ಖರ್ಚು ಕಡಿಮೆ ಮಾಡಿ ಅಧಿಕ  ಇಳುವರಿ ಪಡೆಯುವ ಸುಲಭೋಪಾಯ.

ಖರ್ಚು ಕಡಿಮೆಮಾಡಿ ಅಧಿಕ ಫಸಲು ಪಡೆಯುವ ಸರಳ ವಿಧಾನ

ಖರ್ಚು ಮಾಡಿ ಅಧಿಕ ಫಸಲು ಪಡೆಯುವ ಬಗ್ಗೆ ನಮ್ಮಲ್ಲಿರುವ ಆಸಕ್ತಿ , ಉಚಿತ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಬಗ್ಗೆ ಕಡಿಮೆ. ಪ್ರಕೃತಿ ಕೆಲವು ಉಚಿತ ಬೆಳೆ ಪೋಷಕಗಳನ್ನು ಕೊಡುತ್ತದೆ. ಅದನ್ನು ಸರಿಯಾಗಿ ಬಳಸಿಕೊಂಡರೆ ಬೆಳೆ ಖರ್ಚು ಕಡಿಮೆಯಾಗುತ್ತದೆ. ಇಳುವರಿ ಹೆಚ್ಚಾಗುತ್ತದೆ.

ರಸ್ತೆ ಅಥವಾ ಗದ್ದೆ ಹುಣಿಯ ತೆಂಗಿನ ಮರದಲ್ಲಿ ಫಸಲು ಯಾಕೆ ಹೆಚ್ಚು? ತೋಟದಲ್ಲಿ ಎತ್ತರದ ಅಡಿಕೆ ಮರಗಳಲ್ಲಿ ಫಸಲು ಹೆಚ್ಚು ಮತ್ತು ರೋಗ ಕೀಟದ ಬಾಧೆಯೂ ಕಡಿಮೆ. ಬಯಲು ಸೀಮೆಯ ತರಕಾರಿ, ಹಣ್ಣು ಹಂಪಲುಗಳಿಗೆ ರುಚಿ ( ಸಿಹಿ) ಯಾಕೆ  ಹೆಚ್ಚು? ತೋಟದೊಳಗಿನ ಅಡಿಕೆ ಮರಳು ಉದ್ದುದ್ದ ಬೆಳೆಯುವುದೇಕೆ? ಬೆಳಗ್ಗಿನಿಂದ ಸಂಜೆ ತನಕ ಬಿಸಿಲು ಪಡೆಯುವ ದೊಡ್ಡ ಮರಗಳಲ್ಲಿ ಫಸಲು ಹೆಚ್ಚು ಏಕೆ? ಇದಕ್ಕೆಲ್ಲಾ ಪ್ರಮುಖ ಕಾರಣ ಗಾಳಿ ಬೆಳಕಿನ ಯಥೇಚ್ಚ ಲಭ್ಯತೆ.

ಪ್ರಕೃತಿ ಕೊಟ್ಟ ಉಚಿತ ಬೆಳೆ ಪೋಷಕ ಎಂದರೆ ನೀರು, ಗಾಳಿ ಮತ್ತು ಬೆಳಕು. ಈ ಮೂರನ್ನು ಸರಿಯಾಗಿ ಬಳಸಿಕೊಂಡಲ್ಲಿ  ಬೇಸಾಯದಲ್ಲಿ ಬೆಳೆ ಪೋಷಣೆ ಜೊತೆಗೆ ಬೆಳೆ ಸಂರಕ್ಷಣಾ ಖರ್ಚನ್ನು ತುಂಬಾ ಕಡಿಮೆ ಮಾಡಬಹುದು. ಆದರೆ ಅದರ ಕಡೆಗೆ ನಾವು ಹೆಚ್ಚು ಗಮನ ಕೊಡುತ್ತಿಲ್ಲ. ಸಸ್ಯಗಳಲ್ಲಿ ದ್ಯುತಿ ಸಂಸ್ಲೇಷಣ ಕ್ರಿಯೆ ಹೆಚ್ಚಾದರೆ ಇಳುವರಿ 5-15 % ಹೆಚ್ಚಳವಾಗುತ್ತದೆ. ದ್ಯುತಿ ಸಂಸ್ಲೇಷಣ ಕ್ರಿಯೆಯನ್ನು ಹೆಚ್ಚಿಸುವಲ್ಲಿ ನೆರವಾಗುಪ ಪ್ರಮುಖ ವಸ್ತುಗಳು ಇಂಗಾಲದ ಡೈ ಆಕ್ಸೈಡ್ ಮತ್ತು  ನೀರು. ನಿಯಮಿತ ಪೋಷಕಾಂಶಗಳು, ನೀರಿನ ಜೊತೆಗೆ ಯಥೇಚ್ಚ ಬೆಳಕು ಗಾಳಿ ಲಭ್ಯವಾದಾಗ ಸಸ್ಯಗಲ ದ್ಯುತಿ ಸಂಸ್ಲೇಷನ ಕ್ರಿಯೆಯೂ ಚುರುಕಾಗುತ್ತದೆ.

