ಮಣ್ಣಿನ pH ಸ್ಥಿತಿ ಅವಲಂಭಿಸಿ ಫಸಲು ಮತ್ತು ಆರೋಗ್ಯ.

by | May 28, 2020 | Soil Science (ಮಣ್ಣು ವಿಜ್ಞಾನ) | 0 comments

ಮಣ್ಣಿನ ಆರೋಗ್ಯ ಸ್ಥಿತಿಯನ್ನು ಅಳೆಯುವ ಮಾಪಕ pH (Potential of Hydrogen)  ಮೌಲ್ಯ. pH ಮೌಲ್ಯ ತಟಸ್ಥವಾಗಿದ್ದರೆ (ಸಮಸ್ಥಿತಿ)   ಅದು ಸಹನಾ ಸ್ಥಿತಿ ಯುಳ್ಳ ಮಣ್ಣು ಎನ್ನಿಸುತ್ತದೆ.   ಬೆಳೆ ಬೆಳೆಯುವ ಮಣ್ಣು  ಸಮಸ್ಥಿತಿಯಲ್ಲಿದ್ದರೆ ( nutral) ಅಲ್ಲಿ ಬೆಳೆಯುವ ಬೆಳೆಗೆ ನಾವು ಕೊಡುವ ಎಲ್ಲಾ ಪೋಷಕಗಳೂ ಸಮರ್ಪಕವಾಗಿ ದೊರೆತು  ಬೆಳೆಯಲ್ಲಿ ಫಸಲು ಉತ್ತಮವಾಗುತ್ತದೆ. ಮಣ್ಣಿನ ಆರೋಗ್ಯ ಸಹ ಉತ್ತಮವಾಗಿದ್ದು,  ರೋಗ ಕೀಟ ಬಾಧೆಯೂ ಕಡಿಮೆಯಾಗುತ್ತದೆ.

  • ಬಹುತೇಕ ನಾವೆಲ್ಲಾ ತಾಂಬೂಲ ತಿಂದು ಬಲ್ಲವರು. ತಾಂಬೂಲ  ಜಾಗಿಯುವಾಗ  ವೀಳ್ಯದೆಲೆ, ಸುಣ್ಣ ಮತ್ತು ಅಡಿಕೆ ಮೂಲವಸ್ತುಗಳು.
  • ಈ ಮೂರರ ಪ್ರಮಾಣ ಎಷ್ಟು ಬೇಕೋ  ಅಷ್ಟೇ ಇದ್ದರೆ  ಅದು ತಿನ್ನಲು ರುಚಿಯಾಗಿರುತ್ತದೆ.
  • ಬಾಯಿ ಕೆಂಪಗಾಗುತ್ತದೆ. ಒಂದು ವೇಳೆ ಸುಣ್ಣ ಹೆಚ್ಚಾದರೆ ಬಾಯಿ ಸುಡುತ್ತದೆ.
  • ಸುಣ್ಣ ಕಡಿಮೆಯಾದರೆ  ಬಾಯಿ ಹುಳಿ ಹುಳಿಯಾಗುತ್ತದೆ.ಸುಡುವ ಸ್ಥಿತಿಗೆ ಕ್ಷಾರ ಎಂತಲೂ, ಹುಳಿಯಾಗುವ ಸ್ಥಿತಿಗೆ ಆಮ್ಲೀಯ ಎಂತಲೂ , ಕೆಂಪಾಗಿ ರುಚಿಕಟ್ಟಾಗಿರುವ ಸ್ಥಿತಿಗೆ ಸಮಸ್ಥಿತಿ ಎಂತಲೂ ಕರೆಯಲಾಗುತ್ತದೆ.
  • ಮಣ್ಣು ತನ್ನ ಗುಣವನ್ನು ಸಮಸ್ಥಿತಿಯಲ್ಲಿ ಇಟ್ಟುಕೊಂಡಿದ್ದರೆ ಅದು ಎಲ್ಲಾ ಪೊಷಕಗಳನ್ನೂ ಬಳಸಿಕೊಳ್ಳುತ್ತದೆ.
  • ಒಂದು ವೇಳೆ ಆಮ್ಲೀಯ ಅಥವಾ ಕ್ಷಾರೀಯ ಆದಾಗ ಅದು ಬೇರೆ  ಬೇರೆ ತೊಂದರೆಗೆ ಒಳಗಾಗುತ್ತದೆ.
  •  ಮನುಷ್ಯ ಪ್ರಾಣಿಗಳಿಗೂ ಹಾಗೆಯೇ ದೇಹದ ರಸ ಸಾರ ಸ್ಥಿತಿ ತಟಸ್ಥ ಆಗಿದ್ದರೆ ರೋಗ ನಿರೋಧಕ ಶಕ್ತಿ  ಹೆಚ್ಚು ಇರುತ್ತದೆ.

