ಹೊಸ ಭೂ ಸುಧಾರಣೆಯ ಅವಶ್ಯಕತೆ.

ಭೂಮಿ ಉಳುತ್ತಿರುವ ರೈತ

ಉಡುಪಿ  ಜಿಲ್ಲಾಧಿಕಾರಿಗಳು  ಕೃಷಿ ಮಾಡದೆ ಭೂಮಿಯನ್ನು ಪಾಳು ಬಿಟ್ಟವರಿಗೆ ನೋಟಿಸು ಜ್ಯಾರಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇದು ಈಗಿನ ಕಾಲಕ್ಕೆ ಸಯೋಚಿತ ನಿರ್ಧಾರ ಎನ್ನಬಹುದು.

  •  ಜಿಲ್ಲಾಧಿಕಾರಿಗಳ ಹೇಳಿಕೆಯನ್ನು ಜನ ತಮ್ಮ ಸಮಸ್ಯೆಗಳನ್ನು ಮುಂದಿಟ್ಟು  ವಿರೋಧಿಸಿದ್ದಾರೆ.
  • ಜನರ ಅಭಿಪ್ರಾಯವೂ ಸತ್ಯ. ಆದರೆ ಎಲ್ಲಾ ಸಮಸ್ಯೆಗಳ ಮೂಲ ಬೇರು  ಇರುವುದು, ಪಾಳು ಬಿದ್ದ ಜಮೀನಿನಲ್ಲೇ ಎಂಬುದು ಸತ್ಯ.
  •  ಇಂತಹ ಜಿಲ್ಲಾಧಿಕಾರಿಗಳು, ಆಡಳಿತ ಅಧಿಕಾರಿಗಳು ಮತ್ತು ಸಾಮಾಜಿಕ ಕಳಕಳಿ ಉಳ್ಳ ಜನ ಪ್ರತಿನಿಧಿಗಳು ಇದ್ದರೆ  ಭವಿಷ್ಯದಲ್ಲಿ ಕೃಷಿ ಉಳಿಯಲು ಸಾಧ್ಯ.

ಬದಲಾವಣೆ ಅಗತ್ಯ:

  • ನಮ್ಮಲ್ಲಿ ಈಗಿನ ಭೂ ಬಳಕೆಯನ್ನು ಗಮನಿಸಿದರೆ ಇನ್ನೊಂದು ರೈತ ಸ್ನೇಹೀ  ಭೂ ಸುಧಾರಣಾ ಕಾಯಿದೆಯ ಅಗತ್ಯ ಕಂಡು ಬರುತ್ತದೆ.
  •   ಒಂದು ಕಾಲದಲ್ಲಿ ನಮಗೆ ಬದುಕಲು ಕೃಷಿಯೇ ಆಧಾರ ಎಂದು  ಭೂಮಿ ಪಡೆದುಕೊಂಡ ಜನ, ಇಂದು ಅದು ಪೂರೈಸುವುದಿಲ್ಲ ಎಂದು  ಕೃಷಿ ಮಾಡದೆ ಭೂಮಿಯನ್ನು ಪಾಳು ಬಿಟ್ಟು,  ಬೇರೆ ವೃತ್ತಿ ಮಾಡುತ್ತಿದ್ದಾರೆ.
  • ಉಳುವವನನ್ನೇ ಹೊಲದೊಡೆಯ ಮಾಡಿದರೂ ಅವರು ಉಳುವುದನ್ನು ಬಿಟ್ಟಿದ್ದಾನೆ.
  • ಭೂಮಿಯನ್ನು  ಮಾರಾಟ ಮಾಡಿದ್ದಾನೆ ಅಥವಾ ಸಾಗುವಳಿ ಮಾಡದೆ ಹಾಗೆಯೇ ಉಳಿಸಿದ್ದಾನೆ.
  • ಇದರ ಕಾರಣದಿಂದ ಒಂದು ಹೊಲದಲ್ಲಿ ಬೆಳೆ ಮತ್ತೊಂದು ಹೊಲದಲ್ಲಿ ಕಾಡು ಬೆಳೆದು  ಕೃಷಿ ಮಾಡುವವರಿಗೆ  ಕಾಡು ಪ್ರಾಣಿಗಳ ಉಪಟಳ  ಹೆಚ್ಚಾಗಿದೆ.
  • ಆಸಕ್ತಿಯಿಂದ ಕೃಷಿ ಮಾಡುತ್ತಿರುವವರಿಗೂ ಕೃಷಿ ಬೇಡ ಎನ್ನಿಸುವಷ್ಟು ಕಾಡು ಪ್ರಾಣಿಗಳಾದ ಮಂಗ, ಕಾಡು ಹಂದಿ, ಕಾಡು ಕೋಣ, ಮುಳ್ಳು ಹಂದಿ, ನವಿಲು ಮುಂತಾದವುಗಳ ಉಪಟಳ  ಜಾಸ್ತಿಯಾಗಿದೆ. ಇದಕ್ಕೆಲ್ಲಾ ಒಂದು  ಪರಿಹಾರ ಬೇಕಾಗಿದೆ.

