ಬೆಳೆಗಾರರೇ – ಮೈಲುತುತ್ತೇ ಖರೀದಿಸುವಾಗ ಬುದ್ದಿವಂತರಾಗಿರಿ.

by | Mar 15, 2021 | Current Affairs (ಪ್ರಚಲಿತ ವಿಧ್ಯಮಾನಗಳು) | 0 comments

ಇನ್ನೇನೋ ಮಳೆಗಾಲ ಬರಲಿದೆ. ಅಡಿಕೆಗೆ ಭಾರೀ ಬೆಲೆ ಬಂದಿದೆ. ಅಡಿಕೆ ಬೆಳೆಗಾರರಲ್ಲಿ ದುಡ್ಡು ಇದೆ. ಅದರಲ್ಲಿ ತಮ್ಮ ಹೆಚ್ಚಳವಾಗುತ್ತದೆ. ಈಗಲೇ ಖರೀದಿ ಮಾಡಿ ಎಂದು ವ್ಯಾಪಾರಿಗಳು ಹಳೆ ಸ್ಟಾಕು ಮುಗಿಸಿ ಮುಂದಿನ ಹೊಸ ಸ್ಟಾಕು ಮಾಡಲು ಬಂಡವಾಳ ಕ್ರೋಢೀಕರಣದಲ್ಲಿದ್ದಾರೆ. ಅಡಿಕೆ ಬೆಳೆಗಾರರೇ ನೀವು ಈಗ ಬುದ್ದಿವಂತರಾಗುವುದು ಅಗತ್ಯವಾಗಿದೆ.
ಅಡಿಕೆ ಕೊಳೆ ರೋಗಕ್ಕೆ ಮೈಲುತುತ್ತೆ ಬೇಕು. ಹಾಗೆಂದು ಖರೀದಿಸಿದರೆ ದರ ಕಡಿಮೆ, ಮುಂದೆ ಹೆಚ್ಚು. ಇದೆಲ್ಲಾ ಯಾವ ಕ್ರಮವೋ ತಿಳಿಯದು. ಸರಕಾರದ ಸಂಬಂಧಿಸಿದ ಇಲಾಖೆ ಇದನ್ನೆಲ್ಲಾ ಗಮನಿಸಿದೆಯೋ ಇಲ್ಲವೋ ತಿಳಿಯದು. ಆದರೆ ರೈತರಲ್ಲಿ ಅಸ್ತ್ರ ಇದೆ. ತಕ್ಷಣ ರೈತ ಸಂಘಟನೆಗಳು ಸಂಬಧಿಸಿದ ಕೃಷಿ ಮಂತ್ರಿಗಳಿಗೆ, ಮುಖ್ಯ ಮಂತ್ರಿಗಳಿಗೆ  ಮೈಲುತುತ್ತೆ ಮತ್ತು ಪ್ರಚಲಿತ ವಿಧ್ಯಮಾನಗಳ ಬಗ್ಗೆ ವಿವರವಾಗಿ ತಿಳಿಸುವ ಪ್ರಯತ್ನ ಮಾಡುವುದು ಸೂಕ್ತ.

copper sulphate

  • ಕಾಫೀ ಬೆಳೆಗಾರರೂ ಸಹ ಮೈಲುತುತ್ತೆಯ ದೊಡ್ದ ಗ್ರಾಹಕರಾಗಿದ್ದು, ಅವರಲ್ಲಿ ಹೆಚ್ಚಿನ ದೊಡ್ದ ಬೆಳೆಗಾರರು ಪರೀಕ್ಷೆ ಮಾಡಿಸಿಯೇ ಖರೀದಿ ಮಾಡುತ್ತಾರೆ.
  • ಆದರೆ ಅಡಿಕೆ ಬೆಳೆಗಾರರು ಮಾತ್ರ ಇದರಲ್ಲಿ ಉದಾಸೀನ ಮಾಡುವುದು ಹಚ್ಚು.

ಅಧಿಕ ಲಾಭದ  ವ್ಯವಹಾರ:

  • ಮೈಲುತುತ್ತೆ ಎಂಬುದು ಸಣ್ಣ ವ್ಯವಹಾರ ಅಲ್ಲ.
  • ಒಂದೊಂದು ಊರಿನಲ್ಲಿ  ಟನ್  ಗಟ್ಟಲೆ ಮಾರಾಟವಾಗುತ್ತದೆ.
  • ಒಬ್ಬ ತಯಾರಕರು ಕನಿಷ್ಟ ವರ್ಷಕ್ಕೆ 10 ಲೋಡಿಗೂ ಹೆಚ್ಚು ಮೈಲುತುತ್ತೆ ತಯಾರಿಸಿ ಮಾರಾಟ ಮಾಡುತ್ತಾರೆ.
  • ಬಹುತೇಕ ಎಲ್ಲವೂ ಭಾರತ ಸರಕಾರದ ಗುಣಮಟ್ಟ ಮುದ್ರಿಕೆಯನ್ನು (ISI)  ಹೊಂದಿದವುಗಳೇ ಆಗಿವೆ.
  • ಕಿಲೋ ಮೈಲು ತುತ್ತೆಯ ದರ ಸರಾಸರಿ 200  ರೂ,. ಆದರೆ ಒಂದು ಲೋಡು (16 ಟನ್) ಸುಮಾರು 30 ಲಕ್ಷದ ಸೊತ್ತು.
  • ಪ್ರತೀಯೊಬ್ಬ 10 ಲೋಡು ವ್ಯವಹಾರ ಮಾಡಿದರೆ ಅದು ಸುಮಾರು 3 ಕೋಟಿಯದ್ದು( ಇದು ಕಡಿಮೆ, ಇದಕ್ಕಿಂತ ಹೆಚ್ಚು ವ್ಯವಹಾರ ಇದೆ.
  • ಕನಿಷ್ಟ 15% ಲಾಭ ಇಟ್ಟುಕೊಂಡರೂ ಎಷ್ಟಾಗುತ್ತದೆ ಲೆಕ್ಕಾಚಾರ ಹಾಕಿ.
  • ಒಬ್ಬೊಬ್ಬ  ತಯಾರಕರು ಹೋಬಳಿ ಮಟ್ಟದ ಅಂಗಡಿಗೇ 20-30 ಟನ್ ಸರಬರಾಜು ಮಾಡುತ್ತಾರೆ.
  • ಕರಾವಳಿ, ಮಲೆನಾಡಿನ ಒಟ್ಟು 8 ಜಿಲ್ಲೆಗಳಲ್ಲಿ ಇದು ಎಷ್ಟು  ಆಗಬಹುದು ಎಂಬುದನ್ನು ಲೆಕ್ಕಾಚಾರ ಹಾಕಿ.

 ರೈತರ ನೆರವಿಗೆ ಯಾರೂ ಇಲ್ಲ:

  • ಮೈಲುತುತ್ತೂ ಸೇರಿದಂತೆ ಕೃಷಿ ರಾಸಾಯನಿಕವನ್ನು ಪರವಾನಿಗೆ ಪಡೆದ ಮಾರಾಟಗಾರರೇ ಮಾರಬೇಕೆ ಎಂಬ ಕಾನೂನು ಇದೆಯಾದರೂ ಅದು ಪುಸ್ತಕಕ್ಕೆ ಮಾತ್ರ.
  • ಹಳ್ಳಿ ಹಳ್ಳಿಯ ಗೂಡಂಗಡಿಯಲ್ಲೂ ಮೈಲುತುತ್ತೆ ಸುಣ್ಣದ ವ್ಯವಹಾರ ನಡೆಯುತ್ತದೆ.
  • ಕೊಂಡ ದರ ಯಾವುದು( ಬಿಲ್) ಮಾರಾಟ ದರ ಯಾವುದು ಎಂಬ ಯಾವ ಬಹಿರಂಗ ದಾಖಲಾತಿಯೂ ಇಲ್ಲ.
  • ನಮ್ಮ ದೇಶದದಲ್ಲಿ ರೈತರಿಗೆ ಎಲ್ಲಾ ರೀತಿಯ ತಾಂತ್ರಿಕ ವೈಜ್ಞಾನಿಕ ಸಲಹೆ , ಸೂಚನೆ, ರಕ್ಷಣೆ ಕೊಡಲು ಸರಕಾರ ಕೃಷಿ, ತೋಟಗಾರಿಕಾ ಇಲಾಖೆಯನ್ನು ಹುಟ್ಟು ಹಾಕಿದೆ.
  • ಇವರು ಆಗಿಂದಾಗ ಕೃಷಿಕರು ಬಳಸುವ ಬೆಳೆ ಪೊಷಕಗಳು, ಬೆಳೆ ಸಂರಕ್ಷಕಗಳನ್ನು ಮಾರುಕಟ್ಟೆಯಲ್ಲಿ ಯಾದೃಚ್ಚಿಕವಾಗಿ ಸಂಗ್ರಹಿಸಿ ಅದನ್ನು  ಪ್ರಾಯೋಗಾಲಯದಲ್ಲಿ  ಪರೀಕ್ಷಿ ಸಬೇಕು.
  • ಯಾವ ತಯಾರಿಕೆಯಲ್ಲಿ  ಅಗತ್ಯಕ್ಕೆ ಬೇಕಾದಶ್ಟು ಕಂಟೆಂಟ್ ಇದೆ ಎಂದು ಪರೀಕ್ಷಿಸಬೇಕು .
  • ಅದನ್ನು ಸಾರ್ವಜನಿಕರಿಗೆ ತಿಳಿಸಬೇಕು.
  • ಹೀಗೆ ಮಾಡಿದರೆ  ರೈತರು  ಉತ್ತಮ ಗುಣಮಟ್ಟದ ತಯಾರಿಕೆಯನ್ನು  ಮಾತ್ರ ಖರೀದಿ ಮಾಡಲು ಅನುಕೂಲ.
  • ದುರದೃಷ್ಟವೆಂದರೆ ಈಗ ರೈತರು  ಮಾರಾಟಗಾರರು ಶಿಫಾರಸು ಮಾಡುವ ಉತ್ಪನವನ್ನು ನಿರ್ವಾಹವಿಲ್ಲದೆ ಕೊಳ್ಳುವಂತಾಗಿದೆ.
  • ಇದು ರೈತರು ಕಣ್ಣಂದಾಜಿನಲ್ಲಿ ಉತ್ತಮವೋ ಕಳಪೆಯೋ ಎಂದು ಅಂದಾಜು ಮಾಡುವ ಉತ್ಪನ್ನ ಆಗಿರುವುದಿಲ್ಲ.
  • ಬಹಳಷ್ಟು ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಇದನ್ನು ಪರೀಕ್ಷಿಸಿ ಕೊಡುವ ವ್ಯವಸ್ಥೆಗಳೂ ಇಲ್ಲ.