pH ಮೌಲ್ಯ  ತಿಳಿಯುವುದು ಹೇಗೆ:

  • ಇದನ್ನು ತಿಳಿಯಲು ಪ್ರಯೋಗಾಲಯದಲ್ಲಿ ಇರುವ ವಿಧಾನವೇ ಬೇರೆ. ಸರಳವಾಗಿ ರೈತರು ತಿಳಿಯಬಹುದಾದ ವಿಧಾನವೇ ಬೇರೆ ಇರುತ್ತದೆ.
  • ಸರಳವಾಗಿ ಹೇಳಬೇಕೆಂದರೆ ಮಣ್ಣು ಬೇಸಿಗೆಯಲ್ಲಿ ತುಂಬಾ ಗಟ್ಟಿಯಾಗುವ ಸ್ಥಿತಿಯಲ್ಲಿದ್ದರೆ ಅದು ಹುಳಿ ಮಣ್ಣು ಎಂತಲೂ, ಸಡಿಲತೆಯಲ್ಲಿದ್ದರೆ ಅದು ತಟಸ್ಥ ಮಣ್ಣು ಎಂದೂ ಹೇಳಬಹುದು.
  • ಇದು ಸರಳ ಉದಾಹರಣೆ ಅಷ್ಟೇ. ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಮಣ್ಣಿನಲ್ಲಿರುವ ಸುಣ್ಣ , ಮೆಗ್ನೀಶಿಯಂ ಹಾಗೂ ಇತರ ಪ್ರತ್ಯಾಮ್ಲಗಳು ಕರಗಿ ಹೋಗಿ ಮಣ್ಣು ಹುಳಿಯಾಗಿರುತ್ತವೆ.
  • ಇಲ್ಲೆಲ್ಲಾ ಬೇಸಿಗೆಯಲ್ಲಿ ಮಣ್ಣು ಗಟ್ಟಿಯಾಗುತ್ತದೆ. ಕಡಿಮೆ ಮಳೆಯಾಗುವ  ಪ್ರದೇಶಗಳಲ್ಲಿ ಮಣ್ಣು ಕ್ಷಾರೀಯವಾಗಿರುತ್ತದೆ.
  • ಇಲ್ಲಿ ವರ್ಷದ ಎಲ್ಲಾ ಸಮಯದಲ್ಲೂ ಮಣ್ಣು ಮೆದುವಾಗಿ ಇರುತ್ತದೆ.
  • ಯಾವ ಮಣ್ಣಿನಲ್ಲಿ ನೀರು ಚೆನ್ನಾಗಿ ಬಸಿದು ಹೋಗುತ್ತದೆಯೋ ಆ ಮಣ್ಣು ಹುಳಿ ಮಣ್ಣಾಗಿರುತ್ತದೆ.
  • ಈ ಮಣ್ಣಿಗೆ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಇರುವುದಿಲ್ಲ.
  • ಕೆಲವು ಕಡೆ ಉತ್ತರ ಕರ್ನಾಟಕದಲ್ಲಿ  ಒಂದು ಮಳೆ ಬಂದರೆ ವಾರ ತನಕವೂ ನೀರು ನೆಲದ ಮೇಲೆಯೆ ಇರುತ್ತದೆ.
  • ಇಳಿಯುವುದೇ ಇಲ್ಲ. ಅಂತಹ ಮಣ್ಣು ಕ್ಷಾರ ಮಣ್ಣು ಆಗಿರುತ್ತದೆ. ಇದಕ್ಕೆ  ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ  ಅಧಿಕ ಇರುತ್ತದೆ.

ಸಾಮಾನ್ಯವಾಗಿ ಮಣ್ಣಿನ  pH  4 ರಿಂದ 10 ತನಕ ಇರುತ್ತದೆ. ಇದರ ಒಟ್ಟಾರೆ ಮೌಲ್ಯ 1 ರಿಂದ 14 ತನಕ. ಇದು 7 ರಲ್ಲಿ ಇದ್ದರೆ ಅದು ಉತ್ತಮ ಸಹನಾ ಸ್ಥಿತಿಯೂ , 6-7 ರ ಆಸು ಪಾಸಿನಲ್ಲಿದ್ದರೆ ಸ್ವಲ್ಪ ಮಟ್ಟಿಗೆ ಧಕ್ಕೆ ಸಹನೆ ತಡೆಯುವ ಶಕ್ತಿಯನ್ನು ಹೊಂದಿರುತ್ತದೆ. ಅದರೆ 6 ರಿಂದ ಕೆಳಕ್ಕೆ ಬಂದರೆ  ಆಮ್ಲೀಯ ವೆಂದೂ 8 ರಿಂದ  ಮೇಲೆ ಹೋದರೆ ಕ್ಷಾರೀಯ ಅಥವಾ ಸಹನಾ ಶಕ್ತಿಗಿಂತ ಹೆಚ್ಚು ಎಂದು ಹೇಳಲಾಗುತ್ತದೆ.

