಮತೋಲನ ಕಾರಣ ಇರಬಹುದೇ ಎಂಬ ಬಗ್ಗೆ ತಜ್ಞರು ಅಧ್ಯಯನ ಮಾಡಬೇಕಾಗಿದೆ.

ಎಲ್ಲವೂ ಏಕ ಬೆಳೆಯಾದುದೇ ತೊಂದರೆ:

  • ಒಂದು ಕಾಲ ಅದು ಸುಮಾರು  15 ವರ್ಷಕ್ಕೆ ಹಿಂದೆ. ರಬ್ಬರ್ ಬೆಳೆಗೆ ಭಾರೀ ಭವಿಷ್ಯ ಇದೆ ಎಂದು ಜನ ಭಾರೀ ಪ್ರಮಾಣದಲ್ಲಿ ರಬ್ಬರ್ ಬೆಳೆಯನ್ನು ಹಾಕಿದರು.
  • ಅದು ಸೊಪ್ಪಿನ ಬೆಟ್ಟ ಎಂದು ಖಾಲಿ ಬಿಟ್ಟಿದ್ದ ಸ್ಥಳದಲ್ಲಿ. ಆ ಸಮಯದಲ್ಲಿ ಕರಾವಳಿ ಭಾಗದಲ್ಲಿ ಬಹುತೇಕ ಸಸ್ಯ ಜೀವ ವೈವಿಧ್ಯಗಳು ನಾಶವಾಗಿವೆ.
  • ಮಲೆನಾಡಿನ ಜನ ಸ್ವಲ್ಪ ಮಟ್ಟಿಗೆಯಾದರೂ  ಸೊಪ್ಪಿನ ಬೆಟ್ಟ, ಇತ್ಯಾದಿಗಳನ್ನು ಉಳಿಸಿಕೊಂಡಿದ್ದಾರೆ.
  • ಅ ನಂತರ ಅಡಿಕೆಯ ಬೆಲೆ ಭಾರೀ ಏರಿಕೆಯಾಗಲಾರಂಭಿಸಿದಾಗ ಅಳಿದುಳಿದ ಸ್ಥಳದಲ್ಲೂ ಅಡಿಕೆ ಕೃಷಿ ಮಾಡಿದೆವು.
  • ಆಗಲೂ ಸಸ್ಯ ಜೀವ ವೈವಿಧ್ಯಗಳಿಗೆ ಭಾರೀ ಏಟು ಬಿತ್ತು.
  • ಈಗ  ಮೀಸಲು ಅರಣ್ಯದಲ್ಲಿ ಮಾತ್ರ ಮರಮಟ್ಟುಗಳು ಉಳಿದುಕೊಂಡಿವೆ. ಯಾರೂ ಹಕ್ಕುದಾರರು ಇಲ್ಲದ ಕೆಲವೇ ಕೆಲವು ಸ್ಥಳಗಳಲ್ಲಿ ಕುರುಚಲು ಗಿಡಗಳಿವೆ.
  • ಅದೆಷ್ಟೋ ಸಸ್ಯ ವೈವಿದ್ಯಗಳು ಕಣ್ಮೆರೆಯಾಗಿವೆ. ಉದಾ: ಕಾಸರಕನ ಮರ ಕಾಣೆ. ಕನಪ್ಪಟೆ ಕಾಣೆ.
  • ನೆಲದಲ್ಲಿ ಬೆಳೆಯುವ ಹುಲ್ಲು ಸಸ್ಯಗಳಲ್ಲೂ ( ಮುಳಿ ಹುಲ್ಲಿನ ಚಾವಣಿಗೆ ಬಳಸುತ್ತಿದ್ದ ಹುಲ್ಲು) ಒಂದಶ್ಟು ವೈವಿಧ್ಯಗಳು ಕಾಣೆಯಾಗಿವೆ.
  • ಕಾಡು ಮತ್ತು ನಾಡಿನಲ್ಲೂ ಸ್ಥಳೀಯ ಸಸ್ಯ ವೈವಿಧ್ಯದ ಬೆಳವಣಿಗೆಯನ್ನು ಹತ್ತಿಕ್ಕುವ ಬಳ್ಳಿಗಳು, ಕಳೆ ಸಸ್ಯಗಳು ತಮ್ಮ ಪ್ರಾಭಲ್ಯವನ್ನು ಹೆಚ್ಚಿಸಿಕೊಳ್ಳುತ್ತಿವೆ.
  • ಎಲ್ಲಿ ನೋಡಿದರಲ್ಲಿ ಅಡಿಕೆ ತೋಟ, ರಬ್ಬರ್ ತೋಟವೇ. ಎಲ್ಲಾ ಕಡೆ ಏಕಬೆಳೆಯೇ ಆಗಿರುವ ಕಾರಣ ರೋಗ ಕಾರಕಗಳಿಗೆ ಅದೇ ಆಶ್ರಯವಾಗಿವೆ.
  • ಅಲ್ಲಿಂದ ಅದು ಹೋಗುವುದು ಇಲ್ಲ. ಹೋಗಲು ಅವಕಾಶವೂ ಇಲ್ಲದ ಸ್ಥಿತಿ ಉಂಟಾಗಿದೆ.
  • ಕರಾವಳಿ ಭಾಗದಲ್ಲಿ ರಬ್ಬರ್ ಬೆಳೆಯ ಮುಚ್ಚಲು ಬೆಳೆ (ಮುಖುನ) ಬಹಳಷ್ಟು ಸಸ್ಯ ಜೀವ ವೈವಿಧ್ಯವನ್ನು ನಾಶಮಾಡಿದೆ!

