ನಮ್ಮ ಬೆಳೆಗಳಲ್ಲಿದೆ ರೋಗ ನಿರೋಧಕ ಶಕ್ತಿ.

ಜಗತ್ತನ್ನೇ ಅಂಜಿಸಿದ ಕೊರೋನಾ ವೈರಸ್ ಖಾಯಿಲೆಗೆ ಭಾರತೀಯರು ಸ್ವಲ್ಪ ಮಟ್ಟಿಗೆ ನಿರೋಧಕ ಶಕ್ತಿಯನ್ನು ಹೊಂದಿದವರೆಂದರೆ ತಪ್ಪಾಗಲಾರದು. ಇಲ್ಲಿನ ಜನ ಶೀತ ವಲಯದ ಜನಕ್ಕಿಂತ ಸ್ವಲ್ಪ ಗಡಸು. ಇಲ್ಲಿ ವಾತಾವರಣ, ಆಹಾರ ಪದ್ದತಿ, ಸಹಜವಾಗಿಯೇ ಮಾನವರಿಗೆ ರೋಗ ನಿರೋಧಕ ಶಕ್ತಿ ಇರುತ್ತದೆ.


 

  • ಹಿಂದೆ ದೊಡ್ದ ರೋಗ ( ಸಿಡುಬು) ಬಂದ ಸಮಯದಲ್ಲಿ ಒಂದೊಂದು ಕುಟುಂಬದಲ್ಲಿ ಕೆಲವರು ಸತ್ತೇ  ಹೋಗಿದ್ದರೂ ಕೆಲವರು ಬದುಕಿ ಉಳಿದಿದ್ದರು.
  • ಅದು ಮಾರಾಣಾಂತಿಕವಾಗಿದ್ದರೂ ಸಹ ಮಾನವನ ಅಂತರ್ಗತ ನಿರೋಧಕ ಶಕ್ತಿಯಿಂದ ಕೆಲವರು ಬದುಕಿ ಉಳಿದ ಕಥೆಯನ್ನು ಹಿರಿಯರು ಹೇಳುತ್ತಾರೆ.
  • ಹಾಗೆಂದು  ನಾವು ಸುಮ್ಮನಿರಲಿಕ್ಕೆ ಆಗುವುದಿಲ್ಲ.
  • ಕಾಲ ಬದಲಾದಂತೆ ನಮ್ಮಆಹಾರಾಭ್ಯಾಸ , ದಿನಚರಿ ಬದಲಾದ ಕಾರಣ ನಾವು ಸ್ವಲ್ಪ ಸಾತ್ವಿಕ ಆಹಾರದ ಕಡೆಗೆ ಬದಲಾಗಬೇಕು.

ನಮ್ಮ ಆಹಾರದಲ್ಲೇ ಇದೆ ಎಲ್ಲಾ ರೋಗ ನಿರೋಧಕ ಗುಣಗಳು. ದುರಾದೃಷ್ಟವೆಂದರೆ ನಾವು ಅವುಗಳನ್ನು ಬೆಳೆಸುತ್ತಿದ್ದರೂ ಬಳಸುತ್ತಿಲ್ಲ. ಬಳಸಿದರೂ ಅವು ನಮಗೆ ಸಿದ್ದ ರೂಪದಲ್ಲಿ ದೊರೆಯಬೇಕು. ಅದನ್ನು ಬಿಟ್ಟರೆ ನಾವು ರೋಗ ನಿರೋಧಕ ಶಕ್ತಿ ಹೊಂದಬಹುದು.

