ಈ ಮಣ್ಣು ಬೆಳೆಯ ಗುಣಮಟ್ಟ ಹೆಚ್ಚಿಸುತ್ತದೆ. ಯಾಕೆ?

by | Dec 2, 2020 | Soil Science (ಮಣ್ಣು ವಿಜ್ಞಾನ) | 0 comments

ಮಣ್ಣಿನ ಗುಣ ಎಂಬುದು ನಮಗೆಲ್ಲಾ ಗೊತ್ತಿರುವ ಸಂಗತಿ. ಮಣ್ಣಿನ ಗುಣ ಚೆನ್ನಾಗಿದ್ದರೆ ಕೃಷಿ ಲಾಭದಾಯಕವಾಗುತ್ತದೆ. ನಾವು ಬೆಳೆಯುವ ಬೆಳೆಯ ಫಸಲಿಗೆ ಗುಣಮಟ್ಟ ಬರುತ್ತದೆ.  ಮಣ್ಣು ಎಂಬುದು ಶಿಲಾ ಶಿಥಿಲತೆಯಿಂದ ಆದ ವಸ್ತು. ಶಿಲೆಯಲ್ಲಿರುವ ಖನಿಜಗಳು,  ಸಸ್ಯ , ಪ್ರಾಣಿಗಳ ಕಳಿಯುವಿಕೆಯಿಂದಾದ ಸಾವಯವ ವಸ್ತುಗಳು ಸೇರಿ, ಅದು ಬೇರೆ ಬೇರೆ ರೂಪಾಂತರ ಹೊಂದಿವೆ. ಒಂದೊಂದು ಕಡೆಯ ಮಣ್ಣು ಒಂದೊಂದು ರೀತಿಯಲ್ಲಿ ಇರುತ್ತವೆ. ಇದಕ್ಕೆಲ್ಲಾ ಕಾರಣ ಅಲ್ಲಿ ಆದ ಶಿಲೆ ಮತ್ತು ಅದರ ರೂಪಾಂತರ.

  • ಕರಾವಳಿಯ ಮಣ್ಣು, ಮಲೆನಾಡಿನ ಮಣ್ಣು, ಬಯಲು ಸೀಮೆಯ ಮಣ್ಣುಗಳ ರಚನೆ ಭಿನ್ನ ಭಿನ್ನವಾಗಿರುವುದು ನಮಗೆಲ್ಲಾ ಗೊತ್ತಿದೆ.
  • ಇದೇ ರೀತಿಯಲ್ಲಿ ದೇಶದುದ್ದಕ್ಕೂ ಮಣ್ಣಿನ ರಚನೆಯಲ್ಲಿ  ಸಾಕಷ್ಟು ಭಿನ್ನತೆ ಇರುತ್ತದೆ.
  • ಕರಾವಳಿಯ ಉಡುಪಿ ಜಿಲ್ಲೆಯ ಕಟಪಾಡಿಯ ಮಟ್ಟು ಎಂಬಲ್ಲಿ ಬೆಳೆಯುವ ಬದನೆಗೆ ಅಲ್ಲಿ  ಬೆಳೆದಾಗ ಬರುವ ರುಚಿ ಬೇರೆ ಕಡೆ ಬೆಳೆದರೆ ಬಾರದು.

ಉಡುಪಿಯ ಶಂಕರಪುರದಲ್ಲಿ, ಭಟ್ಕಳದಲ್ಲಿ  ಬೆಳೆಯುವ ಮಲ್ಲಿಗೆ, ಗೋವಾದ ಕೆಲವು ಭಾಗಗಳಲ್ಲಿ ಬೆಳೆಯುವ ಗೇರು ಬೆಳೆ,  ರತ್ನಗಿರಿ, ವೆಂಗುರ್ಲಾ ಮುಂತಾದ ಕಡೆ ಬೆಳೆಯುವ ಮಾವು, ಅದೇ ರೀತಿಯಲ್ಲಿ ಇದೇ ಮಣ್ಣು ಇರುವ ಕಣಿವೆ ಜಾಗದಲ್ಲಿ ಬೆಳೆದ ರತ್ನಗಿರಿ ಅಡಿಕೆ  ಇವೆಲ್ಲಾ  ಭಾರೀ ಹೆಸರು ಮಾಡಿದ್ದರೆ ಅದು ಅಲ್ಲಿನ ಮಣ್ಣಿನ ಗುಣದಿಂದ.

