ಅಡಿಕೆ ಹೂಗೊಂಚಲು ಒಣಗುತ್ತಿದೆಯೇ ? ಯಾವ ಕಾರಣ- ಪರಿಹಾರ.

pest problem

ಅಧಿಕ ಆದಾಯದ ಅಡಿಕೆ ಬೆಳೆಯಲ್ಲಿ ಹೂಗೊಂಚಲು ಒಣಗುವ ಸಮಸ್ಯೆ ಅತೀ ದೊಡ್ಡದು. ಇದಕ್ಕೆ ಪರಿಹಾರ ಸಿಂಗಾರಕ್ಕೆ ಸಿಂಪರಣೆ ಒಂದೇ.ರಾಸಾಯನಿಕ ಸಿಂಪರಣೆ ಇಷ್ಟವಿಲ್ಲದವರು ಮರದಲ್ಲಿ ಒಣಗಿದ ಹೂಗೊಂಚಲು ಶೇಷವನ್ನು ಸಂಪೂರ್ಣವಾಗಿ ತೆಗೆದು ಸ್ವಲ್ಪ ಮಟ್ಟಿಗೆ ನಷ್ಟದಿಂದ ಪಾರಾಗಬಹುದು.

ಕಳೆದ ವರ್ಷ ಅಡಿಕೆ ಬೆಳೆಗಾರರು ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟ ಮಾಡಿಕೊಂಡಿದ್ದಾರೆ. ಕಾರಣ ಉತ್ತಮ ಹೂ ಗೊಂಚಲು ಇತ್ತು. ಆದರೆ ಹೂ ಗೋಂಚಲೆಲ್ಲಾ ಒಣಗಿ ಹಾಳಾಗಿದೆ. ಇದರಿಂದಾಗಿ ಬೆಳೆ ಸುಮಾರು 30% ನಷ್ಟವಾಗಿದೆ. ಈ ವರ್ಷ ಹಾಗಾಗಬಾರದು ಎಂದು ಬೆಳೆಗಾರರು ಯಾವ ಸಿಂಪರಣೆ ಮಾಡಬೇಕು ಎಂದು ಸಿಕ್ಕ ಸಿಕ್ಕವರಲ್ಲಿ ಅಬಿಪ್ರಾಯ ಕೇಳುತ್ತಾರೆ. ಕೊನೆಗೆ ಒಟ್ಟಾರೆ ದ್ವಂದ್ವ  ಉಂಟಾಗಿ ಯಾವುದಾದರೂ ಒಂದನ್ನುಸಿಂಪರಣೆ ಮಾಡುತ್ತಾರೆ. ಸಿಂಗಾರಕ್ಕೆ ಸಿಂಪರಣೆ ಮಾಡುವವರಿಗೆ ಇಲ್ಲಿದೆ ಪೂರ್ಣ ಮಾಹಿತಿ.

Inflorescence die back
ಶಿಲೀಂದ್ರ ಬಾಧೆಯಿಂದ ಸಿಂಗಾರ ಒಣಗುವಿಕೆ.

ಸಿಂಪರಣೆಯ ಅಗತ್ಯ ತಿಳಿಯುವುದು:

  • ಅಡಿಕೆ ಮರದ ಹಾಳೆಯನ್ನು ಸರಿಯಾಗಿ ಗಮನಿಸಿ.
  • ಅದರಲ್ಲಿ ಕಪ್ಪು ಕಲೆಗಳು ಇದೆಯೇ, ಹಾಳೆ ಹರಿದಂತಿದೆಯೇ ಹಾಗಾದರೆ ಅಡಿಕೆ ಹಾಳೆಯ ಮೂಲಕ ಒಂದು ಪತಂಗ (Tirathabamundella
    Walker)ಒಳ ಸೇರಿ ಮೊಟ್ಟೆ ಇಟ್ಟಿದೆ ಎಂದರ್ಥ.
ಇಂತಹ ಹಾಳೆ ಬಿದ್ದಿದ್ದರೆ ಅಲ್ಲಿ ಹೂಗೊಂಚಲು ತಿನ್ನುವ ಹುಳು ಇದೆ ಎಂದು ಅರ್ಥ
ಇಂತಹ ಹಾಳೆ ಬಿದ್ದಿದ್ದರೆ ಅಲ್ಲಿ ಹೂಗೊಂಚಲು ತಿನ್ನುವ ಹುಳು ಇದೆ ಎಂದು ಅರ್ಥ
  • ಅಡಿಕೆ ಮರದ ಹೂ ಗೊಂಚಲಿನ ರಕ್ಷಾ ಕವಚವನ್ನು ಒಮ್ಮೆ ಪರೀಕ್ಷಿಸಿರಿ.
  • ಅದರಲ್ಲಿ ಯಾವುದಾದರೂ ಗಾಯಗಳು ಇವೆಯೇ, ಅಡಿಕೆ ಮರದಲ್ಲಿ ಹೂ ಗೊಂಚಲಿನ ರಕ್ಷಾ ಕವಚ ಒಣಗಿದರೂ ಬಿಟ್ಟುಕೊಳ್ಳುವುದಿಲ್ಲವೇ?
  • ಹಾಗಿದ್ದರೆ ಅಲ್ಲಿ ಪತಂಗ ಒಳಸೇರಿ ಮರಿಯಾಗಿ ಅದು ಹೊಂಬಾಳೆಯನ್ನು ನಾಶಮಾಡುತ್ತಿರುತ್ತದೆ.

pest entry in to inflorescence
ಸಿಂಗಾರ ಬಿಡಿಸಿಕೊಳ್ಳುವಾಗ ಅದರಲ್ಲಿ ಏನಾದರೂ ಬಲೆ ಕಟ್ಟಿದ ತರಹದ ಚಿನ್ಹೆ ಇದೆಯೇ? ಯಾವುದಾದರೂ ಮಿಡಿ, ಸಿಂಗಾರದ ಕಡ್ಡಿಗಳು ಹುಳ ತಿಂದು ಗಾಯ ಮಾಡಿದ್ದು ಇದೆಯೇ? ಹಾಗಿದ್ದರೆ  ಹುಳ ಇದೆ ಎಂದರ್ಥ.

pest entered hole

  • ಅಡಿಕೆ ತೆಗೆಯುವಾಗ ಮರದಲ್ಲಿ ಉದುರಿದ ಅಡಿಕೆಯ ಒಣಗಿದ ಹೂ ಗೊಂಚಲನ್ನು ತೆಗೆಯದೇ ಉಳಿದಿದೆಯೇ?
  • ಸಿಂಗಾರ ಅರಳಿ ಕಾಯಿ ಕಚ್ಚದೆ  ಒಣಗಿ ಕಾಂಡಕ್ಕೆ ಅಂಟಿಕೊಂಡಿದೆಯೇ?
  • ಹಾಗಿದ್ದರೆ ಅದಕ್ಕೆ ಶಿಲೀಂದ್ರ ಬಾಧೆ ( ಕೊಲೆಟ್ರೋಟ್ರಿರಿಕಂ ) ಶಿಲೀಂದ್ರ ಬಾಧಿಸಿರಬಹುದು.
  • ಸಣ್ಣ ಗಿಡಗಳಲ್ಲಿ ಒಣ ಸಿಂಗಾರ ತೆಗೆದು ಬುಡ ಭಾಗದಲ್ಲಿ ಹಾಕಿ ಹಾಗೆ ಉಳಿಸಿದ್ದರೆ ಸಹ ಈ ಶಿಲೀಂದ್ರದ ಬೀಜಾಣು ಮತ್ತೆ ಸಿಂಗಾರಕ್ಕೆ ಪ್ರಸಾರವಾಗಬಹುದು.
  • ಸಿಂಗಾರ ಒಂದು ಒಣಗಿ ಹೋಗಿದ್ದರೆ ಅದನ್ನು ಸೂಕ್ತ ವಿಲೇವಾರಿ ಮಾಡದೆ ಮರದಲ್ಲೇ ಉಳಿಸಿದ್ದರೆ ಅದು ಹೆಚ್ಚಾಗುತ್ತಾ ಹೆಚ್ಚಿನ ಮರಕ್ಕೆ ಬಾಧಿಸಬಹುದು.

