ಬದನೆ ಪ್ರಮುಖ ತರಕಾರಿ ಬೆಳೆಯಾಗಿದ್ದು, ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಇದನ್ನು ಬೆಳೆಸುತ್ತಾರೆ. ಹೆಚ್ಚಿನ ಕೃಷಿಕರು ಅಧಿಕ ಬೇಡಿಕೆ –ಬೆಲೆ ಕಾರಣಕ್ಕೆ ನಾಟಿ ತಳಿಯನ್ನೇ ಬೆಳೆಸುತ್ತಿದ್ದು, ಇತ್ತೀಚಿಗಿನ ಬೇಸಾಯ ಕ್ರಮ, ಹವಾಮಾನದಿಂದಾಗಿ ಬೆಳೆಗೆ ಸೊರಗು ರೋಗದ ಬಾಧೆ ಅಧಿಕವಾಗಿದೆ. ಇದರಿಂದ ಕಾಯಿ ಕೊಳೆಯುವಿಕೆ ಹಚ್ಚಾಗುತ್ತದೆ.
- ಹೆಚ್ಚಿನ ಬೆಳೆಗಾರರು ಸಣ್ಣ ಮತ್ತು ಅತೀ ಸಣ್ಣ ಬೆಳೆಗಾರರಾಗಿದ್ದು ಇದು ರೋಗವೋ – ಕೀಟವೂ ಎಂಬುದರ ಜ್ಞಾನ ಹೊಂದಿರುವುದಿಲ್ಲ.
- ಸಮೀಪದ ಗೊಬ್ಬರ– ಕೀಟನಾಶಕ ಮಾರಾಟ ಅಂಗಡಿಯವರ ಸಲಹೆಯ ಮೇರೆಗೆ ಅದಕ್ಕೆ ಉಪಚಾರ ಮಾಡುತ್ತಿರುತ್ತಾರೆ.
ಏನು ಸಮಸ್ಯೆ?
- ಬದನೆಗೆ ಬರುವ ಸೊರಗು ರೋಗಗಳಲ್ಲಿ ಮುಖ್ಯವಾದುದು ಬ್ಯಾಕ್ಟೀರಿಯಾ ಸೊರಗು ರೋಗ. Bacterial Wilt: Pseudomonas solanacearum ಇದರಿಂದ ಎಲೆಗಳು ಒಣಗುತ್ತಾ ಬರಲಾರಂಭಿಸುತ್ತವೆ.
- ಕೊನೆಗೆ ಸಸ್ಯವೇ ಸಾಯುತ್ತದೆ. ಪ್ರಾರಂಭದಲ್ಲಿ ಕೆಳಭಾಗದ ಎಲೆಗಳು ಉದುರುತ್ತವೆ.
- ದಂಟಿನ ಭಾಗ ಸ್ವಲ್ಪ ಒಣಗಿದಂತಾಗುತ್ತದೆ.
- ಇಂಥಃ ಸಸ್ಯದ ಕಾಂಡವನ್ನು ತುಂಡು ಮಾಡಿ ಗಾಜಿನ ಲೋಟದ ನೀರಿನಲ್ಲಿ ಮುಳುಗಿಸಿದಾಗ ಅದರಲ್ಲಿ ನೊರೆ ನೊರೆಯಂತೆ ಇಳಿಯುವುದು ಕಂಡು ಬರುತ್ತದೆ.
- ಗಿಡಗಳು ಏನೇ ಗೊಬ್ಬರ– ನೀರಾವರಿ ಮಾಡಿದರೂ ಸ್ಪಂದಿಸದೇ ಎಲೆ ಒಣಗುತ್ತಾ ಸಸಿ ಸಾಯಲಾಂಭಿಸುತ್ತದೆ.
