ಅಡಿಕೆ ಬೆಳೆಗೆ ಯಾವಾಗ ಸಮಯಕ್ಕೆ ಯಾವ ಗೊಬ್ಬರ ಸೂಕ್ತ?

ಅಡಿಕೆ ಬೆಳೆಗೆ ಯಾವಾಗ ಸಮಯಕ್ಕೆ ಯಾವ ಗೊಬ್ಬರ

ಅಡಿಕೆ, ತೆಂಗು ಮುಂತಾದ ತೋಟಗಾರಿಕಾ ಬೆಳೆಗಳಿಗೆ ಆಯಾಯಾ ಬೆಳವಣಿಗೆ ಹಂತದಲ್ಲಿ ನಿರ್ದಿಷ್ಟ ಪೋಷಕಗಳನ್ನು ಕೊಡುವುದರಿಂದ ಫಸಲು  ಹೆಚ್ಚಾಗುತ್ತದೆ, ಫಸಲಿನ ಗುಣಮಟ್ಟವೂ ಸಹ ಉತ್ತಮವಾಗಿರುತ್ತದೆ. ಸಸ್ಯದ ಹಸುರು ಭಾಗದ  ಬೆಳವಣಿಗೆಗೆ ಅನುಕೂಲವಾಗುವ ಪೋಷಕವನ್ನು ವರ್ಷದುದ್ದಕ್ಕೂ, ಹೂವು ಬರಲು ಸಹಾಯಕವಾಗಿವ ಗೊಬ್ಬರವನ್ನು ವರ್ಷದಲ್ಲಿ ಕೆಲವೇ ತಿಂಗಳುಗಳಲ್ಲಿಯೂ, ಕಾಯಿ ಬೆಳವಣಿಗೆಗೆ ಸಹಾಯಕವಾಗುವ ಪೋಷಕವನ್ನು ವರ್ಷದುದ್ದಕ್ಕೂ ಕೊಡುತ್ತಾ ಇದ್ದರೆ ಫಲಿತಾಂಶ ಉತ್ತಮವಾಗಿರುತ್ತದೆ.

ಅಡಿಕೆಯೊಂದೇ ಅಲ್ಲ ಎಲ್ಲಾ ಬೆಳೆಗಳಲ್ಲೂ ಅದರ ನಿರ್ದಿಷ್ಟ ಹಂತದ ಬೆಳವಣಿಗೆಗೆ ಅನುಕೂಲವಾಗುವಂತೆ ಪೊಷಕಗಳನ್ನು ಕೊಟ್ಟರೆ ಅದರ ಫಲವೇ ಭಿನ್ನವಾಗಿರುತ್ತದೆ. ಈ ತತ್ವವನ್ನು ಈ ತನಕ ಅಧಿಕ ವರಮಾನದ ಬೆಳೆಗಳಿಗೆ ಅನುಸರಿಸುತ್ತಿದ್ದರು. ಕಡಿಮೆ ವರಮಾನದ ಬೆಳೆಗಳಿಗೆ ಯಾರೂ ಹೆಚ್ಚು ನಿಗಾ ಕೊಟ್ಟು ಬೆಳೆಸುವ ಕ್ರಮವೇ ಇಲ್ಲ. ಈಗ ಅಡಿಕೆ ಬೆಳೆ ಎಂಬುದು ಅಧಿಕ ವರಮಾನದ ಬೆಳೆಗಳ ಸಾಲಿಗೆ ಸೇರಿದೆಯಾದುದರಿಂದ  ಗೊಬ್ಬರ ಕೊಡುವಾಗ ನಾವು ಹೆಚ್ಚು ಗಮನ ಕೊಟ್ಟರೆ ಅಧಿಕ ಫಸಲು ಸಿಗುತ್ತದೆ. 

