ಅನಿವಾರ್ಯ ಕಳೆಗಳಿಗೆ ಮಾತ್ರ ಕಳೆನಾಶಕ ಬಳಸಿ.

Only to the requred place spray weedicides

ಕಳೆಗಳು ನಿಜವಾಗಿಯೂ ನಿಮಗೆ ತೊಂದರೆದಾಯಕವೇ? ಬೇರೆ ಯಾವುದೇ ರೀತಿಯಲ್ಲಿ ಇದನ್ನು ನಿಯಂತ್ರಿಸಲಿಕ್ಕೆ ಆಗುವುದಿಲ್ಲವೇ ಹಾಗಿರುವ ಕಳೆಗಳನ್ನು ಆಯ್ಕೆ  ಮಾಡಿ ಅದೇ ಗುರಿಗೆ ಕಳೆ ನಾಶಕ ಬಳಸಿ ನಿಯಂತ್ರಣ ಮಾಡಿ. ಸುಲಭದಲ್ಲಿ ಒಮ್ಮೆ ಸ್ವಚ್ಚವಾಗುತ್ತದೆ ಎಂದು ಎಲ್ಲದಕ್ಕೂ ಹೊಡೆಯಬೇಡಿ.

 Here weedicide is required

  • ಮೊನ್ನೆ ಇದೇ ಪುಟದಲ್ಲಿ ಕಳೆನಾಶಕ ಬಳಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಕೆಲವು ವಿಚಾರಗಳನ್ನು  ಹೇಳಲಾಗಿತ್ತು.
  • ಕೆಲವರು ಇದರ ಬಗ್ಗೆ ಬಹಳ ವಿರೋಧ ವ್ಯಕ್ತಪಡಿಸಿದ್ದಾರೆ.
  • ಇವರು ಲೇಖನವನ್ನು ಪೂರ್ತಿ ಓದಲಿಲ್ಲ ಎಂಬುದು ಸಸ್ಯವಾದರೂ, ಅವರ ಕಳಕಳಿ ಬಗ್ಗೆ ಮೆಚ್ಚುಗೆ ಇದೆ.
  • ಕಳೆ ನಾಶಕ ಎಂಬುದು ಕೃಷಿಕರಿಗೆ ಕಳೆ ನಿಯಂತ್ರಣಕ್ಕೆ ಸಿಕ್ಕ ವರವಂತೂ ಅಲ್ಲವೇ ಅಲ್ಲ.
  • ಇದು ಒಂದು ತಾತ್ಕಾಲಿಕ ಪರಿಹಾರ ಅಷ್ಟೇ.

ಕಳೆನಾಶಕದ ಆವಾಂತರ:

