ಟ್ರೈಕೋಡರ್ಮಾ ಅಥವಾ ಇನ್ಯಾವುದೇ ಜೀವಾಣುಗಳನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಜೈವಿಕ ಗುಣಧರ್ಮ ಬದಲಾಗುತ್ತದೆ. ಎಲ್ಲಾ ಜೀವಾಣುಗಳೂ ಮಣ್ಣು ಮೂಲದವುಗಳೇ ಆಗಿದ್ದು, ಅವುಗಳನ್ನು ಸಂಸ್ಲೇಶಿಸಿ ಕೃತಕವಾಗಿ ಬೆಳೆಸಿ ಸೂಕ್ತ ಮಾದ್ಯಮದಲ್ಲಿ ಸೇರಿಸಿ ರೈತರಿಗೆ ಬೇರೆ ಬೇರೆ ಬೆಳೆಗೆ ಬಳಕೆ ಮಾಡಲು ಕೊಡಲಾಗುತ್ತದೆ. ಇದು ಸಸ್ಯಗಳಿಗೆ ರೋಗ ನಿರೋಧಕ ಶಕ್ತಿಯನ್ನು ಕೊಡಬಲ್ಲ ಮತ್ತು ರೋಗಕಾರಕ ಸೂಕ್ಷ್ಮಾಣು ಜೀವಿಗಳ ಜೊತೆಗೆ ಬದುಕಿ ಅದನ್ನು ನಿಶ್ಕ್ರಿಯಗೊಳಿಸುವ ಶಕ್ತಿಯನ್ನು ಹೊಂದಿದೆ.
- ಟ್ರೈಕೋಡರ್ಮಾ ಎಂಬ ಶಿಲೀಂದ್ರವನ್ನು ಬಹಳ ಹಿಂದೆಯೇ ಸೂಕ್ಷ್ಮಾಣು ಜೀವಿ ಶಾಸ್ತ್ರಜ್ಞರು (1974)ಮಣ್ಣಿನಲ್ಲಿರುವುದನ್ನು ಗುರುತಿಸಿದ್ದಾರೆ.
- ಇದರಲ್ಲಿ ಪ್ರಮುಖವಾಗಿ ನಾಲ್ಕು ಪ್ರಭೇಧಗಳು ರೋಗ ನಿಯಂತ್ರಕವಾಗಿ ಕೆಲಸ ಮಾಡುತ್ತವೆ.
- ಎಲ್ಲಾ ಟ್ರೈಕೊಡರ್ಮಾ ಪ್ರಬೇಧ ಗಳೂ ಕೊಳೆಯುವಿಕೆಗೆ ಕಾರಣವಾದ ಶಿಲೀಂದ್ರಗಳ ವಿರುದ್ಧ ಕೆಲಸ ಮಾಡುವವುಗಳು.
- ಟ್ರೈಕೋಡರ್ಮಾ ಹರ್ಜಿಯಾನಂ ;Trichoderma ಇದು, ಕರಿಮೆಣಸು, ಹತ್ತಿ, ಸೌತೇ ಕಾಯಿ, ಕಬ್ಬು, ಮೆಣಸು, ಟೊಮಾಟೋ, ಕಲ್ಲಂಗಡಿ, ಮುಂತಾದ ಬೆಳೆಗಳಲ್ಲಿ ಶಿಲೀಂದ್ರ ರೋಗ ನಿಯಂತ್ರಕವಾಗಿ ಕೆಲಸ ಮಾಡುತ್ತದೆ.
- ಟ್ರೈಕೋಡರ್ಮಾ ವಿರಿಡೆ: T.viride ಇದು ಅರಶಿನ, ಧಾನ್ಯ, ಹಣ್ಣಿನ ಬೆಳೆಗಳು, ದ್ವಿದಳ ದಾನ್ಯಗಳು,ತರಕಾರಿ ಬೆಳೆಗಳಿಗೆ ಬಳಸಬಹುದು.
