ಕೃಷಿಯಲ್ಲಿ ಲಾಭವಿಲ್ಲವೇ? ಇದರಲ್ಲಿ ಖಾತ್ರಿಯ ಲಾಭವಿದೆ.

ಕೃಷಿಯಲ್ಲಿ ಲಾಭವಿಲ್ಲವೇ? ಹಾಗಿದ್ದರೆ ಇದರಲ್ಲಿ ಖಾತ್ರಿಯ ಲಾಭವಿದೆ.

ಕೃಷಿಕರಲ್ಲಿ ಹೊಲ ಇರುತ್ತದೆ.  ಬಹಳ  ಜನ ಹಿರಿಯ ಕೃಷಿಕರಿಗೆ ಕೃಷಿ ಮಾಡಿ ಲಾಭ ಮಾಡಿಕೊಳ್ಳಲು ಅಸಾಧ್ಯ ಎಂಬುದು ಮನವರಿಕೆಯಾಗಿದೆ. ಹೊಟ್ಟೆ ಬಾಯಿ ಕಟ್ಟಿ ಒಂದಷ್ಟು ಮೊತ್ತದ ಹಣವನ್ನು ತಮ್ಮ ವೃದ್ದಾಪ್ಯದ ಜೀವನಕ್ಕೆ ಬೇಕು ಎಂದು ಕೂಡಿಟ್ಟಿದ್ದರೆ ಅದನ್ನು  ಖಾತ್ರಿಯ ಲಾಭ ಇರುವ ಕಡೆ ಹೂಡಿಕೆ ಮಾಡಿ , ಠೇವಣಿ ಇತ್ಯಾದಿಗಳಿಂದ ಪಡೆಯುವ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ಪಡೆಯಲು ಸಾದ್ಯ.

ಮುಂದಿನ ದಿನಗಳಲ್ಲಿ ಏನಾಗಬಹುದು? ಈ ಯೋಚನೆ ಮಾಡಬೇಕಾದರೆ ಹಿಂದೆ ಏನೆಲ್ಲಾ ಆಗಿದೆ ಎಂಬುದನ್ನು ಒಮ್ಮೆ ನೆನಪು ಮಾಡಿಕೊಳ್ಳಬೇಕಾಗುತ್ತದೆ. ಸುಮಾರು 25 ವರ್ಷಕ್ಕೆ ಹಿಂದೆ ಬ್ಯಾಂಕು ಪೋಸ್ಟಾಪೀಸಿನಲ್ಲಿ 1000 ರೂ. ನಿರಖು ಠೇವಣಿ ಇಟ್ಟರೆ 5 ವರ್ಷಕ್ಕೆ ಅದು ದ್ವಿಗುಣವಾಗುತ್ತಿತ್ತು. ಕ್ರಮೇಣ ಅದು 6 ವರ್ಷ ಆಯಿತು. ಈಗ ದ್ವಿಗುಣ ಆಗಲು ಕನಿಷ್ಟ 9-10 ವರ್ಷ ಬೇಕು. ಮುಂದೆ ಅದು ಎಷ್ಟಾಗಬಹುದು? 12-14-15 ಆದರೂ ಅಚ್ಚರಿ ಇಲ್ಲ. ಕೆಲವು ದೇಶಗಳಲ್ಲಿ ಹೂಡಿಕೆಗೆ ಬಡ್ಡಿ ಎಂಬುದೇ ಇಲ್ಲ. ಅದನ್ನು  ಭದ್ರವಾಗಿಡಲು ಹೂಡಿಕೆದಾರರೇ ಶುಲ್ಕ ಪಾವತಿಸುವ ಸ್ಥಿತಿ  ಇದೆ. ಅದು  ನಮ್ಮಲ್ಲೂ ಬಂದರೂ ಅಚ್ಚರಿ ಇಲ್ಲ. ಹೀಗಿರುವಾಗ ಜೀವನ ಬಧ್ರತೆಗಾಗಿ ಹೂಡಿಕೆ ಮಾಡುವವರಿಗೆ  ಕಷ್ಟವೇ. ಇಂತವರಿಗೆ ಅನುಕೂಲಕರ ಹೂಡಿಕೆ ಅವಕಾಶ ಎಂಬುದಿದ್ದರೆ ಅದು ವಿದ್ಯುತ್ ಕ್ಷೇತ್ರ (power sector).

