ಶುಂಠಿ ಬೆಳೆದ ಭೂಮಿ ಹಾಳಾಗುವುದು ನಿಜವೇ?

ginger in sprinkler irrigation

ಕೆಲವರು ಹೇಳುತ್ತಾರೆ ಶುಂಠಿ ಬೆಳೆದರೆ ಆ ಮಣ್ಣು ಹಾಳಾಗುತ್ತದೆ. ಮತ್ತೆ ಅಲ್ಲಿ ಬೆಳೆ ಬೆಳೆಯಲಿಕ್ಕಾಗುವುದಿಲ್ಲ ಎಂದು. ಇದು ನಿಜವೇ?
ಶುಂಠಿ ಬೆಳೆಗೆ ಬೇರೆ ಬೇರೆ ಪೊಷಕಾಂಶಗಳನ್ನು ಹಾಕುತ್ತಾರೆ. ಆದ ಕಾರಣ ಮಣ್ಣು ಜೀವ ಕಳೆದುಕೊಳ್ಳುತ್ತದೆ ಎಂಬ ಮಾತನ್ನು ಬಹಳ ಜನ ಇನ್ನೂ ನಂಬಿದ್ದಾರೆ. ಇದನ್ನು ಕೆಲವು ಜನ ರಂಗು ರಂಗಾಗಿ ವಿವರಿಸುತ್ತಾ  ಈ ವಿಷಯದಲ್ಲಿ ತಜ್ಞರಾಗುತ್ತಾರೆ. ಆದರೆ ವಾಸ್ತವವೇ ಬೇರೆ. ಶುಂಠಿ ಬೆಳೆ ಇರಲಿ ಇನ್ಯಾವುದೇ ಬೆಳೆ ಇರಲಿ ಅದು ಮಣ್ಣಿನಲ್ಲಿ ಪೊಷಕ ಇದ್ದರೆ ಅದನ್ನು ಬಳಸಿಕೊಳ್ಳುತ್ತದೆ. ಇಲ್ಲವಾದರೆ ನಾವು ಕೊಟ್ಟದ್ದನ್ನು ಬಳಸಿಕೊಳ್ಳುತ್ತದೆ. ಪೋಷಕ ಲಭ್ಯವಾದಷ್ಟು ಉತ್ತಮವಾಗಿ ಬೆಳೆಯುತ್ತದೆ. ಆಗ ಮಣ್ಣಿನಿಂದ ನಷ್ಟವಾಗುವುದು ಮಣ್ಣಿನಲ್ಲಿ ಇದ್ದ ಸಸ್ಯ ಪೋಷಕ ಮಾತ್ರ. 

ginger planted

ಶುಂಠಿ ಮಣ್ಣನ್ನು ಹಾಳುಮಾಡುತ್ತದೆಯೇ?