- ಟ್ರೈಕೋಡರ್ಮಾ ಹೆಮಾಟ : T.hamatum ಇದು ಸಸ್ಯ ಬೆಳವಣಿಗೆ ಪ್ರಚೋದಕವಾಗಿ ಕೆಲಸ ಮಾಡುವ ಜೀವಾಣು.
- ಎಲೆಗಳಿಗೆ ಕಾಡುವ ಸೂಕ್ಷ್ಮಾಣು ಜೀವಿ ಖಾಯಿಲೆಯ ವಿರುದ್ಧ ನಿರೋಧಕ ಶಕ್ತಿಯನ್ನು ಕೊಡುತ್ತದೆ.
- ಮಣ್ಣಿನಲ್ಲಿ ಇರುವ ಮತ್ತು ಬರುವ ಎರಡೂ ಬಗೆಯ ರೋಗಕಾರಕಗಳ ವಿರುದ್ಧ ಕೆಲಸ ಮಾಡುತ್ತದೆ.
- ಟ್ರೈಕೋಡರ್ಮಾ ವೆರೆನ್ಸ್ : T.virens. ಇದು ಹಸುರು ಮನೆಗಳಲ್ಲಿ ಬರುವ ಸಸ್ಯ ಕೊಳೆ ರೋಗವನ್ನು ತರುವ ಶಿಲೀಂದ್ರದ ನಿಯಂತ್ರಣಕ್ಕೆ ಸಹಾಯಕ.
- ಇದು ಉತ್ಪಾದಿಸುವ ಶಿಲೀಂದ್ರ ನಾಶಕ ವಿಷಾಂಶ (Gliotoxin) ಮಾನವ ಸೇರಿದಂತೆ ಇತರ ಸಸ್ತನಿಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಸ್ವಲ್ಪ ಮಟ್ಟಿಗೆ ಕುಗ್ಗಿಸುವ ಸಾಮರ್ಥ್ಯ ಹೊಂದಿದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ.
- ಕೆಲವೊಮ್ಮೆ ಕಣ್ಣು ತುರಿಕೆಯಂತಹ ತೊಂದರೆ ಇರುವ ಕಾರಣ ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿಲ್ಲ.
ಇದು ಉತ್ತಮ ಪ್ರಬೇಧ:
- ಸಾಮಾನ್ಯವಾಗಿ ಟ್ರೈ- ಹಾರ್ಜಿಯಾನಂ ಮತ್ತು ಟ್ರೈ. ವಿರಿಡೆ ಇವುಗಳನ್ನು ವ್ಯಾಪಕವಾಗಿ ಪೂರೈಸಲಾಗುತ್ತಿದ್ದು,
- ಇದು ಹೊರ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯುತ್ತದೆ.
- ಇದಕ್ಕೆ ಹೊರ ವಾತಾವರಣದ ಉಷ್ಣಾಂಶದಲ್ಲಿ ಸ್ವಲ್ಪ ಏರು ಪೇರುಗಳಾದರೂ ತಡೆದುಕೊಳ್ಳುವ ಶಕ್ತಿ ಇರುತ್ತದೆ.
- ಎಲ್ಲಾ ತರಹದ ಮಣ್ಣಿನಲ್ಲೂ ಇದು ಬದುಕುವ ಗುಣ ಪಡೆದಿದೆ.
- ಇದು ಮಣ್ಣಿನಲ್ಲಿ ಸುಮಾರು 1 ಅಡಿ ತನಕವೂ ಹೋಗುತ್ತದೆ.
- ಅದರಲ್ಲೂ ಸಾವಯವ ಸಂಮೃದ್ಧ ಮಣ್ಣಿನಲ್ಲಿ ಹೆಚ್ಚು ಆಳದ ತನಕವೂ ಹೋಗುತ್ತದೆ.
