ಸೀತಾಫಲ ಬೆಳೆ ಜೀವನಕ್ಕೆ ಹೊಸ ತಿರುವು ಕೊಟ್ಟಿತು.

ಸೀತಾಫಲದ ಹಣ್ಣುಗಳು

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸಂಗೊಳಗಿಯ 45 ವಯಸ್ಸಿನ ಸಣ್ಣ ರೈತ ವೆಂಕಟರಾವ ಬಿರಾದಾರ ಒಂದು ಎಕರೆಯಲ್ಲೇ ತರಹೇವಾರಿ ಹಣ್ಣು ತರಕಾರಿ ಬೆಳೆದು ವರ್ಷಕ್ಕೆ ಸುಮಾರು 5 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಹಗಲಿರುಳು ಕಠಿಣ ಪರಿಶ್ರಮದಿಂದ ಅರ್ಧ ಎಕರೆಯಲ್ಲಿ ಬೆಳೆದ ಸೀತಾಫಲ ಹಣ್ಣಿನಿಂದ  ತನ್ನ ಆರ್ಥಿಕ ಸ್ಥಿತಿಗತಿಯೇ  ಬದಲಾಯಿತು. ಇದು ಇತರೆ ಸಣ್ಣ ರೈತರಿಗೆ ಮಾದರಿಯಾಗಿದೆ.

ಕೃಷಿ ಒಂದೇ ಅವಕಾಶವಾಗಿತ್ತು:

  • ವೆಂಕಟರಾವ್ ಬಡತನದ ಕಾರಣ ಎಸ್.ಎಸ್.ಎಲ್.ಸಿ. ನಂತರ ವಿದ್ಯಾಭ್ಯಾಸ ಮುಂದುವರಿಸಲಿಲ್ಲ.
  • ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ, ತೋಟಗಾರಿಕೆ ಹಾಗೂ ಕೃಷಿ ತಂತ್ರಜ್ಞರ ಮಾರ್ಗದರ್ಶ ಪಡೆದರು.
  • ತಮ್ಮ  ಮಧ್ಯಮ ಫಲವತ್ತತೆಯ ತಮ್ಮ ಒಂದು ಎಕರೆ ಜಮೀನನ್ನು ಯಾವ ರೀತಿಯಾಗಿ  ಮಾರ್ಪಡಿಸ ಬಹುದು ಎಂದು ತಿಳಿದುಕೊಂಡರು.
  • ತೋಟಗಾರಿಕಾ ಅಧಿಕಾರಿಯೊಬ್ಬರ ಪ್ರೇರಣೆಯಿಂದ ಸೀತಾಫಲ ಬೆಳೆಯಲು ನಿರ್ಧರಿಸಿದರು.
  • ತೆಲಂಗಾಣಾ ರಾಜ್ಯದ ಸಂಗಾರೆಡ್ಡಿಯಿಂದ 2009ರಲ್ಲಿ ಬಾಲಾನಗರ ತಳಿಯ 125 ಸೀತಾಫಲ ಸಸಿಗಳನ್ನು ತಂದಿದ್ದಾರೆ.
  •  ಅರ್ಧ ಎಕರೆಯಲ್ಲಿ ಸಾಲಿನಿಂದ ಸಾಲಿಗೆ ಹಾಗೂ ಗಿಡದಿಂದ ಗಿಡಕ್ಕೆ 12X 12 ಅಡಿ ಅಂತರದಲ್ಲಿ  ನಾಟಿ ಮಾಡಿ ದ್ದಾರೆ.
  •  ಇದಕ್ಕೆಲ್ಲಾ ಸುಮಾರು 25000 ರೂ. ಖರ್ಚಾಗಿದೆ
  • ತಜ್ಞರ ಮಾಗದರ್ಶನದಂತೆ  ಬೆಳೆದಾಗ ಗಿಡಗಳು ಹುಲುಸಾಗಿ ಬೆಳೆದವು.
  • ಮೂರು ವರ್ಷಕ್ಕೇ ಫಸಲು ನೀಡಲು ಪ್ರಾರಂಭವಾಯಿತು.
  • ಮೊದಲನೇ ಫಸಲಿನ 31.25 ಕ್ವಿಂಟಾಲ್ ಮಾರಾಟದಿಂದ 1.09 ಲಕ್ಷ ರೂ. ಲಾಭ ಪಡೆದರು.
ಶ್ರೀ ವೆಂಕಟ್ ರಾವ್ ಬಿರಾದಾರ್ ತಮ್ಮ ಸೀತಾಫಲ ಫಸಲನ್ನು ತೋರಿಸುವುದು.
ಶ್ರೀ ವೆಂಕಟ್ ರಾವ್ ಬಿರಾದಾರ್ ತಮ್ಮ ಸೀತಾಫಲ ಫಸಲನ್ನು ತೋರಿಸುವುದು.

