ಬಸವನ ಹುಳು ನಿಯಂತ್ರಣ

ಬಸವನ ಹುಳ

ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಬಿದ್ರಳ್ಳಿಯಲ್ಲಿ ಕಂಡಿದ್ದ ಈ ಬಸವನ ಹುಳ ಈಗ ಎಲ್ಲೆಡೆಯಲ್ಲೂ ಕಂಡು ಬರುತ್ತಿದೆ. ರೈತರು ಇದರಿಂದ ಬೇಸತ್ತಿದ್ದಾರೆ. ಕೊಲ್ಲುತ್ತಾರೆ. ಮತ್ತೆ ಹುಟ್ಟುತ್ತದೆ. ಯಾವ ರೀತಿ ನಿಯಂತ್ರಣ ಎಂದೇ ಗೊತ್ತಾಗುವುದಿಲ್ಲ.

  • ಇವು ಮರದ ಮೇಲೆಲ್ಲಾ ಏರಿಕೊಂಡು ಕುಳಿತಿವೆ.
  • ಹಗಲು ನಾಲ್ಕುಐದು ಇದ್ದರೆ, ಕತ್ತಾಲಾದರೆ ಮರದ ತುಂಬಾ  ಏರಿ ಬಿಡುತ್ತವೆ.
  • ಇವು ದೊಡ್ಡ ಗಾತ್ರದ  ಬಸವನ ಹುಳುಗಳು. ಇವು ಅಡಿಕೆ ಮರದ ಎಳೆ ಎಲೆಗಳನ್ನು ಮತ್ತು ಪಕ್ಕದಲ್ಲಿರುವ  ಇತರ ಗಿಡಗಳ ಎಳೆ ಎಲೆಗಳನ್ನು ತಿನ್ನುತ್ತವೆ. 
  •  ಅಡಿಕೆ ಮರಕ್ಕೆ ಭಾರೀ ಸುಳಿ ಕೊಳೆ ರೋಗಕ್ಕೂ ಇದು ಕಾರಣವಾಗುತ್ತಿದೆ.

ಜನ ಇವುಗಳನ್ನು  ಕಂಡಾಗಲೆಲ್ಲಾ ಹಿಡಿದು ಗೋಣಿ ಚೀಲದಲ್ಲಿ ತುಂಬಿ  ದೂರದ  ಒಯ್ದು ಬಿಸಾಡುತ್ತಾರೆ.

ಬಸವನ ಹುಳು ಏನು:

  •  ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಪ್ರಕೃತಿಯಲ್ಲಿ ಹುಟ್ಟಿಕೊಳ್ಳುವ ಮೃದು ಶರೀರದ ಜೀವಿಗಳೇ  ಬಸವನ ಹುಳು ,
  • ಕಪ್ಪೆ ಚಿಪ್ಪಿನ ಜೀವಿಗಳು, ಮುತ್ತಿನ ಚಿಪ್ಪಿನ ಜೀವಿಗಳು, ಶಂಖದ ಹುಳುಗಳು, ಕವಡೆ ಹುಳು ಮುಂತಾದ  ಹೆಸರುಂಟು.
  •  ಇದು ಮೃದ್ವಂಗಿ  ಪ್ರಭೇದಕ್ಕೆ ಸೇರಿವೆ.
  • ಇವುಗಳು ಕೆಲವು ಮಣ್ಣಿನಲ್ಲಿ, ಕೆಲವು ನೀರಿನಲ್ಲಿಯೂ ಮತ್ತೆ ಕೆಲವು ಉಪ್ಪು ನೀರಿನಲ್ಲಿ ವಾಸಿಸುತ್ತವೆ.
  • ಚಿಪ್ಪು ಸಹಿತವಾಗಿ ಇರುವ  ಜೀವಿ ಬಸವನ ಹುಳು
      ಚಿಪ್ಪು ರಹಿತವಾಗಿ ಇರುವಂತಹ ಹುಳುವಿಗೆ ಸಿಂಬಳದ ಹುಳ (Slug ) gray garden slug ಎಂದು ಹೆಸರು.
  • ಮಳೆಗಾಲದಲ್ಲಿ, ಮಂಜು ಬೀಳುವ ಚಳಿಗಾಲದಲ್ಲಿ ಇವುಗಳ ಸಂತಾನಾಭಿವೃದ್ಧಿ ಜಾಸ್ತಿ.
  • ಮಳೆಗಾಲ ಪ್ರಾರಂಭವಾಗುವಾಗಲೂ ಸಂಖ್ಯೆ ಹೆಚ್ಚಿಗೆಯಾಗುತ್ತವೆ. ನಿರುಪದ್ರವಿಯಂತೆ ಕಂಡರೂ ಇವುಗಳಿಂದ ತೊಂದರೆ ಇದೆ.
  •   ಇವು ಸಸ್ಯದ  ಎಳೆ ಚಿಗುರು, ಹೂವು ಕಾಯಿಗಳನ್ನು  ಚೀಪಿ ರಸ ಹೀರುತ್ತವೆ ಮತ್ತು ಭಕ್ಷಿಸುತ್ತವೆ.
  • ಪ್ರಾದೇಶಿಕವಾಗಿ ಬೇರೆ ಬೇರೆ ಜಾತಿಯ  ಮೃದ್ವಂಗಿ ಹುಳುಗಳನ್ನು ಕಾಣಬಹುದು.
  • ಇವು ಕೇವಲ ಭಕ್ಷಕಗಳು ಮಾತ್ರವಲ್ಲ, ರೋಗ ವಾಹಕಗಳೂ ಆಗಿವೆ.