ಕರಿಮೆಣಸು:

  • ಇದನ್ನು ನಾವೆಲ್ಲಾ ಬೆಳೆಯುತ್ತೇವೆ. ಆದರೆ ನಾವು ಬಳಸಲು ತರುವುದು ಸಿದ್ದ ಉತ್ಪನ್ನ. ದಿನಾ
  • ಬಿಸಿನೀರು ಸೇವಿಸುವಾಗ  ನಿಮ್ಮಲ್ಲೇ ಬೆಳೆದ ಅಥವಾ ಬೆಳೆಗಾರರಿಂದ  ಖರೀದಿಸಿದ 4 ಅಥವಾ ಬೇಕಾದರೆ ಹೆಚ್ಚು ಕರಿಮೆಣಸನ್ನು ಅದಕ್ಕೆ ಜಜ್ಜಿ ಹಾಕಿ ಸೇವಿಸಿರಿ.
  • (ಕರಿಮೆಣಸು ಇದರ ವಿಶೇಷ ಗುಣ ಗೊತ್ತೇ? https://kannada.krushiabhivruddi.com/?p=930)  ಇದರಿಂದ ತುಂಬಾ ಪ್ರಯೋಜನ ಆಗುತ್ತದೆ.
  • ಮಾರುಕಟ್ಟೆಯಲ್ಲಿ ದೊರೆಯುವ  ಹೆಚ್ಚಿನ  ಕರಿಮೆಣಸು  ಮಡ್ ಆಯಿಲ್ ನಲ್ಲಿ ಹೊಳಪೀಕರಣ ಮಾಡಿ ಗ್ರಾಹಕರನ್ನು ಸೆಳೆಯುವಂತದ್ದು ಎಂಬುದು ನಿಮ್ಮ  ತಿಳುವಳಿಕೆಯಲ್ಲಿರಲಿ.

ಜೇನು:

  • ಉತ್ತಮ ಗುಣಮಟ್ಟದ ಜೇನನ್ನು ದಿನಾ ಬಳಕೆ ಮಾಡಿ.
  • ಇದು ದೇಹವನ್ನು ಬೆಚ್ಚಗೆ ಇಡುತ್ತದೆ.
  • ಯಾವುದೇ ಕಾರಣಕ್ಕೆ ಜೇನು ವ್ಯವಸಾಯಗಾರರ ಹೊರತಾಗಿ ಬೇರೆಯವರ ಜೇನು ಖರೀದಿ ಮಾಡಬೇಡಿ.
  • ಕೆಲವು ಸೊಸೈಟಿಗಳು ಸಂಸ್ಕರಣೆ ಮಾಡಿ ಜೇನು ಕೊಡುತ್ತಾರೆ.
  • ಅಲ್ಲಿಂದ ಖರೀದಿ ಮಾಡಿ ಬಳಕೆ ಮಾಡಿ.
  • ಅತ್ಯಧಿಕ ಪ್ರಮಾಣದಲ್ಲಿ ಕಲಬೆರಕೆಯಾಗಿ ದೊರೆಯುವ ವಸ್ತು ಜೇನು ಎಂಬುದು ತಿಳಿದಿರಲಿ.

ಅರಶಿನ:

  • ಇದನ್ನು ನೀವೇ ಬೆಳೆಯಿರಿ. ಸ್ವಲ್ಪ ಅರಶಿನವನ್ನು ದಿನಾ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.
  • ಒಣಗಿಸಿದ ಅರಶಿನ ತುಂಡನ್ನು ಅಲ್ಲಿನಲ್ಲಿ ಗಂಧ ಅರೆದಂತೆ ಅರೆದು ಚಿಟಿಕೆಯಷ್ಟು ಬಿಸಿ ನೀರಿಗೆ ಹಾಕಿಯೋ , ಅಡುಗೆ ಮಾಡುವಾಗ ಪದಾರ್ಥಗಳಿಗೆ ಹಾಕಿ ಸೇವಿಸಿರಿ.
  • ಸಿದ್ದ ಉತ್ಪನ್ನಕ್ಕೆ ಮಾರುಹೋಗಬೇಡಿ.

