ಭತ್ತ ಬೆಳೆಯುವವರು ಒಮ್ಮೆ ಇವರ ಅನುಭವವನ್ನು ಕೇಳಿ.

ಭತ್ತದ ಬೆಳೆ ಹೊಲದಲ್ಲಿ ನವೀನ್ ಚಂದ್ರ ಜೈನ್ -Naveen chandra jain

ಯಾವುದೇ ಬೆಳೆ ನಷ್ಟದ ಬೆಳೆ ಅಲ್ಲ. ಬೆಳೆಯ ಪೂರ್ವಾಪರವನ್ನು ಅರಿತುಕೊಳ್ಳಬೇಕು. ಆಯಾ ಬೆಳೆಗೆ ಏನು ಬೇಕು, ಹೇಗೆ ಬೆಳೆಯಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಸಂದೇಹಗಳನ್ನು ಸಂಕೋಚ ಇಲ್ಲದೆ ತಜ್ಞರ ಮೂಲಕ ತಿಳಿದುಕೊಳ್ಳಬೇಕು. ಆಗ ಬೆಳೆ ಕಷ್ಟವಾಗುವುದಿಲ್ಲ. ನಷ್ಟವೂ ಆಗುವುದಿಲ್ಲ. ಯಾವುದರಲ್ಲೂ ಅದು ಕೃಷಿ ಇರಲಿ, ಉದ್ದಿಮೆ ಇರಲಿ, ನಷ್ಟ  ಆಗುವುದಲ್ಲ. ನಾವು ಮಾಡಿಕೊಳ್ಳುವುದು. ಇದು ನಿಟ್ಟೆ ಗುತ್ತು ನವೀನ್ ಚಂದ್ರ ಜೈನ್ ಅವರ ಅನುಭವ. ಇವರು ಎಲ್ ಎಲ್ ಬಿ ವ್ಯಾಸಂಗ ಮಾಡಿ ಆಯ್ಕೆ ಮಾಡಿಕೊಂಡದ್ದು ಕೃಷಿ ವೃತ್ತಿಯನ್ನು.

ಭತ್ತದ ಬೆಳೆ ಯಲ್ಲಿ  ಲಾಭಕಂಡ ನವೀನ್ ಚಂದ್ರ ಜೈನ್ ರವರು -Farmer Naveen chandra jain

  • ನವೀನ್ ಚಂದ್ರ ಜೈನ್ ಇವರ ಕುಟುಂಬವೇ ಭತ್ತದ ಬೇಸಾಯ ಮಾಡುತ್ತಿದ್ದವರು.
  • ಒಮ್ಮೆ ಅಡಿಕೆ ಕೃಷಿಗೆ ಕೈ ಹಾಕಿದ್ದರು. ಸುಮಾರು 100 ಕ್ವಿಂಟಾಲು ತನಕವೂ ಅಡಿಕೆ ಆಗುತ್ತಿತ್ತಂತೆ.
  • ಆದರೆ ಅಡಿಕೆ ಬೆಳೆಗೆ ಬಂದ ಬೇರು ಹುಳ, ಅಡಿಕೆಯ ಸಹವಾಸವೇ ಬೇಡ ಎಂಬಷ್ಟು ನಿರಾಶೆ ತಂದಿತು.
  • ಅದು ಸುಮಾರು 15 ವರ್ಷಕ್ಕೆ ಹಿಂದೆ.
  • ಆಗ ರಾಸಾಯನಿಕ ಹೊರತಾಗಿ ಇದಕ್ಕೆ ಬೇರೆ ಔಷಧೋಪಚಾರ ಇರಲಿಲ್ಲ.
  • ರಾಸಾಯನಿಕಕ್ಕೆ ಆ ಹುಳ ಬಗ್ಗುವುದೂ ಇಲ್ಲ. ಆದ ಕಾರಣ ಎಲ್ಲಾ ಅಡಿಕೆ ಮರ ಸತ್ತು ಹೋಯಿತು.
  • ಆ ನಂತರ ಮರಳಿ ಭತ್ತದ ಬೇಸಾಯಕ್ಕೆ ಬಂದರು.
  • ಇವರು ಈಗ ಅಲ್ಲ ಸುಮಾರು 15 ವರ್ಷಕ್ಕೆ ಹಿಂದೆಯೇ ಭತ್ತದ ಬೇಸಾಯ ಲಾಭದ್ದು ಎಂದು ಹೇಳುತ್ತಾ ಬಂದವರು.
  • ಹಲವಾರು ಕೃಷಿ ಸಂಬಂಧಿತ ಸಭೆ ಸಮಾರಂಭಗಳಲ್ಲಿ ಇವರು ಇದನ್ನು  ಹೇಳುವ ಮೂಲಕ ರೈತರಿಗೆ ಧೈರ್ಯ ತುಂಬುತ್ತಿದ್ದವರು.