ಹಾನಿ :

  • ಬಸವನ ಹುಳು ಮತ್ತು ಸಿಂಬಳದ ಹುಳುಗಳು ಬೆಳೆಗಳ ಎಳೆ ಎಲೆಗಳನ್ನು ಭಕ್ಷಿಸುತ್ತವೆ.
  • ಎಳೆ ಸಸಿಗಳ ಮೃದು ಕಾಂಡವನ್ನೂ ತಿನ್ನುತ್ತದೆ.
  • ಹೂವುಗಳನ್ನು ತಿಂದು  ಹಾನಿ ಮಾಡಿ ಫಸಲಿಗೆ ತೊಂದರೆ ಮಾಡುತ್ತದೆ.
  • ಹಣ್ಣು ಹಂಪಲಿನ ಸಿಪ್ಪೆಯ ಮೇಲೆ ಕುಳಿತು ಅಲ್ಲಿನ ಭಾಗವನ್ನು ತಿನ್ನುತ್ತವೆ.
  • ನೆಲಕ್ಕೆ ಹತ್ತಿರವಾಗಿ ಬೆಳೆಯುವ ಹಣ್ಣೂ ಹಂಪಲು ಗಿಡಗಳಿಗೆ ಇದರ ಹಾವಳಿ ಜಾಸ್ತಿ.
  • ಸ್ಟ್ರಾಬೆರ್ರಿ, ಟೊಮಾಟೋ, ಅನನಾಸು, ಬೆಂಡೆ, ಹತ್ತಿ , ಮುಂತಾದ ಹಲವಾರು ಬೆಳೆಗಳಿಗೆ ಭಾರೀ ಹಾನಿಮಾಡುತ್ತವೆ
  • ಎಳೆ ಪ್ರಾಯದ ಅಡಿಕೆ ಮರದ ಮೇಲೆ ಏರಿ ಅಲ್ಲಿ ಏಳೆ ಸಿಂಗಾರವನ್ನು ತಿನ್ನುವ ಮೂಲಕ  ಫಸಲು ಕಡಿಮೆಯಾಗುವಂತೆ ಮಾಡುತ್ತವೆ.
  • ಲಿಂಬೆ ಕಾಯಿ, ಪಪ್ಪಾಯಿ ಗಿಡ ಕಾಯಿಗಳ ರಸ ಹೀರಿ ತೊಂದರೆ ಮಾಡುತ್ತವೆ
  • ಆರೋಗ್ಯವಂತ  ಗಿಡ, ರೋಗ ಪೀಡಿತ ಗಿಡಗಳ ರಸ ಹೀರಿ ಪರಸ್ಪರ ರೋಗ ವರ್ಗಾವಣೆ ಮಾಡುತ್ತದೆ.
  • ಹೆಚ್ಚಾಗಿ ನಂಜಾಣು ರೋಗ(ವೈರಸ್) ಹೀಗೆ ಪ್ರಸಾರವಾಗುತ್ತದೆ.

ಹತೋಟಿ:

  • ಬಸವನ ಹುಳು ಮತ್ತು ಸಿಂಬಳದ ಹುಳುಗಳು ನೆರಳಿರುವ, ಕೊಳೆಯುವ ವಸ್ತುಗಳಿರುವಲ್ಲಿ ಹೆಚ್ಚು.
  • ಮಳೆಗಾಲದಲ್ಲಿ ಹಾವಸೆಗಳೇ ಇದರ ಆಹಾರ.
  • ಬಾಳೆ ಬೆಳೆಯುವಲ್ಲಿ ಅಧಿಕವಾಗಿರುತ್ತವೆ.
  • ಗೋಡೆಯ ಸೆರೆಗಳಲ್ಲಿ  ಕಲೆ ಹೆಚ್ಚು ಇರುವಲ್ಲಿಯೂ ಇರುತ್ತವೆ.
  • ಸಾಧ್ಯವಾದಷ್ಟು  ಹೆಕ್ಕಿ  ಅದನ್ನು ಶೇ. 10 ಸಾಂದ್ರತೆಯ ಉಪ್ಪು ನೀರಿನಲ್ಲಿ ಹಾಕಿ ನಾಶಮಾಡಬೇಕು.
  • ಮೊದಲು ದಿನಾಲೂ ಹೆಕ್ಕಿ ನಾಶಮಾಡಬೇಕು.
  • ಸಂಖ್ಯೆ ಕಡಿಮೆಯಾದ ನಂತರ ವಾರಕ್ಕೊಮ್ಮೆ ಹೆಕ್ಕಿದರೂ ಸಾಕು.
  • ಮದ್ಯಾಹ್ನದ ಮೇಲೆ ಅಥವಾ ಸಂಜೆ ಹೊತ್ತು  ಟಾರ್ಚ್ ಲೈಟ್ ಹಾಕಿ ಹೆಕ್ಕಿದರೆ ಹೆಚ್ಚು ಸಂಖ್ಯೆಯ ಹುಳು ಸಿಗುತ್ತದೆ ಮತ್ತು ಇದರಿಂದ  ನಿರ್ಮೂಲನೆ ಪರಿಣಾಮಕಾರಿಯಾಗುತ್ತದೆ.
  • ಹಗಲು ಹೊತ್ತು ಅವು ಎಲ್ಲಿ ಅಡಗಿರುತ್ತವೆ ಎಂಬುದನ್ನು ಪತ್ತೆ ಹಚ್ಚಬೇಕು.
  • ಸಾಧ್ಯವಾದಷ್ಟು ಅಲ್ಲಲ್ಲಿ ಗೋಣಿ ಚೀಲ ಮರದ ಹಲಗೆಯನ್ನು ಹಾಕಿ ಇಟ್ಟರೆ ಅದರ ಅಡಿ ಭಾಗದಲ್ಲಿ ಅವು ಸೇರಿಕೊಳ್ಳುತ್ತವೆ.
  • ಉಪ್ಪು , ತಾಮ್ರ ಮತ್ತು ಸುಣ್ಣ ಇದಕ್ಕೆ  ದೂರ. ಬಸವನ ಹುಳು ಮತ್ತು ಸಿಂಬಳದ ಹುಳುಗಳ  ಮೇಲೆ ಉಪ್ಪಿನ ದ್ರಾವಣ, ತಾಮ್ರದ ಸಲ್ಫೇಟ್ ದ್ರಾವಣ , ಸಾಬೂನಿನ ನೀರು ಅಥವಾ ಸುಣ್ಣ ಬಿದ್ದರೆ ಅದು ಉಸಿರಾಟ ಸಮಸ್ಯೆಗೊಳಪಟ್ಟು ಸಾಯಬಹುದು.
  • ಸತ್ತ  ಹುಳುಗಳನ್ನು ವಿಷಕಾರಿಯಲ್ಲದ ಕಾರಣ ಕಂಪೋಸ್ಟು ಗುಂಡಿಗೆ ಹಾಕಬಹುದು. ಇದರಲ್ಲಿ ಸಾರಜನಕದ ಅಂಶ ಇರುತ್ತದೆ.

ಜೀವಿಗಳ ಅಭಿವೃದ್ದಿಗೆ ಅವಕಾಶವಾಗುವ ಸನ್ನಿವೇಶಗಳನ್ನು ಕಡಿಮೆ ಮಾಡಿ ಇದನ್ನು ಹತೋಟಿ ಮಾಡಬಹುದು.

ಟ್ರಾಪ್ ಗಳು:

  • ಹುಳುಗಳನ್ನು  ಆಕರ್ಷಣೆ ಮಾಡಲು ನಾವೇ  ಟ್ರಾಪ್ಗಳನ್ನು ಮಾಡಿಕೊಳ್ಳಬಹುದು.
  • ಇದರಿಂದ ಹುಳುಗಳನ್ನು  ನಾಶಮಾಡಲು ಅನುಕೂಲ.
  • ಮರದ ಹಲಗೆಗಳನ್ನು  ಓರೆಯಾಗಿ ಗೋಡೆಗೆ ತಾಗಿಸಿ  ಇಡುವುದುಹೂ ಕುಂಡಗಳನ್ನು ಒಂದು ಬದಿ ಸ್ವಲ್ಪ ಎತ್ತಿ ಅಲ್ಲಲ್ಲಿ ಕವುಚಿ ಹಾಕಿದರೆ ಅಲ್ಲಿಗೆ ಹಗಲು ಹೊತ್ತು ಅವು ಅಡಗಿಕೊಳ್ಳಲು ಬರುತ್ತವೆ
  • ನಂತರ ಅವುಗಳನ್ನು ಹಿಡಿದು ನಾಶ ಮಾಡುವುದು ಸುಲಭ. ಪ್ಲಾಸ್ಟಿಕ್ ತೊಟ್ಟೆಯೊಳಗೆ ತುಂಬಿ ಗಾಳಿಯಾಡದಂತೆ  ಮೂರು ನಾಲ್ಕು ದಿನ ಮುಚ್ಚಿಟ್ಟರೆ ಅವು ಸಾಯುತ್ತದೆ.
  • ಅನಂತರ ಅದನ್ನು ಕಂಪೋಸ್ಟು   ಹಾಕಬಹುದು. ಸಕ್ಕರೆ ನೀರು ಮತ್ತು ಈಸ್ಟ್ ಮಿಶ್ರಣ ಮಾಡಿದ ಕಳಿತ ದ್ರಾವಣಕ್ಕೂ  ಹುಳುಗಳು ಆಕರ್ಷಿತವಾಗುತ್ತವೆ.
  • ಬೀಯರ್ಗೂ ಇದು ಆಕರ್ಷಿತವಾಗುತ್ತದೆ. ಬಸವನ ಹುಳು ಮತ್ತು ಸಿಂಬಳದ ಹುಳು ಆಕರ್ಷಿಸುವ ಟ್ರಾಪ್ ಗಳು ಲಭ್ಯವಿದೆ.
  • ನೆಲಕ್ಕೆ  ಪ್ಲಾಸ್ಟಿಕ್ ಹೊದಿಕೆ ಹಾಕಿದರೆ  ಅದರೊಳಗೆ ಬಿಸಿ ಏರ್ಪಟ್ಟು  ಹುಳುವಿನ ಮೊಟ್ಟೆಗಳು ನಾಶವಾಗುತ್ತವೆ.

ಮರಮಟ್ಟಿನ ಬೆಳೆಗಳಿಗೆ  ಇವುಗಳಿಂದಾಗುವ ಹಾನಿಯನ್ನು ಕಡಿಮೆ ಮಾಡಲು  ಸುಣ್ಣ ಮತ್ತು ಡೆಲ್ಟಾಮೆಥ್ರಿನ್ (Deltamethrin) ಪುಡಿಯನ್ನು  10 : 2 ಪ್ರಮಾಣದಲ್ಲಿ ಮಿಶ್ರಣ ಮಾಡಿ ಮರದ ಕಾಂಡಕ್ಕೆ  ಪೈಂಟ್ನಂತೆ ಲೇಪನ ಮಾಡಿದಂತೆ ಲೇಪಿಸಿದರೆ ಹುಳುಗಳು ಹರಿದು ಹೋಗಲು ಅನನುಕೂಲವಾಗುತ್ತದೆ. ಮರಗಳಲ್ಲಿ ನೆಲಕ್ಕೆ ಬಾಗಿದ ಗೆಲ್ಲುಗಳನ್ನು  ತೆಗೆಯಬೇಕು.

  • ರಾಸಾಯನಿಕವಾಗಿ ಹತೋಟಿ ಮಾಡಲು  ಮೆಟಾಲ್ಡಿಹೈಡ್, ಐರನ್ಫೋಸ್ಫೇಟ್ಗಳನ್ನು ಬಳಸಬಹುದು.
  • ಇದರಲ್ಲಿ  ಹುಳುಗಳು ಸಾಯುತ್ತವೆ. ಆದರೆ ಇದನ್ನು ತಿಂದ ಬೆಕ್ಕು  ನಾಯಿಗಳೂ ಸಾಯಬಹುದು.
  • ಕೈಗೆ ಗ್ಲೌಸ್ ಹಾಕಿ ಹಿಡಿದು ಕೊಲ್ಲುವುದು  ಉತ್ತಮ.

ಅನವಶ್ಯಕವಾಗಿ ಇವುಗಳನ್ನು ಕೊಲ್ಲಬೇಕಾಗಿಲ್ಲ. ಬೆಳೆಗಳಿಗೆ ಹಾನಿ ಮಾಡುತ್ತಿದ್ದು ತುಂಬಾ ನಷ್ಟವಾಗುತ್ತದೆ ಎಂದಾದರೆ ಮಾತ್ರ ಇದರ ನಾಶಕ್ಕೆ ಕ್ರಮ ಕೈಗೊಳ್ಳಬೇಕು.

Leave a Reply

Your email address will not be published. Required fields are marked *

error: Content is protected !!