ಭವಿಷ್ಯದಲ್ಲಿ ಯಾವ ಕ್ಷೇತ್ರ ನೆಲಕಚ್ಚಿದರೂ, ವೈದ್ಯಕೀಯ ಕ್ಷೇತ್ರ, ವಿದ್ಯುತ್ ಕ್ಷೇತ್ರಕ್ಕೆ ಧಕ್ಕೆ ಬರಲಾರದು.ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ಅರ್ಹತೆ ಬೇಕಾಗುತ್ತದೆ. ಆದರೆ ವಿದ್ಯುತ್ ಕ್ಷೇತ್ರದಲ್ಲಿ ನಾವು ಹೂಡಿಕೆ ಮಾಡಬೇಕಾದರೆ ಸ್ವಲ್ಪ ಹಣ ಇದ್ದರೆ ಸಾಕು. ಅದು ಲಕ್ಷ ಲೆಕ್ಕದಲ್ಲಿದ್ದರೂ ಆಗುತ್ತದೆ, ಕೋಟಿಯಲ್ಲಿದ್ದರೂ ಆಗುತ್ತದೆ. ಹೂಡಿಕೆಗೆ ಅನುಗುಣವಾಗಿ ಪ್ರತಿಫಲ.

  • ಭಾರತ  ಸರಕಾರವು ನವೀಕರಿಸಬಹುದಾದ ಇಂಧನ ಮಂತ್ರಾಲಯದ ಮೂಲಕ 2019 ರಲ್ಲಿ ಪ್ರಧಾನಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಸಹ ಉತ್ತಾನ್ ಮಹಾಭಿಯಾನ್ Pradhan Mantri Kisan Urja Suraksha evem Utthan Mahabhiyan (PM KUSUM  ಎಂಬ ಯೋಜನೆಯನ್ನು ಜ್ಯಾರಿಗೆ ತಂದಿದೆ.
  • ಇದರಂತೆ ರೈತರು ತಮ್ಮ ಬಳಕೆಗೆ ಬೇಕಾಗುವ ಇಂಧನ ( ವಿದ್ಯುತ್ ಶಕ್ತಿ) ಯನ್ನು ತಾವೇ ಸೌರ ಶಕ್ತಿಯ ಮೂಲಕ ಉತ್ಪಾದಿಸಬಹುದು, ಅದನ್ನು ಮಾರಾಟವೂ ಮಾಡಬಹುದು. 
  • ಅವರವರೇ ಬಳಕೆಮಾಡುವುದಿದ್ದರೆ ಅವರು ವಿದ್ಯುತ್ ಬಳಕೆಗಾಗಿ ವ್ಯಯಿಸುವ  ಖರ್ಚು ಉಳಿತಾಯವಾಗುತ್ತದೆ. 
  • ವಿಷೇಶವಾಗಿ ರೈತರು ಕೃಷಿ ಪಂಪು ಸೆಟ್ ಗಳಿಗೆ ವಿದ್ಯುತ್ ಬಳಕೆ ಮಾಡುತ್ತಾರೆ.
  • ಇದಕ್ಕೆ ಸಹಾಯಧನದ ದರ ಇರಬಹುದು. ಆದರೆ ಅದಕ್ಕೆ ಯುನಿಟ್ ಒಂದರ ದರ ಹಾಲಿ 6 ರೂ. ಗಿಂತ ಮೇಲಟ್ಟು ಇದೆ.
  • ಮನೆ ಬಳಕೆಗೆ ವಿದ್ಯುತ್ ಬಳಸುತ್ತೇವೆ. ಅದಕ್ಕೂ ಯುನಿಟ್ ಒಂದರ ರೂ.6 ರ ಆಸುಪಾಸು ಇದೆ.
  • ಮಾಸಿಕ  ಸರಾಸರಿ 1000 ರೂ, ವಿದ್ಯುತ್ ಬಿಲ್ ಪಾವತಿಸುವ  ರೈತರು  ನಮ್ಮಲ್ಲಿ ಬಹಳಷ್ಟಿದ್ದಾರೆ.
  • ನಾವೇ ವಿದ್ಯುತ್ ಶಕ್ತಿ ಉತ್ಪಾದನೆ ಮಾಡಿದಾಗ ಅದನ್ನು ಉಳಿತಾಯ ಮಾಡಬಹುದು.
  • ನಾವು ಉತ್ಪಾದಿಸಿ ಬಳಸಿ ಉಳಿದ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್ ಗೆ ಮಾರಾಟ ಮಾಡುವುದು ಕೂಡಾ ಸಾಧ್ಯವಿದೆ.
  • ಇದನ್ನು ಸರಕಾರ/ವಿದ್ಯುತ್ ಕಂಪೆನಿಗಳು ಉತ್ತಮ ದರ ಪಾವತಿಸಿ ಖರೀದಿಸುತ್ತವೆ.