ಮುಖ್ಯವಾಗಿ ಬೆಳೆಗಳಿಗೆ 6 ಬಗೆಯ ಪೋಷಕಗಳು ಅಗತ್ಯವಾಗಿ ಬೇಕು. ಸಾರಜನಕ, ರಂಜಕ, ಪೊಟ್ಯಾಶ್ ಕ್ಯಾಲ್ಸಿಯಂ , ಮೆಗ್ನೀಶಿಯಂ ಮತ್ತು ಗಂಧಕ ಎಂಬ ಈ 6 ಬಗೆಯ ಪೋಷಕಗಳೂ ಸಸ್ಯ ಬೆಳವಣಿಗೆ ಫಸಲು ಮುಂತಾದವುಗಳ ಮೇಲೆ ಅದರದ್ದೇ ಆದ  ಪಾತ್ರವನ್ನು ಹೊಂದಿದೆ.ಪ್ರತೀಯೊಬ್ಬ ಕೃಷಿಕನೂ ಬೆಳೆ ಪೋಷಣೆ ಮಾಡುವಾಗ ಯಾವ ಸಮಯದಲ್ಲಿ ಈ ಪೋಷಕಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ ಆ ಸಮಯಕ್ಕೆ ಅನುಗುಣವಾಗಿ ಪೂರೈಕೆ ಮಾಡಬೇಕು. ಸಾಮಾನ್ಯವಾಗಿ ರಸಗೊಬ್ಬರಗಳನ್ನು ಯಾವಾಗ ಯಾವಾಗಲೋ ಕೊಟ್ಟರೆ ಅದು ಬೇಕಾದ ಸಮಯದಲ್ಲಿ ಬಳಕೆ ಆಗುವುದಿಲ್ಲ. ಹಸಿವು ಮತ್ತು ಅಗತ್ಯ ಇದ್ದಾಗ ಕೊಡುವಂತೆ ಇದನ್ನು ಕೊಟ್ಟರೆ ಫಲ ಜಾಸ್ತಿ.

ಸಾರಜನಕವನ್ನು ಯಾವಾಗ ಕೊಡಬೇಕು:

ಅಡಿಕೆ ಬೆಳೆಗೆ ವರ್ಷದ ಎಲ್ಲಾ ಕಾಲದಲ್ಲೂ ಸ್ವಲ್ಪ ಕಡಿಮೆ ಮತ್ತು ಹೆಚ್ಚು ಎಂಬಂತೆ ಸಾರಜನಕ ಕೊಡಲೇ ಬೇಕಾಗುತ್ತದೆ. ಯಾಕೆಂದರೆ ಅಡಿಕೆ ಸಸ್ಯ ವರ್ಷದ ಎಲ್ಲಾ ಋತುಮಾನದಲೂ ಹಸುರು ಗರಿ (ಏಲೆ)ಗಳನ್ನು ಬಿಡುತ್ತಾ ಇರುತ್ತದೆ. ಹಾಗಾಗಿ ಸಾರಜನಕ  ಪೋಷಕ ಹಸುರು ಬೆಳೆವಣಿಗೆ foliage growth ಇರುವ ವರೆಗೂ ಅಗತ್ಯವಾಗಿ ಬೇಕು. ಸಸ್ಯದ ಎಲೆಯಲ್ಲಿ ಹೊಳಪುಳ್ಳ ದಟ್ಟ ಹಸುರು ಎಲೆಗಳು ಇದ್ದರೆ ಅದು ಉತ್ತಮವಾಗಿ ಆಹಾರ ತಯಾರಿಸಿಕೊಂಡು ಚೆನ್ನಾಗಿ ಬೆಳೆಯುತ್ತದೆ ಎಂದರ್ಥ. ಇದು ವರ್ಷದ ಉದ್ದಕ್ಕೂ  ಸಸ್ಯಗಳಲ್ಲಿ ಇರಬೇಕು. ಮಳೆಗಾಲ ಪ್ರಾರಂಭದಲ್ಲಿ ಗೊಬ್ಬರ ಕೊಡುವ ಸಮಯದಲ್ಲಿ ಸಾರಜನಕವನ್ನು ಕಡಿಮೆ ಮಾಡುವುದು ಎಲ್ಲಾ ದೃಷ್ಟಿಯಿಂದಲೂ ಉತ್ತಮ. ಮಳೆಗಾಲ ಪ್ರಾರಂಭವಾಗುವಾಗ ಎಲ್ಲಾ ಬೆಳೆಗಾರರೂ ಅಡಿಕೆ, ತೆಂಗಿಗೆ ಗೊಬ್ಬರ ಕೊಡಲೇ ಬೇಕು. ಯಾಕೆಂದರೆ ಬೇಸಿಗೆ ಕಳೆದು ಮಳೆಗಾಲ ಬರುವಾಗ ಮಣ್ಣು ಪೂರ್ತಿ ತೇವಾಂಶ  ಪಡೆದುಕೊಂಡು ಹೊಸ ಹೊಸ ಬೇರುಗಳನ್ನು ಬುಡುತ್ತದೆ. ಬೇರು ವಲಯವೂ ವಿಸ್ತಾರವಾಗುತ್ತದೆ. ಹಾಗಾಗಿ ಪೋಷಕ ಹೀರಿಕೊಳ್ಳುವಿಕೆಯೂ ಹೆಚ್ಚಾಗಿರುತ್ತದೆ. ಆಗ ಮುಖ್ಯವಾಗಿ ರಂಜಕ ಮತ್ತು ಪೊಟ್ಯಾಶ್ ಗೊಬ್ಬರ ಹೆಚ್ಚು ಅಗತ್ಯವಾಗಿರುತ್ತದೆ. ಈ ಸಮಯದಲ್ಲಿ ವರ್ಷದಲ್ಲಿ ಕೊಡುವ ಮಣ್ಣಿನ ರಸಸಾರ ಸ್ಥಿತಿಯನ್ನು (pH) ಸರಿಮಾಡಬಲ್ಲ ಸುಣ್ಣವನ್ನೂ ಅರ್ಧ ಪಾಲು ಕೊಡುವುದು ಸೂಕ್ತ.

