ಇದು ಪ್ರಾಕೃತಿಕ ಕೃಷಿ ಪದ್ದತಿ. ಪ್ರಕೃತಿಯ ನಡೆಗೆ ಸರಿಯಾಗಿ ನಮ್ಮ ಹೆಜ್ಜೆ. ಇದಕ್ಕೆ ಖರ್ಚು ಇಲ್ಲ. ನಿಮ್ಮ ಆರೋಗ್ಯಕ್ಕೂ ಇದು ಒಳ್ಳೆಯದು. ಬೆಳೆಗಳು ಇದಕ್ಕೆ ತ್ವರಿತವಾಗಿ ಸ್ಪಂದಿಸಿ ನಿಮಗೆ ಅಧಿಕ ಇಳುವರಿಯ ಮೂಲಕ ಪ್ರತಿಫಲ ಕೊಡುತ್ತವೆ.
- ತೀರ್ಥಹಳ್ಳಿಯ ಶ್ರೀ. ಪುರುಷೋತ್ತಮರಾಯರು ಎಲ್ಲಾ ಕಡೆ ಹೇಳುತ್ತಿದ್ದ ಮಾತು ಇದು,
- “ನೀವು ನಿಮ್ಮ ಹೊಲದ ಮೂಲೆ ಮೂಲೆಗೂ ಹೋಗಿದ್ದೀರಾ?, ಮರಗಳ ಬಳಿ ಹೋಗಿ ಮಾತನಾಡಿದ್ದೀರಾ”
- ಇದನ್ನು ಕೇಳಿ ಜನ ನಗೆಯಾಡಿದ್ದೂ ಇರಬಹುದು.
- ಆದರೆ ಈ ವಿಚಾರ ತಿಳಿಯದೆ ಆಡಿದ ಮಾತು ಅದಲ್ಲ.
- ಈ ಮಾತಿನಲ್ಲಿ ಆಧುನಿಕ ಕೃಷಿ ವಿಜ್ಞಾನ ಇದೆ.
- ಇದನ್ನೇ ಸಸ್ಯ ವಿಜ್ಞಾನಿ ಸರ್ ಜಗದೀಶ್ಚಂದ್ರ ಬೋಸ್ ಸಹ ಹೇಳಿದ್ದಾರೆ.
- ಇದುವೇ ಪ್ರಾಕೃತಿಕ ಕೃಷಿ.

ತೋಟ ಸುತ್ತುವುದು ಮತ್ತು ಮಿತ್ರರೊಡನೆ ತೋಟದಲ್ಲಿ ಮಾತಾಡಿಕೊಳ್ಳುವುದು ಇಳುವರಿಗೆ ಉತ್ತಮ.
ನೀವು ಗಮನಿಸಿದ ಸತ್ಯ:
- ಮನೆ ಬಾಗಿಲಿನ ತೆಂಗಿನ ಮರಕ್ಕೆ ಏನು ಗೊಬ್ಬರ ಹಾಕದಿದ್ದರೂ ಅದರಲ್ಲಿ ಫಸಲು ಚೆನ್ನಾಗಿರುತ್ತದೆ. ಆರೋಗ್ಯವಾಗಿಯೂ ಇರುತ್ತದೆ.
- ರಸ್ತೆ ಬದಿಯಲ್ಲಿರುವ ಮಾವಿನ ಮರದಲ್ಲಿ ಮಾವು ಆದಂತೆ ನಾವು ನೆಟ್ಟು ಬೆಳೆಸಿದ ಮರದಲ್ಲಿ ಆಗುವುದಿಲ್ಲ.
- ಅದೇ ರೀತಿ ಗೇರು, ತೆಂಗು, ಹಲಸು ಅಥವಾ ಯಾವುದೇ ಸಸ್ಯ ರಸ್ತೆ ಬದಿಯಲ್ಲಿ ಯಾರ ಆರೈಕೆಯೂ ಇಲ್ಲದೆ ಎಷ್ಟು ಉತ್ತಮವಾಗಿ ಬೆಳೆದಿರುತ್ತದೆ.
- ರೈತರು ದಿನಾ ಓಡಾಡುತ್ತಾ ಗಮನಿಸುತ್ತಾ ಇರುವ ಎಲ್ಲಾ ತರಹದ ಬೆಳೆಗಳಿಗೆ ರೋಗ- ಕೀಟ ಬಾಧೆ ಕಡಿಮೆ. ಇಳುವರಿಯೂ ಅಧಿಕ.
