ರಸಗೊಬ್ಬರದ ಬಳಕೆ 50% ಕಡಿಮೆ ಮಾಡಬಹುದಾದ ವಿಧಾನ.

ಕೃಷಿಗೆ ರಸಗೊಬ್ಬರ ಅನಿವಾರ್ಯವಲ್ಲ. ಇದರಿಂದ ಇಳುವರಿ ಹೆಚ್ಚಳವಾಗಲು ಅನುಕೂಲವಾಗುತ್ತದೆ. ಬುದ್ಧಿವಂತಿಕೆ ಮಾಡಿದರೆ 50% ರಸ ಗೊಬ್ಬರವನ್ನು ಉಳಿಸಬಹುದು.

ನಮ್ಮ ಕೃಷಿಕರಿಗೆ ಇದು ಗೊತ್ತಿದೆಯೋ ಇಲ್ಲವೋ ತಿಳಿಯದು. ನಮ್ಮ ದೇಶದಲ್ಲಿ ಸ್ಥಳೀಯ ಕಚ್ಚಾ ವಸ್ತುಗಳನ್ನು ಬಳಸಿ ರಸ ಗೊಬ್ಬರ ತಯಾರಾಗುವುದು ತೀರಾ ಕಡಿಮೆ. ಬೇರೆ ದೇಶಗಳಿಂದ ಕಚ್ಚಾ ಸಾಮಾಗ್ರಿಯನ್ನು ತರಿಸಿ, ಇಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಆದ ಕಾರಣ ಬೆಲೆ ನಮ್ಮ ಕೈಯಲ್ಲಿ ಇರುವುದಿಲ್ಲ. ಯಾವಾಗಲೂ ಇದು ಹೆಚ್ಚಳವಾಗುವುದೇ ಹೊರತು ಕಡಿಮೆಯಾಗಬಹುದು ಎಂಬ ಆಕಾಂಕ್ಷೆ ಕೃಷಿಕರಿಗೆ ಬೇಡ.

 fertiliser bags

  • ರಸಗೊಬ್ಬರ  ಎಂಬ ವಸ್ತುವನ್ನು ಕೃಷಿಗೆ ಪರಿಚಯಿಸಿದ್ದು ಉತ್ತಮ ಕೆಲಸವಾದರೂ ಇದರ ಭವಿಷ್ಯದ ತೊಂದರೆಗಳನ್ನು ಜನತೆಗೆ ತಿಳಿ ಹೇಳದೆ ಮರೆ ಮಾಚಿದ್ದು, ನಮ್ಮ ಕೃಷಿ ತಜ್ಞರು ಮಾಡಿದ ಅತೀ ದೊಡ್ದ ದ್ರೋಹ.
  • ರಸಗೊಬ್ಬರ ಬಳಕೆ ಮಾಡುವುದು ಮತ್ತು ಅದರ ಅತಿಯಾದ ಬಳಕೆ ಬಗ್ಗೆ ಶಿಕ್ಷಣ ನೀಡದೆ, ಇಂದು ಜನ ರಸ ಗೊಬ್ಬರಕ್ಕೆ ಚಟದ ದಾಸರಾಗದಂತೆ ಆಗಿದೆ.
  • ಬೆಲೆ ಹೆಚ್ಚಾದರೂ ಕೃಷಿ ಮಾಡಬೇಕಾದರೆ  ಅದನ್ನು ಬಳಕೆ ಮಾಡಲೇ ಬೇಕು ಎಂಬ ಪರಿಸ್ಥಿತಿ ಉಂಟಾಗಿದೆ.