ರೋಗಕಾರಕಗಳು ಒಂದು ಸಸ್ಯವನ್ನು ಆಶ್ರಯಿಸಿದ್ದರೆ, ಆ ಸಸ್ಯ ನಾಶವಾದಾಗ ಅದರ ಆಶ್ರಯಪಡೆದಿದ್ದ ಪರಾವಲಂಭಿ ಜೀವಿ ಸಹ ನಾಶವಾಗುವುದೂ ಇದೆ. ಎರಡು ಮೂರು ಸಸ್ಯಗಳನ್ನು ಆಶ್ರಯಿಸಿರುವ ಪರಾವಲಂಭಿ ಜೀವಿ ಒಂದು ನಾಶವಾದರೆ ಮತ್ತೊಂದನ್ನು ಹೆಚ್ಚು ಆಶ್ರಯಿಸುತ್ತದೆ. 

ಉಲ್ಬಣಿಸಿದ ರೋಗ

ಯಾಕೆ ರೋಗ ಹೋಗಲಾಡಿಸಲು ಅಸಾಧ್ಯ?

  • ನಮ್ಮ ಕೃಷಿಕರ ಮನೋಸ್ಥಿತಿ  ವಿಭಿನ್ನ. ಒಬ್ಬ ನಾನು ರಾಸಾಯನಿಕ ಬಳಸುವುದಿಲ್ಲ.
  • ಏನಿದ್ದರೂ ಸಾವಯವ ಎಂಬ ಮಡಿವಂತಿಕೆ. ಮತ್ತೊಬ್ಬ ರಾಸಾಯನಿಕ ಮೂಲವಸ್ತುಗಳನ್ನು ಬಳಸಿಯೇ ಕೃಷಿ ಮಾಡುವವ.
  • ಕೆಲವರು ಎರಡನ್ನೂ ಬಳಸುವವರು. ಒಬ್ಬ ನನ್ನಲ್ಲಿ ರೋಗವೇ ಇಲ್ಲ ಎನ್ನುವವ.
  • ಇನ್ನೊಬ್ಬ ರೋಗ ಬಂದರೆ ಬರಲಿ. ಸಿಕ್ಕಿದ್ದು ಸಾಕು ಎಂಬ ಮನೋಸ್ಥಿತಿಯವ.
  • ನನ್ನ ತೋಟ ಉಳಿಯಲಿ, ನೆರೆಯವನ ತೋಟ ಹಾಳಾಗಿ ಹೋಗಲಿ ಎಂಬ ಮನೋಸ್ಥಿತಿಯವರೂ ಸಾಕಷ್ಟು ಜನ.
  • ಇಂತಹ ಮನೋಸ್ಥಿತಿಯಲ್ಲಿರುವ ನಾವು ರೋಗ ಬಂದರೆ ಅದನ್ನು ತಡೆಯುವುದು ಸಾಧ್ಯವೇ ಯೋಚನೆ ಮಾಡಿ.
  • ರೋಗಗಳಿಗೆ ಕಾರಣವಾದ ಶಿಲೀಂದ್ರಗಳು ಅಥವಾ ಬ್ಯಾಕ್ಟೀರಿಯಾ ಅಥವಾ ವೈರಸ್ ಗಳು ಗಾಳಿಯ ಮೂಲಕ, ನೀರಿನ ಮೂಲಕ, ವಾಹಕಗಳ ಮೂಲಕ ಪ್ರಸಾರವಾಗುತ್ತದೆ.
