ಒಂದು ನಾಟಿ ಹಸು ಖರೀದಿಗೆ 25000 ಸಹಾಯಧನ !

ನಾಟಿ ಹಸು,ಕರು

ನಾಟಿ ಹಸುಗಳ ಸಂತತಿ ಕಡಿಮೆಯಾಗುತ್ತಿದೆ. ಸಾವಯವ ವಸ್ತುಗಳಿಲ್ಲದೆ ಕೃಷಿ ಕೃತಕವಾಗುತ್ತಿದೆ. ಹಾಗಾಗಿ ನಮ್ಮ ಕೃಷಿ ಪದ್ದತಿ ಇನ್ನು ಸ್ವಲ್ಪ ಹಿಂದಿನ ಕಾಲದತ್ತ ಹೋಗಬೇಕಾಗಬಹುದು. ನಮ್ಮ ಹಿರಿಯರು ಸೊಪ್ಪು ಸದೆ, ಸಗಣಿ ಗೊಬ್ಬರ  ಮುಂತಾದವುಗಳ  ಮೂಲಕ ಕೃಷಿ ಮಾಡುತ್ತಿದ್ದರೋ ಅದೇ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಅದಕ್ಕೆ ನಮ್ಮಲ್ಲಿ ಈಗ ಕೊರತೆ ಎಂದರೆ ಹಸುಗಳು. ಸಿಹಿ ಇದ್ದಲ್ಲಿ ಇರುವೆ ಬರುತ್ತದೆ ಎಂಬಂತೆ ಹಸು ಸಾಕಬೇಕಿದ್ದರೆ ಅದರಲ್ಲಿ ಸಾಕುವವರಿಗೆ ಲಾಭ ಬೇಕು. ಈ ಅಂಶವನ್ನು ಮನಗಂಡು ಹರ್ಯಾಣ ಸರಕಾರ ದೇಶದಲ್ಲೇ ಮೊದಲಬಾರಿಗೆ ಕೃಷಿಕರು ಸಾಕುವ ನಾಟಿ ಹುಸುವಿಗೆ ಒಂದಕ್ಕೆ 25000 ದಂತೆ ಸಹಾಯ ಧನ ನೀಡಲು ಮುಂದಾಗಿದೆ. ಜೊತೆಗೆ ಒಂದು ಕೃಷಿ ಕುಟುಂಬಕ್ಕೆ ನಾಲ್ಕು ಬ್ಯಾರಲ್ ಸಹ ಉಚಿತವಾಗಿ ನೀಡಲು ತೀರ್ಮಾನಿಸಿದೆ.

ಹರ್ಯಾಣ ಸರಕಾರದ ಈ ಕ್ರಮವನ್ನು ಇಲ್ಲಿ ಯಾಕೆ ಪ್ರಸ್ತಾಪಿಸಲಾಗಿದೆ ಎಂದರೆ, ಹಸು ಸಂತತಿ ಉಳಿಯಬೇಕಾದರೆ ಮಾಡಬೇಕಾದ  ಅಗತ್ಯ ಕೆಲಸ ಎಂದರೆ ಇದು.  ಇದು ಈಗ ಹರ್ಯಾಣದಲ್ಲಿ ಪ್ರಾರಂಭವಾದರೂ ಇದು ನಮ್ಮಲ್ಲಿಯೂ ಪ್ರಾರಂಭವಾಗುವ ಕಾಲ ದೂರವಿಲ್ಲ. ಯಾಕೆಂದರೆ ನಮ್ಮ ರಾಜ್ಯ ಸರಕಾರವೂ ಗೋ ಹತ್ಯೆ ನಿಶೇಧ ಕಾನೂನನ್ನು ಜ್ಯಾರಿಗೆ ತಂದಿದೆ.  ನೈಸರ್ಗಿಕ, ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.  ಗೋ ಹತ್ಯೆ ನಿಂತರೆ  ಸಹಜವಾಗಿ ಗೋವಿನ ಸಂತತಿ ಹೆಚ್ಚುತ್ತದೆ. ಆಗ ಅವುಗಳನ್ನು ನಾವೇ ಸಾಕಬೇಕಲ್ಲವೇ?  ಹಸು ಖರೀದಿಸಿ ಸಾಕುವವರಿಗೆ ಸಹಾಯಧನ ಕೊಟ್ಟರೆ ಹಸು ಸಾಕಾಣಿಕೆಗೆ ತುಂಬಾ ಜನ ಮುಂದೆ ಬರುತ್ತಾರೆ.  ಅದಕ್ಕಾಗಿ ಹರ್ಯಾಣ ಸರಕಾರ ಒಂದೆಡೆ ಗೋ ಸಂರಕ್ಷಣೆ ಮತ್ತೊಂದೆಡೆ ಕೃಷಿ ಈ ಎರಡಕ್ಕೂ ಒಂದೇ ಕಲೆಸೆದು ಹಣ್ಣು ಉದುರಿಸಲು ಮುಂದಾಗಿದೆ.