ಮಳೆಗಾಲದಲ್ಲಿ ಸಾರಜನಕವನ್ನು ಹೆಚ್ಚು ಕೊಟ್ಟರೆ ಅಥವಾ ಬೇರೆ ಸಮಯದಲ್ಲಿ ಕೊಟ್ಟಂತೆ ಕೊಟ್ಟರೆ ಅದು ಸಸ್ಯಕ್ಕೆ ಹೆಚ್ಚಾಗುತ್ತದೆ. ಕಾರಣ ಈ ಸಮಯದಲ್ಲಿ ಮಳೆ, ಸಿಡಿಲು, ಮುಂಚುಗಳಿಂದ ಮಣ್ಣಿಗೆ ಸಾರಜನಕ ಹೆಚ್ಚಾಗಿ ಸಿಗುತ್ತದೆ. ಅದು ಮತ್ತು ನಾವು ಕೊಡುವುದು ಸೇರಿದಾಗ ಸಾರಜನಕ ಹೆಚ್ಚಾಗಿ ಮುಂದೆ ಸಸ್ಯ ಬೆಳವಣಿಗೆ ಹೆಚ್ಚಾಗುತ್ತದೆ. ರೋಗ ರುಜಿನಗಳಿಗೆ ಬೇಗನೆ ತುತ್ತಾಗುತ್ತದೆ. ಹಾಗಾಗಿ ಈಗ ಸುಣ್ಣ + ರಂಜಕ + ಪೊಟ್ಯಾಶ್  ಮತ್ತು ಗಂಧಕವನ್ನು  ಕೊಡಬಹುದು. ಸಾರಜನಕ ಕಡಿಮೆ ಇರುವ 10:26:26 ಅಂತಹ ಗೊಬ್ಬರವನ್ನು ಕೊಡಬಹುದು. ಈ ಸಮಯದಲ್ಲಿ ನಿಧಾನವಾಗಿ ಲಭ್ಯವಾಗುವ ಸಾರಜನಕ ಗೊಬ್ಬರವನ್ನು ಕೊಡುವುದು ಸೂಕ್ತ. ಯೂರಿಯಾ ಗೊಬ್ಬರ ಬೇಗ ದೊರೆತು ಬೇಗ ಮುಗಿಯುತ್ತದೆ. ಆದರೆ  ನಿಧಾನ ಸಿಗುವಂತದ್ದು ಹೆಚ್ಚು ಸಮಯದ ತನಕ ದೊರೆಯುತ್ತಾ ಇರುತ್ತದೆ.