ಏನು ಸಿಂಪರಣೆ ಮಾಡಬೇಕು:

the inflorescence eating larvae
ಸಿಂಗಾರ ಹಾಳು ಮಾಡುವ ಹುಳ
  • ಕೀಟ ಬಾಧೆಗೆ ಕೀಟ ನಾಶಕವನ್ನೂ , ರೋಗ ಬಾಧೆಗೆ ರೋಗ ನಾಶಕವನ್ನೂ ಸಿಂಪರಣೆ ಮಾಡಬೇಕು.
  • ಪ್ರಾರಂಭಿಕ ಹಂತದಲ್ಲಿ ಸಿಂಪರಣೆ ಮಾಡಿದರೆ ಬೇಗ ನಿಯಂತ್ರಣಕ್ಕೆ ಬರುತ್ತದೆ.
  • ಮಳೆಗಾಲ ಕಳೆದು ಚಳಿಗಾಲ ಬರುವಾಗ  ಅಡಿಕೆ ಮರದ ಸಿಂಗಾರ  ಒಡೆಯಲು ಪ್ರಾರಂಭವಾದಾಗ ಹೂ ಗೊಂಚಲಿಗೆ ಕೀಟ ಬಾಧೆ ಹೆಚ್ಚು.
  • ಈ ಸಮಯದಲ್ಲಿ ಕೀಟನಾಶಕವನ್ನು ಸಿಂಪರಣೆ ಮಾಡಬೇಕು.
  • ಇದೇ ಸಮಯದಲ್ಲಿ ಸಿಂಗಾರದಲ್ಲಿ ಕಾಯಿ ಕಚ್ಚದೆ ಒಣಗಿದ್ದರೆ ಅದು ಪೂರ್ತಿಯಾಗಿ ಶಿಲೀಂದ್ರ ಬಾಧೆ ಎನ್ನುವಂತಿಲ್ಲ.
  • ಅದು ಸರಿಯಾಗಿ ಪರಾಗಸ್ಪರ್ಶ ಆಗದೆ ಕಾಯಿ ಸೆಟ್ ಆಗದೆ ಒಣಗುವ ಸಾಧ್ಯತೆ ಹೆಚ್ಚು ಇರುತ್ತದೆ.

ಅಡಿಕೆಯಲಿ ಪರಾಗಸ್ಪರ್ಶ ಕ್ರಿಯೆ ಗಾಳಿಯ ಮೂಲಕ ಪರಾಗ ಕಣಗಳು ಪ್ರಸಾರವಾಗಿ ನಡೆಯಬೇಕು. ಬೆಳಗ್ಗಿನ ಹೊತ್ತಿನಲ್ಲಿ ನಾವು ತೋಟದಲ್ಲಿ ಸಂಚರಿಸುವಾಗ ಬರುವ ಸುವಾಸನೆ ಪರಾಗದ್ದೇ ಆಗಿರುತ್ತದೆ. ಪ್ರಾರಂಭಿಕ ಹಂತದಲ್ಲಿ ಪರಾಗ ವರ್ಗಾವಣೆಗೆ ಸಾಕಷ್ಟು ಸಿಂಗಾರಗಳು ಬಿಡಿಸಿಕೊಂಡಿರುವುದಿಲ್ಲ. ಆದ ಕಾರಣ ಪರಾಗ ದೊರೆಯದೆ ಸಿಂಗಾರ ಒಣಗಿರಲೂ ಬಹುದು.

  • ಸುಮಾರಾಗಿ ಪ್ರತೀ ಮರದಲ್ಲಿ 1 ಕ್ಕಿಂತ ಹೆಚ್ಚು ಸಿಂಗಾರ ಇರುವಾಗ ಪರಾಗ ವರ್ಗಾವಣೆ ಆಗುತ್ತಿರುತ್ತದೆ.
  • ಆಗ ಸಿಂಗಾರ ಬೆಂದ ತರಹ ಆಗಿ ಒಣಗಿದರೆ ಖಾತ್ರಿಯಾಗಿ ಅದು ಶಿಲೀಂದ್ರ ಬಾಧೆಯಾಗಿರುತ್ತದೆ.
  • ಈ ಸಮಸ್ಯೆಗೆ ಮ್ಯಾಂಕೋಜೆಬ್ ಶಿಲೀಂದ್ರ ನಾಶಕವನ್ನು ಸಿಂಪರಣೆ ಮಾಡಬೇಕು.