ಒಂದು ಸಸ್ಯಕ್ಕೆ ಚೆನ್ನಾಗಿ ಗಾಳಿ ಬೆಳೆಕು ಬಿದ್ದರೆ ಅದರ ಪೂರ್ಣ ಸಾಮರ್ಥ್ಯದ ಹೂ ಬಿಡುತ್ತದೆ. ಕಾಯಿ ಕಚ್ಚುತ್ತದೆ. ಫಲವೂ ಕೊಡುತ್ತದೆ. ರೋಗ ರುಜಿನಗಳೂ ಕಡಿಮೆ ಇರುತ್ತವೆ. ನೀರು ಉಚಿತವಾಗಿ ಸಿಕ್ಕಿದೆ ಎಂದು ಬೇಕಾದಷ್ಟು ಕೊಡುತ್ತೇವೆ. ಆದರೆ ಬೇರು ಕೊಳೆತು, ಮಣ್ಣು ಹಾಳಾಗಿ ಬೆಳೆ ಕೈಕೊಡುತ್ತದೆ. ಪ್ರಕೃತಿಯ ಈ ಕೊಡುಗೆಗಳನ್ನು ಬುದ್ದಿವಂತಿಕೆಯಲ್ಲಿ ಬಳಸಿಕೊಳ್ಳಬೇಕು.

ಇಳುವರಿ ಮತ್ತು ಬೆಳಕಿನ ಮಹತ್ವ:

ಗಾಳಿ ಬೆಳಕಿಮ ಪ್ರಭಾವದಿಂದ ಬೆಳೆದಬ್ ತೆಂಗಿನ ಮರಗಳು
ಗಾಳಿ ಬೆಳಕಿಮ ಪ್ರಭಾವದಿಂದ ಬೆಳೆದಬ್ ತೆಂಗಿನ ಮರಗಳು
  • ಹಸುರು ಮನೆ ಅಥವಾ ಪಾಲಿ ಹೌಸ್ ನೊಳಗೆ ಸಸ್ಯಗಳ ಬೆಳವಣಿಗೆ ಎಷ್ಟೊಂದು ಸಧೃಢಾವಾಗಿರುತ್ತದೆ ಅಲ್ಲವೇ? ಅದಕ್ಕೂ ಒಂದು ಕಾರಣ ಬೆಳಕು.
  • ಇತ್ತೀಚೆಗೆ ಕೆಲವರು ಕಾಫಿಯನ್ನು ಪೂರ್ಣ ಬಿಸಿಲಿನಲ್ಲಿ ಬೆಳೆಯಲು ಪ್ರಾರಂಭಿಸಿದ್ದಾರೆ.
  • ಮರಗಳ ನೆರಳಿನ ಅಡಿಯಲ್ಲಿ ಬೆಳೆಸಿದ್ದಕ್ಕಿಂತ ಹೆಚ್ಚು ಇಳುವರಿ ಇದರಲ್ಲಿ ಬರುತ್ತದೆ ಎಂಬುದು ಬ್ರೆಝಿಲ್ ನಲ್ಲಿ ಸಾಬೀತಾಗಿದೆ.
  • ಹಾಗೆಯೇ ಕೆಲವು ರೈತರು ವಿಯೆಟ್ನಾಂ ಮಾದರಿಯಲ್ಲಿ ಪೂರ್ಣ ಬಿಸಿಲಿನಲ್ಲಿ ಕರಿಮೆಣಸು ಬೆಳೆಯುವುದನ್ನೂ ಪ್ರಾರಂಭಿಸಿದ್ದಾರೆ.
  • ಇದು ಸರಿಯಾಗಿ ಮಾಡಿದರೆ ಯಶಸ್ವಿಯೂ ಸಹ.ಇಲ್ಲಿ  ಸೂರ್ಯನ ಬೆಳಕನ್ನು ಟ್ರಾಪ್  ಮಾಡಿ, ಸಾಂಪ್ರದಾಯಿಕ ಇಳುವರಿಗಿಂತ  ಹೆಚ್ಚು  ಇಳುವರಿ ಪಡೆಯಬಹುದು.
  • ಇತ್ತೀಚೆಗೆ ಕೆಲವು ಸಂಶೋಧಕರು ಕಂಡುಕೊಂಡಂತೆ ಸಾಂಪ್ರದಾಯಿಕ ಬೆಳೆ ಪ್ರದೇಶಗಳ ಕಾಫಿಯ ಗುಣಮಟ್ಟಕ್ಕೂ ಪ್ರಖರ ಬಿಸಿಲು ಇರುವ ಪ್ರದೇಶಗಳಲ್ಲಿ ಬೆಳೆಯುವ ಕಾಫಿಗೂ ಅಂತಹ ವ್ಯತ್ಯಾಸ ಇಲ್ಲವೆನ್ನುತ್ತಾರೆ.  