Bordo mixture sprayed arecanut x

ಇದು ಗೊತ್ತೇ?

  • ಬಹಳಷ್ಟು ಜನ ಮೈಲುತುತ್ತೇ ತಯಾರಕರು ಚೈನಾದೇಶದಿಂದ ಇದನ್ನು ತರಿಸಿ ತಮ್ಮ ಫ್ಯಾಕ್ಟರಿಯಲ್ಲಿ  ತಯರಾದ ಉತ್ಪನ್ನವೆಂದು ಲೇಬಲ್ ಹಾಕಿ ಮಾರಾಟ  ಮಾಡುತ್ತಿದ್ದಾರೆ ಎಂಬ ವದಂತಿಗಳು ಇವೆ.
  • ಇದನ್ನು ಪ್ರತಿಸ್ಪರ್ಧಿ ತಯಾರಕರೇ ಹೇಳುತ್ತಾರೆ.
  • ಈ ವರ್ಷ  ಆಮದು ಕಷ್ಟವಾಗಿದೆ.
  • ಈ ವರ್ಷ ಭಾರೀ ಬೆಲೆ ಏರಿಕೆ ಆಗಿದೆ. ಈಗಾಗಲೇ ಕಿಲೋ 275 ರೂ. ಎಂದು ಹೇಳುತ್ತಿದ್ದಾರೆ. ಬಹಳಷ್ಟು ಜನ 180-190 ದರದಲ್ಲಿ ಖರೀದಿ ಮಾಡಿ ಸ್ಟಾಕು ಮಾಡಿಟ್ಟುಕೊಂಡಿದ್ದಾರೆ.

ಈಗಾಗಲೇ  ಕೆಲವು ತಯಾರಕರು ಮೈಲುತುತ್ತೆ ಸರಬರಾಜುದಾರರು ಮಾರಾಟಗಾರರಿಗೆ ರೂ.180-190  ಬೆಲೆಗೆ ಮಾರಾಟಮಾಡಿದ್ದಾರೆ. ಇವೆಲ್ಲವೂ ಈಗ 250-260 ದರದಲ್ಲಿ ಮಾರಲ್ಪಡುತ್ತಿದೆ.

ಪರೀಕ್ಷಿ ಮಾಡಿಸಿಯೇ ಕೊಳ್ಳಿ:

  • ಒಂದು ಎಕ್ರೆ ಅಡಿಕೆ, ಕರಿಮೆಣಸು, ಕಾಫಿ ಬೆಳೆ ಇದ್ದವರು ವರ್ಷಕ್ಕೆ 25  ಕಿಲೋ ಗೂ ಹೆಚ್ಚು  ಮೈಲುತುತ್ತೆ ಖರೀದಿಸುತ್ತಾರೆ.
  • ಇದಕ್ಕೆ ಕನಿಷ್ಟ 5000- 6000 ತನಕ  ಹಣ ಬೇಕಾಗುತ್ತದೆ.
  • ಹೀಗಿರುವಾಗ ನಾವೆಲ್ಲಾ ಒಟ್ಟಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೇರೆ ಬೇರೆ ಬ್ರಾಂಡುಗಳಲ್ಲಿ ಎಷ್ಟು ತಾಮ್ರ , ಎಷ್ಟು ಗಂಧಕ,  ಅಥವಾ ತಾಮ್ರದ ಶುದ್ಧತೆ ಎಷ್ಟು  ಎಂಬುದನ್ನು ಪರೀಕ್ಷಿಸಬಹುದಲ್ಲವೇ?