 ಶುಂಠಿ:

  • ಇದನ್ನೂ ಸಹ ನಿತ್ಯ ಬಳಕೆ ಮಾಡಿ, ಮಜ್ಜಿಗೆ, ಅಥವಾ ಇನ್ನೇನಾದರೂ ಅಡುಗೆಗಳಿಗೆ ಶುಂಠಿಯನ್ನು ಬಳಕೆ ಮಾಡಿ.
  • ಚಹಾ ಕುಡಿಯುವವರು ಚಹಾ ಜೊತೆಗೆ ಶುಂಠಿಯನ್ನು ಹಾಕಿ.
  • ಶುಂಠಿಯನ್ನು ಅವರವರೇ ಬೆಳೆಯಿರಿ.
  • ಪಾಟ್ ಗಳಲ್ಲಿಯೂ ಶುಂಠಿ ಬೆಳೆಯಬಹುದು.
  • ಅತಿಯಾಗಿ ಬಳಸಬೇಡಿ.
  • ತಾಜಾ ಶುಂಠಿಯಲ್ಲಿರುವ ಗುಣ ಸಂಸ್ಕರಿತ  ಶುಂಠಿಯಲ್ಲಿ ಇರಲಾರದು.

ಬೆಳ್ಳುಳ್ಳಿ:

  • ಇದನ್ನು ಆಂಟೀ ವೈರಸ್  ಗಡ್ಡೆ ಎಂದೇ ಹೇಳಬಹುದು.
  • ಇದನ್ನು  ತಾಜಾ ಆಗಿ ಇಲ್ಲವೇ ಹುರಿದು ಅಡುಗೆಗಳಲ್ಲಿ ಬಳಕೆ ಮಾಡಿ.
  • ದೇಹಕ್ಕೆ ನಿರೋಧಕ ಶಕ್ತಿ ಬರುತ್ತದೆ.
  • ಒಂದಷ್ಟು ಬೆಳ್ಳುಳ್ಳಿಯನ್ನು ಒಣಗಿಸಿ ಇಟ್ಟುಕೊಂಡರೆ  ಬೇಕಾದಾಗ ಬಳಕೆ ಮಾಡಬಹುದು.

ಸಸ್ಯ ಕುಡಿಗಳ ತಂಬುಳಿ: 

  • ಹಳ್ಳಿಯ ಜನ ಹಿಂದಿನಿಂದಲೂ ತಮ್ಮ ಆರೋಗ್ಯವನ್ನು ಸ್ವಸ್ಥವಾಗಿ ಉಳಿಸಿಒಂಡದ್ದು, ಆಹಾರಾಭ್ಯಾಸದಿಂದ.
  • ಇದರಲ್ಲಿ ಒಂದು ಹಸಿ ಅಡುಗೆಗಳು. ಅಥವಾ ತಂಬ್ಳಿಗಳು.
  • ಆಯ್ಕೆ ಮಾಡಿದ ಬೇರೆ ಬೇರೆ  ಸಸ್ಯ ಕುಡಿ( ಚಿಗುರುಗಳು) ಗಳನ್ನು ಅರೆದು ಅದರನ್ನು ಅನ್ನ ಆಹಾರದ ಜೊತೆಗೆ ವಾರಕ್ಕೊಮ್ಮೆ  ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಬರುತ್ತದೆ.

ಕಷಾಯಗಳು:

  • ವರ್ಷಕ್ಕೆ ಎರಡು ಮೂರು ಬಾರಿಯಾದರೂ ಕಹಿ ಬೇವಿನ ಎಲೆ ಕಷಾಯ, ಮಜ್ಜಿಗೆ ಹುಲ್ಲಿನ ( ಲೆಮನ್ ಗ್ರಾಸ್) ಕಷಾಯ, ಕಾಲಮೇಘ,( ಕಿರಾತಾಡ್ಡಿ) ಕಷಾಯ  ಮುಂತಾದವುಗಳನ್ನು ಬಳಸುವ ಕ್ರಮವನ್ನು ಇಟ್ಟುಕೊಳ್ಳಿ.