ದೇಶಕ್ಕೆ ಮಾದರಿ ಹರ್ಯಾಣ ಸರಕಾರ:

  • ಹರ್ಯಾಣ ಸರಕಾರದ ಈ ಕ್ರಮ ದೇಶದಲ್ಲೇ ಮೊದಲಿನದ್ದು. ಇದಕ್ಕೆ ಮೂಲ ಕಾರಣ ನೈಸರ್ಗಿಕ ಕೃಷಿಯ ಉತ್ತೇಜನವೇ ಆಗಿದೆ.
  • ಹಸು ಸಾಕಾಣಿಕೆ ಮಾಡುವ ಮೂಲಕ ಜೀವಾಮೃತ ಗೊಬ್ಬರ ಇತ್ಯಾದಿ ಕೃಷಿಗೆ ಬೇಕಾಗುವ ಬೆಳೆ ಪೋಷಕಗಳನ್ನು  ಅವರವರೇ ಉತ್ಪಾದಿಸುವುದು.
  • ಇಂದು ನಮ್ಮ ದೇಶದ ಜನತೆ ಆರೋಗ್ಯಕರ ಆಹಾರದ ಕೊರತೆಯನ್ನು ಅನುಭವಿಸುತ್ತಿದ್ದಾರೆ. 
  • ಹಸು ಸಾಕಾಣಿಕೆ ಅದರಲ್ಲೂ ನಾಟಿ ತಳಿಗಳ ಹಸು ಸಾಕುವುದರಿಂದ ಜನತೆಯ ಆರೋಗ್ಯವೂ ಉತ್ತಮವಾಗುತ್ತದೆ.
  • ಆಹಾರದ ಜೊತೆಗೆ ಆರೋಗ್ಯ, ಔಷಧಿ ಹಸು ಸಾಕಣೆಯಿಂದ ಸಾಧ್ಯ. 
  • ಹರ್ಯಾಣ ರಾಜ್ಯವು ಸುಮಾರು 50000 ಎಕ್ರೆ ಭೂ ಪ್ರದೇಶದಲ್ಲಿ  ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವ ಇಚ್ಚೆ ಹೊಂದಿದೆ.
  • ಒಂದೊಂದೇ ಬ್ಲಾಕುಗಳಲ್ಲಿ ಇದನ್ನು ಅಳವಡಿಸುತ್ತಾ ಅದರ ಫಲಿತಾಂಶದ ಆಧಾರದಲ್ಲಿ ಇನ್ನಷ್ಟು ವಿಸ್ತರಣೆ ಮಾಡುವುದರಲ್ಲಿದೆ.
  • ಸಿಕ್ಕಿಂ ರಾಜ್ಯ ಪೂರ್ತಿಯಾಗಿ ಸಾವಯವ ರಾಜ್ಯವಾಗಿ  ಬೆಳೆದಂತೆ ದೇಶದ ಬೇರೆ ಬೇರೆ ರಾಜ್ಯಗಳೂ ಸಹ ಸಾವಯವ ಪದ್ದತಿಗೆ ಮರಳಿ ಬರಬೇಕೆಂಬ ಆಶಯ ಹೊಂದಿವೆ.
  • ಭವಿಷ್ಯದಲ್ಲಿ ಈಗ ನಾವು  ರಾಸಾಯನಿಕ ಮೂಲದಲ್ಲಿ ಬಳಸುತ್ತಿರುವ ಗೊಬ್ಬರಗಳು ಬಹಳ ದುಬಾರಿಯಾಗಲಿದ್ದು, ಆಗ ನಾವು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಂಡಿದ್ದರೆ ಅದಕ್ಕೆ ಅಂಜಬೇಕಾಗಿಲ್ಲ.
  • ಈ ನಿಟ್ಟಿನಲ್ಲಿ ಹರ್ಯಣ ಅಲ್ಲದೆ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಹಿಮಾಚಲಪ್ರಡದೆಶಗಳೂ ಸಹ ಸವಯವ ಕೃಷಿಗೆ ಹೆಚ್ಚು ಹೆಚ್ಚು  ಒತ್ತು ನೀಡುತ್ತಿವೆ.

