ಮಾವಿನ ಕಾಯಿ ಹಣ್ಣಾಗುವಾಗ ಕೊಳೆಯುವುದಕ್ಕೆ ಏನು ಕಾರಣ?

by | Apr 11, 2022 | Horticulture Crops (ತೋಟದ ಬೆಳೆಗಳು), Mango(ಮಾವು) | 0 comments

ಮಾವಿನ ಹಣ್ಣಿನ ತೊಟ್ಟಿನ ಭಾಗ ಮೊದಲು ಮೆತ್ತಗಾಗಿ ಕೊಳೆಯುತ್ತದೆ. ಹಣ್ಣು ಮೇಲ್ಮೈಯಲ್ಲಿ ಅಲ್ಲಲ್ಲಿ ತಪ್ಪು ಕಲೆಗಳಾಗಿ ಕೊಳೆಯುತ್ತದೆ.  ಮಾವಿನ ಹಣ್ಣು ನೋಡುವಾಗ ಅದನ್ನು ತಿನ್ನಲು ಹೇಸಿಗೆಯೆನಿಸುತ್ತದೆ. ಇದು ಯಾಕೆ ಹೀಗಾಗುತ್ತದೆ ಎಂಬುದರ ಬಗ್ಗೆ ಬಹಳಷ್ಟು ರೈತರಿಗೆ ಗೊತ್ತೇ ಇಲ್ಲ.  ಇದು ರಾಸಾಯನಿಕ ಬಳಸಿ ಬೆಳೆದರೂ ಆಗುತ್ತದೆ. ಸಾವಯವದಲ್ಲಿ ಬೆಳೆದರೂ ಆಗುತ್ತದೆ. ಇದನ್ನು ಕೆಲವು ಕ್ರಮಗಳ ಮೂಲಕ ನಿಯಂತ್ರಣ ಮಾಡಬಹುದು.

  • ಇದು ಮಾವಿನ ಹಣ್ಣಿನ ಸೀಸನ್. ಕೆಲವರ ಮನೆಯಂಗಳದ ಮಾವಿನ ಮರದಲ್ಲಿ ಕಾಯಿ ಇದೆ.
  • ಕೆಲವರು ಅಂಗಡಿಯಿಂದ ಒಯ್ಯುತ್ತಾರೆ.  ಒಟ್ಟಾರೆ ಎಲ್ಲರಿಗೂ ಮಾವು ಎಂದರೆ ಇಷ್ಟ.
  • ಆದರೆ 10 ಮಾವಿನ ಕಾಯಿ ಇದ್ದರೆ ತಿನ್ನಲು ಸಿಗುವುದು ಒಂದೋ ಎರಡೋ.
  • ಕೆಲವು ಹುಳ, ಮತ್ತೆ ಕೆಲವು ಕೊಳೆತು ಹೋಗುತ್ತದೆ.
  • ಇಷ್ಟೊಂದು ರುಚಿಕಟ್ಟಾದ ಮಾವಿನ ಹಣ್ಣು ತಿನ್ನಲು ಮಾತ್ರ ಸಾಧ್ಯವೇ ಇಲ್ಲ.
  • ಮಾವಿನ ಹಣ್ಣೂ ಸೇರಿದಂತೆ ಹಲವಾರು ಹಣ್ಣು ಹಂಪಲುಗಳ ಕೊಳೆಯುವಿಕೆಗೆ ಈ ಶಿಲೀಂದ್ರ ಕಾರಣ.
  • ಇದನ್ನು ಆಂತ್ರಾಕ್ನೋಸ್ ರೋಗ ಎನ್ನುತ್ತಾರೆ.

ಕೊಳೆತ ಹಣ್ಣು.

ಯಾಕೆ ಕೊಳೆಯುತ್ತದೆ:

  • ಮಾವಿನ ಹಣ್ಣು ಕೊಳೆಯುವುದಕ್ಕೆ ಕಾರಣ ಒಂದು ಶಿಲೀಂದ್ರ. ಇದನ್ನು ಕೊಲೆಟೋಟ್ರಿಕಮ್ ಗ್ಲೋಸ್ಪೋರಿಯೋಯಿಡ್ಸ್Colletotrichum gloeosporioides  ಮತ್ತು ಕೊಲೆಟೋಟ್ರಿಕಮ್ ಅಕ್ಯುಟೆಟಮ್ Colletotrichum acutatum ಎಂಬ ಶಿಲೀಂದ್ರ .
  • ಇದು ಮಾವು ಮುಂತಾದ ಹಣ್ಣು ಹಂಪಲುಗಳನ್ನು ಕೊಳೆಯುವಂತೆ ಮಾಡುವ ಶಿಲೀಂದ್ರ. 
  • ಪ್ರಪಂಚದಾದ್ಯಂತ ಇದರ ಹಾವಳಿ ಇದ್ದು, ಗಣನೀಯ ಪ್ರಮಾಣದಲ್ಲಿ ಬೆಳೆ ನಷ್ಟವಾಗುತ್ತದೆ.

