ಅಡಿಕೆ ಬೆಳೆಗಾರರೇ- ಮೈಲುತುತ್ತೆ ಪರೀಕ್ಷೆ ಹೀಗೆ ಮಾಡಿ.

ಬೋರ್ಡೋ ದ್ರಾವಣ ತಯಾರಿಕೆಗೆ ಬಳಸುವ ಮೈಲುತುತ್ತೆ ಸರಿ ಇಲ್ಲದ ಕಾರಣ ಅಡಿಕೆ ಕೊಳೆರೋಗ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆಯೇ ಎಂಬ ಸಂಶಯ ಇದೆ. ಅದಕ್ಕೆ ಪುಷ್ಟಿ ಕೊಡುವಂತೆ  ಹಿಂದೆ ಕೆಲವೇ ಕೆಲವು ತಯಾರಿಕೆಗಳು ಇದ್ದರೆ ಈಗ ಹಲವಾರು ತಯಾರಕರು, ಹಲವಾರು ಬ್ರಾಂಡುಗಳು ಬಂದು ರೈತರಿಗೆ ಸಂಪೂರ್ಣವಾಗಿ ದ್ವಂದ್ವ ಉಂಟಾಗಿದೆ. ಈ ದ್ವಂದ್ವ ಬೇಡ. ನೀವೇ ಇದನ್ನು ಪರೀಕ್ಷಿಸಿ ಬಳಸಿ.

  •  ಕಾಪರ್ ಸಲ್ಫೇಟ್ ಸರಬರಾಜುದಾರರ ಬಗ್ಗೆ ಅಂತರ್ ಜಾಲದಲ್ಲಿ ಹುಡುಕಿ.
  • ಹಲವಾರು ಜನ ಇದನ್ನು ಒದಗಿಸುವರು ಸಿಗುತ್ತಾರೆ.ದರ ಸಮರವೂ ಇರುತ್ತದೆ.
  • ಬೆಳೆ ಪೋಷಕ, ಸಂರಕ್ಷಕ ಒಳಸುರಿ ಪೂರೈಕೆ ಮಾಡುವುದರಲ್ಲಿ  ಮುಂದೆ ಇರುವ  ಊರುಗಳಾದ, ನಾಸಿಕ್, ಔರಂಗಾಬಾದ್, ಅಹಮದಾಬಾದ್ ಮುಂತಾದ ಕಡೆಯ ಕೆಲವು ಮಾರಾಟಗಾರರಲ್ಲಿ ಇದು ಕ್ವಿಂಟಾಲಿಗೆ 13,000- 14,000 +18% GST  ಕೂಡಿ ದೊರೆಯುತ್ತದೆ.
  • ನಮ್ಮಲ್ಲಿ ಇದರ ಬೆಲೆ   ರೂ. 200 ರಿಂದ 250  ತನಕ ಇದೆ.

ಕೆಲವು ಜನ ಇದನ್ನು ಉತ್ತಮ ಕಚ್ಚಾ ವಸ್ತುವಿನಿಂದ ತಯಾರಿಸಿ ನೊಡಿ, ಲಾಭ ಸೇರಿ ಈಗಲೂ ಕಿಲೊ 180 ರೂ. ಗೆ ಮಾರಾಟ ಮಾಡುತ್ತಾರೆ.

ಹಲವು ತಯಾರಿಕೆಗಳು:

