ಮೇಲ್ಮಣ್ಣು ಉಳಿದರೆ ಮಾತ್ರ ಕೃಷಿ ಲಾಭದಾಯಕ .

ಫಲವತ್ತಾದ ಮೇಲ್ಮಣ್ಣು

ಮೇಲುಮಣ್ಣು ಉತ್ತಮವಾಗಿದ್ದರೆ ಮಾತ್ರ ಕೃಷಿ ಕೈ ಹಿಡಿದೀತು. ಒಂದು ವೇಳೆ ಮೇಲು ಮಣ್ಣು ಕೊಚ್ಚಣೆ ಅಧಿಕವಾಗಿದ್ದರೆ ಅಲ್ಲಿ ಕೃಷಿ ಮಾಡುವುದು ಲಾಭದಾಯಕವಲ್ಲ.ಮೇಲು ಮಣ್ಣು ಉಳಿಸಲು ಮತ್ತು ರಚನೆಯಾಗುವ ರೀತಿಯ ಬೇಸಾಯ ಕ್ರಮಗಳನ್ನು ಅನುಸರಿಸುವುದು ಕೃಷಿಕರ ಆದ್ಯ ಕರ್ತವ್ಯ.

      ಮೇಲು ಮಣ್ಣು ಹೇಗಿರುತ್ತದೆ:

  • ಒಂದು ಹಿಡಿ ಮಣ್ಣು ಕೈಯಲ್ಲಿ ಹಿಡಿದರೆ ಅದು ಲಾಡಿನಂತೆ ಉಂಡೆ ಕಟ್ಟಲು ಬರಬೇಕು.
  • ಅಂಟು ಆಂಟಾದ ಕಪ್ಪು ಮಿಶ್ರ ಬಣ್ಣದ, ಅರೆ ಬರೆ ಸಾವಯವ ವಸ್ತುಗಳು ಕೊಳೆಯುತ್ತಿರುವ ಸ್ಥಿತಿಯಲ್ಲಿ ಮೇಲು ಮಣ್ಣು ಇರುತ್ತದೆ.
  • ಇದಕ್ಕೆ  ಒಂದು ತೊಟ್ಟು ನೀರು ಬಿದ್ದರೆ ಅದು ಹರಡಿಕೊಳ್ಳುತ್ತದೆ. ಬೇಗ ಕರಗಿ ಹೋಗಲಾರದು.  ಇಂತಹ ಮಣ್ಣು ಉತ್ತಮ.
  • ಅಂತಹ ಸ್ಥಿತಿಯ ಮಣ್ಣು ರಚನೆಯಾಗುವುದು  ಮೇಲು ಭಾಗದ ನೆಲದಲ್ಲಿ ಮಾತ್ರ.
  • ನಮ್ಮ ಹಸ್ತಕ್ಷೇಪ ಇಲ್ಲದಿದ್ದರೆ  ತನ್ನಷ್ಟಕ್ಕೇ ಆಗುತ್ತದೆ.  ನಮ್ಮ ಹಸ್ತಕ್ಷೇಪ ಹೆಚ್ಚಾದರೆ ಮಣ್ಣು ಬರೇ ಮಣ್ಣಾಗಿರುತ್ತದೆ.
  • ಹಿಂದಿನ ನಮ್ಮ ಹಿರಿಯರು ಬೀಜ ಬಿಸಾಡಿದರೂ ಹುಟ್ಟಬೇಕು ಎಂದು ಹೇಳುತ್ತಿದ್ದರು.
  • ಅದು ಅಂತಹ ಮಣ್ಣು ಇದ್ದರ ಮಾತ್ರ ಸಾಧ್ಯ.
ಮೇಲ್ಮಣ್ಣು ಈ ರೀತಿಯಾಗಿ ಮೃದುವಾಗಿರುತ್ತದೆ
ಮೇಲ್ಮಣ್ಣು ಈ ರೀತಿಯಾಗಿ ಮೃದುವಾಗಿರುತ್ತದೆ