ಭತ್ತದ ಮಾದರಿ ಬೇಸಾಯಗಾರರು:

  • ಭತ್ತದ ಬೆಳೆಯಲ್ಲಿ ಎಲ್ಲಾ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಬೆಳೆ ಬೆಳೆಯುವ ಕೃಷಿಕರು ಇವರು ಎನ್ನಬಹುದು.
  • ಹೊಸ ತಳಿಗಳ ಕ್ಷೇತ್ರ ಪ್ರಾತ್ಯಕ್ಷಿಕೆಗಳು ಸಹ ಇವರ ಹೊಲದಲ್ಲಿ ನಡೆಯುತ್ತವೆ.
  • ಕರಾವಳಿಗೆ ಪರಿಚಯವಾದ MO-4  ಕೆಂಪು ಅಕ್ಕಿ ತಳಿಯ ಪ್ರಾತ್ಯಕ್ಷಿಕೆ ಸಹ ಇವರ ಹೊಲದಲ್ಲಿ ನಡೆದಿದೆ.
  • ಚಂಪಕ ತಳಿಯ ಪ್ರಾತ್ಯಕ್ಷಿಕೆ ಸಹ ಇವರ ಹೊಲದಲ್ಲಿ ನಡೆದಿದೆ. ತಳಿ ಗುಣ ಹೇಗೆ, ಯಾವ ರೀತಿ ಇದರಿಂದ ಅಧಿಕ ಇಳುವರಿ ಪಡೆಯಬಹುದು ಎಂಬುದನ್ನು ತಜ್ಞರ ಜೊತೆಗೆ ಇವರೂ ತಮ್ಮ ಯೋಚನೆಗಳನ್ನು ಸೇರಿಸಿ ಬೆಳೆ ಬೆಳೆಸುತ್ತಾರೆ.
  • ಆದ ಕಾರಣ ಇವರು  ಬೆಳೆಯ ಬಹುತೇಕ ತಜ್ಞತೆಯನ್ನು ಹೊಂದಿದ್ದಾರೆ.
  • ಈಗ ಇವರು ತಮ್ಮ ಭತ್ತದ ಗದ್ದೆ ಅಲ್ಲದೆ  ಯಾರಾದರೂ  ಭತ್ತದ ಹೊಲ ಇದ್ದು, ಬೇಸಾಯ ಮಾಡದೆ ಪಾಳು ಬಿಟ್ಟಿದ್ದರೆ ಅದನ್ನು ಅವರ ಮನ ಒಲಿಸಿ ಸಾಗುವಳಿ ಮಾಡಿ ಸಹ ಕೊಡುತ್ತಿದ್ದಾರೆ.

ಭತ್ತದ ಬೇಸಾಯಗಾರರು. ಚಂಪಕ ಭತ್ತದ ಬೆಳೆ ಪ್ರಾತ್ಯಕ್ಷಿಕೆ -Field demonstration of Campaka  Paddy

ಭತ್ತದ ಬೆಳೆಯಲ್ಲಿ ಲಾಭ ಆಗುವುದು ಹೇಗೆ?