ಈ ಸಮಸ್ಯೆಗಳಿಂದ ಕೆಲವು ಬದನೆ ಬೆಳೆಗಾರರು ಬದನೆ ಬೆಳೆಯ ಸಹವಾಸವೇ ಬೇಡವೆಂದು ಬಿಟ್ಟುದೂ ಇದೆ. ಹೆಚ್ಚಿನ ಬೆಳೆಗಾರರ ತರ್ಕ, ನಾವು ಹಿಂದಿನಿಂದಲೂ ಬೆಳೆಸುತ್ತಿದ್ದವರು ಮೊದ ಮೊದಲು ಯಾವ ರೋಗವೂ ಇರಲಿಲ್ಲ. ಇತ್ತೀಚೆಗೆ ರೋಗ ಜಾಸ್ತಿಯಾಗಿದೆ ಎಂಬುದು.
ಯಾಕೆ ಹೆಚ್ಚಾಯಿತು:
- ಬದನೆಗೆ ಬರುವ ಬ್ಯಾಕ್ಟೀರಿಯಾ ಸೊರಗು ರೋಗ ಮೊದ ಮೊದಲು ಬರುವುದು ಕಡಿಮೆ.
- ಇದು ಬರುವುದು ಸಸ್ಯ ಮೂಲದಿಂದ ಮತ್ತು ಮಣ್ಣು ಮೂಲದಿಂದ.
- ಹಿಂದೆ ಹೆಚ್ಚಿನ ತರಕಾರಿ ಬೆಳೆಗಾರರು ಬೀಜ ಸಂಗ್ರಹಮಾಡಲು ಸಾಂಪ್ರದಾಯಿಕವಾದರೂ ಸೂಕ್ತ ಕ್ರಮ ಅನುಸರಿಸುತ್ತಿದ್ದರು.
- ಮೊದಲು ಬಿಟ್ಟ ಆರೋಗ್ಯಕರ ಕಾಯಿಯನ್ನು ಬೀಜಕ್ಕಾಗಿ ಇಡುತ್ತಿದ್ದರು. ಈ ಬೀಜವನ್ನು ಸರಿಯಾಗಿ ಒಣಗಿಸಿ ಸಂಗ್ರಹಿಸುತ್ತಿದ್ದರು.
- ಬಿತ್ತನೆ ಮಾಡುವಾಗ ಸುಡು ಮಣ್ಣಿನ ಪಾತಿ ಮಾಡಿ ಅದಕ್ಕೆ ಹುಡಿಯಾದ ಕೊಟ್ಟಿಗೆ ಗೊಬ್ಬರ ಅಥವಾ ಒಣ ಸಗಣಿಯ ಹುಡಿಯನ್ನು ಹಾಕಿ ಅದರಲ್ಲಿ ಬಿತ್ತನೆ ಮಾಡುತ್ತಿದ್ದರು.
- ನಂತರದ ತಲೆಮಾರು ಬೀಜದ ಆಯ್ಕೆಯಲ್ಲಿ ಸ್ವಲ್ಪ ಉದಾಸೀನ ಮಾಡುವುದನ್ನು ಪ್ರಾರಂಭಿಸಿದರು.
- ಸುಡು ಮಣ್ಣು ಮಾಡುವ ಕ್ರಮ ಇಲ್ಲದಾಯಿತು.
- ಬೀಜದ ಆಯ್ಕೆ ಮಾಡುವ ಸಸಿಗೆ ರೋಗ ಸೋಂಕು ಇದ್ದಾಗ ಅದರಿಂದ ಪಡೆದ ಬೀಜಕ್ಕೆ ರೋಗದ ಸೋಂಕು ಇದ್ದೇ ಇರುತ್ತದೆ.
- ಹಿಂದೆ ಬೆಳೆಯುವಾಗ ಈ ರೋಗಗಳು ಇರಲಿಲ್ಲ ಈಗ ಇದೆ ಎಂಬ ರೈತರ ಮಾತಿನಲ್ಲೂ ಅರ್ಥ ಇದೆ. ಹಿಂದೆ ಒಂದೇ ಭೂಮಿಯಲ್ಲಿ ಬದನೆಯನ್ನೇ ಬೆಳೆಸುತ್ತಿರಲಿಲ್ಲ.