ಬೆಳೆ ಬೆಳೆಸುವಾಗ ,ಉತ್ತಮ ಬೀಜ, ಹೊಲದ ಸಿದ್ದತೆ, ಗೊಬ್ಬರ,  ಸಮರ್ಪಕ ಬೇಸಾಯ  ಪದ್ದತಿ ಇವೆಲ್ಲಕ್ಕಿಂತ ಪ್ರಾಮುಖ್ಯವಾದುದು ಬೆಳಕು. ಸೂರ್ಯನ ಮೂಲಕ ಭೂಮಿಗೆ ಉಚಿತವಾಗಿ  ದೊರೆಯುವ ಬೆಳಕು ಎಲ್ಲಾ  ಜೀವ ರಾಶಿಗಳಿಗೂ ಜೀವ ಚೈತನ್ಯ ಕೊಡುವ ಪ್ರಾಮುಖ್ಯ ಆಹಾರ. ಇದನ್ನು ಪ್ರತೀಯೊಬ್ಬ ಕೃಷಿಕನೂ ತಿಳಿಯಬೇಕಿದೆ.

ಬೆಕಿನಿಂದ ಆಗುವ ಪ್ರಯೋಜನಗಳು:

  • ನಾವೆಲ್ಲಾ ಸೂರ್ಯನ ಬೆಳಕಿನ ಸಹಾಯದಿಂದ ಸಸ್ಯಗಳು ಆಹಾರೋತ್ಪಾದನೆ ಕ್ರಿಯೆ (ದ್ಯುತಿಸಂಸ್ಲೇಷಣ) ನಡೆಸಿ ಆರೋಗ್ಯವಾಗಿ ಬದುಕುತ್ತವೆ ಎಂದು ಓದಿದ್ದೇವೆ.
  • ಯಾವ ದಿಕ್ಕಿನಲ್ಲಿ ಸೂರ್ಯನ  ಬೆಳೆಕು ದೊರೆಯುತ್ತದೆಯೋ ಆ ದಿಕ್ಕಿಗೆ  ಸಸ್ಯದ ಹಸುರು ಬೆಳವಣಿಗೆ,  ಬೇರಿನ ಬೆಳವಣಿಗೆ ಹೆಚ್ಚು ಇರುತ್ತದೆ.  
  • ಬೆಳೆಕಿನ ಕೊರತೆ ಆದಾಗ ಸಸ್ಯಗಳು ಯಾವುದೇ ಬೇರೆ ಪೋಷಕಾಂಶಗಳಿಗೆ ಸ್ಪಂದಿಸುವುದಿಲ್ಲ.
ಬೆಳಕಿನ ಕೊರತೆಯಾಗಿ ಬೆಳವಣಿಗೆ ಹೀಗೆ ಆಗಿದೆ
ಬೆಳಕಿನ ಕೊರತೆಯಾಗಿ ಬೆಳವಣಿಗೆ ಹೀಗೆ ಆಗಿದೆ
  • ಕೃಷಿಕರಾದ ನಾವು ಬೆಳೆ ಪೋಷಣೆ  ಮತ್ತು ನಿರ್ವಹಣೆಗೆ ನೀಡಿದಷ್ಟು ಮಹತ್ವವನ್ನು  ಬೆಳಕಿಗೆ ನೀಡುವುದಿಲ್ಲ.
  • ಪ್ರತೀಯೊಂದು ಬೆಳೆಗೂ ಇಂತಿಷೇ ಪ್ರಮಾಣದ ಬೆಳಕು ಬೇಕು  ಎಂದು ಅಂದಾಜು ಮಾಡಲಾಗಿದೆ.
  • ಅದನ್ನು ಲಕ್ಸ್ ಎಂಬ ಮಾಪನದಲ್ಲಿ ಅಳೆಯಲಾಗುತ್ತದೆ. ಕೆಲವು ಹೆಚ್ಚು  ಬೆಳಕನ್ನು ಅಪೇಕ್ಷಿಸಿದರೆ ಮತ್ತೆ ಕೆಲವು ಆಂಶಿಕ ಬೆಳಕನ್ನು  ಬಯಸುತ್ತವೆ.