  • ಇಲ್ಲೆಲ್ಲಾ ಇರುವ ಮಣ್ಣು  ಜಂಬಿಟ್ಟಿಗೆ ಮಣ್ಣು. ಇಲ್ಲಿ ಸಸ್ಯಗಳು ಹುಲುಸಾಗಿ ಬೆಳೆಯುತ್ತವೆ.  ಫಸಲಿನ ಗುಣಮಟ್ಟ ಉತ್ತಮವಾಗಿರುತ್ತದೆ.
ಮುರ ಮಣ್ಣಿನಲ್ಲಿ ಬೆಳೆಯುವ ಪ್ರಸಿದ್ದ ರತ್ನಗಿರಿ ಅಲ್ಫೋನ್ಸ್

ಮುರ ಮಣ್ಣಿನಲ್ಲಿ ಬೆಳೆಯುವ ಪ್ರಸಿದ್ದ ರತ್ನಗಿರಿ ಅಲ್ಫೋನ್ಸ್

ಜಂಬಿಟ್ಟಿಗೆ ಅಥವಾ ಮುರ ಮಣ್ಣು:

  • ಕೇರಳ -ಕರ್ನಾಟಕದಲ್ಲಿ ಕರಾವಳಿಯಿಂದ ಮಹಾರಾಷ್ಟ್ರದ ತನಕವೂ, ಬೀದರು ಹಾಗೆಯೇ ಮಲೆನಾಡಿಕೆ ಕೆಲವು ಭಾಗಗಳಲ್ಲಿ ಈ  ರೀತಿಯ  ಜಂಬಿಟ್ಟಿಗೆ ಅಥವಾ ಮುರ ಮಣ್ಣು ಇರುತ್ತದೆ.
  • ಇದು ಗಟ್ಟಿ ಮಣ್ಣಾಗಿದ್ದು, ಕಲ್ಲುಗಳು ಇಲ್ಲದ ಮಣ್ಣಾಗಿರುತ್ತದೆ.
  • ಇದನ್ನು ನಿರ್ದಿಷ್ಟ ಆಕಾರಕ್ಕೆ ತುಂಡು ಮಾಡಿ, ಇಟ್ಟಿಗೆಯ ಬದಲಿಗೆ ಬಳಕೆ ಮಾಡುತ್ತಾರೆ.
  • ಇದರಲ್ಲಿ ಕೆಲವು ಕಡೆ ಹಾಸು ಜಂಬಿಟ್ಟಿಗೆ ಮಣ್ಣು ಮತ್ತೆ ಕೆಲವು ಕಡೆ ಉಂಡೆ ಜಂಬಿಟ್ಟಿಗೆ ಮಣ್ಣು ಇರುತ್ತದೆ.
  • ಮಣ್ಣಿನ ಮೇಲ್ಭಾಗದಲ್ಲಿ  ಸೂರ್ಯನ ಬೆಳಕು ಬಿದ್ದಾಗ ಈ ಮಣ್ಣು ಗಟ್ಟಿಯಾಗುತ್ತದೆ.
  • ಹಾಸು ಜಂಬಿಟ್ಟಿಗೆ ಮಣ್ಣು ತುಂಬಾ ವಿಶಾಲ ಪ್ರದೇಶದ ತನಕ ವ್ಯಾಪಿಸಿರುತ್ತದೆ.
  • ಇದು ನೀರನ್ನು ಹಿಡಿದಿಟ್ಟುಕೊಂಡು ನಿಧಾನವಾಗಿ ನೆಲಕ್ಕೆ ಇಂಗಿಸುತ್ತದೆ.
ನೀರು ಹಿಡಿದಿಟ್ಟುಕೊಳ್ಳುವ, ನೀರು ಇಂಗಿಸಬಲ್ಲ ಮುರ ಮಣ್ಣು

