ವಿಯೆಟ್ನಾಂ ಮೀರಿಸುವ ಕರಿಮೆಣಸು ಬೆಳೆಗಾರರು ಇವರು.

ಮೆಣಸಿನ ಬಳ್ಳಿಯ ವಿಹಂಗಮ ನೊಟ

ವಿಯೆಟ್ನಾಂ ದೇಶದಲ್ಲಿ ಕರಿಮೆಣಸು, ಗೋಡಂಬಿ ಬೆಳೆಯನ್ನು ತೀರಾ ವಾಣಿಜ್ಯಿಕವಾಗಿ ಬೆಳೆದು ಗರಿಷ್ಟ ಇಳುವರಿ ಪಡೆಯುತ್ತಾರಂತೆ.  ಅಲ್ಲಿರುವ  ಎಲ್ಲಾ ಅನುಕೂಲಗಳು ನಮಲ್ಲೂ ಇದ್ದಿದ್ದರೆ  ನಮ್ಮ ರೈತರೂ ಅವರನ್ನು ಮೀರಿಸುತ್ತಿದ್ದರು. ಆದರೂ ನಮ್ಮ ರೈತರು ಹಿಂದೆ ಬಿದ್ದಿಲ್ಲ.

ಅಂದು -ಇಂದು:

  • ಹಿಂದೆ ನಮಗೆ ನಮ್ಮ ಊರು, ಹೆಚ್ಚೆಂದರೆ ರಾಜ್ಯ , ಹೊರಗಡೆಯ ಪರಿಚಯ ಇರಲಿಲ್ಲ.
  • ಹೆಚ್ಚೇಕೆ ಬೆಂಗಳೂರಿಗೆ ಹೋಗಿ  ಎನಾದರೂ ತಿಳಿದುಕೊಳ್ಳುವುದೂ ಸಹ ಕಷ್ಟವಿತ್ತು.
  • ಸ್ಥಳೀಯ  ಬೆಳೆ ಮಾಹಿತಿಗಳಲ್ಲೇ ಕೃಷಿ ಮಾಡುತ್ತಿದ್ದೆವು.
  • ಕೃಷಿ ವಿಜ್ಞಾನ, ತಂತ್ರಜ್ಞಾನಗಳು ಇದ್ದವಾದರೂ ಅದನ್ನು ಪಡೆದುಕೊಳ್ಳಲು ನಮಗೆ ಆಗುತ್ತಿರಲಿಲ್ಲ.

ಎಷ್ಟೊಂದು ಕಾಲ ಬದಲಾವಣೆ ಆಯಿತಲ್ಲವೇ . ಈಗ ಕೃಷಿ ವಿಜ್ಞಾನಿಗಳ  ತಪ್ಪನ್ನೂ ಸಹ ರೈತರು ಪ್ರಶ್ನೆ ಮಾಡುವ ಮಟ್ಟಕ್ಕೆ ಬಂದಿದ್ದಾರೆ. ಹೆಚ್ಚೇಕೆ , ದೇಶದ ಯಾವ ಮೂಲೆಯಲ್ಲಿ ಯಾವ ಮಾಹಿತಿ ಇದ್ದರೂ ಸಹ ಅದನ್ನು ತಿಳಿಯುವ ಮಟ್ಟಕ್ಕೆ  ಕೆಲವು  ರೈತರು ಮುಂದುವರಿದಿದ್ದಾರೆ.