  • ಆದಾಗ್ಯೂ ಹೆಚ್ಚಿನೆಲ್ಲಾ ಸಸ್ಯಗಳು ಅಧಿಕ ಪ್ರಮಾಣದಲ್ಲಿ ಬೆಳಕನ್ನು  ಬಯಸುತ್ತವೆ.
  • ಸೂರ್ಯನ  ಬಿಸಿಲು  ಎಲ್ಲಾ ನಮೂನೆಯ ಬೆಳೆಗಳ ಆರೋಗ್ಯಕ್ಕೆ, ಇಳುವರಿಗೆ ಅತೀ ಅಗತ್ಯವಾಗಿದ್ದು,
  • ನಾವು ನೆರಳಲ್ಲಿ ಮಾತ್ರವೇ ಬೆಳೆಯುವುದೆಂದು ತಿಳಿದಿರುವ ಬೆಳೆಗಳಿಗೂ ಸಹ  ಪೂರ್ಣ ಸೂರ್ಯನ ಬೆಳಕು ದೊರೆತಲ್ಲಿ ಇಳುವರಿ ಗಣನೀಯವಾಗಿ ಹೆಚ್ಚಳವಾಗುವುದು.
  • ಬ್ರೆಜಿಲ್ ದೇಶದವರು ಒಂದು ಕಾಫೀ ಗಿಡದಲ್ಲಿ ಸರಾಸರಿ  10 ಕಿಲೋ ಗೂ ಹೆಚ್ಚು ಕಾಫಿ ಬೀಜವನ್ನು ಪಡೆದರೆ, ನಾವು ಸರಾಸರಿ 3 ಕಿಲೋ ಪಡೆಯುತ್ತೇವೆ.
  • ವಿಯೆಟ್ನಾಂ ದೇಶದಲ್ಲಿ ಒಂದು ಮೆಣಸಿನ  ಗಿಡದಲ್ಲಿ ಸರಾಸರಿ 5 ಕಿಲೋ ಇಳುವರಿ ಪಡೆಯುತ್ತಾರೆ.
  • ನಾವು ಸರಾಸರಿ 1 ಕಿಲೋ ಮೀರಿಲ್ಲ. ಇವರು ಸೂರ್ಯನ ಬಿಸಿಲನ್ನು  ಸರಿಯಾಗಿ ಬಳಸಿಕೊಳ್ಳುತ್ತಾರೆ.
  • ಮಣ್ಣಿಗೆ ಬಿಸಿಲು ಬಿದ್ದರೆ ಮಣ್ಣಿನ ಫಲವತ್ತತೆ ಮತ್ತು ಬೌತಿಕ ಗುಣ ನವೀಕರಣವಾಗುತ್ತದೆ.
  • ತೋಟದ ಮಣ್ಣಿನ ಫಲವತ್ತತೆಗೂ ಗದ್ದೆ ಮಣ್ಣಿನ ಫಲವತ್ತತೆಗೂ ಇದೇ ವ್ಯತ್ಯಾಸ.
  • ಚೆನ್ನಾಗಿ ಬಿಸಿಲಿಗೆ ಒಣಗಿದ ಮಣ್ಣು ಒಂದು ಮಳೆ ಬಂದು ಸ್ವಲ್ಪ ಮೆನೆದರೆ ಸಾಕು, ಅದರ ಫಲವತ್ತತೆಗೆ ಸಾಕಷ್ಟು ಸಸ್ಯ ಬೀಜಗಳು ಮೊಳಕೆಯೊಡೆದು ಹುಲುಸಾಗಿ ಬೆಳೆಯುತ್ತವೆ.
  • ಬೋರಲು ಭೂಮಿಯಲ್ಲಿ ಯಾವ ನೀರು, ಗೊಬ್ಬರ ಇಲ್ಲದೆ ಬೆಳೆಯುವ ಕೆಲವು ಸಸ್ಯಗಳ ಬೆಳವಣಿಗೆಯ ಗುಟ್ಟು ಇದು.

