ಹಬ್ಬದ ದಿನಗಳು ಮತ್ತು ಅದರ ಮಹತ್ವ

ಪ್ರಪಂಚದಾದ್ಯಂತ ಹಬ್ಬಗಳನ್ನು ಆಚರಿಸುತ್ತಾರೆ. ಭಾರತದಲ್ಲಿ ಸಹ ಹಲವಾರು ಹಬ್ಬಗಳನ್ನು ಆಚರಿಸುತ್ತಾರೆ. ಹೆಚ್ಚಿನೆಲ್ಲಾ ಹಬ್ಬ ಹರಿದಿನಗಳು  ವಿಶೇಷ ಸಂದೇಶವನ್ನು ದ್ವನ್ಯಾರ್ಥದಲ್ಲಿ ಕೊಡುವಂತವುಗಳು. ಇಂತಹ ಹಬ್ಬಗಳ ಮಹತ್ವ ಅರಿತು ಅವುಗಳನ್ನು ಆಚರಿಸಿದರೆ ಅದಕ್ಕೆ ಗೌರವ ಹೆಚ್ಚುತ್ತದೆ.

ನಮ್ಮ ಮಕ್ಕಳಿಗೆ ಹಬ್ಬ ಹರಿದಿನಗಳಾದರೂ ಒಂದೆ ಶೋಕದ ದಿನಗಳಾದರೂ ಒಂದೇ. ಒಂದು ಮೊಬೈಲ್  ಫೋನು ಹಿಡಿದುಕೊಂಡು ತಮ್ಮಷ್ಟಕ್ಕೇ ತಾವೇ ಏನೋ ವಿಚಾರದಲ್ಲಿ ಮಗ್ನರಾಗಿರುತ್ತಾರೆ. ಇವರಿಗೆ ಹಿರಿಯರು ಆಚರಿಸುವ ಶುಭ ದಿನಗಳ ಬಗ್ಗೆ ಒಂದು ರೀತಿಯಲ್ಲಿ ತಾತ್ಸಾರ. ಇದಕೆಲ್ಲಾ ಕಾರಣ ಅವರಿಗೆ ಆ ಶುಭ ದಿನದ ಮಹತ್ವದ ಬಗ್ಗೆ ತಿಳುವಳಿಕೆ ಇಲ್ಲ. ಸರಿಯಾಗಿ ತಿಳುವಳಿಕೆ ಹೇಳಲಿಕ್ಕೂ ನಮ್ಮ ಹಿರಿಯರಿಗೆ ಗೊತ್ತಿಲ್ಲ. ಒಂದಶ್ಟು ಹಿರಿಯರಿಗೆ ಹಬ್ಬ ಹರಿದಿನಗಳ  ಬಗ್ಗೆ ತಿಳಿದಿದ್ದರೆ ಅವರ ಮಾತನ್ನು ಕೇಳುವವರು ಯಾರೂ ಇಲ್ಲದಾಗಿದೆ.

 ಕರ್ಕಾಟಕ ಮಾಸ ಕಳೆದರೆ ನಂತರ ಬರುವ ದಿನಗಳೆಲ್ಲವೂ ಶುಭ ದಿನಗಳು. ಸಿಂಹ ಮಾಸದಿಂದ ಪ್ರಾರಂಭವಾಗಿ ಮುಂದಿನ ವರ್ಷದ  ಮಿಥುನ ಮಾಸ ತನಕ ಜನ ಮಾನಸಕ್ಕೆ ಶುಭ ಕಾಲ. ಅದರಲ್ಲೂ ಕರ್ಕಾಟಕ ಮಾಸದ ಅಮಾವಾಸ್ಯೆ ಕಳೆಯಿತೆಂದಾರೆ ಮೊದಲು ಬರುವ ಹಬ್ಬ ನಾಗರ ಪಂಚಮಿ. ನಂತರ ಅಷ್ಟಮಿ ನಂತರ ಚೌತಿ. ಆ ನಂತರ ನವರಾತ್ರಿ, ಅದರ ಮೇಲೆ ಬರುವ ದೊಡ್ದ ಹಬ್ಬವೇ ದೀಪಾವಳಿ. ನಮ್ಮ ದೇಶದಾದ್ಯಂತ ದೀಪಾವಳಿಯನ್ನು ವಿವಿಧ ಧರ್ಮಗಳವರು ಬೇರೆಬೇರೆ ಹೆಸರಿನೊಂದಿಗೆ ಆಚರಿಸುತ್ತಾರೆ. ಇದನ್ನು ಹಿಂದುಗಳ ಹಬ್ಬ ಎನ್ನುತಾರೆಯಾದರೂ ಇದು ನಿಜವಾಗಿ ಹಿಂದುಗಳಿಗೆ ಮಾತ್ರ ಸೀಮಿತವಾದ ಹಬ್ಬ ಅಲ್ಲ. ಮನುಕುಲವೇ ಆಚರಿಸಬೇಕಾದ ಸುಗ್ಗಿಯ ಹಬ್ಬ.