  • ಉತ್ತಮ ತಳಿಯನ್ನು ಆಯ್ಕೆ ಮಾಡಬೇಕು. ಕರಾವಳಿಯಲ್ಲಿ ಹೆಚ್ಚು ಬೇಡಿಕೆ ಇರುವ ತಳಿ ಎಂದರೆ ಕಜೆ ಜಯ ಮತ್ತು MO4  ತಳಿಗಳು.
  • ಅಲ್ಪಾವಧಿ ತಳಿ ಜ್ಯೋತಿಯನ್ನೂ ಬೆಳೆಯುವವರಿದ್ದಾರೆ. ನೀರು ಹೆಚ್ಚು ನಿಲ್ಲುವ ಜಾಗಕ್ಕೆ MO4 ಉತ್ತಮ.
  • ಕಜೆ ಜಯ ದೊಡ್ಡ ಅಕ್ಕಿ, ಊಟಕ್ಕೆ ರುಚಿ.  ಹುಲ್ಲು ಎತ್ತರ ಮತ್ತು ಹೆಚ್ಚು. ಹಸುಗಳಿಗೆ ತಿನ್ನಲು ಒಳ್ಳೆಯದಾಗುತ್ತದೆ.
  • ಇಂತದ್ದನ್ನು ಆರಿಸಿ ಬೆಳೆದರ ಭತ್ತಕ್ಕೆ ಉಳಿದ ಭತ್ತಕ್ಕಿಂತ ಹೆಚ್ಚು ಬೆಲೆ ದೊರೆಯುತ್ತದೆ.
  • ಭತ್ತದ ಬೆಳೆಗೆ ಏನು ಕಡಿಮೆಯಾಗಿದೆ, ಏನು ಹೆಚ್ಚಾಗಿದೆ ಎಂಬುದನ್ನು ಪೈರು ನೋಡಿ ತಿಳಿಯುವ ತಜ್ಞತೆ ನಮ್ಮಲ್ಲಿ ಬರಬೇಕು.
  • ತಕ್ಷಣ ಕೊರತೆಯಾದುದನ್ನು ಕೊಡಬೇಕು. ಭತ್ತಕ್ಕೆ ಅಧಿಕ ಪ್ರಮಾಣದ ರಸಗೊಬ್ಬರ ಬೇಕಾಗುವುದಿಲ್ಲ.
  • ಅದರ ಬಗ್ಗೆ ಸರಿಯಾಗಿ ತಿಳಿದಿರಬೇಕು. ಸಾಮಾನ್ಯವಾಗಿ ಹಸು ಸಾಕುವವರಲ್ಲಿ ಕೊಟ್ಟಿಗೆ ಗೊಬ್ಬರ ಇರುತ್ತದೆ.
  • ಅದೇ ರೀತಿಯಲ್ಲಿ ಗೋಬರ್ ಗ್ಯಾಸ್ ಇದ್ದರೆ ಅದರ ಸ್ಲರಿ ನೀರು ಇರುತ್ತದೆ.
  • ಇದನ್ನು ಯಥೇಚ್ಚವಾಗಿ ಬಳಕೆ ಮಾಡಿದರೆ ಸಾರಜನಕ  ಮತ್ತು ರಂಜಕದ ಕೊರತೆ ಹೆಚ್ಚಾಗಿ ಬರುವುದಿಲ್ಲ.
  • ಪೊಟ್ಯಾಶ್ ಕೊರತೆ ಉಂಟಾಗುತ್ತದೆ.
  • ಆಗ ಎಷ್ಟು ಬೇಕೋ ಅಷ್ಟು ಮಾತ್ರ ಪೊಟ್ಯಾಶಿಯಂ ಗೊಬ್ಬರವನ್ನು ಕೊಡಬೇಕು.