  • ಕರ್ನಾಟಕದ ಬೆಂಗಳೂರು, ಚಿಕ್ಕಮಗಳೂರು, ಹಾಸನ , ಮಂಗಳೂರು, ಕೇರಳ, ತಮಿಳುನಾಡು, ಮಹಾರಾಷ್ಟ್ರ ಹಾಗೆಯೇ ಗುಜರಾತ್ ನಲ್ಲಿ ಸುಮಾರು 30 ಕ್ಕೂ ಹೆಚ್ಚು ಮೈಲುತುತ್ತೆ ತಯಾರಕರು  ಇದ್ದಾರೆ.
  • ಬೇರೆಯವರಿಂದ ಖರೀದಿಸಿ ತಮ್ಮ ಹೆಸರಿನ ಪ್ಯಾಕೇಟ್ ನಲ್ಲಿ ಮಾರಾಟ ಮಾಡುವವರೂ ತುಂಬಾ ಜನ ಇದ್ದಾರೆ.
  • ಎಲ್ಲರದ್ದೂ ಒಂದೊದು ಸಮಯದಲ್ಲಿ ಒಂದೊಂದು ದರ. ಒಬ್ಬೊಬ್ಬರಿಗೆ ಒಂದೊಂದು ದರ . ತಯಾರಿಕಾ ಬ್ರಾಂಡುಗಳು.
  • ಹಾಗೆಯೇ , ಉಚ್ಚಾರದಲ್ಲಿ  ಎಲ್ಲವೂ ಸಾಮ್ಯತೆ  ಇರುವಂತೆ  ಇದೆ.
  • ಹಿಂದೆ ತಿರುವಾಂಕೂರು ಕೆಮಿಕಲ್ ಮ್ಯಾನುಫ್ಯಾಕ್ಟುರರ್ಸ್ ಎಂಬ ಸಂಸ್ಥೆ  ಮೈಲು ತುತ್ತೆ ತಯಾರಿಸಿ ಮಾರಾಟ ಮಾಡುತ್ತಿತ್ತು.
  • ಅದು ಮುಚ್ಚಿಕೊಂಡು ಸುಮಾರು 15  ವರ್ಷಗಳೇ ಆಗಿರಬಹುದು.
  • ಈ TCM  ಹೆಸರಿಗೆ ಸಮನಾಗಿಯೇ ಹಲವಾರು ಜನ ಈಗ ಮೈಲುತುತ್ತೆ ತಯಾರಿಸುತ್ತಾರೆ.
  • ಇದನ್ನು ನೋಡುವಾಗ ಆ ಬ್ರಾಂಡ್ ಹೆಸರಿನಲ್ಲಿ ಜನರನ್ನು ಮೋಸಗೊಳಿಸುವ ತಂತ್ರವೇನೋ ಎನ್ನಿಸುತ್ತದೆ.

ಕೋಟ್ಯಾಂತರ ರೂ. ವ್ಯವಹಾರ:

  • ಮೈಲುತುತ್ತೆ ಎಂಬುದು ಸಣ್ಣ ವ್ಯವಹಾರ ಅಲ್ಲ.
  • ಒಂದೊಂದು ಊರಿನಲ್ಲಿ  ಟನ್  ಗಟ್ಟಲೆ ಮಾರಾಟವಾಗುತ್ತದೆ.
  • ಒಬ್ಬ ತಯಾರಕರು ಕನಿಷ್ಟ ವರ್ಷಕ್ಕೆ 10 ಲೋಡಿಗೂ ಹೆಚ್ಚು ಮೈಲುತುತ್ತೆ ತಯಾರಿಸಿ ಮಾರಾಟ ಮಾಡುತ್ತಾರೆ.
  • ಬಹುತೇಕ ಎಲ್ಲವೂ ಭಾರತ ಸರಕಾರದ ಗುಣಮಟ್ಟ ಮುದ್ರಿಕೆಯನ್ನು (ISI)  ಹೊಂದಿದವುಗಳೇ ಆಗಿವೆ.
  • ಕಿಲೋ ಮೈಲು ತುತ್ತೆಯ ದರ ಸರಾಸರಿ 200  ರೂ,. ಆದರೆ ಒಂದು ಲೋಡು (16 ಟನ್) ಸುಮಾರು 30 ಲಕ್ಷದ ಸೊತ್ತು.
  • ಪ್ರತೀಯೊಬ್ಬ 10 ಲೋಡು ವ್ಯವಹಾರ ಮಾಡಿದರೆ ಅದು ಸುಮಾರು 3 ಕೋಟಿಯದ್ದು( ಇದು ಕಡಿಮೆ, ಇದಕ್ಕಿಂತ ಹೆಚ್ಚು ವ್ಯವಹಾರ ಇದೆ.
  • ಒಬ್ಬೊಬ್ಬ ಹೋಬಳಿ ಮಟ್ಟದ ಅಂಗಡಿಗೇ 20-30 ಟನ್ ಸರಬರಾಜು ಮಾಡುತ್ತಾರೆ.
  • ಕರಾವಳಿ, ಮಲೆನಾಡಿನ ಒಟ್ಟು 8 ಜಿಲ್ಲೆಗಳಲ್ಲಿ ಇದು ಎಷ್ಟು  ಆಗಬಹುದು ಎಂಬುದನ್ನು ಲೆಕ್ಕಾಚಾರ ಹಾಕಿ.

