ಭೂ ತಾಯಿ ಮುನಿದಿದ್ದಾಳೆ- ನಾವೆಲ್ಲಾ ಒಟ್ಟಾಗಿ ಪ್ರಾರ್ಥಿಸೋಣ.

ಪ್ರತೀ ವರ್ಷ ಎಪ್ರೀಲ್ 22 ದಿನವನ್ನು ಜಾಗತಿಕ ಭೂಮಿಯ ದಿನ ಎಂದು ಆಚರಿಸಲಾಗುತ್ತದೆ. ಪ್ರತೀ ವರ್ಷ ಒಂದೊಂದು ಧ್ಯೇಯಗಳನ್ನು ಇಟ್ಟುಕೊಂಡು ಈ ದಿನವನ್ನು ವಿಶೇಷ ಪ್ರಾತಿನಿಧ್ಯ ಕೊಟ್ಟು ಆಚರಿಸಲಾಗುತ್ತದೆ. ಈ ವರ್ಷ ಹವಾಮಾನ ಬದಲಾವಣೆಯಂತಃ ಗಂಭೀರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಅದನ್ನು ಆಚರಿಸಲಾಗುತ್ತದೆ.

  • ಬಹುಷಃ ಈ ವರ್ಷದ  ಆಚರಣೆಗೆ ಪ್ರಕೃತಿಯ ಅಸಮಾಧಾನ ಏನೋ ಇದ್ದಂತಿದೆ.
  • ಕೊರೋನಾ ಎಂಬ ಮಹಾ ಮಾರಿ ರೂಪದಲ್ಲಿ ಮನುಕೂಲದ ಮೇಲೆ ಭೂ ತಾಯಿ ಮುನಿದಂತಿದೆ.
  • ಜಗತ್ತೇ ಮನುಕುಲ ಕಾಣದ ಅನಾಹುತದ ಸುಳಿಯಲ್ಲಿ ಸಿಕ್ಕಿಕೊಂಡಿದೆ.
  • ಇದು ಏನಾಗುತ್ತದೆಯೋ ಯಾವಾಗ ಪ್ರಕೃತಿ ಅಥವಾ ನಮ್ಮ ಭೂ ಮಾತೆ ಇದನ್ನು ತನ್ನ ಗರ್ಭದೊಳಗೆ ನುಂಗಿ ಜಗತ್ತನ್ನು ಪಾರು ಮಾಡುತ್ತಾಳೆಯೋ ಗೊತ್ತಿಲ್ಲ.
  • ಪ್ರಕೃತಿ ಅಥವಾ ಭೂ ತಾಯಿ ಮನಸ್ಸು ಮಾಡಿದರೆ ಇದಕ್ಕೆಲ್ಲಾ ಸಮಯಾವಕಾಶ ಬೇಡ.
  • ಭೂ ತಾಯಿಯ ಪ್ರಾರ್ಥನೆ  ಮಾಡೋಣ- ಸಾಮೂಹಿಕ ಪ್ರಾರ್ಥನೆಗೆ ಕಲ್ಲು ವಿಗ್ರಹವೇ ಒಲಿಯುವಾಗ ಜೀವಂತ ಭೂಮಾತೆ ಒಲಿಯದೆ ಇರಲಾರಳು.
  • ಇದನ್ನು ನಾವೆಲ್ಲಾ ನಿರೀಕ್ಷಿಸೋಣ.
ಜೀವ ವೈವಿಧ್ಯಗಳ ಆಗರ ಈ ಕಾಡುಗಳು

ನಾವೆಲ್ಲಾ ಪ್ರಕೃತಿಯನ್ನು ತುಂಬಾ ಹೀನಾಯವಾಗಿ ಬಳಸಿಕೊಂಡಿದ್ದೇವೆ. ಭೂಮಿ ಅಥವಾ ಪ್ರಾಕೃತಿಯ ನಡೆಗೆ ವಿರುದ್ಧವಾಗಿಯೂ ನಡೆದದ್ದಿದೆ.ಇದನ್ನೆಲ್ಲಾ ಸಿಂಹಾವಲೋಕನ ಮಾಡುತ್ತಾ  ಮುಂದೆ ನಮ್ಮ ನಡೆಯನ್ನು ಬದಲಿಸುವ ಅಗತ್ಯ ಕಾಣುತ್ತದೆ.