  • ಇದನ್ನು ನಿಯಂತ್ರಣ ಮಾಡಬೇಕಿದ್ದರೆ ಸಾಮೂಹಿಕ ಪ್ರಯತ್ನವನ್ನು ಮಾಡಬೇಕಾಗುತ್ತದೆ.
  • ನಾನು ಔಷಧಿ ಸಿಂಪಡಿಸುವುದು  ನೆರೆಯವರು ಸಿಂಪಡಿಸದೆ ಇರುವುದು, ಇಂತಹ ನಮ್ಮ ಚಟುವಟಿಕೆ ರೋಗವನ್ನು ಹದ್ದುಬಸ್ತಿಗೆ ತರಲು ಅಡ್ಡಿಯಾಗಿದೆ.
  • ಸಿಂಪರಣೆ ಮಾಡುವುದು ಬಿಡುವುದು, ಕೃಷಿ ಮಾಡುವುದು ಪಾಳು ಬಿಡುವುದು ಅವನವನ  ಐಚ್ಚಿಕ ವಿಷಯವಾಗಿರುತ್ತದೆ. 
  • ಸರಕಾರ ತೋಟಗಾರಿಕಾ ಇಲಾಖೆಯ ಮೂಲಕ  ಉಚಿತವಾಗಿ ಸಿಂಪರಣೆಗೆ ಬೇಕಾಗುವ ಶಿಲೀಂದ್ರ ನಾಶಕ ಪೂರೈಕೆಯಾದರೂ ಸಹ ಅದನ್ನು ಬಳಸುವವರೆಷ್ಟು ಮಂದಿ  ಇದ್ದಾರೆ? 
  • ಇವೆಲ್ಲಾ ಕಾರಣಗಳಿಂದ ಎಲೆ ಚುಕ್ಕೆರೋಗವನ್ನು ಒಮ್ಮೆಗೆ ಸಿಂಪರಣೆ ಮಾಡಿ ನಿಯಂತ್ರಣಕ್ಕೆ ತರಬಹುದು ಹೊರತಾಗಿ ಅದನ್ನು ಶಾಶ್ವತವಾಗಿ ದೂರಮಾಡಲು ಅಸಾಧ್ಯ.

ಎಲೆ ಚುಕ್ಕೆರೋಗವನ್ನು ಅವರವರ ತೋಟದಲ್ಲಿ ಹದ್ದುಬಸ್ತಿನಲ್ಲಿ ಇಡಬೇಕಾದರೆ ಶಿಲೀಂದ್ರ ನಾಶಕವನ್ನು  ಪ್ರತೀ ತಿಂಗಳೂ ಬಳಸಬೇಕಾಗಬಹುದು. ಶಿಲೀಂದ್ರ ನಾಶಕದ ಬೆಲೆ, ಸಿಂಪಡಿಸುವ ಖರ್ಚು ವೆಚ್ಚಗಳನ್ನು ಲೆಕ್ಕಾಚಾರ ಹಾಕಿದರೆ ಅದು ಬೆಳೆಗಾರರಿಗೆ ಭಾರೀ ನಷ್ಟದ್ದು. ಇದನ್ನು ಲೆಕ್ಕಾಚಾರ ಹಾಕಿಯೇ ಬಹಳಷ್ಟು ಜನ ಬೇರೆಯವರು ಸಿಂಪರಣೆ ಮಾಡಿದಾಗ ನನ್ನ ತೋಟದಲ್ಲಿ ಎಲೆ ಚುಕ್ಕೆರೋಗ ಕಡಿಮೆಯಾಗಬಹುದು ಎಂದು ಸುಮ್ಮನೆ ಇರುವುದು ಉಂಟು.