ಈ ನಿಟ್ಟಿನಲ್ಲಿ  ಉಡುಪಿ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್ ರವರು ಕೊಟ್ಟ ಹೇಳಿಕೆ ತುಂಬಾ ಅರ್ಥಪೂರ್ಣವಾಗಿದೆ. ಸರಕಾರಿ ಅಧಿಕಾರಿಯಾಗಿದ್ದು ಸಮಾಜದಲ್ಲಿ ಆಗುತ್ತಿರುವ ಸಮಸ್ಯೆಯನ್ನು  ಅರ್ಥಮಾಡಿಕೊಂಡದ್ದಕ್ಕೆ ಇವರಿಗೆ ಧನ್ಯವಾದ ಹೇಳಬೇಕು.

ಭೂ ಒಡೆತನ:

  • ಭಾರತ ದೇಶದಲ್ಲಿ  ಭೂಮಿಯ ಒಡೆತನ ಎಂಬುದು ಒಂದು ಗೌರವದ ವಿಷಯ.
  • ಭೂಮಿ ಎಂದರೆ ಅದು ಒಂದು ಶಾಶ್ವತ ಆಸ್ತಿ ಎಂದು ತಿಳಿದು ಎಲ್ಲರೂ ಭೂಮಿಯ  ಒಡೆತನ ಬಯಸುತ್ತಾರೆ.
  • ಕೆಲವರಿಗೆ ಭೂ ಒಡೆತನ ಜೀವನ ಹೊರೆಯುವ ಕೃಷಿ ವೃತ್ತಿ ಮಾಡಲು, ಮತ್ತೆ ಕೆಲವರಿಗೆ ಇದು ಯಾವಾಗಾದರೂ ಮಾರಾಟ ಮಾಡಲು.
  • ಮೊದಲ ವರ್ಗದಲ್ಲಿ ಭೂ ಹಿಡುವಳಿ ಕಡಿಮೆ ಇದೆ. ಎರಡನೇ ವರ್ಗದಲ್ಲಿ ಹಿಡುವಳಿ ಹೆಚ್ಚು ಇದೆ.
  • ಎರಡನೇ ವರ್ಗ ಕೃಷಿ ಮಾಡದೆ ಭೂಮಿಯನ್ನು ಅನುತ್ಪಾದಕವಾಗಿ  ಬಿಡುವವರು.
  • ನಮ್ಮ ದೇಶದ ಕಾನೂನಿನಲ್ಲಿ  ಭೂಮಿಯನ್ನು  ಉಳುಮೆ ಮಾಡುವವನು ಅನುಭೋಗಿಸಲು ಹಕ್ಕು  ಹೊಂದಿದ್ದಾನೆಯೇ ಹೊರತು ಅದನ್ನು ಪಾಳು ಬಿಡಲು ಅವಕಾಶ ಇಲ್ಲ.
  • ಭೂಮಿಯ ಮೇಲೆ ಸಾರ್ವಬೌಮ ಹಕ್ಕು ಸರಕಾರದ್ದೇ ಇರುತ್ತದೆ. ಇದನ್ನು ಶಿಸ್ತು ಬದ್ಧವಾಗಿ ಪಾಲನೆ ಮಾಡಲಾಗುತ್ತಿಲ್ಲ ಅಷ್ಟೇ.
  • ಕೃಷಿ ಕ್ಷೇತ್ರ  ಭವಿಷ್ಯದಲ್ಲಿ ಸುಸ್ಥಿರವಾಗಿ ಉಳಿಯಬೇಕಿದ್ದರೆ ಕೆಲವು ಬದಲಾವಣೆಗಳು ಅಗತ್ಯ.

 ಕೃಷಿಯ ಕಷ್ಟ:

  • ಕೃಷಿ ಕ್ಷೇತದಲ್ಲಿ ಹೊಸ ತಲೆಮಾರು ಆಸಕ್ತಿ ತೋರುತ್ತಿಲ್ಲ. ಇತರ ಉದ್ಯೋಗಗಳಿಗೆ ಹೋಲಿಸಿದಾಗ ಕೃಷಿ ಉತ್ಪತ್ತಿ ತುಂಬಾ ಕಡಿಮೆ ಇದೆ.
  •  ಹೊಲ ದೊಡ್ದದು ಮಾಡಿ ಬದಲಾವಣೆ ಮಾಡಲು ಈಗಿನ ಭೂಮಿಯ ಬೆಲೆ  ಲಾಭದಾಯಕವಲ್ಲ .
  • ವಾತಾವರಣದೊಂದಿಗೆ ಸೆಣಸಾಡಿ ಕೃಷಿ ಮಾಡುವುದು ತುಂಬಾ ರಿಸ್ಕ್ ಉಳ್ಳ ಕಸುಬು.
  • ಕೃಷಿಯಲ್ಲಿ ಆದಾಯ ಸ್ಥಿರತೆ ಮತ್ತು ಭದ್ರತೆ ಇದ್ದರೆ ಮಾತ್ರ ಹೊಸ ತಲೆಮಾರು ಅದರಲ್ಲಿ ಆಸಕ್ತರಾಗಲು ಸಾಧ್ಯ.
  • ಎಲ್ಲರೂ ಕೃಷಿಯಲ್ಲಿ ತೊಡಗಿಸಿಕೊಂಡರೆ ಅದು ಓವರ್ ಕ್ರೌಡ್ ಆಗಿ ಅದು ಅನುತ್ಪಾದಕವೇ ಆಗುತ್ತದೆ.
  • ಯಾರು ನೈಜ ಆಸಕ್ತರೋ ಅವರು ಮಾತ್ರ ಉಳಿದುಕೊಂಡರೆ  ಮಾತ್ರ  ಅದು ಮುನ್ನಡೆಯಬಲ್ಲುದು.

ಇದು ಅಗತ್ಯ:

  • ಕೃಷಿ ಭೂಮಿಯನ್ನು ನಗದೀಕರಣದ ಆಸ್ತಿಅಲ್ಲ ಎಂದು ಪರಿಗಣಿಸಬೇಕು. ಇದು ಬಹುತೇಕ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಪರಿಹಾರ. ಜನ ಕಾನೂನು  ಹೋರಾಟ ಬಿಡುತ್ತಾರೆ. ಯಾರಿಗೆ ಕೃಷಿ ಲಾಭದಾಯಕ ಎಂದು ಕಾಣುತ್ತದೆಯೋ ಅವರು ಮಾತ್ರ ಅಲ್ಲಿ ಉಳಿಯುತ್ತಾರೆ.
  • ಯಾರೂ ಕೃಷಿ ಭೂಮಿಯನ್ನು ಮಾರಾಟ ಮಾಡಬಾರದು. ತಮಗೆ ಸಾಗುವಳಿ – ಕೃಷಿ ಮಾಡುವುದು ಸಾಧ್ಯವಿಲ್ಲವಾದರೆ ಅದನ್ನು ಮಾಡುವ ಆಸಕ್ತರಿಗೆ  ಬಿಟ್ಟು ಕೊಡಬೇಕು. ಈ ಹಿಂದಿನ ಭೂ ಸುಧಾರಣಾ ಕಾಯಿದೆಯಂತೆ  ಪಡೆದ ಭೂಮಿ ಪಾಳು ಬಿದ್ದಿದ್ದರೆ ಅದನ್ನು ತಕ್ಷಣ ಸರಕಾರ ಸ್ವಾದೀನ ಪಡಿಸಿ ಬೇಸಾಯ ಮಾಡುವವರಿಗೆ ಕೊಡಬೇಕು.
  • ಭೂ ಬಳಕೆ ಮಾಡಿ ಬೆಳೆ ಬೆಳೆಯುವಾಗ ಉತ್ಪಾದನೆಯ ಮಿತಿಯನ್ನು ನಿಗದಿಗೊಳಿಸಬೇಕು. ಕಾಟಾಚಾರಕ್ಕೆ ಕೃಷಿ ಮಾಡುವುದು ನಿಲ್ಲಬೇಕು.
  • ಪ್ರಾದೇಶಿಕವಾಗಿ ಬೆಳೆಯುತ್ತಿರುವ ಬೆಳೆಗಳಿಗೆ  ಪೂರಕವಾಗಿರುವ  ಬೆಳೆಗಳನ್ನೇ  ಬೆಳೆಯಲು ಅನುಮತಿ ನೀಡಬೇಕು. ಒಂದೆಡೆ ಕಾಡು, ಮತ್ತೊಂದೆಡೆ ತೋಟಗಳು ಆಗಿ ಈಗ ಸಮಸ್ಯೆ ಉಂಟಾಗಿದೆ.
  • ಅರಣ್ಯ ಭೂಮಿ ಅದು ಸರಕಾರದ್ದಿರಲಿ- ಖಾಸಗಿಯದ್ದಿರಲಿ ಮರ ಮಟ್ಟು ಕಡಿದು ಕೃಷಿಗೆ ಒಳಪಡಿಸುವುದನ್ನು ತಡೆಯಬೇಕು. ಆಗ ಅರಣ್ಯದ ಪ್ರಾಣಿಗಳು ಅಲ್ಲೇ ಇರುತ್ತವೆ.

ಸಾರ್ವಜನಿಕರು ಸರಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿ ಒತ್ತಾಯವನ್ನು ಮಾಡಬೇಕು. ಇದು ಒಂದೇ ಕೃಷಿ ಉಳಿಸಲು ಇರುವ ಪರಿಹಾರ.

     ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ:

Leave a Reply

Your email address will not be published. Required fields are marked *

error: Content is protected !!