ಭೂಮಾತೆಗೆ ವಿಶೇಷ ಗೌರವ:

 

ಮಲೆನಾಡಿನಲ್ಲಿ ಭೂಮಿ ಪೂಜೆ ( ಚಿತ್ರ ಕೃಪೆ ಭರತ್ ಕುಮಾರ್ ವಿ.ಪಿ. )

  • ಭೂಮಿ ತಾಯಿಯನ್ನು ಗೌರವಿಸುವ ಈ ದಿನದಂದು ಮುಖ್ಯವಾಗಿ ಮಲೆನಾಡಿನ ರೈತರನ್ನು  ನಾವು ಒಮ್ಮೆ ನೆನವರಿಕೆ ಮಾಡಿಕೊಳ್ಳಬೇಕು.
  • ಇವರು ಪ್ರತೀ ವರ್ಷ ತಮ್ಮ ಹೊಲದಲ್ಲಿ ಭೂಮಿ ಹುಣ್ಣಿಮೆಯನ್ನು(ನವರಾತ್ರೆ ಕಳೆದ ತಕ್ಷಣ ಬರುವ ಹುಣ್ಣಿಮೆ, ಕಾರ್ತಿಕ ಮಾಸದ ಮೊದಲ ಹುಣ್ಣಿಮೆ)ಆಚರಿಸುತ್ತಾರೆ.
  • ಆ ದಿನ ಅಲ್ಲಿನ ಜನ ಹೊಲ ಇದ್ದವರು, ಇಲ್ಲದವರೂ ಎಲ್ಲರೂ  ಭೂಮಿ ಪೂಜೆ ಮಾಡುವವರು.
  • ತೀರ್ಥಹಳ್ಳಿ, ಶಿವಮೊಗ್ಗ, ಕಡೂರು, ಹೊಸನಗರ, ಹೊನ್ನಾಳಿ, ಸಾಗರ, ಸಿದ್ದಾಪುರ, ಶಿರಸಿ, ಯಲ್ಲಾಪುರದ ತನಕ ಎಲ್ಲಾ ಕೃಷಿಕರೂ ಈ ದಿನ ಭೂಮಿಯನ್ನು ವಿಶೇಷವಾಗಿ ಆರಾಧಿಸಿ ಪೂಜಿಸುತ್ತಾರೆ.
  • ಇದನ್ನು ಈ ದಿನ ಎಲ್ಲಾ ಜನರಿಗೆ ತಿಳಿಸುವುದು ಮತ್ತು ಈ ಆಚರಣೆಗೆ  ಗೌರವ ಸಲ್ಲಿಸುವುದು ನಮ್ಮ ದೊಡ್ಡತನ ಎನ್ನಿಸುತ್ತದೆ.

ವಿಶಿಷ್ಟ ಆಚರಣೆ:

  • ರಾಜ್ಯದ ಇನ್ನೂ ಕೆಲವು ಪ್ರದೇಶಗಳಲ್ಲಿ ಇದು ಇದೆ.
  • ಆದರೆ ಮಲೆನಾಡಿನಲ್ಲಿ ಇದು ಒಂದು ಸಂಭ್ರಮದ ದಿನ.
  • ಹೊಲದಲ್ಲಿ ಚಪ್ಪರ ಹಾಕಿ ತೋರಣ ಕಟ್ಟಿ ಮಾಡುವ ಆಚರಣೆ ಇದು.   ಭೂಮಿ ಪೂಜೆಗೆ ಆಂದು ವಿಷೇಷ ಅಡುಗೆ,(ಚರಗ ಎಂದು ಹೆಸರು. ಎಲ್ಲಾ ಜಾತಿಯ ಸೊಪ್ಪು  ತರಕಾರಿ ಹಾಕಿ ಅನ್ನವನ್ನೂ ಹಾಕಿ, ಬೇಯಿಸಿ ತಯಾರಿಸುತ್ತಾರೆ.)
  • ಇಡೀ ಹೊಲದಲ್ಲಿ ಚೆಲ್ಲಿ ಭೂಮಿ ತಾಯಿಗೆ ಅಹಾರ ಉಣಿಸುವಿಕೆ ಪದ್ಧತಿ ಈಗಲೂ ಇದೆ.
  • ಒಂದು ಕಲ್ಲು ಇಟ್ಟು ಅದನ್ನು ಭೂ ಮಾತೆಯೆಂದು ಪೂಜಿಸಿ ಮಂಗಳಾರತಿ ಮಾಡುತ್ತಾರೆ.
  • ಮನೆಮಂದಿ ವಿಶೇಷ ಅಡುಗೆ ಮಾಡಿ(ಸೌತೇ ಕಾಯಿ ಚೀನೀ ಕಾಯಿ ಹಾಕಿದ ಕಡುಬು, ಅಮಟೆ ಕಾಯಿ, ಕೆಸುವಿನ ಬಳ್ಳಿ ಹಾಕಿದ ಸಿಹಿ ಪದಾರ್ಥ ಎಲ್ಲಾ ಮಾಡುತ್ತಾರೆ )
  • ಸಾಮೂಹಿಕ  ಊಟ ಮಾಡುತ್ತಾರೆ.
  •  ಇದು ಭೂತಾಯಿಗೆ ಕೊಡುವ ನೈಜ ಗೌರವ ಎನ್ನಬಹುದು.
  •  ಪಂಗಡಗಳಲ್ಲಿ ಆಚರಣೆ ಸ್ವಲ್ಪ ಬಿನ್ನತೆ ಇರುತ್ತದೆಯಾದರೂ ಸಾಮ್ಯತೆ ಇರುತ್ತದೆ.
  • ಆ ದಿನ ಯಾವ ಪಂಗಡದವರೂ ಮಾಂಸಾಹಾರ, ಅಮಲು ಪದಾರ್ಥ ಸೇವನೆ ಮಾಡುವುದಿಲ್ಲ.
  • ಆ ದಿನ ಮತ್ತು ಮರು ದಿನ ಭೂಮಿಗೆ ವಿರಾಮವನ್ನೂ ಕೊಡುತ್ತಾರೆ.
  • ಬರೇ ಮನೆ ಹಿತ್ತಲು ಇರುವವರೂ ಸಹ ಅವರ ಮನೆ ಮುಂದಿನ ತೆಂಗಿನ ಸಸಿಗಾದರೂ ಪೂಜೆ ಮಾಡುತ್ತಾರೆ.