ನಾಟಿ ಹಸು ಸಂತತಿ ಉಳಿಯಬೇಕಿದ್ದರೆ ಉತ್ತೇಜನ ಅಗತ್ಯ:

ನಾಟಿ ಹಸು ಸಾಕಾಣಿಕೆ
  • ಹಸು ಸಾಕಾಣಿಕೆ ಕಷ್ಟ ಎಂದು ಹಲವಾರು ಕೃಷಿ ಮಾಡುವವರೂ ಆ ಕಸುಬನ್ನು ಬಿಡುತ್ತಾ ಬರಲಾರಂಭಿಸಿದ್ದಾರೆ.
  • ಹಸುವಿನ ಗೊಬ್ಬರ ಇಲ್ಲದ ಕಾರಣ ಸಾವಯವ ಮೂಲಕ್ಕೆ ಬೇರೆ ಗೊಬ್ಬರವನ್ನು ಅವಲಂಭಿಸುವ ಸ್ಥಿತಿ ಬಂದಿದೆ.
  • ಒಂದು ಕಾಲದಲ್ಲಿ ಲೋಡ್ ಕುರಿ ಗೊಬ್ಬರ 50,000 ಆಸು ಪಾಸಿಗೆ ಸಿಗುತ್ತಿದ್ದುದು ಈಗ 1,20,000 ತನಕ ಏರಿಕೆಯಾಗಿದೆ.
  • ಉಚಿತವಾಗಿ ಅಥವಾ ತೀರಾ ಕಡಿಮೆ ದರದಲ್ಲಿ ಸಿಗುತ್ತಿದ್ದ ಪ್ರೆಸ್ ಮಡ್ ಸಹ ಈಗ ಕಿಲೋಗೆ 5-6 ಕ್ಕೆ ಏರಿಕೆಯಾಗಿದೆ.
  • ಕೋಳಿ ಗೊಬ್ಬರವೂ ಹಾಗೆಯೇ. ಎಲ್ಲಾ  ಭೂಮಿ ಕೃಷಿಗೆ ಒಳಪಟ್ಟು ಸೊಪ್ಪು ಸದೆಗಳೂ ಇಲ್ಲದಾಗುತ್ತಿವೆ.
  • ಸಾವಯವ ಗೊಬ್ಬರ ಮಾರಾಟ ಮಾಡುವ ವ್ಯವಹಾರ ಭಾರೀ ಮುಂದುವರಿದಿದೆ.
  • ಹೊರಗಡೆಯಿಂದ ಸಾವಯವ ಗೊಬ್ಬರ ತರುವುದರಿಂದ ಕೃಷಿಯ ಉತ್ಪಾದನಾ ವೆಚ್ಚ 25 % ಹೆಚ್ಚಳವಾಗುತ್ತದೆ.
  • ಹೊರ ಮೂಲದಿಂದ ಗೊಬ್ಬರ ತಂದು ಬಳಸುವ ಖರ್ಚಿನ ನೈಜ ಲೆಕ್ಕಾಚಾರ ಹಾಕಿದರೆ ಸ್ವಂತ ನಾಟಿ ಹಸು ಸಾಕಣೆ ಮಾಡಿ ಹೊಲದ ಕಳೆ ಹುಲ್ಲುಗಳನ್ನು ತಿನ್ನಿಸಿ ಗೊಬ್ಬರ ಉತ್ಪಾದನೆ ಮಾಡಿದರೆ ಅದು ಸಮ ಸಮವಾಗುತ್ತದೆ.
  • ಪುನರ್ ಬಳಕೆ ಸಹ ಆಗುತ್ತದೆ. ಹೊಲದ ಕಳೆ ನಿವಾರಣೆಯಾಗುತ್ತದೆ. ಅದರ ಸದುಪಯೋಗವೂ ಆಗುತ್ತದೆ.

