ಮಳೆ ಬಂದಿದೆ, ಕೆರೆ ತುಂಬಿದೆ  ಅಂತರ್ಜಲ ಬರಿದಾಗುತ್ತಿದೆ. ಎಚ್ಚರ!.

ಮಳೆ ಬಂದಿದೆ, ಕೆರೆ ತುಂಬಿದೆ ಅಂತರ್ಜಲ ಬರಿದಾಗುತ್ತಿದೆ. ಎಚ್ಚರ!.

ಮಳೆ ಬಂದಿದೆ ಕೆರೆ ತುಂಬಿದೆ ನೀರಿಗೇನೂ ಬರವಿಲ್ಲ ಎಂದು ನಂಬಿದ್ದ ನಮ್ಮ ನಂಬಿಕೆ ಈಗ ಹುಸಿಯಾಗಲಾರಂಭಿಸಿದೆ. ಎಲ್ಲೆಲ್ಲೂ ಕೊಳವೆ ಬಾವಿಗಳು ಇಳುವರಿ ಕಡಿಮೆಯಾಗುತ್ತಿದೆ. ವಿಫಲವಾಗುತ್ತಿದೆ. ಕಿಂಡಿ ಅಣೆಕಟ್ಟುಗಳು, ಕಿರು ಜಲವಿದ್ಯುತ್  ಉತ್ಪಾದಿಸುವ ಅಣೆಕಟ್ಟುಗಳಲ್ಲೂ ನೀರಿಲ್ಲದಾಗಿದೆ.

ರೈತರು ಹೊಸ ಬಾವಿ ತೋಡಲು ರಿಗ್ ನ ಹಿಂದೆ ತಿರುಗುವಂತಾಗಿದೆ. ಅಂತರ್ಜಲ ಕಳೆದ ಕೆಲವು ವರ್ಷಗಳಿಂದ ರೈತರೂ ಸೇರಿದಂತೆ ಎಲ್ಲರೂ ಕೊಳವೆ ಬಾವಿ ನೀರಿಗೇ ಅವಲಂಬಿತರಾದ ಕಾರಣ ಅಂತರ್ಜಲದ ಮೇಲೆ ಒತ್ತಡ ಹೆಚ್ಚಿದೆ. ಎಲ್ಲಿ ನೋಡಿದರಲ್ಲಿ ಕೊಳವೆ ಬಾವಿ ತೋಡುವ ಸದ್ದು ಮುಂದೊಂದು ದಿನ ಯಾವ ಸ್ಥಿತಿಯನ್ನು ತಂದೊಡ್ಡಬಹುದು ಎಂಬುದನ್ನು ಊಹಿಸಲೂ ಸಾದ್ಯವಾಗದು.

ಸರಕಾರ ನದಿ, ಹಳ್ಳಗಳಿಗೆ ಕಿಂಡಿ ಅಣೆಕಟ್ಟು ಕಟ್ಟುವ ಉತ್ತಮ ಕೆಲಸ ಮಾಡುತ್ತಿದೆ. ಅಲ್ಲಲ್ಲಿ ಜಲವಿದ್ಯುತ್ ಉತ್ಪಾದನೆಗೆ ಅಣೆಕಟ್ಟುಗಳಾಗಿವೆ. ಆದರೆ ಸಾರ್ವಜನಿಕ ವಿತರಣೆಗೆ ಸ್ಥಳೀಯಾಡಳಿತ ಕೊಳವೆ ಬಾವಿಯನ್ನೇ ತೋಡುತ್ತಿದೆ. ಕೃಷಿ ನೀರಾವರಿಗೆ ಕೊಳವೆ ಬಾವಿಯ ನೀರು ಅನಿವಾರ್ಯವಾಗಿರಬಹುದು. ಕುಡಿಯುವ ಉದ್ದೇಶದ ನೀರಿಗೆ ಈ ಕೊಳವೆ ಬಾವಿಯ ಗಡಸು ನೀರು ಸೂಕ್ತವೇ? ಈ ಗಡಸು ನೀರನ್ನು ಕುಡಿದವರ ಆರೋಗ್ಯದ ಸ್ಥಿತಿ ಏನು? ಇಂದು ಹಳ್ಳಿ,ಪಟ್ಟಣ ಸೇರಿದಂತೆ ಎಲ್ಲಾ ಕಡೆ ಜನ ಗಂಟು ನೋವು, ಸೊಂಟ ನೋವು, ಆ ನೋವು ಈ ನೋವು ಎಂದೆಲ್ಲಾ ಬೊಬ್ಬಿಡುತ್ತಿದ್ದಾರೆ. ಇದಕ್ಕೆ  ಕಾರಣ ಪ್ಲೋರೈಡ್ ಯುಕ್ತ ಕೊಳವೆ ಬಾವಿಯ ನೀರಾಗಿರಬಹುದೇ ಎಂಬ ಸಂಶಯ ಬರುತ್ತಿದೆ.   