Rotting of skin

ಕೊಳೆಯಲು ಕಾರಣ ಏನು?

  • ಈ ರೋಗಕ್ಕೆ ಕಾರಣವಾದ ಶಿಲೀಂದ್ರವು ಮರದ ಅಥವಾ ಸಸ್ಯದ  ಬಿದ್ದ ಎಲೆಯಲ್ಲಿ ಇರುತ್ತದೆ.
  • ಸತ್ತ ಟೊಂಗೆಗಳಲ್ಲಿ ಇರುತ್ತದೆ. ಇದು ನೆಲದಲ್ಲಿ ಬಿದ್ದ ಎಲೆಗಳ ಮೂಲಕ ಹರಡುತ್ತದೆ.
  • ಇದು ವರ್ಷವಿಡೀ ಮಾವಿನ ಮರದ ಬಿದ್ದ ಎಲೆ ಮತ್ತು ಚಿಗುರು, ಹೂವು, ಕಾಯಿಗಳಲ್ಲಿ ವಾಸವಾಗಿರುತ್ತದೆ.
  • ಗಾಳಿಯ ಮೂಲಕ ಅದು ಅತ್ತಿತ್ತ ವರ್ಗಾವಣೆಯಾಗುತ್ತದೆ. ( ಸೋಂಕು ಉಂಟಾಗುವುದು)
  • ಹಣ್ಣು ಆಗುವ ಸಮಯದಲ್ಲಿ ಕೆಲವು ಕಾಯಿಗಳು ನೆಲದಲ್ಲಿ ಬಿದ್ದು, ಅದರಲ್ಲಿದ್ದ ಶಿಲೀಂದ್ರಗಳು ಅಲ್ಲೇ ಉಳಿಯುತ್ತದೆ.
The initiation starts from this stage

ಈ ಹಂತದಲ್ಲಿ ಕೊಳೆಯುವಿಕೆ ಪ್ರಾರಂಭ.

  • ಮಳೆಗಾಲದಲ್ಲಿ ಎಲೆ ಉದುರುವಾಗಲೂ ಅದು ನೆಲಕ್ಕೆ ಸೇರುತ್ತದೆ.
  • ಚಿಗುರುವ ಸಮಯದಲ್ಲಿ ಚಿಗುರಿ ಬೀಳುವ ಎಲೆಗಳ ಮೂಲಕವೂ ನೆಲಕ್ಕೆ ಸೇರುತ್ತದೆ.
  • ಹೂವಾಗುವ ಸಮಯದಲ್ಲೂ ಹೂವು ಉದುರಿಯೂ ನೆಲಕ್ಕೆ ಬೀಳುತ್ತದೆ.
  • ನೆಲದ ಮೂಲಕವೇ  ಇದು ಮತ್ತೆ ಮರದ ಎಲೆ, ಕಾಯಿಗಳಿಗೆ ವರ್ಗಾವಣೆ ಆಗುತ್ತದೆ.
  • ಇದರ ಸೋಂಕು ಹೆಚ್ಚಾಗಲು ತೇವಾಂಶದ ವಾತಾವರಣ ಮತ್ತು ಅಧಿಕ ಆರ್ಧ್ರತೆ ಸಹಕಾರಿ. ( ಮಳೆ ಮತ್ತು ಮಂಜಿನ ವಾತಾವರಣ)ಆರ್ಧತೆ ಕಡಿಮೆ ಇರುವಾಗ ಕಡಿಮೆ ಇರುತ್ತದೆ.

ಈ ಶಿಲೀಂದ್ರದಿಂದ ಆಗುವ ಹಾನಿಗೆ ಆಂತ್ರಾಕ್ನೋಸ್ ಎಂದು ಕರೆಯಲಾಗುತ್ತದೆ.  ಮಾವಿನ ಮರದ ಒಣಗಿದ ಕಾಂಡದಲ್ಲಿ ಕಂದು ಬರುವ ಕೆಲವು ಬಿಳಿ ಬಣ್ಣದ  ಮಚ್ಚೆಗಳು ಈ ಶಿಲೀಂದ್ರದ ಬೀಜಾಣುಗಳೇ ಆಗಿವೆ. ಇದಕ್ಕೆ ತೇವಾಂಶ ದೊರೆತಾಗ ಅದು ವೇಗವಾಗಿ ಸೋಂಕು ಪ್ರಮಾಣ ಹೆಚ್ಚುವಂತೆ ಮಾಡುತ್ತದೆ.

