ಆರೋಗ್ಯ ರಕ್ಷಕ ಸಾವಯವ ತರಕಾರಿಗಳು.

ಸಂಪೂರ್ಣ ಸಾವಯವ ತರಕಾರಿ

ಗಡ್ಡೆ ಗೆಣಸಿನ ಬೆಳೆ ಬಹಳ ಹಿಂದಿನದ್ದು. ಬಹುಷಃ  ಮಾನವ ಬೇಯಿಸಿ ತಿನ್ನುವುದನ್ನು ಕಲಿಯುವ ಮುಂಚೆ  ಕಂದ ಮೂಲಗಳನ್ನು ತಿಂದು ಬದುಕುತ್ತಿದ್ದರಂತೆ. ಇದರಷ್ಟು ಆರೋಗ್ಯಕರ ತರಕಾರಿ ಬೇರೊಂದಿಲ್ಲ. ಇದಕ್ಕೆ ರಾಸಾಯನಿಕಗಳ ಅಗತ್ಯವೇ ಇಲ್ಲ. ಸಂಪೂರ್ಣ ಸಾವಯವ ತರಕಾರಿ ಎಂದರೆ ಇದು.

ಇವುಗಳನ್ನು ಮರೆತು ಹೋದ ತರಕಾರಿಗಳು ಎಂದು ಹೇಳಿದರೂ ತಪ್ಪಾಗಲಾರದು. ತಲೆಮಾರಿನಿದ ತಲೆಮಾರಿಗೆ ಬದಲಾವಣೆಯಾಗುವಾಗ ಕೆಲವು ಮರೆತು ಹೋಗುವ ವಿಚಾರಗಳಿರುತ್ತವೆ. ಅವುಗಳಲ್ಲಿ ಈ ಗಡ್ಡೆ ಗೆಣಸು ತರಕಾರಿಗಳ ಬೆಳೆ ಹಾಗೂ ಅಡುಗೆಯೂ ಸೇರಿದೆ. ಈ ತರಕಾರಿಗಳಲ್ಲಿ  ಇರುವಷ್ಟು ಆರೋಗ್ಯ ಗುಣ ಬೇರೆ  ಯಾವುದರಲ್ಲೂ ಇಲ್ಲ. ಆದರೆ ಬೆಳೆಯುವವರೂ ಕಡಿಮೆಯಾಗುತ್ತಿದ್ದಾರೆ. ಬಳಸುವವರೂ ಕಡಿಮೆಯಾಗಿದ್ದಾರೆ.ಸುಲಭವಾಗಿ ಬೆಳೆಯಬಹುದಾದ ತರಕಾರಿಗಳು. ಇತ್ತೀಚೆಗೆ ಈ ಗಡ್ಡೆ ಗೆಣಸುಗಳಿಗೆ ಮಹತ್ವ ಬರಲಾರಂಭಿಸಿದ್ದು, ಬೆಳೆಯುವವರಿಗೆ ಇದು ಲಾಭದಾಯಕವೂ ಆಗುತ್ತಿದೆ.

  • ಏನೂ ಆಹಾರ ದೊರೆಯದಾಗ ಗಡ್ಡೆ ಗೆಣಸನ್ನು ಸುಟ್ಟು ತಿನ್ನುವುದು ಇತ್ತು ಎನ್ನುತ್ತಾರೆ.
  • ಸುಮಾರು 70 ವರ್ಷಕ್ಕೆ ಹಿಂದೆ ಕಂಟ್ರೋಲ್ ಎಂಬ ಸ್ಥಿತಿ ಬಂದಿತ್ತಂತೆ.
  • ಆಗ ಜನ ಊಟಕ್ಕೆ  ಅಕ್ಕಿ ಇಲ್ಲದೆ ಒಮ್ಮೆ ಅನ್ನ ಬೇಯಿಸಿ ಅದರ ಗಂಜಿ ಕುಡಿದು ಮತ್ತೆ  ಒಣಗಿಸಿ ಅದನ್ನು ಉಂಡು ದಿನಕ್ಕೆ ಒಂದು ಊಟ ಮಾಡುತ್ತಿದ್ದರಂತೆ.
  •  ಆ ಸಮಯದಲ್ಲಿ  ತೀರಾ ಬಡವರಿಗೆ  ದಿನಗಟ್ಟಲೆ ಊಟ  ದೊರೆಯುತ್ತಿರಲಿಲ್ಲವಂತೆ. ಅ ಸಮಯದಲ್ಲಿ ಜನ ಬದುಕಿದ್ದು ಗಡ್ಡೆ ಗೆಣಸು ತಿಂದು.