ನೈಸರ್ಗಿಕ ಕೃಷಿ- ಅಥವಾ ಸಾವಯವ ಕೃಷಿ ಅನಿವಾರ್ಯವಾಗಬಹುದು:

  • ಈಗಾಗಲೇ ರಸಗೊಬ್ಬರದ ಬೆಲೆ ಭಾರೀ ದುಬಾರಿಯಾಗಿದೆ.
  • ಸರಕಾರ ಸಬ್ಸಿಡಿ ಕೊಟ್ಟು ಉತ್ಪಾದಿಸುವ ರಸಗೊಬ್ಬರದ ಬೆಲೆ ಆಷ್ಟೊಂದು ಹೆಚ್ಚಳವಾದಂತೆ ಕಂಡು ಬರದಿದ್ದರೂ, ಖಾಸಗಿ ಗೊಬ್ಬರಗಳ ಬೆಲೆ 125% ದಷ್ಟು ಹೆಚ್ಚಳವಾಗಿದೆ.
  • ಇನ್ನು ಒಂದು ವರ್ಷದ ಅವಧಿಯಲ್ಲಿ ಮತ್ತೆ 50% ದರ ಹೆಚ್ಚಳವಾಗುವ ಸಾಧ್ಯತೆ ಇದೆ.
  • ಜಗತ್ತಿನಾಧ್ಯಂತ ಆಹಾರ ವಸ್ತುಗಳ ಕೊರತೆ ಉಂಟಾಗಿದೆ. ಎಲ್ಲಾ ಕಡೆಯಲ್ಲೂ ರಸಗೊಬ್ಬರದ ಬೇಡಿಕೆ ಹೆಚ್ಚಳವಾಗಿದೆ.
  • ರಸಗೊಬ್ಬರ ಉತ್ಪಾದನೆ ಮಾಡುವ ದೈತ್ಯ ರಾಷ್ಟಗಳಾದ ರಶ್ಯಾ, ಚೀನಾ ದೇಶಗಳು ಈ ಸಂದರ್ಭದಲ್ಲಿ ಬೆಲೆ  ಹೆಚ್ಚಳಕ್ಕೆ ಮುಂದಾಗಿವೆ.
  • ಹಾಗಾಗಿ ಬೆಳೆ ಬೆಳೆಸುವ ರೈತರು ಸ್ವಲ್ಪ ಸ್ವಲ್ಪವೇ ರಸ ಗೊಬ್ಬರದ ಬಳಕೆಯನ್ನು ಕಡಿಮೆಮಾಡಿ ಪರ್ಯಾಯ ವಿಧಾನವನ್ನು ಅನುಸರಿಸಬೇಕಾದ ಅನಿವಾರ್ಯತೆ ಬರುತ್ತದೆ.
  • ಆಗ ರೈತನಿಗೆ ಕಡಿಮೆ ಖರ್ಚಿನಲ್ಲಿ ಸಾಧ್ಯವಾಗುವುದು ಹಸು ಸಾಕಾಣಿಕೆ ಒಂದೇ.
  • ಕೇಂದ್ರ ಸರಕಾರ ಈಗಾಗಲೇ ನೈಸರ್ಗಿಕ ಕೃಷಿ- ಸಾವಯವ ಕೃಷಿಗೆ ಉತ್ತೇಜನ ನೀಡುವ ಉದ್ಡೇಶವೂ ಸಹ ರಸಗೊಬ್ಬರ ಆಮದು ಕಡಿಮೆ ಮಾಡುವುದಕ್ಕೋಸ್ಕರವೇ ಆಗಿರುತ್ತದೆ.

ಹಸುವಿನ ಗೊಬ್ಬರದ ಮೂಲದಲ್ಲಿ ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶ ಹೆಚ್ಚಳವಾಗುತ್ತದೆ. ಅದು ಮಣ್ಣಿನಲ್ಲಿ ಕಡಿಮೆಯಾದಂತೆ ಯಾವುದೇ ಪೋಷಕಗಳಿಗೆ ಬೆಳೆಗಳು ಸ್ಪಂದಿಸುವುದನ್ನು ಕಡಿಮೆಮಾಡುತ್ತಾ ಬರುತ್ತವೆ. ಈಗ ಆ ಸ್ಥಿತಿ ಸ್ವಲ್ಪ ಮಟ್ಟಿಗೆ ಉಂಟಾಗಲಾರಂಭಿಸಿದೆ.