ಹನಿ ನೀರಾವರಿ ವ್ಯವಸ್ಥೆ:

  • ನೀರಾವರಿಗಾಗಿ ಕೊಳವೆಬಾವಿಯಿದ್ದು, 2012ರಲ್ಲಿ ತೋಟಗಾರಿಕೆ ಇಲಾಖೆಯ ಶೇ.70 ಸಹಾಯಧನದಲ್ಲಿ ಹನಿ ನೀರಾವರಿಯನ್ನು ಅಳವಡಿಸಿಕೊಂಡಿದ್ದಾರೆ.
  • ಸೀತಾಫಲದ  ಪ್ರತಿ ಗಿಡಕ್ಕೆ ವರ್ಷಕ್ಕೊಂದು ಸಲ 20 ಕೆ.ಜಿ.ಯಂತೆ ತಿಪ್ಪೆಗೊಬ್ಬರ ಕೊಡುತ್ತಾರೆ.
  • ಜೂನ್ಆಗಸ್ಟ್‍ನಲ್ಲಿ 3 ಕೆ.ಜಿ.ಯಂತೆ ಎನ್.ಪಿ.ಕೆ. ಗೊಬ್ಬರ ಕೊಡುತ್ತಾರೆ.
  • ಹದಿನೈದು ದಿನಕ್ಕೊಮ್ಮೆ ಒಂದು ಹಸುವಿನ ಸಗಣಿಯಿಂದ ತಯಾರಿಸಿದ ಜೀವಾಮೃತ, ಎಂಟು ದಿನಕ್ಕೊಮ್ಮೆ 10 ಗಿಡಗಳ ಎಲೆಗಳಿಂದ ತಯಾರಿಸಿದ ರಬಡಾ(ಕಷಾಯ) ಹಾಕುತ್ತಾರೆ.
  • ಬೆಳೆಗೆ ಬೇಸಿಗೆಯಲ್ಲಿ 5-6 ದಿನಕ್ಕೊಮ್ಮೆ, ಮಳೆಗಾಲದಲ್ಲಿ 15 ದಿನಕ್ಕೊಮ್ಮೆ ನೀರುಣಿಸುವುದು ಬೇಸಾಯ ಕ್ರಮ.

 ಇಳುವರಿ ಮತ್ತು ಆದಾಯ: 

ಸೀತಾಫಲ ಕಠಾವು ಮಾಡಿ ಮಾರುಕಟ್ಟೆಗೆ ರವಾನೆಗೆ ಸಿದ್ದತೆ.
ಸೀತಾಫಲ ಕಠಾವು ಮಾಡಿ ಮಾರುಕಟ್ಟೆಗೆ ರವಾನೆಗೆ ಸಿದ್ದತೆ.
  • ವರ್ಷಕ್ಕೊಂದು ಸಲ ಆಗಸ್ಟ್ 3ನೇ ವಾರದಿಂದ ಎರಡುವರೆ ತಿಂಗಳವರೆಗೆ ಪ್ರತಿ ಗಿಡದಿಂದ ಸರಾಸರಿ 50 ಕೆ.ಜಿ.ಯಂತೆ ಒಟ್ಟು 62 ಕ್ವಿಂಟಾಲ್ ಸೀತಾಫಲದ ಇಳುವರಿ ಪಡೆಯುತ್ತಾರೆ.
  • ಇದರಿಂದ ಸರಾಸರಿ ಎರಡುವರೆ ಲಕ್ಷ ರೂ. ಗಳಿಸುತ್ತಿದ್ದಾರೆ.
  • ಪ್ರಸಕ್ತ ವರ್ಷದ ಅತೀವೃಷ್ಟಿಯಿಂದ ಕೇವಲ 37 ಕ್ವಿಂಟಾಲ್ ಇಳುವರಿ ಬಂದಿದೆ.
  • ಆದರೂ  ಮಾರಾಟ ಬೆಲೆ ಚೆನ್ನಾಗಿದ್ದುದರಿಂದ  ಪ್ರತಿ ವರ್ಷದಂತೆ 2.50 ಲಕ್ಷ ರೂ. ಆದಾಯ ಪಡೆದಿದ್ದಾರೆ.
  • ಇವರದ್ದು ಗುಣಮಟ್ಟದ ಸೀತಾಫಲ.
  • ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಕೆ.ವಿ.ಕೆ ವಿಜ್ಞಾನಿಗಳ ಪ್ಯಾಕೇಜ್ ತಂತ್ರಜ್ಞಾನದನ್ವಯ ಸೀತಾಫಲ ಮಾಗುವ ಅವಧಿ ಪ್ರಕಾರ ವರ್ಗೀಕರಿಸುವರು.
  • ಒಂದು ಬುಟ್ಟಿಯಲ್ಲಿ 30 ರಂತೆ ಸೀತಾಫಲ ತುಂಬಿ ಪ್ರತಿ ಬುಟ್ಟಿಗೆ 750 ರೂ.ದಂತೆ ಕಲಬುರಗಿಯಲ್ಲೇ ಪೂನಾ, ಹೈದ್ರಾಬಾದ, ಕಲಬುರಗಿ ಮಾರಾಟಗಾರರು ಖರೀದಿಸುತ್ತಾರೆ.
  • ಇದಲ್ಲದೆ ಬಳ್ಳಾರಿ, ಹುಬ್ಬಳ್ಳಿ, ಬೆಂಗಳೂರಿಗೂ ಪಾರ್ಸಲ್ ಮೂಲಕ ಕಳುಹಿಸಿದ್ದಾರೆ.
  • ಮುಂದಿನ ವರ್ಷ ತಮ್ಮದೇ ಅದ ಬ್ರ್ಯಾಂಡ್ ನಲ್ಲಿ ಸೀತಾಫಲ ಮಾರಾಟ ಮಾಡಲು ಯೋಜಿಸಿದ್ದಾರೆ.

