ಗೇರು – ಗೊಬ್ಬರ ಕೊಟ್ಟರೆ ಬಂಪರ್ ಇಳುವರಿ ಪಡೆಯಬಹುದು.

by | Sep 19, 2020 | Cashew (ಗೇರು) | 0 comments

ಗೇರು ಬೆಳೆಗೆ ವರ್ಷದಲ್ಲಿ 3 ತಿಂಗಳು ಮಾತ್ರ ಕೆಲಸ, ನೀರಾವರಿ ಬೇಡ. ಉತ್ತಮವಾಗಿ ಗೊಬ್ಬರ ಕೊಟ್ಟು ನಿಗಾ ವಹಿಸಿ ಬೆಳೆದರೆ 5-6  ವರ್ಷದ ಮರದಲ್ಲಿ 10 ಕಿಲೋ ತನಕ ಇಳುವರಿ ಪಡೆಯಬಹುದು. ಕನಿಷ್ಟ 1000 ರೂ ಆದಾಯಕ್ಕೆ ತೊಂದರೆ ಇಲ್ಲ ಎಂಬ ಕಾರಣಕ್ಕೆ ರೈತರು ತಮ್ಮಲ್ಲಿ ಖಾಲಿ ಇರುವ ಸ್ಥಳದಲ್ಲಿ ಗೇರು ಬೆಳೆ ಬೆಳೆಸಿದ್ದಾರೆ. ಬರೇ ನೆಟ್ಟರೆ ಸಾಲದು ಅದಕ್ಕೆ ಅಗತ್ಯ ಪೊಷಕಗಳನ್ನು ಕಾಲ ಕಾಲಕ್ಕೆ ಕೊಟ್ಟರೆ ಉತ್ತಮ ಇಳುವರಿ ಪಡೆಯಲು ಸಾಧ್ಯ.    

  • ಗೇರು ಮರ ಚೆನ್ನಾಗಿ ಚಿಗುರಿ, ಉದ್ದ ಉದ್ದದ ಚಿಗುರುಗಳನ್ನು ಬಿಟ್ಟರೆ ಅದರಲ್ಲಿ ದೊಡ್ಡ ಹೂ ಗೊಂಚಲು ಬರುತ್ತದೆ.
  • ಅದರಲ್ಲಿ ಹೆಚ್ಚು ಹೂವುಗಳೂ ಇರುತ್ತವೆ.  ಅದಷ್ಟೇ ಅಲ್ಲದೆ ಹೂ ಗೊಂಚಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣುಹೂವುಗಳೂ ಇರುತ್ತದೆ.
  • ದೊಡ್ಡ ಹೂ ಗೊಂಚಲು, ಹೆಚ್ಚು ದ್ವಿಲಿಂಗೀಯ ಹೂವುಗಳೂ ಇರಬೇಕಾದರೆ ಸಾಕಷ್ಟು ಪೋಷಕಗಳನ್ನು ಕೊಡುವುದು ತುಂಬಾ ಅಗತ್ಯ.

 ಗೇರು ಬೆಳೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಲು ಕಷ್ಟವಿಲ್ಲ. ಉತ್ತಮ ಇಳುವರಿ ಕೊಡಬಲ್ಲ ತಳಿ, ಕಾಲಕಾಲಕ್ಕೆ ಸರಿಯಾಗಿ ಪೋಷಕಾಂಶಗಳನ್ನು  ಒದಗಿಸುವುದರಿಂದ 10 ವರ್ಷದ ಮರವೊಂದರಿಂದ ಕನಿಷ್ಟ 10 ಕಿಲೋ ಕಚ್ಚಾ ಗೇರು ಬೀಜದ ಇಳುವರಿ ಪಡೆಯುವವ ಹಲವಾರು ಬೆಳೆಗಾರರು ನಮ್ಮಲ್ಲಿದ್ದಾರೆ.

ಗೊಬ್ಬರ ಕೊಡುವ ಮುಂಚೆ ಬುಡ ಭಾಗವನ್ನು ಕಳೆಗಳಿಲ್ಲದಂತೆ ಮಾಡುವುದರಿಂದ ಮರಕ್ಕೆ ಗೊಬ್ಬರ ಪೂರ್ತಿಯಾಗಿ ಲಭ್ಯವಾಗುತ್ತದೆ.