initial symptom

ಪ್ರಾರಂಭಿಕ ಚಿನ್ಹೆ

ರೋಗ ಪತ್ತೆ ಹೇಗೆ:

  • ಮರದಲ್ಲಿ ಹೆಚ್ಚಿನ  ಪ್ರಮಾಣದಲ್ಲಿ ಒಣಗಿದ ರೆಂಬೆಗಳು ಇದೆಯೇ, ಅದನ್ನು ಒಣಗಿದ ತಕ್ಷಣ ತೆಗೆದು ನಾಶ ಮಾಡುವುದಿಲ್ಲವೇ ಅಲ್ಲಿ ಈ ಶಿಲೀಂದ್ರದ ಬೀಜಾಣು ಇರುತ್ತದೆ.
  •  ಮರದಲ್ಲಿ ಹೊಸ ಚಿಗುರು ಬರುವ ಸಮಯದಲ್ಲಿ ಎಲೆಗಳ ಮೇಲೆ ಚುಕ್ಕೆಗಳು ಕಾಣಿಸಿಕೊಳ್ಳುತ್ತದೆಯೇ , ಎಲೆಗಳು ಉದುರಿ ಬಿಳುತ್ತದೆಯೇ ಹಾಗಿದ್ದರೆ ಶಿಲೀಂದ್ರ ಸೋಂಕು ಇದೆ ಎಂದರ್ಥ.
  • ಮಾವು ಹೂ ಬಿಡುವ ಸಮಯದಲ್ಲಿ ಸಾಕಷ್ಟು ಹೂವುಗಳು  ಉದುರಿ ನೆಲಕ್ಕೆ ಬಿದ್ದರೆ ಅದರಲ್ಲೂ ಈ ಎರಡೂ ಪ್ರಾರಂಭದ ಶಿಲೀಂದ್ರದ ಸೋಂಕು ಉಂಟಾಗಿ ಉದುರುವುದಾಗಿರುತ್ತದೆ.

ನಿಯಂತ್ರಣ ವಿಧಾನ:

Dipping in Bavistin solution

ಶಿಲೀಂದ್ರ ಸೋಂಕು ತಡೆಯಲು ಬಾವಿಸ್ಟಿನ್ ದ್ರಾವಣದಲ್ಲಿ ಅದ್ದಿ, ಒರಸಿ, ಒಣಗಿಸಿ ಪ್ಯಾಕ್ ಮಾಡಲಾಗುತ್ತದೆ.

  • ಅತಿಯಾದ ಆರ್ಧ್ರತೆ  ಇರುವ ಸಮಯದಲ್ಲಿ  ರೋಗ ಬರುವ ಕಾರಣ ಒಣ ವಾತಾವರಣ ಇರುವಾಗಲೇ ಹಣ್ಣಾಗುವಂತೆ ಮಾಡಿಕೊಳ್ಳಬೇಕು.
  •  ಮಾವಿನ ಮರದ ಬುಡವನ್ನು ಸಂಪೂರ್ಣವಾಗಿ ಸ್ವಚ್ಚತೆಯಲ್ಲಿ ಇಡಬೇಕು.
  • ಬುಡದಲ್ಲಿ ಬಿದ್ದ ಮಾವು, ಹಸಿಎಲೆ, ಒಣ ಎಲೆ, ಒಣಗಿದ ಗೆಲ್ಲ್ಲು ಮುಂತಾದವುಗಳನ್ನು ಸಂಪೂರ್ಣವಾಗಿ ತೆಗೆದು ಸುಡಬೇಕು.
  • ಮಾವು ಚಿಗುರುವ ಸಮಯಕ್ಕೆ ಮುಂಚೆ ಬುಡ ಭಾಗ ಸ್ವಚ್ಚಗೊಳಿಸಿ ನೆಲವನ್ನು ಹಿತಮಿತವಾಗಿ ಉಳುಮೆ , ಮಾಡಿ ಶಿಲೀಂದ್ರ ಬೀಜಾಣು ಬಿಸಿಲಿಗೆ ತಾಗಿ ಸಾಲುವಂತೆ ಮಾಡಬೇಕು.
  • ಮಾವಿನ ಮರಕ್ಕೆ ಸಮರ್ಪಕ ನೀರಾವರಿ ಮತ್ತು ಪೋಷಕಾಂಶಗಳನ್ನು ಒದಗಿಸುತ್ತಿರಬೇಕು.
  • ಮಾವಿನ ಕಾಯಿಗೆ ಮರದಲ್ಲಿ ಇರುವಾಗಲೇ ನ್ಯೂಸ್ ಪೇಪರ್ ಅಥವಾ ಬ್ರೌನ್ ಪೇಪರ್ ಮೂಲಕ ಮುಚ್ಚಬೇಕು.