ಪ್ರತಿಯೊಂದು ಅಡಿಕೆ ಮರಕ್ಕೂ ಮೆಣಸಿನ ಬಳ್ಳಿ
ಪ್ರತಿಯೊಂದು ಅಡಿಕೆ ಮರಕ್ಕೂ ಮೆಣಸಿನ ಬಳ್ಳಿ
  • ತಂತ್ರಜ್ಞಾನ ವನ್ನು  ತಿಳಿದು ಅದನ್ನು ಸಾಧ್ಯವಾದಷ್ಟು ಇಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು  ಕೆಲವು ರೈತರು ಮಾಡಿದ್ದುಂಟು.
  • ಇಂತಹ ರೈತರಲ್ಲಿ ಒಬ್ಬರು  ಯಲ್ಲಾಪುರ ತಾಲೂಕಿನ ಚವತ್ತಿಯ ಸುಧೀರ್ ಬಲ್ಸೆಯವರು.
  • ಇವರು ಅಡಿಕೆ ಬೆಳೆಗಾರರು. ಅಡಿಕೆಯೊಂದಿಗೆ  ಮಿಶ್ರ ಬೆಳೆ ಕರಿಮೆಣಸು.
  • ಬಹುತೇಕ ಎಲ್ಲಾ ಅಡಿಕೆ  ಮರಗಳಿಗೂ ಮೆಣಸನ್ನು  ಬಿಟ್ಟಿದ್ದಾರೆ.

ಇವರು ಹಿಂದಿನಿಂದಲೂ ಕೃಷಿಯನ್ನು ವೈಜ್ಞಾನಿಕ ವಿಧಾನದಲ್ಲಿ ಮಾಡುತ್ತಾ ಬಂದವರು. ಅಡಿಕೆ  ಕೃಷಿಯನ್ನೂ ಸಹ ವೈಜ್ಞಾನಿಕವಾಗಿಯೇ ಮಾಡಿದವರು. ಇಲ್ಲಿನ ಕರಿಮೆಣಸಿನ ಬೆಳೆಯಂತೂ  ನೋಡುವಂತದ್ದೇ ಎನ್ನಬಹುದು.

  • ಶಿಶ್ತು ಬದ್ಧ ಕೃಷಿ. ಸ್ವಚ್ಚ ಹೊಲ. ಸಮಯಾಧಾರಿತ ಕೃಷಿಕೆಲಸಗಳ ಮೂಲಕ  ಮಾದರಿಯಾಗಿ ಕೃಷಿ ಮಾಡಿದ್ದಾರೆ.
  • ಈ ತೋಟವನ್ನು ನೋಡಿದರೆ ಮಾಲಕರನ್ನು ಮಾತನಾಡಿಸದೆಯೇ ಬೆಳೆ ಕ್ರಮವನ್ನು  ತಿಳಿಯಬಹುದು.

ಹಾಗೆ ನೋಡಿದರೆ ಕರಿಮೆಣಸಿನ ಬೆಳೆ ವೈಭವವನ್ನು ನೋಡಬೇಕಾದರೆ  ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ಸಿದ್ದಾಪುರ, ಶಿವಮೊಗ್ಗದ ಸಾಗರ, ತೀರ್ಥಹಳ್ಳಿಗಳಿಗೆ ಹೋಗಬೇಕು. ಎಂತೆಂಥಹ ತೋಟಗಳಿವೆ. ಅದೆಷ್ಟು ವ್ಯವಸ್ಥಿತವಾಗಿವೆ. ಎಷ್ಟೊಂದು ವೈಜ್ಞಾನಿಕತೆಯನ್ನು ಅಳವಡಿಸಿಕೊಂಡು ಉತ್ಕೃಷ್ಟ ಗುಣಮಟ್ಟದ ಬೆಳೆ ಪಡೆಯುತ್ತಿದ್ದಾರೆ.