ನೀರು ಹಿಡಿದಿಟ್ಟುಕೊಳ್ಳುವ, ನೀರು ಇಂಗಿಸಬಲ್ಲ ಮುರ ಮಣ್ಣು

  • ಗುಂಡು ಜಂಬಿಟ್ಟಿಗೆ ಕಲ್ಲುಗಳು ಇರುವ ಕಡೆ ಅದರ ಎಡೆಯಲ್ಲಿ ಮಣ್ಣು ಸೇರಿರುತ್ತದೆ.
  • ಈ ಕಲ್ಲುಗಳಲ್ಲಿ ಬಿರುಕುಗಳೂ ಇರುತ್ತವೆ.
  • ಇದರಲ್ಲಿ  ಕಬ್ಬಿಣ ಮತ್ತು ಅಲ್ಯೂಮಿನಿಯಂ ಖನಿಜ ಇರುತ್ತದೆ ಎಂಬುದಾಗಿ ಮಣ್ಣು ವಿಜ್ಞಾನ ಹೇಳುತ್ತದೆ.
  • ಇಟ್ಟಿಗೆ ಕಲ್ಲು (ಲ್ಯಾಟರೈಟ್), ಮುರಕಲ್ಲು ಪರ್ಯಾಯನಾಮ. ಲ್ಯಾಟಿನ್ ಭಾಷೆಯಲ್ಲಿ ಇಟ್ಟಿಗೆಗೆ ಲ್ಯಾಟರ್ ಎಂಬ ಪದ ಉಂಟು.
  • ಇದನ್ನು ಕೇರಳದಲ್ಲಿ ಮೊದಲಿಗೆ ಗುರುತಿಸಿದ ಬ್ಯೂಕ್ಯಾನನ್ ಎಂಬ ಶಿಲಾವಿಜ್ಞಾನಿ, ಇಟ್ಟಿಗೆಯಂತೆ ಉಪಯೋಗವಾಗುವ ಈ ಕಲ್ಲಿಗೆ ಲ್ಯಾಟರೈಟ್ ಎಂದು ನಾಮಕರಣ ಮಾಡಿದ.
  • ಈ ಬಗೆಯ ಕಲ್ಲು ಬೇರೆ ದೇಶಗಳಲ್ಲೂ ಕಂಡು ಬರುತ್ತದೆ. ಹಾಸು ಕಲ್ಲಾಗಿದ್ದರೂ  ತೆಗೆಯುವಾಗ ಮೆದುವಾಗಿರುತ್ತದೆ.
  • ಇದರಲ್ಲಿ ಅಲ್ಲಲ್ಲಿ ಕ್ಯಾವಿಟಿ ಗಳು ಇರುತ್ತವೆ.
  • ಇದು ಕೆಲವು ಕಡೆ ಕೆಂಪು  ಮತ್ತು  ಕೆಲವು ಕಡೆ ಸ್ವಲ್ಪ ಅರಶಿನ ಬಣ್ಣದಲ್ಲಿ  ಇರುತ್ತದೆ.

ಇದು ಬೆಳೆಗಳಿಗೆ ಉತ್ತಮ:

ಜಂಬಿಟ್ಟಿಗೆ ತೆಗೆದು ಉಳಿದ ಹುಡಿ ಮಣ್ಣು  ರಂಜಕ ಮತ್ತು ಇತರ ಪೋಷಕಗಳನ್ನು ಹೊಂದಿರುತ್ತದೆ.

ಜಂಬಿಟ್ಟಿಗೆ ತೆಗೆದು ಉಳಿದ ಹುಡಿ ಮಣ್ಣು ರಂಜಕ ಮತ್ತು ಇತರ ಪೋಷಕಗಳನ್ನು ಹೊಂದಿರುತ್ತದೆ.