 ಜನ ಈಗ ಬಹಳ ಬುದ್ಧಿವಂತರಾಗಿದ್ದಾರೆ:

  • ಯಾವುದಾದರೂ ಒಂದು ಕೃಷಿ ಸಂಬಂಧಿತ ವಿಚಾರ ಸಂಕಿರಣ ನಡೆಯುವಾಗ ಸೇರಿದ ಜನರಲ್ಲಿ ಕೆಲವು ಜನರನ್ನು ಮಾತಾಡಿಸಿರಿ.
  • ಅದರಲ್ಲಿ  ಹೆಚ್ಚಿನವರು  ಇದೆಲ್ಲಾ ಆಗು ಹೋಗುವಂತದ್ದಲ್ಲ ಎಂಬ ಅಭಿಪ್ರಾಯವನ್ನೇ ವ್ಯಕ್ತಪಡಿಸುತ್ತಾರೆ. 
  • ಇನ್ನು ಕೃಷಿ ವಿಜ್ಞಾನಿಗಳ ಮಾತಿನಲ್ಲೂ ನಂಬಿಕೆ ಇಲ್ಲದ ಜನ ನಮ್ಮಲ್ಲಿ ಸಾಕಷ್ಟು ಇದ್ದಾರೆ. 
  • ಇದೆಲ್ಲಾ ಟ್ರಾಯಲ್ ಎಂಡ್ ಎರರ್ ಎಂಬುದಾಗಿಯೂ ಹೇಳುವವರಿದ್ದಾರೆ. 
  • ಕೆಲವರು ಇನ್ನೂ ಮುಂದುವರಿದು ಔಷಧಿ ಕಂಪೆನಿಯವರ ಜೊತೆ  ಹೊಂದಾಣಿಕೆ ಮಾಡಿಕೊಂಡು ಔಷದೋಪಚಾರ ಶಿಫಾರಸು ಮಾಡಲಾಗುತ್ತಿದೆ ಎಂಬುದಾಗಿಯೂ  ಹೇಳುವುದುಂಟು.
ಎಲ್ಲಾ ಕಡೆಯ ಮರಗಳಲ್ಲೂ ಈ ರೀತಿಯ ಚಿನ್ಹೆ ಕಾಣಿಸುತ್ತಿದೆ.

ಪೋಷಕಾಂಶ ಕೊಟ್ಟು ನಿಯಂತ್ರಣ ಮಾಡುವುದು ಸಾಧ್ಯವಿದೆ:  

  • ರೋಗ ಬರಲು ಕೆಲವು ಕಾರಣಗಳಿವೆ. ಒಂದು ಮೂಲದಿಂದ ಬಂದದ್ದು.
  • ಈ ಹಿಂದೆ ಹೇಳಿದಂತೆ ರೋಗ ಇರುವ ಮರದ ಬೀಜದ ಆಯ್ಕೆಯಿಂದ  ರೋಗ ಪ್ರಸಾರವಾಗುತ್ತದೆ.
  • ಬೀಜದ ಆಯ್ಕೆ ಮತ್ತು ಸಸಿ ಆಯ್ಕೆಯಲ್ಲಿ ನಾವು ತಪ್ಪಿದರೆ  ರೋಗ ಬಂದೇ ಬರುತ್ತದೆ. 
  • ಇದರಲ್ಲಿ ಕೃಷಿಕರು ಜಾಗರೂಕರಾಗಿರಬೇಕು. ಬಹಳಷ್ಟು ಜನ ರೈತರು ಸಾವಯವ ಎಂದು ಮೈ ಮೇಲೆ ದೆವ್ವ ಬಡಿದವರಂತೆ ವರ್ತಿಸುತ್ತಾರೆ.
  • ಒಂದು ಮರಕ್ಕೆ ಆರೋಗ್ಯಕರವಾಗಿ ಬೆಳೆಯಲು, ಫಲ ಕೊಡಲು ಬೇಕಾಗುವಷ್ಟು ಸಾವಯವ ಗೊಬ್ಬರ ಪೂರೈಕೆ ಮಾಡಲು ಅವರಲ್ಲಿ ಮೂಲವಸ್ತುಗಳಿದ್ದರೆ ಅದನ್ನು ಒಪ್ಪಬಹುದು.
  • ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ  ಪೋಷಕಗಳನ್ನು ನೀಡುತ್ತಾ ಸಾವಯವ  ಎಂದು ಬಿಬ್ಬಿಡುವವರ ತೋಟ ರೋಗಗಳ ಗೂಡೇ ಆಗಿರುತ್ತದೆ.
  • ಸಸ್ಯಕ್ಕೆ ಬೇಕಾಗುವಷ್ಟು ನೀರು, ಗೊಬ್ಬರವನ್ನು ಹಿತಮಿತವಾಗಿ ವಿಭಜಿತ ಕಂತುಗಳಲ್ಲಿ ಕೊಡುವ ಅಭ್ಯಾಸವನ್ನು ರೈತರಾದವರು ಮಾಡಬೇಕು. 
  • ಬೇರುಗಳಿಗೆ ಘಾಸಿಯಾಗುವಂತೆ ವರ್ಷಕ್ಕೊಮ್ಮೆ ಗೊಬ್ಬರ ಸುರಿಯುವುದು ಮಾಡಬಾರದು.
  • ಉತ್ತಮ ರೀತಿಯಲ್ಲಿ ಪೋಷಕಾಂಶಗಳನ್ನು ಒದಗಿಸಿದ ಬಹಳಷ್ಟು ಕಡೆ ರೋಗ ಹಾನಿಕಾರಕ ಸ್ಥಿತಿಯಲ್ಲಿ ಇಲ್ಲದಿರುವುದನ್ನು ನಾವೆಲ್ಲರೂ ಗಮನಿಸಬಹುದು. 
  • ಬೆಳೆಗಳಿಗೆ ಏನೆಲ್ಲಾ ಪೊಷಕಾಂಶ ಬೇಕು ಅದನ್ನು ಚಾಚೂ ತಪ್ಪದೆ ಒದಗಿಸಬೇಕು.
  • ಮಣ್ಣು ಪರೀಕ್ಷೆಯ ಮೂಲಕ ಸೂಕ್ಷ್ಮ ಪೊಷಕಾಂಶಗಳ ಅಗತ್ಯವನ್ನು ತಿಳಿದು ಬಳಸಬೇಕು.