- ಒಮ್ಮೆ ಬದನೆ ಅಥವಾ ಇನ್ಯಾವುದೇ ಬೆಳೆ ಬೆಳೆದ ಭೂಮಿಯನ್ನು ಬೆಳೆಯ ತರುವಾಯ ಎಲ್ಲಾ ಬೆಳೆ ಸಸ್ಯ– ಕಸ ಕಡ್ಡಿಗಳನ್ನು ಒಟ್ಟು ಸೇರಿಸಿ ಸುಡು ಮಣ್ಣು ಮಾಡುತ್ತಿದ್ದರು.
- ಸುಡು ಮಣ್ಣು ಮಾಡುವ ಕ್ರಮ ಇಲ್ಲದ ಪ್ರದೇಶಗಳ ಜನ ನೆಲವನ್ನು ಬೇಸಿಗೆಯಲ್ಲಿ ಆಳ ಉಳುಮೆ ಮಾಡಿ ಬಿಸಿಲಿಗೆ ಒಡ್ಡುತ್ತಿದ್ದರು.
- ಇದರಿಂದಾಗಿ ಮಣ್ಣುಮೂಲ ಹಾಗೂ ಸಸ್ಯ ಮೂಲದಲ್ಲಿ ಇದ್ದ ಬ್ಯಾಕ್ಟೀರಿಯಾ– ಶಿಲೀಂದ್ರ ಸ್ಪೋರುಗಳು ನಾಶವಾಗುತ್ತಿದ್ದವು. ಆದ ಕಾರಣ ಬೆಳೆಗೆ ಅದು ಬರುತ್ತಿರಲಿಲ್ಲ.
![ಹೀಗೆ ಹಾಳಾಡುದನ್ನು ಬಿಸಾಡಬಾರದು, ಸುಡಬೇಕು](https://kannada.krushiabhivruddi.com/wp-content/uploads/2020/01/DSC05292-FILEminimizer-e1653935258106.jpg)
ರೈತರು ಏನಾದರೂ ರೋಗ ರುಜಿನ ಬಂದು ಬೆಳೆ ಹಾಳಾಯಿತೆಂದರೆ ಆ ಬದಿಗೇ ಹೋಗುವುದಿಲ್ಲ. ಈ ಕಾರಣಕ್ಕೆ ಬ್ಯಾಕ್ಟೀರಿಯಾ ಆಗಲಿ, ಶಿಲೀಂದ್ರಗಳು ಅಲ್ಲಿಂದ ಹೋಗದೆ ಅಲ್ಲೇ ಉಳಿದು ಬೆಳೆಯಿಂದ ಬೆಳೆಗೆ ವರ್ಗಾವಣೆ ಆಗುತ್ತಿರುತ್ತದೆ.
ಸೂಕ್ತ ನಿರ್ವಹಣೆ:
- ಹೊಲವನ್ನು ಬೆಳೆ ಆದ ತಕ್ಷಣ ಉಳುಮೆ ಮಾಡಿ ಆ ಮಣ್ಣನ್ನು ತಿರುವಿ ಹಾಕಬೇಕು.
- ಒಂದು ತಿಂಗಳ ತನಕವಾದರೂ ಅದು ಒಣಗಬೇಕು.
- ಬೆಳೆದಲ್ಲೇ ಬೆಳೆ ಬೆಳೆಸುವುದು ಅನಿವಾರ್ಯವಾದ ಕಾರಣ ಒಂದು ಬೆಳೆ ಮಾಡಿ ಆ ಜಾಗವನ್ನು ಒಮ್ಮೆ ಉಳುಮೆ ಮಾಡಿ 10 -15 ದಿನ ಬಿಟ್ಟು ಅಲ್ಲಿ ಬೆಳೆ ಪರಿವರ್ತನೆ ಮಾಡಿ ಮುಂದಿನ ಸೀಸನ್ಗೆ ಆ ಸ್ಥಳದಲ್ಲಿ ಬೆಳೆ ಬೆಳೆಸಬೇಕು.