- ಬರ ನಿರೋಧಕ ಶಕ್ತಿಯನ್ನುತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ.
- ಇದನ್ನು ಬೀಜೋಪಚಾರಕ್ಕೆ, ಮಣ್ಣಿಗೆ ಸೇರಿಸಲು ಮತ್ತು ಎಲೆಗಳಿಗೆ ಸಿಂಪಡಿಸಲು ಬಳಸಬಹುದು.
ಸಾಮಾನ್ಯವಾಗಿ ಜೈವಿಕ ನಿಯಂತ್ರಕಗಳು ಅವುಗಳ ಗುರಿಯನ್ನು ಬಿಟ್ಟು ಬೇರೆ ಜೀವಿಗಳ ಜೊತೆಗೆ ಕೆಲಸ ಮಾಡುವುದಿಲ್ಲ. ಆದರೆ ಟ್ರೈಕೋಡರ್ಮಾ ವು ಬಹು ಸ್ಥರದಲ್ಲಿ ಕ್ರಿಯೆನ್ನು ಉಂಟು ಮಾಡುವ ಜೀವಾಣುವಾಗಿರುತ್ತದೆ. ಇದು ಬರೇ ರೋಗ ಕಾರಕ ಶಿಲೀಂದ್ರ ಮಾತ್ರವಲ್ಲದೆ, ಬೇರು, ಗೆಲ್ಲು, ಮತ್ತು ಕೊಯಿಲೋತ್ತರ ರೋಗಕಾರಕಗಳ ವಿರುದ್ಧ ಕೆಲಸ ಮಾಡುತ್ತದೆ. ಇವು ಬೇರುಗಳ ಸನಿಹದಲ್ಲಿ ಒಂದು ರಕ್ಷಕ ಸೇನಾನಿಯಾಗಿ ವಾಸಮಾಡುತ್ತವೆ. ಇದು ಶಿಲೀಂದ್ರಗಳಲ್ಲದೆ ಮಣ್ಣಿನಲ್ಲಿದ್ದು, ಬೆಳೆಗಳ ಬೇರುಗಳಿಗೆ ಹಾನಿ ಮಾಡುವ, ಕೆಲವು ಬ್ಯಾಕ್ಟೀರಿಯಾಗಳು, ಜಂತು ಹುಳುಗಳ ಮೊಟ್ಟೆಗಳನ್ನು ಸಹ ಹತ್ತಿಕ್ಕುತ್ತದೆ. ಮಣ್ಣಿಗೆ ಸೇರಿದಾಗ ಅದು ಸಸ್ಯ ಶರೀರದ ಒಳಗೂ ಸೇರಿಕೊಳ್ಳುತ್ತದೆ.
ಟ್ರೈಕೋಡರ್ಮಾ ಬಳಕೆ ಹೇಗೆ:
- ನಾವೇ ಈ ಜೀವಾಣುವನ್ನು ಉತ್ಪಾದಿಸುವುದು ಕಷ್ಟ.
- ಇದನ್ನು ಸಾಮಾನ್ಯವಾಗಿ ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ವಿಶ್ವ ವಿಧ್ಯಾನಿಲಯಗಳು, ಹಾಗೆಯೇ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಅಧೀನದ ಸಂಶೋಧನಾ ಸಂಸ್ಥೆಗಳು ತಮ್ಮ ಸೂಕ್ಷ್ಮಾಣು ಜೀವಿ ಶಾಸ್ತ್ರ ವಿಭಾಗದಲ್ಲಿ ಉತ್ಪಾದಿಸಿ ಒದಗಿಸುತ್ತವೆ.
- ಇಲ್ಲಿಂದ ತಂತ್ರಜ್ಞಾನವನ್ನು ಖರೀದಿಸಿ ಖಾಸಗಿಯವರೂ ಉತ್ಪಾದಿಸಿ ಕೊಡುತ್ತಾರೆ.