ಮಳೆಗಾಲದುದ್ದಕ್ಕೂ ಪ್ರತೀ ತಿಂಗಳೂ ಗೊಬ್ಬರ ಕೊಡುವುದು ಅಗತ್ಯ. ಈ ಸಮಯದಲ್ಲಿ ರಂಜಕ ಮತ್ತು ಪೊಟ್ಯಾಶ್ ಗೊಬ್ಬರಗಳಷ್ಟೇ ಸಾಕು.  ಅಕ್ಟೋಬರ್ ನಂತರ ಪ್ರತೀ ತಿಂಗಳೂ ಶಿಫಾರಿತ ಪ್ರಮಾಣದ 120 ಗ್ರಾಂ ಸಾರಜನಕವನ್ನು 6 ಸಮ ಕಂತುಗಳಲ್ಲಿ ಕೊಡುತ್ತಾ ಇದ್ದರೆ ಅನುಕೂಲ. ಸುಮಾರು 10-20 ಗ್ರಾಂ ನಷ್ಟು ಮಳೆಗಾಲದ ಪ್ರಾರಂಭದಲ್ಲಿ ಕೊಡಬಹುದು.

ಸಮತೊಳನದ ಗೊಬ್ಬರ - ವಿಭಜಿತ ಕಂತುಗಳಲ್ಲಿ ಗೊಬ್ಬರ ಕೊಟ್ಟಾಘಾ ಇಳುವರಿ ಹೆಚ್ಚು

ರಂಜಕ ಗೊಬ್ಬರ ಯಾವಾಗ ಕೊಡಬೇಕು?

ರಂಕಜ ಗೊಬ್ಬರವನ್ನು ಮಳೆಗಾಲ ಪ್ರಾರಂಭವಾಗಿ ಮಳೆಗಾಲ ಮುಗಿದು ಚಳಿಗಾಲ ಪ್ರಾರಂಭವಾಗುವ ತನಕ ವಿಭಜಿತ ಕಂತುಗಳ ಮೂಲಕ ಕೊಡುತ್ತಾ ಬರಬೇಕು. ಚಳಿಗಾಲ ಪ್ರಾರಂಭವಾಗಿ 1-2 ಹೂ ಗೊಂಚಲು ಹೊರ ಹಾಕಿದ ನಂತರ ರಂಜಕ ಗೊಬ್ಬರವನ್ನು ನಿಲ್ಲಿಸಿ ಸಾರಜನಕ ಮತ್ತು ಪೊಟ್ಯಾಶ್ ಗೊಬ್ಬರವನ್ನು ಮಾತ್ರ ವಿಭಜಿತ ಕಂತುಗಳಲ್ಲಿ ಕೊಡುತ್ತಾ ಬರಬೇಕು.

ರಂಜಕ ಗೊಬ್ಬರವು  ಬೇರಿನ ಬೆಳವಣಿಗೆ Root Growth ಮತ್ತು ಪುಷ್ಪಬೆಳವಣಿಗೆಯಲ್ಲಿ flower formation ಮಹತ್ವದ ಕೆಲಸ ಮಾಡುವಂತದ್ದು. ಚಳಿಗಾಲದ ವಿಪರೀತ ಚಳಿಯಿಂದ ಸಸ್ಯಗಳು ಸೊರಗದಂತೆ ತಡೆಯಲು strengthen the plant for winter ರಂಜಕ ಪೋಷಕವು ನೆರವಾಗುತ್ತದೆ. ಮಳೆಗಾಲದಲ್ಲಿ ರಂಜಕ ಗೊಬ್ಬರವನ್ನು ಕೊಡುವುದರಿಂದ ಸಸ್ಯಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಣ್ಣಿನಲ್ಲಿ ತೇವಾಂಶ ಇರುವಾಗ ಸೂಕ್ಷ್ಮಾಣು  ಜೀವಿಗಳ ಚಟುವಟಿಕೆ ಹೆಚ್ಚು. ರಂಜಕ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ.ಮೇ ತಿಂಗಳಿನಿಂದ ಪ್ರಾರಂಭವಾಗಿ ಅಕ್ಟೋಬರ್  ನವೆಂಬರ್ ತನಕ ಶಿಫಾರಿತ ಪ್ರಮಾಣದ 50-60 ಗ್ರಾಂ ರಂಜಕವನ್ನು ಹಂಚಿಕೊಂಡು ಕೊಡಬೇಕು. ಪ್ರತೀ ತಿಂಗಳೂ 10 ಗ್ರಾಂ ಪ್ರಮಾಣದಲ್ಲಿ ರಂಜಕವನ್ನು ಕೊಡುತ್ತಾ ಇದ್ದರೆ ಹೂ ಗೊಂಚಲು ಉತ್ತಮವಾಗಿ ಬರುತ್ತದೆ.