  • ಇಲ್ಲೊಂದು ಹೂವಿನ ಚಿತ್ರವನ್ನು ಹಾಕಲಾಗಿದೆ. ಈ ದಾಸವಾಳ ಹೂವಿನ ಗಿಡಕ್ಕೆ ಕಳೆ
    ನಾಶಕದ ಹನಿ ತಗಲಿದೆ.
  • ಅಲ್ಲೇ ಒಂದು ಹಠಮಾರೀ ಕಳೆ( ಕಾಗದ ಹೂವು, ಅಥವಾ ಬೋಗನ್ವಿಲ್ಲೆ) ಸಸ್ಯ ಇತ್ತು.
  • ಇದರ ಗೆಲ್ಲು ಸವರುವುದಾಗಲೀ , ಅದನ್ನು ತೆಗೆಯುವುದಾಗಲೀ ತುಂಬಾ ಕಷ್ಟವಾಗಿತ್ತು.
  • ಅದನ್ನು ನಾಶ ಮಾಡುವ ಉದ್ದೇಶಕ್ಕಾಗಿ ಸಿಂಪಡಿಸಿದ ಕಳೆ ನಾಶಕ ( ಗ್ಲೈಫೋಸೆಟ್) ಪಕದಲ್ಲೇ ಇರುವ ದಾಸವಾಳ ಸಸ್ಯಕ್ಕೆ  ಬಿದ್ದಿರಬೇಕು.
  • ಕಳೆದ ಒಂದು ವರ್ಷದಿಂದ ಈ ಒಂದೆರಡು ಗೆಲ್ಲಿನಲ್ಲಿ  ಬರುವ ಹೂವುಗಳು ಹೀಗೆ.
  • ಅದರ ಎಲೆಗಳೂ ಈ ಕೆಳಗೆ ತೋರಿಸಿದ ಚಿತ್ರದಂತೆ ಇವೆ.
  • ಗಿಡ ಸಾಯುತ್ತಿಲ್ಲ.  ಆದರೆ ಅದರ ಜೀವ ಕೋಶಗಳು ಮಾತ್ರ ಹಾನಿಗೊಳಗಾಗಿವೆ.
  • ಇದನ್ನು ನೊಡಿದರೆ ಕಳೆ ನಾಶಕವನ್ನು ಬಳಸಬೇಕೇ ಬೇಡವೇ ಎಂಬ ಅನುಮಾನ ಉಂಟಾಗದೆ ಇರದು.
Do not use weedicides in passages, here weeds are essential
ನಡೆದು ಹೋಗುವ ದಾರಿಗೆ ಕಳೆ ನಾಶಕ ಸಿಂಪಡಿಸಬೇಡಿ.ಇಲ್ಲಿ ಕಳೆ ಇದ್ದರೆ ಒಳ್ಳೆಯದು

ಅಡಿಕೆ ತೋಟದಲ್ಲಿ ಕಳೆ ನಾಶಕ ಸಿಂಪಡಿಸಿದಾಗ ಅಲ್ಲಿರುವ ಕರಿಮೆಣಸಿನ ಬಳ್ಳಿಗೆ ಅದರ ಸ್ವಲ್ಪ ಹನಿಗಳು ಬಿದ್ದರೂ ಸಹ ಆ ಬಳ್ಳಿಯ ಏಳಿಗೆ ಆಗುವುದಿಲ್ಲ ಎಂಬುದು ಬಹಳಷ್ಟು ಪ್ರಗತಿಪರ ಕೃಷಿಕರು ಕಂಡುಕೊಂಡ  ಸಂಗತಿ.

ಸೂಕ್ತ ಕಳೆನಾಶಕ ಆಯ್ಕೆ ಮಾಡಿಕೊಳ್ಳಿ:

  • ಕಳೆ ನಾಶಕವನ್ನು ಸಿಂಪಡಿಸುವಾಗ ಎಲ್ಲಾ ಕಳೆಗಳಿಗೂ ಒಂದೇ ಕಳೆ ನಾಶಕವನ್ನು ಬಳಸಬಾರದು.
  • ನಮ್ಮ ಬಹುತೇಕ ರೈತರಿಗೆ ರೌಂಡ ಅಪ್, ಅಥವಾ ಗ್ಲೈಫೋಸೆಟ್ ಅಂಶ ಒಳಗೊಂಡ ಇತರ ಕಳೆನಾಶಕ  ಮತ್ತು ಸ್ಪರ್ಶ ಕಳೆನಾಶಕ ಮಾತ್ರ ಗೊತ್ತು.
  • ಇದಲ್ಲದೆ  ಬೇರೆ ಕಳೆ ನಾಶಕಗಳೂ ಇವೆ.
  • ಇವು ನಿರ್ದಿಷ್ಟ ಕಳೆಗಳನ್ನು ಮಾತ್ರ ಕೊಲ್ಲುತ್ತವೆ.
  • ಡಯುರಾನ್ ಎಂಬ ಕಳೆ ನಾಶಕವನ್ನು ಬಳಸಿದಾಗ ಬರೇ ಹುಲ್ಲು ಮತ್ತು ಮುಳ್ಳಿನ ಸಸ್ಯಗಳು ಸಾಯುತ್ತವೆ. ತೋಟದಲ್ಲಿ ಕರಿಮೆಣಸಿನ ಬಳ್ಳಿಗೆ ಏನೂ ಆಗುವುದಿಲ್ಲ
  • ಉಳಿದಂತೆ ಬೇರೆ ಗಿಡಗಳಿಗೆ ಹಾನಿಯಾಗುವುದಿಲ್ಲ.
  • ಅಟ್ರಾಜಿನ್ ಎಂಬ ಕಳೆ ನಾಶಕವು ಕೆಲವು  ನಿರ್ದಿಶ್ಟ ಕಳೆಗಳನ್ನು ಮತ್ತು ಮೊಳಕೆ ಒಡೆಯುವ ಕಳೆ ಬೀಜಗಳನ್ನು  ಮಾತ್ರ ಕೊಲ್ಲುವ ಕಳೆ ನಾಶಕವಾಗಿದೆ.
  • ಇದನ್ನು ಮೆಕ್ಕೇ ಜೋಳ ಭತ್ತ, ಮುಂತಾದ ಬೆಳೆಗಳಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ.