ಹುಳಿ – ಕ್ಷಾರ ಮಣ್ಣಿನ ಫಲ:

  • ಹುಳಿ ಮಣ್ಣಿನಲ್ಲಿ ಕೆಲವು ಪೋಷಕಾಂಶಗಳು ಬೆಳೆಗಳಿಗೆ ಲಭ್ಯವಾಗುವುದಿಲ್ಲ.
  • ಅವು ಬಂಧಿಯಾಗಿರುತ್ತದೆ. ಕ್ಷಾರ ಮಣ್ಣಿನಲ್ಲೂ ಕೆಲವು ಪೋಷಕಗಳು ಕೆಲಸ ಮಾಡುವುದಿಲ್ಲ.
  • ಹುಳಿ ಮಣ್ಣಿನಲ್ಲಿ ಯಾವಾಗಲೂ ಸುಣ್ಣ ಮತ್ತು ಮೆಗ್ನೀಶಿಯಂ ಕೊರತೆ ಇರುತ್ತದೆ.
  • ಕ್ಷಾರ ಮಣ್ಣಿನಲ್ಲಿ ಇದು ಹೆಚ್ಚು ಇರುತ್ತದೆ.
  • ಆಮ್ಲೀಯ ಸ್ಥಿತಿಯಲ್ಲಿ ಲಘು ಪೋಷಕಾಂಶಗಳಾದ ಅಲ್ಯೂಮೀನಿಯಂ ಮತ್ತು ಕಬ್ಬಿಣ ದ್ರವರೂಪಕ್ಕೆ ಬಂದು ಪ್ರಮಾಣ ಹೆಚ್ಚಾಗಿ ಬೆಳೆಗಳಿಗೆ ವಿಷವಾಗಿ ಪರಿಣಮಿಸುತ್ತದೆ.
  • ತಟಸ್ಥ ಸ್ಥಿತಿಗೆ ಬಂದಂತೆ ಇದರ ಲಭ್ಯತೆ ಕಡಿಮೆಯಾಗುತ್ತದೆ.
  •  ಇದನ್ನು ಸರಿಪಡಿಸಿಕೊಂಡು ಪೋಷಕಾಂಶಗಳನ್ನು ಕೊಟ್ಟರೆ  ಸಸ್ಯಗಳು ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತವೆ.
  • ಮಣ್ಣಿನ ಈ ಸ್ಥಿತಿಗತಿಗಳು ಆಗಾಗ ಅಲ್ಪ ಸ್ವಲ್ಪ ಬದಲಾವಣೆಯೂ ಆಗುತ್ತದೆ.

 ಪೋಷಕಗಳು ಮತ್ತು ರಸಸಾರ:

  • ಮಣ್ಣಿನ pH 5-7  ರ ಆಸುಪಾಸಿನಲ್ಲಿದ್ದರೆ ಬೋರಾನಿನ ಲಭ್ಯತೆ ಉತ್ತಮವಾಗಿರುತ್ತದೆ.
  • ಸುಣ್ಣ  ಹಾಕಿದಾಗ ಬೋರಾನಿನ ಲಭ್ಯತೆಗೆ  ತೊಂದರೆ ಉಂಟಾಗುತ್ತದೆ.
  • ಮಣ್ಣು ಆಮ್ಲೀಯವಾಗಿದ್ದಾಗ ರಂಜಕದ ಕರಗುವಿಕೆಗೆ ಅಡ್ಡಿಯಾಗಿ ಅದು ಸಸ್ಯಗಳಿಗೆ ಲಭ್ಯವಾಗುವುದಿಲ್ಲ.
  • ಮಣ್ಣು ತಟಸ್ಥವಾದಾಗ ಸರಿಯಾಗಿ ಲಭ್ಯವಾಗುತ್ತದೆ.
  • ಪಿ ಎಚ್ 9 ಕ್ಕಿಂತ ಹೆಚ್ಚಾದಾಗಲೂ ರಂಜಕದ ಲಭ್ಯತೆ ಹೆಚ್ಚುತ್ತದೆ.
  • ಹುಳಿ ಮಣ್ಣಿಗೆ ಶಿಲಾ ರಂಜಕ ಬಳಸಿ ಎನ್ನುವುದಕ್ಕೆ ಕಾರಣ, ಮಣ್ಣಿನ ಆಮ್ಲಗಳು ಈ ಶಿಲಾ ರಂಜಕವನ್ನು ಕರಗಿಸಿ ಕೊಡುತ್ತವೆ.
  • .ಕ್ಷಾರೀಯ ಮಣ್ಣಿನಲ್ಲಿ ಸಿಂಗಲ್ ಸೂಪರ್ ಫೋಸ್ಫೇಟ್,DAP  ಮುಂತಾದ ರಂಜಕ ಗೊಬ್ಬರಗಳು ಹೆಚ್ಚು ಲಭ್ಯವಾಗುತ್ತದೆ.
  • ಮಣ್ಣಿನ pH  ಮೌಲ್ಯ 7.5  8.5  ತನಕ ಇದ್ದಾಗ ಪೊಟ್ಯಾಶಿಯಂ ಲಭ್ಯತೆ ಸಮರ್ಪಕವಾಗಿರುವುದಿಲ್ಲ. 8.5 ರಿಂದ ಹೆಚ್ಚಾದಾಗ ಲಭ್ಯತೆ ಹೆಚ್ಚುತ್ತದೆ.
  • ಮಣ್ಣಿನ pH ಮೌಲ್ಯ 5.5 ರಿಂದ ಕಡಿಮೆಯಾದರೆ ಸೂಕ್ಷ್ಮಾಣು ಜೀವಿಗಳು(ಬ್ಯಾಕ್ಟೀರಿಯಾಗಳು ಅಕ್ಟಿನೊಮೈಸಿಟುಗಳು) ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ.
  • 6-9 ತನಕ ಇದರ ಚಟುವಟಿಕೆ ಹೆಚ್ಚಿ ಫಲ ಕೊಡುತ್ತವೆ.
  • ಶಿಲೀಂದ್ರಗಳು ಹೆಚ್ಚಾಗಿ ಆಮ್ಲ ಮಣ್ಣಿನಲ್ಲಿ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ.
  • ಸಾರಜನಕದ ಲಭ್ಯತೆಯು ಮಣ್ಣಿನ pH  ಮೌಲ್ಯ 5.5 ಕ್ಕಿಂತ ಹೆಚ್ಚು ಇದ್ದಾಗ ಚೆನ್ನಾಗಿರುತ್ತದೆ.
  • ಇಂತಹ ಮಣ್ಣಿನಲ್ಲಿ ದ್ವಿದಳ ಸಸ್ಯಗಳು ಸಾರಜನಕ ಸ್ಥಿರೀಕರಣವನ್ನು ಮಾಡಿಕೊಡುತ್ತವೆ.
  • ಹಾಗೆಂದು ಶಿಲೀಂದ್ರಗಳು ಈ ಕಾರ್ಯವನ್ನು ನೆರವೇರಿಸುವುದರಿಂದ ಕಡಿಮೆ ಪಿ ಎಚ್ ನಲ್ಲೂ ಅದು ನಿಧಾನವಾಗಿ ಲಭ್ಯವಾಗುತ್ತದೆ.
  •  ಗಂಧಕ pH  ವ್ಯತ್ಯಾಸವಾದಾಗಲೂ ಕಾರ್ಯನಿರ್ವಹಿಸುತ್ತದೆ.

ಒಟ್ಟಿನಲ್ಲಿ pH 6-7.5  ರ ಸನಿಹದಲ್ಲಿದ್ದಾಗ ಮಣ್ಣು ಆರೋಗ್ಯವಾಗಿದ್ದು, ಎಲ್ಲಾ ದರ ಬೌತಿಕ, ಜೈವಿಕ ಮತ್ತು ರಾಸಾಯನಿಕ ಕ್ರಿಯೆಗಳು ಹೈತಕರವಾಗಿ ನಡೆಯುತ್ತವೆ. ರೈತರು ಮಣ್ಣಿನ pH ವಿಚಾರದಲ್ಲಿ ಸ್ವಲ್ಪ ಹೆಚ್ಚು  ಗಮನ ಹರಿಸಿದರೆ ಕೃಷಿ ಉತ್ಪಾದನೆ  ಹೆಚ್ಚು ಮಾಡಿ ಲಾಭ ಮಾಡಿಕೊಳ್ಳಬಹುದು.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!