ಮೇಲು ಮಣ್ಣಿನ  ಮಹತ್ವ:

  • ಮಣ್ಣಿನ ಅಡಿಯಲ್ಲಿ ಯಾವ ಜೀವ ರಾಸಾಯನಿಕ ಕ್ರಿಯೆಯೂ ನಡೆಯುವುದಿಲ್ಲ.
  • ಎಲ್ಲವೂ ಭೂಮಿಯ ಅಥವಾ ಮಣ್ಣಿನ ಮೇಲ್ಭಾಗದಲ್ಲಿ ನಡೆಯುವುದು.
  • ಮೇಲ್ಮಣ್ಣಿನಲ್ಲಿ ತೇವಾಂಶ ಹಾಗೂ ಹವೆಗಳು ಮಣ್ಣಿನ ಕಡೆಗೂ ವಾತಾವರಣದ ಕಡೆಗೂ ಚಲಿಸುತ್ತಿರುತ್ತದೆ. 
  • ಇದೇ ಸ್ಥಳದಲ್ಲಿ ಸಸ್ಯ ಬೇರುಗಳೂ ದಟ್ಟವಾಗಿ ಬೆಳೆದಿರುತ್ತವೆ.
  • ಆದ್ದರಿಂದ ಇದೇ ಸ್ಥಳದಲ್ಲಿ ಸಾವಯವ ಪದಾರ್ಥಗಳೂ ಸಂಗ್ರಹವಾಗುತ್ತವೆ.
  • ಸಾವಯವ ಪದಾರ್ಥ ದೊರೆಯುವುದರಿಂದ ಸೂಕ್ಷ್ಮ ಜೀವಿಗಳಿಗೆ  ಹಾಗೂ ಉನ್ನತ ಸಸ್ಯಗಳಿಗೆ ಒಳ್ಳೆಯ ಪರಿಸರ ಉಂಟಾಗುತ್ತದೆ.
  • ಈ ಕಾರಣದಿಂದಾಗಿ ಎಲ್ಲಾ ಬೆಳೆಗಳ ಆರೋಗ್ಯದ  ದೃಷ್ಟಿಯಿಂದ ಮೇಲ್ಮಣ್ಣು ಅತ್ಯಂತ ಮಹತ್ವವಾದುದು.

ಸವಕಳಿಯೇ ಎಲ್ಲದಕ್ಕೂ ಕಾರಣ:

ಮೇಲ್ಮಣ್ಣಿಗೆ ನೀರು ಹೀರಿಕೊಳ್ಳುವ ಗುಣ ಚೆನ್ನಾಗಿರುತ್ತದೆ.
ಮೇಲ್ಮಣ್ಣಿಗೆ ನೀರು ಹೀರಿಕೊಳ್ಳುವ ಗುಣ ಚೆನ್ನಾಗಿರುತ್ತದೆ.
  • ಮೇಲ್ಮಣ್ಣು ಎಂದರೆ ನೆಲದಲ್ಲಿ ಸುಮಾರು 10 ರಿಂದ 25 ಸೆಂ ಮೀಟರ ಆಳದ ತನಕ  ಅತ್ಯಧಿಕ ಪ್ರಮಾಣದಲ್ಲಿ ಸಾವಯವ ವಸ್ತುಗಳ ಸಂಗ್ರಹವಿರುವ ಮಣ್ಣು.
  • ಎಲ್ಲಿ ಸಾವಯವ ವಸ್ತುಗಳಿರುತ್ತವೆಯೋ ಅಲ್ಲಿ ಸೂಕ್ಷಾಣು ಜೀವಿಗಳೂ ಇರುತ್ತವೆ.
  • ಇದೆಲ್ಲವೂ ಪ್ರಕೃತಿ ಮಣ್ಣನ್ನು ಜೀವಂತವಾಗಿ ಉಳಿಸಲು ಮಾಡಿಕೊಂಡ ವ್ಯವಸ್ಥೆ.
  •  ಮಾನವ ತನ್ನ ಕೆಲವು ಚಟುವಟಿಕೆಗಳಿಂದ ಇದನ್ನು ಸಂರಕ್ಷಿಸುವ ಕೆಲಸ ಮಾಡುತ್ತಿಲ್ಲ. 
  • ಇದರಿಂದಾಗಿ ಮಣ್ಣಿನ ಜೀವ ಚೈತನ್ಯ ಕಡಿಮೆಯಾಗುತ್ತಿದೆ.