 ರೈತರ ನೆರವಿಗೆ ಯಾರೂ ಇಲ್ಲ:

  • ನಮ್ಮ ದೇಶದದಲ್ಲಿ ರೈತರಿಗೆ ಎಲ್ಲಾ ರೀತಿಯ ತಾಂತ್ರಿಕ ವೈಜ್ಞಾನಿಕ ಸಲಹೆ , ಸೂಚನೆ, ರಕ್ಷಣೆ ಕೊಡಲು ಸರಕಾರ ಕೃಷಿ, ತೋಟಗಾರಿಕಾ ಇಲಾಖೆಯನ್ನು ಹುಟ್ಟು ಹಾಕಿದೆ.
  • ಇವರು ಆಗಿಂದಾಗ ಕೃಷಿಕರು ಬಳಸುವ ಬೆಳೆ ಪೊಷಕಗಳು, ಬೆಳೆ ಸಂರಕ್ಷಕಗಳನ್ನು ಮಾರುಕಟ್ಟೆಯಲ್ಲಿ ಯಾದೃಚ್ಚಿಕವಾಗಿ ಸಂಗ್ರಹಿಸಿ ಅದನ್ನು  ಪ್ರಾಯೋಗಾಲಯದಲ್ಲಿ  ಪರೀಕ್ಷಿ  ಸಬೇಕು.
  • ಯಾವ ತಯಾರಿಕೆಯಲ್ಲಿ  ಅಗತ್ಯಕ್ಕೆ ಬೇಕಾದಶ್ಟು ಕಂಟೆಂಟ್ ಇದೆ ಎಂದು ಪರೀಕ್ಷಿಸಬೇಕು .
  • ಅದನ್ನು ಸಾರ್ವಜನಿಕರಿಗೆ ತಿಳಿಸಬೇಕು.
  • ಹೀಗೆ ಮಾಡಿದರೆ  ರೈತರು  ಉತ್ತಮ ಗುಣಮಟ್ಟದ ತಯಾರಿಕೆಯನ್ನು  ಮಾತ್ರ ಖರೀದಿ ಮಾಡಲು ಅನುಕೂಲ.
  • ದುರದೃಷ್ಟವೆಂದರೆ ಈಗ ರೈತರು  ಮಾರಾಟಗಾರರು ಶಿಫಾರಸು ಮಾಡುವ ಉತ್ಪನವನ್ನು ನಿರ್ವಾಹವಿಲ್ಲದೆ ಕೊಳ್ಳುವಂತಾಗಿದೆ.
  • ಇದು ರೈತರು ಕಣ್ಣಂದಾಜಿನಲ್ಲಿ ಉತ್ತಮವೋ ಕಳಪೆಯೋ ಎಂದು ಅಂದಾಜು ಮಾಡುವ ಉತ್ಪನ್ನ ಆಗಿರುವುದಿಲ್ಲ.
  • ಬಹಳಷ್ಟು ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರಗಳಲ್ಲಿಇದನ್ನು ಪರೀಕ್ಷಿಸಿ ಕೊಡುವ ವ್ಯವಸ್ಥೆಗಳೂ ಇಲ್ಲ.

ಈ ವರ್ಷದ ಕಥೆ ಗೊತ್ತೇ?

  • ಬಹಳಷ್ಟು ಜನ ಮೈಲುತುತ್ತೇ ತಯಾರಕರು ಚೈನಾದೇಶದಿಂದ ಇದನ್ನು ತರಿಸಿ ತಮ್ಮ ಫ್ಯಾಕ್ಟರಿಯಲ್ಲಿ  ತಯರಾದ ಉತ್ಪನ್ನವೆಂದು ಲೇಬಲ್ ಹಾಕಿ ಮಾರಾಟ  ಮಾಡುತ್ತಿದ್ದಾರೆ ಎಂಬ ಗುಸು ಗುಸು ಸುದ್ದಿಗಳು ಇವೆ.
  • ಇದನ್ನು ಪ್ರತಿಸ್ಪರ್ಧಿ ತಯಾರಕರೇ ಹೇಳುತ್ತಾರೆ.
  • ಈ ವರ್ಷ  ಚೈನಾ ವೈರಸ್ ಹಾಗೂ ಆಮದು ಕಷ್ಟವಾಗಿ  ಇಲ್ಲೇ  ಅದನ್ನು ಒಟ್ಟು ಹಾಕಿದ್ದಾರೆ.
  • ಆದ ಕಾರಣ ಈ ವರ್ಷ ಭಾರೀ ಬೆಲೆ ಏರಿಕೆ ಆಗಿದೆ  ಎಂಬ ಸಂಶಯವೂ ಇದೆ.