ನಾಗರ ಪಂಚಮಿ:

  •  ನಾಗರ ಪಂಚಮಿ ಹಬ್ಬದ ವಿಷೇಶತೆ,  ನಾಗನಿಗೆ ಹಾಲೆರೆಯುವ ಮೂಲಕ ಆ ಜೀವಿಯನ್ನು ಸಂತೃಪ್ತಿ ಗೊಳಿಸುವುದು.
  • ಇದರೊಂದಿಗೆ ಆ ದಿನದಿಂದ  ಅರಶಿನ ಸಸ್ಯ ಬಲಿಯುತ್ತದೆ ಎಂದರ್ಥ.
  • ಆ ದಿನ ಅರಶಿನ ಗಡ್ಡೆಗಳನ್ನು ಕಿತ್ತು ಅದನ್ನು ಅರೆದು ನಾಗನಿಗೆ ಲೇಪನ ಮಾಡುವ ಕ್ರಮ ಚಾಲ್ತಿಯಲ್ಲಿತ್ತು.
  • ಈಗ ಅಂಗಡಿಯಿಂದ ಅರಶಿನ ಹುಡಿ ತಂದು ಬಳಕೆ ಮಾಡಲಾಗುತ್ತದೆ.
  • ಹಿಂದೆ ಈ ಉತ್ಪನವೇ ಲಭ್ಯವಿರಲಿಲ್ಲ. ಆಗ ಅರಶಿನ ಸಸ್ಯದ ಗಡ್ಡೆಗಳನ್ನೇ ಅರೆದು  ಬಳಸಲಾಗುತ್ತಿತ್ತು.
  • ಈ ಸಮಯದಲ್ಲಿ ಅರಶಿನ ಸಸ್ಯದ ಮೈಲಿಗೆ ತೆಗೆಯುವುದು ಸೂಕ್ತ ಎಂಬುದು ನಮ್ಮ ಹಿರಿಯರು ಕಂಡುಕೊಂಡ ವಿಚಾರ.
  • ಅರಶಿನ ಎಲೆಯನ್ನು ಬಳಕೆ ಮಾಡಿ ಸಿಹಿ ತಿಂಡಿ ತಯಾರಿಸುವುದಕ್ಕೂ ಈ ದಿನದ ನಂತರ ಸೂಕ್ತ. 

ಚೌತಿ:

  • ಗಣೇಶನನ್ನು ಆರಾಧಿಸಲು ಇರುವ ಚೌತಿ ಹಬ್ಬ, ಕೇವಲ ಗಣಪತಿ ದೇವರ ಆರಾಧನೆಗೆ ಮಾತ್ರ ಸೀಮಿತವಲ್ಲ.
  • ಗಣಪತಿ ದೇವರ ಪ್ರತಿಷ್ಠಾಪನೆ, ಮೆರವಣಿಗೆ , ವಿಸರ್ಜನೆ ಇದೆಲ್ಲವೂ ಒಂದು  ಆಕರ್ಷಣೆ ಮಾತ್ರ.
  • ನಿಜವಾಗಿ ಈ ಹಬ್ಬದ  ದಿನದಿಂದ ಪ್ರಾರಂಭಗೊಂಡು ರೈತರು ಆವರವರು  ಬೆಳೆದ ಉತ್ಪನ್ನಗಳ ಪ್ರಥಮ ಕೊಯಿಲನ್ನು ಪಡೆಯುವ ಹಬ್ಬ.
  • ಈ ದಿನ ರೈತರು ಬೆಳೆಯುವ ಭತ್ತದ ತೆನೆಯನ್ನು ಮನೆಗೆ ತರುವುದು ಭಕ್ತಿ ಸೂಚಕವಾಗಿ ಅದನ್ನು  ಮನೆಗೆ, ಬಾವಿಗೆ ವಾಹನಕ್ಕೆ, ಬೆಳೆಗಳಿಗೆ ಕಟ್ಟುವ ಕ್ರಮ ಇರುತ್ತದೆ.
  • ಕೊರಳು ಹಬ್ಬ ಎಂಬ ಈ ದಿನದ ಕಾರ್ಯಕ್ರಮ ಕೇವಲ ಭತ್ತದ ತೆನೆಯನ್ನು  ಮಾತ್ರವೇ ಒಳ ಸೇರಿಸಲಿಕ್ಕಲ್ಲ.
  • ಈ ದಿನ ಮನೆಯಲ್ಲಿ  ಬೆಳೆದ ತರಕಾರಿಗಳು, (ಮುಳ್ಳು ಸೌತೆ, ಹೀರೆ, ಸಿಹಿ ಕುಂಬಳ, ಮುಂತಾದ ಎಲ್ಲವನ್ನೂ ) ಜೊತೆಗೆ ಈ ಸೀಸನ್‍ನಲ್ಲಿ ದೊರೆಯುವ ಕೆಲವು   ಶೀಘ್ರ ಬೆಳೆಯುವ ಕಳೆ ಸಸ್ಯಗಳ ಎಲೆಯನ್ನು ಬಿದಿರಿನ ಎಲೆಯನ್ನು ,  ದಡ್ದಾಲು ಎಂಬ ಮರದ ತೊಗಟೆಯ ನಾರನ್ನು  ಇŒಟ್ಟೇವು ಎಂಬ ಸಸ್ಯದ ಎಲೆಯಲ್ಲಿ ಸುತ್ತಿ ಕೊರಳನ್ನು ಕಟ್ಟುವುದು ಕ್ರಮ.
  • ಇಲ್ಲಿ ಬಳಕೆ ಮಾಡುವ ಎಲ್ಲಾ ವಸ್ತುಗಳೂ ಧೀರ್ಘ ಬಾಳ್ವಿಕೆಯವುಗಳು.
  • ಇದು ಮುಂದಿನ ವರ್ಷದ ತನಕವೂ ಹಾಳಾಗಲಾರದು.  
  • ಶುಂಠಿ ಸಸ್ಯದ ಅನಾವರಣಕ್ಕೆ ಇರುವ ಹಬ್ಬ.
  • ಇದೇ ಸಮಯದಲ್ಲಿ ನಾವು ತೆನೆ ಹಬ್ಬವನ್ನೂ ಆಚರಿಸುತ್ತೇವೆ.
  • ಗಣಪತಿಗೆ ಎಷ್ಟು ತಿಂದರೂ ಹೊಟ್ಟೆ ತುಂಬುವುದಿಲ್ಲವಂತೆ.
  • ಎಲ್ಲಾ ತಿಂದು ಕೊನೆಗೆ ಇನ್ನೇನಿದೆ ಎಂದು ಮನೆ ಮನೆಗೆ ಬರುವ ರೂಢಿ ಇದೆಯಂತೆ.
  • ಅದಕ್ಕೆ ಹೆಚ್ಚಿನವರು ಮನೆಯಲ್ಲಿ  ರಾತ್ರೆ ಹಲಸಿನ ಬೀಜವನ್ನು ಬೇಯಿಸಿ ದೇವರಿಗೆ ಸಮರ್ಪಿಸಿ ಇಲ್ಲಿಗೆ ನಮ್ಮ ಸಮರ್ಪಣೆ ಮುಗಿಯಿತು ಎಂದು ದೇವರಿಗೆ ನಮಸ್ಕಾರ ಮಾಡುತ್ತಾರೆ.