  • ಮಣ್ಣು ಹಾಳು ಮಾಡುವುದು ಎಂಬುದೇ ಶುದ್ಧ ಸುಳ್ಳು.
  • ಮಣ್ಣು ಎಂಬುದು ಪ್ರಕೃತಿಯ ಸೃಷ್ಟಿ.
  • ಮಣ್ಣಿನ ಪ್ರಮಾಣಕ್ಕೆ ಸಮನಾಗಿ ಆಥವಾ ಮಣ್ಣಿನ ಪ್ರಮಾಣದ 10 % ದಷ್ಟು ರಾಸಾಯನಿಕ ವಸ್ತುಗಳನ್ನು ಸೇರಿಸಿದಾಗ ಮಣ್ಣು ಮಲಿನ ವಾಗಬಹುದು.
  • ಒಂದು ಅಲ್ಪಾವಧಿ ಸಸ್ಯ ಶುಂಠಿ ನೆಲದ ಮೇಲ್ಭಾಗದಲ್ಲಿ ಗರಿಷ್ಟ 2 ಅಡಿ ಸುತ್ತಳತೆ ಗೆ ಬೆಳೆಯಬಹುದು.
  • ನೆಲದಲ್ಲಿ ಸುಮಾರು 2 ಅಡಿ ಆಳದ  ತನಕ ತನ್ನ ಬೇರನ್ನು ಬಿಡಬಹುದು.
  • ಈ ಎರಡು ಅಡಿ ಚದರ ದ ಮಣ್ಣಿನ ತೂಕಕ್ಕೆ ಸಮನಾಗಿ ಅಥವಾ ಅದರ 10% ದಷ್ಟು ರಾಸಾಯನಿಕ ಗೊಬ್ಬರ, ಕೀಟನಾಶಕ , ಪ್ರಚೋದಕಗಳನ್ನು ಬಳಸಿದಾಗ  ಅದು ಮಣ್ಣನ್ನು ಸ್ವಲ್ಪ ಸಮಯದ ಅವಧಿಗೆ ಮಲಿನ ಮಾಡಬಹುದು.
  • ಮಲಿನತೆ ಎಂದರೆ ಅದರ ಸ್ಥಿತಿ ಬದಲಾವಣೆ. ಆಮ್ಲೀಯ ಆಗಬಹುದು, ಕ್ಷಾರೀಯ ಆಗಬಹುದು, ಜೈವಿಕತೆ ನಾಶವಾಗಬಹುದು.
  • ಅದು ಶಾಶ್ವತವಾದುದುದಂತೂ ಅಲ್ಲ.
  • ಒಂದು ಬೆಳೆ ತೆಗೆದು  ಮಣ್ಣನ್ನು ಮತ್ತೆ ಹಾಗೆಯೇ ಬಿಟ್ಟರ ಅದು ಸೂರ್ಯನ ಬೆಳಕು, ಮಳೆಯ ನೀರಿನ ಮೂಲಕ ಮತ್ತೆ ಸಹಜ ಸ್ಥಿತಿಗೆ ಬರುತ್ತದೆ.

ಇಷ್ಟಕ್ಕೂ ಶುಂಠಿ ಬೆಳೆ ಬೆಳೆಯುವಾಗ ಗಡ್ಡೆ ಬಿಟ್ಟು ಉಳಿದ ಎಲ್ಲಾ ಶೇಷಗಳನ್ನು ( ಬೇರು, ಗಿಡ) ಮತ್ತೆ ಮಣ್ಣಿಗೇ ಪೂರೈಕೆ ಮಾಡುತ್ತಾರೆ. ಅದು ಮಣ್ಣಿಗೆ ಮರಳಿ ಸಾವಯವ ವಸ್ತುಗಳನ್ನು ಕೊಟ್ಟಂತಾಗುತ್ತದೆ. ಇದು ಗಡ್ಡೆ ರೂಪದಲ್ಲಿ ನಾವು ಪಡೆಯುವ ಫಲಕ್ಕಿಂತ ಕಡಿಮೆಯಾದರೂ ಸಹ ಅದರಲ್ಲಿ ಸಾರಾಂಶಗಳು ಉಳಿದುಕೊಂಡು ಇರುತ್ತವೆ. ಆದ ಕಾರಣ ಮಣ್ಣು ಹಾಳಾಗುತ್ತದೆ ಎಂದು ಸತ್ಯವಲ್ಲ.

sufficient organic matter is impotent

ಬೆಳೆ ಬದಲಾವಣೆ ಮಾಡಬೇಕು:

  • ಒಮ್ಮೆ ಒಂದು ಜಾಗದಲ್ಲಿ ಬೆಳೆಯೊಂದನ್ನು ಬೆಳೆದರೆ ಮತ್ತೆ ಅದೇ ಜಾಗದಲ್ಲಿ ಅದೇ ಬೆಳೆಯನ್ನು ಬೆಳೆಯಬಾರದು,
  • ಇದು ಶುಂಠಿಗೆ ಮಾತ್ರ ಅನ್ವಯ ಅಲ್ಲ. ಎಲ್ಲಾ ಬೆಳೆಗಳಿಗೂ ಅನ್ವಯ.
  • ಒಮ್ಮೆ ಶುಂಠಿ ಬೆಳೆದ ಮೇಲೆ ಮತ್ತೆ ಅದೇ ಜಾಗದಲ್ಲಿ ಬೆಳೆ ಬದಲಾವಣೆ ಮಾಡಿ ಬೇರೆ ಬೆಳೆ ಬೆಳೆದರೆ ಅದು ಚೆನ್ನಾಗಿ ಬರುತ್ತದೆ.
  • ಕಾರಣ ಆ ಮಣ್ಣಿನಲ್ಲಿ ಸಾಕಷ್ಟು ಪೋಷಕಗಳು ಇರುತ್ತವೆ.
  • ಶುಂಠಿಯನ್ನೇ ಬೆಳೆದರೆ ಹಿಂದಿನ ಬೆಳೆಯಲ್ಲಿ ಬಂದ ರೋಗ, ಕೀಟಗಳ  ಶೇಷ ಉಳಿದುಕೊಂಡಿರುವ ಕಾರಣ ಎರಡನೇ ಬೆಳೆ ಚೆನ್ನಾಗಿ ಬರುವುದಿಲ್ಲ.
  • ಬೆಳೆ ಪರಿವರ್ತನೆ ಮಾಡಿ ಮತ್ತೆ ಶುಂಠಿ ಬೆಳೆದರೆ ಬೆಳೆ ಚೆನ್ನಾಗಿ ಬರುತ್ತದೆ.

Ginger in slope area

ಶುಂಠಿಗೆ ರಾಸಾಯನಿಕ ಗೊಬ್ಬರ ಅನಿವಾರ್ಯ ಅಲ್ಲ:

  • ಶುಂಠಿ ಬೆಳೆಯುವ ಹೆಚ್ಚಿನ ರೈತರು ಮಣ್ಣಿಗೆ ಒಂದಷ್ಟು ಸಾವಯವ ಗೊಬ್ಬರವಾಗಿ ಕೊಟ್ಟಿಗೆ  ಗೊಬ್ಬರ, ಕುರಿ, ಕೋಳು ಗೊಬ್ಬರ, ಬೇವಿನ ಹಿಂಡಿ ಹಾಕುತ್ತಾರೆ.
  • ಇದು ಮಣ್ಣನ್ನು ಅಷ್ಟು ಸುಲಭದಲ್ಲಿ ಹಾಳು ಮಾಡಲು ಬಿಡುವುದಿಲ್ಲ.
  • ಸಮತೋಲನ ಪ್ರಮಾಣದಲ್ಲಿ ಸಾವಯವ ಗೊಬ್ಬರಗಳನ್ನು ಬಳಸಿ ಗರಿಷ್ಟ ಅಲ್ಲದಿದ್ದರೂ ಮಾಧ್ಯಮಿಕ ಇಳುವರಿಯನ್ನು ಪಡೆಯಲು ಸಾಧ್ಯವಿದೆ.

ಮಲೆನಾಡಿನಲ್ಲಿ ಅದರಲ್ಲೂ ವಿಶೇಷವಾಗಿ ಸಾಗರ, ಸೊರಬ, ರಿಪ್ಪನ್ ಪೇಟೆ, ಶಿಕಾರೀ ಪುರ, ಸಕಲೇಶಪುರ, ಶಿವಮೊಗ್ಗ ಮುಂತಾದ ಕಡೆ ಶುಂಠಿ ಬೆಳೆ ಬೆಳೆಸಿ ಅದರಲ್ಲೇ ಬಾಳೆ, ಅಡಿಕೆ ಬೆಳೆದು ಮಣ್ಣಿನ ಸ್ಥಿತಿಯನ್ನು ಉತ್ತಮವಾಗಿ ಉಳಿಸಿಕೊಂಡ ಸಾವಿರಾರು ರೈತರು ಇದ್ದಾರೆ. ಇವರಲ್ಲಿ ಯಾರೂ ಶುಂಠಿ ಬೆಳೆದರೆ ಮಣ್ಣು ಹಾಳಾಗುತ್ತದೆ ಎಂದು ಹೇಳುವವರಿಲ್ಲ. ಇದೆಲ್ಲಾ ಕೈಲಾಗದವನು ಮೈಯೆಲ್ಲಾ ಪರಚಿಕೊಂಡಂತೆ ಆಗಿದೆ.
 

error: Content is protected !!