ಹಾಲು ಮಾರಾಟ ಮಾಡುವವರು ತಮ್ಮ ಮನೆಗೆ ಬೇಕಾದಷ್ಟು ಉಳಿಸಿಕೊಂಡು ಮಾರಾಟ ಮಾಡಿದಂತೆ ಇದು ನಮ್ಮ ಅವಶ್ಯಕತೆಯನ್ನು ಉಚಿತವಾಗಿ ದೊರೆಯುವಂತೆ ಮಾಡುತ್ತದೆ.

ಕೃಷಿ ಉದ್ದೇಶಕ್ಕೆ ಸೋಲಾರ್ ಅಳವಡಿಕೆ
ಕೃಷಿ ಉದ್ದೇಶಕ್ಕೆ ಸೋಲಾರ್ ಅಳವಡಿಕೆ

ಮುಂದಿನ ಸ್ಥಿತಿ ಹೇಗಾಗಬಹುದು?

  • ಸುಮಾರು 10 ವರ್ಷಕ್ಕೆ ಹಿಂದೆ ವಿದ್ಯುತ್ ದರ ಹೇಗಿತ್ತು? ನಮಗೆಲ್ಲಾ ಗೊತ್ತಿರುವ ವಿಚಾರ.
  • ಈಗ ನಮಗೆ ಬರುವ ಬಿಲ್ ಗಿಂತ 50% ಕಡಿಮೆ ಇತ್ತು. ಮುಂದಿನ 5 ವರ್ಷಗಳಲ್ಲಿ ಏನಾಗಬಹುದು? ಈಗಿನ ದರ ದುಪ್ಪಟ್ಟು ಆಗಬಹುದು.
  • ನಮ್ಮ ವಿದ್ಯುತ್ ಬಳಕೆಯ ಆಶೋತ್ತರಗಳೂ ಸಹ ಬೆಳೆಯಬಹುದು.
  • ವಿದ್ಯುತ್ ಶಕ್ತಿ ಇಲ್ಲದೆ ಮಾನವ ಇನ್ನು ಬದುಕುದು ಅಸಾಧ್ಯದ ಮಾತು.
  • ಇದು ತೀರಾ ಅಗತ್ಯದ್ದಾಗಿದೆ.  ಹೀಗಿರುವಾಗ ಬೇಡಿಕೆ ದರವನ್ನು ಹೆಚ್ಚಿಸಿಯೇ ತೀರುತ್ತದೆ.
  • ಇನ್ನು ವಿದ್ಯುತ್ ಇಲ್ಲದೆ ನಮ್ಮ ಕೃಷಿ ನಡೆಯುವುದೇ ಇಲ್ಲ. ನೀರು ಎತ್ತಲು ಪಂಪು ಬೇಕು. ಪಂಪು ನಡೆಯಲು ವಿದ್ಯುತ್ ಬೇಕು.
  • ಈಗ ಸರಕಾರ ಉಚಿತವಾಗಿ ವಿದ್ಯುತ್ ಕೊಟ್ಟಿರಬಹುದು. ಅದಕ್ಕೆ ಸರಕಾರ ವಿದ್ಯುತ್ ಸರಬರಾಜು ಕಂಪೆನಿಗೆ ಹಣ ಪಾವತಿಸುತ್ತದೆ.
  • ಮುಂದೆ ಇದನ್ನು ಹೀಗೇ ಮುಂದುವರಿಸುತ್ತದೆ ಎನ್ನಲು ಸಾಧ್ಯವಿಲ್ಲ.
  • ಅಂತಹ ಸಂದರ್ಭಗಳಲ್ಲಿ ಕೃಷಿ ಬಳಕೆಯ ವಿದ್ಯುತ್ ಶಕ್ತಿಗೇ ನಾವು 30-40 ಸಾವಿರ ರೂ. ಪಾವತಿಸಬೇಕಾಗುತ್ತದೆ.