- ಒಂದು ಬೆಳೆ ಬೆಳೆಸಿದ ಮೇಲೆ ಹೊಲವನ್ನೂ ಹಾಗೇ ಬಿಡಬಾರದು.
- ಬೆಳೆ ನಂತರ ಬೆಳೆ ಉಳಿಕೆಗಳನ್ನು ವಿಲೇವಾರಿ ಮಾಡಬೇಕು.
- ಸಸಿಯನ್ನು ನೆಡುವಾಗ ನೆಲಕ್ಕೆ ಹೈಡ್ರೋಜನ ಪೆರಾಕ್ಷೈಡ್ ಉಪಚಾರ ಅಥವಾ ಫಾರ್ಮಾಲಿನ್ ದ್ರಾವಣದ ಮೂಲಕ ಉಪಚಾರ ಮಾಡಬೇಕು.
- ಬೆಳೆಯನ್ನು ಬೆಳೆಸುವ ಕಾಲಮಾನಕ್ಕೆ ಹೊಂದಿ ಸಂಭಾವ್ಯ ರೋಗಕ್ಕೆ ನಿಯಂತ್ರಣ ಕ್ರಮವಾಗಿ ರೋಗ ನಾಶಕವನ್ನು ಸಿಂಪರಣೆ ಮಾಡಬೇಕು.
- ಮಳೆಗಾಲ– ಚಳಿಗಾಲದಲ್ಲಿ ಬೆಳೆ ಬೆಳೆಯುವವರು ಸಸ್ಯಗಳಿಗೆ ಒಮ್ಮೆ ಬೋರ್ಡೋದ್ರಾವಣವನ್ನು ಸಿಂಪಡಿಸಿ ಪ್ರತೀ ಗಿಡದ ಬುಡಕ್ಕೆ 100-200 ಮಿಲಿ ಬೀಳುವಂತೆ ಎರೆದಾಗ ಬ್ಯಾಕ್ಟೀರಿಯಾ, ಶಿಲೀಂದ್ರ ಸೋಂಕು ಕಡಿಮೆಯಾಗುತ್ತದೆ.
- ಉತ್ತಮ ಬೀಜವನ್ನು ಆಯ್ಕೆ ಮಾಡಬೇಕು.
- ರೋಗ ಚಿನ್ಹೆ ಇದ್ದರೆ ಬೇರೆ ಹೊಲದಿಂದ ಬೀಜದ ಆಯ್ಕೆ ಮಾಡುವುದು ಸೂಕ್ತ. ಬೀಜೋಪಚಾರ ಕ್ರಮಗಳನ್ನು ಅನುಸರಿಸಬೇಕು.
- ಟ್ರೈಕೋಡರ್ಮ ವಿರಿಡೆ, ಸುಡೋಮೋನಸ್ ಮೂಲಕ ಬೀಜೋಪಚಾರ ಮಾಡಿ ನಾಟಿ ಮಾಡುವಾಗ ಮಣ್ಣಿಗೆ ಇದನ್ನು ಕೊಟ್ಟಿಗೆ ಗೊಬ್ಬರದ ಜೊತೆಗೆ ಬಳಕೆ ಮಾಡಬೇಕು.
- ರೋಗಗ್ರಸ್ತ ಗಿಡವನ್ನು ತಕ್ಷಣ ತೆಗೆದು ನಾಶಮಾಡಬೇಕು.
ಸಮಸ್ಯೆ ಅಧಿಕ ಇರುವಲ್ಲಿ ನಿರೋಧಕ ಶಕ್ತಿ ಪಡೆದ ಅರ್ಕಾ ಆನಂದ್ ತಳಿ ಬೆಳೆಯಬೇಕು. ಇದನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯವರು ಬಿಡುಗಡೆ ಮಾಡಿದ್ದಾರೆ.