ಸಾವಯವ ಗೊಬ್ಬರದ ಜೊತೆಗೆ ರಸ ಗೊಬ್ಬರ-ಫಲಿತಾಂಶ.

by | Sep 27, 2020 | Crop Management (ಬೆಳೆ ನಿರ್ವಹಣೆ) | 0 comments

ನಮ್ಮಲ್ಲಿ ರೈತರಿಗೆ ಅತೀ ದೊಡ್ಡ ಸಂದೇಹವಾಗಿ ಕಾಡುತ್ತಿರುವುದು, ಸಾವಯವ ಗೊಬ್ಬರ ಬಳಸಿದಾಗ ರಸ ಗೊಬ್ಬರ ಬಳಸಿದರೆ ಮಣ್ಣು ಹಾಳಾದೀತೇ? ಮಣ್ಣಿನಲ್ಲಿ ಎರೆಹುಳು ಸಾಯಬಹುದೇ ಎಂಬಿತ್ಯಾದಿಗಳು.  ಅದಕ್ಕೆ ಪೂರಕವಾಗಿ ಕೆಲವು ಕೆಲವು ಪಂಥಗಳು ಜನರ ಸಂದೇಹಗಳಿಗೆ ತುಪ್ಪ ಸುರಿದು ಹೆಚ್ಚು ಪ್ರಖರವಾಗಿ ಉರಿಯುವಂತೆ ಮಾಡುತ್ತಿವೆ.  ವಾಸ್ತವಿಕವಾಗಿ ಸಾವಯವ  ಗೊಬ್ಬರ ಅಥವಾ ಸಾವಯವ ತ್ಯಾಜ್ಯಗಳ ಜೊತೆಗೆ ರಸ ಗೊಬ್ಬರ  ಬಳಸಿದರೆ ಏನಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಯಾವುದೇ ರಸ ಗೊಬ್ಬರ ಇರಬಹುದು. ಅದು ಸಸ್ಯಗಳಿಗೆ ಲಭ್ಯವಾಗಬೇಕಾದರೆ ಮಣ್ಣಿನಲ್ಲಿ ಇರುವ ಬ್ಯಾಕ್ಟೀರಿಯಾಗಳು ಅದನ್ನು ಲಭ್ಯ ರೂಪಕ್ಕೆ ಪರಿವರ್ತಿಸಿ ಕೊಡಬೇಕು. ಬ್ಯಾಕ್ಟೀರಿಯಾಗಳು ಮಣ್ಣಿನಲ್ಲಿ ಇರಬೇಕಾದರೆ ಆ ಮಣ್ಣು ಅವುಗಳ ವಾಸಕ್ಕೆ ಅನುಕೂಲಕರವಾಗಿರಬೇಕು. ಅನುಕೂಲಕರ ಎಂದರೆ ಅಲ್ಲಿ ಸಾವಯವ ವಸ್ತುಗಳು ಹೇರಳವಾಗಿರಬೇಕು. ಆಗ ಮಣ್ಣು ರಸ ಗೊಬ್ಬರವನ್ನು ಸಹಿಸಿಕೊಳ್ಳುತ್ತದೆ. ಬರೇ ಟಾನಿಕ್ ನಿಂದ ಮನುಷ್ಯನಿಗೆ ಅನುಕೂಲವಾಗಲಾರದು. ದೇಹದಲ್ಲಿ ತಾಕತ್ತು ಇದ್ದರೆ ಮಾತ್ರ ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಬರುತ್ತದೆ. ಅದೇ ರೀತಿ ಸಾವಯವ ಮತ್ತು ರಸ ಗೊಬ್ಬರಗಳ ನಂಟು.

ಸಾವಯವ ಗೊಬ್ಬರ ಮತ್ತು ರಸ ಗೊಬ್ಬರ ಜೊತೆಗೆ ಕೊಟ್ಟಾಗ ಉತ್ತಮ ಫಲಿತಾಂಶ -A oraganic farmer showing the oraganic plant extract

ಸಾವಯವ ಗೊಬ್ಬರ ಬಳಸಿದಾಗ ಏನಾಗುತ್ತದೆ?