ವಿದ್ಯುತ್ ಶಕ್ತಿ ಉತ್ಪಾದನೆ ಹೇಗೆ?

  • ವಿದ್ಯುತ್ ಉತ್ಪಾದನೆಗೆ ನೀರು ಮಾತ್ರವಲ್ಲ. ಸೂರ್ಯನ ಬೆಳಕಿನಿಂದ ಅಗಾಧ ಪ್ರಮಾಣದ ವಿದ್ಯುತ್ ಶಕ್ತಿಯನ್ನು  ಉತ್ಪಾದಿಸಬಹುದು. 
  • ಇಂದು ಈ ತಂತ್ರಜ್ಞಾನ ವಿಶಾಲವಾಗಿ ಬೆಳೆದಿದ್ದು, ಇದು ಸಾಮಾನ್ಯ ಜನರೂ ಅಳವಡಿಸಿಕೊಳ್ಳುವಷ್ಟು ಸರಳವಾಗಿದೆ. 
  • ಶಕ್ತಿ ಉತ್ಪಾದನೆಗೆ ಬೇಕಾಗುವಷ್ಟು ಸೋಲಾರ್ ಪ್ಯಾನೆಲ್ ಗಳನ್ನು ತಮ್ಮ ಮನೆಯ ಚಾವಣಿಯಲ್ಲಿಯೋ,
  • ಬಿಸಿಲು ಬೀಳುವ ಹೊಲದಲ್ಲಿಯೋ ಎಲ್ಲಿ ಅನುಕೂಲ ಇದೆಯೋ ಅಲ್ಲಿ ಅಳವಡಿಸಿಕೊಂಡು ಅದರಲ್ಲಿ ವಿದ್ಯುತ್ ಉತ್ಪಾದಿಸಿ
  • ತಮ್ಮ ಮನೆಗೆ ಬರುವ ವಿದ್ಯುತ್ ಸಂಪರ್ಕ ಮಾರ್ಗಕ್ಕೆ ಸಂಪರ್ಕಿಸಿ ಅದನ್ನು ಮಾರಾಟ ಮಾಡಿ ಅದಕ್ಕೆ ಮಾಸಿಕ ವೇತನದಂತೆ ವರಮಾನ ಗಳಿಸುವ ಹಲವಾರು ಜನ ನಮ್ಮಲ್ಲಿದ್ದಾರೆ.
  • ಪ್ರಸ್ತುತ ಮನೆಯ ಮಾಡಿನ ಮೇಲೆ ಅಂದರೆ ರೂಫ್ ಟಾಪ್ ಪ್ಯಾನೆಲ್ ಗಳಿಂದ ಮಾತ್ರ ಸರಕಾರ ವಿದ್ಯುತ್ ಖರೀದಿ ಮಾಡುತ್ತದೆ.
  • ಹೊಲದಲ್ಲಿ ಅಳವಡಿಸುವ ಪ್ಯಾನೆಲ್ ಗಳಿಂದ ಗಳಿಸಿದ ವಿದ್ಯುತ್ ಶಕ್ತಿಯನ್ನು ಸ್ವಂತ ಉಪಯೋಗಕ್ಕೆ ಮಾತ್ರ ಬಳಸಲು ಅವಕಾಶವಿದೆ.
  • ಮನೆಯ ಮಾಡಿನ ಮೇಲೆ ಅಳವಡಿಸಿದ ಸೋಲಾರ್ ನಿಂದ  ಮನೆಯ ವಿದ್ಯುತ್ ಮೀಟರ್ ಮೂಲಕ ಗ್ರಿಡ್ ಗೆ ವಿದ್ಯುತ್ ಹರಿಸಿ ಆದಾಯ ಗಳಿಸಬಹುದು.
  • ಒಂದು ಸರಳ ಲೆಕ್ಕಾಚಾರದ ಪ್ರಕಾರ ಒಂದು ಸಾವಿರ ಚದರ ಅಡಿ ವಿಸ್ತೀರ್ಣ ಇರುವ ಮನೆಯ ಮೇಲೆ ಸುಮಾರು ಐದು ಕಿಲೋವ್ಯಾಟ್ ತನಕ ಪ್ಯಾನೆಲ್ ಅಳವಡಿಸಬಹುದು.
  • ಐದು ಕಿಲೋವ್ಯಾಟ್ ಪ್ಯಾನೆಲ್ ಗಳಿಂದ ಮಾಸಿಕ ಒಂದು ಸಾವಿರ ಯುನಿಟ್ ತನಕ ವಿದ್ಯುತ್ ಉತ್ಪಾದನೆ ಮಾಡಬಹುದು.
  • ಗೃಹ ಬಳಕೆಗೆ ಬಳಸಿ ಉಳಿಯುವ ವಿದ್ಯುತ್ ಗ್ರಿಡ್ ಗೆ ಮಾರಾಟವಾಗುತ್ತದೆ.
  • ಕೆಲವರು ಬಂಡವಾಳ ಹಾಕಿ ಲಾಭದಾಯಕವಲ್ಲದ ಬೆಳೆಗಳನ್ನು ಹೊಲದಲ್ಲಿ ಬೆಳೆಸುತ್ತಾ ಕೃಷಿ ಲಾಭದಾಯಕ ಅಲ್ಲ ಎಂದು ಕೊರಗುತ್ತಿರುತ್ತಾರೆ.
  • ಅದೇ ಬಂಡವಾಳ ಹೂಡಿಕೆ ಮಾಡಿ ಸೋಲಾರ್ ಪ್ಯಾನೆಲ್ ಅಳವಡಿಸಿ ಸ್ಥಿರವಾದ ಆದಾಯ ಪಡೆಯಬಹುದು.
ಈ ರೀತಿ ನೆಲದಲ್ಲಿ ಅಳವಡಿಸಿದ ವ್ಯವಸ್ಥೆಯಿಂದ ವಿದ್ಯುತ್ ಅನ್ನು ಗ್ರಿಡ್ ಗೆ ಮಾರಲಿಕ್ಕೆ ಈಗ ಅನುಮತಿ ಇಲ್ಲ. ಸ್ವ ಬಳಕೆಗೆ ಮಾಡಿಕೊಳ್ಳಬಹುದು.
ಈ ರೀತಿ ನೆಲದಲ್ಲಿ ಅಳವಡಿಸಿದ ವ್ಯವಸ್ಥೆಯಿಂದ ವಿದ್ಯುತ್ ಅನ್ನು ಗ್ರಿಡ್ ಗೆ ಮಾರಲಿಕ್ಕೆ ಈಗ ಅನುಮತಿ ಇಲ್ಲ. ಸ್ವ ಬಳಕೆಗೆ ಮಾಡಿಕೊಳ್ಳಬಹುದು.