ಇಷ್ಟೇ ಅಲ್ಲ. ಅವರು ಇಂದಿಗೂ ಭೂ ಮಾತೆಯ ಮೇಲೆ,ಪರಿಸರದ ಮೇಲೆ ಪ್ರೀತಿ ಇಟ್ಟೇ ಭೂಮಿಯನ್ನು ಬಳಕೆ ಮಾಡಿಕೊಳ್ಳುತ್ತಿರುವುದು ವಿಷೇಷ. ಆದ  ಕಾರಣವೇ ಇಂದು ಮಲೆನಾಡಿನಲ್ಲಿ ಕಾಡು, ಜೀವ ವೈವಿಧ್ಯಗಳ ವೈಭವವನ್ನು ಕಾಣಬಹುದು.

ನಾವು ಪ್ರತಿಜ್ಞೆ ಮಾಡಬೇಕಾಗಿದೆ:

  • ಈ ದಿನ ನಾವು  ಭೂ ತಾಯಿಯ ಮೇಲೆ ಈ ತನಕ ಮಾಡಿದ ಅನಾಚಾರ ಮತ್ತು ಅಪ್ರಾಕೃತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಪ್ರತಿಜ್ಞೆ ಮಾಡಬೇಕಾಗಿದೆ.
  • ಪ್ರಕೃತಿ ಮುನಿದರೆ ಏನಾದೀತು ಎಂಬುದರ ಚಿತ್ರಣ ನಮ್ಮೆಲ್ಲರ ಕಣ್ಣ ಮುಂದೆಯೇ ಇದೆ.
  • ಇನ್ನಾದರೂ ನಾವು ಪ್ರಕೃತಿಗೆ ವಿರುದ್ಧವಾಗಿ ಹೋಗುವುದನ್ನು ಕಡಿಮೆ ಮಾಡಬೇಕು.

ಭೂಮಿಯ ಮೇಲೆ ಬದುಕಲೇ ಬೇಕಾದ ಕೋಟ್ಯಾಂತರ  ಜೀವ ರಾಶಿಗಳಿಗೆ ಬದುಕಲು ಅವಕಾಶ ಕೊಟ್ಟು, ಸಸ್ಯ ವೈವಿಧಗಳನ್ನು ಬೆಳೆಯಲು ಬಿಟ್ಟು ನಾವೂ ಅವುಗಳ ಜೊತೆಗೆ ಬದುಕಿ ಬಾಳಿದರೆ ಅದು ಪ್ರಕೃತಿಗೆ ವಿರುದ್ಧವಾದ ನಡೆ ಎನ್ನಿಸದು.

  • ಥಾಮಸ್ ರಾಬರ್ಟ್  ಮಾಲ್ತಸ್ ಎಂಬ ಅರ್ಥ ಶಾಸ್ತ್ರಜ್ಞ ಹೇಳಿದ್ದು ಈಗಲೂ ನೆನಪಿದೆ.
  • ಪ್ರಕೃತಿ ತನ್ನದೇ ಆದ ಒಂದು ವ್ಯವಸ್ಥೆಗಳ ಜೊತೆಗೆ ಹೊಂದಾಣಿಕೆಯಲ್ಲಿ ನಡೆಯಬೇಕು.
  • ಅದು ತಪ್ಪು ದಾರಿಯಲ್ಲಿ ನಡೆದರೆ ಪ್ರಕೃತಿ ನೆಗೆಟಿವ್ ಚೆಕ್ಸ್ ಅಥವಾ ಉಲ್ಟಾ ಹೊಡೆದು ಆದ  ಆವಾಂತರವನ್ನು ಸರಿಪಡಿಸುತ್ತದೆ.
  • ಅವರು ಜನಸಂಖ್ಯಾ ಸ್ಪೋಟದ ಬಗ್ಗೆ ಹೇಳಿದ್ದಾದರೂ ಇದರ ಗೂಢಾರ್ಥ ಇದೇ ಸೈ.

ಭೂಮಿ ತಾಯಿಯನ್ನು ಮತ್ತೊಮ್ಮೆ ಪ್ರಾರ್ಥಿಸುವ ಮೂಲಕ ಮನುಕುಲಕ್ಕೆ ಎದುರಾದ ಸಂಕಟವನ್ನು ದೂರಮಾಡೆಂದು ಅರಿಕೆ ಮಾಡೋಣ.

Leave a Reply

Your email address will not be published. Required fields are marked *

error: Content is protected !!