  • ಸಾವಯವ ಗೊಬ್ಬರಗಳು ಮತ್ತು ಬೆಳೆ ಶೇಷಗಳನ್ನು ಮಣ್ಣಿಗೆ ಸೇರಿಸಿದಾಗ ಮಣ್ಣಿನಲ್ಲಿ ಹ್ಯೂಮಸ್ ರಚನೆ ಉಂಟಾಗುತ್ತದೆ.
  • ಆಗ ಮಣ್ಣಿನ ಗುಣ ಧರ್ಮಗಳು ಸುಧಾರಿಸುತ್ತವೆ.
  • ಇದರಿಂದ ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವಶಕ್ತಿ  ಹೆಚ್ಚುತ್ತದೆ.
  • ಮಣ್ಣಿನ ಸೂಕ್ಷ್ಮಜೀವಿಗಳಿಗೆ ಹೆಚ್ಚು ಹೆಚ್ಚು ಆಹಾರ ದೊರೆತು ಅವು ಚೇತರಿಸಿಕೊಳ್ಳುತ್ತವೆ.
  • ಅಧಿಕ ಸಂಖ್ಯೆಯಲ್ಲಿ ಅವುಗಳ ಸಂತತಿ ಹೆಚ್ಚುತ್ತದೆ.
  • ಸಾರಜನಕ ಸ್ಥಿರೀಕರಣ, ರಂಜಕ, ಕಬ್ಬಿಣ, ಮ್ಯಾಂಗನೀಸ್, ಮುಂತಾದವುಗಳ ರೂಪ ಬದಲಾವಣೆಯ ಕ್ರಿಯೆಯು ವೇಗವಾಗಿ ನಡೆಯುತ್ತದೆ.
  • ಹ್ಯೂಮಸ್ ಮಣ್ಣಿನಲ್ಲಿ   ಪೋಷಕಗಳನ್ನು ಹಿಡಿದಿಟ್ಟುಕೊಳ್ಳಲು ಸಹಕರಿಸುತ್ತದೆ.  ಪೋಶಕಾಂಶಗಳ ಸೋರುವಿಕೆ ಇರುವುದಿಲ್ಲ.
  • ಮುಖ್ಯ ಮತ್ತು ದ್ವಿತೀಯ, ಮತ್ತು ಲಘು ಪೋಷಕಾಂಶಗಳು ಎಲ್ಲಿಯೂ ಬಂಧಿಯಾಗಿ ಉಳಿಯದೆ ಸದಾ ಲಭ್ಯ ಸ್ಥಿತಿಯಲ್ಲಿ ಇರುತ್ತವೆ.
  • ಎಲ್ಲದಕ್ಕೂ ಮಿಗಿಲಾಗಿ ಬೇರುಗಳ ಉಸಿರಾಟ ಕ್ರಿಯೆ ಚೆನ್ನಾಗಿ ನಡೆಯುವಂತೆ ಮಾಡಿ, ಸಹಾಯ ಮಾಡುತ್ತದೆ.
  • ಸಸ್ಯಗಳು ಪೋಷಕಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು  ಹುಲುಸಾಗಿ ಬೆಳೆಯುತ್ತವೆ.
  • ಬರೇ  ರಾಸಾಯನಿಕ ಕೊಟ್ಟಾಗ ಇದು ಯಾವುದೂ ಆಗುವುದಿಲ್ಲ.
  • ಅಲ್ಪ ಸ್ವಲ್ಪ ಅಗತ್ಯಕ್ಕೆ ಅನುಗುಣವಾಗಿ ರಾಸಾಯನಿಕ ಕೊಟ್ಟಾಗ ಅವಗುಣ ಆಗದೆ ಅದು ಸುಕ್ಷ್ಮಾಣು ಜೀವಿಗಳಿಗೆ ಆಹಾರವೇ ಆಗುತ್ತದೆ.