- ಯಾರ ಹೊಲಕ್ಕೆ ಜನ ಹೆಚ್ಚು ಹೆಚ್ಚು ಭೇಟಿ ನೀಡುತ್ತಾರೆಯೋ ಅವರ ಹೊಲದಲ್ಲಿ ಉತ್ತಮ ಇಳುವರಿ ಇರುತ್ತದೆ.
- ಶಾಲೆಗಳ ವಠಾರದಲ್ಲಿಇರುವ ತೆಂಗಿನ ಮರ, ಗೇರು ಮರಗಳಲ್ಲಿ ಎಷ್ಟು ಉತ್ತಮ ಇಳುವರಿ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ.

ಕೆಲಸದವರ ಮಾತು ಮತ್ತು ಹಾಡು ಹೊಲದಲ್ಲಿ ಇಳುವರಿ ಹೆಚ್ಚಳಕ್ಕೆ ಸಹಕಾರಿ
ಯಾಕೆ ಹೀಗೆ:
ಇದು ಪ್ರಕೃತಿ ನಿಯಮ. ಸಸ್ಯಗಳು ಮಾನವ ಒಡನಾಟವನ್ನು ಬಯಸುತ್ತವೆ. ಮಾನವ ಎನ್ನುವುದಕ್ಕಿಂತಲೂ ಪ್ರಕೃತಿಯಲ್ಲಿರುವ ಜೀವಿಗಳ ಒಡನಾಟವನ್ನು ಬಯಸುತ್ತವೆ. ಕೃಷಿ ಹೊಲದ ವಿಚಾರ ಬಂದಾಗ ಮಾನವ ಒಡನಾಟ ಎಂತಲೂ , ಕಾಡಿನ ವಿಷಯದಲ್ಲಿ ಪ್ರಾಣಿ ಪಕ್ಷಿಗಳ ಸಹಜೀವನವು ಅಗತ್ಯ ಎಂದು ಹೇಳಬಹುದು.

ಇಂಥಹ ಬೆಳೆಗಳಿಗೆ ನಿತ್ಯ ಕೆಲಸದವರು ಅಗತ್ಯ. ಅದರಲ್ಲಿ ಇಳುವರಿಯೂ ಚೆನ್ನಾಗಿ ಇರುತ್ತದೆ.
- ಮಾನವನ ನಿತ್ಯ ಓಡಾಟದಿಂದ ಬೆಳೆಗಳ ಮೇಲೆ ಅದೇನೋ ವಿಶಿಷ್ಟ ಪರಿಣಾಮ ಉಂಟಾಗುತ್ತದೆ.
- ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಮಾನವನ ಉಸಿರಾಟದಲ್ಲಿ ಹೊರಬೀಳುವ ಕಾರ್ಬನ್ ಡೈ ಆಕ್ಸೈಡ್ ಸಸ್ಯಗಳ ಉಸಿರಾಟಕ್ಕೆ ಹೇರಳವಾಗಿ ದೊರೆತು ಅವುಗಳು ಉತ್ತಮವಾಗಿ ಬೆಳೆಯುತ್ತವೆ.
- ಪರಿಣಾಮ ಉತ್ತಮ ಫಸಲನ್ನು ಕೊಡುತ್ತವೆ.
ಕಾರ್ಬನ್ ಡೈ ಆಕ್ಸೈಡ್ ಪೂರೈಕೆ:
ಸಸ್ಯಗಳ ಉಸಿರಾಟಕ್ಕೆ ಬೇಕಾಗುವುದು ಇಂಗಾಲದ ಡೈ ಆಕ್ಸೈಡ್. ಅವು ಮಾನವ ಸೇರಿದಂತೆ ಎಲ್ಲಾ ಜೀವ ಜಂತುಗಳು ಉಸಿರಾಟ ಮಾಡಿ ಹೊರ ಬಿಡುವ ಅನಿಲ.ಇದನ್ನು ಸಸ್ಯಗಳು ತಮ್ಮ ದ್ಯುತಿ ಸಂಶ್ಲೇಷಣ ಕ್ರಿಯೆಗೆ ಬಳಕೆ ಮಾಡಿಕೊಳ್ಳುತ್ತವೆ. ಅದಕ್ಕೆ ಪ್ರತಿಯಾಗಿ ಶುದ್ಧ ಆಮ್ಲಜನಕವನ್ನು ಪರಿಸರಕ್ಕೆ ಕೊಡುತ್ತದೆ.

