ಹಣ್ಣು ಹಂಪಲುಗಳನ್ನು ಹೀಗೆ ಪ್ಯಾಕಿಂಗ್ ಮಾಡಿ – ಹಾಳಾಗದು.

ದಾಳಿಂಭೆ ಪ್ಯಾಕಿಂಗ್

ಪಪ್ಪಾಯಿಯ ಬಲಿತ ಕಾಯಿಯನ್ನು ಕೊಯ್ದು ಕಾಗದ ಸುತ್ತಿ ಪ್ಯಾಕಿಂಗ್ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಮಾವನ್ನು  ಭತ್ತದ ಹುಲ್ಲಿನಲ್ಲಿ ಪ್ಯಾಕಿಂಗ್ ಮಾಡುತ್ತಾರೆ. ಕಾರಣ ಹಣ್ಣು ಹಂಪಲುಗಳು ಹಣ್ಣಾಗುವ ಸಮಯದಲ್ಲಿ ಏಕ ರೀತಿಯ ತಾಪಮಾನ ಇರಬೇಕು. ಅದು ತಂಪೂ ಆಗಬಾರದು. ಬಿಸಿಯೂ ಆಗಬಾರದು. ಹಣ್ಣು ಆಗುವ ತನಕ ಇದನ್ನು ಕಾಯ್ದುಕೊಂಡರೆ  ಹಾಳಾಗದೇ ಹಣ್ಣಾಗುತ್ತದೆ. ಹಣ್ಣು ಹಂಪಲುಗಳಿಗೆ ಒಂದು  ಸಣ್ಣ ನೊಣ ( ಕಣ್ಣಿನ ಸುತ್ತ ಹಾರುವಂತದ್ದು) ಕುಳಿತರೆ ಸಾಕು ಅದು ಬೇಗ ಹಾಳಾಗುತ್ತದೆ. ಅದನ್ನು ತಡೆಯಲು ಈ ರಕ್ಸಣೆ ಅಗತ್ಯ. 

ಹಣ್ಣು ಮಾಡುವ ಸಾಂಪ್ರದಾಯಿಕ ವಿಧಾನ:

  • ನಮ್ಮ ಹಿರಿಯರು ಕೆಲವು ಹಣ್ಣುಗಳನ್ನು  ಅಕ್ಕಿಯಲ್ಲಿ ಮುಚ್ಚಿಟ್ಟು ಹಣ್ಣು ಮಾಡುತ್ತಿದ್ದರು.
  • ಸ್ವಲ್ಪ ಹೆಚ್ಚು ಇದ್ದಾಗ ಅದನ್ನು ಭತ್ತದ  ಹುಲ್ಲಿನ ರಾಶಿಯೊಳಗೆ  ಮುಚ್ಚಿಟ್ಟು ಹಣ್ಣು ಮಾಡುತ್ತಿದ್ದರು.
  • ಯಾವುದೇ ಕಾಯಿಯನ್ನು ಕೊಯಿದು ತಂದು ಅದನ್ನು ಮನೆಯ ಒಳಗಿನ ಮುಚ್ಚಿದ ಕೋಣೆಯ ಒಳಗೆ ಇಡುತ್ತಿದ್ದರು.
  • ಹಣ್ಣಾಗುವ ತನಕ  ಅದನ್ನು ಹೊರಗೆ ತೆಗೆಯುವುದು ಸ್ಥಳ ಬದಲಿಸುವುದು, ಬಾಗಿಲು ತೆರೆದಿಡುವುದು ಮಾಡುವ ಕ್ರಮ ಇಲ್ಲ.
  • ಎಲ್ಲಿ ಹಣ್ಣು ಮಾಡಲು ಇಡಲಾಗಿದೆಯೋ ಅಲ್ಲಿಂದ ಹಣ್ಣು ಆದದ್ದನ್ನು ಮಾತ್ರ ಆರಿಸಿ ತೆಗೆಯುತ್ತಿದ್ದರು.
ಭತ್ತದ ಹುಲ್ಲು ಹಾಕಿ ಹಣ್ಣು ಮಾಡಬೇಕು
ಭತ್ತದ ಹುಲ್ಲು ಹಾಕಿ ಹಣ್ಣು ಮಾಡಬೇಕು