ಎರಡು ಬಾರಿ ಗೊಬ್ಬರ ಕೊಡಬೇಕು:

  • ಗೇರು ಮರಗಳಿಗೆ ಪೋಷಕಾಂಶಗಳನ್ನು ಕೊಡುವಾಗ ಎರಡು ಬಾರಿ ಕೊಡಬೇಕು.
  • ಮೊದಲ ಕಂತನ್ನು ಮೇ ಕೊನೆ ವಾರದಿಂದ ಜೂನ್ ಎರಡನೇ ವಾರದ ಒಳಗೆ  ಮಳೆ ಬಂದು ಮಣ್ಣು ಮೆದುವಾದ ತಕ್ಷಣ ಕೊಡಬೇಕು.
  • ಎರಡನೇ ಕಂತನ್ನು  ಸಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಕೊಡಬೇಕು.
  • ಮೊದಲ ಕಂತಿನ ಗೊಬ್ಬರವು ಮರಕ್ಕೆ ಬೆಳವಣಿಗೆಗೆ ಹೆಚ್ಚಿನ ಪ್ರಯೋಜನವನ್ನು  ನೀಡಿದರೆ, ಎರಡನೇ ಕಂತಿನ ಗೊಬ್ಬರ ಆ ಸೀಸನ್‍ನ ಫಸಲಿಗೆ ಹೆಚ್ಚು ಪ್ರಯೋಜನವನ್ನು  ಕೊಡುತ್ತದೆ.
  • ಅಧಿಕ ಮಳೆಯಾಗುವ ಕರಾವಳಿಯಲ್ಲಿ ಆಗಸ್ಟ್- ಸಪ್ಟೆಂಬರ್ ತಿಂಗಳಲ್ಲಿ ಮಾತ್ರ ಕೊಟ್ಟರೆ ಸಾಕು ಎನ್ನುತ್ತಾರೆಯಾದರೂ ಎರಡು ಬಾರಿ ಕೊಟ್ಟಾಗ ಉತ್ತಮ ಫಲಿತಾಂಶ ಕಂಡು ಬಂದಿದೆ.
  • ಆದರೆ ಇಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯುವಿಕೆ ಪ್ರಾರಂಭವಾದ ನಂತರ ಕೊಟ್ಟರೆ ನೀರಿನಲ್ಲಿ ಕೊಚ್ಚಿ ಹೋಗಬಹುದು.
  • ಈ   ಸಮಯದಲ್ಲಿ ಮಣ್ಣಿನಲ್ಲಿ ತೇವಾಂಶ ಇರುವ ಕಾರಣ ಪೋಷಕಗಳು ಸಮರ್ಪಕವಾಗಿ ಲಭ್ಯವಾಗುತ್ತದೆ.

ಒಂದು ಗೇರು ಗಿಡಕ್ಕೆ ಶಿಫಾರಿತ ಪ್ರಮಾಣದ ಪೋಷಕಾಂಶ:

ಮೊದಲ ವರ್ಷ :

  • 60 ಗ್ರಾಂ ಸಾರಜನಕ, 60 ಗ್ರಾಂ ರಂಜಕ ಮತ್ತು 60 ಗ್ರಾಂ ಪೊಟ್ಯಾಶಿಯಂ.
  • ಇದನ್ನು 150 ಗ್ರಾಂ ಯೂರಿಯಾ, 400 ಗ್ರಾಂ ಸೂಪರ್ ಫೋಸ್ಫೇಟ್ ಅಥವಾ ಶಿಲಾ ರಂಜಕ ಮತ್ತು 100 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ರೂಪದಲ್ಲಿ  ಕೊಡಬೇಕು.
  • 15:15:15 ಸಂಯೋಜನೆಯ ಗೊಬ್ಬರವಾದಲ್ಲಿ 400 ಗ್ರಾಂ ಕೊಡಬೇಕು.

ಮರದ ವೈಶಾಲ್ಯತೆಗೆ ಅನುಗುಣವಾಗಿ ಗೊಬ್ಬರ ಕೊಡಬೇಕು.