ಮೆಣಸಿನ ಬೆಳೆಯಲ್ಲಿ ಇವರು ರೋಗವನ್ನೇ ಕಾಣದವರು. ಶ್ರೀ ಸುಧೀರ್ ಬಲ್ಸೆ ಚವತ್ತಿ
ಮೆಣಸಿನ ಬೆಳೆಯಲ್ಲಿ ಇವರು ರೋಗವನ್ನೇ ಕಾಣದವರು. ಶ್ರೀ ಸುಧೀರ್ ಬಲ್ಸೆ ಚವತ್ತಿ

ಸ್ವಚ್ಚತೆಗೆ ಆಧ್ಯತೆ:

  • ಬಲ್ಸೆಯವರ ಕರಿಮೆಣಸಿನ ತೋಟದಲ್ಲಿ ರೋಗಗಳಿಲ್ಲ. ಬಳ್ಳಿಯ  ನಿರ್ವಹಣೆಯಂತೂ ಬಹಳ ಅಚ್ಚುಕಟ್ಟು.
  • ವರ್ಷವರ್ಷವೂ ಹೊಲಕ್ಕೆ ಬೇಸಿಗೆಯಲ್ಲಿ ತರಗೆಲೆ, ಕರಡ ಹುಲ್ಲನ್ನು ಹಾಸುತ್ತಾರೆ.
  • ಬಳ್ಳಿಯ ಬೇರುಗಳಿಗೆ ನೀರಿನಿಂದ ಯಾವ ತೊಂದರೆಯೂ ಆಗುವುದಿಲ್ಲ. ಆದ್ದರಿಂದ ರೋಗ ಸುಳಿಯುವುದಿಲ್ಲ.
  •   ಬಹಳ ಹಿಂದೆಯೇ ಅಂತರ್ಗತ ಬಸಿಗಾಲುವೆ ಮಾಡಿಸಿದ್ದಾರೆ. ತೋಟ ಎಂದರೆ ಎಲ್ಲೂ ಅಡ್ದಾದಿಡ್ಡಿ ಬಿದ್ದ  ಬೆಳೆ ತ್ಯಾಜ್ಯಗಳಿಲ್ಲ.
  • ಅದನ್ನೆಲ್ಲಾ ತಕ್ಷಣ  ವಿಲೇವಾರಿ ಮಾಡುತ್ತಾರೆ. ಇದರಿಂದಾಗಿಯೇ ತೋಟದ ಒಳಗೊಮ್ಮೆ ಹೊಕ್ಕು ವೀಕ್ಷಿಸೋಣ ಎನ್ನಿಸುತ್ತದೆ.

ವೈಶಿಷ್ಟ್ಯತೆ:

ಮೆಣಸಿನ ಬಳ್ಳಿ ಬುಡವನ್ನು ಗಮನಿಸಿ. ನೆಲದಿಂದ 2 ಅಡಿ ತನಕ ಯಾವ ಚಿಗುರೂ ಇಲ್ಲ.
ಮೆಣಸಿನ ಬಳ್ಳಿ ಬುಡವನ್ನು ಗಮನಿಸಿ. ನೆಲದಿಂದ 2 ಅಡಿ ತನಕ ಯಾವ ಚಿಗುರೂ ಇಲ್ಲ.
  • ಮೆಣಸಿನ ಬಳ್ಳಿಯನ್ನು  ಬಹುತೇಕ  ಎಲ್ಲಾ ಅಡಿಕೆ ಮರಗಳಿಗೆ  ಹಬ್ಬಿಸಿದ್ದಾರೆ.
  • ಅಡಿಕೆ ಕೊಯಿಲಿಗೆ ತೊಂದರೆಯಾಗದಂತೆ ಮೆಣಸಿನ ಬಳ್ಳಿಗಳ  ಬೆಳವಣಿಗೆಯನ್ನು ನಿಯಂತ್ರಿಸಿದ್ದಾರೆ.
  • ಎರಡು ವರ್ಷದ ಬಳ್ಳಿ ಯಾವ ಮರಕ್ಕೆ ಹಬ್ಬಿಸಲಾಗಿದೆಯೋ ಅದರ ಎತ್ತರ ಏಕ ಪ್ರಕಾರ.
  • ಬೆಳೆದ ಬಳ್ಳಿಗಳನ್ನು ಕೊಯಿಲು ಮಾಡಲು ಅನುಕೂಲವಾಗುವಂತೆ ಏಣಿಯಷ್ಟೇ ಎತ್ತರಕ್ಕೆ ಬೆಳವಣಿಗೆ ನಿಯಂತ್ರಿಸಿದ್ದಾರೆ.
  • ಬಳ್ಳಿಯ ಕೆಳಭಾಗವನ್ನು ನೋಡಿದರೆ ನೆಲದಿಂದ  2 ಅಡಿ ತನಕ ಯಾವುದೇ ಎಲೆಗಳಿಲ್ಲ.
ಒಂದು ವರ್ಷ ತುಂಬಿದ ಸಸಿಗಳ ಏಕ ಪ್ರಕಾರದ ಬೆಳವಣಿಗೆ
2 ವರ್ಷ ತುಂಬಿದ ಸಸಿಗಳ ಏಕ ಪ್ರಕಾರದ ಬೆಳವಣಿಗೆ
  • ವರ್ಷ ವರ್ಷವೂ ಬಳ್ಳಿಗೆ ತರಬೇತಿ ನೀಡುತ್ತಾರೆ. ಇದನ್ನು ಪ್ರಾರಂಭದಿಂದಲೂ ಮಾಡುತ್ತಿರುವ ಕಾರಣ ಬಳ್ಳಿ ಸುತ್ತಲೂ ಹಬ್ಬಿ ಬೆಳೆದಿದೆ.
  • ಜೈವಿಕ ಗೊಬ್ಬರಗಳನ್ನು ಬಳಕೆ ಮಾಡುತ್ತಾರೆ. ಬೋರ್ಡೋ ದ್ರಾವಣ ಸಿಂಪರಣೆಯನ್ನು ಮಾಡುತ್ತಾರೆ.
  • ಕಟ್ಟು ಹಾಕಿಸಿ ಬಳ್ಳಿ ಜಾರದಂತೆ  ನೋಡಿಕೊಳ್ಳುತ್ತಾರೆ. ಹೀಗಿದ್ದರೆ ಬಳ್ಳಿಗೆ  ರೋಗ ಸಾಧ್ಯತೆ ಕಡಿಮೆ.
  • ಮೆಣಸು ಹೊರತಾಗಿ ಬೇರೆ  ಮಿಶ್ರ ಬೆಳೆಗಳಿಲ್ಲ. ಮೆಣಸಿನ ಬಳ್ಳಿಗೆ ಗಾಳಿ ಬೆಳಕಿನ ಕೊರತೆ ಆಗದಂತೆ  ನೋಡಿಕೊಂಡಿದ್ದಾರೆ.
  • ಶಿಫಾರಿತ ಪ್ರಮಾಣದ ಗೊಬ್ಬರಗಳನ್ನು  ಕೊಡುತ್ತಾರೆ. ಸ್ಥಳೀಯ ತೋಟಗಾರಿಕಾ  ವಿಜ್ಞಾನಿಗಳ ಸಲಹೆಯನ್ನು ಯಥಾವತ್ ಪಾಲಿಸುತ್ತಾರೆ.

ಇದೆಲ್ಲಾ ಕಾರಣದಿಂದ ಇವರ ಮೆಣಸಿನ ತೋಟ ಮಾದರಿಯಾಗಿ ಬೆಳೆದಿದೆ. ಇಲ್ಲಿ ರೋಗ ಹುಡುಕಿದರೂ ಸಿಗದು. ಇಂಥಹ ಬೆಳೆಗಾರರ ಕೈಗೆ ತಂತ್ರಜ್ಞಾನ,  ಮತ್ತ್ತು ಬೆಂಬಲ ದೊರೆತರೆ ವಿಯೆಟ್ನಾಂ ದೇಶದವರೇನು ಮಹಾ!

Leave a Reply

Your email address will not be published. Required fields are marked *

error: Content is protected !!