ಅಂತರ ಬೆಳೆ ಬೆಳೆದು ಖರ್ಚು ಹೊಂದಿಸಿಕೊಂಡಿದ್ದಾರೆ:

ಆಪಲ್ ಬೇರ್ ಮತ್ತು ಸೀತಾಫಲ ಮಿಶ್ರ ಬೆಳೆ
ಆಪಲ್ ಬೇರ್ ಮತ್ತು ಸೀತಾಫಲ ಮಿಶ್ರ ಬೆಳೆ
  • ಪ್ರಾರಂಭಿಕ ಹಂತದಿಂದಲ್ಲಿ ಹವಾಮಾನ ಮತ್ತು ಮಾರುಕಟ್ಟೆಯಾಧಾರಿತ ಕೊತ್ತಂಬರಿ, ಪುದೀನಾ, ಮೆಂತ್ಯೆ, ಸಬ್ಬಸ್ಸಿಗೆ, ಫುಂಡಿ, ಪಾಲಕ್, ಈರುಳ್ಳಿ ಸೊಪ್ಪುಗಳನ್ನು   ಬೆಳೆದಿದ್ದಾರೆ
  • ಟೊಮ್ಯಾಟೋ, ಸೌತೆ, ಅವರೆ, ಹೂಕೋಸು ತರಕಾರಿಗಳನ್ನೂ  ಅಂತರ ಬೆಳೆಯಾಗಿ ಬೆಳೆದು ವಾರ್ಷಿಕ ಎರಡೂವರೆ ಲಕ್ಷ ರೂ. ಪಡೆಯುತ್ತಿದ್ದಾರೆ.
  • ಬದುಗಳ ಮತ್ತು ಜಮೀನು ಸುತ್ತಲೂ 40 ಕರಿಬೇವನ್ನು, 20 ನುಗ್ಗೆಯನ್ನು, ಉಳಿದರ್ಧ ಎಕರೆಯಲ್ಲಿ 200 ಆ್ಯಪ್ಪಲ್ ಬೆರ್, 7 ಸಪೋಟ, 5 ಮಾವು, 9 ನೇರಳೆ, 3 ನಿಂಬೆ, 2 ದಾಳಿಂಬೆ ಗಿಡಗಳನ್ನು ಬೆಳೆದಿದ್ದಾರೆ.
  • ಮಹಾರಾಷ್ಟ್ರದ ಮೊಹೊಳದಿಂದ 200 ಆ್ಯಪ್ಪಲ್ ಬೆರ್ ಸಸಿಗಳನ್ನು ಖರೀದಿಸಿ 2019ರಲ್ಲಿ ಸಾಲಿನಿಂದ ಸಾಲಿಗೆ ಹಾಗೂ ಗಿಡದಿಂದ ಗಿಡಕ್ಕೆ 11X12 ಅಡಿ ಅಂತರದಲ್ಲಿ 18000 ರೂ. ವೆಚ್ಚದಿಂದ ನಾಟಿ ಮಾಡಿದ್ದಾರೆ.
  • ಇವು ಮುಂದಿನ ವರ್ಷದಿಂದ ಇಳುವರಿ ನೀಡಲಿವೆ
  • ಹಸುಗಳಿಗೆ ಬೇಕಾದ ಮೇವನ್ನೂ 15×80 ಅಡಿ ಜಾಗದಲ್ಲಿ ಬೆಳೆದಿದ್ದಾರೆ.