ನರೆ ಗಡ್ಡೆ, ಕೆಸುವಿನ ಗಡ್ಡೆ, ಮರಗೆಣಸು, ಸಿಹಿ ಗೆಣಸು ಮುಂತಾದವುಗಳನ್ನು ಸುಟ್ಟು ತಿಂದು ಬದುಕಿದ ಕಥೆಯನ್ನು 80-85 ವರ್ಷದ ಹಿರಿಯರು ಈಗಲೂ  ನೆನಪಿಸಿಕೊಳ್ಳುತ್ತಾರೆ.

ಅಡ್ದ ತಾಳಿ ಗಣಸು

ಗಡ್ಡೆ ಗೆಣಸು ಬೆಳೆಯೂ ಹೌದು:

  • ಈಗ ನಾವು ಕಾಣುವ ತರಕಾರಿಗಳು ಹಿಂದೆ ತುಂಬಾ ಕಡಿಮೆ ಇದ್ದುದು.
  • ಹೆಚ್ಚಾಗಿ ಮಳೆಯಾಶ್ರಯದಲ್ಲಿ ಬೆಳೆಯುತ್ತಿದ ತರಕಾರಿಗಳೆಂದರೆ ಗೆಡ್ಡೆ ಗೆಣಸುಗಳು.
  • ಇದನ್ನು ಮಳೆ ನಿಂತ ನಂತರ ಬೇಕಾದಂತೆ ವರ್ಷ ಪೂರ್ತಿ ಬಳಕೆ ಮಾಡುತ್ತಿದ್ದರು.
  • ತರಕಾರಿ ಎಂದೆರೆ ಕೆಸು ಗಡ್ಡೆ, ಕೇನೆ ( ಸುವರ್ಣ ಗಡ್ಡೆ) ಅಡ್ದ ತಾಳಿ ನೀಟ ತಾಳಿ, ಸಾಂಬ್ರಾಣಿ ಗಡ್ಡೆಗಳು.

ಗಡ್ಡೆ ಗೆಣಸುಗಳಲ್ಲಿ  ವಾಣಿಜ್ಯ ಮಹತ್ವ ಪಡೆದ ಪ್ರಮುಖ  ತರಕಾರಿ ಮರಗೆಣಸು. ಇದನ್ನು ತರಕಾರಿಯಾಗಿ ಕೇರಳದಲ್ಲಿ ಮಾತ್ರ ಹೆಚ್ಚಾಗಿ ಬಳಸುತ್ತಾರೆ. ಆದರೆ ಔದ್ಯಮಿಕ ಬಳಕೆ ಅತ್ಯಧಿಕ. ಇದನ್ನು ಕೇರಳ, ತಮಿಳುನಾಡು, ಆಂದ್ರ ಪ್ರದೇಶ ಮತ್ತು ಕೇರಳಿಗರು ಬಂದ ಕರ್ನಾಟಕ, ಮಹಾರಾಷ್ಟ್ರಗಳ ಕೆಲವು ಭಾಗಗಳಲ್ಲಿ  ಭಾರಿ ಪ್ರಮಾಣದಲ್ಲಿ ಬೆಳೆಯುತ್ತಾರೆ.

 ಕಾಡಿನಲ್ಲಿ  ಬೆಳೆಯುತ್ತಿದ್ದ ಈ ಗೆಡ್ಡೆ ಗೆಣಸುಗಳನ್ನೇ  ಮಾನವ ಪ್ರಪ್ರಥಮವಾಗಿ ಹೊಲದಲ್ಲಿ  ಬೆಳೆಯಾಗಿ ಬೆಳೆಸಲು ಪ್ರಾರಂಬಿಸಿದ್ದು. ಆನಂತರದಲ್ಲಿ  ಬಂದದ್ದು ಈಗಿನ ತರಕಾರಿ ಬೆಳೆಗಳು.