ರಸಗೊಬ್ಬರದ ಬಳಕೆ ಹೆಚ್ಚಾಗಿದೆ:

  • ಸುಮಾರು 30 ವರ್ಷಗಳಿಂದ ದೇಶದಲ್ಲಿ ರಸಗೊಬ್ಬರದ ವಹಿವಾಟು 5 ಪಟ್ಟು ದೊಡ್ದದಾಗಿದೆ.
  • ಆದರೆ ಉತ್ಪಾದನೆ  ಆ ಮಟ್ಟಿನಲ್ಲಿ ಹೆಚ್ಚಳವಾಗಿಲ್ಲ.
  • ರಸಗೊಬ್ಬರ ತಯಾರಕರನ್ನು ಪ್ರೋತ್ಸಾಹಿಸಲು ರೈತರು  ತ್ಯಾಗಮಾಡುವ ಪರಿಸ್ಥಿತಿ ಉಂಟಾಗಿದೆ.
  • ರಸ ಗೊಬ್ಬರಗಳನ್ನು ಮಣ್ಣಿಗೆ ಪೂರೈಕೆ ಮಾಡುವಾಗ ಮಣ್ಣಿನ ಗುಣ ಬದಲಾಗುತ್ತದೆ.
  • ಮಣ್ಣು ಗಟ್ಟಿಯಾಗುತ್ತದೆ. ಕಾರಣ ಇಷ್ಟೇ ರಸ ಗೊಬ್ಬರದ ಬಳಕೆ ಸುಲಭ ಎಂದು ಅದನ್ನೇ ಹೆಚ್ಚು ಹೆಚ್ಚು ಬಳಕೆ ಮಾಡುತ್ತಾ ಬರುವುದು.
  • ರಸಗೊಬ್ಬರದ ಬಳಕೆ ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಾ ಬರುವ ಬೇಸಾಯ ಕ್ರಮ ಇದೆ.
  • ಅದು ಮಣ್ಣನ್ನು ಸಾವಯವ ಸಂಮೃದ್ಧಿಯತ್ತ ತರುವುದು.
  • ನಮ್ಮ ದೇಶದಲ್ಲಿ ಬಹುತೇಕ ಪ್ರದೇಶಗಳಲ್ಲಿ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ.
  • ಕಾರಣ ಪ್ರತೀ ವರ್ಷ ನಾವು ಅಗತ್ಯವಾಗಿ ಮಣ್ಣಿಗೆ ಸೇರಿಸಬೇಕಾದ ಸಾವಯವ ವಸ್ತುಗಳನ್ನು ಸೇರಿಸುತ್ತಿಲ್ಲ.
  • ಒಂದೆಡೆ ಮಣ್ಣು ಜೀವ ಸತ್ವವನ್ನು ಕಳೆದುಕೊಳ್ಳುತ್ತಿದೆ.
  • ಮತ್ತೊಂದೆಡೆ ರೈತರು ಮಣ್ಣಿಗೆ ಜೀವ ಕೂಡಿಸಲು ಅಗತ್ಯವಾದ  ಸಾವಯವ ವಸ್ತುಗಳನ್ನು ಬಳಕೆ  ಮಾಡುವುದನ್ನು ಕಡಿಮೆ ಮಾಡುತ್ತಿದ್ದಾರೆ.
  • ಇದು ಒಂದಲ್ಲ ಒಂದು ದಿನ “ಏನು ಕೊಟ್ಟರೂ  ನನಗಲ್ಲ” ಎಂಬ ಸ್ಥಿತಿಯನ್ನು ತಂದರೂ ಅಚ್ಚರಿ ಇಲ್ಲ. ಈಗ ಕೆಲವು ಕಡೆ ಹೀಗೇ ಆಗಿದೆ.

ಸಾವಯವಕ್ಕೆ ಬದಲಾದವರ ಒಳಗುಟ್ಟು:

Advertisement 10

  • ಮಣ್ಣಿಗೆ ಸಾಕಷ್ಟು ರಾಸಾಯನಿಕ ಬಳಕೆ ಮಾಡಿ ಮಣ್ಣು ಹಾಳಾಯಿತು.
  • ಬೆಳೆ ಕಡಿಮೆಯಾಗತೊಡಗಿತು ಅದಕ್ಕಾಗಿ ರಸ ಗೊಬ್ಬರಗಳಿಗೆ ವಿದಾಯ ಹೇಳಿ ಸಂಪೂರ್ಣ ಸಾವಯವ ಬೇಸಾಯ ಪ್ರಾರಂಭಿಸಿದೆ.
  • ಈಗ ಫಸಲು ಚೆನ್ನಾಗಿದೆ ಎಂದು ಹೇಳುವವರ ಹೊಲದ ಒಳಗುಟ್ಟು ಇಷ್ಟೇ.
  • ಹಿಂದೆ ರಸಗೊಬ್ಬರ ಮಾತ್ರ ಹಾಕುತ್ತಿದಾಗ ಮಣ್ಣಿನ ರಚನೆ ಹಾಳಾದದ್ದು, ಅದನ್ನು ಬಿಟ್ಟಾಗ ಸರಿಯಾಗಲಾರಂಭಿಸಿದೆ.
  • ಮಣ್ಣಿನ ರಚನೆ ಸುಧಾರಣೆಯಾದ ಕಾರಣ ಅಲ್ಲಿನ ಬೆಳೆಗಳು ಸಾವಯವ ಗೊಬ್ಬರಕ್ಕೆ ಸ್ಪಂದಿಸತೊಡಗಿವೆ.

ರಸ ಗೊಬ್ಬರವನ್ನು ಹೇಗೆ ಕಡಿಮೆ ಮಾಡಬಹುದು:

  • ಒಂದು ಚದರ ಅಡಿ ಮಣ್ಣಿಗೆ ಕನಿಷ್ಟ 1 ಕಿಲೊ ಪ್ರಮಾಣದಲ್ಲಿ ಸಾವಯವ ತ್ಯಾಜ್ಯಗಳನ್ನು ವರ್ಷವೂ ಸೇರ್ಪಡೆಗೊಳಿಸಿದರೆ ಕೆಲವೇ ವರ್ಷಗಳಲ್ಲಿ ಅಷ್ಟು ಜಾಗದ ಮಣ್ಣು ಫಲವತ್ತಾಗುತ್ತಾ ಬರುತ್ತದೆ.
  • ನೆಲದಲ್ಲಿ ಸಾವಯವ ವಸ್ತುಗಳು ಇರುವಾಗ ಅದರ ಮೇಲೆ ಬಿದ್ದ ಬೀಜ ( ಕಳೆ ಅಥಾವಾ  ಬೆಳೆ) ಚೆನ್ನಾಗಿ ಮೊಳಕೆ ಒಡೆಯುತ್ತದೆ. ಸಸ್ಯಗಳು ಬೆಳೆದಷ್ಟೂ ಮಣ್ಣು ಫಲವತ್ತಾಗುತ್ತದೆ.