ಯಾವಾಗಲೂ ಬಾಯಿಗೆ ರುಚಿ ಎನ್ನಿಸಿದ್ದು, ಆರೋಗ್ಯಕ್ಕೆ ಅಷ್ಟು ಉತ್ತಮವಾಗಿರುವುದಿಲ್ಲ. ಸ್ವಲ್ಪ ಒಗರಾಗಿದ್ದರೂ ಅದರಲ್ಲಿ ಸತ್ವಗಳು ಇರುತ್ತವೆ. ಆದ ಕಾರಣ ನಾವು ಕೇವಲ ಬಾಯಿ ರುಚಿಯನ್ನೇ  ಗಣನೆಗೆ ತೆಗೆದುಕೊಳ್ಳಬಾರದು.

ಯಾಕೆ ಸಿದ್ಧ ಉತ್ಪನ್ನ ಬೇಡ:

  • ರೈತರು ಬೆಳೆಯುವ ಮೇಲಿನ ಉತ್ಪನಗಳನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
  • ಕರಿಮೆಣಸಿನ ಹುಡಿ ತಯಾರಾಗುವುದು ಅದರ ಗುಂಜು ಮತ್ತು ದೂಳಿನಲ್ಲಿ ಎಂಬುದು ಎಷ್ಟು ಜನರಿಗೆ ಗೊತ್ತಿದೆಯೋ ತಿಳಿಯದು.
  • ಅದೇ ರೀತಿಯಲ್ಲಿ ಬಹಳಷ್ಟು ಉತ್ಪನ್ನಗಳು ಬರೇ ಬಣ್ಣ ಮತ್ತು ವಾಸನೆಯಲ್ಲಿ ಮೂಲವಸ್ತುವನ್ನು ಹೋಲುತ್ತದೆಯೇ ಹೊರತು ಮೂಲವಸ್ತು  ಅದೇ ಆಗಿರುವುದಿಲ್ಲ.
  • ಕರಿಮೆಣಸಿಗೆ ಮಾರುಕಟ್ಟೆ ದರ 300  ರೂ. ಇದೆ. ಆದರೆ ಅದರ ಹುಡಿ ಪ್ರತಿಷ್ಟಿತ ಬ್ರಾಂಡ್ ಗಳಲ್ಲಿ ರೂ. 300  ಗರಿಷ್ಟ ಮಾರಾಟ ಬೆಲೆ ಮುದ್ರಿಸಿ ದೊರೆಯುತ್ತದೆ.
  • ತಯಾರಕರ ಮಜೂರಿ, ಲಾಭ, ಮಾರಾಟಗಾರರ ಲಾಭಾಂಶ ಸೇರುವಾಗ ಅದು 150 ರೂ. ಗಳಲ್ಲಿ ತಯಾರಾಗಬೇಕು.
  • ಅದು ಹೇಗೆ ಎಂದು ನೀವೇ ಯೋಚನೆ ಮಾಡಿ.
  • ಇದೆಲ್ಲವೂ ಕಲಬೆರಕೆಯ ಉತ್ಪನಗಳು.
  • ಇದನ್ನು ಬಳಕೆ ಮಾಡಿದಾಗ ರೋಗ ನಿರೋಧಕ ಶಕ್ತಿ ಬದಲಾಗಿ ರೋಗ ಆವ್ಹಾನ ಮಾಡಿದಂತೆ ಆಗುತ್ತದೆ.

ದಿನಚರಿ ಬದಲಿಸಿ, ಸಾಧ್ಯವಾದಷ್ಟು ಮನೆಯೊಳಗೇ  ಇರಬೇಡಿ, ದೇಹಕ್ಕೆ  ಬಿಸಿಲು ಬೀಳಬೇಕು. ಹೊಲ ಸುತ್ತುವುದು, ಬೆವರು ಸುರಿಸಿ ಕೆಲಸ ಮಾಡುವುದು ಮಾಡಿದರೆ ಶರೀರ ಸಧೃಢ ಆಗುತ್ತದೆ.  ಬಟ್ಟೆ ಒಗೆಯಿರಿ. ಹಾರೆ ಗುದ್ದಲಿ ಕೆಲಸ ಮಾಡಿ. ದೇಹ ಗಟ್ಟಿಯಾಗುತ್ತದೆ.

 

Leave a Reply

Your email address will not be published. Required fields are marked *

error: Content is protected !!