ಹಣಕಾಸು ಹೊಂದಾಣಿಕೆ:

  • ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸ್ವಲ್ಪ ಹೆಚ್ಚು ಮೊತ್ತದ ಹಣ ಬೇಕಾಗುತ್ತದೆ.
  • ಸಣ್ಣ ಪ್ರಮಾಣದಿಂದ ಪ್ರಾರಂಭಿಸಿ 2-3 ಮೆಗಾ ವ್ಯಾಟ್ ತನಕ ಅನುಕೂಲವಿರುವಷ್ಟು ವಿದ್ಯುತ್ ಉತ್ಪಾದನೆ ಮಾಡಬಹುದು.
  • ಇದಕ್ಕೆ ಬ್ಯಾಂಕ್ ಹಣಕಾಸು ನೆರವು ಇರುತ್ತದೆ.
  • ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಸಹಾಯಧನ ಸಹ ಇರುತ್ತದೆ.
  • ನೀವು ಉತ್ಪಾದಿಸುವ ವಿದ್ಯುತ್ ಅನ್ನು ಖರೀದಿಸುವ ಸರಬರಾಜು ಕಂಪೆನಿಯ ಒಪ್ಪಂದ ಇದ್ದರೆ ಸಾಕಾಗುತ್ತದೆ.
  • ನಮ್ಮಲ್ಲಿ 30% ಮೂಲಧನ ಇದ್ದರೆ ಉಳಿದ ಮೊತ್ತವನ್ನು ಬ್ಯಾಂಕು ಕೊಡುತ್ತದೆ.
  • ಇದರ ಮರುಪಾವತಿಗೆ 15 ವರ್ಷಗಳ ಕಾಲಾವಕಾಶವೂ ಇರುತ್ತದೆ.
  • ಭದ್ರತೆಯಾಗಿ ಕೃಷಿ ಭೂಮಿ ಅಡಮಾನ ಅಥವಾ  ಜಾಮೀನನ್ನು ನೀಡಬೇಕಾಗುತ್ತದೆ. 
  • ಈ ಯೋಜನೆಗೆ ವಿಮೆ ಸಹ ಇರುತ್ತದೆ.

ಎಷ್ಟು ಉತ್ಪಾದನೆಗೆ ಎಷ್ಟು ಖರ್ಚು ಬೀಳುತ್ತದೆ:

  • ಅನುಭವಸ್ಥ ಹೂಡಿಕೆದಾರರ ಪ್ರಕಾರ ಅಥವಾ ಈ ವರೆಗೆ ರೂಫ್ ಟಾಪ್ ಸೋಲಾರ್ ಅಳವಡಿಸಿರುವವರ ಅನುಭವದ ಪ್ರಕಾರ ಐದು ಕಿಲೋವ್ಯಾಟ್ ಸೋಲಾರ್ ಅಳವಡಿಸಲು ಸುಮಾರು ಮೂರು ಲಕ್ಷದ ವರೆಗೆ ಖರ್ಚು ಬರುತ್ತದೆ.
  • ಆ ಮೂರು ಲಕ್ಷದ ಬಂಡವಾಳಕ್ಕೆ ಮನೆಯ ವಿದ್ಯುತ್ ಬಿಲ್ ಸಂಪೂರ್ಣ ಉಚಿತವಾಗುವುದಲ್ಲದೇ ಹೆಚ್ಚುವರಿ ವಿದ್ಯುತ್ ಗೆ ಸಿಗುವ ಪಾವತಿ ಸೇರಿದಾಗ ವಾರ್ಷಿಕವಾಗಿ ಸರಾಸರಿ 40 ರಿಂದ ಐವತ್ತು ಸಾವಿರದ ವರೆಗೆ ಆದಾಯ ಗಳಿಸಬಹುದು.
  • ಪ್ರಸ್ತುತ ಮಾಸಿಕ ವಿದ್ಯುತ್ ಬಿಲ್ ಹೆಚ್ಚು ಬರುತ್ತಿದ್ದರೆ ಉಳಿತಾಯವೂ ಹೆಚ್ಚುತ್ತದೆ.
  • ಈ ಆದಾಯವನ್ನು ಅದೇ ಮೂರು ಲಕ್ಷದ ಎಫ್.ಡಿ. ಠೇವಣಿಗಳ ಬಡ್ಡಿಗೆ ಹೋಲಿಸಿದರೆ ಸೋಲಾರ್ ಪ್ಯಾನೆಲ್ ಅಳವಡಿಸುವುದು ಲಾಭದಾಯಕ.
  • ಅದೂ ಅಲ್ಲದೇ ಎಫ್.ಡಿ. ಬಡ್ಡಿ ದರ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದರೆ ವಿದ್ಯುತ್ ಬಿಲ್ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ.
  • ಎಫ್.ಡಿ. ಬಡ್ಡಿ ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತದೆ.
  • ಆದರೆ ಸೋಲಾರ್ ನಿಂದ ಬರುವ ಆದಾಯ ತೆರಿಗೆ ವಿನಾಯಿತಿ ಪಡೆದಿರುತ್ತದೆ.
ಮನೆ ಛಾವಣಿಯ ಮೇಲೆ ಅಳವಡಿಸಿರುವ ಸೋಲಾರ್ ವ್ಯವಸ್ಥೆ.
ಮನೆ ಛಾವಣಿಯ ಮೇಲೆ ಅಳವಡಿಸಿರುವ ಸೋಲಾರ್ ವ್ಯವಸ್ಥೆ.
  •  ಮಳೆಗಾಲದಲ್ಲಿ ಅಧಿಕ ಮಳೆ ಇರುವ ದಿನಗಳಲ್ಲಿ ಉತ್ಪಾದನೆ ಕಡಿಮೆ ಇರುತ್ತದೆ.
  • ಉಳಿದ ಎಲ್ಲಾ ದಿನಗಳಲ್ಲಿ  ಯಾವುದೇ  ಮೂಲವಸ್ತು ಇಲ್ಲದೆ ಉತ್ಪಾದನೆ ಆಗುತ್ತಾ ಇರುತ್ತದೆ.
  • ಇದು ಹಾಳಾಗುವುದು, ಕೆಟ್ಟು ಹೋಗುವುದು ಮುಂತಾದ  ಸಮಸ್ಯೆಗಳು  ಬಹಳ ಕಡಿಮೆ. 