ಅಷ್ಟಮಿ:

  • ಅಷ್ಟಮಿ ಎಂದರೆ ಶ್ರೀಕೃಷ್ಣನ ಜನ್ಮ ದಿನ. ಈ ದಿನದಂದು ಕೃಷ್ಣನ ಬಾಲ ಲೀಲೆಗಳನ್ನು ನೆನಪಿಸುವ ಮೊಸರು ಕುಡಿಕೆ, ಕೃಷ್ಣ ವೇಷ,  ಮುಂತಾದವುಗಳನ್ನು ಆಚರಿಸುತ್ತೇವೆ.
  • ಈ ದಿನ ಕೆಲವರು ಹಗಲು ಉಪವಾಸ ಮಾಡುತ್ತಾರೆ.
  • ಈ ದಿನ ಮೂಡೆ ಕಡುಬು , ತೆಂಗಿನ ಕಾಯಿ ಹಾಲು ವಿಷೇಷ.
  • ಶ್ರೀ ಕೃಷ್ಣನಿಗೆ  ಕಡುಬು, ತೆಂಗಿನ ಕಾಯಿಯ ಹಾಲು,ಎಳ್ಳುಂಡೆ, ಸುಕುಳುಂಡೆ, ಚಕ್ಕುಲಿ, ಮುಂತಾದ ಸಿಹಿ ತಿನಿಸುಗಳನ್ನು ಮಾಡಿ, ರಾತ್ರೆ ಹೊತ್ತು ಅಂದರೆ ಕೃಷ್ಣ ಹುಟ್ಟಿದ ಸಮಯಕ್ಕೆ ಸರಿಯಾಗಿ ಅರ್ಘ್ಯ ಕೊಡುವ ಕ್ರಮ ಇರುತ್ತದೆ.
  • “ಕೃಷ್ಣಂಚಃ ಬಲಬಧ್ರಂಚಃ ವಸುದೇವಂಚ ದೇವಕಿಃ ಯಶೋಧಾ ನಂದಗೋಪಂಚ ಸುಬದ್ರಾ ಪತ್ರ ಪೂಜ್ಯಯೇತ್” ಎಂದು ಕೆಲವರು ತುಳಸೀ ದಳದಲ್ಲೂ ಮತ್ತೆ ಕೆಲವರು ಬಿಲ್ವ ಪತ್ರೆಯ ಎಲೆಯಲ್ಲೂ ಅರ್ಘ್ಯ ಪ್ರದಾನ ಮಾಡಿ ಕಡುಬು ಕಾಯಿ ಹಾಲಿನ ಉಪಹಾರ ಮಾಡುತ್ತಾರೆ.
  • ಈ ದಿನ  ಶ್ರೀಕೃಷ್ಣನ  ನೈವೇದ್ಯಕ್ಕೆ ಕೇವಲ ಮೇಲೆ ಹೇಳಿದ ತಿಂಡಿ  ತಿನಿಸುಗಳಲ್ಲದೆ ಎಳೆ ಮಿಡಿ  ಹುಣಸೆ ಕಾಯಿಯನ್ನೂ  ಅರ್ಪಿಸಲಾಗುತ್ತದೆ.
  • ಇದು ಮೈಲಿಗೆ ತೆಗೆಯುವ ಒಂದು ಹಬ್ಬ.
  • ಅಷ್ಟಮಿ ತನಕ ಹುಣಸೆ ಕಾಯಿಯನ್ನು ಯಾರೂ ಬಳಕೆ ಮಾಡುವುದಿಲ್ಲ.
  • ದೇವರಿಗೆ ಸಮರ್ಪಣೆ ಮಾಡಿದ ತರುವಾಯ ಅದನ್ನು ಬಳಕೆ ಮಾಡಬಹುದು ಎನ್ನಲಾಗುತ್ತಿದೆ. 