ಹೆಚ್ಚು ಉತ್ಪಾದನೆ ಒಂದೇ ಗುರಿಯಾಗದಿರಲಿ:

  • ನಮ್ಮ ಹಿರಿಯರು ಕೃಷಿ ಮಾಡುತ್ತಿದ್ದರು, ಹಸು ಸಾಕುತ್ತಿದ್ದರು. ಆದರೆ ಕೃಷಿಯಲ್ಲಿ ನಾವು ಈಗ ಪಡೆಯುತ್ತಿದ್ದ ಇಳುವರಿಯ ಅರ್ಧದಷ್ಟನ್ನು ಮಾತ್ರ ಪಡೆಯುತ್ತಿದ್ದರು.
  • ಹತ್ತಾರು ಹಸು ಸಾಕಿ, ಕುಡ್ತೆ ಲಕ್ಕದಲ್ಲಿ ಹಾಲು ಉತ್ಪಾದಿಸುತ್ತಿದ್ದರು.
  • ಇದು ನಮ್ಮ ತರ್ಕ. ವಿಚಾರ ಸರಿ. ಆದರೆ ಈಗ ಅಧಿಕ ಇಳುವರಿಗಾಗಿ ಮಾಡುವ ಖರ್ಚು ಹಿಂದಿಗಿಂತ ಹೆಚ್ಚಾಗಿದೆ.
  • ಕುಡ್ತೆ ಹಾಲು ಲೀಟರ್ ಆಗಲು ಅಷ್ಟೇ ಖರ್ಚು ಮಾಡಿದ್ದೇವೆ.  ಇಳುವರಿ ಹೆಚ್ಚಾಗಿದೆ.
  • ಗುಣಮಟ್ಟ ಕಡಿಮೆಯಾಗಿದೆ. ಉತ್ಪಾದನೆ ಹೆಚ್ಚಿದೆ ಖರ್ಚು ಅದಕ್ಕನುಗುಣವಾಗಿ ಹೆಚ್ಚಾಗಿದೆ.
  • ಇದೆಲ್ಲವೂ ಸಮಾಜಿಕ ಸ್ವಾಸ್ತ್ಯದ ಮೇಲೆ ಪರಿಣಾಮ ಬೀರಿದೆ. ಹಿಂದಿಗಿಂತ ಈಗ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ.
  • ಇದೆಲ್ಲಾ  ಸಮಸ್ಯೆಗಳನ್ನು ಇಟ್ಟುಕೊಂಡು ನಾವು ಹೆಚ್ಚು ಉತ್ಪಾದನೆಗೆ ಹಾತೊರೆಯುವುದಕ್ಕಿಂತ ಹಿತಮಿತ ಉತ್ಪಾದನೆ ಮಾಡಿ ಖರ್ಚು ಕಡಿಮೆ ಮಾಡುವುದು ಉತ್ತಮ.

ಹರ್ಯಾಣ ಸರಕಾರ ಹಸು ಸಾಕಲು 25,000 ಕೊಡಲು ಮುಂದಾಗಿದೆ. ಮುಂದೆ ಎಲ್ಲಾ ರಾಜ್ಯ ಸರಕಾರಗಳೂ ಇದನ್ನು ಅನುಸರಿಸುವ ಸಾಧ್ಯತೆ ಹೆಚ್ಚಾಗಿದೆ. ಹಳ್ಳಿಗಳ ಜನ ಸ್ವಾವಲಂಭಿ ಬದುಕನ್ನು ಕಾಣಲು ಹಸು ಸಾಕಾನಿಕೆ ಬೇಕು. ಹಸುವಿನ ಗೊಬ್ಬರ, ಜೈವಿಕ ಇಂಧನ ಮುಂತಾದವುಗಳಿಂದ ಹಣದ ಹೊರಹರಿವು ಕಡಿಮೆಯಾಗಿ ಆದಾಯ ಉಳಿಕೆಯಾಗುತ್ತದೆ.

Leave a Reply

Your email address will not be published. Required fields are marked *

error: Content is protected !!