ಅಂತರ್ಜಲ ಮೂಲ ಯಾವುದು?

ಅಂತರ್ಜಲ ಮಳೆ ಮೂಲದಿಂದ ಸಂಗ್ರಹಿತ ಜಲ ಮೂಲ. ಇದನ್ನು ಎಷ್ಟು ಹಿತಮಿತವಾಗಿ ಬಳಕೆ ಮಾಡುತ್ತೇವೆಯೋ ಅಷ್ಟು ಸಮಯ ಅದು ನೀರು ಕೊಡುತ್ತಿರುತ್ತದೆ. ಅಂತರ್ಜಲವನ್ನು ನಾವು ಸಾಮೂಹಿಕವಾಗಿ ಹಿತ ಮಿತವಾಗಿ ಬಳಸಿದರೆ ಅದನ್ನು ಹೆಚ್ಚು ಸಮಯದ ತನಕ ಬಳಸುತ್ತಿರಬಹುದು. ಈಗ ನಾವು  ಮಾಡುತ್ತಿರುವ ಅನಾಚಾರದಲ್ಲಿ ಇದು ಕೆಲವೇ ಸಮಯದಲ್ಲಿ ನಮಗೆ ಕೈ ಕೊಡುತ್ತದೆ. ಅಂತರ್ಜಲದ ಮೂಲ ಮತ್ತು ಅದರ ಬಳಕೆಯ ಇತಿಮಿತಿಗಳ ಬಗ್ಗೆ ಜನತೆಗೆ ಶಿಕ್ಷಣ ಇಲ್ಲದಿರುವುದು ಇದರ ಅನಿಯಂತ್ರಿತ ಬಳಕೆಗೆ ಕಾರಣವಾಗಿದೆ.

ಅಂತರ್ಜಲ ಮಟ್ಟ ಭಾರೀ ಕುಸಿದಿದೆ:

  • ರಾಜ್ಯ – ದೇಶದಾದ್ಯಂತ ಅಂತರ್ಜಲ ಮಟ್ಟ ಕುಸಿಯುತ್ತಿದೆ.  ಸುಮಾರು 25  ವರ್ಷದ ಹಿಂದೆ ಅಂತರ್ಜಲ ಮಟ್ಟ 250 ಅಡಿಯಲ್ಲಿದ್ದುದು, ಈಗ 600 ಅಡಿಗೆ ಇಳಿದಿದೆ.
  • ಅಪವಾದವಾಗಿ ಕೆಲವು ಕಡೆ ಸ್ವಲ್ಪ ಮೇಲೆಯೇ ದೊರೆಯಬಹುದು.
  • ಆದರೆ ಒಟ್ಟಾರೆಯಾಗಿ ಭೂಮಿಯ ಶಿಲಾಪದರದ ಕೆಳಗೆ ಅಡಗಿರುವ ಜಲ ಮೂಲ ವರ್ಷದಿಂದ ವರ್ಷಕ್ಕೆ ಕೆಳಕ್ಕಿಳಿಯುತ್ತಿದೆ.  
  • ಇದೇ  ರೀತಿ ನೀರನ್ನು ಬಳಸುತ್ತಾ ಹೋದರೆ ಇನ್ನು  ಬೆರಳೆಣಿಕೆಯ ವರ್ಷಗಳಲ್ಲಿ ಅನ್ನಕ್ಕಾಗಿ ಗಲಾಟೆ ಅಲ್ಲ.
  • ನೀರಿಗಾಗಿ ಗಲಾಟೆ ಪ್ರಾರಂಭವಾಗುತ್ತದೆ! ನೀರಿನ ಕುರಿತಾದ ನೆರೆ ಹೊರೆಯಯವರ  ಮೌನ ವೈಮನಸ್ಸು ದಾಯವಾದಿಗಳ ಗುದ್ದಾಟದಂತಾಗಿದೆ.