- ಎಲ್ಲಾ ಸೂಕ್ಷ್ಮಾಣು ಜೀವಿಗಳ ಮೂಲ ಸಂಗ್ರಹವು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಸ್ವಾಧೀನದಲ್ಲೇ ಇರುವಂತದ್ದಾಗಿದ್ದು,
- ಇದನ್ನು ಅವರ ಅನುಮತಿ ಮತ್ತು ಮಾರ್ಗದರ್ಶನದ ಮೇಲೆ ಸಂಖ್ಯಾಭಿವೃದ್ದಿ ಮಾಡಿ ಒದಗಿಸಲಾಗುತ್ತದೆ.
ಟ್ರೈಕೋಡರ್ಮಾ ಬಳಸಿದ ತಕ್ಷಣ ಫಲ ಕೊಡದಿದ್ದರೂ ಪ್ರತಿಫಲ ಇದೆ. ಎಲ್ಲಾ ಬೆಳೆಗಳಿಗೂ ಬಳಸಿದರೆ ಉತ್ತಮ. ವರ್ಷ ವರ್ಷವೂ ಮಣ್ಣಿಗೆ ಸೇರಿಸುತ್ತಿದ್ದರೆ ಫಲ ಹೆಚ್ಚು.
ಬಳಕೆ ಕ್ರಮ:
- ಟ್ರೈಕೋಡರ್ಮಾ ಅಥವಾ ಇನ್ಯಾವುದೇ ಸೂಕ್ಷ್ಮಾಣು ಜೀವಿಯನ್ನು ಮಣ್ಣಿಗೆ ಸೇರಿಸಲು ಬಳಕೆ ಮಾಡುವಾಗ ಅನುಕೂಲ ಇದ್ದರೆ ಅದನ್ನು ಕಳಿತ ಕಾಂಪೊಸ್ಟು ಗೊಬ್ಬರದ ಜೊತೆಗೆ ಮಿಶ್ರಣ ಮಾಡಿ ಅದನ್ನು ಹೊಲಕ್ಕೆ ಚೆಲ್ಲಬಹುದು.
- ಇಲ್ಲವೇ ಇದನ್ನು ಶಿಫಾರಿತ ಪ್ರಮಾಣದಲ್ಲಿ ನೀರು ಸೇರಿಸಿ ನೆಲಕ್ಕೆ ಸಿಂಪರಣೆ ಮಾಡಬಹುದು.
- ಸಿಂಪರಣೆ ಮಾಡಿದ ಮರು ದಿನ ಒಮ್ಮೆ ನೀರು ಹಾಯಿಸಿದಾಗ ಅಲ್ಲಿ ಬೆಳೆದಿರುವ ಜೀವಾಣುಗಳು ಮಣ್ಣಿಗೆ ಸೇರಲ್ಪಡುತ್ತವೆ.
- ಹೆಚ್ಚಿನ ತಯಾರಕರು ಜೀವಾಣುಗಳು ( microbial count) ಹೆಚ್ಚು ಸಂಖ್ಯೆಯಲ್ಲಿ ಇರುವಂತೆ ದ್ರವರೂಪದಲ್ಲಿ ಕೊಡುತ್ತಾರೆ.
- ಇದನ್ನು ಸಿಂಪಡಿಸಲು ಸುಲಭ. ಇಂತಹ ಮಿಶ್ರಣವನ್ನು ಬೇಕಿದ್ದರೆ ರೈತರು ಒಮ್ಮೆ ತಮ್ಮಲ್ಲೇ ಪ್ರಮಾಣ ಹೆಚ್ಚು ಮಾಡಿಕೊಳ್ಳಬಹುದು.
- ತಂಪು ವಾತಾವರಣ ಇರುವಾಗ, ಅಧಿಕ ಮಳೆ ಬಾರದ ಸಮಯದಲ್ಲಿ ಬಳಕೆ ಮಾಡಬೇಕು.