  • ಅಲ್ಪಾವಧಿ ಕಳೆ ಸಸ್ಯಗಳು ಮಣ್ಣಿನ ಫಲವತ್ತೆಯನ್ನು ಹೆಚ್ಚಿಸಿಕೊಡುತ್ತವೆ.
  • ಸಾವಯವ ಸಂಮೃದ್ಧ ಮಣ್ಣನ್ನು ಸಂತೃಪ್ತ ಮಣ್ಣು ಎಂದು ಕರೆಯುತ್ತಾರೆ.
  • ಇದಕ್ಕೆ ಉಳಿದ ಮಣ್ಣಿಗೆ ಹಾಕುವ ಪೋಷಕಗಳಂತೆ ಪ್ರಮಾಣ ಬೇಕಾಗಿಲ್ಲ.
  • ಖಾಲಿ ಇರುವ ಹೊಲದಲ್ಲಿ ದ್ವಿದಳ ಜಾತಿಯ ಸಸ್ಯಗಳು, ಅರಣ್ಯ ಸಸ್ಯಗಳನ್ನು ಬೆಳೆಸಿ ಸಾಕಷ್ಟು ಸಾವಯವ ತ್ಯಾಜ್ಯಗಳ ಉತ್ಪಾದನೆಯಾಗುವಂತೆ ಮಾಡಿದರೆ ಸ್ವಾವಲಂಭನೆ ಸಾಧ್ಯ.
  • ನೆಲಕ್ಕೆ ಮೇಲು ಹೊದಿಕೆ ಮಾಡುವುದರಿಂದ ಮಣ್ಣಿನ ಮೇಲು ಸ್ಥರದ ರಚನೆ ಉತ್ತಮವಾಗುತ್ತದೆ.
  • ಮಣ್ಣನ್ನು ಸಾವಯವ ಸಂಮೃದ್ಧ, ಅಂದರೆ ಮೆದು ಮಣ್ಣಾಗಿ ಪರಿವರ್ತಿಸಿದರೆ ಅದಕ್ಕೆ ನಾವು ಈಗ ಬಳಕೆ ಮಾಡುವ ರಸ ಗೊಬ್ಬರದಂತಹ ಬಾಹ್ಯ ಮೂಲದ ಪೋಷಕಗಳನ್ನು 50% ಕಡಿಮೆ ಮಾಡಬಹುದು.
  • ಬೆಳೆ ತ್ಯಾಜ್ಯಗಳನ್ನು (ಉದಾ. ಬಾಳೆ ಬೆಳೆದರ ಅದರ ಎಲ್ಲಾ ತ್ಯಾಜ್ಯ, ಭತ್ತ ಬೆಳೆದರೆ ಅದರ ಹುಲ್ಲು ಇತ್ಯಾದಿ ತ್ಯಾಜ್ಯ) ಮಣ್ಣಿಗೆ ಮರುಬಳಕೆ ಮಾಡಬೇಕು.
  • ಹೊಲದಲ್ಲಿ ಮೇಲು ಮಣ್ಣು ಸ್ವಲ್ಪವೂ ಕೊಚ್ಚಣೆಯಾಗದಂತೆ (Soil erosion) ನೋಡಿಕೊಳ್ಳಬೇಕು.