  • ರೂಫ್ ಟಾಪ್ ಸೋಲಾರ್ ಅಳವಡಿಸುವುದರಿಂದ ಹೊಲದಲ್ಲಿ ಬೆಳೆ ಬೆಳೆಯಲು ಯಾವುದೇ ಅಡ್ಡಿ ಇರುವುದಿಲ್ಲ.
  • ನಮ್ಮ ಮುಂದಿನ ಪೀಳಿಗೆ ಮುಂದೆ ಯಾವುದಾದರೂ ಒಂದು ಉದ್ದಿಮೆ ನಡೆಸುವ ಸಾಹಸಕ್ಕೆ ಇಳಿದರೆ ಅದಕ್ಕೆ ಬೇಕಾದ ವಿದ್ಯುತ್ ಅನ್ನು  ಇದೇ ಮೂಲದಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಿ ಉತ್ಪಾದಿಸಿಕೊಳ್ಳಬಹುದು.
  • ಸ್ವಂತ ಉಪಯೋಗಕ್ಕೆ ಬಳಸಲು ಹೊಲದಲ್ಲಿ ಕೂಡಾ ಸೋಲಾರ್ ಪ್ಯಾನೆಲ್ ಅಳವಡಿಸಿ ಕೊಳ್ಳಬಹುದು.
ADVT 5
ADERTISEMENT
  •  ನಮ್ಮ ರಾಜ್ಯದಲ್ಲಿ ಇಂತಹ ಹಲವಾರು ಉದ್ದಿಮೆಗಳು ಅವರವರ ಬಳಕೆಗೆ ಬೇಕಾಗುವಷ್ಟು ವಿದ್ಯುತ್ ಅನ್ನು ಅವರವರೇ ಉತ್ಪಾದಿಸಿಕೊಳ್ಳುತ್ತಾರೆ.
  • ಇದು  ಪವನ ವಿದ್ಯುತ್ ಗಿಂತ ತುಂಬಾ ಸರಳ ಮತ್ತು ಅನುಕೂಲಕರ.
  • ಪರಿಸರ ಸ್ನೇಹಿ.ಕೆಲವು ಲೆಕ್ಕಾಚಾರಗಳ ಪ್ರಕಾರ ಹೆಚ್ಚು ಬಂಡವಾಳ ಹೂಡಿದರೆ ಅದರಿಂದ ಇನ್ನೂ ಹೆಚ್ಚಿನ ಆದಾಯ ಪಡೆಯಬಹುದು.
  • ನಮ್ಮ ದೇಶದಲ್ಲಿ ಇನ್ನೂ ಮನುಷ್ಯ,ಪ್ರಾಣಿಗಳು ತಿನ್ನಲು ತೀರಾ ಅಗತ್ಯವಾದ ಬೆಳೆಗಳಿಗೆ ಲಾಭದಾಯಕ ಬೆಲೆಯೇ ಇಲ್ಲ.
  • ಆದರೂ ರೈತರು  ನಿರ್ವಾಹವಿಲ್ಲದೆ ಇಂತಹ ಬೆಳೆಗಳನ್ನು ಬೆಳೆಸುತ್ತಾರೆ.
  • ಆ ಕಾರಣದಿಂದ ಉಳಿದವರೂ ಆರಾಮವಾಗಿ ಹೊಟ್ಟೆಗೆ ತಿನ್ನುವಂತಾಗಿದೆ.
  • ಆಹಾರ ವಸ್ತುಗಳ ಮೌಲ್ಯ ಸಾಮಾನ್ಯ ಜನರಿಗೂ ಅರ್ಥವಾಗಬೇಕಾದರೆ ಉತ್ಪಾದನೆ ಕಡಿಮೆ ಆಗುವುದೊಂದೇ ಪರಿಹಾರ.
  • ಕೊರತೆ ಬೇಡಿಕೆ ಹೆಚ್ಚಿಸುತ್ತದೆ. ಬೆಲೆಯನ್ನೂ ಹೆಚ್ಚಿಸುತ್ತದೆ.
  • ಅದಕ್ಕಾಗಿ ಹೆಚ್ಚು ಹೆಚ್ಚು ಕೃಷಿ ವಿಸ್ತರಣೆ ಮಾಡುವ ಬದಲು ಬದಲಿ ಹೂಡಿಕೆ ಮಾಡುವುದು ಸೂಕ್ತ ಎನ್ನಿಸುತ್ತದೆ.