ಪ್ರಮಾಣ ಹೆಚ್ಚು ಮಾಡಿಕೊಳ್ಳುವಿಕೆ:
- 1-2 ಲೀ. ಟ್ರೈಕೋಡರ್ಮಾ ಮಿಶ್ರಣವನ್ನು 200 ಲೀ. ನೀರಿನಲ್ಲಿ ಕರಗಿಸಿ ಅದನ್ನು ಬೆಳೆಯಲು ಬಿಟ್ಟು ಸುಮಾರು 7 ದಿನಗಳ ಕಾಲ ಕಲಕುತ್ತಾ ಪ್ರಮಾಣ ಹೆಚ್ಚು ಮಾಡಿ ಬಳಕೆ ಮಾಡಬಹುದು.
- ನೀರಿಗೆ 2ಕಿಲೋ ಬೆಲ್ಲ, 1 ಕಿಲೋ ಕಡಲೆ ಹಿಟ್ಟು ಮತ್ತು 2 ಕಿಲೋ ಯೂರಿಯಾ ಮಿಶ್ರಣ ಮಾಡಿ ಅದಕ್ಕೆ ಟ್ರೈಕೋಡರ್ಮಾ ಮಿಶ್ರಣವನ್ನು ಹಾಕಿ ದಿನಾ ಕಲಕುತ್ತಾ ಇದ್ದರೆ ಅದಕ್ಕೆ ಆಹಾರ ದೊರೆತು ಸಂಖ್ಯಾಭಿವೃದ್ದಿಯಾಗುತ್ತದೆ.
- ಸೂಕ್ಷ್ಮಾಣು ಜೀವಿಗಳನ್ನು ಮಣ್ಣಿಗೆ ಸೇರಿಸುವುದರ ಜೊತೆಗೆ ಅದನ್ನು ಎಲೆಗಳಿಗೆ ಸಿಂಪರಣೆಯನ್ನೂ ಮಾಡಬಹುದು.
- ಅದು ಎಲೆಗಳ ಮೂಲಕವೂ ಕೆಲಸ ಮಾಡುತ್ತವೆ.
- ಖರೀದಿ ಮಾಡುವಾಗ ಸಾಧ್ಯವಾದಷ್ಟು ತಾಜಾ ಇರುವಂತೆ( ತಯಾರಾಗಿ ಹೆಚ್ಚು ದಿನ ಆಗಿರದ) ತಯಾರಿಕೆಯನ್ನೇ ಕೊಳ್ಳಿ.
ರೈತರು ಸಾಧ್ಯವಾದಷ್ಟು ಜೈವಿಕ ವಿಧಾನಗಳಿಂದ ರೋಗ ಕೀಟ ನಿಯಂತ್ರಣ ಮಾಡುವುದರಿಂದ ಅನುಕೂಲ ಇದೆ. ಪದೇ ಪದೇ ರಾಸಾಯಯನಿಕ ಮೂಲದ ರೋಗ ಕೀಟ ನಾಶಕ ಬಳಕೆ ಮಾಡಿದರೆ ಅವುಗಳು ಮಣ್ಣಿನ – ಪರಿಸರದ ಉಪಕಾರೀ ಜೀವಿಗಳನ್ನು ನಾಶಮಾಡಿ ಸಮಸ್ಯೆ ಬಿಗಡಾಯಿಸುತ್ತದೆ. ಜೈವಿಕ ವಿಧಾನ ಅಗ್ಗ ಮತ್ತು ಸುರಕ್ಷಿತ, ಇದನ್ನು ಸಾಧ್ಯವಾದಷ್ಟು ಬಳಕೆ ಮಾಡುವುದು ಸೂಕ್ತ.
end of the article: ———————————————————————————–
Search words: biological control of diseases# Trichoderma # Pepper disease # Damping of disease # safe disease control# bio fungicides #