ರಸ ಗೊಬ್ಬರ ಕೊಟ್ಟಾಗ ಏನಾಗುತ್ತದೆ:

Avertisement 20

ADVERTISEMENT

  • ಸಾವಯವ ಗೊಬ್ಬರಗಳನ್ನು ಯಥೇಚ್ಚವಾಗಿ ಕೊಡುವ ಮಣ್ಣಿಗೆ ಅತೀ ಕಡಿಮೆ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಕೊಡಬೇಕು.
  • ಕೆಲವೊಮ್ಮೆ ಯಾವ ಪೋಶಕಾಂಶಗಳು ಕಡಿಮೆ ಪ್ರಮಾಣದಲ್ಲಿ ಇದೆಯೋ ಅದನ್ನು ಮಾತ್ರ ಕೊಟ್ಟರೆ ಸಾಕಾಗುತ್ತದೆ.
  • ಸಾಮಾನ್ಯವಾಗಿ ಸಾವಯವ ಗೊಬ್ಬರಗಳಲ್ಲಿ ರಂಜಕ ಮತ್ತು ಪೋಟ್ಯಾಶಿಯಂ ಪ್ರಮಾಣ ಕಡಿಮೆ ಇರುತ್ತದೆ.
  • ಅದನ್ನಷ್ಟೇ ಕೊಟ್ಟರೂ ಸಾಕಾಗುತ್ತದೆ.
  • ಹಾಗೆಂದು ಸಾವಯವ ಗೊಬ್ಬರದ ಜೊತೆಗೆ ರಾಸಾಯನಿಕ ಗೊಬ್ಬರವನ್ನು ಕೊಟ್ಟರೆ ಭಾರೀ ಅವಗುಣ ಇದೆ ಎಂಬ ಪ್ರಚಾರದಲ್ಲಿ ಯಾವುದೇ ಹುರುಳಿಲ್ಲ.
  • ರಾಸಾಯನಿಕ ಗೊಬ್ಬರ ಎಂಬುದು ಬೆಳೆಗಳ ಅಧಿಕ ಇಳುವರಿಗೆ ಕೊರತೆಯಾಗುವುದಕ್ಕೆ ಪೂರಕವಾಗಿ ಕೊಡುವ ಪೋಷಕವಷ್ಟೇ ಹೊರತು ಅದು ಅನಿವಾರ್ಯ ಪೋಷಕವಾಗಿರುವುದಿಲ್ಲ.

ಸಾವಯವ ವಸ್ತುಗಳು ಮಾತ್ರ ಮಣ್ಣಿಗೆ ಜೀವ ಕೊಡಬಲ್ಲವು- Only organic matter provide bio
ಯಾವುದೇ ಕಾರಣಕ್ಕೂ ಯಾವ ರೈತನೂ ಸಾವಯವ ಅಂಶ ಇಲ್ಲದೆ ಬರೇ ರಾಸಾಯನಿಕದಲ್ಲಿ ಬೆಳೆ ತೆಗೆಯುತ್ತೇನೆ ಎಂದು ಭಾವಿಸಿದ್ದರೆ ಅದು ಶುದ್ಧ ತಪ್ಪಾಗುತ್ತದೆ. ಸಾವಯವದಲ್ಲೇ ಬೆಳೆ ತೆಗೆಯುತ್ತೇನೆ ಎಂದು ಹೇಳುವುದಾದರೂ ಒಪ್ಪುವಂತದ್ದು.   ಸಾವಯವ ಗೊಬ್ಬರ ಇಲ್ಲದೆ ಕೃಷಿ ಮಾಡುವವರಿದ್ದರೆ ಅಂತವರ ಮಣ್ಣು ಆಗಲೇ ಪೋಷಕಾಂಶಗಳಿಂದ ಕೂಡಿರುವ ಮಣ್ಣು ಆಗಿರುತ್ತದೆ. ಅಲ್ಲಿ ಎಷ್ಟರ ತನಕ ಸಾವಯವ ಅಂಶ ಮಣ್ಣಿನಲ್ಲಿ ಇರುತ್ತದೆಯೋ ಆ ತನಕ ಬೆಳೆಯಲ್ಲಿ ಇಳುವರಿ ಬರುತ್ತದೆ. ಆ ನಂತರ ಕೈ ಕೊಡುತ್ತದೆ.