ಪೊಟ್ಯಾಶಿಯಂ ಪೋಷಕಾಂಶವನ್ನು ಯಾವಗೆಲ್ಲಾ ಬಳಕೆ ಮಾಡಬಹುದು?

ಪೊಟ್ಯಾಶಿಯಂ ಪೋಷಕವು ವರ್ಷದ ಎಲ್ಲಾ ಸಮಯದಲ್ಲೂ ಸಸ್ಯಗಳಿಗೆ ಬೇಕಾಗುವ ಪೋಷಕವಾಗಿರುತ್ತದೆ. ಮರದ ಬೆಳವಣಿಗೆಗ ಸಾರಜಜನಕ ಸಹಕಾರಿಯಾದರೆ ಆ ಬೆಳವಣಿಗೆಯನ್ನು ಗಟ್ಟಿಮುಟ್ಟಾಗಿ ರಕ್ಷಿಸಿ ಕೊಂಡು ಹೋಗಲು ಪೊಟ್ಯಾಶಿಯಂ ಬೇಕಾಗುತ್ತದೆ. ನೀರೊತ್ತಾಯವನ್ನು ತಡೆಯುವ ಶಕ್ತಿ ಪೊಟ್ಯಾಶ್ ಪೋಷಕಕ್ಕೆ ಇದೆ. ಇದು ಸಸ್ಯಕ್ಕೆ ರೋಗ ಮತ್ತು ಕೀಟಗಳಿಂದ ರಕ್ಷಣೆ  ಕೊಡುವಲ್ಲಿ ಸಹಕರಿಸುತ್ತದೆ.

ಕ್ಯಾಲ್ಸಿಯಂ ಪೊಷಕವನ್ನು ಮಣ್ಣು ಸುಧಾರಣೆ ಉದ್ದೇಶಕ್ಕಾಗಿ ಬಳಸುವುದು ಮಳೆಗಾಲ ಪ್ರಾರಂಭದಲ್ಲಿ ಅರ್ಧ ಪಾಲು ಮತ್ತು ಮತ್ತು ಮಳೆ ಮುಗಿಯುವ ಸಮಯದಲ್ಲಿ ಅರ್ಧ ಪಾಲು ಕೊಡುವುದು. ಇನ್ನು ಸಸ್ಯಗಳ ಕೋಶ ನಿರ್ಮಾಣಕ್ಕಾಗಿ ಕೊಡುವ ಕ್ಯಾಲ್ಸಿಯಂ ಅನ್ನು ಕಾಯಿ ಕಚ್ಚುವ ಸಮಯದಲ್ಲಿ ಅಂದರೆ ವರ್ಷದಲ್ಲಿ ಎರಡು ಬಾರಿ ನವೆಂಬರ್ ಡಿಸೆಂಬರ್ ನಲ್ಲಿ ಮತ್ತು ಎಪ್ರೀಲ್ ಮೇ  ತಿಂಗಳಲ್ಲಿ  ಸ್ವಲ್ಪ ಸ್ವಲ್ಪ ಪ್ರಮಾಣ 10-20 ಗ್ರಾಂ ನಂತೆ ಕೊಡಬೇಕು.

ಯಾವ  ತಿಂಗಳು ಯಾವ ಗೊಬ್ಬರ ಕೊಡಬೇಕು:

ಅಕ್ಟೋಬರ್ ತಿಂಗಳಲ್ಲಿ ಗೊಬ್ಬರ ಕೊಡಲು ಪ್ರಾರಂಭಿಸುವುದು ಬಹುತೇಕ ಎಲ್ಲಾ ಬೆಳೆಗಾರರ ಬೇಸಾಯ ಕ್ರಮ. ಈ ಸಮಯದಲ್ಲಿ  ಹಿತ ಮಿತವಾಗಿ ಮಳೆ ಇರುವ ಕಾರಣ  ಮಣ್ಣಿಗೆ ಗೊಬ್ಬರವನ್ನು ಸೇರಿಸುವುದು ಸುಲಭ ಮತ್ತು ಫಲಕಾರಿ. ಅಡಿಕೆ ಮರದ ನಾಲ್ಕೂ ಮೂಲೆಗೆ ಭರ್ಚಿ ಮೂಲಕ ಅರ್ಧ ಅಡಿಯ ತೂತು ಮಾಡಿ ಗೊಬ್ಬರ ಕೊಡಿ. ತೂತು ಮಾಡಲು ಮಣ್ಣು ಮೆದುವಾಗಿರುವ ಕಾರಣ ಕಷ್ಟ ಇಲ್ಲ.