ಕಾರ್ಬನ್ ಡೈ ಆಕ್ಸೈಡ್ ಹೆಚ್ಚು ಲಭ್ಯವಾಗಲು ಮತ್ತು ಕೀಟ ನಿಯಂತ್ರಣಕ್ಕೆ ಹೊಗೆ ಹಾಕುವುದು ಪ್ರಯೊಜನ ಕೊಡುತ್ತದೆ
- ನಾವು ನಮ್ಮ ಹೊಲದಲ್ಲಿ ಸುತ್ತಾಡುತ್ತಾ ಇದ್ದಾಗ ನಮ್ಮ ಉಸಿರಾಟ ಮತ್ತು ಹೇಗೆ ಒಡನಾಟ ಬೆಳೆಸುವುದು:
- ದಿನಾ ಬೆಳಿಗ್ಗೆ, ಮಧ್ಯಾನ್ಹ, ಸಂಜೆ ಮೂರೂ ಹೊತ್ತಿನಲ್ಲಿ ಹೊಲದಲ್ಲಿ ಸುತ್ತಾಡುತ್ತಾ ಮಾತನಾಡುತ್ತಾ ಸಂಚರಿಸಬೇಕು.
- ನೆಂಟರಿಷ್ಟರು ಬಂದಾಗ ಅವರನ್ನು ಹೊಲ ಸುತ್ತಲು ಕರೆದೊಯ್ಯಬೇಕು.
- ಹೊಲ ಸುತ್ತುವಾಗ ಹೆಚ್ಚಿನ ಮಾತುಕತೆ ನಡೆಸಬೇಕು. ‘
- ಹೊಲದಲ್ಲಿ ಪ್ರತೀ ಸೀಸನ್ ನಲ್ಲಿ ತಿನ್ನಬಹುದಾದ ಹಣ್ಣು ಹಂಪಲು ಬೆಳೆಗಳಿದ್ದರೆ ಮನೆ ಮಕ್ಕಳೂ ಸಹ ತೋಟ ಸುತ್ತುವ ಹವ್ಯಾಸವನ್ನು ಬೆಳೆಸುತ್ತಾರೆ.
- ಕೃತಕವಾಗಿ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೆಚ್ಚು ಮಾಡಲು ಆಗಾಗ್ಗೆ ಹೊಲದ ಕೃಷಿ ತ್ಯಾಜ್ಯಗಳನ್ನು ಅರ್ಧ ಸುಡುವ ಕಾರ್ಯವೂ ಸಹಕಾರಿ. ಇದರಿಂದ ಕೀಟ ನಿಯಂತ್ರಣ ಸಹ ಆಗುತ್ತದೆ.
- ಕೆಲವು ಕರಗದೇ ಇರುವ ಉಪಯೋಗ ರಹಿತ ವಸ್ತುಗಳನ್ನು ಯಾರಾದರೂ ಸುಡುವುದೇ ಆದ ಕಾರಣ ರೈತರೂ ಇದನ್ನು ಸುಡಬಹುದು.
ಫಲಿತಾಂಶ:
- ಹೆಚ್ಚು ಹೆಚ್ಚು ಕಾರ್ಬನ್ ಡೈ ಆಕ್ಸೈಡ್ ದೊರೆತಂತೆ ಸಸ್ಯಗಳು ಹೆಚ್ಚು ಹೆಚ್ಚು ದ್ಯುತಿ ಸಂಶ್ಲೇಷಣ ಕ್ರಿಯೆ ನಡೆಸುತ್ತವೆ.
- ಇದರ ಕ್ಷಮತೆ 70 % ಹೆಚ್ಚಳವಾಗುತ್ತದೆ.
- ಇದರಿಂದ ಸಸ್ಯ ಬೆಳವಣಿಗೆ ವೃದ್ದಿಸುತ್ತದೆ.
- ವಾತಾವರಣಕ್ಕೆ ಮಾನವನ ಮೂಲಕ ವರ್ಷಕ್ಕೆ 10 ಬಿಲಿಯನ್ ಟನ್ ನಷ್ಟು ಕಾರ್ಬನ್ ಡೈಆಕ್ಸೈಡ್ ಹೊರ ಹಾಕಲ್ಪಡುತ್ತದೆ.
- ಇದರಲ್ಲಿ ಔದ್ಯಮಿಕ ಕಾರ್ಬನ್ ಸಹ ಸೇರಿದೆ.