ಹಿಂದೆ ಆಮದು ಆಗುತ್ತಿದ್ದಾಗ ಫೆಬ್ರವರಿ- ಮಾರ್ಚ್ ನಲ್ಲಿ ಮಾರಾಟಗಾರರಿಗೆ ಕಿಲೋ ರೂ. 150 ಬೆಲೆಗೆ ಕೆಲವು ತಯಾರಕರು ಮೈಲುತುತ್ತೆ ಸರಬರಾಜು ಮಾಡಿದ್ದಾರೆ. ಅದನ್ನೇ ಇವರು ಈಗ  250  ಬೆಲೆಗೆ ಮಾರುತ್ತಿದ್ದಾರೆ.

ರೈತರೇ ಮಾಡಬೇಕಾಗಿದೆ:

  • ನಾವು ಅಡಿಕೆ ಬೆಳೆಗಾರರು ಒಂದು ಎಕ್ರೆ ಅಡಿಕೆ, ಕರಿಮೆಣಸು, ಕಾಫಿ ಬೆಳೆ ಇದ್ದವರು ವರ್ಷಕ್ಕೆ 25  ಕಿಲೋ ಗೂ ಹೆಚ್ಚು  ಮೈಲುತುತ್ತೆ ಖರೀದಿಸುತ್ತೇವೆ.
  • ಇದಕ್ಕೆ ಕನಿಷ್ಟ 5000- 6000 ತನಕ  ಹಣ ವ್ಯಯಿಸುತ್ತೇವೆ.
  • ಹೀಗಿರುವಾಗ ನಾವೆಲ್ಲಾ ಒಟ್ಟಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೇರೆ ಬೇರೆ ಬ್ರಾಂಡುಗಳಲ್ಲಿ ಎಷ್ಟು ತಾಮ್ರ , ಎಷ್ಟು ಗಂಧಕ, ಎಷ್ಟು ಇತರ ಲೋಹಗಳು ಸೇರಿವೆ ಎಂಬುದನ್ನು ಪರೀಕ್ಷಿಸಬಹುದಲ್ಲವೇ?

ಇದು ಸಾಧ್ಯ. ನಮ್ಮಲ್ಲಿ ಎಲವು ಖಾಸಗಿ ಲ್ಯಾಬುಗಳು ಇದನ್ನು ಪರೀಕ್ಷಿಸಿ ಕೊಡುತ್ತವೆ. ಒಂದು ಅಂಶದ ಪತ್ತೆಗೆ ಸುಮಾರು 600 ರೂ ನಿರ್ಧರಿಸಿರುತ್ತಾರೆ.  ಬಾಳೆಹೊನ್ನೂರಿನಲ್ಲಿರುವ ಕೇಂದ್ರೀಯ ಕಾಫೀ ಸಂಶೋಧನಾ ಸಂಸ್ಥೆಯಲ್ಲೂ ಪರೀಕ್ಷೆ ಮಾಡಿ ಕೊಡುವ ವ್ಯವಸ್ಥೆ ಇದೆ.

  • ರೈತರು ಸಮಾನ ಮನಸ್ಕರ ಸಂಘಟನೆಯನ್ನು ಮಾಡಿಕೊಂಡು ಮುಂಗಾರು ಪೂರ್ವದಲ್ಲಿ ಮಾರುಕಟ್ಟೆಯಲ್ಲಿರುವ ಮೈಲುತುತ್ತೆಯ ಬ್ರಾಂಡುಗಳನ್ನು ಪರೀಕ್ಷೆಗೆ ಒಳಪಡಿಸಿ ಅದರಲ್ಲಿ ಯಾವುದು ಸರಿಯಾಗಿದೆಯೋ ಅದನ್ನು ಖರೀದಿಸಲು ಅನುಕೂಲ.

ಬೆಂಗಳೂರಿನ ಪೀಣ್ಯ 2 ನೇ ಹಂತದಲ್ಲಿರುವ Essen & Co  BNG 58, 080 28392230 , 28391567  ಇವರು ಮತ್ತು ಬಾಳೆಹೊನ್ನೂರಿನ ಕೇಂದ್ರೀಯ ಕಾಫೀ ಸಂಶೋಧನಾ ಸಂಸ್ಥೆ 08265 243103  ಇಲ್ಲಿ ರೈತರು ಮೈಲುತುತ್ತೆ ಪರೀಕ್ಷೆ ಮಾಡಿಸಬಹುದು

Leave a Reply

Your email address will not be published. Required fields are marked *

error: Content is protected !!