cleaning of weeds is the main practice in preventing pest
ಭತ್ತದ ಬೆಳೆ ಬೆಳೆಸುವಾಗ ವಾರಕ್ಕೊಮ್ಮೆ- 15 ದಿನಕ್ಕೊಮ್ಮೆ ಗದ್ದೆಯ ಬದಿಗೆ ಹೋಗಿ ಮೇಲೆ ಮೇಲೆ ನೋಡಿ ಬರುವುದಲ್ಲ. ದಿನಾ ಹೋಗಿ ಭತ್ತದ ಹುಣಿಯಲ್ಲಿ  ಸುತ್ತು ಬಂದು ಪೈರನ್ನು ಗಮನಿಸುತ್ತಿದ್ದರೆ ಏನೇ ಸಮಸ್ಯೆ ಬಂದರೂ ತಿಳಿಯಲು ಸಾಧ್ಯವಾಗುತ್ತದೆ. ತಕ್ಷಣ ಪರಿಹಾರ ಕೈಗೊಳ್ಳಲೂ ಅನುಕೂಲವಾಗುತ್ತದೆ.

  • ಭತ್ತದ ಹೊಲಕ್ಕೆ ನೀರು ನಿಲ್ಲಿಸುವುದು ಒಂದು ಪ್ರಾಮುಖ್ಯ ಬೇಸಾಯ ಕ್ರಮ.
  • ಇದು  ಹೆಚ್ಚೂ ಆಗಬಾರದು ಕಡಿಮೆಯೂ ಆಗಬಾರದು. ಬುಡದಲ್ಲಿ 1-1.5 ಇಂಚು ನೀರು ನಿಲ್ಲಬೇಕು.
  • ಅಸಕ್ತಿ ಇದ್ದರೆ ಲಾಭವಾಗುತ್ತದೆ. ನಮಗೆ ನಮ್ಮ ಮೇಲೆ ವಿಶ್ವಾಸ ಇರಬೇಕು ಇಷ್ಟೇ ಇಳುವರಿ ಪಡೆಯುತ್ತೇನೆ ಎಂಬ ಗುರಿಯೂ ಇರಬೇಕು. ಇವರು  ಎಕ್ರೆಗೆ 25 ಕ್ವಿಂಟಾಲು ಇಳುವರಿ  ಪಡೆಯುತ್ತಾರೆ.

ಯಾಂತ್ರೀಕರಣದ ಅನುಕೂಲಗಳನ್ನು ಬಳಸಿಕೊಳ್ಳಬೇಕು:

  • ಪವರ್ ಟಿಲ್ಲರ್ ಇದ್ದರೆ ಅದರಲ್ಲಿ ಬರೇ ಉಳುಮೆ ಮಾತ್ರವಲ್ಲ, ಬದು( ಹುಣಿ) ವನ್ನು ಸ್ವಚ್ಚ ಮಾಡಲಿಕ್ಕೂ ಆಗುತ್ತದೆ.
  • ಅದಕ್ಕೆ ಬೇಕಾದ ಅಟ್ಯಾಚ್ ಮೆಂಟ್ ಅಳವಡಿಸಿಕೊಳ್ಳಬೇಕು. ಇದರ ಮೂಲಕ ಒಂದು ದಿನದಲ್ಲಿ 25 ಎಕ್ರೆಯಷ್ಟು ಬದಿ ತೆಗೆಯಲಿಕ್ಕೆ ಆಗುತ್ತದೆ.
  • ನಾಟಿ ಯಂತ್ರದ ಮೂಲಕ ನಾಟಿ  ಮಾಡಿದರೆ ಖರ್ಚು ತುಂಬಾ ಕಡಿಮೆಯಾಗುತ್ತದೆ.
  • ಭತ್ತದ ಸಸಿಯನ್ನು ಚಾಪೆ ನೇಜಿಯ ಮೂಲಕ  ಮಾಡುವುದೂ ಅನುಕೂಲ.
  • ಅನುಭವ ಆಗುತ್ತಾ ಹೋಲಿಕೆ ಮಾಡಿ ಈಗ ನೇರ ಬಿತ್ತನೆ ಮಾಡುವುದೇ ಮಿತವ್ಯ ಯಕಾರಿ ಎಂದು ಕಾಣುತ್ತಿದೆ.
  • ಇದಕ್ಕೆ ತುಂಬಾ ಖರ್ಚು ಕಡಿಮೆ ಆಗುತ್ತದೆ. ಇಳುವರಿಯೂ ಒಂದೇ ರೀತಿ ಬರುತ್ತದೆ.
  • ಭತ್ತದ ಬೇಸಾಯದಲ್ಲಿ ಇವರು ಕೀಟನಾಶಕ ಬಳಕೆ ಮಾಡುವುದಿಲ್ಲ.
  • ಗದ್ದೆಯ ಬದುಗಳಲ್ಲಿ ಬೆಳೆಯುವ  ಕಳೆಗಳನ್ನು  ಎರಡು ಬಾರಿ ತೆಗೆಯುವ ಕಾರಣ ಬಂಬು gundhi bug ಕೀಟ ತೊಂದರೆ ಇಲ್ಲ.
  • ಕಳೆ ನಿಯಂತ್ರಣಕ್ಕೆ ರಾಸಾಯನಿಕ (ಸಾಥಿ 3-4-5 ದಿನಗಳಲ್ಲಿ) ಇದೆ. ಅಗತ್ಯ ಬಿದ್ದರೆ ಮಾತ್ರ ಬಳಕೆ ಮಾಡಬೇಕು.

ಎಕ್ರೆಗೆ ಸರಾಸರಿ  40,000 ಭತ್ತದಿಂದ ಹಾಗೂ 25,000 ಹುಲ್ಲಿನಿಂದ ಆದಾಯ ಬರುತ್ತದೆ. ಇದು 4 ತಿಂಗಳ ಅವಧಿಯಲ್ಲಿ. ಇಷ್ಟು ಕಡಿಮೆ ಅವಧಿಯಲ್ಲಿ ಬೇರೆ ಯಾವ ಬೆಳೆಯಲ್ಲೂ ಇಷ್ಟು ಆದಾಯ ದೊರೆಯುವುದಿಲ್ಲ. ಇವರಿಗೆ  ಬಹಳ ಜನ ತಮಾಷೆ ಮಾಡಿದ್ದರಂತೆ. ಭತ್ತ ಯಾಕೆ ಎಂದು. ಆದರೆ ಅವರಿಗೆಲ್ಲಾ ಇವರು  ಭತ್ತ ಬೆಳೆ ಏನೂ ಕಡಿಮೆ ಅಲ್ಲ ಎಂಬುದನ್ನು  ತೋರಿಸಿಕೊಟ್ಟಿದ್ದಾರೆ. ನಾವು ಬೆಳೆದ ಅಕ್ಕಿಯನ್ನು ನಾವೇ ಊಟ ಮಾಡುವುದು ಎಂದರೆ ಅದರಷ್ಟು ಸಂತೋಷ ಬೇರೆ ಇಲ್ಲ. ಯಾವತ್ತೂ ಬೇಡಿಕೆ ಇಲ್ಲ ಎಂದಾಗದ ಬೆಳೆ ಎಂದರೆ ಭತ್ತ ಮಾತ್ರ. ಇದು ನಷ್ಟದ ಬೆಳೆ ಅಲ್ಲ.

end of the  article:——————————————————————–
search words: paddy crop# paddy is profitable crop# Naveen chandra jain # Nitte# Income from Paddy೩# how to get profit from paddy#

Leave a Reply

Your email address will not be published. Required fields are marked *

error: Content is protected !!