2 ನೇ ವರ್ಷ :  

  • 125 ಗ್ರಾಂ ಸಾರಜನಕ, 125 ಗ್ರಾಂ ರಂಜಕ ಮತ್ತು 125 ಗ್ರಾಂ ಪೊಟ್ಯಾಶಿಯಂ.
  • ಇದನ್ನು ಯೂರಿಯಾ 300 ಗ್ರಾಂ, 800 ಗ್ರಾಂ ಸೂಪರ್ ಫೋಸ್ಫೇಟ್, ಮತ್ತು 200 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್‍ರೂಪದಲ್ಲಿ ಕೊಡಬೇಕು.
  • 15:15:15 ಸಂಯೋಜನೆಯದ್ದನ್ನು 900 ಗ್ರಾಂ ನಷ್ಟು  ಕೊಡಬೇಕು.

ಮೂರನೇ ವರ್ಷ :

  • 250 ಗ್ರಾಂ ಸಾರಜನಕ, 125 ಗ್ರಾಂ ರಂಜಕ ಮತ್ತು 125 ಗ್ರಾಂ ಪೊಟ್ಯಾಶಿಯಂ.
  • ಇದನ್ನು  ಯೂರಿಯಾ 600 ಗ್ರಾಂ ನಷ್ಟು, ಸೂಪರ್ ಫೋಸ್ಫೇಟ್ 800 ಗ್ರಾಂ ಮತ್ತು 200 ಗ್ರಾಂ ಮ್ಯೂರೇಟ್ ಆಫ್ ಪೊಟ್ಯಾಶ್  ರೂಪದಲ್ಲಿ ಕೊಡಬೇಕು.
  • ಇದರ ಬದಲಿಗೆ 15:15:15 ಸಂಯೋಜನೆಯ ಗೊಬ್ಬರವಾದಲ್ಲಿ 900 ಗ್ರಾಂ ಅದು ಮತ್ತು ಹೆಚ್ಚುವರಿಯಾಗಿ 300 ಗ್ರಾಂ ಯೂರಿಯಾವನ್ನು ಅದರೊಂದಿಗೆ ಮಿಶ್ರಣ ಮಾಡಬೇಕು.

ನಾಲ್ಕನೇ ವರ್ಷ:

  • 500 ಗ್ರಾಂ ಸಾರಜನಕ, 125 ಗ್ರಾಂ ರಂಜಕ ಮತ್ತು 125 ಗ್ರಾಂ ಪೊಟ್ಯಾಶ್ ಗೊಬ್ಬರವನ್ನು ಕೊಡಬೇಕು.
ನೀರಿನ ಸಂರಕ್ಷಣೆಗೆ ಹೀಗೆ ಮಾಡಿ

ನೀರಿನ ಸಂರಕ್ಷಣೆಗೆ ಹೀಗೆ ಮಾಡಿ

5 ನೇ ವರ್ಷ ಮತ್ತು ನಂತರ:

  • 500 ಗ್ರಾಂ ಸಾರಜನಕ, 250 ಗ್ರಾಂ ರಂಜಕ ಮತ್ತು 250 ಗ್ರಾಂ ಪೊಟ್ಯಾಶಿಯಂ ಗೊಬ್ಬರವನ್ನು  ಕೊಡಬೇಕು.
  • ಶಿಫಾರಸು ಮಾಡಲಾಗಿದೆಯಾದರೂ ಇದನ್ನು 2 ಕಿಲೋ ಯೂರಿಯಾ, 2 ಕಿಲೋ ರಾಕ್ ಫೋಸ್ಫೇಟ್ ಮತ್ತು  1 ಕಿಲೋ ಮ್ಯುರೇಟ್ ಆಫ್ ಪೊಟ್ಯಾಶ್ ಕೊಡುತ್ತಿರುವ ಕಡೆ ಮರದಲ್ಲಿ ಗರಿಷ್ಟ ಇಳುವರಿ  ಕಂಡು ಬಂದಿದೆ. 
  • ಮರದ ಬೆಳವಣಿಗೆ ವಿಶಾಲವಾಗಿರುವ ಕಾರಣ ಅದಕ್ಕನುಗುಣವಾಗಿ ಪೋಷಕಾಂಶಗಳನ್ನು ಕೊಡಲೇ ಬೇಕಾಗುತ್ತದೆ.

ಗೊಬ್ಬರ ಕೊಡುವ ಸಿದ್ದತೆ: 

ಮಣ್ಣು ಸಂರಕ್ಷಣೆ ಅಗತ್ಯವಾಗಿ ಮಾಡಬೇಕು.