ಜಲ ಮಟ್ಟ ಎಂದರೇನು:

  • ಭೂಮಿಯಲ್ಲಿ ನೆಲದ ಮೇಲೆ ಬಿದ್ದ ನೀರು ತೋಡು, ಹಳ್ಳ, ಹೊಳೆ ಮೂಲಕ ಸಮುದ್ರ ಸೇರುತ್ತದೆ.
  • ಕೆಲವು ತಗ್ಗಿನ ಪ್ರದೇಶಗಳಲ್ಲಿ ನೀರು ನಿಂತು ಚಲಿಸುತ್ತದೆ.
  • ಈ ಸಂದರ್ಭದಲ್ಲಿ ಮೊದಲ ಐದಾರು ಅಡಿ ಹುಡಿ ಮಣ್ಣಿನಲ್ಲಿ ಸರಾಗವಾಗಿ ನೀರು ಇಳಿಯುತ್ತದೆ.
  • ಆ ನಂತರ ಸಿಗುವ ಗಟ್ಟಿ ಪದರದಲ್ಲಿ ನಿಧಾನವಾಗಿ ( ಸೋಸಿಕೊಂಡು) ನೀರು ಕೆಳಕ್ಕಿಳಿಯುತ್ತದೆ.
  • ಅದು ಪ್ರದೇಶವನ್ನು ಹೊಂದಿಕೊಂಡು 20-50 ಅಡಿ ತನಕವೂ ಇರುತ್ತದೆ.
  • ಆ ನಂತರ ಶಿಥಿಲ ಶಿಲೆಗಳು ಸಿಗುತ್ತವೆ. ಅದರಲ್ಲಿ ಅತೀ ಹೆಚ್ಚು ಬಿರುಕುಗಳು ಇರುತ್ತವೆ.
  • ಮಣ್ಣಿನಲ್ಲಿ ಇಂಗಿದ ನೀರು  ಅದರಲ್ಲಿ ಇನ್ನೂ  ಸ್ವಲ್ಪ ಪ್ರಮಾಣದಲ್ಲಿ ಕೆಳಕ್ಕಿಳಿಯುತ್ತದೆ. 
  • ಆನಂತರ  ಗಟ್ಟಿ ಶಿಲಾ ಪದರ ಸಿಗುತ್ತದೆ. ಆ ಶಿಲೆಯಲ್ಲಿ ಬಿರುಕುಗಳು  ಕಡಿಮೆ.
  • ಆದರೆ ಒಂದೊಂದು ಶಿಲೆಯ ಮಧ್ಯೆ ಇರುವ ಅವಕಾಶಗಳ ಎಡೆಯಲ್ಲಿ ಇಂಗಿ ಬಂದ ನೀರು ಅವಕಾಶ ಇರುವಷ್ಟು ಆಳಕ್ಕೆ ಇಳಿಯುತ್ತದೆ.
  • ಬಿರುಕು , ಸೀಳುಗಳು ಮತ್ತು ರಂದ್ರಗಳ ಮೂಲಕವೂ ನೀರು ಕೆಳಕ್ಕಿಳಿಯುತ್ತದೆ.  
  • ಸಮುದ್ರದ ನೀರೂ ಸಹ ಶಿಲಾ ಪದರದ ಕೆಳಕ್ಕೆ ಸೇರಿಕೊಳ್ಳುತ್ತದೆ.
  • ಇದು ಭೂ ಗರ್ಭ ಶಾಸ್ತ್ರಜ್ಞರು  ಹೇಳುವ ನೀರು ಅಂತರ್ಜಲಕ್ಕೆ ಇಳಿಯುವ ವಿಧಾನ.
ಎಲ್ಲಿ ನೋಡಿದರಲ್ಲಿ ಕೊಳವೆ ಬಾವಿ ತೋಡುವ ಸದ್ದು
ಎಲ್ಲಿ ನೋಡಿದರಲ್ಲಿ ಕೊಳವೆ ಬಾವಿ ತೋಡುವ ಸದ್ದು