ತಿಂಗಳಿಗೊಮ್ಮೆ ಗೊಬ್ಬರ ಕೊಡುವುದು ಉತ್ತಮ ಬೆಳವಣಿಗೆ  ಸಹಾಯಕ

ವರ್ಷಕ್ಕೆ ಎರಡು ಕಂತುಗಳಲ್ಲಿ  (ಮಳೆಗಾಲ ಪ್ರಾರಂಭದಲ್ಲಿ ಮತ್ತು ಅಕ್ಟೋಬರ್ ತಿಂಗಳಲ್ಲಿ)ಗೊಬ್ಬರ ಕೊಡುವವರು ಈಗ ಸಾರಜನಕ + ರಂಜಕ+ ಪೊಟ್ಯಾಶ್ ಈ ಮೂರೂ ಗೊಬ್ಬರವನ್ನೂ ಕೊಡಬೇಕು. ಒಂದು ಅಡಿಕೆ ಮರಕ್ಕೆ ಉತ್ತಮ ಫಸಲಿಗೆ 120 ಗ್ರಾಂ ಸಾರಜನಕ, 50 ಗ್ರಾಂ ರಂಜಕ ಮತ್ತು ಪೊಟ್ಯಾಶ್ 150 ಗ್ರಾಂ ಶಿಫಾರಿತ. ಇದಕ್ಕೆ 10 ಗ್ರಾಂ ಹೆಚ್ಚಾದರೂ ತೊಂದರೆ ಇಲ್ಲ.ಸಾಕಷ್ಟು ಕೊಟ್ಟಿಗೆ ಗೊಬ್ಬರ ಕೊಟ್ಟಿದ್ದರೆ 20  ಗ್ರಾಂ ಕಡಿಮೆ ಆದರೂ ತೊಂದರೆ ಇಲ್ಲ. ಅಕ್ಟೋಬರ್ ಅಥವಾ ಸಪ್ಟೆಂಬರ್ ಕೊನೆಗೆ ಸಾರಜನಕ 75 ಗ್ರಾಂ ರಂಜಕ 30 ಗ್ರಾಂ ಮತ್ತು ಪೊಟ್ಯಾಶ್ 75 ಗ್ರಾಂ ಕೊಡಬಹುದು. ಅಂದರೆ 125 ಗ್ರಾಂ ಯೂರಿಯಾ,75 ಗ್ರಾಂ DAP  ಮತ್ತು 125  ಗ್ರಾಂ MOP ಕೊಡಬಹುದು. ಶಿಲಾ ರಂಜಕ ಕೊಡುವವರು 150 ಗ್ರಾಂ ಯೂರಿಯಾ  200  ಗ್ರಾಂ ರಾಕ್ ಫೋಸ್ಫೇಟ್ ಕೊಡಬಹುದು.

ಮಳೆಗಾಲ ಪ್ರಾರಂಭದಲ್ಲಿ ಸಾರಜನಕ 20  ಗ್ರಾಂ  ರಂಜಕ 20 ಗ್ರಾಂ ರಂಜಕ ಮತ್ತು 75 ಗ್ರಾಂ ಪೊಟ್ಯಾಶ್ ಕೊಡಬಹುದು. ಈಗ 20;20:0:13 ಗೊಬ್ಬರವನ್ನು 100 ಗ್ರಾಂ ಮತ್ತು 125  ಗ್ರಾಂ MOP ಗೊಬ್ಬರವನ್ನು ಕೊಡಬಹುದು. ಇಲ್ಲಿ ಸಾರಜನಕ ರಂಜಕ ಸ್ವಲ್ಪ ಕಡಿಮೆ ಆದರೂ ಕೊಟ್ಟಿಗೆ ಗೊಬ್ಬರ ಮತ್ತು ಇತರ ಸೊಪ್ಪು ಮುಂತಾದವುಗಳಿಂದ ಸಿಗುತ್ತದೆ. ಪೊಟ್ಯಾಶ್ ಮಾತ್ರ ಉಳಿದ ಮೂಲದಲ್ಲಿ ಸಿಗುವುದು ಕಡಿಮೆ ಆದ ಕಾರಣ ಶಿಫಾರಸಿನ ಪ್ರಮಾಣದಲ್ಲಿ ಕೊಡುವುದು ಸೂಕ್ತ.