ಯಾವುದೇ ಕಳೆನಾಶಕ ಸುರಕ್ಷಿತವಲ್ಲ:

  • ಎಲ್ಲಾ ಕಳೆನಾಶಕಗಳೂ ಬಹಳ ಜಾಗರೂಕತೆಯಿಂದ ಬಳಸಬೇಕಾದ ಬೆಳೆ ಸಂರಕ್ಷಗಳು.
  • ಇದನ್ನು ಕೀಟ ನಾಶಕಗಳಿಗಿಂತಲೂ ಅಪಾಯಕಾರಿ ಎಂದೇ ಹೇಳಬಹುದು.
  • ಅಗತ್ಯ  ಇದ್ದಲ್ಲಿ  ಮಾತ್ರ ಇದನ್ನು ಸರಿಯಾದ ಪ್ರಮಾಣದಲ್ಲಿ ಸಿಂಪಡಿಸಬೇಕು.
  • ಎಲ್ಲಾ ಕಳೆ ಸಂಪೂರ್ಣವಾಗಿ ಹೋಗಲಿ, ಎಂದು ಶಿಫಾರಸಿಗಿಂತ  ಹೆಚ್ಚು ಬಳಕೆ ಮಾಡುವುದು,
  • ಅವೈಜ್ಞಾನಿಕವಾಗಿ  ಬಳಕೆ ಮಾಡುವುದು ತಪ್ಪು.
  • ಇದರಿಂದ ಮಾನವ ದೇಹಕ್ಕೆ ಹಾನಿ ಇದೆ, ಜೊತೆಗೆ ಸಸ್ಯಗಳ ಜೀವ ಕೊಶಗಳಿಗೂ ಹಾನಿಯಾಗುವ ಸಂಭವ ಇದೆ.

ಎಲ್ಲಿ ಬಳಸಬಹುದು?