ಹಿತ ಮಿತ ರಸ ಗೊಬ್ಬರ ಉತ್ತಮ:

  • ಸಸ್ಯ ಬೆಳವಣಿಗೆಗೆ ಸಾವಯವ ವಸ್ತುಗಳ ಜೊತೆಗೆ ರಾಸಾಯನಿಕ ಗೊಬ್ಬರಗಳನ್ನು ಹಿತ ಮಿತವಾಗಿ, ಸಮತೋಲನದಲ್ಲಿ  ಪೂರೈಕೆ ಮಾಡಿದಾಗ, ಅದು ಸಸ್ಯ ಬೆಳವಣಿಗೆಯನ್ನು ಹೆಚ್ಚು ಮಾಡುತ್ತದೆ.
  • ತತ್ ಪರಿಣಾಮವಾಗಿ ಸಸ್ಯಗಳು ಹುಲುಸಾಗಿ ಬೆಳೆದು ಹೆಚ್ಚು ಎಲೆಗಳನ್ನು ನೆಲಕ್ಕೆ ಉದುರಿಸಿ ಮಣ್ಣನ್ನು ಮತ್ತಷ್ಟು ಫಲವತ್ತಾಗುವಂತೆ ಮಾಡುತ್ತವೆ.
  • ಸಾವಯವ ಗೊಬ್ಬರದ ಜೊತೆಗೆ ರಾಸಾಯನಿಕ ಗೊಬ್ಬರ ಕೊಡಬೇಕೇ ಎಂದು ಇಲ್ಲ.
  • ಆದರೆ ರಾಸಾಯನಿಕ ಗೊಬ್ಬರದ ಜೊತೆಗೆ ಆಂತೂ ಸಾವಯವ ಗೊಬ್ಬರ ಕೊಡಲೇ ಬೇಕು.

ನಮ್ಮ ದೇಶದಲ್ಲಿ ಬಳಕೆಯಾಗುವ ರಾಸಾಯನಿಕ ಗೊಬ್ಬರದ ಪ್ರಮಾಣ 7:2:1 NPK ಆಗಿರುತ್ತದೆ. ಇದರಲ್ಲಿ ಸಾರಜನಕದ ಅಂಶ ಅತಿಯಾಗಿದ್ದು, ಇದು ಅಸಮತೋಲನವನ್ನು ಸೂಚಿಸುತ್ತದೆ. ಇದನ್ನು 4:2:1 ಕ್ಕೆ ತಂದರೆ ಕೆಲವು ಬೆಳೆಗಳಿಗೆ ಉತ್ತಮ. ಏಕದಳ ಸಸ್ಯಗಳಾದ ಅಡಿಕೆ, ತೆಂಗು ಮುಂತಾದ ಬೆಳೆಗಳಿಗೆ ಇದು 4:2:4  ರ ಪ್ರಮಾಣಕ್ಕೆ ಬಂದರೆ ಮಣ್ಣಿಗೆ , ಬೆಳೆಗೆ ಎಲ್ಲದಕ್ಕೂ ಉತ್ತಮ.
ರೈತರಾದವರು ಸಾವಯವ ಗೊಬ್ಬರವಾಗಿ ಆಡು, ಕುರಿ, ಮೀನು. ಕೋಳಿ ಹರಳು ಹಿಂಡಿ, ಬೇವಿನ ಹಿಂಡಿ ಇಂತದ್ದು ಯಾವುದನ್ನೇ ಹಾಕಿ. ಆದರ ಜೊತೆಗೆ ರಸ ಗೊಬ್ಬರ ಹಾಕಬಹುದು. ಅದು ಟಾನಿಕ್ ನಂತೆ ಕೆಲಸ ಮಾಡುತ್ತದೆ. ಆದರೆ ಬರೇ ರಾಸಾಯನಿಕದಲ್ಲಿ ಕೃಷಿ ಮಾಡಬೇಡಿ. ಅದು ಆಗುವುದೂ ಇಲ್ಲ.
End of the article:————————————
Search words: Organic and chemical farming# farming with organic manures# farming with in organic manures# mixed nutrients# plant nutrients#

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!