  • ಈ ಮಣ್ಣು ಇರುವ ಭಾಗಗಳಲ್ಲಿ ಬೆಳೆಗಳು ಹುಲುಸಾಗಿ ಬೆಳೆಯುತ್ತವೆ.
  • ಬೇರೆ ಪೋಷಕಾಂಶಗಳನ್ನು ಕೊಡಬೇಕಾದರೂ ಪೋಷಕಾಂಶಗಳನ್ನು ಇದು ಚೆನ್ನಾಗಿ ಬಳಸಿಕೊಂಡು ಹುಲುಸಾಗಿ ಬೆಳೆಯುತ್ತದೆ.
  • ಇದಕ್ಕೆ ಏನು ಕಾರಣ ಎಂಬುದನ್ನು ಈ ತನಕ ಆಳವಾಗಿ ಅಧ್ಯಯನ ನಡೆಸಲಾಗಿಲ್ಲ ಎಂದೇ ಹೇಳಬಹುದು.
  • ಹಿರಿಯರು ಹೇಳುವ ಪ್ರಕಾರ ಮುರ ಮಣ್ಣಿನ ಹುಡಿಯನ್ನು ಹಾಕುವುದರಿಂದ ಎಲ್ಲಾ  ಬೆಳೆಗಳು ಚೆನ್ನಾಗಿ ಬೆಳೆಯುತ್ತವೆ.
  • ಬೇರು ಹಬ್ಬಲು ಇದು ನೆರವಾಗುತ್ತದೆ ಎನ್ನುತ್ತಾರೆ.
  • ಇದನ್ನು ನಾವು ಮೇಲೆ ಹೇಳಿದ ಪ್ರದೇಶಗಳಲ್ಲಿ ಕಾಣಬಹುದು.
  • ಜಂಬಿಟ್ಟಿಗೆ ಕಲ್ಲುಗಳಿರುವ ಪ್ರದೇಶಗಳಲ್ಲಿ ಎಲ್ಲಾ ನಮೂನೆಯ ಸಸ್ಯಗಳೂ ಹುಲುಸಾಗಿ ಬೆಳೆಯುತ್ತವೆ.
  • ಕಬ್ಬಿಣದ ಆಕ್ಶೈಡ್  ಅಲ್ಯೂ ಮೀನಿಯಂ ಮತ್ತು ಮ್ಯಾಂಗನೀಸ್ ಆಕ್ಸೈಡ್ ಅಧಿಕ  ಪ್ರಮಾಣದಲ್ಲಿ  ಇರುವ ಬಗ್ಗೆ ಅಧ್ಯಯನಗಳಾಗಿವೆ.
  • ಇದೇ ಅಧ್ಯಯನ ಅಂತಿಮವಾಗಿದ್ದರೆ ಇಲ್ಲಿನ ಬೆಳೆಗಳಿಗೆ ಈ ಅಂಶ ಹೆಚ್ಚಾಗಿ ಬೇಕಾಗುತ್ತದೆ.

ಹಿಂದೆ ಅಧ್ಯಯನ ಮಾಡಿದ ವಿಚಾರ ಬದಿಗಿರಲಿ. ಇನ್ನೊಮ್ಮೆ ಮುರ ಅಥವಾ ಜಂಬಿಟ್ಟಿಗೆ ಮಣ್ಣಿನಲ್ಲಿ ಏನೇನು ಸಸ್ಯ ಪೋಷಕಗಳು ಅಡಗಿವೆ ಎಂಬುದನ್ನು ಅಧ್ಯಯನ ಮಾಡಬೇಕಾದ ಅಗತ್ಯ ಇದೆ.ಶಿಲೆಗಳು ಎಲ್ಲಾ ಖನಿಗ ಪೊಷಕಾಂಶಗಳ ಮೂಲವಾಗಿದ್ದು, ಇದರಲ್ಲಿ ಬೆಳೆಗೆ ಅಗತ್ಯವಾದ ಪೋಷಕ ಇದ್ದೇ ಇದೆ.
ರೈತರು ತಮ್ಮ ಸಮೀಪದಲ್ಲಿ ಮುರ ಕಲ್ಲು ಕೋರೆಗಳು ಇದ್ದರೆ ಅದರ ಮಣ್ಣನ್ನು ತಮ್ಮ ತೋಟಕ್ಕೆ ಬಳಕೆ ಮಾಡಿ ಇದರ ಫಲವನ್ನು ಗಮನಿಸಬಹುದು. ಇದು ನೀರು ಹಿಡಿದಿಟ್ಟುಕೊಳ್ಳುತ್ತದೆ. ಮಣ್ಣಿಗೆ ಗಾಳಿಯಾಡುವಿಕೆ ಶಕ್ತಿಯನ್ನು ಉತ್ತಮವಾಗಿ ಕೊಡುತ್ತದೆ. ಬೇರುಗಳ ಪ್ರಸಾರಕ್ಕೆ ಬೇಕಾದ ಸಡಿಲತನವನ್ನೂ ಕೊಡುತ್ತದೆ. ಹಾಸು ಜಂಬಿಟ್ಟಿಗೆ ಕಲ್ಲನ್ನು ಹುಡಿಮಾಡಿ ಬೆಳೆ ಬೆಳೆದರೆ ಅದರಲ್ಲಿ ಸಸ್ಯಗಳು ಬಹಳ ಚೆನ್ನಾಗಿ ಬೆಳೆಯುತ್ತವೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!