ಪೋಷಕಾಂಶ ಬಳಕೆ ಬಗ್ಗೆ ಮತ್ತೆ ಅಧ್ಯಯನ ಬೇಕು:

  • ಅಡಿಕೆ ಮರಗಳಿಗೆ ಈಗಾಗಲೇ ಇಂತಿಷ್ಟು NPK ಪೊಷಕಾಶಗಳನ್ನು ನೀಡಬೇಕು ಎಂಬ  ಶಿಫಾರಸು ಇದೆ.
  • ಇದು ಈಗಿನ ಸ್ಥಿತಿಗೆ ಸಾಕೇ , ಅಥವಾ ಇನ್ನೂ ಹೆಚ್ಚು ಕಡಿಮೆ ಮಾಡಬೇಕೇ ಎಂಬ ಬಗ್ಗೆ ಮತ್ತೆ ಅಧ್ಯಯನ ನಡೆಸಬೇಕಾಗಿದೆ.
  • ಈಗ ಕೃಷಿ ಮಾಡಿದ ಭೂಮಿ, ಸತ್ವ ಕಳೆದುಕೊಡಿರಬಹುದು. ಕೃಷಿಗೆ ಸೇರ್ಪಡೆಯಾಗುತ್ತಿರುವ ಭೂಮಿ ಏನೇನೂ ಸಾರ ಹೊಂದಿರದೇ ಇರಬಹುದು.
  • ಮೇಲ್ ಮಣ್ಣು ರಹಿತ ಕೃಷಿಯೇ ಈಗ ಜಾಸ್ತಿಯಾಗಿರುವ ಕಾರಣ  ಮತ್ತೆ ಪೋಷಕಾಂಶಗಳ ಪೂರೈಕೆ ಬಗ್ಗೆ ಅಧ್ಯಯನ ಆಗಬೇಕು.

ಎಲೆ ಚುಕ್ಕೆರೋಗ ಉಲ್ಬಣಾವಸ್ಥೆಗೆ ತಲುಪು ಮೂಲ ಕಾರಣ ಎನೇ ಇರಲಿ. ಇದರಿಂದಾಗಿ ಇಳುವರಿ ಬಹಳಷ್ಟು ಕಡಿಮೆಯಾಗುತ್ತದೆ. ಮರಗಳು ಸಸಿಗಳು ನಿಸ್ತೇಜವಾಗುತ್ತದೆ. ಕಾರಣಸಮತೋಲನ ಗೊಬ್ಬರ, ಮತ್ತು ಅಗತ್ಯಬಿದ್ದರೆ ಶಿಫಾರಿತ ಪ್ರಮಾಣದ ಶಿಲೀಂದ್ರ ನಾಶಕನ್ನು ಸಿಂಪರಣೆ ಮಾಬೇಕು. ಸಸ್ಯಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವ ಬೇಸಾಯ ಕ್ರಮ ಎಲ್ಲದಕ್ಕಿಂತ ಉತ್ತಮ.

Leave a Reply

Your email address will not be published. Required fields are marked *

error: Content is protected !!