ರೋಗ ರುಜಿನ- ಕೀಟ ಎಲ್ಲವೂ ಕಡಿಮೆ:

  • ಸಸ್ಯಗಳಿಗೆ  ಬರೇ ಬೆಳವಣಿಗೆಗೆ ಮತ್ತು ಇಳುವರಿಗೆ ಮಾತ್ರ ಬೆಳಕು-ಗಾಳಿ ಅವಶ್ಯಕವಲ್ಲ. ಇದು ಸಸ್ಯ ಆರೋಗ್ಯಕ್ಕೂ ಅಗತ್ಯ.
  • ಎಲ್ಲಿ ಗಾಳಿ ಬೆಳಕು ಯತೇಚ್ಚವಾಗಿ ದೊರೆಯುವುದೋ ಅಲ್ಲಿ ರೋಗ,ಕೀಟಗಳೂ ಕಡಿಮೆ ಇರುತ್ತದೆ.
  • ಮೊಡ ಇದ್ದಾಗ ಕೀಟ , ರೋಗ ಹೆಚ್ಚು. ಬಿಸಿಲೇ ಇದ್ದಾಗ ಕಡಿಮೆ. ಬಿಸಿಲಿನ ಎದುರು ಯಾವ ರೋಗ ಕಾರಕಗಳೂ ಕ್ರಿಯಾತ್ಮಕವಾಗಿರಲಾರವು.
  • ಬಿಸಿಲು ಚೆನ್ನಾಗಿ ಬೀಳುವ ಭತ್ತದ ಗದ್ದೆಯಲ್ಲಿ ಇಳುವರಿ ಹೆಚ್ಚು. ಎಲ್ಲಿ ನೆರಳು ಇದೆಯೋ ಅಲ್ಲೆಲ್ಲಾ ಇಳುವರಿ ಕಡಿಮೆ.

ನಾವು ಕೃಷಿ ಮಾಡುವಾಗ ಎಲ್ಲವನ್ನೂ ಗಮನಿಸುತ್ತೇವೆ. ಆದರೆ ಉಚಿತವಾಗಿ ದೊರೆಯುವ ಈ ಎರಡು ಅವಶ್ಯಕತೆಯ ಕಡೆಗೆ ಹೆಚ್ಚು ಗಮನ ನೀಡುವುದಿಲ್ಲ. ಯಾವುದೇ ಬೆಳೆಗೂ  ಸಾಕಷ್ಟು ಬೆಳಕು ಬೇಕು. ಬೆಳಕು ದೊರೆಯುವುದರಿಂದ ಸಸ್ಯದ ಬೆಳವಣಿಗೆಯ ಗತಿ ಭಿನ್ನವಾಗಿರುತ್ತದೆ. ಬೇಗ ಮತ್ತು ಅಧಿಕ ಇಳುವರಿಯನ್ನೂ ಕೊಡುತ್ತದೆ. ಸಾಮಾನ್ಯವಾಗಿ ಹಣ್ಣಿನ ಬೆಳೆಗಳಲ್ಲಿ TSS ಅಂಶದ  ಮೇಲೆ ಅದರ ರುಚಿ ನಿಂತಿರುತ್ತದೆ.

ಯಾವುದೇ ಬೆಳೆ ಇರಲಿ, ಅದರ ಫಲ ರುಚಿಯಾಗಿರಬೇಕಾದರೆ ಅದಕ್ಕೆ ಬಿಸಿಲೇ ಬೇಕು. ಎಲ್ಲಾ ಹಣ್ಣು ಹಂಪಲುಗಳೂ ಸಿಹಿಯಾಗಿ ರುಚಿಕಟ್ಟಾಗಿ ತಮ್ಮ ಎಲ್ಲಾ ಪೌಷ್ಟಿಕಾಂಶಗಳೊಂದೆಗೆ ಪಕ್ವವಾಗಿರಲು  ಬೆಳಕು ಮತ್ತು ಗಾಳಿ ಯತೇಚ್ಚವಾಗಿ ದೊರೆತಿರಬೇಕು.  ಗೊಬ್ಬರ ಇತ್ಯಾದಿ ನಂತರ . ನಿಮ್ಮ ತೋಟಕ್ಕೆ ಮಳೆಗಾಲದಲ್ಲಿ ಹೆಚ್ಚು ಬಿಸಿಲು, ಗಾಳಿ ಬೀಳಲಿ. ಆಗ ಇಳುವರಿ ಹೆಚ್ಚುತ್ತದೆ. ಖರ್ಚು ಇಲ್ಲದೆ ಇದು ದೊರೆಯುವ ಲಾಭ.

Leave a Reply

Your email address will not be published. Required fields are marked *

error: Content is protected !!