ಸವಕಳಿಯೇ ಎಲ್ಲದಕ್ಕೂ ಕಾರಣ:

  • ಮಣ್ಣಿನ ಎಲ್ಲಾ ನಮೂನೆಯ ಜೈವಿಕ ರಚನೆ ಹಾಳಾಗುವುದು ಮಣ್ಣು ಕೊಚ್ಚಣೆಯ ಕಾರಣದಿಂದ. 
  • 2  ಸೆಂ ಮೀ. ದಪ್ಪದ ಮೇಲು ಮಣ್ಣು ಆಗಬೇಕಿದ್ದರೆ ಹಲವಾರು ವರ್ಷಗಳು ಬೇಕು.
  • ಅದು ಕರಗಿ ಹೋಗಲು ಒಂದು ಮಳೆ ಸಾಕು. ಮಣ್ಣು ಕೊಚ್ಚಣೆಗೆ ಮೂಲ ಕಾರಣ ನಮ್ಮ ಬೇಸಾಯ  ಕ್ರಮಗಳು ಮತ್ತು ಮಣ್ಣನ್ನು ನಾವು ಬಳಕೆ ಮಾಡಿಕೊಳ್ಳುವ ವಿಧಾನಗಳು. 
  • ಮೇಲು ಮಣ್ಣು ಯಾವುದೇ ರೀತಿಯಲ್ಲಿ ಕೊಚ್ಚಣೆಯಾಗದೇ ಇದ್ದರೆ ನಾವು ಮಾಡುವ ಕೃಷಿ ಅದೆಷ್ಟೋ ಸುಲಭವಾಗಬಲ್ಲುದು. 
  •  ಮಣ್ಣು ಸವಕಳಿ ತಡೆದರೆ ಫಲವತ್ತತೆ ಉಳಿಯುತ್ತದೆ.

ಮಣ್ಣು ರಕ್ಷಣೆ ಹೇಗೆ:

ಸಾವಯವ ತ್ಯಾಜ್ಯಗಳು ಸೇರಿ ಮೇಲ್ಮಣ್ನೂ ಅಗುತ್ತದೆ
ಈ ಸಾವಯವ ತ್ಯಾಜ್ಯಗಳು ಸೇರಿ ಮೇಲ್ಮಣ್ನೂ ಅಗುತ್ತದೆ
  • ಮಣ್ಣು ಕೊಚ್ಚಣೆ ಆಗದಂತೆ ಮಾಡಲು ಸಾಧ್ಯವಾದಷ್ಟು ಮೇಲು ಮಣ್ಣಿಗೆ  ಗಾಯಗಳನ್ನು ಮಾಡಬಾರದು.
  • ಮೇಲು ಮಣ್ಣಿನ ಸಣ್ಣ ಗಾಯವೂ ಸಹ ಅದನ್ನು  ಮಳೆ, ಗಾಳಿ ಮುಂತಾದವುಗಳಿಂದ ನಾಶ ಮಾಡುತ್ತದೆ.
  • ಕೃಷಿ ಮಾಡುವಾಗ  ನೆಲವನ್ನು ಮನಬಂದಂತೆ ಅಗೆತ ಮಾಡಬಾರದು.
  • ಹೊಲದ ಮೇಲ್ಮೈಯಲ್ಲಿ ಹುಲ್ಲು ಸಸ್ಯಗಳನ್ನು ನಾಶ ಮಾಡಬಾರದು. ಮರಮಟ್ಟುಗಳನ್ನು ಉಳಿಸಬೇಕು.
  • ನೆಲಕ್ಕೆ  ಅಧಿಕ ಪ್ರಮಾಣದಲ್ಲಿ ಬಿಸಿಲು ಬಿದ್ದು ಒಣಗುವುದೂ ಸಹ ಮಣ್ಣಿನ ಸವಕಳಿಗೆ ಕಾರಣ.
  • ಮಣ್ಣನ್ನು  ತೆರೆದು ಇಡಬೇಡಿ.  ಮೇಲುಮಣ್ಣೂ ಸಮಸ್ಥಿತಿಗೆ ತಲುಪಿದಾಗ ಅದರ ಅಂಟು ಗುಣದಲ್ಲಿ  ಸಣ್ಣ ಸಣ್ಣ ಹೊಡೆತಕ್ಕೆ  ಸಿಕ್ಕಿ ಕೊಂಡರೂ ಮಣ್ಣು ಸವಕಳಿ ಆಗಲಾರದು.