ಹೇಗೆ ಸಿಂಪರಣೆ ಮಾಡಬೇಕು:

  • ಮೊದಲು ನವೆಂಬರ್ ಕೊನೆಗೆ ಒಮ್ಮೆ ಎಲ್ಲಾ  ಹೂ ಗೊಂಚಲುಗಳಿಗೆ ಹಾಗೂ  ಸಾಧ್ಯವಿದ್ದರೆ ಸ್ವಲ್ಪ ಸುಳಿ ಭಾಗಕ್ಕೆ ಬೀಳುವಂತೆ ಅಂತರ್ ವ್ಯಾಪೀ ಕೀಟನಾಶಕವನ್ನು ಸಿಂಪಡಿಸಬೇಕು.
  • ಇದು ಕೀಟದ ಮೊಟ್ಟೆಯನ್ನು ನಾಶಮಾಡುತ್ತದೆ.
  • ಆಗ ಕೀಟದ ಸಂತತಿ ಕಡಿಮೆ ಇರುವ ಕಾರಣ ನಿರ್ವಹಣೆ ಸುಲಭ. (ಅಂರತ್ ವ್ಯಾಪೀ ಕೀಟನಾಶಕ ಮೋನೋಕ್ರೊಟೋಫೋಸ್, ಇಮಿಡಾಕ್ಲೋಫ್ರಿಡ್, ಕರಾಟೆ,ಸೊಲಮನ್  ಡೈಮಿಥೊಯೇಟ್ ಇತ್ಯಾದಿ).
  • ಈ ಸಿಂಪರಣೆಯನ್ನು ಸಮರ್ಪಕವಾಗಿ ಮಾಡಿದ್ದೇ ಆದರೆ ಮತ್ತೆ ಎರಡನೇ ಬಾರಿ ಸಿಂಪರಣೆ ಅಗತ್ಯ ಇರುವುದಿಲ್ಲ.
  • ಎರಡನೇ ಸಿಂಪರಣೆಯಾಗಿ ಡಿಸೆಂಬರ್ ಎರಡನೇ ವಾರ ಅಥವಾ ಜನವರಿ  ಮೊದಲವಾರದಲ್ಲಿ ಮ್ಯಾಂಕೋಜೆಬ್ ಶಿಲೀಂದ್ರ ನಾಶಕವನ್ನು 1 ಲೀ.ನೀರಿಗೆ 2.5 ಗ್ರಾಂ ನಂತೆ  ಬೆರೆಸಿ ಸಿಂಪರಣೆ ಮಾಡಬೇಕು.
  • ಮ್ಯಾಂಕೋಜೆಬ್ ಎಂಬುದು M45  ಹೆಸರಿನಲ್ಲಿ ಲಭ್ಯ .
  • ಇದನ್ನು ಬೇರೆ ಬೇರೆ ತಯಾರಕರು ತಯಾರಿಸುತ್ತಿದ್ದು, ಉತ್ಪನ್ನದಲ್ಲಿ ಇರುವ ಅಂಶ Mancozeb 75%W.P ಆಗಿದ್ದರೆ ಸಾಕು.
  • ತಯಾರಕರಲ್ಲಿ 200 ರೂ.ನಿಂದ 375 ರೂ ತನಕ ದರ ಸಮರ ಇರುತ್ತದೆ.
ಈ ಪತಂಗ ಅಡಿಕೆ ಹಾಳೆಯ ಒಳಗೆ ಮೊಟ್ಟೆ ಇಟ್ಟು ಸಿಂಗಾರವನ್ನು ಹಾಳು ಮಾಡುತ್ತದೆ.
ಈ ಪತಂಗ ಅಡಿಕೆ ಹಾಳೆಯ ಒಳಗೆ ಮೊಟ್ಟೆ ಇಟ್ಟು ಸಿಂಗಾರವನ್ನು ಹಾಳು ಮಾಡುತ್ತದೆ.

ಕೆಲವರು ಕೀಟನಾಶಕ ಮತ್ತು ಶಿಲೀಂದ್ರ ನಾಶಕ ಎರಡನ್ನೂ ಒಟ್ಟು ಸೇರಿಸಿ ಸಿಂಪರಣೆ ಮಾಡುತ್ತಾರೆ. ವೈಜ್ಞಾನಿಕವಾಗಿ ಇದನ್ನು ಒಟ್ಟು ಸೇರಿಸಬಾರದು ಎಂಬುದಾಗಿ ಹೇಳುತ್ತಾರೆಯಾದರೂ, ಒಟ್ಟು ಸೇರಿಸಿ ಸಿಂಪರಣೆ ಮಾಡುವುದರಿಂದ ಅಂತಹ ತೊಂದರೆ ಕಂಡು ಬರುವುದಿಲ್ಲ.