ಯಾರು ಅಳವಡಿಸಿಕೊಡುತ್ತಾರೆ:

ನಮ್ಮ ಸಮೀಪದಲ್ಲೇ  ಇದನ್ನು ಅಳವಡಿಸಿಕೊಡುವ ವ್ಯವಸ್ಥೆಗಳು ಈಗ ಬಂದಿದೆ. ಕೆಲವು ಸರಕಾರದ ಮಾನ್ಯತೆ ಪಡೆದವರು, ಇನ್ನು ಕೆಲವರು ಖಾಸಗಿಯವರು ಎಲ್ಲರೂ ಮಾಡುತ್ತಾರೆ. ಸರಕಾರದ ಯೋಜನೆಗೆ ರೇಟ್ ಕಾಂಟ್ರಾಕ್ಟ್ ಆದ ಮಾನ್ಯತೆ ಪಡೆದವರು ಬೇಕಾಗಬಹುದು.

ಮುಂದಿನ ದಿನಗಳಲ್ಲಿ  ಬರೇ ಕೃಷಿಯನ್ನೊಂದೇ ಅವಲಂಭಿಸಿ ಬದುಕುವುದು ಕಷ್ಟವಾಗಬಹುದು. ಸದ್ಯೋ ಭವಿಷ್ಯದಲ್ಲಿ ಕೆಲಸಗಾರರ ಕೊರತೆ ದೇಶವ್ಯಾಪಿಯಾಗಿ ಕಂಡುಬರಲಿದೆ. ಕೆಲಸಗರರ ವೇತನ ಉತ್ತುಂಗಕ್ಕೆ ಏರಲಿದೆ.  ಆ ಕ್ಷೇತ್ರ ಸಂಘಟಿತ ಕ್ಷೇತ್ರವಾಗಲಿದೆ. ಇಂಥಹ ಸಮಯದಲ್ಲಿಯೂ ಅಸಂಘಟಿತ , ಅಸ್ಥಿರ ಆದಾಯದ ಕ್ಷೇತ್ರವಾಗಿ ಉಳಿಯುವುದು ಕೃಷಿ ಕ್ಷೇತ್ರ ಮಾತ್ರ. ಆದ ಕಾರಣ ಕೃಷಿಕರು ಸ್ವಲ್ಪ ಉಳಿತಾಯ ಮಾಡಿ ಬದಲಿ ಮೂಲದ ಆದಾಯ ಕ್ರೋಢೀಕರಣ ಬಗ್ಗೆ ಚಿಂತನೆ ಮಾಡುವುದು ಸೂಕ್ತ.

Leave a Reply

Your email address will not be published. Required fields are marked *

error: Content is protected !!