ಮಣ್ಣು ಸಂರಕ್ಷಣೆ ಅಗತ್ಯವಾಗಿ ಮಾಡಬೇಕು.

  • ಗೊಬ್ಬರವನ್ನು  ಕೊಡುವ ಮುನ್ನ ಬುಡಭಾಗದಲ್ಲೆ ಬೆಳೆದ ಕಳೆಯನ್ನು ಕಳೆ ನಾಶಕ ಸಿಂಪರಣೆ ಮಾಡಿ ನಾಶ ಮಾಡಿಕೊಳ್ಳಿ.
  • ನಂತರ ಮರದ ಗೆಲ್ಲುಗಳ ಹಬ್ಬುವಿಕೆಯ ವಿಸ್ತಾರಕ್ಕೆ ಸಮನಾಗಿ ನೆಲವನ್ನು ಸುಮಾರು 3-4 ಇಂಚು ಆಳಕ್ಕೆ ಒಂದು ಹಾರೆಯಷ್ಟು ಅಗಲಕ್ಕೆ ಕಣಿಯನ್ನು  ತೋಡಿ
  • ಅದರಲ್ಲಿ ಹಾಲಿ ಮತ್ತೆ ಅದೇ ಮಣ್ಣನ್ನು ಮುಚ್ಚಬೇಕು.
  • ತರಗೆಲೆ ಮತ್ತು ಯಾವುದಾದರೂ ಸಾವಯವ ತ್ಯಾಜ್ಯಗಳಿದ್ದಲ್ಲಿ ಬುಡಕ್ಕೆ  ಹಾಕಿ ಮುಚ್ಚಬೇಕು.
  • ಮಳೆಗಾಲದಲ್ಲಿ  ಮರದ ಬುಡ ಭಾಗದ ಮಣ್ಣು ಸವಕಳಿ ಆಗದಂತೆ  ತಡೆಯಲು ಆದ್ಯ ಗಮನ ಕೊಡಬೇಕು.
  • ಮಣ್ಣು ಸ್ವಲ್ಪವೂ ಕೊಚ್ಚಣೆಯಾಗಬಾರದು. ಮಣ್ಣು ಫಲವತ್ತಾದಷ್ಟು ಇಳುವರಿ ಹೆಚ್ಚಳವಾಗುತ್ತದೆ.
  • ಅದಕ್ಕಾಗಿ ನೀರಿನ ಓಟಕ್ಕೆ ವಿರುದ್ಧ ದಿಕ್ಕಿಗೆ ಓಟ ತಡೆದು ನೀರು ನಿಂತು ಹೆಚ್ಚುವರಿಯಾದುದು ಮಾತ್ರ ಹೊರ ಹೋಗುವಂತೆ ಬುಡಭಾಗದ ಮಣ್ಣು ಅಗೆದು ಟೇರೇಸಿಂಗ್ ಮಾಡಬೇಕು.
  • ಹೀಗೆ ಮಾಡಿದಲ್ಲಿ ಗೇರು ಮರದಲ್ಲಿ ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚುತ್ತಾ ಬರುತ್ತದೆ.

ಗೇರು ಮರಗಳನ್ನು ತೀರಾ ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲಿ ಬೆಳೆಸುವ ಕಾರಣ ಗೊಬ್ಬರವನ್ನು ಕೊಡುವುದು ತುಂಬಾ ಅಗತ್ಯ. ಮರವನ್ನು ಎಷ್ಟು ಉತ್ತಮವಾಗಿ ಬೆಳೆಸುತ್ತೇವೆಯೋ ಅಷ್ಟು ಅದರ ಆರೋಗ್ಯವೂ ಚೆನ್ನಾಗಿರುತ್ತದೆ. ಉತ್ತಮ ಇಳುವರಿ ಕೊಡುತ್ತದೆ. ರೋಗ- ಕೀಟ ಬಾಧೆ ಕಡಿಮೆ ಇರುತ್ತದೆ. ಈಗ ಗೊಬ್ಬರ ಕೊಟ್ಟರೆ ಅದನ್ನು ಚೆನ್ನಾಗಿ ಸ್ವೀಕರಿಸಿ ಫಸಲಿಗೆ ಸಹಕಾರಿಯಾಗುತ್ತದೆ.
End of the article:——————————————–
Search words: cashew crop# Cashew garden management# Cashew maintenance# Cashew manure schedule# dry land crop# Cashew# high yield technique#

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!