  • ಈಗ ಇದರ ಬೆಳೆ ತುಂಬಾ ಕಡಿಮೆಯಾಗಿದೆ ಹೊಸ ತಲೆಮಾರಿನ ಜನಕ್ಕೆ ಇದರ ಉಪಯೋಗ ಮಾಡುವುದೂ ಗೊತ್ತಿಲ್ಲ
  • ಕೆಲವೇ ಕೆಲವು ಜನ ಇದನ್ನು  ಬೆಳೆಸುತ್ತಾರೆ. ಮಹತ್ವ ಗೊತ್ತಿದ್ದವರು ಮಾತ್ರ ಅದನ್ನು ಎಷ್ಟೇ ಬೆಲೆಯಾದರೂ ಕೊಳ್ಳುತ್ತಾರೆ.

ಬಳ್ಳಿ ಗೆಣಸು

ಮರಗೆಣಸು ಎಂಬ ತರಕಾರಿ ಇಂದು ಎಷ್ಟು ಪ್ರಚಲಿತವಾಗಿದೆ ಎಂದರೆ ಇದರಲ್ಲಿ 200 ಕ್ಕೂ ಹೆಚ್ಚು ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಇದರಿಂದ ವೈವಿಧ್ಯಮಯವಾದ ಉತ್ಪನ್ನಗಳನ್ನು ತಯಾರಿಸುವ  ಸಾಕಷ್ಟು ಉದ್ದಿಮೆಗಳು ತಮಿಳುನಾಡಿನ ಸೇಲಂ ನಲ್ಲಿ ಇವೆ. ಮರಗೆಣಸಿಗೆ ಸರಾಸರಿ ಕಿಲೋ 10 ರೂ. ತನಕ ಬೆಲೆ ಇರುತ್ತದೆ. ಇದರ ಉತ್ಪನ್ನಗಳು ಪ್ರಪಂಚದ ಬೇರೆ ಬೇರೆ ಬೇರೆ ದೇಶಗಳಿಗೆ ರಪ್ತು ಸಹ ಆಗುತ್ತದೆ.  ಇದರಲ್ಲಿ ಹಲವಾರು ಉತ್ತಮ ತಳಿಗಳನ್ನೂ ಸಹ ಪರಿಚಯಿಸಲಾಗಿದೆ.

ಉತ್ತಮ ಬೆಲೆಯೂ ದೊರೆಯುತ್ತದೆ:

  • ಈ ತರಕಾರಿಗೆ ಯಾವುದೇ ರಾಸಾಯನಿಕ ಗೊಬ್ಬರ ಅಗತ್ಯವಿಲ್ಲ.
  • ಫಲವತ್ತಾದ ಮಣ್ಣು ಇದ್ದರೆ ಸಾಕು.
  • ಯಾವುದೇ ಕೀಟ ರೋಗ ಬಾಧೆ  ಇಲ್ಲ ಅದ ಕಾರಣ ಯಾವುದೇ ರಾಸಾಯನಿಕ ಔಷಧ ಸಿಂಪರಣೆ ಅಗತ್ಯವೂ ಇಲ್ಲ.

ಗಡ್ಡೆ ಗೆಣಸು ತರಕಾರಿಗಳಲ್ಲಿ ಪ್ರಮುಖವಾದವುಗಳು ಬಳ್ಳಿ ಗೆಣಸುಗಳು. ಇವು ಬಳ್ಳಿಯಾಗಿ ಭೂಮಿಯ ಮೇಲ್ಮೈಯಲ್ಲಿ ಬೆಳೆದು ನೆಲದಡಿಯಲ್ಲಿ ಗಡ್ಡೆಯನ್ನು ಬಿಡುತ್ತವೆ.ಬಳ್ಳಿ ಪೂರ್ತಿ ಬೆಳೆದು ಒಣಗುವಾಗ ಕೆಳಭಾಗದ ಗಡ್ಡೆ ಬೆಳೆದಿರುತ್ತದೆ. ಗಡ್ಡೆಯನ್ನು ಬೆಳೆದ ತಕ್ಷಣ ಕೀಳಬೇಕಾಗಿಲ್ಲ. ದಂಶಕಗಳ ಉಪಟಳಕ್ಕಾಗಿ ಕೀಳಬೇಕಷ್ಟೇ. ಇದು ನೆಲದಲ್ಲೇ ತಾಜಾ ಸ್ಥಿತಿಯಲ್ಲಿ ಉಳಿಯುತ್ತದೆ. ಬೇಕಾದಾಗ ಕಿತ್ತು ಬಳಕೆ  ಮಾಡಬಹುದು.