ನಿಮ್ಮ ಹೊಲದಿಂದ ಮಳೆ ಬಂದಾಗ ಹರಿದು ಹೋಗುವ ನೀರು ಮಣ್ಣು ಮಿಶ್ರಿತ ನೀರಾಗಿರದೆ ತಿಳಿ ನೀರಾಗಿ ಹೊರ ಹರಿಯುತ್ತಿದೆ ಎಂದಾದರೆ ನಿಮ್ಮ ಕೃಷಿಭೂಮಿಯ ಮೇಲ್ಮಣ್ಣು ನಷ್ಟವಾಗುತ್ತಿಲ್ಲ ಎಂದರ್ಥ. ಇಂತಹ ಮಣ್ಣಿಗೆ ರಸ ಗೊಬ್ಬರಗಳನ್ನು ಶಿಫಾರಸಿಗಿಂತ 50%  ಕಡಿಮೆ ಮಾಡಬಹುದು

  • ಒಮ್ಮೆ ಸಾವಯವ ವಸ್ತುಗಳನ್ನು ಹಾಕುವುದಲ್ಲ.ಅದು ನಿರಂತರ ಪ್ರಕ್ರಿಯೆಯಾಗಿರಬೇಕು.
  • ರಸ ಗೊಬ್ಬರಗಳನ್ನು ಕೊಡುವವರು ವಿಭಜಿತ ಕಂತುಗಳಲ್ಲಿ ಕೊಡುವುದರಿಂದ 50% ಪ್ರಮಾಣವನ್ನು ಉಳಿಸಬಹುದು.
  • ಸಸ್ಯಗಳು ಪೋಷಕಗಳನ್ನು ಅಪೇಕ್ಷಿಸುವ ಸಮಯದಲ್ಲಿ ಮಾತ್ರ ರಸ ಗೊಬ್ಬರಗಳನ್ನು ಕೊಡುವುದು ಉತ್ತಮ ಅಭ್ಯಾಸ.
  • ಉಳಿದ ಸಮಯದಲ್ಲಿ ಮಣ್ಣಿನಲ್ಲಿರುವ ಸಾವಯವ ಅಂಶಗಳು ಬೆಳೆಯನ್ನು ಸಾಕುವ ಕೆಲಸ ಮಾಡುತ್ತವೆ.
  • ಬೆಳೆಗಳಿಗೆ ಕೊಡುವ ಸಾವಯವ ತ್ಯಾಜ್ಯಗಳಲ್ಲಿ ಎಲ್ಲಾ ಪೋಷಕಗಳೂ ಸಮತೋಲನದಲ್ಲಿ ಇರುವುದಿಲ್ಲ.
  • ಅದನ್ನು ಸರಿಪಡಿಸುವುದಕ್ಕಾಗಿ ಮಾತ್ರ ಹೊರ ಮೂಲದ ಪೋಷಕಗಳನ್ನು ಬಳಕೆ ಮಾಡಬೇಕು.
  • ಉದ್ದಿಮೆಗಳ ಸಾವಯವ ತ್ಯಾಜ್ಯಗಳನ್ನು(ಬೂದಿ) ಬಳಕೆ ಮಾಡುವುದು, ತೀಕ್ಷ್ಣ  ಸಾವಯವ ಗೊಬ್ಬರಗಳಾದ ಎಲುಬಿನ ಹುಡಿ, ರಂಜಕಯುಕ್ತ ಮಣ್ಣು ಇತ್ಯಾದಿಗಳನ್ನು ಕೊಡುವುದು,
  • ಜೀವಾಣು ಸಂಮ್ಮಿಶ್ರಣಗಳನ್ನು ತಂದು ಅದನ್ನು ಜೀವಾಮೃತದಂತಹ ವಿಧಾನದಲ್ಲಿ ನಿರಂತರ ಅಭಿವೃದ್ದಿ  ಮಾಡುತ್ತಾ ಇರುವುದರಿಂದ ರಸ ಗೊಬ್ಬರದ ಮೇಲೆ ಅಧಿಕ ಅವಲಂಭನೆಯನ್ನು ಕಡಿಮೆಮಾಡಬಹುದು.

ಇದು ನಿಮಗೆ ತಿಳಿದಿರಲಿ:

  • ರಸ ಗೊಬ್ಬರಗಳನ್ನು ತಯಾರಿಸಲು ನಾವು ಬೇರೆ ದೇಶಗಳಿಂದ ಕಚ್ಚಾ ಸಾಮಾಗ್ರಿಯನ್ನು ತರಿಸಬೇಕು.
  • ಅದನ್ನು ಉತ್ಪಾದಿಸಲು ಇಲ್ಲಿ  ಕೋಟ್ಯಾಂತರ ರೂ. ಖರ್ಚು ಮಾಡಿ, ಕಾರ್ಖಾನೆಗಳನ್ನು ಸ್ಥಾಪಿಸಬೇಕು. ತಜ್ಞರಿಗೆ ಲಕ್ಷಾಂತರ ಸಂಬಳ ಸಲ್ಲಬೇಕು.
  • ಇದೆಲ್ಲವೂ ನಾವು ಬಳಕೆ ಮಾಡುವ ರಸ ಗೊಬ್ಬರದಿಂದಲೇ ಆಗಬೇಕು.

ರಸಗೊಬ್ಬರದ ಅತಿಯಾದ ಬಳಕೆ ಪ್ರತ್ಯಕ್ಷವಾಗಿಯೂ ದುಬಾರಿ. ಪರೋಕ್ಷವಾಗಿಯೂ ನಮಗೇ ದುಬಾರಿ. ಸಾವಯವ ಮೂಲದ ವಸ್ತುಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನಮ್ಮ ಜೇಬಿಜೆ ಕತ್ತರಿ ಹಾಕದ ವಸ್ತುಗಳು.ಹಾಗೆಂದು ಕೊಂಡು ತರುವ ಸಿದ್ದ  ಸಾವಯವ ಗೊಬ್ಬರಗಳು ರಸಗೊಬ್ಬರಕ್ಕಿಂತ ಎಲ್ಲಾ ದೃಷ್ಟಿಯಲ್ಲೂ ದುಬಾರಿ.

error: Content is protected !!