  • ಕಳೆನಾಶಕವನ್ನು ಕೆಲವು ಅನಿವಾರ್ಯ ಕಳೆಗಳ ನಿರ್ಮೂಲನೆಗೆ ಮಾತ್ರ ಬಳಕೆ ಮಾಡಿ.
  • ಕೆಲವು ಮುಳ್ಳಿನ ಸಸ್ಯಗಳು,  ಏನೇ ಮಾಡಿದರೂ ಸಾಯದ ಸಸ್ಯಗಳು,  ಹಸು ಎಮ್ಮೆ, ಆಡು , ಕುರಿಗಳು ಸೇವಿಸದ (ಗಾಯ ಉಂಟು ಮಾಡಬಲ್ಲ)ಹುಲ್ಲುಗಳು  ಕೆಲವು ಅಲರ್ಜಿ ಉಂಟು ಮಾಡಬಲ್ಲ ಸಸ್ಯಗಳು ,
  • ಸಾವಿರಾರು ಸಂಖ್ಯೆಯಲ್ಲಿ ಬೀಜ ಬಿದ್ದು ಹುಟ್ಟುವ ಕೆಲವು ಬಳ್ಳಿ ಸಸ್ಯಗಳು,
  • ಬೇರಿನ ತುಂಡು ಉಳಿದರೂ ಅಲ್ಲಲ್ಲಿ ಹುಟ್ಟಿಕೊಳ್ಳುವ  ಮುಳ್ಳಿನ ಸಸ್ಯಗಳು ಇದ್ದರೆ  ಮಾತ್ರ  ಕಳೆ ನಾಶಕ ಬಳಕೆ ಮಾಡಿ ಸಾಯಿಸಿರಿ.
  • ಪ್ರಮಾಣ ಮತ್ತು ಸೂಕ್ತ ಸಮಯದಲ್ಲಿ ಮಾತ್ರ ಸಿಂಪಡಿಸಿ.
  • ನೆಲಕ್ಕೆ ಚೆಲ್ಲುವುದು ಮಾಡಬೇಡಿ.
  • ಕಳೆನಾಶಕ ಬಳಸಿ ಬೆಳೆದ ಬೆಳೆಯಲ್ಲಿ ಇದರ ಶೇಷ ಉಳಿದ ಕೆಲವು ನಿದರ್ಶನಗಳಿವೆ.
  • ಅದರಿಂದಾಗಿ ಕೆಲವು ಆರೋಗ್ಯ ಸಮಸ್ಯೆಗಳೂ ಉಂಟಾದ ವರದಿಗಳೂ ಇವೆ.
  • ಆದ ಕಾರಣ ಸರಿಯಾದ ಮಾರ್ಗದರ್ಶನದಲ್ಲಿ ಅಗತ್ಯ ವಿದ್ದರೆ ಮಾತ್ರ ಬಳಸಿ.
  • ತೀರಾ ಕಡಿಮೆ ಸಾಂದ್ರತೆಯಲ್ಲಿ ಸಿಂಪಡಿಸಿ, ಕಳೆಗಳನ್ನು ಸೊರಗುವಂತೆ ಮಾಡಿದರೂ ಸಾಕಾಗುತ್ತದೆ.

ರೈತರು  ತಾವು ಬಳಸುವ ಯಾವುದೇ ಸಸ್ಯ ಸಂರಕ್ಷಕಗಳನ್ನು ಬಳಸುವ  ಮುನ್ನ ಅದರ ಜೊತೆಗೆ ಉಚಿತವಾಗಿ ದೊರೆಯುವ ಬಳಕೆ ಮಾಡುವ  ವಿಧಾನದ  ಕುರಿತಾದ ಹಸ್ತ ಪ್ರತಿಯನ್ನು ತಪ್ಪದೆ ಓದಿ. ಪ್ರಮಾಣಕ್ಕೆ ಅಳತೆ ಪಾತ್ರೆಯನ್ನು ಬಳಸಲೇ ಬೇಕು. ಮರಾಟಗಾರರ, ಕೆಲಸದವರ  ಮಾತಿಗೆ ಬೆಲೆ ಕೊಡಬೇಡಿ.

ಓದುಗರು ತಮ್ಮ ಸಂದೇಹ ಮತ್ತು ಅನಿಸಿಕೆಗಳನ್ನು ಯಾವುದೇ ಸಂಕೋಚ ಇಲ್ಲದೆ ಕಮೆಂಟ್ ಮಾಡಬಹುದು.  ನಾವು ಯಾವುದೇ ಉತ್ಪನ್ನದ ಏಜೆಂಟರು ಅಲ್ಲ.

Leave a Reply

Your email address will not be published. Required fields are marked *

error: Content is protected !!