ಭೂ ರಚನೆಗೆ ಅನುಗುಣವಾಗಿ ಕೃಷಿ ಮಾಡಿ. ಏರು ತಗ್ಗುಗಳನ್ನು ಸಮತಟ್ಟು ಮಾಡುವ ವಿಧಾನದಲ್ಲಿ ಮೇಲು ಮಣ್ಣು ಹಾಳಾಗುತ್ತದೆ. ಅದನ್ನು ಕಡಿಮೆ ಮಾಡಬೇಕು. ಯಾವುದೇ ಕೃಷಿ ಮಾಡುವಾಗಲೂ ನೀರು ಸರಾಗವಾಗಿ  ಹೋಗುವಂತೆ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಡಿ. ನೀರು ಯಾವಾಗಲೂ  ನಿಂತು ಚಲಿಸುವಂತಿರಲಿ.

  • ಮಣ್ಣಿನಲ್ಲಿ ಸಾವಯವ ಅಂಶವನ್ನು  (Organic matter) ಹೆಚ್ಚು ಮಾಡಬೇಕು.
  • ಸುಲಭವಾಗಿ ವಿಘಟನೆಯಾಗುವ ವಸ್ತುಗಳನ್ನು ಮಣ್ಣಿಗೆ  ಸೇರಿಸಬೇಕು.
  • ನಾವು ಗೊಬ್ಬರ ರೂಪದಲ್ಲಿ ಸಾವಯವ ವಸ್ತುಗಳನ್ನೆಲ್ಲಾ ಮೇಲು ಭಾಗಕ್ಕೆಹಾಕುತ್ತೇವೆ.
  • ಅದು ಉಳಿದರೂ ಸಾಕಾಗುತ್ತದೆ. ಆದರೆ ಅವು ಕೊಚ್ಚಿ ಹೋಗುತ್ತಿವೆ.

ಯಾವುದೇ ರೀತಿಯಲ್ಲಿ ಮಣ್ಣಿಗೆ ಸೇರಿಸಿದ ಸಾವಯವ ವಸ್ತುಗಳು ಅಲ್ಲಿಂದ  ಹೊರ  ಹೋಗದಂತೆ  ರಕ್ಷಣೆ  ಮಾಡಬೇಕು.  ಮಣ್ಣಿಗೆ ಜೀವಂತ ಮಲ್ಚ್ ಮಾಡಿ ಮಣ್ಣಿನ ಜೀವಂತಿಕೆ  ಉಳಿಸುವುದು ಸುಲಭ.

Leave a Reply

Your email address will not be published. Required fields are marked *

error: Content is protected !!