- ಅತಿಯಾದರೆ ಅದೂ ಉತ್ತಮವಲ್ಲ.
ಕಾರ್ಬನ್ ಡೈ ಆಕ್ಸೈಡ್ ಎಂಬುದು ಭೂಮಿಯಲ್ಲಿ ಹಸುರು ಹೆಚ್ಚಿಸಲು ಬೇಕಾಗುವ ಅನಿಲ ಎಂದೇ ವ್ಯಾಖ್ಯಾನಿಸಲಾಗಿದೆ. (CO2 is making Earth greener-for now) ಇದನ್ನು ನಾಸಾ ವಿಜ್ಞಾನಿಗಳೂ ಸಹ ಸ್ಪಷ್ಟಪಡಿಸಿದ್ದಾರೆ. ಕಳೆದ 35 ವರ್ಷಗಳಿಂದ ನಮ್ಮ ಭೂಮಿಯಲ್ಲಿ ಹಸಿರು ಉಳಿದಿದ್ದರೆ ಅದು ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಾದ ಕಾರಣ ಎಂಬುದನ್ನು ಸುಮಾರು 32 ತಜ್ಞರು, 24 ಸಂಸ್ಥೆಗಳು ಅಧ್ಯಯನ ಮಾಡಿ ತಿಳಿಸಿವೆ.
- ಹಾಗೆಂದು ಕಾರ್ಬನ್ ಡೈ ಆಕ್ಸೈಡ್ ಹೆಚ್ಚಳವಾದರೆ ಜಾಗತಿಕ ತಾಪಮಾನದ ಏರಿಕೆಯಾಗುತ್ತದೆ.
- ಸಮುದ್ರ ಮಟ್ಟ ಏರಿಕೆಯಾಗುತ್ತದೆ.
- ಹಿಮಗಡ್ಡೆಗಳು ಕರಗುತ್ತದೆ.
- ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮವೂ ಉಂಟಾಗುತ್ತದೆ.
ಕೃಷಿ – ಕಾರ್ಬನ್ ಡೈ ಆಕ್ಸೈಡ್:
- ಕೃಷಿ ಬೆಳೆಗಳಿಗೆ ಕಾರ್ಬನ್ ಡೈಆಕ್ಸೈಡ್ ಹೆಚ್ಚು ಬೇಕು.
- ಅದನ್ನು ನಾವು ಕೊರತೆ ಆಗದಂತೆ ಮಾಡಲು ಸರಳ ಮತ್ತು ಪರಿಸರ ಪೂರಕ ವಿಧಾನ ಎಂದರೆ ನಾವು ಹೆಚ್ಚು ಹೆಚ್ಚು ಹೊಲದಲ್ಲಿ ಇರುವುದು.
- ಇದರಿಂದ ಪರೋಕ್ಷವಾಗಿ ತುಂಬಾ ಪ್ರಯೋಜನ ಇದ್ದು,
- ಅಲ್ಲಿನ ನ್ಯೂನತೆಗಳು ತಕ್ಷಣ ಗಮನಕ್ಕೆ ಬಂದು ಅದನ್ನು ಸರಿಪಡಿಸಲು ಇದು ಸಹಾಯಕ.
ಅಂಗಾರಾಮ್ಲವನ್ನು ಕೃತಕ ವಿಧಾನದಲ್ಲಿ ಒದಗಿಸುವ ಬಗ್ಗೆ ಸಂಶೋಧನೆಗಳಾಗಿಲ್ಲ. ಒಂದು ಗಿಡಕ್ಕೆ ದಿನಕ್ಕೆ ಬೇಕಾಗುವ ಅಂಗಾರಾಮ್ಲದ ಅವಶ್ಯಕತೆಯ ಬಗ್ಗೆ ಅಧ್ಯಯನಗಳು ಆದಲ್ಲಿ ಅದನ್ನು ಕೃತಕವಾಗಿ ಪೂರೈಕೆ ಮಾಡುವ ವ್ಯವಸ್ಥೆಯನ್ನು ಮಾಡಬಹುದು. ಆ ತನಕ ದಿನದಲ್ಲಿ ಸಾಧ್ಯವಾದಷ್ಟೂ ಬಾರಿ ಹೊಲಕ್ಕೆ ಹೋಗಿ ಮತ್ತು ಸಸ್ಯಗಳ ಜೊತೆ ಮಾತಾಡಿಸಿ.
0 Comments