ಗೆಣಸು ಗಡ್ದೆ

ಗಡ್ಡೆ ಗೆಣಸಿನ ವಿಧಗಳು:

  • ಮರಗೆಣಸು – (cassava) ಇದರಲ್ಲಿ ಸುಮಾರು 12 ತಳಿಗಳಿವೆ.
  • ಸಿಹಿ ಗೆಣಸು –(sweet potato) ಇದರಲ್ಲಿ ಸುಮಾರು 10ರಷ್ಟು ತಳಿಗಳಿವೆ.
  • ದೊಡ್ಡ ಗೆಣಸು –( graater yam)  ಇದರಲ್ಲಿ ಮೂರು ತಳಿಗಳಿವೆ.
  • ಬಿಳಿ ಗೆಣಸು – (White yam ) ಮೂರು ತಳಿಗಳಿವೆ.
  • ಸಣ್ಣಗೆಣಸು  (lesser yam) ಇದರಲ್ಲಿ ಎರಡು ತಳಿಗಳಿವೆ.
  • ಸಾಮ್ರಾಣಿ ( Chanise potato)ಇದರಲ್ಲಿ  ಒಂದೇ ತಳಿ.
  • ಸುವರ್ಣ ಗಡ್ಡೆ ( eliphent foot yam) ಇದರಲ್ಲಿ ಒಂದು ತಳಿ ಇದೆ.
  • ಕೆಸು (Taro Colacasia) ಇದರಲ್ಲಿ ಎರಡು ತಳಿಗಳಿವೆ. ಸ್ಥಳೀಯವಾಗಿ ಹೆಸರಿಸಲ್ಪಡದ ಹಲವಾರು ತಳಿಗಳಿವೆ.

ಮಾವಿನ ಕಾಯಿಯ ಪರಿಮಳದ ಗಡ್ದೆ

ಗಡ್ಡೆ ಗೆಣಸು ಬೆಳೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಭಾರತ ಸರಕಾರವು ಕೇರಳದ ತಿರುವನಂತಪುರದಲ್ಲಿ ಕೇಂದ್ರೀಯ ಗಡ್ಡೆ ಗೆಣಸು ಬೆಳೆಗಳ ಸಂಶೋಧಾನಾ ಸಂಸ್ಥೆಯನ್ನು  (CTCRI ) ತೆರೆದಿದೆ. ಇಲ್ಲಿ ಬಹುತೇಕ ಎಲ್ಲಾ ಗಡ್ಡೆ ಗೆಣಸುಗಳ ಸಂರಕ್ಷಣೆ ನಡೆಯುತ್ತದೆ, ಇದರ  ಬಗ್ಗೆ ಸಂಶೊಧನೆಯೂ ನಡೆಯುತ್ತದೆ.

ಇವೆಲ್ಲವೂ ಖಾದ್ಯ ಗಡ್ಡೆ ಗೆಣಸುಗಳು. ಇದಲ್ಲದೆ ನಮ್ಮ ಸುತ್ತಮುತ್ತ ಹಲವಾರು ಬಗೆಯ ತಿನ್ನಲು ಬಳಸಲು ಆಗದ ಗಡ್ಡೆ ಗೆಣಸುಗಳಿವೆ.ಗಡ್ಡೆ ಗೆಣಸಿನಲ್ಲಿ ಅತ್ಯಧಿಕ ಪೋಟೀನು ಅಂಶ ಇರುವ ಕಾರಣ ಇದನ್ನು ಅನ್ನ ಆಹಾರದ ಬದಲಿಗೂ ಉಪಯೋಗಿಸಬಹುದು. ಮುಂದಿನ ದಿನಗಳಲ್ಲಿ ಈ ತರಕಾರಿಗಳಿಗೆ ಮಹತ್ವ ಬರಲಿದೆ. ಯಾಕೆಂದರೆ ಇದು ಮಾನವ ದೇಹಕ್ಕೆ ಅನಾರೋಗ್ಯ ತಂದುಕೊಟ್ಟಂತಹ ಕೀಟನಾಶಕ ಬಳಸದೆ ಬೆಳೆಯುವ ಬೆಳೆ. ಹಾಗಾಗಿ ಇವುಗಳ ಬಳಕೆಯನ್ನು ಮರೆಯಬೇಡಿ.

Leave a Reply

Your email address will not be published. Required fields are marked *

error: Content is protected !!