ಆಧುನಿಕ ವಿಧಾನ:

  • ಹಿಂದೆ ಹಣ್ಣು ಹಂಪಲುಗಳನ್ನು  ಹೆಚ್ಚಾಗಿ ಈಗಿನಂತೆ  ಊರಿನಿಂದ ಊರಿಗೆ  ಸಾಗಾಣಿಕೆ ಇರಲಿಲ್ಲ. ಇದ್ದರೂ ಈ ರೀತಿ ಇರಲಿಲ್ಲ. ಆದ ಕಾರಣ ಬತ್ತದ ಹುಲ್ಲಿನಲ್ಲೇ ಎಲ್ಲವೂ ಆಗುತ್ತಿತ್ತು.
  • ಈಗ ಹೊರೆ ದೇಶದಿಂದಲೂ ಹಣ್ಣು ಹಂಪಲುಗಳು ಬರುತ್ತಿವೆ. ದೇಶದ ಮೂಲೆ ಮೂಲೆಯಿಂದಲೂ ಬರುತ್ತದೆ. ನೂರಾರು ಸಾವಿರಾರು ಕಿಲೋ ಮೀಟರು, ದೂರದಿಂದ ದಿನಗಟ್ಟಲೆ ಲಾರಿಯಲ್ಲಿ ತುಂಬಿ ಬರುತ್ತದೆ.
  • ಈ ಕಾರಣಕ್ಕೆ ರವಾನಿಸುವಾಗಲೇ ಆ ಹಣ್ಣುಗಳನ್ನು  ಸೂಕ್ತವಾಗಿ ಪ್ಯಾಕಿಂಗ್ ಮಾಡಲಾಗುತ್ತದೆ.
  • ಈಗ ಪ್ಯಾಕಿಂಗ್ ಮಾಡುವಾಗ ಭತ್ತದ ಹುಲ್ಲುಗಳ ಬದಲಿಗೆ ಕಾಗದದ ಚೂರುಗಳನ್ನು ಬಳಕೆ  ಮಾಡಲಾಗುತ್ತದೆ.
  • ಕೆಲವು ಕಡೆ ಭತ್ತದ ಹೊಟ್ಟನ್ನೂ ಬಳಕೆ ಮಾಡಲಾಗುತ್ತದೆ.
  • ಪ್ಯಾಕಿಂಗ್ ಬಾಕ್ಸ್ ಒಳಗೆ  ಕಾಗದದ ಚೂರುಗಳನ್ನು ಹರಡಿ ಅದರ ಮೇಲೆ  ಹಣ್ಣುಗಳನ್ನು  ಇಟ್ಟು, ನಂತರ ಅದರ ಮೇಲೆ  ಮತ್ತೆ  ಕಾಗದದ ಚೂರುಗಳನ್ನು  ಹಾಕಿ ಪ್ಯಾಕಿಂಗ್ ಮಾಡುತ್ತಾರೆ.
  • ಪ್ಯಾಕಿಂಗ್ ಗೆ ಹೆಚ್ಚಾಗಿ ರಟ್ಟಿನ ಪೆಟ್ಟಿಗೆಗಳನ್ನು ಬಳಕೆ  ಮಾಡುತ್ತಾರೆ. ಕೆಲವು ದೊಡ್ಡ ಪ್ರಮಾಣದ ಪ್ಯಾಕಿಂಗ್ ಗಳಿಗೆ ಮರದ ಬಾಕ್ಸ್ ಗಳನ್ನು ಬಳಕೆ  ಮಾಡುತ್ತಾರೆ.
ಅಂಜೂರ ಪ್ಯಾಕಿಂಗ್
ಅಂಜೂರ ಪ್ಯಾಕಿಂಗ್

ಅನುಕೂಲಗಳು:

  • ಹಣ್ಣು ಹಂಪಲಿಗೆ  ಯಾವುದೇ ಗಾಯಗಳಾಗುವುದಿಲ್ಲ. ಉಜ್ಜಿದ ಗಾಯಗಳು ಆಗುವುದಿಲ್ಲ. ನೋಟ ಕೆಡುವುದಿಲ್ಲ.
  • ಸಮರ್ಪಕವಾಗಿ  ಪ್ಯಾಕಿಂಗ್ ಮಾಡಿದರೆ ಮಾತ್ರ ಹಣ್ಣು ಏಕ ಪ್ರಕಾರವಾಗಿ ಹಣ್ಣಾಗುತ್ತದೆ.
  • ಫ್ಯಾಕಿಂಗ್ ಮಾಡುವಾಗ ಕಾಗದದ ಚೂರು, ಭತ್ತದ ಹುಲ್ಲು, ಬಳಕೆ ಮಾಡುವುದರಿಂದ  ಬಾಕ್ಸ್ ಒಳಗೆ  ಉಷ್ಣತೆ ಬದಲಾವಣೆ ಆಗುವುದಿಲ್ಲ.
  • ಉಷ್ಣತೆ (Temperature) ವ್ಯತ್ಯಾಸ ಆದರೆ ಕಾಯಿಗಳ ಮೇಲೆ  ಕಪ್ಪು ಕಲೆಗಳು ( ಆಂತ್ರಾಕ್ನೋಸ್ ) ಬಂದು ಅದರ ಗುಣಮಟ್ಟ ಕಡಿಮೆಯಾಗುತ್ತದೆ.
  • ಮಾವು-ಕರಬೂಜ,ದಾಳಿಂಬೆ, ದ್ರಾಕ್ಷಿ, ಸೇಬು, ಮುಂತಾದ  ಹಣ್ಣುಗಳನ್ನು  ಕಾಗದದ ಚೂರುಗಳನ್ನು ಹಾಕಿಯೇ ಪ್ಯಾಕಿಂಗ್ ಮಾಡುತ್ತಾರೆ.
  • ಕಲ್ಲಂಗಡಿ ಹಣ್ಣನ್ನು ಭತ್ತದ ಹುಲ್ಲು- ನೀಲಗಿರಿ- ಬೇವಿನ ಸೊಪ್ಪನ್ನು ಹಾಕಿ ಪ್ಯಾಕಿಂಗ್ ಮಾಡುತ್ತಾರೆ.
  • ಈಗ ಹೊಸತಾಗಿ  ಮೆದು ಪಾಲೀ ಕಾರ್ಬೋನೇಟ್ ಉತ್ಪನಗಳ ಮೂಲಕವೂ  ಪ್ಯಾಕಿಂಗ್ ಮಾಡುತ್ತಾರೆ.
  • ಈ ಪ್ಯಾಕಿಂಗ್ ನಲ್ಲಿ ಅರೆ ಹಣ್ಣಾಗಿದ್ದರೆ  ಒಂದೆರಡು ದಿನಗಳಲ್ಲಿ ಪೂರ್ತಿ ಹಣ್ಣಾಗುತ್ತದೆ.
  • ಏಕ ಪ್ರಕಾರದ ಉಷ್ಣತೆ ಇರುವ ಕಾರಣ ಬಣ್ಣವೂ ಬರುತ್ತದೆ.

ಕಾಗದದ ಚೂರು-ಭತ್ತದ ಹುಲ್ಲು  ಅಥವಾ ಇನ್ನಿತರ ಕೆಲವು ಉತ್ಪನ್ನಗಳು ಹಣ್ಣು ಹಂಪಲುಗಳನ್ನು ಸಹಜವಾಗಿ ಹಣ್ಣು ಮಾಡುತ್ತವೆ. ರಾಸಾಯನಿಕಗಳ ಅವಶ್ಯತೆ  ಇರುವುದಿಲ್ಲ. ಆದರೆ 2 ದಿನ ಹೆಚ್ಚು ಬೇಕಾಗುತ್ತದೆ.ಆದರೆ ಹಾಳಾಗಲಾರದು.

Leave a Reply

Your email address will not be published. Required fields are marked *

error: Content is protected !!