ಕೃಷಿಯಿಂದ ಸ್ವಾವಲಂಭನೆ ಸಾಧ್ಯ:

  • ಒಕ್ಕಲುತನ ಮಾಡುವುದೆಂದರೇ ಮೂಗು ಮುರಿಯುವಂಥ ಜನರೇ ಹೆಚ್ಚು.
  • ಭೂತಾಯಿಯನ್ನು ನಂಬಿ ಶ್ರದ್ಧಾಭಕ್ತಿಯಿಂದ ಹಗಲಿರುಳು ದುಡಿಯುತ್ತಿದ್ದುದರಿಂದ ಭೂತಾಯಿ ಒಲಿದು ನನ್ನ ಆರ್ಥಿಕಮಟ್ಟ ಗಣನೀಯವಾಗಿ ಸುಧಾರಿಸಿದೆ.
  • ನನ್ನ ಪತ್ನಿ ಮತ್ತು ಇಬ್ಬರು ಗಂಡುಮಕ್ಕಳು ಕೃಷಿಕಾರ್ಯಗಳಲ್ಲಿ ನೆರವಾಗುತ್ತಿರುವುದರಿಂದ ಕೂಲಿಯಾಳು ಖರ್ಚಿಲ್ಲ.
  • ಸೀತಾಫಲ ಮತ್ತಿತರೆ ಹಣ್ಣು ತರಕಾರಿಯಿಂದ ಹಸನಾದ ಸುಂದರ ಬದುಕನ್ನು ರೂಪಿಸಿಕೊಂಡಿದ್ದೇನೆ.
  • ಎಲ್ಲ ರೈತರು ಸರ್ಕಾರದ ಸಹಾಯ ಸೌಲಭ್ಯ, ಕೃಷಿ ವಿಜ್ಞಾನಿಗಳ ಸಲಹೆಯಂತೆ ಮೈಮುರಿದು ದುಡಿದರೆ ಆರ್ಥಿಕತೆಯನ್ನು ಬಲಪಡಿಸಿಕೊಳ್ಳಬಹುದು.
  • ಇದಕ್ಕೂ ಮುನ್ನ ಮಳೆಯಾಧಾರಿತ ಕೃಷಿಯಿಂದ ತೀವ್ರ ಬಡತನ ಕಾಡುತ್ತಿತ್ತು.
  • ಒಂದು ಹೊತ್ತಿನ ಊಟಕ್ಕೂ ಪರದಾಡುವಂಥ ಮತ್ತು ಉಪವಾಸ ಬೀಳುವಂಥ ಪರಿಸ್ಥಿತಿಯಿತ್ತು ಎನ್ನುತ್ತಾರೆ ವೆಂಕಟರಾವ ಬಿರಾದಾರ.
  • ಇವರ ಸಂಪರ್ಕ ಸಂಖ್ಯೆ 9740485727.

ಕೃಷಿ ಮಾಡುವಾಗ ನಮ್ಮಲ್ಲಿ ಯೋಜನೆ ಬೇಕು. ಯಾವ ಭೂಮಿ, ಯಾವ ಹವಾಗುಣ, ಇಲ್ಲಿಗೆ ಹೊಂದುವ ಬೆಳೆ, ಜೊತೆಗೆ ತಜ್ಞರ ಸಲಹೆ ಪಡೆದುಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡರೆ  ಯಶಸ್ಸು ಇದೆ.
ವರದಿ:   ಮತ್ತು  ಚಿತ್ರಗಳು. ಜಿ.ಚಂದ್ರಕಾಂತ,ನಿವೃತ್ತ ಉಪನಿರ್ದೇಶಕರು,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ,ಕಲಬುರಗಿ

Leave a Reply

Your email address will not be published. Required fields are marked *

error: Content is protected !!