ಅಂತರ್ಜಲ ಸಂಪತ್ತು:

ಭೂಮಿಯಲ್ಲಿ ಮುಗಿದು ಹೋಗುವ ಸಂಪನ್ಮೂಲ ಮತ್ತು ಮತ್ತೆ ಮತ್ತೆ ನವೀಕರಣಗೊಳ್ಳುವ ಸಂಪನ್ಮೂಲ ಎಂದು ಎರಡು ವಿಧ. ಹಾಗೆಂದು ಅಂತರ್ಜಲ  ಪೂರ್ಣವಾಗಿ ಮುಗಿದು ಹೋಗುವ ಸಂಪನ್ಮೂಲ ಅಲ್ಲ. ನಿಧಾನವಾಗಿ ಭೂಗರ್ಭಕ್ಕೆ ನೀರುಸೇರಿಕೊಳ್ಳುವ ಕಾರಣ ಅದಕ್ಕನುಗುಣವಾಗಿ ಬಳಕೆ ಮಾಡಿದರೆ ಅದರಿಂದ ತೊಂದರೆ ಇಲ್ಲ.  ಅದನ್ನು ನಾವು ವಿವೇಚನೆಯಿಂದ ಬಳಕೆ ಮಾಡಬೇಕು. ಎಷ್ಟು ನೆಲಕ್ಕೆ ಪೂರಣ ಆಗುತ್ತದೆಯೋ ಅಷ್ಟು ಮಾತ್ರ ಬಳಕೆ ಮಾಡುತ್ತಿದ್ದರೆ ಅದು ನವೀಕರಣ ಗೊಳ್ಳುವ ಸಂಪನ್ಮೂಲವಾಗಿಯೇ ಉಳಿಯುತ್ತದೆ.  ಅಂತರ್ಜಲವನ್ನು ಹೆಚ್ಚು ಹೆಚ್ಚು ಶೋಷಣೆ ಮಾಡಿದಾಗ ತೆರೆದ ಬಾವಿಗಳಲ್ಲಿ ನೀರಿನ ಮೂಲ ಇಲ್ಲದಾಗಿ ಚಿತ್ರದುರ್ಗ ಜಿಲ್ಲೆಯಂತೆ ಬರಡು  ಕೆರೆಗಳಾಗುತ್ತವೆ.

ನಮ್ಮ ಪಾತ್ರ ಏನು:

  • ಕೃಷಿ ನೀರಾವರಿಗೆ  ಕೊಳವೆ ಬಾವಿ ಒಂದು ಅಪತ್ಕಾಲದ ಜಲ ಮೂಲ ಮಾತ್ರ.
  • ಇದನ್ನೇ  ನಂಬಿ ಕೃಷಿ ಮಾಡುವುದು ತಪ್ಪು.  ಮಾಡುವುದಿದ್ದರೂ ಹಿತ ಮಿತ ಬಳಕೆ ಕ್ರಮ ಅನುಸರಿಸಬೇಕು.
  • ಕೃಷಿ ನೀರಾವರಿಗೆ ಸೂಕ್ತವಾದ ನೀರು ಎಂದರೆ ನೆಲದ ನೀರು. ಕಾಲುವೆ , ಹೊಳೆ ನೀರು.
  • ಇದು ಬೆಳೆಯ ಇಳುವರಿಗೂ ಉತ್ತಮ. ಇದರ ರಸಸಾರ ಕೃಷಿ- ತೋಟಗಾರಿಕಾ ಬೆಳೆಗಳಿಗೆ ಅನುಕೂಲಕರವಾಗಿ ಇರುತ್ತದೆ.
  • ನಮ್ಮ ಈಗಿನ ಕೃಷಿ ಉತ್ಪಾದನೆ ಕುಂಠಿತವಾದುದಕ್ಕೆ ಮತ್ತು ಹೆಚ್ಚು ಹೆಚ್ಚು ಪೊಷಕಾಂಶಗಳ ಆವಶ್ಯಕತೆ ಗೆ ಕಾರಣ ಭೂಗರ್ಭದ ಜಲ.
  • ಇದರಲ್ಲಿರುವ ಖನಿಜ- ಲವಣಗಳು ಮಣ್ಣನ್ನು ಸಪ್ಪೆ ಮಾಡುತ್ತವೆ.
  • ತೆರೆದ ಬಾವಿಯ ಇತಿ ಮಿತಿಗಳಾದ ಬೇಸಿಗೆಯ ದಿನದಲ್ಲಿ ಬತ್ತುವ ಸಮಸ್ಯೆ ಉಂಟಾದಾಗ ಮಾತ್ರ  ಕೊಳೆವೆ ಬಾವಿ ನೀರನ್ನು ಬಳಕೆ ಮಾಡಬೇಕು.
  • ಕಿಂಡಿ ಅಣೆಕಟ್ಟು, ಕಿರು ಜಲ ವಿದ್ಯುತ್ ಘಟಕದ ಪಕ್ಕದಲ್ಲಿರುವ ಹೊಲಗಳ ರೈತರು ಮೇಲ್ ಜಲಕ್ಕೆ ( ತೆರೆದ ಬಾವಿ) ಹೆಚ್ಚಿನ ಆದ್ಯತೆ ಕೊಡಬೇಕು.
  • ಸ್ಥಳೀಯಾಡಳಿತ ಮನೆಮನೆಗೆ ನೀರು ಸರಬರಾಜು ಮಾಡಲು ಅಣೆಕಟ್ಟುಗಳ ನೀರನ್ನು ಬಳಕೆ ಮಾಡಬೇಕು. 

ಜಲ ಮಟ್ಟ ಉಳಿಸುವುದು:

  • ಇದು ಒಬ್ಬ ವ್ಯಕ್ತಿ ಮಾಡುವ ಕೆಲಸ ಅಲ್ಲ. ಸಾಮೂಹಿಕ  ಜವಾಬ್ಧಾರಿ.
  • ನಾನು ಮಿತ ನೀರಾವರಿ ಮಾಡಿದರೂ ನನ್ನ ನೆರೆ ಹೊರೆಯವರು ಮನಬಂದಂತೆ ನೀರೆತ್ತಿದರೆ ಅದು ನನಗೂ ತೊಂದರೆಯೇ.ಒಬ್ಬಿಬ್ಬರ ದುರಾಶೆಯ ಫಲ ಎಲ್ಲರೂ ಅನುಭವಿಸಬೇಕಾಗುವ ದುಖಃವಾಗಬಹುದು.
  • ಇದನ್ನು ಕಾನೂನು ಅಥವಾ ಸಂಘಟಿತ ಮಾನೋಭಾವದಲ್ಲಿ ಮಾತ್ರ ಮಾಡಲು  ಸಾಧ್ಯ.
  • ಇದರಲ್ಲಿ ಸರಕಾರದ ಪಾತ್ರ ದೊಡ್ಡದು. ಕೃಷಿಕರೂ ಸೇರಿದಂತೆ ಅಂತರ್ಜಲ ಬಳಕೆ ಮಾಡುವವರಿಗೆಲ್ಲಾ ಅದರ ಮೂಲದ ಬಗ್ಗೆ ಶಿಕ್ಷಣ ನೀಡಬೇಕು.
  • ಕಾನೂನಿನ ಪ್ರಕಾರ ಹನಿ ನೀರಾವರಿ ಮಾಡುವವರಿಗೆ ಮಾತ್ರ ಕೊಳವೆ ಬಾವಿ ತೋಡಲು ಅನುಮತಿ ಮತ್ತು ವಿದ್ಯುತ್ ಸಂಪರ್ಕ ಕೊಡಬೇಕು.
  • ಬೋರ್ ವೆಲ್ ನೀರಿಗೆ ಮೀಟರು ಅಳವಡಿಸುವ ವ್ಯವಸ್ಥೆಯನ್ನು  ಮಾಡಿದರೆ ಮಿತ ನೀರಾವರಿ ಸಾಧ್ಯವಾಗಬಹುದು.
  • ಅಗತ್ಯ ಇದ್ದವರು ಮಾತ್ರ ಕೊಳವೆ ಬಾವಿ ತೋಡುವಂತಾಗಬೇಕು.
  • ಸಾರ್ವಜನಿಕ ಕುಡಿಯುವ ನೀರು,ಉದ್ದಿಮೆಗಳಿಗೆ ಬೇಕಾಗುವ ನೀರಿಗೆ ಕೊಳವೆ ಬಾವಿ ನೀರು ಬಳಕೆ ಮಾಡುವುದರ ಬದಲು ಹೊಳೆ ಹಳ್ಳಗಳಿಗೆ ಅಣೆಕಟ್ಟು ಹಾಕಿ ಅದರಿಂದ ಸರಬರಾಜು ಮಾಡಬೇಕು.  
  • ಈಗಾಗಲೇ ಇಂತಹ ನೂರಾರು ಅಣೆಕಟ್ಟಗಳ ನಿರ್ಮಾಣ ಆಗಿದ್ದು, ಅವೆಲ್ಲವೂ ಬರೇ ನೀರು ನಿಲ್ಲಿಸಲು ಮಾತ್ರ ಬಳಕೆ ಆಗುತ್ತಿವೆ
  • ಹಣಕಾಸಿನ ಮೂಲ ಯಥೇಚ್ಚವಾಗಿರುವ  ದೊಡ್ಡ ದೊಡ್ಡ ಉದ್ದಿಮೆಗಳು ಕೊಳವೆ ಬಾವಿ ನೀರನ್ನು ಬಳಸುವ ಬದಲು ಮಳೆ ನೀರಿನ ಸಂಗ್ರಹದಿಂದ ಉದ್ದಿಮೆಗಳ ನೀರಿನ ಅಗತ್ಯವನ್ನು ನೀಗಿಸಬಹುದು.

ಹಗಲು ರಾತ್ರೆ ನೀರೆತ್ತುವ ನಮ್ಮ ಅಭ್ಯಾಸವನ್ನು ಬಿಡಬೇಕು.ಹೀಗೆ ಮಾಡಿದರೆ  ಆ ಭಾಗದ ಕೊಳೆವೆ ಬಾವಿಗಳೆಲ್ಲಾ ಬತ್ತುವ ಸಾಧ್ಯತೆ ಇದೆ. ಇದನ್ನು ಯಾರೂ ಮಾಡಬಾರದು.ಕೊಳವೆ ಬಾವಿ ನೀರಿನ  ಉಪಯೋಗವನ್ನು ತತ್ ಕ್ಷಣ ಮಿತಿಗೊಳಿಸದೇ ಇದ್ದಲ್ಲಿ  ಇನ್ನು ಕೆಲವೇ ವರ್ಷದಲ್ಲಿ ಕೊಳವೆ ಬಾವಿ 1000 ಅಡಿಗೂ ಕೆಳಗೆ ಇಳಿಯಬಹುದು. ಅಂತಹ ನೀರನ್ನು ಕುಡಿಯುವುದು, ಕೃಷಿ ಬೆಳೆಗಳಿಗೆ ಬಳಕೆ ಮಾಡುವುದು ಸಾರ್ವಜನಿಕ ಸ್ವಾಸ್ತ್ಯದ ಮೇಲೆ ಪರಿಣಾಮ ಬೀರಬಹುದು.

Leave a Reply

Your email address will not be published. Required fields are marked *

error: Content is protected !!