ಪ್ರತೀ ತಿಂಗಳೂ ಗೊಬ್ಬರ ಕೊಡುವುದಾದರೆ ಸಾರಜನಕ ರಂಜಕ ಮತ್ತು ಪೊಟ್ಯಾಶ್ ನ ಪ್ರಮಾಣವನ್ನು 10 ಭಾಗ ಮಾಡಿ ಬರುವ ಪ್ರಮಾಣವನ್ನು ಹಂಚಿ ಹಾಕಬೇಕು. ಮಳೆ ಅಧಿಕ ಇರುವ ಪ್ರದೇಶದಲ್ಲಿ  ವಿಪರೀತ ಮಳೆ ಇರುವಾಗ ಎರಡೂ ತಿಂಗಳು ಗೊಬ್ಬರ ಕೊಡುವುದು ಕಷ್ಟವಾದರೆ ನಿಲ್ಲಿಸಬಹುದು.

ಮಳೆಗಾಲ ಪ್ರಾರಂಭದಲ್ಲಿ ಸಾರಜನಕ ಕಡಿಮೆ ಮಾಡಬೇಕು. ಅದನ್ನು ಅಕ್ಟೋಬರ್ – ನವೆಂಬರ್ – ಡಿಸೆಂಬರ್ ತಿಂಗಳ ಕಂತಿಗೆ ಸೇರಿಸಿ ಕೊಡಬೇಕು. ರಂಜಕವನ್ನು ಮಳೆಗಾಲದ ಪ್ರಾರಂಭದ ಕಂತಿನಲ್ಲಿ ಒಮ್ಮೆ ಮತ್ತು ಅಕ್ಟೋಬರ್ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ  ಮಾತ್ರ ಕೊಟ್ಟರೆ ಸಾಕು.

ಅಕ್ಟೋಬರ್ ತಿಂಗಳಿನಿಂದ ಮೇ ತಿಂಗಳ ತನಕ  ಸಾರಜನಕ ಮತ್ತು ಪೊಟ್ಯಾಶ್ ಅನ್ನು ಪ್ರತೀ ತಿಂಗಳೂ 10 ಗ್ರಾಂ ಮತ್ತು 15 ಗ್ರಾಂ ನಂತೆ ಕೊಡಬೇಕು.(ಯೂರಿಯಾ 20 ಗ್ರಾಂ.ಪೊಟ್ಯಾಶ್ 30 ಗ್ರಾಂ) ಇದನ್ನು 200 ಲೀ. ನೀರಿಗೆ 2 ಕಿಲೋ ಮತ್ತು 3 ಕಿಲೊ ಹಾಕಿ ಕಲಕಿ ಸೋಸಿ ರಸಾವರಿ ಮೂಲಕವೂ ಕೊಡಬಹುದು, 200 ಗಿಡಗಳಿಗೆ ಅಥವಾ ಪ್ರತೀ ಗಿಡಕ್ಕೆ 1 ಲೀ ಪ್ರಮಾಣದಲ್ಲಿ ಎರೆದೂ ಕೊಡಬಹುದು.

ಅಕ್ಟೋಬರ್ ತಿಂಗಳಲ್ಲಿ ಪ್ರತೀ ಮರಕ್ಕೆ 25 ಗ್ರಾಂ ಪ್ರಕಾರ ಸತುವಿನ ಸಲ್ಫೇಟ್ ಮತ್ತು ನವೆಂಬರ್ ತಿಂಗಳಲ್ಲಿ ಪ್ರತೀ ಮರಕ್ಕೆ 50 ಗ್ರಾಂ ಪ್ರಮಾಣದಲ್ಲಿ ಮೆಗ್ನೀಶಿಯಂ ಸಲ್ಫೇಟ್ ಕೊಡಬಹುದು. ಇದನ್ನು ಮಣ್ಣು ಪರೀಕ್ಷೆ ಮಾಡಿಸಿ ಕೊಡುವುದು ಸೂಕ್ತ.