ಕೊಯಿಲಿಗೆ ಮುಂಚೆ, ಶಿಲೀಂದ್ರ ನಾಶಕವಾದ ಡೈ ಥಯೊಕಾರ್ಬಮೇಟ್  ಅನ್ನು ಸಿಂಪಡಿಸಬೇಕು. (Antracoal,Protocol ಮುಂತಾದ ತಯಾರಿಕೆಗಳು ಇವೆ) ಇದು ಆಂತ್ರೋಕ್ನೋಸ್ ರೋಗಕ್ಕೆ ಹೆಚ್ಚು ಪರಿಣಾಮಕಾರಿ.

  • ತಾಮ್ರ ಆಧಾರಿತ ಶಿಲೀಂದ್ರ ನಾಶಕವಾಗ COC  ಅಥವಾ ಬೋರ್ಡೋ ದ್ರಾವಣವೂ ಆಗುತ್ತದೆ. ಆದರೆ ಅದು ಹೆಚ್ಚು ಪರಿಣಾಮಕಾರಿಯಲ್ಲ.
  • ಹೂವಾಗುವ ಸಮಯದಲ್ಲಿ  7  ಸಲ ಕ್ಯಾಪ್ಟನ್ (CAPTAN) ಸಿಂಪಡಿಸಬೇಕು.
  • ನಂತರ Zineb  2 ಸಲ ಮತ್ತು  ನಂತರ  ಕೊಯಿಲಿನ ವರೆಗೆ 15 ದಿನಗಳ ಅಂತರದಲ್ಲಿ ಇದನ್ನೇ ಮುಂದುವರಿಸಬೇಕು.

ಕೊಯಿಲಿನ ನಂತರ:

Store in closed room with paddy straw or paper waste  raping

ಮುಚ್ಚಿದ ಕೋಣೆಯಲ್ಲಿ ಕಾಗದ ಚೂರು ಅಥವಾ ಭತ್ತದ ಹುಲ್ಲಿನ ಲ್ಲಿ ಹಣ್ಣು ಮಾಡಲು ಇಡಬೇಕು.

  • ಮಾವಿನ ಕಾಯಿಯನ್ನು ಕೊಯಿಲು ಮಾಡಿದ ನಂತರ ಅದನ್ನು ಬಿಸಿ ನೀರಿನಲ್ಲಿ ( 51- 52 ಡಿಗ್ರಿ ಉಷ್ಣತೆಯ ) 15 ನಿಮಿಷ ಕಾಲ ಅದ್ದಿ ನಂತರ ಹಣ್ಣು ಮಾಡಲು ಇಡಬೇಕು.
  • ಹಣ್ಣು ಮಾಡುವ ಕಾಯಿಯನ್ನು ( 1  ಗ್ರಾಂ /1 ಲೀ. ನೀರು) ಕಾರ್ಬನ್ ಡೆಜಿಮ್ ನ ದ್ರಾವಣದಲ್ಲಿ ಅದ್ದಿ ಒಣಗಿಸಿ ಪ್ಯಾಕಿಂಗ್ ಮಾಡಬೇಕು.
  • ಕೊಯಿಲು ಮಾಡಿದ ಕಾಯಿಯನ್ನು ಒಂದೇ ರೀತಿಯ  ತಾಪಮಾನ ಇರುವ ಕೋಣೆಯಲ್ಲಿ ಸಂಗ್ರಹಿಸಬೇಕು.
  • ಆಗಾಗ ಬಾಗಿಲು ತೆಗೆಯುವುದು, ಗಾಳಿ ಪ್ರಸಾರ ಆಗದಂತೆ ತಡೆಯಬೇಕು.
  •  ವಾತಾವರಣ ವ್ಯತ್ಯಾಸ ಆಗದಂತೆ ತಡೆಯಲು  ಭತ್ತದ ಹುಲ್ಲು ಅಥವ ಕಾಗದ ಚೂರು ಹಾಕಬೇಕು.

ಮಾವು ಬೆಳೆಯಲ್ಲಿ ರೈತರ ಹೊಲದಲ್ಲಿ, ಮಾರಾಟಗಾರರಲ್ಲಿ, ಗ್ರಾಹಕರಲ್ಲಿ ಸುಮಾರು 60% ಕೂ ಹೆಚ್ಚು ಮಾವು ಹಾಳಾಗುವುದು ಹೀಗೆ. ಇದಕ್ಕೆ ಮೇಲಿನ ಮುನ್ನೆಚರಿಕೆ ಒಂದೇ ಪರಿಹಾರ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!