ಇದು ಸಾಧ್ಯ. ನಮ್ಮಲ್ಲಿ ಎಲವು ಖಾಸಗಿ ಲ್ಯಾಬುಗಳು ಇದನ್ನು ಪರೀಕ್ಷಿಸಿ ಕೊಡುತ್ತವೆ. ಒಂದು ಅಂಶದ ಪತ್ತೆಗೆ ಸುಮಾರು 600 ರೂ ನಿರ್ಧರಿಸಿರುತ್ತಾರೆ.  ಬಾಳೆಹೊನ್ನೂರಿನಲ್ಲಿರುವ ಕೇಂದ್ರೀಯ ಕಾಫೀ ಸಂಶೋಧನಾ ಸಂಸ್ಥೆಯಲ್ಲೂ ಪರೀಕ್ಷೆ ಮಾಡಿ ಕೊಡುವ ವ್ಯವಸ್ಥೆ ಇದೆ.
ಅಂಚೆಯ ಮೂಲಕ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ , ಬಾಳೆಹೊನ್ನೂರು ಚಿಕ್ಕಮಗಳೂರು ಜಿಲ್ಲೆ,577117, ಇಲ್ಲಿಗೆ ಕನಿಷ್ಟ 100 ಗ್ರಾಂ ಕಳುಹಿಸಿ. ಪರೀಕ್ಷೆಗೆ 500 ರೂ. (ವ್ಯಕ್ತಿಗಳಿಗೆ) ಪಾವತಿಸಬೇಕಾಗುತ್ತದೆ.ಆನ್ ಲೈನ್ ಪಾವತಿ ಮಾತ್ರ. ( ಬೇಕಾದವರಿಗೆ ಅಕೌಂಟ್ ನಂಬ್ರ ಕೊಡಬಹುದು). ವಾರದ ಒಳಗೆ ಫಲಿತಾಂಶ ಸಿಗುತ್ತದೆ.

ಪರೀಕ್ಷೆಗೆ ಕಳುಹಿಸುವುದು ಹೇಗೆ:

  • ರೈತರು ಸಮಾನ ಮನಸ್ಕರ ಸಂಘಟನೆಯನ್ನು ಮಾಡಿಕೊಂಡು ಮುಂಗಾರು ಪೂರ್ವದಲ್ಲಿ ಮಾರುಕಟ್ಟೆಯಲ್ಲಿರುವ ಮೈಲುತುತ್ತೆಯ ಬ್ರಾಂಡುಗಳನ್ನು ಪರೀಕ್ಷೆಗೆ ಒಳಪಡಿಸಿ ಅದರಲ್ಲಿ ಯಾವುದು ಸರಿಯಾಗಿದೆಯೋ ಅದನ್ನು ಖರೀದಿಸಲು ಅನುಕೂಲ.
  • ಯಾವುದೇ ಬ್ರಾಂಡ್ ಅನ್ನು ಪ್ಯಾಕೆಟ್ ಸಹಿತ ಯಾವ ಲ್ಯಾಬ್ ಗೂ ಕಳುಹಿಸ ಬೇಡಿ.
  • ಮೂರು ನಾಲ್ಕು ಜನರಾದರೂ  ಒಟ್ಟು ಸೇರಿ ದಾಖಲೆಯೊಂದಿಗೆ ಪ್ಯಾಕೆಟ್ ಒಡೆದು ಅದಕ್ಕೆ ನಂಬ್ರ ಹಾಕಿ.
  • ಅದನ್ನು ಕಳುಹಿಸಿಕೊಡಿ.ಕನಿಷ್ಟ ಎರಡು ಮೂರು ಬ್ರಾಂಡ್ ಗಳನ್ನು ಪರೀಕ್ಷೆ  ಮಾಡಿಸಿಕೊಳ್ಳಿ.

ಬೆಂಗಳೂರಿನ ಪೀಣ್ಯ 2 ನೇ ಹಂತದಲ್ಲಿರುವ Essen & Co  BNG 58, 080 28392230 , 28391567  ಇವರು ಮತ್ತು ಬಾಳೆಹೊನ್ನೂರಿನ ಕೇಂದ್ರೀಯ ಕಾಫೀ ಸಂಶೋಧನಾ ಸಂಸ್ಥೆ 08265 243103  ಇಲ್ಲಿ ರೈತರು ಮೈಲುತುತ್ತೆ ಪರೀಕ್ಷೆ ಮಾಡಿಸಬಹುದು

0 Comments

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!