ಸೂಕ್ಷ್ಮ ಪೋಷಕಾಂಶಗಳನ್ನು ಅನಗತ್ಯ ಕೊಡುವುದು ಬೇಕಾಗಿಲ್ಲ. ಕಾಡು ಸೊಪ್ಪು, ಕೊಟ್ಟಿಗೆ ಗೊಬ್ಬರ ಕೊಡುವ ಕಡೆ ಸೂಕ್ಷ್ಮ ಪೊಷಕಾಂಶ ಬೇಕಾಗಿಲ್ಲ. ಅದರಲ್ಲೂ ತಾಮ್ರ ಬೋರ್ಡೋ ದ್ರಾವಣದಿಂದ ಸಿಗುತ್ತದೆ. ಇನ್ನು ಬೋರಾನ್ ಅಡಿಕೆ ಮರಕ್ಕೆ ವರ್ಷಕ್ಕೆ 5-10 ಗ್ರಾಂ ತನಕ ಕೊಡಬಹುದು. ಸತು ಹೆಚ್ಚಾಗಿ ಬೇಕಾಗುತ್ತದೆ. ಅದಕ್ಕೆ  ಮಳೆಗಾಲ ಮುಗಿಯುವ ಸಮಯದಲ್ಲಿ ಸತುವಿನ ಸಲ್ಫೇಟ್ ಎಕ್ರೆಗೆ 25 ಕಿಲೋ ಎರಚಿ ಈ ಕೊರತೆ ನೀಗಿಸಬಹುದು. ಸೂಕ್ಷ್ಮ ಪೋಷಕಾಂಶಗಳನ್ನು ತಿಳಿದುಕೊಂಡು ಬಳಸಿ.

ನವೆಂಬರ್ ನಂತರ ಕೊಡುವ ಗೊಬ್ಬರದ ಜೊತೆಗೆ ಪ್ರತೀ ಮರಕ್ಕೆ 1 ಗ್ರಾಂ ಪ್ರಮಾಣದಲ್ಲಿ ನೀರಿನಲ್ಲಿ ಕರಗುವ ಬೋರಾನ್ ಕೊಡುವುದು ಒಳ್ಳೆಯದು. ಇದನ್ನು ಜೂನ್ ತನಕ ಮುಂದುವರಿಸಬಹುದು. ರಸಗೊಬ್ಬರದ ಜೊತೆಗೆ ಮಿಶ್ರಣ ಮಾಡಬಹುದು.

ಸಪ್ಟೆಂಬರ್ ತಿಂಗಳ ಕೊನೆಗೆ ಪ್ರತೀ ಮರಕ್ಕೆ 500 ಗ್ರಾಂ ನಂತೆ ಸುಣ್ಣವನ್ನು  ಹಾಕಬೇಕು. ಬಯಲು ಸೀಮೆಗೆ ಅಗತ್ಯವಿಲ್ಲ. ಇದು ಡೊಲೋಮೈಟ್ ಆದರೆ ಮೆಗ್ನೀಶಿಯಂ ಸಲ್ಫೇಟ್ ಕೊಡಬೇಡಿ.

ಅಡಿಕೆಗೆ ಪ್ರತೀ ದಿನ ಗೊಬ್ಬರ ಕೊಡುವ ಅಗತ್ಯ ಇಲ್ಲ. ಪ್ರತೀ ತಿಂಗಳು ಇನ್ನೂ ಅನುಕೂಲ ಇದ್ದರೆ 15 ದಿನಕ್ಕೊಮ್ಮೆ ಕೊಟ್ಟರೆ ಸಾಕು. ಅನವಶ್ಯಕ ಸಿಕ್ಕ ಸಿಕ್ಕವರ ಸಲಹೆ ಕೇಳದೆ ಅವರವರೇ ಪೋಷಕಗಳ ಪ್ರಮಾಣವನ್ನು ತಿಳಿದು, ಶಿಫಾರಸಿಗೆ ಅನುಗುಣವಾಗಿ ಹಂಚಿಕೊಂಡೂ ಬಳಸಿದರೆ ಸಾಕು.

Leave a Reply

Your email address will not be published. Required fields are marked *

error: Content is protected !!