ನವರಾತ್ರೆ:

  • ನವರಾತ್ರೆ ಎಂಬುದು ಒಟ್ಟು 10 ದಿನಗಳ ಕಾಲ ಆಚರಿಸುವ ಹಬ್ಬ.
  • ಇದು ಶಕ್ತಿ ಸ್ವರೂಪಿಣಿಯಾದ ದೇವಿಯನ್ನು ಪೂಜಿಸುವ ಹಬ್ಬ.
  • ದೇವಿ ಶಕ್ತಿಯನ್ನು ನಾವು ಬೇರೆ ಬೇರೆ ಹೆಸರುಗಳಲ್ಲಿ ಸಂಬೋಧಿಸುತ್ತೇವೆ.
  • ದೇವಿಯ ಅವತಾರ ಬೇರೆ ಬೇರೆಯಾದರೂ ಅವರೆಲ್ಲಾ ಶಕ್ತಿ ಸ್ವರೂಪಿಣಿಯಾಗಿರುತ್ತಾರೆ, ಎಲ್ಲಾ ಅವತಾರ ದಲ್ಲೂ ಇವರು ಜನರಿಗೆ ಇಷ್ಟಾರ್ಥ ಸಿದ್ದಿಸಿಕೊಡುವ ಅಂಶಗಳು.
  • ದುಷ್ಟ ಸಂಹಾರಕ್ಕಾಗಿ  ಪರಶಿವನ ಪತ್ನಿ ಪಾರ್ವತಿ ದೇವಿಯು ವಿವಿಧ ಅವತಾರ  ತಾಳಿ ಜಗತ್ತಿಗೆ ಕ್ಷೇಮವನ್ನು ತಂದು ಕೊಟ್ಟ ಕಾರಣಕ್ಕೆ ದೇವಿಯನ್ನು ಎಲ್ಲರೂ ಪರಮ ಭಕ್ತಿಯಿಂದ ಆರಾಧಿಸುತ್ತಾರೆ.
  • ನವರಾತ್ರೆಯ ಒಂಭತ್ತು ದಿನಗಳು ಮತ್ತು ವಿಜಯದಶಮಿಯ ಹತ್ತನೇ ದಿನ ದೇವಿಯನ್ನು ಆರಾಧಿಸಿ, ಶಾರದಾ ಪೂಜೆ, ಆಯುಧ ಪೂಜೆ ಇತ್ಯಾದಿಗಳನ್ನು ಮಾಡುತ್ತಾ ಬರಲಾಗುತ್ತಿದೆ.
  • ಈ ಸಮಯ ಕಳೆದ ತಕ್ಷಣ ಎಲ್ಲಾ ಸುಗ್ಗಿಯ ಕಾಲ ಬಂತು ಎಂದೇ ಆರ್ಥ.
  • ದೇವಿಯನ್ನು ಆರಾಧಿಸಿ ಸುಗ್ಗಿಗೆ ಕೈ ಹಾಕಿದರೆ ಅಲ್ಲಿ ಧನಕನಕ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ.  

ಹಬ್ಬ ಹರಿದಿನಗಳ ಮಹತ್ವವನ್ನು ಅರಿತು ಆಚರಣೆ ಮಾಡಿದರೆ ಅದರ ಮೇಲೆ ಭಕ್ತಿ ಹೆಚ್ಚುತ್ತದೆ. ಭಕ್ತಿಯಲ್ಲಿ ಕೆಲವು ದಿನಗಳನ್ನು ಕಳೆದಾಗ ನಮ್ಮ ಮನೋದುಗುಡ ಕಡಿಮೆಯಾಗುತ್ತದೆ. ಆರೋಗ್ಯ ಸುಧಾರಿಸುತ್ತದೆ. ಅದಕ್ಕಾಗಿ ಹಿರಿಯರು ಎಲ್ಲಾ 365 ದಿನಗಳ ಎಡೆಯಲ್ಲಿ ಕೆಲವು ಹಬ್ಬ ಹರಿದಿನಗಳ ವಿರಾಮದ ದಿನಗಳನ್ನು ಹಾಕಿಕೊಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!