  • ಶಿಲೀಂದ್ರ ನಾಶಕವನ್ನು ಪ್ರತೀ ತಿಂಗಳೂ ಸಿಂಪರಣೆ ಮಾಡುವವರು ಪ್ರತೀ ತಿಂಗಳೂ ಉತ್ಪನ್ನ ಬದಲಾಯಿಸುತ್ತಾ ಇದ್ದರೆ ಒಳ್ಳೆಯದು.
  • ಒಂದು  ಸಲ M45 ಸಿಂಪಡಿಸಿದವರು ಎರಡನೇ ಸಲ ವೆಟ್ಟೆಬಲ್ ಸಲ್ಫರ್ , ಮೂರನೇ ಸಲ Z 78 Zineb 78% W.P ಹಾಗೆಯೇ ನಾಲ್ಕನೇ ಸಲ ಮತ್ತೆ M45 ಈ ರೀತಿಯಲ್ಲಿ ಸಿಂಪರಣೆ ಮಾಡುವುದು ಉತ್ತಮ.
  • ಇದರಿಂದ ಶಿಲೀಂದ್ರ ನಿಯಂತ್ರಣ ಚೆನ್ನಾಗಿ ಆಗುತ್ತದೆ.
  • ಕೀಟನಾಶಕವನ್ನು ಪ್ರತೀ ಸಲವೂ ಬಳಕೆ ಮಾಡುವವರು ಬದಲಾವಣೆ ಮಾಡಿ ಬಳಕೆ ಮಾಡಿದರೆ ಕೀಟಗಳಿಗೆ ನಿರೋಧಕ ಶಕ್ತಿ ಬರುವುದಿಲ್ಲ.

This is because of pest

  • ಶಿಲೀಂದ್ರ ನಾಶಕ ಯಾವುದೇ ಇದ್ದರೂ 200 ಲೀ.ಗೆ 500 ಗ್ರಾಂ  ಹಾಗೂ ಕೀಟನಾಶಕವನ್ನು ಕರಾಟೆ ( ಲಾಂಬ್ಡ್ರಾಸೈಹೋಥ್ರಿನ್) 200 ಲೀ. ಗೆ 200  ಮಿಲಿ, ಮೊನೋಕ್ರೋಟೋಫೋಸ್ 500 ಮಿಲಿ. ಕ್ವಿನಾಲ್ಫೋಸ್ ( ಎಕಾಲೆಕ್ಸ್ ) 500 ಲೀ. ಇಮಿಡಾ ಕ್ಲೋಫ್ರಿಡ್ 120 ಮಿಲಿ. ರೋಗರ್ (ಡೈಮಿಥೋಯೇಟ್) ಈಗ ನಿಷೇಧಿಸಲ್ಪಟ್ಟಿದೆ.  ಸೋಲಮನ್ 400 ಮಿಲಿ ಪ್ರಮಾಣದಲ್ಲಿ ಬಳಕೆ ಮಾಡಬೇಕು.  ಹೆಚ್ಚು ಮಾಡಬಾರದು.

ಮೋಡ ಕವಿದ ವಾತಾವರಣ ಇರುವಾಗ ಸಿಂಪರಣೆ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ರೈತರು ಯಾವುದೇ ಬ್ರಾಂಡ್ ಬಳಸಬಹುದು. ಆದರೆ ಅದರಲ್ಲಿ ಇರಬೇಕಾದ ಅಂಶ (content)  ಸರಿಯಾಗಿದ್ದರೆ ಸಾಕು. ಖರೀದಿಸುವ ಪ್ಯಾಕೆಟ್ ನಲ್ಲಿ ದೊಡ್ಡಕ್ಷರದಲ್ಲಿ ಬರೆದದ್ದು ತಯಾರಿಕಾ ಕಂಪೆನಿಯ ಹೆಸರು. ಹಿಂಬಾಗದಲ್ಲಿ content  ಭಾಗದಲ್ಲಿ ಬರೆದದ್ದನ್ನು ಓದಿ ಬಳಕೆ ಮಾಡಿ.

error: Content is protected !!